Tuesday, 3 March 2015

ನೂರನೆಯ ಸಂಮಾನ













       









 ನೂರನೆಯ ಸಂಮಾನ
  
 ಮೋಟಾರು ಗಾಡಿ ನಿಂತ ಸದ್ದು ಕೇಳಿ ಅನಸೂಯಮ್ಮ ಅಡಿಗೆ ಮನೆಯಿಂದ ಜಗುಲಿಯ ಕಡೆ ಧಾವಿಸಿದರು. ಗಾಡಿ ಇಳಿದು ಬಂದವರು ಐತಾಳರ ಮನೆ ಯಾವುದು ಎಂದು ಬೇರೆ ಯಾರನ್ನಾದರೂ ಕೇಳಿದರೆ ತಮ್ಮ ಮನೆಯನ್ನು ತೋರಿಸದೇ ದೊಡ್ಡ ಐತಾಳರ ಮನೆಯನ್ನು ತೋರಿಸಿಬಿಡಬಹುದೆಂಬ ಆತಂಕ ಅನಸೂಯಮ್ಮನ ಮುಖದ ಮೇಲೆ ಛಾಪುಹೊಡೆದಂತಿತ್ತು. 
    ಅನಸೂಯಮ್ಮನ ಗಂಡ ಹರಿಕೃಷ್ಣ ಐತಾಳರು ಮತ್ತು ಎದುರುಮನೆಯ ದೊಡ್ಡ ಐತಾಳರೂ ಒಂದೇ ಕುಟುಂಬದವರು. ಸದ್ಯ, ದೊಡ್ಡ ಐತಾಳರ ಮಗ ವೆಂಕಟರಮಣ ಐತಾಳರೂ ಹರಿಕೃಷ್ಣ ಐತಾಳರೂ ಮದುವೆ, ಮುಂಜಿ ಮತ್ತಿತರ ಕಾರ್ಯಕ್ರಮಗಳಿಗೆ ಅಡುಗೆ ಮಾಡಿಕೊಡುವ ಸಮಾನ ವೃತ್ತಿಯಲ್ಲಿರುವವರು. ಇಬ್ಬರಿಗೂ ಸಾಕಷ್ಟು ಒಳ್ಳೆಯ ಹೆಸರು ಇರುವುದರಿಂದ ಗ್ರಾಹಕರು ಸಮಾನವಾಗಿ ಹಂಚಿಹೋಗುತ್ತಿದ್ದರು. ಇಬ್ಬರ ಮನೆಗಳೂ ಅಕ್ಕ-ಪಕ್ಕದಲ್ಲೇ ಇರುವುದರಿಂದ ವೆಂಕಟರಮಣ ಐತಾಳರನ್ನು ಹುಡುಕಿಕೊಂಡು ಬಂದವರು ಹರಿಕೃಷ್ಣ ಐತಾಳರ ಮನೆಗೂ, ಹರಿಕೃಷ್ಣ ಐತಾಳರನ್ನು ಹುಡುಕಿಕೊಂಡು ಬಂದವರು ವೆಂಕಟರಮಣ ಐತಾಳರ ಮನೆಗೂ ತಲುಪಿದ ಅನೇಕ ಸಂದರ್ಭಗಳಿದ್ದವು. ಅಡುಗೆಯ ವಿಷಯದಲ್ಲಿ ಇಬ್ಬರೂ ಐತಾಳರಲ್ಲಿ ಅಂತಹ ವ್ಯತ್ಯಾಸ ಇಲ್ಲದ್ದರಿಂದ ಗ್ರಾಹಕರಿಗೆ ಯಾವ ತೊಂದರೆಯೂ ಆಗುತ್ತಿರಲಿಲ್ಲ. ಆದರೆ, ಯಾವಾಗಲಾದರೂ ತಮ್ಮ ಮನೆಗೆ ಬರಬೇಕಾದವರು ದೊಡ್ಡ ಐತಾಳರ ಮನೆಗೆ ಹೋದ ವಿಷಯ ಹೇಗೋ ಅನಸೂಯಮ್ಮಗೆ ಗೊತ್ತಾದಾಗ ಹೊಟ್ಟೆಯಲ್ಲಿ ಹಸಿಮೆಣಸಿನಕಾಯಿಯ ಕಿವುಚಿದಂತಾಗುತಿತ್ತು. ಅನಸೂಯಮ್ಮ ಅಡುಗೆ ಮನೆಯಿಂದ ಧಾವಿಸಿ ಬರಲು ಇನ್ನೂ ಒಂದು ಕಾರಣವಿತ್ತು- ಹರಿಕೃಷ್ಣ ಐತಾಳರು ಶಾಲಾ-ಕಾಲೇಜು, ಸಂಘ ಸಂಸ್ಥೆಗಳು ನಡೆಸುವ ಕಾರ್ಯಕ್ರಮಗಳಿಗೆ ಕಡಿಮೆದರದಲ್ಲಿ, ಕೆಲವೊಮ್ಮೆ ಉಚಿತವಾಗಿ ಅಡುಗೆ ಮಾಡಿ ಕೊಡುತ್ತಿದ್ದುದರಿಂದ ಇತ್ತೀಚೆಗೆ ಅನೇಕರು ಅವರನ್ನು ಕರೆದು ಸನ್ಮಾನಿಸುತ್ತಿದ್ದರು. ಕೆಲವು ಸಲ ಕಾರ್ಯಕ್ರಮಕ್ಕೆ ಅತಿಥಿಯಾಗಿ ಕರೆದು ಸತ್ಕರಿಸುತ್ತಿದ್ದರು. ಹರಿಕೃಷ್ಣ ಐತಾಳರನ್ನು ಈ ಕಾರಣಕ್ಕಾಗಿ ನೋಡಲು ಬಂದವರೆಲ್ಲಾದರೂ ದಾರಿ ತಿಳಿಯದೇ ವೆಂಕಟರಮಣ ಐತಾಳರ ಮನೆಗೆ ಹೋದರೆ ಅವರನ್ನು ದೊಡ್ಡ ಐತಾಳರು ಬೈದು ಕಳುಹಿಸುತ್ತಿದ್ದರು. ಕಡಿಮೆದರದಲ್ಲಿ ಅಡುಗೆಮಾಡಿಕೊಡುತ್ತಾನೆಂದು ಸನ್ಮಾನಿಸುತ್ತಾರೋ ಅಥವಾ ನೀವು ಸನ್ಮಾನಿಸುತ್ತಿರುವುದರಿಂದ ಅವನು ಕಡಿಮೆದರದಲ್ಲಿ ಅಡುಗೆ ಮಾಡಿಕೊಡುತ್ತಾನೋ ಎಂದು ಬಂದವರನ್ನು ಕುಟುಕುತ್ತಿದ್ದರು. ತನ್ನ ಗಂಡನಿಗೆ ಹೆಸರು ಬರುವುದು ಈ ಮುದುಕನಿಗೆ ಇಷ್ಟ ಇಲ್ಲ ಎಂದು ಅನಸೂಯಮ್ಮ ಮನಸ್ಸಲ್ಲೇ ಗೊಣಗಬಹುದಿತ್ತೇ ವಿನಃ ಕುಟುಂಬದ ಹಿರಿಯ ತಲೆಗೆ ಉತ್ತರ ನೀಡುವ ಹಾಗಿರಲಿಲ್ಲ.  
   ಹರಿಕೃಷ್ಣ ಐತಾಳರ ಜೊತೆ ಸನ್ಮಾನ ಸಮಾರಂಭಗಳಿಗೆ ಅನಸೂಯಮ್ಮ ಕೂಡಾ ಹೋಗುತ್ತಿದ್ದರು. ಗಂಡ-ಹೆಂಡತಿಯರಿಬ್ಬರನ್ನೂ ವೇದಿಕೆಗೆ ಕರೆದು ಹಾಕುವ ಹಾರ-ಶಾಲು, ನೀಡುವ ಹೂ-ಹಣ್ಣು, ಸ್ಮರಣಿಕೆಯ ಮೂರ್ತಿಗಳು ಮತ್ತು ತುಂಬಿದ ಸಭೆಯ ಕರತಾಡನ ಅನಸೂಯಮ್ಮಗೆ ಬಹಳ ಖುಷಿಕೊಡುತ್ತಿದ್ದುದರಿಂದ ಮನೆಗೆಲಸಕ್ಕೆ ತೊಂದರೆಯಾದರೂ ಸನ್ಮಾನ ಕಾರ್ಯಕ್ರಮಗಳನ್ನು ತಪ್ಪಿಸಿಕೊಳ್ಳುತ್ತಿರಲಿಲ್ಲ. ಈಗ, ಮೋಟಾರು ಗಾಡಿಯ ಸದ್ದಾದಾಗಲೂ ಸಹ ಅಡುಗೆಗೆ ಹೇಳಲು ಬಂದವರು ಎಂಬುದಕ್ಕಿಂತ ಹೆಚ್ಚಾಗಿ, ಯಾರೋ ಸನ್ಮಾನಕ್ಕೆ ಕರೆಯಲು ಬಂದವರೇ ಇರಬಹುದೆಂದು ಊಹಿಸಿ ಅನಸೂಯಮ್ಮ ಅಡುಗೆ ಮನೆಯಿಂದ ಅಂಗಳದವರೆಗೂ ಬಂದಿದ್ದರು!
    ಹರಿಕೃಷ್ಣ ಐತಾಳರು ಸ್ನಾನಕ್ಕೆಂದು ಬಚ್ಚಲು ಮನೆಗೆ ಈಗಷ್ಟೆ ಹೋಗಿದ್ದರಿಂದ, ಯಾರಾದರೂ ಅವರನ್ನು ಹುಡುಕಿಕೊಂಡು ಬಂದಿದ್ದರೆ ಸ್ವಲ್ಪ ಕಾಯಬೇಕಾಗುತ್ತದೆ ಎಂಬುದನ್ನು ಗ್ರಹಿಸಿ, ಅನಸೂಯಮ್ಮ ಬಂದವರ ಅವಗಾಹನೆಗಾಗಿ ಗಂಡನನ್ನು ಸನ್ಮಾನಿಸುತ್ತಿರುವ ಫೋಟೋ ಇರುವ ನಿನ್ನೆಯ ಪೇಪರನ್ನು ಟಿಪಾಯಿಯ ಮೇಲಿಟ್ಟರು. ಪೇಪರು ಹಾರಿಹೋಗದಂತೆ ಅದರ ಮೇಲೆ ಕಪ್ಪುಲೋಹದ ದೇವರ ಮೂರ್ತಿಯೊಂದನ್ನು ಪ್ರತಿಷ್ಠಾಪಿಸಿದರು. ಶೋಕೇಸು ಪೂರ್ತಿ ತುಂಬಿದ್ದರಿಂದ ಸನ್ಮಾನದ ಸ್ಮರಣಿಕೆಯಾಗಿ ನೀಡಿದ ದೇವಾನುದೇವತೆಗಳ ಮೂರ್ತಿಗಳು ಸೂಕ್ತ ಆವಾಸವಿಲ್ಲದೇ ಅನಾಥವಾಗಿದ್ದವು. ಮರ, ಪ್ಲ್ಲಾಸ್ಟಿಕ್ಕು, ಲೋಹ ಹೀಗೆ ಮೂರ್ತಿಗಳನ್ನು ತಯಾರಿಸಲು ಬಳಸಿದ ಮಾಧ್ಯಮದ ಆಧಾರದಲ್ಲಿ, ಗಾತ್ರದ ಆಧಾರದಲ್ಲಿ, ನೀಡಿದ ಸಂಘ-ಸಂಸ್ಥೆಗಳ ಹಿರಿಮೆಯ ಆಧಾರದಲ್ಲಿ ಆಧ್ಯತೆಯನ್ನು ಪಡೆದುಕೊಂಡು ಮೂರ್ತಿಗಳು ಶೋಕೇಸಿನಲ್ಲಿ ಸ್ಥಾನ ಪಡೆಯುತ್ತಿದ್ದವು. ಹದಿನೈದು ದಿನಕ್ಕೋ ತಿಂಗಳಿಗೋ ಹರಿಕೃಷ್ಣ ಐತಾಳರೇ ಖುದ್ದಾಗಿ ಮೌಲ್ಯಮಾಪನ ನಡೆಸಿ ಶೋಕೇಸಿನಲ್ಲಿರುವ ಕೆಲವು ಮೂರ್ತಿಗಳನ್ನು ಹೊರತೆಗೆಯುವುದು, ಅವುಗಳ ಬದಲಾಗಿ ಹೊರಗಿರುವ ಮೂರ್ತಿಗಳನ್ನು ಶೋಕೇಸಿನಲ್ಲಿ ಹೊಂದಿಸಿಡುವುದು ನಡೆಯುತ್ತಿತ್ತು. ಸನ್ಮಾನದಲ್ಲಿ ಹಾಕಿದ ಹಾರಗಳು, ಕಾರ್ಯಕ್ರಮದಲ್ಲಿ ತೊಡಸಿದ್ದ ಬ್ಯಾಚುಗಳನ್ನು ಕೂಡಾ ಸ್ವತಃ ಐತಾಳರೇ ಜಗುಲಿಯ ಗೋಡೆಗೆ ಅಲ್ಲಲ್ಲಿ ಮೊಳೆಹೊಡೆದು ನೇತು ಹಾಕಿದ್ದರು. ಗಂಧದ ಹಾರಗಳು ಎಂದುಕೊಂಡವೆಲ್ಲ ವಾರದೊಳಗೆ ತಮ್ಮ ಮೇಲೆ ಸಿಂಪಡಿಸಲಾದ ಅತ್ತರಿನ ಘಮವನ್ನು ಕಳೆದುಕೊಂಡು ಕೊಳೆತ ಮರದ ವಾಸನೆ ಬೀರುವುದು, ಹಾರದ ಮೇಲೆ ಜೇಡಗಳು ಬಲೆಮಾಡಿಕೊಂಡು ಸಂಸಾರಹೂಡುವುದು, ಹಾರದ ಮರೆಯಲ್ಲಿ ಹಲ್ಲಿಗಳು ಮೊಟ್ಟೆಗಳನ್ನು ಅಂಟಿಸಿಡುವುದು ಮೊದಮೊದಲೆಲ್ಲ ಅನಸೂಯಮ್ಮಗೆ ಇಷ್ಟವಾಗುತ್ತಿರಲಿಲ್ಲವಾದರೂ, ಹೊಸ ಹೊಸ ಹಾರಗಳು ಬಂದು ಹಳೆಯದರ ಮೇಲೆ ಜಾಗ ಪಡೆದುಕೊಳ್ಳುವಾಗ ಹೆಮ್ಮೆಯ ಭಾವ ಮೂಡಿ ಮತ್ತೆಲ್ಲವೂ ಮರೆಯಾಗಿ ಬಿಡುತಿತ್ತು.  
      ದೊಡ್ಡ ಐತಾಳರು ಅನಸೂಯಮ್ಮನ ಕರೆದು “ಏನೇ ಅನಸೂಯ, ನಿನ್ನ ಗಂಡ ಕೆಲಸ ಬಿಟ್ಕಂಡ್ ಸನ್ಮಾನದ ಹಾರ, ಶಾಲಿನ ಹಿಂದ್ ಬಿದ್ದಿದ್ನಂತಲ್ಲ..ನಿಂಗೂ ಬುದ್ಧಿ ಇಲ್ದಾ... ಶಾಲ್ ಮಾರ್ಮಂಡ್ ಹೊಟ್ಟಿ ತುಂಬ್ಕಳ್ಳುಕಾತ್ತ?” ಅಂದಿದ್ದರು. ಯಾವಾಗಿಲ್ಲದ ಕಾಳಜಿ ಈ ಮುದುಕನಿಗೆ ಈಗ ಯಾಕ ಬಂತೋ  ಎಂದು ಮನಸ್ಸಿನಲ್ಲೇ ಅಂದುಕೊಂಡಿದ್ದರು ಅನಸೂಯಮ್ಮ. ಹೊಟ್ಟೆಕಿಚ್ಚಿಗೆ ಮದ್ದಿಲ್ಲ ಎಂದುಕೊಂಡು ದೊಡ್ಡ ಐತಾಳರು ಹೇಳಿದ್ದನ್ನು ಗಂಡನಿಗೂ ಹೇಳದೇ ಸುಮ್ಮನಿದ್ದರು. ಗಂಡನಿಗೆ ಇತ್ತೀಚೆಗೆ ಮೊದಲಿಗಿಂತ ಹೆಚ್ಚು ಅಡುಗೆಯ ಕರೆಬರುತಿತ್ತು. ಕೆಲಸ ಹೆಚ್ಚಿದ್ದರಿಂದ ಅಡುಗೆಗೆ ಇನ್ನೂ ಇಬ್ಬರು ಅಡುಗೆ ಭಟ್ಟರನ್ನು ಹಾಕಿಕೊಂಡಿದ್ದರು. ಬಹುಷಃ, ಇದನ್ನೆಲ್ಲ ನೋಡಿಯೇ ದೊಡ್ಡ ಐತಾಳರು ಹೊಟ್ಟೆಕಿಚ್ಚು ಪಟ್ಟಿರಬಹುದು ಅಂದುಕೊಂಡರು ಅನಸೂಯಮ್ಮ. ಹಿರಿಯಜೀವ..ಏನು ಹೇಳುವುದು? ಆದರೆ, ಇತ್ತೀಚೆಗೆ ದೊಡ್ಡ ಐತಾಳರು ರಸ್ತೆಯಲ್ಲಿ ಯಾವುದಾದರೂ ಗಾಡಿ ನಿಂತದ್ದು ತಿಳಿದರೆ ಹೊರಬರುತ್ತಿದ್ದರು. ಬಂದವರೊಡನೆ ಮಾತಾಡುತ್ತಿದ್ದರು. ಅವರೊಡನೆ ಏನು ಹೇಳುತ್ತಾರೋ ಎಂದು ತಿಳಿಯಲು ಅನಸೂಯಮ್ಮ ಬಹಳ ಸಲ ಪ್ರಯತ್ನಿಸಿದ್ದಿದೆ. ಆದರೆ, ತೀರಾ ಹತ್ತಿರ ಹೋಗಿ.. ಅಂದರೆ, ರಸ್ತೆಯಂಚಿಗೆ ಹೋಗಿ ಮಾತು ಕೇಳಲು ಸಂಕೋಚಪಟ್ಟು ಅಂಗಳದಿಂದಲೇ ವಾಪಸಾಗುತ್ತಿದ್ದರು. ದೊಡ್ಡ ಐತಾಳರ ಜೊತೆ ಮಾತನಾಡಿದವರಲ್ಲಿ ಯಾರಾದರೂ ಅವರ ಮನೆಗೆ ಹೋದರೆ ಅನಸೂಯಮ್ಮನವರಿಗೆ ಈ ಮುದುಕ ಏನೋ ಕಿತಾಪತಿ ಮಾಡಿದರು ಎಂದು ಅನಿಸುತಿತ್ತು. ಮೋಟಾರು ಗಾಡಿ ನಿಂತ ಸದ್ದಾದಾಗ ಅನಸೂಯಮ್ಮ ಕೀಲಿಕೊಟ್ಟ ಗೊಂಬೆಯಂತೆ ಅಡುಗೆಮನೆಯಿಂದ ಅಂಗಳದವರೆಗೆ ಬಂದುಬಿಟ್ಟರು.
                                      ***
   ಹರಿಕೃಷ್ಣ ಐತಾಳರನ್ನು ಪೇಟೆಯಲ್ಲಿ ಯಾರಾದರೂ ಕಂಡರೆ ಅವರದು ಅಡುಗೆಯ ವೃತ್ತಿ ಎಂದು ಊಹಿಸಲು ಸಾಧ್ಯವೇ ಇಲ್ಲ. ಅವರು ಸದಾ ಧರಿಸುವ ಬಿಳಿಯ ಶರ್ಟಿನ ಮೇಲಾಗಲೀ ಪಂಚೆಯ ಮೇಲಾಗಲೀ ಸಾಂಬಾರಿನ ಚಿಕ್ಕ ಕಲೆಯನ್ನೂ ಕೂಡಾ ಯಾರೂ ಹುಡುಕಲು ಸಾಧ್ಯವಿಲ್ಲ. ಯಾವುದೇ ಕಾರ್ಯಕ್ರಮವಿಲ್ಲವೆಂದಾದರೆ ಸಂಜೆ ಐದೂವರೆಗೆ ಐತಾಳರು ಪೇಟೆಗೆ ಬರುತ್ತಾರೆ. ಸ್ವತಃ ಅಡುಗೆ ಭಟ್ಟರಾದರೂ ಅವರ ಸಂಜೆಯ ಚಹಾ ಸಂಪಿಗೆ ಹೋಟೆಲ್ಲಿನಲ್ಲೇ! ದೊಡ್ಡ ದೊಡ್ಡ ಕುಳಗಳು ಸಂಜೆ ಕುಳಿತು ಮಾತಾಡುವ ಜಾಗ ಅದು. ಅಂತವರ ಭುಜಕ್ಕೆ ಭುಜ ಉಜ್ಜುವ ಅವಕಾಶವಿದೆ ಎಂಬ ಕಾರಣಕ್ಕಾಗಿಯೇ ಹದಿನೆಂಟು ರೂಪಾಯಿಗೆ ಒಂದು ಕಪ್ಪು ಚಹಾ ಮಾರುವ ಸಂಪಿಗೆ ಹೊಟೆಲ್ಲು ಐತಾಳರಿಗೆ ದುಬಾರಿ ಅನ್ನಿಸುತ್ತಿರಲಿಲ್ಲ. ಚಹಾ ಕುಡಿಯುತ್ತಾ ಮಾತಿನ ನಡುವೆ ಅವಕಾಶ ಹುಡುಕಿ ನಿನ್ನೆಯೋ ಮೊನ್ನೆಯೋ ನಡೆದ ಸನ್ಮಾನ ಕಾರ್ಯಕ್ರಮದ ವರ್ಣನೆ ನೀಡುವುದು ಐತಾಳರ ಸದುದ್ಧೇಶ. ಮೊನ್ನೆ ನಡೆದದ್ದು ಇನ್ನೂರನೇ ಸನ್ಮಾನ ಎಂತಲೋ, ಸನ್ಮಾನ ನೆರವೇರಿಸಲು ಆಹ್ವಾನಿತರಾದ ಗಣ್ಯರಿಂದ ಶಾಲು ಹೊದೆಸಿಕೊಳ್ಳುತ್ತಿರುವ ಇಪ್ಪತ್ತನೆಯ ಸಂದರ್ಭ ಅದಾಗಿತ್ತೆಂದೋ ಹೇಳುತ್ತಾ ಪ್ರತಿ ಸನ್ಮಾನಕ್ಕೂ ಅದರದ್ದೇ ಆದ ಮಹತ್ವವನ್ನು ಕರುಣಿಸುವ ಕಲೆಯನ್ನು ಇತ್ತೀಚೆಗೆ ಐತಾಳರು ಕಂಠಗತಮಾಡಿಕೊಂಡಿದ್ದರು. ಅದು ಎಲ್ಲರಿಗೂ ತಿಳಿದು, ಈಗ ಸಂಪಿಗೆ ಹೊಟೆಲ್ಲಿಗೆ ಬರುತ್ತಲೇ ನಿನ್ನೆ ನಡೆದದ್ದು ಎಷ್ಟನೇ ಸನ್ಮಾನ ಎಂದು ಬಾಯಿ ತೆಗೆಯುವ ಮೊದಲೇ ಐತಾಳರನ್ನು ಕೇಳುತ್ತಿದ್ದರು. ಈ ಕುಹಕ ಐತಾಳರಿಗೆ ಗೊತ್ತಾಗುತ್ತಿತ್ತೋ ಇಲ್ಲವೋ ತಿಳಿಯದು; ಆದರೆ, ಗೊತ್ತಾಗದವರಂತೆ ಮುಗ್ಧವಾಗಿ ಪ್ರತಿಕ್ರಿಯಿಸುತ್ತಿದ್ದರು. ನೂರಾ ಹನ್ನೊಂದನೇ ಸನ್ಮಾನದ ಕುರಿತು ಅವರ ಬಾಯಿಂದಲೇ ಕೇಳಿದ ಸ್ನೇಹಿತರು `ಏನು ಐತಾಳರೆ ಇದು? ನಿಮ್ಮ ನೂರನೇ ಸನ್ಮಾನಕ್ಕೆ ನಾವೆಲ್ಲ ಬರಬೇಕೆಂದುಕೊಂಡಿದ್ದೆವು. ನಮ್ಮದೂ ಒಂದು ಹಾರ ಹಾಕಿ ಕೃತಾರ್ಥರಾಗಬೇಕೆಂದುಕೊಂಡಿದ್ದೆವು.. ನೀವು ಹೇಳಲೇ ಇಲ್ಲ.. ಈಗ ನೂರಾ ಹನ್ನೊಂದಾಯ್ತು ಅಂತಿದ್ದೀರಿ’ ಎಂದಿದ್ದಕ್ಕೆ ಐತಾಳರು ಮುಗ್ಧವಾಗಿ ನಗುತ್ತಾ `ಇಲ್ಲಪ್ಪ, ನಿಮಗೆ ಹೇಳದೆ ನೂರನೇ ಸನ್ಮಾನ ಮಾಡಿಸ್ಕೊಳ್ತೇನಾ ನಾನು? ... ನೂರನೇ ಸನ್ಮಾನ ತನ್ನ ತವರೂರಲ್ಲೇ ಆಗಬೇಕೆಂಬುದು ನನ್ನ ಹೆಂಡತಿಯ ಆಸೆ..ಆದ್ರೆ, ಅಲ್ಲಿ ಮುಂದಾಗಿ ಮಾಡುವವರು ಯಾರೂ ಇಲ್ಲ...ಹಾಗಂತ, ಮಾಡ್ತೇವೆ ಮಾಡ್ತೇವೆ ಅಂತ ಆಗಾಗ ಹೇಳುವವರು ಇದ್ದಾರೆ. ಅದ್ಕೆ, ನೂರನೇ ಸನ್ಮಾನ ಬಾಕಿ ಇಟ್ಟುಕೊಂಡಿದ್ದೇನೆ. ನಿಮಗೆ ಖಂಡಿತ ಹೇಳ್ತೇನೆ’ ಅಂದಿದ್ದರು.
  ಐತಾಳರ ಸನ್ಮಾನ ಎಂಬುದು ಕೆಲವು ಸೇವಾ ಸಂಸ್ಥೆಗಳ ಕಾರ್ಯಕ್ರಮದ ಅವಿಭಾಜ್ಯ ಅಂಗವಾಗಿ ಮಾರ್ಪಟ್ಟು ಈಗ ಎರಡು-ಮೂರು ವರ್ಷಗಳು ಕಳೆದುಹೋಗಿವೆ. ಕಾರ್ಯಕ್ರಮದಲ್ಲಿ ಐತಾಳರದೇ ಅಡುಗೆ ಇರುತ್ತದೆ. ಕಾರ್ಯಕ್ರಮ ಮುಗಿದ ಮೇಲೆ ಊಟೋಪಚಾರ ನೀಡಿದ್ದಕ್ಕಾಗಿ ಆಯೋಜಕರು ಎಷ್ಟೇ ಹಣ ನೀಡಿದರೂ, ನೀಡದೇ ಇದ್ದರೂ ಐತಾಳರು ನಿರ್ಧಾಕ್ಷಿಣ್ಯವಾಗಿ ಕೇಳುವ ಹಾಗಿರಲಿಲ್ಲ. ಹೆಗಲ ಮೇಲೆ ಬಿದ್ದ ಶಾಲನ್ನು ಮುಟ್ಟಿನೋಡಿಕೊಳ್ಳುವುದಕ್ಕಿಂತ ಹೆಚ್ಚೇನೂ ಮಾಡುವ ಹಾಗಿರಲಿಲ್ಲ. ಬರಬರುತ್ತಾ, ಐತಾಳರಿಗೆ ಸನ್ಮಾನಗಳು ಹೆಚ್ಚಾಗುತ್ತಾ ಬಂದಂತೆ ಅಡುಗೆ ಕರೆಗಳು ಕೂಡಾ ಹೆಚ್ಚಾಗುತ್ತಾ ಬಂದವು. ವ್ಯವಹಾರ ಜಾಸ್ತಿ ಆದದ್ದರಿಂದ ನಿಭಾಯಿಸಲು ಹೆಚ್ಚಿನ ಕೆಲಸದವರು ಬೇಕಾಯಿತು. ಈ ಸನ್ಮಾನಗಳ ನಡುವೆ ಸ್ವತಃ ಕೆಲಸ ಮಾಡಲು, ವ್ಯವಹಾರ ನೋಡಿಕೊಳ್ಳಲು ಐತಾಳರಿಗೆ ಸಮಯವೂ ಕಡಿಮೆಯಾಯಿತು. ಅಂಗಡಿಯಿಂದ ಸಾಮಾನು ತರುವ ಕೆಲಸವನ್ನು ತಮ್ಮ ನಂಬಿಗೆಯ ಕೆಲಸದವನೊಬ್ಬನಿಗೆ ನೇಮಿಸಿದರು. ಬರಬರುತ್ತಾ ವ್ಯವಹಾರದ ಸೂತ್ರ ಆತನ ಕೈ ಸೇರಿತು. ಜೇನು ಕೊಯ್ದವ ಬೆರಳು ನೆಕ್ಕದೇ ಇರುತ್ತಾನೆಯೇ? ಎಷ್ಟೇ ಹಣ ಬಂದರೂ ಹಳೆಯ ಗುಂಡಿಗಳು ತುಂಬುತ್ತಿರಲಿಲ್ಲ. ಕೆಲಸದವರ ಸಂಬಳ, ಅಂಗಡಿಯವರ ಹಣಗಳನ್ನು ಎಷ್ಟು ದಿನಗಳಂತ ಬಾಕಿ ಇಟ್ಟುಕೊಂಡಿರುವುದು? ಐತಾಳರು ಬ್ಯಾಂಕಿನಲ್ಲಿ ಸಾಲ ತೆಗೆದು ವ್ಯವಹಾರ ಮುಂದುವರಿಸಬೇಕಾದ ಸ್ಥಿತಿ ತಲುಪಿದರು. ಬ್ಯಾಂಕಿನಿಂದ ಸಾಲ ಪಡೆಯಲು ಮನೆ ಇರುವ ಮೂವತ್ತು ಸೆಂಟ್ಸ್ ಜಾಗವನ್ನು ಅಡ ಇಡಬೇಕಾಯಿತು.
  ಇಷ್ಟಾದರೂ. ಸನ್ಮಾನದ ಚಟ ಐತಾಳರನ್ನು ಬಿಡಲಿಲ್ಲ. ಈಗಲೂ ಯಾರಾದರೂ ಸನ್ಮಾನ ಮಾಡುತ್ತೇನೆಂದು ಬಂದರೆ, ಸನ್ಮಾನದ ದಿನ ಯಾವೆಲ್ಲ ಗಣ್ಯರನ್ನು ಕರೆಯಬೇಕೆಂದು ಅವರೇ ಸೂಚಿಸುತ್ತಾರೆ. ಅಭಿನಂದನಾ ಪತ್ರ ಹೇಗಿರಬೇಕು ಮತ್ತು ಯಾವ ಮುದ್ರಣಾಲಯದಲ್ಲಿ ವಿನ್ಯಾಸಗೊಳಿಸಬೇಕು, ಸನ್ಮಾನಕ್ಕಿಂತ ಮುಂಚೆ ಎಲ್ಲೆಲ್ಲಿ ಬ್ಯಾನರುಗಳನ್ನು ನೇತುಹಾಕಬೇಕು ಇತ್ಯಾದಿ ಇತ್ಯಾದಿಗಳನ್ನೆಲ್ಲ ತಾವೇ ತಿಳಿಸುತ್ತಾರೆ. ಆಯೋಜಕರು ಅಷ್ಟು ಆಸಕ್ತಿ ತೋರಿಸದಿದ್ದಲ್ಲಿ ತಾವೇ ಸ್ವತಃ ಆ ಕೆಲಸಗಳನ್ನು ಮಾಡುತ್ತಾರೆ. ಕಳೆದೆರಡು ವರ್ಷಗಳಿಂದಲೂ ಉಪನ್ಯಾಸಕರೊಬ್ಬರು ಐತಾಳರ ಸನ್ಮಾನ ಪತ್ರಗಳನ್ನು ಬರೆದುಕೊಡುತ್ತಾ ಬಂದಿದ್ದಾರೆ. ಆಗಾಗ ಅವರಿಗೆ ಹೋಳಿಗೆ, ಜಿಲೇಬಿ ಪ್ಯಾಕೆಟ್ಟುಗಳನ್ನು ಕೊಟ್ಟು ಐತಾಳರು ಋಣಸಂದಾಯ ಮಾಡುತ್ತಿರುತ್ತಾರೆ. ಇವಕ್ಕೆಲ್ಲ ತಗಲುವ ಖರ್ಚುಗಳು ಮತ್ತು ಓಡಾಟಗಳು ತಮ್ಮ ಜವಾಬ್ಧಾರಿಗೆ ಬಾರದಿರುವುದರಿಂದ ಸಂಘಟಕರೂ ಖುಷಿಯಾಗುತ್ತಾರೆ. ಪತ್ರಿಕಾ ವರದಿಗಾರರಿಗೆ ಅವರೇ ಖುದ್ದು ಫೋನುಮಾಡಿ ತಮ್ಮ ಸನ್ಮಾನ ಕಾರ್ಯಕ್ರಮಕ್ಕೆ ಕರೆಯುತ್ತಾರೆ. ಪತ್ರಿಕಾ ದಿನಾಚರಣೆಯಂದು ಪತ್ರಕರ್ತಸ್ನೇಹಿತರು ನಡೆಸುವ ಅದ್ದೂರಿ ಕಾರ್ಯಕ್ರಮಕ್ಕೆ ಈಗ್ಗೆ ಮೂರುವರ್ಷಗಳಿಂದ ಐತಾಳರೇ ಉಚಿತವಾಗಿ ಊಟ ಉಪಹಾರ ನೀಡುತ್ತಾ ಬಂದಿರುವುದರಿಂದ ಅವರೂ ಐತಾಳರ ಸನ್ಮಾನ ಕಾರ್ಯಕ್ರಮಗಳನ್ನು ತಪ್ಪದೇ ವರದಿಮಾಡುತ್ತಾರೆ. ಐತಾಳರಲ್ಲಿ ಅವರ ಅಷ್ಟೂ ಇನ್ನೂರಾ ಇಪ್ಪತ್ತಾರು ಸನ್ಮಾನಗಳ ಪತ್ರಿಕಾ ವರದಿಗಳ ತುಣುಕಗಳಿವೆ. ಅವುಗಳನ್ನೆಲ್ಲ ಫೈಲಿನಲ್ಲಿ ದಿನಾಂಕವಾರು ಜೋಡಿಸಿಟ್ಟುಕೊಂಡಿದ್ದಾರೆ. ಅದೇ ಫೈಲಿನಲ್ಲಿ ತಮ್ಮ ಪರಿಚಯ ಪತ್ರದ ಅನೇಕ ಪ್ರತಿಗಳನ್ನು ಇಟ್ಟುಕೊಂಡಿದ್ದಾರೆ. ಕಾರ್ಯಕ್ರಮ ನಡೆಸುವವರು ಅವುಗಳನ್ನು ಕೇಳಲಿ ಕೇಳದಿರಲಿ ಐತಾಳರು ಅವರಿಗೊಂದು ಪ್ರತಿ ನೀಡುತ್ತಾರೆ. ಕೆಲವು ಸಂಘಟಕರು ಸರಿಯಾಗಿ ಪೂರ್ವಸಿದ್ಧತೆಮಾಡಿಕೊಳ್ಳದೇ ಕಾರ್ಯಕ್ರಮ ಹಮ್ಮಿಕೊಳ್ಳುವುದರಿಂದ ಹಾರವನ್ನೋ ಶಾಲನ್ನೋ ತರಲು ಮರೆತು ಸನ್ಮಾನದ ಸಂದರ್ಭದಲ್ಲಿ ಪೇಚಾಡುವುದನ್ನು ಐತಾಳರು ಅನೇಕ ಬಾರಿ ಕಂಡಿದ್ದಾರೆ. ಅನುಭವಿಸಿದ್ದಾರೆ ಕೂಡಾ. ಅದಕ್ಕೂ ಪರಿಹಾರ ಕಂಡುಕೊಂಡಿರುವ ಐತಾಳರು ತಮ್ಮ ಬ್ಯಾಗಿನಲ್ಲಿ ಸದಾ ಒಂದು ಗಂಧದ ಹಾರ, ಒಂದು ಶಾಲು ಇಟ್ಟುಕೊಂಡಿರುತ್ತಾರೆ. ಈ ವಿಚಾರ ಎಲ್ಲರಿಗೂ ಗೊತ್ತಾಗಿರುವುದರಿಂದ ಐತಾಳರ ಸನ್ಮಾನ ಇದ್ದರೆ ಈಗೀಗ ಸಂಘಟಕರು ಹಾರ ಮತ್ತು ಶಾಲನ್ನು ಹೊರತುಪಡಿಸಿ ಉಳಿದ ಸಾಮಗ್ರಿಗಳನ್ನು ಮಾತ್ರ ಖರೀದಿಸುತ್ತಾರೆ. ಎರಡು ಕಿಲೋಗ್ರಾಮ್ ಹಣ್ಣು, ಒಂದು ಹರಿವಾಣ ಮತ್ತು ಸ್ಮರಣಿಕೆಯಾಗಿ ಒಂದು ಮೂರ್ತಿ..ಅಬ್ಬಬ್ಬಾ ಎಂದರೆ ಐದುನೂರು ರೂಪಾಯಿಗೆ ಒಂದು ಸನ್ಮಾನ ಮುಗಿದುಬಿಡುತ್ತದೆ. ಆದರೆ, ಪ್ರತಿ ಸನ್ಮಾನದಲ್ಲೂ ಐತಾಳರು ಸಾವಿರಾರು ರೂಪಾಯಿಗಳನ್ನು ಕಳೆದುಕೊಳ್ಳುತ್ತಾರೆ. ಹೀಗೆ ಆದ ನಷ್ಟವನ್ನು ಸನ್ಮಾನ ಮಾಡದ ಗ್ರಾಹಕರಿಗೆ ವರ್ಗಾಯಿಸಲು ಪ್ರಯತ್ನಿಸಿ ಐತಾಳರು ಅಡುಗೆಯ ದರ ಹೆಚ್ಚಳ ಮಾಡಿದ್ದರಿಂದ ಇನ್ನಷ್ಟು ಅನಾಹುತವೇ ಆಗಿದೆ. ಇದರಿಂದ ಸನ್ಮಾನ ಮಾಡುವವರ ಸಂಖ್ಯೆ ಮತ್ತಷ್ಟು ಹೆಚ್ಚಿದೆ. ಪ್ರತಿ ಸನ್ಮಾನವೂ ಐತಾಳರನ್ನು ಸಾಲದ ಶೂಲದಲ್ಲಿ ಇನ್ನಷ್ಟು ಆಳಕ್ಕೆ ತಳ್ಳುತ್ತಲೇ ಇದೆ.
   ಹರಿಕೃಷ್ಣ ಐತಾಳರು ತಮ್ಮ ವ್ಯವಹಾರದಲ್ಲಿ ಸೋಲುತ್ತಿರುವುದು ಮತ್ತು ಅವರಿಗೆ ಸನ್ಮಾನದ ಗೀಳು ವಿಪರೀತವಾಗಿ ಅಂಟಿಕೊಂಡಿರುವುದು ದೊಡ್ಡ ಐತಾಳರಿಗೆ ಈಗ ಖಚಿತವಾಗಿಹೋಗಿತ್ತು. ನೇರವಾಗಿ ಅಲ್ಲದಿದ್ದರೂ, ಹರಿಕೃಷ್ಣ ಐತಾಳರ ಅಡುಗೆಯವರನ್ನು ಆಗಾಗ ಕರೆದು ವ್ಯವಹಾರ ಹೇಗೆ ನಡೆಯುತ್ತಿದೆ ಎಂದು ವಿಚಾರಿಸುತ್ತಿದ್ದರು. ಅನಸೂಯಮ್ಮನವರನ್ನು ಒಂದೆರಡುಬಾರಿ ಕರೆದು ಗಂಡನಿಗೆ ಕೆಲಸದ ಮೇಲೆ ಹೆಚ್ಚಿಗೆ ಗಮನಕೊಡುವಂತೆ ತಿಳಿಸಲು ಸೂಚಿದ್ದರು. ಹೊಟ್ಟೆಕಿಚ್ಚಿನಿಂದಾಗಿಯೇ ಈ ಮುದುಕ ಹೀಗೆ ಹೇಳುವುದು ಎಂದು ಅನಸೂಯಮ್ಮ ತಿಳಿದದ್ದಷ್ಟೇ ಅಲ್ಲ, ಅದನ್ನು ಅವರಿವರ ಹತ್ತಿರ ಹೇಳಿಯೂ ಬಿಟ್ಟಿದ್ದರು. ಸುದ್ದಿ ಹೇಗೋ ವೆಂಕಟರಮಣ ಐತಾಳರಿಗೆ ತಿಳಿದು `ಅವ ಏನಾದರೂ ಮಾಡ್ಕೊಂಡು ಸಾಯಲಿ, ನಿಮಗೆಂತಕೆ  ಅದರ ಉಸಾಬರಿ?’ ಎಂದು ಅಪ್ಪನಿಗೆ ತಿಳಿಹೇಳಿದ್ದರು. 
                                               ***
  `ಹರಿಕೃಷ್ಣ ಐತಾಳರ ಮನೆಯಲ್ಲವ?’ ಎಂದು ಅವರು ಕೇಳಬಹುದಾದ ಪ್ರಶ್ನೆಯನ್ನು ಮೊದಲೇ ಊಹಿಸಿಕೊಂಡದ್ದರಿಂದ, ಕಾರು ಇಳಿದು ಅವರು ಬಾಯಿತೆರೆಯುತ್ತಲೇ `ಹೌದೌದು.. ಇದೇ ಮನೆ’ ಎಂದು ಅನಸೂಯಮ್ಮ ಗೇಟು ತೆರೆದು ಸ್ವಾಗತಿಸಿದರು. ಸೂಟು ಬೂಟು ಧರಿಸಿ ಬಂದ ನಾಲ್ವರಲ್ಲಿ ಒಬ್ಬರು `ಇದ್ದಾರಾ ಐತಾಳರು?’ ಎಂದು ಕೇಳಿದರು. `ಸ್ನಾನಕ್ಕೆ ಹೋಗಿದ್ದಾರೆ, ಈಗ ಬರ್ತಾರೆ, ಕುಳಿತುಕೊಳ್ಳಿ’ ಎಂದು ಹೇಳಿ ಅನಸೂಯಮ್ಮ ಚಹಾ ಮಾಡಲು ಒಳಗೆ ಹೊರಟರು. ಅಡುಗೆ ಮನೆಗೆ ಹೋಗುವ ಮೊದಲು `ನಿಮಗೆ ಚಾ ಆಗ್ಬಹುದಾ ಕಾಫಿ ಮಾಡಲಾ’ ಎಂದು ಕೇಳಬೇಕೆಂದುಕೊಂಡವರು ಹಾಗೆ ಕೇಳದೇ ಒಳನಡೆದರು. ಹಾಗೆ ಕೇಳದಿರಲು ನಿನ್ನೆಯಷ್ಟೇ ಮಾಡಿದ ಕಷಾಯ ಪುಡಿಯ ನೆನಪಾದದ್ದು ಒಂದು ಕಾರಣವಾದರೂ ಅತಿಥಿಗಳಲ್ಲೇ ಆಯ್ಕೆ ಕೇಳಿದರೆ, ಅವರು `ಏನೂ ಮಾಡುವುದು ಬೇಡ’ ಅಂತಲೋ ‘ನಾವು ಈಗಷ್ಟೇ ಕಾಫಿ ಮುಗಿಸಿ ಬಂದಿದ್ದೇವೆ’ ಅಂತಲೋ ಏನಾದರೊಂದು ಹೇಳುವುದು, ಆ ನಂತರ ಒತ್ತಾಯ ಮಾಡುವುದು, ಹೀಗೆ, ಪೂರ್ವನಿರ್ಧಾರಿತವೆಂಬಂತೆ ನಡೆಯುವ ನಾಟಕೀಯ ಸನ್ನಿವೇಶಗಳನ್ನು ತಪ್ಪಿಸುವ ಉದ್ಧೇಶವೂ ಅನಸೂಯಮ್ಮನಿಗಿತ್ತು. 
  ಯಾರ್ಯಾರೋ ತನ್ನ ಗಂಡನಿಗೆ ಸನ್ಮಾನ ಮಾಡುತ್ತಾರೆ. ಆದರೆ, ತನ್ನ ತವರುಮನೆ ಊರಿನವರು ಮಾತ್ರ ನಿರ್ಲಕ್ಷ ಮಾಡುತ್ತಿದ್ದಾರೆ ಅಂತ ಗಂಡನನ್ನು ಸನ್ಮಾನಕ್ಕೆ ಕರೆಯಲು ಯಾರಾದರೂ ಬಂದಾಗ ಅನಸೂಯಮ್ಮಗೆ ಅನಿಸುತ್ತಿರುತ್ತದೆ. ತವರೂರಲ್ಲಿ ಗಂಡ ಹೆಂಡತಿ ಇಬ್ಬರಿಗೂ ಶಾಲು ಹೊದೆಸಿ ಸನ್ಮಾನ ಮಾಡುತ್ತಿರುವುದನ್ನು ಹಗಲುಗನಸು ಕಾಣುತ್ತಾ ಆಗಾಗ ಖುಷಿಪಟ್ಟುಕೊಳ್ಳುತ್ತಾರೆ. ಇದೆಲ್ಲ ಊಹೆ ಎಂದು ಎಚ್ಚರಗೊಳ್ಳುತ್ತಲೇ ಪೆಚ್ಚಾಗುತ್ತಾರೆ. ನೂರನೇ ಸನ್ಮಾನವನ್ನು ತನ್ನ ತವರೂರಲ್ಲೇ ಮಾಡಬೇಕೆಂದು ತಾನು ಪಟ್ಟುಹಿಡಿದ ವಿಚಾರವನ್ನು ಈಚೆಗೆ ತವರಿಗೆ ಹೋದಾಗ ಹೇಳಿದ್ದರೂ ತನ್ನ ಅಣ್ಣನ ಮಕ್ಕಳಾಗಲೀ ಇನ್ಯಾವ ಹಿರಿಯರಾಗಲೀ ಉತ್ಸಾಹ ತೋರಿರಲಿಲ್ಲ. `ಅವರಿಗೆ ಅಷ್ಟೆಲ್ಲ ಕಷ್ಟ ಆಪದಾರೆ, ಖರ್ಚೆಲ್ಲ ನಾನೇ ಕಂಡಕಳ್ತೇನಂದ ಹೇಳ’ ಎಂದು ಐತಾಳರು ಅನಸೂಯಮ್ಮನಲ್ಲಿ ಹೇಳಿದ್ದರು. ಅದನ್ನೂ ಅನಸೂಯಮ್ಮ ಸೂಚ್ಯವಾಗಿ ಮುಟ್ಟಿಸಿದ್ದರು. ಆ ಊರಿನ ಯುವಕ ಸಂಘದ ವಾರ್ಷಿಕೋತ್ಸವದ ಆಮಂತ್ರಣ ಬಂದಾಗ ಐತಾಳರು ಚಂದಾ ಹಣವನ್ನು  ತಕ್ಷಣ ಮನಿಯಾರ್ಡರ್ ಮೂಲಕ ಕಳುಹಿಸಿದ್ದರು. ಊಹೂಂ.. ಐತಾಳರನ್ನು ಸನ್ಮಾನಿಸುವ ಇರಾದೆ ಇರುವ ಯಾವ ಚಿನ್ಹೆಗಳೂ ಕಂಡಿರಲಿಲ್ಲ. ಇದರ ಬದಲು, ಕೆಲವು ಹುಡುಗರು `ಎಂತಕಂದ್ ಅವರಿಗೆ ಸನ್ಮಾನ ಮಾಡೂದ? ಈ ಊರ್ನ ಹೆಣ್ಗಳ ಮದುವೆಯಾದ ಎಷ್ಟಪ ಅಳಿಯಂದಿಕಳಿಲ್ಲ?!’ ಎಂದು ಕೇಳಿದ್ದು ಅನಸೂಯಮ್ಮನ ಕಿವಿಗೂ ಬಿದ್ದು ಗಂಡನ ನೂರನೇ ಸನ್ಮಾನ ತನ್ನ ತವರೂರಲ್ಲೇ ನಡೆಯಬೇಕೆಂಬ ಆಸೆಯನ್ನು ಕೈ ಬಿಟ್ಟಿದ್ದರು. ಆದರೆ, ಖಾಲಿ ಇರುವ ನೂರನೇ ಸನ್ಮಾನದ ಸ್ಥಾನವನ್ನು ಯಾವುದಾದರೂ ಪ್ರತಿಷ್ಠಿತ ಸಂಸ್ಥೆಗಳ ಮೂಲಕ ಸನ್ಮಾನ ಪಡೆಯುವುದರಿಂದಲೇ ತನ್ನ ಗಂಡ ತುಂಬಿಸಿಕೊಳ್ಳಬೇಕೆಂದು ಮನದಲ್ಲೇ ಆಸೆಪಡುತ್ತಿದ್ದರು. ಬಂದವರ ಸೂಟು-ಬೂಟು, ಹಾವಭಾವಗಳನ್ನು ಗಮನಿಸಿ ಯಾವುದೋ ದೊಡ್ಡ ಸಂಸ್ಥೆಯವರೇ ಇರಬೇಕು ಎಂದು ಊಹಿಸಿದರು. ಬೇಗ ಸ್ನಾನ ಮಾಡಲು ಗಂಡನಲ್ಲಿ ಹೇಳುವುದಕ್ಕಾಗಿ ಮತ್ತು ಬಂದವರು ಯಾರೆಂಬುದನ್ನು ಖಚಿತಪಡಿಸಿಕೊಳ್ಳುವುದಕ್ಕಾಗಿ ಅಡುಗೆ ಮನೆಯೊಳಗೆ ಹೋದವರು ಪುನಃ ಹೊರಬಂದು `ಯಾರು ಬಂದಿದ್ದಾರೆಂದು ಅವರಿಗೆ ಹೇಳಲಿ?’ ಎಂದು ಕೇಳಿದರು. `ಬ್ಯಾಂಕಿನವರು ಎಂದು ಹೇಳಿ... ಅವರಿಗೆ ಗೊತ್ತಾಗುತ್ತದೆ’ ಅಂದರು. `ಬ್ಯಾಂಕಿನವರು’ ಎಂಬ ಪದ ಅನಸೂಯಮ್ಮನವರಿಗೆ ಯಾಕೋ ಹಿತವಾಗಿ ಕೇಳಿಸಲಿಲ್ಲ. ಒಲೆ ಹೊತ್ತಿಸುವ ಮೊದಲು ಬಚ್ಚಲು ಮನೆಗೆ ಹೋಗಿ `ಯಾರೋ ಬ್ಯಾಂಕಿನವರ ಬಂದೀರ, ಬೇಗ ಸ್ನಾನ ಮಾಡಿ, ಅಂದರು. `ಯಾರ?’ ಎಂದು ಗಂಡ ಪುನಃ ವಿಚಾರಿಸಿದಾಗ ಅವರ ಧ್ವನಿಯಲ್ಲಿ ಆತಂಕವಿರುವ ಹಾಗೆ ಅನ್ನಿಸಿತು. ತಾನು ಗುರುತಿಸಿರುವುದು ತನಗೇ ಇರುವ ಆತಂಕವನ್ನೋ ಅಥವಾ ಗಂಡನ ಧ್ವನಿಯಲ್ಲಿರುವ ಆತಂಕವನ್ನೋ ಎಂಬ ಗೊಂದಲದ ನಡುವೆ- `ಯಾರೋ ಬ್ಯಾಂಕಿನವರಂಬ್ರ’ ಎಂದಷ್ಟೇ ಹೇಳಿ ಅಡುಗೆ ಮನೆಗೆ ಬಂದರು.
   ಕಷಾಯ ಆಗುವುದರೊಳಗೆ ಗಂಡ ಸ್ನಾನ ಮುಗಿಸಿ ಬರುತ್ತಾರೆಂದುಕೊಂಡಿದ್ದ ಅನಸೂಯಮ್ಮಗೆ ನಿರಾಸೆಯಾಯಿತು. ಟೀಪಾಯಿಯ ಮೇಲಿರುವ ಸ್ಮರಣಿಕೆಯನ್ನು ಪಕ್ಕಕ್ಕೆ ಸರಿಸಿ ಒಂದು ಪ್ಲೇಟಿನಲ್ಲಿ ಚಕ್ಕುಲಿ ಮತ್ತು ಗಂಡನಿಗೂ ಸೇರಿಸಿ ನಾಲ್ಕು ಕಪ್ಪು ಕಷಾಯ ತಂದಿಟ್ಟರು. ಗಂಡ ಇನ್ನೂ ಯಾಕೆ ಸ್ನಾನ ಮುಗಿಸಲಿಲ್ಲವೆಂಬ ಆತಂಕವನ್ನು ತೋರಿಸಿಕೊಳ್ಳದೆ `ಅವರು ಈಗ ಬರ್ತಾರೆ, ನೀವು ತೆಗೆದುಕೊಳ್ಳಿ’ ಎಂದರು. ಪುನಃ ಬಚ್ಚಲುಮನೆಗೆ ಹೋಗಿ ಚಿಲಕದ ಸದ್ದು ಮಾಡಿ ಬಂದರು. ಕಷಾಯ ಖಾಲಿಯಾದರೂ ಗಂಡ ಬಾರದಾದಾಗ ಅನಸೂಯಮ್ಮಗೆ ಅವಮಾನ ಆತಂಕಗಳೆಲ್ಲ ಒಟ್ಟಿಗೆ ಸೇರಿ ಹೇಗೇಗೋ ಆಯಿತು. ಈ ಬಾರಿ ಬಚ್ಚಲು ಮನೆಗೆ ಹೋದವರು ಸ್ವಲ್ಪ ಗಟ್ಟಿಯಾಗೇ ಕರೆದರು. ಮಾರುತ್ತರ ಬರಲಿಲ್ಲ. ಇನ್ನೊಮ್ಮೆ ಕರೆದರು, ಈಗಲೂ ಉತ್ತರವಿಲ್ಲ. ಕದ ಬಡಿದರೂ ಮಾತಿಲ್ಲ. ಅನಸೂಯಮ್ಮಗೆ ಏನೇನೋ ನೆನಪಾಗಿ ಭಯವಾಯಿತು. ಒಂದೇ ಸಮನೆ ಕೂಗಿಕೊಳ್ಳಲು ಪ್ರಾರಂಭಿಸಿದರು.
   ಏನೋ ಅನಾಹುತವಾಗಿದೆ ಎಂಬುದನ್ನು ಗ್ರಹಿಸಿ ಬ್ಯಾಂಕಿನವರು ಬಚ್ಚಲ ಮನೆಯ ಕಡೆ ಬಂದರು. ಅನಸೂಯಮ್ಮನನ್ನು ಸಮಾಧಾನಪಡಿಸುವುದು ಮತ್ತು ಒಳಗಿರುವ ಐತಾಳರನ್ನು ಹೊರತರುವುದು ಇವೆರಡರಲ್ಲಿ ಯಾವುದಕ್ಕೆ ಆಧ್ಯತೆ ದೊರೆಯಬೇಕು ಎಂಬುದನ್ನು ಲೆಕ್ಕಹಾಕುತ್ತಾ ಪ್ರೊಬೆಷನರಿ ಅಧಿಕಾರಿಯೊಬ್ಬರು ತಮ್ಮ ಮ್ಯಾನೇಜಮೆಂಟ್ ತರಬೇತಿಯ ಪಟ್ಟುಗಳನ್ನು ಪಣಕ್ಕಿಡುವ ಹುಮ್ಮಸ್ಸಿನಲ್ಲಿರುವಾಗಲೇ ಹಿರಿಯರೊಬ್ಬರು ಏನೋ ಹೊಳೆದವರಂತೆ, `ಐತಾಳರೆ, ಬರುವ ಗುರುವಾರ ನಮ್ಮ ಬ್ಯಾಂಕಿನ ಸಂಸ್ಥಾಪಕರ ನೂರನೇ ಜನ್ಮದಿನದ ಆಚರಣೆ ಇದೆ. ನೀವು ನಮ್ಮ ನೂರನೇ ಅಕೌಂಟ್ ಹೋಲ್ಡರ್ ಆಗಿರುವುದರಿಂದ ನಿಮಗೆ ಸನ್ಮಾನವಿದೆ. ಕಾಗದ ಕೊಡಲು ಬಂದಿದ್ದೇವೆ’ ಎಂದು ಒಂದೇ ಉಸಿರಿನಲ್ಲಿ ಗಟ್ಟಿಯಾಗಿ ಹೇಳಿದರು. 
   ಕಿರ್ರನೆ ಶಬ್ಧ ಮಾಡುತ್ತಾ ತೆರೆದುಕೊಂಡ ಬಾಗಿಲಿನ ಜೊತೆಗೆ ಹೊರಬಂದ ಹರಿಕೃಷ್ಣ ಐತಾಳರು `ನೀರು ಬಹಳ ಬಿಸಿ ಇತ್ತ್ತು...ತಲೆ ತಿರುಗಿದ  ಹಾಗಾಗಿ ಅಲ್ಲೆ ಕುಳಿತುಬಿಟ್ಟೆ.. ಛೇ!...ನೀವೆಲ್ಲ ಕಾಯುವ ಹಾಗಾಯಿತು’ ಎಂದರು. 
  ಅನಸೂಯಮ್ಮಗೆ ನಿಂತಿರುವ ನೆಲ ನಿಧಾನಕ್ಕೆ ವಾಲುತ್ತಿರುವಂತೆ ಅನ್ನಿಸಿತು. ಗೋಡೆ ಹಿಡಿದುಕೊಂಡು ಅಲ್ಲೇ ಕುಸಿದುಬಿಟ್ಟರು.
______________________________________________________________

ಕತೆ-ನೂರನೆಯ ಸಂಮಾನ





ಯುನಿಕೋಡ್ ಅಕ್ಷರಗಳಲ್ಲಿ ಈ ಕತೆಯನ್ನು ಓದಲು ಈ ಲಿಂಕನ್ನು ಕ್ಲಿಕ್ ಮಾಡಿ
















Sunday, 25 January 2015

ತಲೆಯೆತ್ತಿ ನೋಡೋಣ! ತಲೆಯೆತ್ತಿ ನಡೆಯೋಣ!!

    
ಹೊಸದಿಶೆಯತ್ತ ದಾಪುಗಾಲು ಹಾಕುತ್ತಿರುವಾಧುನಿಕ ಜಗತ್ತನ್ನು ಹಿಂದಕ್ಕೆ ತಳ್ಳುವ ಪ್ರಯತ್ನಗಳು ನಿಮ್ಮ ಗಮನಕ್ಕೂ ಬಂದಿವೆ.
 ಅಂದಶೃದ್ಧೆಗಳನ್ನು ವಿರೋಧಿಸುವ ಬದಲು ಪೋಷಿಸುವ ಪ್ರಯತ್ನಗಳಿಗೆ ಧರ್ಮರಕ್ಷಣೆಯ ಮಹತ್ವ ಪ್ರಾಪ್ತವಾಗುತ್ತಿದೆ. ಮೂಢನಂಬಿಕೆಗಳು ಹಿಂದೆ ಇರಲಿಲ್ಲವೆಂಬುದು ನನ್ನ ವಾದವಲ್ಲ. ಆದರೆ, ಸ್ವಾಮಿ ವಿವೇಕಾನಂದರ ಪ್ರಯತ್ನಗಳನ್ನೇ ಉದಾಹರಿಸಿ ಹೇಳುವುದಾದರೆ- ಮೂಢನಂಬಿಕೆಗಳು ಮತ್ತು ಪೊಳ್ಳು ಆಚರಣೆಗಳನ್ನು ಹೋಗಲಾಡಿಸಿ ಧರ್ಮವನ್ನು ಪುನರುಜ್ಜೀವನಗೊಳಿಸಬಹುದೆಂದು ಅವರು ಭಾವಿಸಿದ್ದರು. ಈಗ, ಪರಿಸ್ಥಿತಿ ಹಾಗಿಲ್ಲ. ಜಾತಿ ಪದ್ಧತಿ ಮತ್ತು ಅಸ್ಪøಶ್ಯತೆಯಂತಹ ಸಾಮಾಜಿಕ ಅನಿಷ್ಟಗಳು, ಪುರೋಹಿತಶಾಹಿ, ಸತಿಪದ್ಧತಿ, ಜ್ಯೋತಿಷ್ಯ ಮತ್ತಿತರ ಜೀವ ವಿರೋಧಿ ನಂಬಿಕೆಗಳನ್ನು ಉಳಿಸಿಕೊಂಡು ಹೋಗುವ ಮೂಲಕವೇ ಧರ್ಮವನ್ನು ರಕ್ಷಿಸಬೇಕೆಂಬ ವಾದ ಬಲಯುತವಾಗುತಿದೆ. ಕಂದಾಚಾರಗಳನ್ನು ಬಯಲಿಗೆ ತಂದು ಅವುಗಳ ವಿರುದ್ಧ ಜನಜಾಗೃತಿಯನ್ನು ನೀವು ಮೂಡಿಸುತ್ತೀರಾದರೆ, ನಿಮಗೆ ಧರ್ಮದ್ರೋಹಿಯೆಂಬ ಪಟ್ಟ ದೊರೆಯುತ್ತದೆ. ಆದುದರಿಂದಲೇ, ಪ್ರಗತಿಪರವಾದ ಸಿನೇಮಾವೊಂದನ್ನು ನಿಷೇಧಿಸಬೇಕೆಂಬ ಒತ್ತಾಯ ಕೇಳಿಬಂತು. ಬೆಳಗ್ಗೆದ್ದರೆ, ಬೇರೆ ಬೇರೆ ಧರ್ಮಕ್ಕೆ ಸಂಬಂಧಿಸಿದ ಗುರುಗಳು ಟಿ.ವಿ ಯ ಮೂಲಕ ನಮ್ಮ ಡ್ರಾಯಿಂಗ್ ರೂಮ್ ಪ್ರವೇಶಿಸಿಸಲು ಯಾವ ಅಡತಡೆಯೂ ಇಲ್ಲವಾಯಿತು. ಇತ್ತೀಚೆಗೆ ತನ್ನನ್ನು ತಾನೇ `ವೈಜ್ಞಾನಿಕ ಜ್ಯೋತಿಷಿ’ ಎಂಬ ವಿಲಕ್ಷಣ ಹೆಸರಿನಿಂದ ಕರೆಯಿಸಿಕೊಳ್ಳುವ ಜ್ಯೋತೀಷಿಯೊಬ್ಬ ರೇಪ್ ಭವಿಷ್ಯವನ್ನು ನುಡಿದಿದ್ದ. ಇಂತಹ ರಾಶಿಯವರು ಇಂತಿಂತ ದಿನ ಅತ್ಯಾಚಾರಕ್ಕೊಳಗಾಗುತ್ತರಂದು ಆತ ತಿಳಿಸಿದ್ದ. ಅತ್ಯಾಚಾರವಾಗುವ ಸ್ಥಳ, ಅತ್ಯಾಚಾರ ಮಾಡುವ ವ್ಯಕ್ತಿಯ ಬಗ್ಗೆಯೂ ಸುಳಿವು ನೀಡಿದ್ದ. ಇಂತವರು ಮೈದುನನಿಂದ, ಇವರು ಮನೆಕೆಲಸದವನಿಂದ, ಇನ್ನುಳಿದವರು ಕಛೇರಿಯ ಬಾಸಿನಿಂದ ಹೀಗೆ ಆತನ ಭವಿಷ್ಯ ಮುಂದುವರಿದಿತ್ತು. ಆಶ್ಚರ್ಯವೆಂದರೆ, ವೈಜ್ಞಾನಿಕ ಮನೋಭಾವ, ಮಾನವೀಯತೆ, ಪ್ರಶ್ನಿಸುವ ಮನಬೋಭಾವ ಮತ್ತು ಪ್ರಗತಿಶೀಲತೆಯನ್ನು ಬೆಳೆಸಿಕೊಳ್ಳುವುದು ಭಾರತದ ಸಂವಿಧಾನದ ಪ್ರಕಾರ ಮೂಲಭೂತ ಕರ್ತವ್ಯವಾದರೂ, (45/51 ಮೂಲಭೂತ ಕರ್ತವ್ಯಗಳು, ಭಾರತದ ಸಂವಿಧಾನ)  ಅದೇ ಸಂವಿಧಾನದ ಆಶಯಗಳನ್ನು ಅರಗಿಸಿಕೊಂಡು ಹುಟ್ಟಿದ ಕಾನೂನುಗಳು ಆ ಜ್ಯೋತಿಷಿಯನ್ನು ಶಿಕ್ಷಿಸಲಿಲ್ಲ. 
     ವಿಜ್ಞಾನ, ಹೇಳಿಕೇಳಿ ಪುರಾವೆಗಳನ್ನು ಆಧರಿಸಿ ಉಸಿರಾಡುವ ಯೋಚನಾ ಪದ್ಧತಿ. ಇಲ್ಲಿ ನಂಬಿಕೆಗೆ ಸ್ಥಾನವಿಲ್ಲ.` ನೀನು ನನ್ನ ಮಾತನ್ನೂ ನಂಬದಿರು. ಸ್ವತಃ ಯೋಚಿಸು’ ಎಂದು ನುಡಿದ ಶಾಖ್ಯಮುನಿ ಸಿದ್ಧಾರ್ಥ ಬುದ್ಧನಾದ. `ಧರ್ಮಗ್ರಂಥಗಳಲ್ಲಿ ಉದ್ಧರಿಸಲ್ಪಟ್ಟಿದೆ ಎಂಬ ಕಾರಣಕ್ಕಾಗಿ ನಂಬದಿರು; ಮಹಾತ್ಮರು ಹೇಳಿದ್ದಾರೆಂಬ ಕಾರಣಕ್ಕಾಗಿ ನಂಬದಿರು; ನಂಬಿ ನಂಬಿ ಅಭ್ಯಾಸವಾಗಿದೆ ಎಂಬ ಕಾರಣಕ್ಕಾಗಿ ನಂಬದಿರು, ಸ್ವತಃ ಯೋಚಿಸು’ ಎಂದಿದ್ದ ಬುದ್ಧ. ಗುರುವೇ, ನೀನು ಹೇಳುವ ಮಾತುಗಳು ಧರ್ಮಗ್ರಂಥಗಳಲಿಲ್ಲ ಎಂದು ನುಡಿದ ಶಿಷ್ಯನಿಗೆ ಮಾರುತ್ತರಿಸಿದ ಬುದ್ಧ, ಹಾಗಾದರೆ ಅವುಗಳನ್ನು ಸೇರಿಸು ಅಂದಿದ್ದ. ನೀನು ಹೇಳುವ ಮಾತುಗಳು ಧರ್ಮಗ್ರಂಥಗಳು ಹೇಳಿದ್ದಕ್ಕೆ ವ್ಯತಿರಿಕ್ತವಾಗಿವೆ ಎಂದಿದ್ದಕ್ಕೆ ಬುದ್ದ ಪ್ರತಿಕ್ರಿಯಿಸಿದ್ದು ಹೀಗೆ-`ಹಾಗಾದರೆ, ಧರ್ಮಗ್ರಂಥಗಳಿಗೆ ತಿದ್ದುಪಡಿ ಅಗತ್ಯ’. ಬುದ್ಧನ ದಾರಿ ವಿಜ್ಞಾನದ ದಾರಿಯೂ ಹೌದು.
ಮಂಗಗಳ ಮೇಲೆ ನಡೆಸಿದ ಪ್ರಯೋಗವೊಂದನ್ನು (ಕೃಪೆ-ಸೈನ್ಸ್ ರಿಪೋರ್ಟರ್) ನಿಮ್ಮ ಗಮನಕ್ಕೆ ತರಲು ಪ್ರಯತ್ನಿಸುವೆ-
    ಐದು ಮಂಗಗಳನ್ನು ದೊಡ್ಡ ಪಂಜರದಲ್ಲಿಟ್ಟು ಪಂಜರದ ಮದ್ಯದಲ್ಲಿ ಕಂಬವೊಂದರ ತುದಿಗೆ ಬಾಳೆಹಣ್ಣುಗಳನ್ನು ತೂಗುಹಾಕಲಾಯಿತು. ಯಾವುದೋ ಒಂದು ಮಂಗ ಕಂಬವನ್ನು ಹತ್ತಿ ಬಾಳೆಹಣ್ಣು ಕೀಳಲು ಪ್ರಯತ್ನಿಸಿದ ಕೂಡಲೆ ಉಳಿದ ಮಂಗಗಳ ಮೇಲೆ ಕೊರೆಯುವ ಶೀತನೀರನ್ನು ಸುರಿಯಲಾಯಿತು. ಇದನ್ನು ಅನೇಕ ಬಾರಿ ಪುನರಾವರ್ತಿಸಿದ ಮೇಲೆ ಯಾವುದೇ ಮಂಗ ಬಾಳೆಹಣ್ಣು ಕೀಳಲು ಪ್ರಯತ್ನಸಿದರೆ ಅದರ ಮೇಲೆ ಉಳಿದ ನಾಲ್ಕು ಮಂಗಗಳು ಆಕ್ರಮಣ ಮಾಡುತ್ತಿದ್ದವು. ಈ ಹಂತದಲ್ಲಿ ಪಂಜರದಿಂದ ಒಂದು ಮಂಗವನ್ನು ಬದಲಿಸಲಾಯಿತು. ಹೊಸ ಮಂಗ ಬಾಳೆಹಣ್ಣನ್ನು ಕೀಳಲು ಪ್ರಯತ್ನಸಿದಾಗ ಯಥಾಪ್ರಕಾರ ಉಳಿದ ನಾಲ್ಕು ಮಂಗಗಳು ಆಕ್ರಮಣ ನಡೆಸಿದವು. ಆನಂತರ ಇನ್ನೊಂದು ಮಂಗವನ್ನು ಬದಲಿಸಿ ಮತ್ತೊಂದು ಹೊಸಮಂಗವನ್ನು ಸೇರಿಸಲಾಯಿತು. ಎರಡನೇ ಹೊಸಮಂಗ ಬಾಳೆಹಣ್ಣು ಕೀಳಲು ಪ್ರಯತ್ನಿಸಿದಾಗ ಪುನಃ ನಾಲ್ಕು ಮಂಗಗಳು ಆಕ್ರಮಣ ನಡೆಸಿದವು. ತನ್ನ ಮೇಲೆ ಶೀತನೀರಿನ ಪ್ರಯೋಗವಾಗಿರದಿದ್ದರೂ ಮೊದಲ ಹೊಸಮಂಗ ಕೂಡಾ ಎರಡನೇ ಹೊಸಮಂಗನ ಮೇಲೆ ಆಕ್ರಮಣ ನಡೆಸಿತು. ಹೀಗೆ ಒಂದೊಂದಾಗಿ ಉಳಿದ ಮೂರು ಹಳೆಯ ಮಂಗಗಳನ್ನು ಬದಲಿಸಿ ಶೀತನೀರಿನ ಪ್ರಯೋಗವಾಗದ ಮಂಗಗಳನ್ನು ಸೇರಿಸಲಾಯಿತು. ಆಗಲೂ, ಯಾವುದೇ ಮಂಗ ಬಾಳೆಹಣ್ಣನ್ನು ಕೀಳಲು ಹೋದಾಗ ಉಳಿದ ನಾಲ್ಕು ಮಂಗಗಳು ಕಾರಣವಿಲ್ಲದೆ ಆಕ್ರಮಣ ಮಾಡುತ್ತಿದ್ದವು.
    ಮೂಢನಂಬಿಕೆಗಳನ್ನು ಅನುಸರಿಸುವವರ ಪರಿಸ್ಥಿತಿ ಆ ಮಂಗಗಳಿಗಿಂತ ಬಿನ್ನವಲ್ಲ. ತಾವೇನು ಮಾಡುತ್ತಿದ್ದವೋ ಅದಕ್ಕೆ ಕಾರಣಗಳನ್ನು ಕೇಳಿಕೊಳ್ಳುವ ಗೋಜಿಗೇ ಹೋಗದೆ ಕಾಲವನ್ನು ತಳ್ಳುತ್ತಾ ಹಿಂದಕ್ಕೆ ಹಿಂದಕ್ಕೆ ಚಲಿಸುವ ಜನರ ಕಣ್ತೆರುಸುವುದು ನಮ್ಮ ಕಾಲದ ದೊಡ್ಡ ಸವಾಲು. 
     ಜ್ಯೋತಿಷ್ಯಕ್ಕೆ ಈ ಜಗತ್ತಿನ ಯಾವುದೇ ಪುರಾವೆಗಳು ಲಭ್ಯವಿಲ್ಲ. ಹದಿನೆಂಟು ಮಂದಿ ನೊಬೆಲ್ ಪ್ರಶಸ್ತಿ ವಿಜೇತರೂ ಸೇರಿದಂತೆ 190 ವಿಜ್ಞಾನಿಗಳು ಜ್ಯೋತಿಷ್ಯವನ್ನು ಖಂಡಿಸುವ ಹೇಳಿಕೆಗೆ ಸಹಿಹಾಕಿ ಅದನ್ನು `ಸುಳ್ಳು ವಿಜ್ಞಾನ’ ವಿಭಾಗಕ್ಕೆ ಸೇರಿಸಿದರು. ಅಸಮಾನ್ಯ ಮತ್ತು ಅಲೌಕಿಕ ಸಂಗತಿಗಳ ಕುರಿತು ವೈಕ್ಞಾನಿಕ ಸಂಶೋಧನೆ ನಡೆಸುವ (CSICOP) ಸಂಸ್ಥೆ ಜ್ಯೋತಿಷ್ಯವನ್ನು ಸಮರ್ಥಿಸುವ ಯಾವುದೇ ಪುರಾವೆ ಲಭ್ಯವಿಲ್ಲವೆಂದು ಕಳೆದ ವರ್ಷªಷ್ಟೇ ತಿಳಿಸಿದೆ. ಬರ್ಕಲೇ ಪ್ರಯೋಗಾಲಯದ ವಿಜ್ಞಾನಿ ಶಾನ್ ಕಾರ್ಲಸನ್ 265 ಮಂದಿಯ ಜಾತಕವನ್ನು 26 ಪ್ರಸಿದ್ಧ ಜ್ಯೋತಿಷಿಗಳಿಗೆ ನೀಡಿ ಆ 265 ಮಂದಿಯ ವ್ಯಕ್ತಿ ನಿರ್ಧಷ್ಟ ಗುಣಲಕ್ಷಣಗಳನ್ನು ಪಟ್ಟಿಮಾಡಲು ತಿಳಿಸಿದರು. ದೊರೆತ ಉತ್ತರಗಳಿಂದ ಕೇವಲ ಮೂವತ್ತೈದು ಶೇಕಡಾದಷ್ಟೇ ಅಂದರೆ, ಸಂಭವನೀಯತೆಯ ನಿಯಮದ ಪ್ರಕಾರವಷ್ಟೇ ಒಬ್ಬರಿಗೊಬ್ಬರು ತಾಳೆಯಾಗುತ್ತಿದ್ದರು. ಜಾತಕ, ಹಸ್ತಸಾಮುದ್ರಿಕ, ಸಂಖ್ಯಾಶಾಸ್ರ್ರ ಮತ್ತಿತರ ಪೊಳ್ಳುವಿದ್ಯೆಗಳ ಸಹಾಯದಿಂದ ವ್ಯಕ್ತಿಯ ಗುಣ ಲಕ್ಷಣಗಳನ್ನು ಆ ವ್ಯಕ್ತಿಯ ಎದುರೇ ಹೇಳುವಾಗ ಜ್ಯೋತಿಷಿಗಳು ಮಾರಾಟ ಪ್ರತಿನಿಧಿಗಳು, ಜಾಹಿರಾತುದಾರರು ಅನುಸರಿಸುವ ತಂತ್ರವನ್ನೇ ಅನುಸರಿಸುತ್ತಾರೆ. ಅದೇನೆಂದರೆ, ಹೇಳಬೇಕಾದ ಸಂಗತಿಗಳು ಸತ್ಯವಾಗಿರುವುದಕ್ಕಿಂತ ಕೇಳುವವನಿಗೆ ಇಷ್ಟವಾಗುವಂತಿರಬೇಕು. ``ಅವನಿಗೆ ಸತ್ಯ ಹೇಳಬೇಡ, ಅವನು ಯಾವುದು ಸತ್ಯವಾಗಬೇಕೆಂದು ಬಯಸುತ್ತಾನೋ ಅದನ್ನು ಹೇಳು’ ಇದು ಅವರ ಪ್ರಮುಖ ತಂತ್ರ. ಅಂತಹ ಒಂದು ತಂತ್ರವನ್ನು ಹೈಮನ್ ಉದ್ಧರಿಸುತ್ತಾರೆ-
`` ನಿಮ್ಮ ಕೆಲವು ಆಕಾಂಕ್ಷೆಗಳು ಅವಾಸ್ತವಿಕವಾದವು. ಕೆಲವು ಸಲ ನೀವು, ಎಲ್ಲರೊಡನೆ ಬೆರೆಯುವ, ಬಹರ್ಮುಖಿಗಳಾಗಿದ್ದಂತೆ ತೋರಿದರೂ ಕೆಲವೊಮ್ಮೆ ಅದೇಕೋ ಅಂರ್ಮುಖಿಗಳಾಗುತ್ತೀರಿ. ನಿಮ್ಮನ್ನು ನೀವು ಸಂಪೂರ್ಣವಾಗಿ ಇತರರಿಗೆ ಅರ್ಥವಾಗುವಂತೆ ವ್ಯಕ್ತಪಡಿಸುವುದಿಲ್ಲ. ಸರಿಯಾದ ಪುರಾವೆಗಳಿಲ್ಲದೆ ಇತರರ ಮಾತನ್ನು ನೀವು ಒಪ್ಪುವುದಿಲ್ಲ. ನಿಮ್ಮ ನಿರ್ಧಾರ ಸರಿಯಾಗಿದೆಯೇ ಇಲ್ಲವೇ ಎಂಬ ಬಗ್ಗೆ ನಿಮಗೆ ಅನೇಕ ಸಲ ಅನುಮಾನಗಳು ಉಂಟಾಗುತ್ತವೆ. ನಿಮಗೆ ಕೆಲವು ವೈಯಕ್ತಿಕ ದೌರ್ಬಲ್ಯಗಳಿವೆ, ಅವು ನಿಮಗೆ ಹಾನಿಯುಂಟು ಮಾಡುತ್ತಿವೆ. ನಿಮ್ಮಲ್ಲಿ ವಿಶೇಷ ಸಾಮಥ್ರ್ಯವಿದ್ದು ಆ ಸಾಮರ್ಥ್ಯವನ್ನು ನೀವು ಸರಿಯಾಗಿ ಬಳಸಿಕೊಂಡಿಲ್ಲ....’’
 ಮೇಲಿನ ಮಾತುಗಳು ನಿಮಗೆ ಅನ್ವಯಿಸುತ್ತವೆಯೇ? ಹೆಚ್ಚು-ಕಡಿಮೆ ಎಲ್ಲರೂ ತಮಗೇ ಅನ್ವಯಿಸುತ್ತದೆ ಎಂದು ನಂಬುತ್ತಾರೆ!
    ಇತ್ತೀಚೆಗೆ, 6,475 ರಾಜಕೀಯ ದುರೀಣರ ಜಾತಕವನ್ನು ಪರೀಕ್ಷಿಸಲಾಯಿತು. ಅವರೆಲ್ಲರ ಜಾತಕಗಳೂ ಬೇರೆ ಬೇರೆ ರಾಶಿಗಳಲ್ಲಿ ಸಮಾನವಾಗಿ ಹಂಚಿಹೋಗಿದ್ದವು. ಅವರಲ್ಲಿ ಜ್ಯೋತಿಷ್ಯದ ಪ್ರಕಾರ ನಾಯಕತ್ವದ ಗುಣಗಳಿರಬೇಕಾದ ಜಾತಕದವರೂ ಇದ್ದರು. ಹಾಗೆಯೇ, ನಾಯಕತ್ವ ಗುಣಗಳಿರದಿರುವ ಜಾತಕದವರೂ ಇದ್ದರು. ಜಾನ್ ಕೆನಡಿ ಹತ್ಯೆಯನ್ನು ಮುನ್ಸೂಚಿಸಿ ಪ್ರಸಿದ್ಧರಾದ ಜ್ಯೋತಿಷಿಯೊಬ್ಬರ ಜೀವಿತಕಾಲದ ಪ್ರಮುಖ ಭವಿಷ್ಯ ನುಡಿಗಳನ್ನು ಕಲೆಹಾಕಿದ ಒಬ್ಬ ಅಧ್ಯಯನಕಾರರಿಗೆ ದೊರೆತ ಸಂಗತಿಯೇನೆಂದರೆ, ಆ ಜ್ಯೋತಿಷಿ ನುಡಿದ 82 ಶೇಕಡಾ ಭವಿಷ್ಯಗಳು ಸುಳ್ಳಾಗಿದ್ದವು.
    ಜ್ಷಾನಕ್ಕೂ ನಂಬಿಕೆಗೂ ಇರುವ ವ್ಯತ್ಯಾಸ ಇಷ್ಟೇ- ಜ್ಞಾನ ಪುರಾವೆಯನ್ನು ಬೇಡುತ್ತದೆ. ನಂಬಿಕೆಗೆ ಅದರ ಹಂಗಿಲ್ಲ. ಅಡಮ್ ಬ್ಲಾಂಕನ್‍ಬಿಕರ್ ಎಂಬ ಹೆಸರಾಂತ ವಿಜ್ಞಾನದ ಪ್ರೊಫೆಸರೊಬ್ಬರು `ನಾನು ವಿಜ್ಞಾನವನ್ನು ನಂಬುವುದಿಲ್ಲ..ನನ್ನ ವಿದ್ಯಾರ್ಥಿಗಳೂ ನಂಬಬಾರದು’ ಎಂದಿದ್ದರು. ಇನ್ನೊಬ್ಬರು ವಿಜ್ಞಾನಿ ಡಾ. ಬ್ರಿಯಾನ್ ಪೊಬೆನರ್ ತಾನು ವಿಕಾಸವಾದವನ್ನು ನಂಬುವುದಿಲ್ಲ. ಆದರೆ, ವಿಕಾಸವಾದಕ್ಕೆ ಸಮರ್ಥನೆಯಾಗಿ ನೀಡಿದ ಪುರಾವೆಗಳನ್ನು ಒಪ್ಪುತ್ತೇನೆ ಅಂದಿದ್ದರು. ವೀಕ್ಷಣೆ, ಪ್ರಯೋಗ, ವಿಶ್ಲೇಷಣೆ ಮತ್ತಿತರ ವಿಧಾನಗಳಿಗೆ ದಕ್ಕುವ ವಿಜ್ಞಾನದಲ್ಲಿ ನಂಬಿಕೆಗೆ ಸ್ಥಾನವೇ ಇಲ್ಲ. ಮತ್ತೆ ಮತ್ತೆ ತನ್ನನ್ನು ತಾನೆ ತಪ್ಪೆಂದು ಸಾಧಿಸಿ ಮುಂದೆ ಸಾಗುವ ವಿಜ್ಞಾನದ ಪ್ರತಿ ಹುಟ್ಟಿನಲ್ಲೂ ಸದಾ ಪಿತೃಹತ್ಯೆಯ ದೋಷ. ಆದುದರಿಂದಲೇ, ವಿಜ್ಞಾನ ನಿಂತ ನೀರಲ್ಲ: ಅದಕ್ಕೆ ಬೆಳವಣಿಗೆ ಇದೆ. ಜೀವಂತಿಕೆ ಇದೆ.
    ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಉಡುಪಿ ಜಿಲ್ಲಾ ಘಟಕ ಮತ್ತು ಕುಂದಾಪುರ ಸಮುದಾಯ ಒಟ್ಟಿಗೆ ಸೇರಿ ಜನವರಿ 24ರ ಶನಿವಾರ ಭಂಡಾರ್ಕರ್ಸ್ ಕಾಲೇಜಿನಲ್ಲಿ ಚುಕ್ಕಿ ಚಂದ್ರಮ ಎಂಬ ಕಾರ್ಯಕ್ರಮವನ್ನು ಹಮ್ಮಿಕೊಂಡಿವೆ. ಪ್ರಾತ್ಯಕ್ಷಿಕೆ, ಸಂವಾದ, ಆಕಾಶ ವೀಕ್ಷಣೆಗಳನ್ನೊಳಗೊಂಡ ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ಮಕ್ಕಳು ರಾಹು ಕೇತುಗಳೆಂಬ ಭೌತಿಕ ಕಾಯಗಳೇ ಇಲ್ಲವೆಂಬುದನ್ನು ತಿಳಿದುಕೊಳ್ಳುತ್ತಾರೆ. ರಾಶಿಪುಂಜಗಳು ಉಂಟುಮಾಡುವ ಚಿತ್ರಾಕೃತಿಗಳು ಒಂದೇ ರೀತಿಯಿದ್ದರೂ ಅದರಲ್ಲಿರುವ ನಕ್ಷತ್ರಗಳು ಅಸಾಧ್ಯ ವೇಗದಲ್ಲಿ ದೂರ ಸರಿಯುತ್ತಿವೆ ಎಂಬುದನ್ನೂ ತಿಳಿದುಕೊಳ್ಳುತ್ತಾರೆ. ಬರಿಗಣ್ಣಿಗೆ ಕಾಣುವ ನಕ್ಷತ್ರಗಳಿರುವಂತೆ ಕಾಣದ ನಕ್ಷತ್ರಗಳು ಇವೆಯೆಂಬುದನ್ನೂ, ರಾಶಿಪುಂಜಗಳ ನಕ್ಷತ್ರಗಳು ಒಂದೇ ಗೋಳಕ್ಕೆ ಅಂಟಿಕೊಂಡಂತೆ ಕಾಣುವುದಾದರೂ ಅವುಗಳು ಭೂಮಿಯಿಂದ ಬೇರೆ ಬೇರೆ ದೂರದಲ್ಲಿವೆಯೆಂಬುದನ್ನೂ ತಿಳಿದುಕೊಳ್ಳುತ್ತಾರೆ. ಇಲ್ಲಿ ಯಾವುದೂ ಸ್ಥಿರವಲ್ಲ, ಎಲ್ಲವೂ ಬದಲಾಗುತ್ತಿವೆ ಎಂತಲೂ ಎಲ್ಲ ಉತ್ತರಗಳೂ ತಾತ್ಪೂರ್ತಿಕವಾದುದು ಎಂಬುದೇ ಸತ್ಯ ಎಂತಲೂ ತಿಳಿದುಕೊಳ್ಳುವರು. 

ಮತ್ತು ಈ ತಿಳುವಳಿಕೆಯೇ ಅವರನ್ನು ರಕ್ಷಿಸಬಲ್ಲದು!


Saturday, 17 January 2015

ಅಮೋನಿಯಂ ನೈಟ್ರೇಟ್- ಉದಯವಾಣಿ ಲೇಖನ

ಅಮೋನಿಯಂ ನೈಟ್ರೇಟೆಂಬ ರಕ್ತಲೇಪಿತ ರಸಗೊಬ್ಬರದ ಕತೆ


  ಮೊನ್ನೆಯಷ್ಟೇ ಬೆಂಗಳೂರು ಸ್ಪೋಟಕ್ಕೆ ಕಾರಣರಾದ ಭಟ್ಕಳದ ಶಂಕಿತ ಉಗ್ರರನ್ನು ಸೆರೆಹಿಡಿದರು. ಸೆರೆ ಸಿಕ್ಕವರು ಉಗ್ರರೇ ಹೌದು ಎಂಬುದನ್ನು ಖಚಿತಪಡಿಸಿದ್ದು ಅವರ ಮನೆಯಲ್ಲಿ ಸಿಕ್ಕಿದ ಅಮೋನಿಯಂ ನೈಟ್ರೇಟು!
  ಸಾಮಾನ್ಯ ತಾಪದಲ್ಲಿ ಬಿಳಿ ಬಣ್ಣದ ಪುಡಿಹರಳಿನ ರೂಪದಲ್ಲಿರುವ ಈ ರಾಸಾಯನಿಕ ಕೃಷಿಯ ದಿಕ್ಕು-ದೆಶೆಗಳನ್ನು ಬದಲಾಯಿಸಿದ ರಸಗೊಬ್ಬರ. ಸಸ್ಯಗಳ ಬೆಳವಣಿಗೆಗೆ, ಹಣ್ಣು ಬೆಳೆಗಳ ಉತ್ತಮ ಇಳುವರಿಗೆ, ಎಲೆ ತರಕಾರಿಗಳು ಹಸಿ-ಹಸಿ ಸೊಪ್ಪನ್ನು ಹೇರಿಕೊಂಡು ಬೆಳೆಯಲು ನೈಟ್ರೋಜನ್ ಬೇಕು. ವಾತಾವರಣದಲ್ಲಿ ನೈಟ್ರೋಜನ್ ಹೇರಳವಾಗಿದ್ದರೂ ಅವುಗಳನ್ನು ಸಸ್ಯಗಳು ನೇರವಾಗಿ ಪಡೆಯಲಾರವು. ಸಸ್ಯಗಳು ಪೋಷಕಾಂಶಗಳನ್ನು ಪಡೆಯಬೇಕಾದರೆ ಅವು ನೀರಿನಲ್ಲಿ ಕರಗಬೇಕಾಗುತ್ತವೆ. ಅಮ್ಮೋನಿಯಂ ನೈಟ್ರೇಟಿನಲ್ಲೋ ಹತ್ತಿರ ಹತ್ತಿರ ಮೂವತ್ತು ಶೇಕಡಾದಷ್ಟು ನೈಟ್ರೋಜನ್ ಇರುತ್ತದೆ. ಇದು ನೀರಿನಲ್ಲಿ ಕರಗುತ್ತದೆ. ಜೊತೆಗೆ, ಬಹಳ ಅಗ್ಗ ಕೂಡಾ. ಕೇಳಬೇಕೇ? ಈ ರಾಸಾಯನಿಕ ಬಡದೇಶಗಳ ರೈತರ ಡಾರ್ಲಿಂಗ್ ಆಗಿಹೋಯಿತು.
  ಅಮೋನಿಯಂ ನೈಟ್ರೇಟು ರಾಸಾಯನಿಕ ಕ್ರೀಯೆಯಲ್ಲಿ ಪ್ರತಿಕಾರಕಗಳ ಎಲೆಕ್ಡ್ರಾನುಗಳನ್ನು ಕಳೆಯಬಲ್ಲದು -ಇದೊಂದು ಶಕ್ತಿಶಾಲಿಯಾದ ಆಕ್ಸಿಡೀಕರಣದ ದಲ್ಲಾಳಿ. ಹಾಗೆಯೇ, ಸಾವಿನ ದಲ್ಲಾಳಿ ಕೂಡಾ. ಶಾಖಕ್ಕೆ ಸೂಕ್ಷ್ಮವಾಗಿ ಪ್ರತಿಕ್ರಿಯಿಸುವ ಅಮೋನಿಯಂ ನೈಟ್ರೇಟು, ಇಂತಹ ಬಾಹ್ಯಪ್ರೇರಣೆಗೆ ಕೂಡಲೇ ಪ್ರತಿಕ್ರಿಯಿಸುವ ಮೂಲಕ ರಸಗೊಬ್ಬರದಿಂದ  ಸ್ಪೋಟಕ ಸಾಮಗ್ರಿಯಾಗಿ ಬದಲಾಗಬಲ್ಲದು! ಹೀಗಾಗಿ, ಅಮೋನಿಯಂ ನೈಟ್ರೇಟು ಇತ್ತೀಚೆಗೆ ರೈತರಿಗಿಂತ ಉಗ್ರಗಾಮಿಗಳಿಗೇ ಹೆಚ್ಚು ಪ್ರಿಯವಾದ ರಾಸಾಯನಿಕ.
  ಅಮೋನಿಯಂ ನೈಟ್ರೇಟನ್ನು ಟ್ರೈ ನೈಟ್ರೋ ಟೋಲಿನ್ ಎಂಬ ಸ್ಫೋಟಕದೊಂದಿಗೋ ಡಿಸೆಲ್‍ನಂತಹ ಇಂಧನತೈಲದೊಂದಿಗೋ ಬೆರೆಕೆ ಹಾಕಿ ಬಾಂಬು ತಯಾರಿಸುತ್ತಾರೆ. ಈ ಸ್ಫೋಟಕಗಳನ್ನೆಲ್ಲ ಉಗ್ರಗಾಮಿಗಳೇ ಬಳಸುತ್ತಾರೆ ಎಂದುಕೊಳ್ಳಬೇಡಿ. ಬಾಂಬುಗಳು ಮೂಲತಃ ಗಣಿಗಾರಿಕೆಗಾಗಿಯೇ ಕಂಡುಹಿಡಿಯಲ್ಪಟ್ಟ ಸ್ಪೋಟಕ ಕಾಂಬಿನೇಷನ್‍ಗಳು. ಆನಂತರ, ರಕ್ಷಣಾಪಡೆಗಳು ಇವುಗಳನ್ನು ಬಳಸಿಕೊಂಡವು. 1996 ರ ಅಮೇರಿಕಾದ ಒಕ್ಲಾಮಾ ನಗರದ ಸ್ಫೋಟದಿಂದಲೂ ಅಮೋನಿಯಂ ನೈಟ್ರೇಟನ್ನು ಉಗ್ರಗಾಮಿಗಳು ಬಳಸುತ್ತಿದ್ದಾರೆ!  2002 ರ ಬಾಲಿ ನೈಟ್ ಕ್ಲಬ್ ಸ್ಫೋಟ, 2003ರ ಇಸ್ತನಾಬುಲ್ ಸ್ಫೋಟಗಳಲ್ಲಿ ಅಲ್ ಖೈದಾದಂತಹ ಜಾಗತಿಕ ಭೀತಿವಾದಿಗಳು ಅಮೋನಿಯಂ ನೈಟ್ರೇಟನ್ನು ಬಳಸಿದ್ದರು. 2004 ರಲ್ಲಿ ಭಾರತ ಸರಕಾರ ನೈಟ್ರೋ ಗ್ಲಿಸರಿನ್ ಮೂಲದ ಸ್ಫೋಟಕಗಳನ್ನು ನಿಷೇದಿಸಿದ ಮೇಲೆ, ಭಾರತೀಯ ಉಪಖಂಡದಲ್ಲಿ ಕಾರ್ಯನಿರ್ವಹಿಸುತ್ತಿರುವ ಉಗ್ರಗಾಮಿ ಸಂಘಟನೆಗಳು ಅಮೋನಿಯಂ ನೈಟ್ರೇಟನ್ನು ಹೆಚ್ಚೆಚ್ಚು ಬಳಸಲಾರಂಭಿಸಿದವು. ಈ ಮಾತಿಗೆ ಪುರಾವೆಯಾಗಿ ಹೈದರಾಬಾದ್ ಸ್ಫೋಟ, ಚಿನ್ನಸ್ವಾಮಿ ಕ್ರೀಡಾಂಗಣ ಸ್ಫೋಟ, ಪುಣೆಯ ಜರ್ಮನ್ ಬೇಕರಿ ಸ್ಫೋಟ, ದಿಲ್ ಕುಷ್ ನಗರದ ಸ್ಫೋಟ ಹೀಗೆ ಹಲವು ಉದಾಹರಣೆಗಳು ದೊರೆಯುತ್ತವೆ. ಸುಧಾರಿತ ಸ್ಫೋಟಕ ಉಪಕರಣಗಳು(Iಇಆ) ಎಂದು ಕರೆಯಲ್ಪಡುವ ಸ್ಫೋಟಕಗಳಲ್ಲಿ ಮುಖ್ಯ ಕಚ್ಚಾವಸ್ತು ಅಮೋನಿಯಂ ನೈಟ್ರೇಟ್ ಆಗಿರುತ್ತದೆ. ನಟ್ಟು, ಬೋಲ್ಟು, ಬಾಲ್‍ಬಿಯರಿಂಗ್ ಗುಂಡುಗಳÀಂತಹ ದೇಹದ ಮೂಲಕ ತೂರಿಹೋಗಬಹುದಾದ ಘನವಸ್ತುಗಳನ್ನು ಸೇರಿಸಿ ಈ ಬಾಂಬುಗಳು ಪರಿಣಾಮವನ್ನು ಹೆಚ್ಚಿಸಲಾಗುತ್ತದೆ.
  ಸೆಲ್ಯುಲೋಸ್ ನೈಟ್ರೇಟ್ ಮತ್ತು ನೈಟ್ರೋ ಗ್ಲಿಸರಿನ್ ಮೂಲದ ಸ್ಫೋಟಕಗಳ ಬಳಕೆ ಪ್ರಾರಂಭವಾದದ್ದು ಹತ್ತೊಂಬತ್ತನೇ ಶತಮಾನದ ಆರಂಭದಲ್ಲಿ. ಸರ್ ಅಲ್ಪ್ರೆಡ್ ನೊಬೆಲ್‍ರ ತಂದೆ ನಡೆಸುತ್ತಿದ್ದ ಸ್ಫೋಟಕಗಳ ಫ್ಯಾಕ್ಟರಿಯಲ್ಲಿ ಆಕಸ್ಮಿಕವಾಗಿ ಸ್ಫೋಟ ಸಂಭವಿಸಿ ನೊಬೆಲ್‍ರ ಇಬ್ಬರು ತಮ್ಮಂದಿರು ಅಸುನೀಗಿದ್ದರು. ಆನಂತರ, ಅಲ್ಫ್ರೆಡ್ ನೊಬೆಲ್ ನೈಟ್ರೋಗ್ಲಿಸರಿನ್ ಮೂಲದ ಸ್ಫೋಟಕಗಳನ್ನು ನಿಯಂತ್ರಿತ ರೀತಿಯಲ್ಲಿ ಬಳಸಬಹುದಾದ ಡೈನಮೈಟ್ ಎಂಬ ಸಂಯೋಜನೆಯನ್ನು  ತಯಾರಿಸಿದರು. ಡೈನಮೈಟ್ ತಯಾರಾದದ್ದು ಗಾಂಧಿ ಹುಟ್ಟುವುದಕ್ಕಿಂತ ಎರಡು ವರ್ಷ ಮೊದಲು- 1867 ರಲ್ಲಿ. ಆನಂತರ, ಡೈನಮೈಟ್ ತಯಾರಿಸಿದ ಕುಖ್ಯಾತಿಯಿಂದ ತಪ್ಪಿಸಿಕೊಳ್ಳಲೋಸುಗುವೋ ಎಂಬಂತೆ ತನ್ನ ಆಸ್ತಿಯೆಲ್ಲ ನೊಬೆಲ್ ಪ್ರಶಸ್ತಿಗಳನ್ನು ನೀಡಲು ವಿನಿಯೋಗವಾಗಬೇಕೆಂಬ ಇಚ್ಛಾಪತ್ರವನ್ನು ಬರೆದು ಇದೇ ನೊಬೆಲ್ ಮಹಾಶಯ ಅಸುನೀಗಿದ್ದರು.
    ರಕ್ತ ಸಿಕ್ತವಾದ ಆಲೋಚನೆಗಳನ್ನು ಹೊಂದಿರುವವರು ಬಾಯಲ್ಲಿ ಆಲಿವ್ ಟೊಂಗೆಯನ್ನು ಕಚ್ಚಿಕೊಂಡರೇನಂತೆ- ಅವರ ಕಾರ್ಯಗಳಲ್ಲಿ ರಕ್ತದ ಲೇಪನ ಇದ್ದೇ ಇರುತ್ತದೆ. ಅಮೋನಿಯಂ ನೈಟ್ರೇಟು ಮತ್ತಿತರ ರಸಗೊಬ್ಬರಗಳನ್ನು ಹೇಬರ್ ಪ್ರಕ್ರಿಯೆ ಎಂಬ ರಾಸಾಯನಿಕ ಕ್ರಿಯೆಯ ಮೂಲಕ ತಯಾರಿಸಿದ ಸಾಧನೆಗಾಗಿ ವಿಜ್ಞಾನಿ ಫ್ರಿಟ್ಞ್ ಹೇಬರರಿಗೆ 1918 ರಲ್ಲಿ ರಸಾಯನ ಶಾಸ್ತ್ರದ ನೊಬೆಲ್ ಪ್ರಶಸ್ತಿ ದೊರೆಯಿತು. ಇದೇ ಹೇಬರ್ ಮಹಾಶಯನನ್ನು ಮೊದಲ ಮಹಾಯುದ್ಧದ ಕಾಲದಲ್ಲಿ ಜರ್ಮನಿಯ ರಾಸಾಯನಿಕ ಸಮರಪಡೆಯ ಮುಖ್ಯಸ್ಥರನ್ನಾಗಿಯೂ ಮಾಡಲಾಗಿತ್ತು. ಇದೇ ಹೇಬರ್ ಎರಡನೇ ವೈಪ್ರೆಸ್ ಕದನದಲ್ಲಿ ಕ್ಲೋರಿನ್ ಗ್ಯಾಸ್ ದಾಳಿಯನ್ನು ನಿರ್ದೇಶಿಸಿ ಮಿತ್ರಪಡೆಯ ಸಾವಿರಾರು ಯೋಧರ ಸಾವಿಗೆ ಕಾರಣರಾಗಿದ್ದರು. ಅಮೋನಿಯಂ ನೈಟ್ರೇಟೆಂಬ ರಸಗೊಬ್ಬರ ರಕ್ತಲೇಪಿಸಿಕೊಂಡೇ ಹುಟ್ಟಿರುವುದಕ್ಕೆ ಇದಕ್ಕಿಂತ ಬೇರೆ ಪುರಾವೆ ಬೇಕೇ?
 ಸ್ಫೋಟಕಗಳಿಗೆ ಬಹಳ ದೊಡ್ಡ ಇತಿಹಾಸವಿಲ್ಲ. ಬಹುಷಃ, ದೀರ್ಘ ಭವಿಷ್ಯವೂ ಇಲ್ಲ! ಹದಿಮೂರನೇ ಶತಮಾನದ ಹೊತ್ತಿಗೆ ಕೋವಿ ಮದ್ದಲ್ಲದೇ ಬೇರೆ ಸ್ಫೋಟಕಗಳೇ ಗೊತ್ತಿರಲಿಲ್ಲ.  ಸೆಲ್ಯುಲೋಸ್ ನೈಟ್ರೇಟ್ ಮತ್ತು ನೈಟ್ರೋ ಗ್ಲಿಸರಿನ್ ಮೂಲದ ಸ್ಫೋಟಕಗಳ ಬಳಕೆ ಪ್ರಾರಂಭವಾದದ್ದು ಹತ್ತೊಂಬತ್ತನೇ ಶತಮಾನದ ಆರಂಭದಲ್ಲಿ;  ಟಿ.ಎನ್.ಟಿ ರಂಗಪ್ರವೇಶ ಮಾಡಿದ್ದು ಮೊದಲ ವಿಶ್ವಸಮರದ ಸಂದರ್ಭದಲ್ಲಿ. 1991 ರಲ್ಲಿ ರಾಜೀವ ಗಾಂಧಿ ಆರ್. ಡಿ. ಎಕ್ಸ್ ಎಂಬ ಸ್ಫೋಟಕಕ್ಕೆ ಬಲಿಯಾದರು. ಈಗ ಮತ್ತದೇ ರಸಗೊಬ್ಬರ. ಬೆಂಗಳೂರಿನಲ್ಲಿ ಬಾಂಬು ಸ್ಫೋಟಗೊಂಡರೆ ಭಟ್ಕಳದಲ್ಲಿ ಅಮೋನಿಯಂ ನೈಟ್ರೇಟು ದೊರೆಯುತ್ತದೆ.
  ಅಮೋನಿಯಂ ನೈಟ್ರೇಟನ್ನು ರಸಗೊಬ್ಬರವಾಗಿ ಬಳಸುವಾಗಲೂ ಅಪಾಯವಿದ್ದೇ ಇದೆ. ಸಂಗ್ರಹಣೆ ಮತ್ತು ಬಳಕೆಯ ಯಾವ ಹಂತದಲ್ಲಿ ಎಚ್ಚರ ತಪ್ಪಿದರೂ ಅನಾಹುತ ಕಟ್ಟಿಟ್ಟ ಬುತ್ತಿ. ಟೆಕ್ಸಾಸ್ ನಗರದ ರಸಗೊಬ್ಬರ ಕಾರ್ಖಾನೆಯ ದುರಂತವೂ ಸೇರಿದಂತೆ ಎಷ್ಟೋ ಸಾವು-ನೋವುಗಳಿಗೆ ಈ ರಸಗೊಬ್ಬರ ಕಾರಣವಾಗಿದೆ. ರಸಗೊಬ್ಬರಕ್ಕಾಗಿ ಹಾತೊರೆಯುತ್ತಾ ಪೋಲೀಸರ ಗುಂಡು ತಿಂದು ಸತ್ತ ಹಾವೇರಿಯ ರೈತ ನಮ್ಮ ನೆನಪಿಂದ ಇನ್ನೂ ಮರೆಯಾಗಿಲ್ಲ. ಗತಿಸಿದ 2014 ರ ಕಟ್ಟಕಡೆಯ ನೂರೈವತ್ತು ಗಂಟೆಗಳಲ್ಲಿ ವಿದರ್ಭ ಪ್ರಾಂತ್ಯದ 12 ರೈತರು ಆತ್ಮಹತ್ಯೆ ಮಾಡಿಕೊಂಡರು. ಈ ಸಾವಿನಲ್ಲಿ ರಸಗೊಬ್ಬರದ ಅವಶೇಷಗಳು ಇಲ್ಲದೇ ಇಲ್ಲ. ಹಸಿರು ಕ್ರಾಂತಿಯ ನೆವದಲ್ಲಿ, ಹಾಕಿದ ದುಡ್ಡಿಗೆ ಬರುವ ಇಳುವರಿ ಸಾಲುವುದಿಲ್ಲವೆಂಬ ಕೊರಗಲ್ಲಿ ನೆಲಕ್ಕೆ ಸುರಿದ ರಾಸಾಯನಿಕಗಳು ಇಂದು ರೈತನನ್ನೇ ತಿನ್ನುತ್ತಿವೆ. ರಸಗೊಬ್ಬರಕ್ಕೆ ರಕ್ತ ಮೆತ್ತಿಕೊಂಡದಂತೂ ಸತ್ಯ.
  ಅಂದಹಾಗೆ, ಅಮೋನಿಯಂ ನೈಟ್ರೇಟನ್ನು ನೀರಲ್ಲಿ ಹಾಕಿ ಬಿಸಿ ಮಾಡಿದರೆ ಏನು ದೊರೆಯುವುದು ಗೊತ್ತೇ? ನೈಟ್ರಸ್ ಆಕ್ಸೈಡ್-ಅದೇ.. ಲಾಫಿಂಗ್ ಗ್ಯಾಸ್!
_________________________________________________________________________
ಉದಯ ಗಾಂವಕಾರ
9481509699

Saturday, 27 December 2014

Sunday, 14 December 2014

ರೈಲಿನಲ್ಲಿ ಸಿಕ್ಕವರು
















`ರಾಯರು ಸಮಾ ತಕ್ಕೊಂಡಿರ್ಬೇಕು!’
ಪಕ್ಕದ ಸೀಟಿನಲ್ಲಿ ನಿದ್ದೆಹೊಡೆಯುತ್ತಿರುವ ಆಸಾಮಿಯತ್ತ ನೋಡುತ್ತಾ ಉದ್ಘರಿಸಿದ ಸಹಪ್ರಯಾಣಿಕ ಮನಮೋಹನನ ಗಮನ ಸೆಳೆಯಲು ಯತ್ನಿಸಿದ. ಮಾತಿಗೊಂದು ಪ್ರಾರಂಭವನ್ನು  ಒದಗಿಸಲಿಕ್ಕಾಗಿ ಹೀಗೆ ಗಮನಾರ್ಹ ಸಂಗತಿಗಳನ್ನು ಹೆಕ್ಕಿ ಶುರುಹಚ್ಚಿಕೊಳ್ಳುವುದು ಹಲವರ ರೂಢಿ. ಹೀಗೆ ಶುರುವಾದ ಮಾತು ಮುಂದುವರಿದು ಪ್ರಯಾಣದ ಬೇಸರವನ್ನು ಕಡಿಮೆಮಾಡಬಹುದು, ಕೆಲವೊಮ್ಮೆ ಪ್ರಯಾಣವನ್ನು ನಿಸ್ಸಾರಗೊಳಿಸಲೂಬಹುದು ಎಂಬುದು ಮನಮೋಹನನ ಅನುಭವ. ಮಾತು ಶುರುಹಚ್ಚಿಕೊಳ್ಳಲು ಯತ್ನಿಸುತ್ತಿರುವ ಸಹಪ್ರಯಾಣಿಕನಿಗೆ ಯಾವ ಮಟ್ಟದ ಮರುಸ್ಪಂದನೆ ನೀಡುವುದು ಸೂಕ್ತ ಎಂಬ ಲೆಕ್ಕಾಚಾರ ಹಾಕುತ್ತಾ ಮನಮೋಹನ ನಿದ್ದೆಹೊಡೆಯುತ್ತಿದ್ದ ವ್ಯಕ್ತಿಯತ್ತ ನೋಡಿದ. ಕೂದಲು ಕೆದರಿದೆ, ಹಾಕಿಕೊಂಡಿರುವ ಬಟ್ಟೆ ಕೊಳೆಯಾಗಿದೆ, ಬಾಯಲ್ಲಿ ಎಂಜಲು ಇಳಿಯುತ್ತಿದೆ; ವಯಸ್ಸು ನಲವತ್ತೋ ನಲವತ್ತೈದೋ ಇರಬಹುದು..ಕುಡಿದಿರುವುದೂ ಹೌದು.
    ನಿದ್ದೆ ಮಾಡುತ್ತಿದ್ದ ವ್ಯಕ್ತಿಯತ್ತ ಮನಮೋಹನ ನೋಡಿದ್ದರಿಂದ ಉತ್ತೇಜನಗೊಂಡ ಸಹಪ್ರಯಾಣಿಕ ಮಾತು ಮುಂದುವರಿಸಿದ-
`ಗೋವಾದಲ್ಲಿ ಡಿಸೆಲ್ ಪೆಟ್ರೋಲಿನಂತೆ ಫೆನ್ನಿ ಕೂಡಾ ಬಹಳ ಅಗ್ಗ..ಗೋವಾದಿಂದ ಬರುವ ಗಾಡಿಗಳೆಲ್ಲ ಟ್ಯಾಂಕ್ ತುಂಬಿಸಿಕೊಂಡೇ ಬರುವುದು..’ಎಂದು ತನ್ನ ದ್ವಂದ್ವಾರ್ಥದ ಮಾತಿಗೆ ತಾನೇ ಹೆಮ್ಮೆಪಟ್ಟುಕೊಂಡು ಮನಮೋಹನನ ಮುಖ ನೋಡಿದ. ಅಪರೂಪಕ್ಕೊಮ್ಮೆ ಗುಂಡು ಹಾಕುವ ಅಭ್ಯಾಸವಿರುವ ಮನಮೋಹನನಿಗೆ ನಗಲು ಕಷ್ಟವಾಯಿತು, ನಗದಿರಲೂ ಕಷ್ಟವಾಯಿತು. ಅಷ್ಟರಲ್ಲಿ ಹಾರವಾಡ ಸ್ಟೇಷನ್ನು ಬಂದಿದ್ದರಿಂದ ನಿಧಾನವಾಗಿ ಸ್ಪೀಡು ಕಡಿಮೆಮಾಡಿಕೊಂಡು ಟ್ರೇನು ನಿಂತಾಗ ಕುಡಿದು ಮಲಗಿದ ಆ ಮನುಷ್ಯನ ರಿಧಮ್ಮಿಗೆ ಎಂತಹ ಧಕ್ಕೆಯಾಯಿತೋ ಆತ ನಿಧಾನಕ್ಕೆ ವಾಲಿ ಮುಂದಿನ ಸೀಟಿಗೆ ಮುಗ್ಗರಿಸಿದ. ಸಾವರಿಸಿಕೊಂಡು ಏಳುವ ಕುರುಹುಗಳು ಆತನಲ್ಲಿ ಕಾಣಿಸದೇ ಕೆಲವು ಗಳಿಗೆಗಳು ಕಳೆದ ಮೇಲೆ ಮನಮೋಹನನೊಡನೆ ಮಾತು ಶುರುಹಚ್ಚಿಕೊಂಡ ಸಹಪ್ರಯಾಣಿಕ  ಆತನ ಬೆನ್ನ ಮೇಲೆ ಮೆಲ್ಲಗೆ ತಟ್ಟಿದ, ಇನ್ನೊಮ್ಮೆ ತಟ್ಟಿದ- ಎಚ್ಚರವಾಗಲಿಲ್ಲ. ಈಗ ಸ್ವಲ್ಪ ಬಿರುಸಾಗಿಯೇ ತಟ್ಟಿದ; ಈಗಲೂ ಎಚ್ಚರವಾಗಲಿಲ್ಲ. ಅಷ್ಟರಲ್ಲಿ ಎದುರಿನ ಸೀಟಿನಲ್ಲಿ ಕುಳಿತಿದ್ದ ಎಂಟೋ ಒಂಬತ್ತೋ ವರ್ಷದ ಬಾಲಕನೊಬ್ಬ ಕುಡಿದು ಒರಗಿದ ಆ ವ್ಯಕ್ತಿಯ ತಲೆಯನ್ನು ಮೆಲ್ಲನೆ ಅಲ್ಲಾಡಿಸುತ್ತಾ ಎಚ್ಚರಿಸಲು ಪ್ರಯತ್ನಿಸಿದ. ಇಡೀ ದೇಶದ ಅಡ್ಡಸೀಳಿಕೆಯೊಂದನ್ನು ತಂದು ಕುಳ್ಳರಿಸಿದಂತೆ ಇರುವ ಪ್ಯಾಸೆಂಜರ್ ರೈಲಿನ  ಜನರಲ್ ಭೋಗಿಯಲ್ಲಿ ನಡೆಯುತ್ತಿದ್ದ ಈ ಘಟನಾವಳಿಗಳೆಲ್ಲವೂ ಇಷ್ಟೊತ್ತಿನವರೆಗೂ ಕ್ಷುಲ್ಲಕವೆನಿಸಿ ಆಚೀಚೆಯ ಪ್ರಯಾಣಿಕರ ಗಮನವನ್ನು ಸೆಳೆಯಲು ಸೋತಿದ್ದವು. ಆದರೆ, ಬಾಲಕನ ಎಂಟ್ರಿಯಿಂದಾಗಿ ಘಟನೆಗಳಿಗೆ ತಿರುವು ದೊರೆಯುವ ಸೂಚನೆ ದೊರೆಯಿತು. ಈ ಬಾಲಕ ಕುಡಿದು ಮಲಗಿದಾತನ ಮಗನೇ ಆಗಿರಬಹುದೆಂದು ಮನಮೋಹನ ಊಹಿಸಿ, ಸಹಪ್ರಯಾಣಿಕ  ಆ ಬಾಲಕನೆದುರೇ ಇನ್ನೆಂಥದೋ ದ್ವಂದ್ವಾರ್ಥದ ಮಾತನ್ನಾಡಬಹುದೆಂಬ ಭಯದಿಂದ ತಾನೇ ಮಾತನಾಡಿಸಿದ.
`ಇವರು ನಿನಗೇನಾಗಬೇಕು?’
`ಅಪ್ಪ’
ನೀನೂ ಅಪ್ಪ ಅಲ್ದೇ ಇನ್ನು ಯಾರೆಲ್ಲ ಬಂದಿದ್ದೀರಿ ಟ್ರೇನಿನಲ್ಲಿ?’
`ನಾವಿಬ್ರೇ’
ಇಬ್ಬರೇ ಇರುವುದು ಖಾತ್ರಿಯಾದ ಮೇಲೆ ಇನ್ನಷ್ಟು ಧೈರ್ಯಮಾಡಿ ಮಾತು ಮುಂದುವರಿಸಿದ-
`ಶಾಲೆಗೆ ಹೋಗ್ತೀಯಾ?’
`ಹೌದು’
`ಎಷ್ಟನೇ ಕ್ಲಾಸು?’
`ಮೂರು’
`ಯಾವ ಶಾಲೆ?’
`ವೆಂಕಟ್ರಮಣ ಶಾಲೆ.’
`ಎಲ್ಲಿದೆ ಅದು?’
`ಮಂಗಳೂರಲ್ಲಿ’
ಯಾವುದೋ ಮುಖ್ಯ ಪ್ರಶ್ನೆ ನೆನಪಾದವನಂತೆ ಕೇಳಿದ-
`ನಿನ್ನ ಹೆಸರೇ ಹೇಳಿಲ್ಲವಲ್ಲ?’
ಹೇಳಲು ನೀವು ಕೇಳೇ ಇಲ್ಲವಲ್ಲ ಅಂತ ಆ ಬಾಲಕನಿಗೆ ಅನ್ನಿಸಿತೋ ಇಲ್ಲವೋ
`ಗೋಪಾಲರಾಜು’ ಎಂದ.
ತುಳು ಭಾಷಿಕರು ಮಾತನಾಡುವ ವಿಶಿಷ್ಟ ಕನ್ನಡದಲ್ಲಿ ಆ ಬಾಲಕ ಪ್ರಶ್ನೆ ಎಸೆಯುವಷ್ಟರಲ್ಲಿ ಉತ್ತರಿಸುತ್ತಿದ್ದ. ಮಾತು ಮುಂದೆಲ್ಲಿಗೂ ಹೋಗುತ್ತಿಲ್ಲ ಎನಿಸಿ, ರಿಪೀಟಾದರೂ ಅಡ್ಡಿಯಿಲ್ಲ ಎಂದುಕೊಂಡು ಮನಮೋಹನ ಕೇಳಿದ-
`ಹಾಗಾದ್ರೆÉ್ರ, ಮಂಗಳೂರಲ್ಲಿ ನೀವಿಬ್ರೂ ಇಳೀತೀರಲ್ಲ?’
`ಇಲ್ಲ, ಸುರತ್ಕಲ್ಲಿನಲ್ಲಿ’
`ಯಾಕೆ?’
`ಅಲ್ಲಿಂದ ಕುಲಾಯಿಗೆ ಹೋಗಬೇಕು, ಬಸ್ಸಿನಲ್ಲಿ’
`ಅಪ್ಪ ಏನು ಕೆಲಸ ಮಾಡ್ತಾರೆ?’
`ಕೂಲಿ ಕೆಲಸ’
`ಅಮ್ಮ?’
`ಅಮ್ಮ ಇಲ್ಲ’
ಮನಮೋಹನನಿಗೆ ಅನುಮಾನವಾಯ್ತು. ಸರಿಯಾಗಿ ಕೇಳಿಸಿಕೊಳ್ಳಲಿಲ್ಲವೇನೋ ಎಂದುಕೊಂಡು, ಹುಡುಗನ ಕಡೆ ಬಾಗಿ ಪುನಃ ಕೇಳಿದ
`ಅಮ್ಮ?’
`ಅಮ್ಮ ಸತ್ತು ಹೋಗಿದ್ದಾರೆ’
ಯಾವ ಗೊಂದಲಕ್ಕೂ ಆಸ್ಪದವಿಲ್ಲದಂತೆ ಭಾಷೆಯನ್ನು ನಯ-ನಾಜೂಕಿನಿಂದ ಹೊರತಂದು ಆ ಹುಡುಗ ಸ್ಪಷ್ಟವಾಗಿ ಉತ್ತರಿಸಿದ ರೀತಿ ಮನಮೋಹನಿಗೆ ಆಶ್ಚರ್ಯವುಂಟುಮಾಡಿತು. ಆ ಹುಡುಗನ ಕಣ್ಣುಗಳಲ್ಲಿ ನೀರು ತುಂಬಿಕೊಂಡಂತೆ ಕಂಡಿದ್ದರಿಂದ ಮನಮೋಹನ ಪಕ್ಕದ ಸಹಪ್ರಯಾಣಿಕರತ್ತ ನೋಡಿದ. ಅವರೆಲ್ಲರ ಮುಖದಲ್ಲಿ ಪಡಿಮೂಡಿದ ಪ್ರಶ್ನಾರ್ಥಕ ಚಿನ್ಹೆಯನ್ನು ಓದಿದವನÀಂತೆ ಮೆಲ್ಲನೇ ಅಂದ-
`ಅಮ್ಮ ತೀರಿಕೊಂಡಿದ್ದಾರಂತೆ!’
ಮಾಮೂಲಿ ಕುಡಿತದ ಕೇಸು ಎಂದು ಈ ಪ್ರಹಸನದಿಂದ ಆಸಕ್ತಿ ಕಳೆದುಕೊಂಡು ತಮ್ಮ ಕುಟುಂಬದ ಸುರಕ್ಷೆಯಲ್ಲಿ ಸಿಕ್ಕಿಕೊಂಡಿದ್ದ ಹೊನ್ನಾವರದ ದಂಪತಿಗಳು, ಗೆಣಸಿನ ಚಿಪ್ಸ ತಿನ್ನುತ್ತಾ ಮಲೆಯಾಳಿ ಪೇಪರ್ ಓದುತ್ತಿದ್ದ ಮಹಾನುಭಾವ, ನಿದ್ದೆಯಲ್ಲಿದ್ದಂತೆ ಇದ್ದರೂ ಎಚ್ಚರದಲ್ಲಿದ್ದ ಟೊಪ್ಪಿಯ ಮನುಷ್ಯ, ಅಷ್ಟೇಕೆ, ಅಂಚೆಕಾರ್ಡಿನಗಲದ ಮೊಬೈಲು ಫೋನು ಹಿಡಿದು, ಅದರಿಂದ ಹೊರಟ ವೈರುಗಳಲ್ಲಿ ಬಂದಿಯಾದವನಂತೆ ಮತ್ತು ಆ ವೈರುಗಳಲ್ಲದೇ ಬಾಹ್ಯ ಜಗತ್ತಿನೊಡನೆ ಸಂಪರ್ಕಸಾಧಿಸುವ ಬೇರೆ ಸಾಧ್ಯತೆಗಳೇ ಇಲ್ಲ ಎಂಬಂತಿದ್ದ ಯುವಕನೂ ಸೇರಿ ಅಲ್ಲಿದ್ದ ಎಲ್ಲರೂ ಈಗ ಮುಖ್ಯ ಕಥಾನಕದ ಭಾಗವಾದರು. ಸತ್ತಿರುವ ಅಮ್ಮನ ಕುರಿತು ಇವರೆಲ್ಲ ಪ್ರಶ್ನೆ ಕೇಳಿ ಮಗುವಿಗೆ ಎಂತಹ ನೋವನ್ನುಂಟುಮಾಡುತ್ತಾರೋ ಎಂದು ಹೆದರಿದ ಮನಮೋಹನ ಅವರುಗಳ ಆಲೋಚನೆಗಳನ್ನು ಕತ್ತರಿಸುವ ಹಾಗೆ,
`ಈ ಮಹಾಶಯ ಸುರತ್ಕಲ್ಲಿನಲ್ಲಾದ್ರೂ ಎಚ್ಚರವಾಗ್ತಾನೋ? ಎಂದ. ಹಾಗೆ ಹೇಳುತ್ತಲೇ ಅಪ್ಪನ ಕುರಿತು ಹಗುರವಾಗಿ ಮಾತನಾಡಿದ್ರಿಂದ ಮಗನಿಗೆ ಬೇಸರಾವಾಯ್ತೇನೋ ಎಂದು ನೊಂದುಕೊಂಡ. ಅಷ್ಟಿಷ್ಟು ಅನುಕೂಲವಿರುವ ಮಧ್ಯಮ ವರ್ಗದ ವಿದ್ಯಾವಂತ ತಂದೆ-ತಾಯಿಯರು ಮತ್ತು ಅವರ ಮಕ್ಕಳು ಆಲೋಚಿಸುವ ರೀತಿಗೂ ಕೊಳಗೇರಿಗಳ ಮಕ್ಕಳು, ಕೂಲಿಯವರ ಮಕ್ಕಳು ಆಲೋಚಿಸುವ ರೀತಿಗೂ ವ್ಯತ್ಯಾಸ ಇರಬಹುದೇ ಎಂಬ ಅನುಮಾನ ಉಂಟಾಗಿದ್ದರಿಂದ ಮನಮೋಹನನಿಗೆ ತನ್ನ ಬಾಲ್ಯದ ನೆನಪಾಯಿತೋ ಅಥವಾ ಬಾಲ್ಯದ ನೆನಪಾದ್ದರಿಂದ ಹಾಗೆ ಅನ್ನಿಸಿತೋ?  ಅಂತೂ ಮನಮೋಹನ ಬಾಲ್ಯಕ್ಕೆ ಮರಳಿದ. ಮಕ್ಕಳ ಜಗಳದಲ್ಲಿ ಅಪ್ಪ- ಅಮ್ಮರ ವಿಷಯವೆಲ್ಲ ಪ್ರಸ್ತಾಪವಾಗುತಿತ್ತು. ನಿನ್ನಪ್ಪ ಹೀಗೆ, ನಿನ್ನಮ್ಮ ಹಾಗೆ ಇತ್ಯಾದಿ ಇತ್ಯಾದಿ. ಊರಿನ ಅಡ್ಡ ಸಂಬಂಧಗಳೆಲ್ಲ ಮಕ್ಕಳ ಜಗಳಗಳಲ್ಲಿ ಮಧ್ಯಪ್ರವೇಶಿಸಿಬಿಡುತ್ತಿದ್ದವು. ದೊಡ್ಡವರ ಜಗಳಗಳಲ್ಲೂ ಮಕ್ಕಳಿಗೆ ತಮ್ಮ ತಂದೆ ತಾಯಿಯರ ಕುರಿತು ಹೊಸ ಸಂಗತಿಗಳು ತಿಳಿಯುತ್ತಿದ್ದವು. ಆಚೆ ಮನೆಯ ಹೆಂಗಸಿಗೂ ಅಪ್ಪನಿಗೂ ಇರುವ ಸಂಬಂಧ ಒಳ್ಳೆಯದಲ್ಲ ಎಂತಲೋ, ಅಮ್ಮಂಗೂ ಅಪ್ಪಂಗೂ ನಡುವೆ ಇನ್ಯಾವನೋ ಇದ್ದಾನೆಂದೋ ಮಕ್ಕಳು ಅರಿತುಕೊಳ್ಳುವುದಲ್ಲದೇ ವಾಸ್ತವವನ್ನು ಒಪ್ಪಿಕೊಂಡೂ ಬಿಡುತ್ತಿದ್ದರು. ಮಕ್ಕಳ ಜಗಳಗಳು ಶಾಲಾ ಮೇಷ್ಟ್ರ ಬಳಿ ಹೋದಾಗ ಹೆಚ್ಚಾಗಿ ಕೇಳಿಬರುತ್ತಿದ್ದ ದೂರೆಂದರೆ, ಅವನು ನನ್ನಪ್ಪನ ಸುದ್ದಿ ಮಾತಾಡಿದ ಅಥವಾ ನನ್ನಮ್ಮನ ಬಗ್ಗೆ ಮಾತಾಡಿದ ಎಂಬುದಾಗಿರುತಿತ್ತು. ಬರಬರುತ್ತಾ, ಮಕ್ಕಳಿಗೆ ತನ್ನ ಅಪ್ಪ, ಅಮ್ಮ, ಮಾವ ಅಣ್ಣ ಇತ್ಯಾದಿಗಳೆಲ್ಲ ಬಹುದೊಡ್ಡ ಆದರ್ಶಗಳಲ್ಲ ಎಂಬುದು ಅರ್ಥವಾಗಿರುತಿತ್ತು. ಅಪ್ಪ ಅಮ್ಮರ ಬಗ್ಗೆ ಯಾರಾದರೂ ಲಘುವಾಗಿ ಮಾತನಾಡಿದರೆ ಅತಿಯಾಗಿ ನೊಂದುಕೊಳ್ಳದಷ್ಟು ಅಥವಾ ಅಂತಹ ಮಾತುಗಳನ್ನು ಉಪೇಕ್ಷೆಮಾಡುವಷ್ಟು  ದೃಢತೆ ತಂತಾನೆ ಬರುತಿತ್ತು. ಆದರೆ, ನಮ್ಮ ಮಕ್ಕಳು? ಸುಸಂಸ್ಕøತರೆನಿಸಲು ಅಪ್ರಾಮಾಣಿಕ ಪೊರೆಗಳನ್ನು ಹೊದ್ದು ಮಲಗಿರುವ ತಂದೆ-ತಾಯಿಯರ ಕುರಿತು ನಮ್ಮ ಮಕ್ಕಳಿಗೆ ಇರುವುದು ಬರೀ ಸುಳ್ಳು ಚಿತ್ರಣ!
   ಹೀಗೆ ಯೋಚಿಸುತ್ತಿರುವಾಗಲೇ  ಗೋಕರ್ಣ ಸ್ಟೇಷನ್ನು ಬಂದಿದ್ದರಿಂದ ಟ್ರೇನು ನಿಧಾನವಾಯ್ತು. ಇಷ್ಟೊತ್ತಿನವರೆಗೂ ಜೊತೆಯಲ್ಲಿದ್ದ ಪ್ರಯಾಣಿಕರೊಬ್ಬರು ಇಳಿಯಲು ತಯಾರಾದರು. ಹಿಂದಿನ ಸ್ಟೇಷನ್ನಿನಲ್ಲಿ ಅವರು ಗೋಪಾಲರಾಜುವಿಗೆ ಕೊಟ್ಟಿದ್ದ ಮೈಸೂರುಪಾಕಿನ ತುಂಡು ಅವನ ಕೈಯಲ್ಲಿ ಹಾಗೇ ಇರುವುದನ್ನು ಗಮನಿಸುತ್ತಾ ಬಾಗಿಲ ಬಳಿ ನಡೆದರು. ಅವರು ಇಳಿಯುತ್ತಲೇ ಗೋಪಾಲರಾಜು ತನ್ನ ಕೈಯಲ್ಲಿದ್ದ ಮೈಸೂರುಪಾಕನ್ನು ಕಿಟಕಿಯಿಂದ ಹೊರಗೆ ಬಿಸಾಡಿದ. ಗೋಪಾಲರಾಜುವನ್ನು ಗಮನಿಸುತ್ತಿದ್ದ ಮನಮೋಹನ ಮತ್ತೆ ಮಾತನಾಡಿಸಿದ-
ನಿನ್ನಪ್ಪನ ಫೋನ್ ನಂಬರ್ ಗೊತ್ತಾ?’
`ಗೊತ್ತುಂಟು’
ಗೋಪಾಲರಾಜು ಹೇಳಿದ ಫೋನ್‍ನಂಬರನ್ನು ದಾಖಲಿಸಿಕೊಂಡು ಮನಮೋಹನ ಆ ನಂಬರಿಗೆ ಕರೆಮಾಡಿದ. ಸ್ವಲ್ಪ ಸಮಯದ ಹಿಂದಷ್ಟೇ ಸೀಟಿನ ಕೆಳಗೆ ಬಿದ್ದಿದ್ದ ಆ ಕುಡುಕನನ್ನು ಮತ್ತೆ ಸೀಟಿನ ಮೇಲೆ ಪ್ರಯಾಣಿಕರೊಬ್ಬರು ಕುಳ್ಳರಿಸಿದ್ದರು. ಮನಮೋಹನನ ಫೋನ್ ಕರೆಗೆ ಅಂಗಿಯ ಕಿಸೆಯಲ್ಲಿದ್ದ ಫೋನ್ ಬೆಳಕಿನೊಂದಿಗೆ ರಿಂಗಣಿಸಿದಾಗ ಆತನ ಕಣ್ಣುಗಳು ತೆರೆಯುವ ಪ್ರಯತ್ನ ನಡೆಸಿದಂತೆ ಕಂಡವು. ಗೋಪಾಲರಾಜು ಕುತೂಹಲ, ಖುಷಿಯಿಂದ ಅಪ್ಪನ ಕಿಸೆಯನ್ನೇ ನೋಡುತ್ತಿದ್ದ.
`ನೀವಿಬ್ರೂ ಎಲ್ಲಿಗೆ ಹೋಗಿದ್ರಿ?’
`ಕಾರವಾರಕ್ಕೆ’
`ಏಕೆ?’
ಗೋಪಾಲರಾಜು ಮುಖವನ್ನು ಹತ್ತಿರ ತಂದು ಮೆಲ್ಲಗೆ ಹೇಳಿದ-
`ಅಕ್ಕ ಮನೆಬಿಟ್ಟು ಹೋಗಿದ್ದಳು-ಅವಳು ಕಾರವಾರದಲ್ಲಿದ್ದಾಳೆಂದು ಗೊತ್ತಾಯ್ತು..ಅಲ್ಲಿಗೆ ಹೋಗಿದ್ದೆವು’
`ಅಕ್ಕ ಸಿಕ್ಕಳಾ?’
`ಇಲ್ಲ,್ಲ’
`ನಿಮ್ಮಕ್ಕಂದು ಎಷ್ಟು ವಯಸ್ಸು?
`ಹದಿನೇಳು ವರ್ಷ’
ಅಕ್ಕ ಮನೆಬಿಟ್ಟು ಹೋದದ್ದು ಯಾವಾಗ?’
`ಒಂದು ತಿಂಗಳಾಯ್ತು’
ಹೆಂಡತಿಯನ್ನು ಕಳೆದುಕೊಂಡ ಮನುಷ್ಯ ಮಗಳನ್ನು ಕಳೆದುಕೊಂಡರೆ ಕುಡಿಯದೇ ಇರುತ್ತಾನೆಯೇ ಎನಿಸಿತು ಮನಮೋಹನಿಗೆ. ಇವನ ಅಕ್ಕ ಎಲ್ಲಿ ಹೋಗಿರಬಹುದು? ಅಮ್ಮ ಇಲ್ಲದ ಹುಡುಗಿ ಪಾಪ, ಯಾರೋ ಪುಸಲಾಯಿಸಿ ಕರೆದುಕೊಂಡು ಹೋಗಿರಬಹುದು. ಹದಿನೇಳು ವರ್ಷದ ಹುಡುಗಿ ಎಂದಮೇಲೆ ನೂರಾರು ಕಣ್ಣುಗಳು ಇದ್ದೇ ಇರುತ್ತವೆ. ಆತಂಕವಾಯಿತು ಮನಮೋಹನನಿಗೆ. ಈ ಚಿಕ್ಕ ಮಗುವಿನಲ್ಲಿ ಇನ್ನೇನು ಕೇಳುವುದೂ ಉಚಿತವಲ್ಲವೆಂದು ಸುಮ್ಮನಾದ. ಕಿಸೆಯಿಂದ ಒಂದುನೂರು ರೂಪಾಯಿ ತೆಗೆದು ಗೋಪಾಲರಾಜುವಿನ ಕೈಯಲ್ಲಿಟ್ಟು,
`ಮುಂದಿನ ಸ್ಟೇಷನ್ನಿನಲ್ಲಿ ಇಳಿಯುತ್ತೇನೆ, ನೀನು ಸುರತ್ಕಲ್ಲು ಬರುವ ಮುಂಚೆಯೇ ಅಪ್ಪನನ್ನು ಎಬ್ಬಿಸು’ ಎಂದ. ದುಡ್ಡುಕೊಟ್ಟಿದ್ದನ್ನು ಇತರ ಪ್ರಯಾಣಿಕರು ನೋಡಿರಬಹುದೆಂದು ಊಹಿಸಿ ಖುಷಿಪಡಿತ್ತಾ ಬಾಗಿಲ ಬಳಿಬಂದು ಉದ್ದನೆಯ ಟ್ರೇನಿನ ಬಾಲದವರೆಗೂ ಕಣ್ಣುಹಾಯಿಸಿದ. ದಿನವೂ ಈ ಟ್ರೇನು ಎಷ್ಟು ಜನರನ್ನು ಹೊತ್ತೊಯ್ಯುತ್ತಿರಬಹುದು? ಈ ಟ್ರೇನಿನೊಳಗೆ ಗೋಪಾಲರಾಜುವಿನಂತಹ ಎಷ್ಟು ಕತೆಗಳಿರಬಹುದು? ಟ್ರೇನು ಕುಮಟಾದಲ್ಲಿ ನಿಂತಿತು. ಮನಮೋಹನ ಇಳಿದು ಗೋಪಾಲರಾಜುವಿನತ್ತ ಕೈ ಬೀಸಿದ. ಗೋಪಾಲರಾಜು ಏನೂ ನಡೆದೇ ಇಲ್ಲವೆಂಬಂತಹ ಮುಖಮುದ್ರೆಯಲ್ಲಿದ್ದ. ಬೇರೆ ಬೇರೆ ಬಾಗಿಲುಗಳಿಂದ ಫ್ಲ್ಲಾಟ್‍ಫಾರ್ಮಿಗಿಳಿದ ಜನ ಮತ್ತು ಅವೇ ಬಾಗಿಲುಗಳಿಂದ ಹತ್ತಿದ ಅಷ್ಟೇ ಜನ ಮನಮೋಹನನಿಗೆ ನರಮನುಷ್ಯರಂತೆ ಕಾಣುವ ಬದಲು ಕತೆಗಳಂತೆ ಭಾಸವಾದರು. ಅಬ್ಬಾ ಟ್ರೇನಿನಲ್ಲಿ ಎಷ್ಟು ಕತೆಗಳು ತೂರಿಕೊಂಡವು? ಎಷ್ಟು ಕಳಚಿಕೊಂಡವು ಎಂದು ಯೋಚಿಸುತ್ತಾ ರಿಕ್ಷಾ ಸ್ಟ್ಯಾಂಡಿನತ್ತ ಹೆಜ್ಜೆ ಹಾಕಿದ.
                                     ******

`ನಾನು ಸರ್, ಗೋಪಾಲರಾಜು.. ನಿನ್ನೆ ಟ್ರೇನಿನಲ್ಲಿ ಸಿಕ್ಕಿದ್ನಲ್ಲ..’
ಈ ಕರೆಯನ್ನು ನಿರೀಕ್ಷಿಸಿರಲಿಲ್ಲ ಮನಮೋಹನ.
ಸರ್, ನನ್ನಪ್ಪನ ಮೊಬೈಲ್‍ನಲ್ಲಿ ನಿಮ್ಮ ಮಿಸ್ಡ್ ಕಾಲಿತ್ತು..ನಿನ್ನೆ ನೀವು ಮಾಡಿದ್ದಿರಲ್ಲ?!’
`ಓಹೋ ಗೊತ್ತಾಯ್ತು, ಗೋಪಾಲರಾಜು.. ನಿನ್ನೆ ಸುರತ್ಕಲ್ಲಿನಲ್ಲಿ ಇಳಿದ್ರಿ ಅಲ್ವಾ?’ ಎಂದ.
ಗೋಪಾಲರಾಜು ಮುದ್ದಾಗಿ ಮಾತನಾಡುತ್ತಿದ್ದ. ಇಂದು ತನ್ನ ಹುಟ್ಟುಹಬ್ಬ ಎಂದು ಹೇಳಿಕೊಂಡ. `ಹ್ಯಾಪಿ ಬರ್ತಡೇ ಗೋಪಾಲರಾಜು’ ಎಂದಿದ್ದಕ್ಕೆ `ಹ್ಯಾಪಿ ಬರ್ತ ಡೇ’ ಎಂದು ಮುಗ್ಧವಾಗಿ ಮಾರುತ್ತರಿಸಿದ. ಏನೋ ನೆನಪಾದವನಂತೆ `ಈಗಲ್ಲ ನನ್ನ ಹ್ಯಾಪಿ ಬರ್ತಡೇ..ಸಂಜೆ’ ಎಂದ. ಇಷ್ಟು ಖುಷಿಯಲ್ಲಿ ಮಾತಾಡುತ್ತಿದ್ದ ಗೋಪಾಲರಾಜು ಒಮ್ಮೇಲೆ ಏನೋ ನೇನಪಾದವನಂತೆ `ಹ್ಯಾಪಿ ಬರ್ತಡೇಗೆ ನನ್ನ ಅಕ್ಕ ಬೇಕು ಸರ್’ ಅಂದ. ಅಪ್ಪನಿಗೆ ಫೋನು ಕೊಡುವಂತೆ ಮನಮೋಹನ ಕೇಳಿದ. ನಿನ್ನೆಯ ಟ್ರೇನಿನ ಘಟನೆಯ ಕುರಿತು ಆತ ಕ್ಷಮೆ ಕೇಳಿದ.
`ಇನ್ನು ಹಾಗೆ ಮಾಡುವುದಿಲ್ಲ. ಕುಡುಕನಲ್ಲ ಸರ್ ನಾನು...ನಿನ್ನೆ ಬೇಜಾರಾಗಿತ್ತು’ ಅಂದ. ಆತನ ಮಗಳು ಮನೆಬಿಟ್ಟು ಹೋದ ಕುರಿತು ಕೆದಕಿ ಕೇಳಬಾರದು, ಅವನೇ ಹೇಳಲಿ ಎಂದುಕೊಂಡು ಮನಮೋಹನ ಬೇರೇನೋ ಮಾತನಾಡತೊಡಗಿದ. ವಿಷಯ ಬಾರದ್ದರಿಂದ ಕೊನೆಗೇ ಮನಮೋಹನನೇ ` ಹುಟ್ಟು ಹಬ್ಬಕ್ಕೆ ಗೋಪಾಲರಾಜು ಅಕ್ಕ ಬೇಕು ಅಂತಿದ್ದಾನಲ್ಲ?’ ಅಂದ. ಅಷ್ಟು ಕೇಳಿದ್ದೇ ಕತೆ ಪ್ರಾರಂಭವಾಯ್ತು. ಮನೆ ಬಿಟ್ಟು ಹೋಗಿರುವ ಹುಡುಗಿ ತನ್ನ ಸ್ವಂತ ಮಗಳಾಗಿರದೇ ಮಲಮಗಳು ಎಂಬುದಾಗಿಯೂ, ತಿಂಗಳ ಹಿಂದೆ ಸತ್ತುಹೋಗಿರುವ ಈತನ ಹೆಂಡತಿಗೆ ಈ ಮೊದಲೇ ಮದುವೆಯಾಗಿ ಒಬ್ಬಳು ಮಗಳಿದ್ದಳೆಂದೂ ತಿಳಿಸಿದ. ಒಂದು ವರ್ಷದ ಹಿಂದೆ, ಹೆಂಡತಿ ಬದುಕಿರುವಾಗಲೇ ಒಮ್ಮೆ ಮಲಮಗಳು ಮನೆಬಿಟ್ಟುಹೋಗಿ ಎರಡು ಮೂರು ತಿಂಗಳ ಹುಡುಕಾಟದ ನಂತರ ಮತ್ತೆ ಮನೆ ತಲುಪಿದ್ದಳಂತೆ. ಈ ಬಾರಿ ಮನೆ ಬಿಟ್ಟುಹೋದವಳು ಹಿಂದಿನಬಾರಿ ಉಳಿದುಕೊಂಡಲ್ಲಿಯೇ ಇರುವುದು ಗೊತ್ತಾಗಿ ಕಾರವಾರಕ್ಕೆ ಹೋಗಿದ್ದನ್ನು ತಿಳಿಸದ. ಆಕೆ ವಾಪಸು ಬರಲು ನಿರಾಕರಿಸಿದ್ದರಿಂದ ಅವಳ ಮೂಖ ನೋಡಲೂ ಆಗದೇ ಅಪ್ಪ-ಮಗ ವಾಪಸಾಗಿದ್ದರು.
ಮನಮೋಹನ ಕುತೂಹಲಕ್ಕಾಗಿ ಕೇಳಿದ-
`ಆಕೆ ಅಲ್ಲಿ ಯಾರ ಮನೆಯಲ್ಲಿರುತ್ತಾಳೆ?’
`ಸರ್, ಅದು ಮನೆಯಲ್ಲ ಆಶ್ರಮ..ಆ ಆಶ್ರಮವನ್ನು ನಡೆಸುತ್ತಿರುವವರು ಮೂಲತಃ ಗೋಕರ್ಣದವರು, ನೂರುಲ್ಲಾ ಅಂತ.
ಮನಮೋಹನನಿಗೆ ನೂರುಲ್ಲಾನ ಪರಿಚಯವಿತ್ತು. ಅದೇ ವಿಶ್ವಾಸದಲ್ಲಿ ಹೇಳಿಯೇಬಿಟ್ಟ-
`ನೀವೇನೂ ಚಿಂತಿಸಬೇಡಿ. ನಿಮ್ಮ ಮಗಳನ್ನು ನಾನು ಕರೆದುಕೊಂಡು ಬರುತ್ತೇನೆ. ನೀವು ನನ್ನೊಡನೆ ಬರಬೇಕಷ್ಟೇ!’’ ಎಂದ
`ಆಯ್ತು ಸರ್, ಅವಳು ಅಲ್ಲಿ ಸುಖವಾಗಿದ್ದಾಳೆ ಎಂದು ತಿಳಿದು ವಾಪಸು ಬಂದಿದ್ದೆ. ಆದ್ರೆ, ನನ್ನ ಮಗ ಅವಳನ್ನು ಬಹಳ ನೆನಪುಮಾಡಿಕೊಳ್ಳುತ್ತಿದ್ದಾನೆ’ ಎಂದ.
`ಯಾವುದಕ್ಕೂ ನೂರುಲ್ಲಾನಿಗೆ ಫೋನ್ ಮಾಡಿ ತಿಳಿದುಕೊಳ್ಳುವೆ- ಆತ ಬಹಳ ಒಳ್ಳೆಯ ಮನುಷ್ಯ.. ಮತ್ತೆ ಮಾತಾಡುವೆ’ ಎನ್ನುತ್ತಾ ಫೋನ್ ಸಂಪರ್ಕ ಕಡಿತಗೊಳಿಸಿದ.    
                                  *******
ನೂರುಲ್ಲಾನೂ ಮನಮೋಹನನೂ ಕುಮಟಾದ ಬಾಳಿಗಾ ಕಾಲೇಜಿನಲ್ಲಿ ಒಟ್ಟಿಗೆ ಓದಿದವರಾದ್ದರಿಂದ ಮತ್ತು ಆ ಕಾಲದÀ ಕಾಲೇಜು ಕ್ರಿಕೆಟ್ ತಂಡದ ಸದಸ್ಯರೂ ಆಗಿದ್ದರಿಂದ ಪರಸ್ಪರ ಏಕವಚನದಲ್ಲಿ ಮಾತನಾಡಿಸುವಷ್ಟು ಸಲಿಗೆ ಇತ್ತು. ಎಷ್ಟೋ ವರ್ಷಗಳಿಂದ ಭೇಟಿಯಾಗಿರಲಿಲ್ಲ, ಫೋನಿನಲ್ಲೂ ಮಾತನಾಡಿರಲಿಲ್ಲ. ಯಾರಿಂದಲೋ ನೂರುಲ್ಲಾನ ನಂಬರು ಪಡೆದು ಫೋನ್ ಮಾಡಿದ; ಟ್ರೇನಿನ ಕತೆ ಹೇಳಿದ..ಆ ಹುಡುಗಿ ನೀನು ನಡೆಸುವ ಆಶ್ರಮದಲ್ಲೇ ಇರುವುದು ಗೊತ್ತಾಗಿ ಫೋನು ಮಾಡಿದೆ ಅಂದ. `ಹೌದು ಇಲ್ಲೇ ಇದ್ದಾಳೆ..ಆ ಮನುಷ್ಯನೊಡನೆ ಹೋಗಲು ಒಪ್ಪಲಿಲ್ಲ..ನಮ್ಮ ಮನೇಲಿ ಚಿಕ್ಕ ಪುಟ್ಟ ಕೆಲಸಮಾಡಿಕೊಂಡು ಮದ್ಯಾಹ್ನದ ಮೇಲೆ ಆಶ್ರಮದಲ್ಲಿ ಹೊಲಿಗೆ ಕಲಿಯುತ್ತಿದ್ದಾಳೆ’ ಎಂದು ನೂರುಲ್ಲಾ ಎಂದಾಗ ಕತೆ ಸುಳ್ಳಲ್ಲವಲ್ಲ ಎಂದು ಖುಷಿಯಾಯ್ತು ಮನಮೋಹನಿಗೆ.
`ನಿನಗೇಕೆ ರಗಳೆ..ಅವರು ಕರೆದುಕೊಂಡು ಹೋಗಲಿ. ಇವೆಲ್ಲ ಮತ್ತೆಲ್ಲಿಗೋ ತಲುಪಿಬಿಟ್ಟರೆ ಅಪಾಯ..ಸುಮ್ಮನೆ ಉಪಕಾರ ಮಾಡಲು ಹೋಗಿ ಕಿರಿಕಿರಿ ಅನುಭವಿಸಬೇಕಾಗುತ್ತದೆ’ ಸಲಹೆಯನ್ನೂ ಎಚ್ಚರಿಕೆಯನ್ನೂ ಬಹಳ ಜಾಣ್ಮೆಯಿಂದ ಬೆರೆಸಿ ಮಾತನಾಡಿದ್ದು ನೂರುಲ್ಲಾನಿಗೆ  ಗೊತ್ತಾಯಿತು ಅಂತ ಕಾಣುತ್ತದೆ-
`ಓಹೋ ಕರೆದುಕೊಂಡು ಹೋಗಲಿ. ಬಿಟ್ಟಿ ಕೆಲಸದವಳು ಸಿಕ್ಕಿದಳು ಅಂತ ಇಟ್ಟುಕೊಂಡದ್ದಲ್ಲ’ ಎಂದ.
ಪುಕ್ಕಟೆಯಾಗಿ ಸಿಕ್ಕಿದ ಕೆಲಸದವಳನ್ನು ಕಳೆದುಕೊಳ್ಳುವ ನೋವು ನೂರುಲ್ಲಾನ ಮಾತಿನಲ್ಲಿ ಅವಿತಿದೆಯೋ ಎಂದು ಮನಮೋಹನ ಹುಡುಕಿದ. ಅನುಮಾನ ಪಟ್ಟಂತೆಲ್ಲ ಅದು ದೃಢವಾಗುತ್ತಾ ಹೋಗುವುದು ಅನುಮಾನಿಸುವವನ ಮನಸ್ಥಿತಿಯಲ್ಲಿರುವ ದೋಷವೇ ಆಗಿರುತ್ತದೆಂದು ಯಾರೋ ಹೇಳಿದ್ದು ನೆನಪಾಗಿ ಆಲೋಚನೆಗಳನ್ನು ಬೇರೆಡೆ ತಿರುಗಿಸಲು ಯತ್ನಿಸಿದ, ಆ ಯತ್ನದಲ್ಲಿ ಸೋತ.
`ಸರಿ, ಆ ಮನುಷ್ಯ ನಾಳೆ ಬರುತ್ತಾನೆ. ಸಾಧ್ಯವಾದರೆ ನಾನೂ ಬರುವೆ...ಹುಡುಗೀನ್ನ ಕಳುಹಿಸಿಕೊಡು. ಅವರು ಏನಾದರೂ ಮಾಡಿಕೊಳ್ಳಲಿ’ ಎಂದಾಗ ನೂರುಲ್ಲಾ ಮರುಮಾತನಾಡಲಿಲ್ಲ. ಮಾತನಾಡದಿರುವಾಗ ನೂರುಲ್ಲಾ ಏನು ಯೋಚಿಸುತ್ತಿರಬಹುದು? ನನ್ನ  ಕಾಳಜಿಯನ್ನು ಅನುಮಾನಿಸುತ್ತಿರಬಹುದೇ? ಮಾತುಕತೆ ಮುಗಿದರೂ ಪ್ರವಾಹದಂತೆ ನುಗ್ಗಿ ಬರುವ ಯೋಚನೆಗಳು ನಿಲ್ಲಲಿಲ್ಲ. ಯಾರದೋ ಮಗಳನ್ನು ಹುಡುಕಲು ನಾನೇಕೆ ಇಷ್ಟು ಕಾಳಜಿವಹಿಸುತ್ತಿದ್ದೇನೆ? ಆ ಹುಡುಗಿಯನ್ನು ನೂರುಲ್ಲಾ ಮನೆಯಲ್ಲಿಟ್ಟುಕೊಂಡದ್ದು ಕರುಣೆಯಿಂದಲೋ ಮನೆಗೆಲಸಕ್ಕೆ ನೆರವಾಗಲಿ ಎಂದೋ? ಆಕೆಗೆ ಹದಿನೇಳು ವರ್ಷವಾಗಿರುವುದಕ್ಕೂ ಮನೆಬಿಟ್ಟು ಹೋಗಿರುವುಕ್ಕೂ ಸಂಬಂಧವಿದೆಯೇ? ಮಲತಂದೆಗೂ ಮಲಮಗಳಿಗೂ ಎಂತಹ ಸಂಬಂಧವಿರಬಹುದು? ಈ ಹುಡುಗಿಯ ಕತೆಹೇಳಿ ಆಕೆಯನ್ನು ಕರೆತರಲು ಹೋಗುವುದಾಗಿ ಹೇಳಿದಾಗ ಹೆಂಡತಿ ಎಂದಿಲ್ಲದ ಖುಷಿಯಲ್ಲಿ ಒಪ್ಪಿ ಪ್ರೋತ್ಸಾಹ ನೀಡಿದ್ದೇಕೆ? ಆಕೆಗೂ ಮನೆಗೆಲಸಕ್ಕೆ ಬಿಟ್ಟಿಯಾಗೊಬ್ಬಳು ಸಿಗಬಹುದೆಂಬ ನಿರೀಕ್ಷೆಯಿದೆÀಯೇ?
ಟ್ರೇನಿನಂತೆ ನುಗ್ಗಿ ಬರುತ್ತಿದ್ದ ಅನುಮಾನಗಳಿಗೆ ಬ್ರೇಕು ಇರಲಿಲ್ಲ.
                                 ***********
   ಆ ಹುಡುಗಿ ಟ್ರೇನಿನಲ್ಲಿ ಕುಳಿತುಕೊಳ್ಳುವಾಗಲೂ ಮನಮೋಹನ ಆಕೆಯನ್ನು ಗಮನಿಸುತ್ತಿದ್ದ. ತಮ್ಮನ ಪಕ್ಕದಲ್ಲಿ ಕುಳಿತುಕೊಳ್ಳುತ್ತಾಳೋ ಅಥವಾ ಮಲತಂದೆಯೊಂದಿಗೋ? ಮನಮೋಹನನ ಊಹೆಗೆ ವ್ಯತಿರಿಕ್ತವಾಗಿ ಆಕೆ ತಮ್ಮನೊಂದಿಗೆ ಕುಳಿತುಕೊಂಡಳು. ತಮ್ಮನಿಗೋ ವಿಪರೀತ ಖುಷಿ. ತನ್ನ ಹುಟ್ಟುಹಬ್ಬಕ್ಕೆ ಬಾರದಿರುವುದಕ್ಕೆ ಆಕ್ಷೇಪಿಸಿ ಅಕ್ಕನೊಡನೆ ಸಿಟ್ಟುಮಾಡಿಕೊಂಡಂತೆ ತೋರಿದರೂ ಆಕೆಯ ಕೈ ಬಿಟ್ಟಿರಲಿಲ್ಲ ಗೋಪಾಲರಾಜು. ಮನಮೋಹನ ಯಥಾಪ್ರಕಾರ ಎಲ್ಲವನ್ನೂ ಅನುಮಾನದಿಂದ ಅಗೆದು ಬಗೆದು ನೋಡುತ್ತಿದ್ದ. `ಈ ಹುಡುಗಿಗೂ ಅವಳ ಮಲತಂದೆಗೂ ಸಂಬಂಧವಿದೆಯಂತೆ’ ಎಂದು ಕಾರವಾರ ರೈಲು ನಿಲ್ದಾಣದಲ್ಲಿ ನೂರುಲ್ಲಾ ಹೇಳಿದಮೇಲಂತೂ ಮನಮೋಹನನ ಅನುಮಾನ ವಿಪರೀತವಾಗಿತ್ತು. `ಈ ಹುಡುಗಿಯ ತಾಯಿ ವಿಷಯ ಗೊತ್ತಾಗಿ ಮಗಳನ್ನೇ ಹೊರಹಾಕಿದ್ದಳಂತೆ..ಅವಳಾಗೇ ಮನೆಬಿಟ್ಟು ಬಂದದ್ದಲ್ವಂತೆ. ಈ ಬಾರಿ ಮಾತ್ರ..ತಾಯಿ ಸತ್ತ ಮೇಲೆ ಅವಳಾಗೇ ಮನೆಬಿಟ್ಟು ಬಂದದ್ದಂತೆ’ ಎಂದ ನೂರುಲ್ಲಾನ ಮಾತುಗಳು ಮನಮೋಹನಿಂದ ಪರೀಕ್ಷೆಗೊಳಗಾಗುತ್ತಿದ್ದವು. ಮಲತಂದೆಯೊಂದಿಗೆ ಆಕೆ ಮಾತನಾಡುತ್ತಿದ್ದ ರೀತಿ, ಕುಳಿತ ಭಂಗಿ ಎಲ್ಲವನ್ನೂ ಪರೀಕ್ಷಿಸಿ ನೂರುಲ್ಲಾನ ಮಾತು ಸುಳ್ಳಾಗಿರಬಹುದು ಎಂದುಕೊಂಡ. ಸಂಬಂಧ ಇದ್ದಿದ್ದರೆ ಏಕೆ ಮನೆಬಿಟ್ಟುಹೋಗುತ್ತಿದ್ದಳು? ಇಷ್ಟು ಸರಳ ತರ್ಕ ನೂರುಲ್ಲಾನ ತಲೆಗೆ ಯಾಕೆ ಹೊಳೆಯುವುದಿಲ್ಲ ಎಂಬ ಯೋಚನೆ ಬರುವಾಗಲೇ ಇಂತಹ ವಿಷಯದಲ್ಲಿ ತರ್ಕ ಕೈಕೊಡುವುದೇ ಹೆಚ್ಚು ಎಂದೂ ಅನ್ನಿಸತೊಡಗಿತು. ಈ ಹುಡುಗಿ ನೂರುಲ್ಲಾನ ಮನೆಯಲ್ಲಿದ್ದರೆ ಕ್ಷೇಮವಿತ್ತೋ ಗೋಪಾಲರಾಜುವಿನ ಅಕ್ಕನಾಗಿರುವುದೇ ಕ್ಷೇಮವೋ ಎಂಬುದು ಮನಮೋಹನಿಗೆ ಜಿಜ್ಞಾಸೆಯಾಗಿ ಕಾಡುತ್ತಿರುವಾಗಲೇ ಕುಮಟಾ ಸ್ಟೇಷನ್ನು ಬಂದು, ಕನಿಷ್ಠ ಈ ಸಮಸ್ಯೆಯಿಂದ ಭೌತಿಕವಾದರೂ ಬೇರ್ಪಡಬಹುದಲ್ಲ ಎಂದು ಖುಷಿಯಾಯ್ತು. ಟ್ರೇನಿನಲ್ಲಿ ಸಿಕ್ಕಿಕೊಂಡ ಸಮಸ್ಯೆಗೆ ಟ್ರೇನಿನಲ್ಲೇ ಪರಿಹಾರವೂ ಸಿಕ್ಕಿತೆಂದುಕೊಂಡು ಮನಮೋಹನ ಇಳಿಯಲಣಿಯಾದ. ಗೋಪಾಲರಾಜುವಿಗೂ, ಅವನಪ್ಪನಿಗೂ ಮತ್ತು ಆ ಹುಡುಗಿಗೂ ವಿಧಾಯಹೇಳಿ ಟ್ರೇನಿಳಿದು ಬೈಕ್ ಸ್ಟಾಂಡಿನತ್ತ ನಡೆದ. ಸೆಲ್ಪ್ ಸ್ಟಾರ್ಟಾಗುವ ಬೈಕುಗಳು ಬಂದಮೇಲೆ ಚಪ್ಪಲಿಗಳ ಆಯುಷ್ಯ ಹೆಚ್ಚಿದೆಯೆಂದು ಅಂದುಕೊಳ್ಳುತ್ತಾ ಕಿಸೆಯಿಂದ ಕೀಲಿಕೈಯನ್ನು ತೆಗೆಯುತ್ತಿರುವಾಗ ಯಾರೋ ಹಿಂಬಾಲಿಸಿ ಬಂದಂತೆ ಅನ್ನಿಸಿ ತಿರುಗಿದ. ಆ ಹುಡುಗಿ ಎದುಸಿರು ಬಿಡುತ್ತಾ ನಿಂತಿದ್ದಳು.
`ಅವನು ಸರಿ ಇಲ್ಲ. ನಾನು ಅವನೊಡನೆ ಹೋಗುವುದಿಲ್ಲ’ ಎಂದಳು.
    ಮನಮೋಹನ ಟ್ರೇನಿನ ಕಡೆ ನೋಡಿದ, ಟ್ರೇನು ನಿಧಾನವಾಗಿ ವೇಗ ಹೆಚ್ಚಿಸಿಕೊಳ್ಳುತ್ತಾ ಹೊರಟಾಗಿತ್ತು. ಏನೋ ಹೊಳೆದಂತಾಗಿ ಹೆಂಡತಿಗೆ ಫೋನ್ ಮಾಡಿ ವಿಷಯ ತಿಳಿಸಿದ- ಆಕೆಯನ್ನು ಕರೆತಂದರೆ ತಾನು ಮನೆಬಿಟ್ಟುಹೋಗುವುದಾಗಿ ಹೆಂಡತಿ ಹೇಳಿದ್ದು ಕೇಳಿ ಮತ್ತಷ್ಟು ಗಾಬರಿಗೊಂಡ. ಏನೂ ತೋಚದೇ ದೂರದಲ್ಲಿ ಸಾಗುತ್ತಿದ್ದ ಟ್ರೇನನ್ನು ಮತ್ತೆ ನೋಡತೊಡಗಿದÀ. ಬಿಲದೊಳಗೆ ಇಲಿ ಸೇರುವಂತೆ ಟ್ರೇನು ದೂರದ ಗುಡ್ಡದಲ್ಲಿ ನುಸುಳಿ ಮರೆಯಾಯಿತು. ಕಂಬದ ಕೆಂಪು, ಹಸಿರು ದೀಪಗಳು, ರೇಲ್ವೆ ಸಿಬ್ಬಂದಿ ತೋರುವ ನಿಶಾನೆಯ ಬಾವುಟಗಳು ಈ ಬ್ರಹತ್ ಟ್ರೇನನ್ನು ನಿಜವಾಗಿಯೂ ನಿಯಂತ್ರಿಸುತ್ತವೋ ಅಥವಾ ಇವೆಲ್ಲ ಎಷ್ಟೋ ವರ್ಷಗಳಿಂದ ನಡೆದುಕೊಂಡು ಬಂದ ಅರ್ಥವಿಲ್ಲದ ಆಚರಣೆಗಳೋ ಎಂಬ ಅನುಮಾನ ಈ ಸಮಯದಲ್ಲಿ ಬಂದದ್ದಕ್ಕೆ ಮನಮೋಹನ ಸಂಕೋಚಪಡುತ್ತಿರುವಾಗಲೇ ಆ ಹುಡುಗಿ ಯಾವುದೋ ನಿರ್ಧಾರಕ್ಕೆ ಬಂದವಳಂತೆ-
`ಕಾರವಾರದ ಕಡೆ ಟ್ರೇನು ಎಷ್ಟೊತ್ತಿಗೆ’ ಎಂದು ಕೇಳಿದಳು.
                                          ***************