Showing posts with label Write up. Show all posts
Showing posts with label Write up. Show all posts

Tuesday, 23 February 2016

ಶಿಕ್ಷಣ ಮತ್ತು ಪ್ರಶ್ನೆಗಳ ಸಾಹಸ




23/2/2016

ಹೇರಿಕೆಯ ಶಿಕ್ಷಣವು ಭಿನ್ನಾಭಿಪ್ರಾಯ ಗೌರವಿಸುವ ವ್ಯಕ್ತಿತ್ವವನ್ನು ರೂಪಿಸದು


ತಮ್ಮ  ಅಭಿಪ್ರಾಯಕ್ಕಿಂತ ಭಿನ್ನವಾದ ನಿಲುವು ಹೊಂದಿರುವವರ ಕುರಿತು ನಮ್ಮ ಯುವಜನ ತಳೆದಿರುವ ಮನೋಭಾವ ನಿಜಕ್ಕೂ ದಿಗಿಲು ಹುಟ್ಟಿಸುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ನಡೆಯುವ ಕೆಸರೆರಚಾಟಗಳು ನಮ್ಮ ಸಮಾಜದ ದೃಷ್ಟಿಕೋನವನ್ನು ಮಾತ್ರ ಪ್ರತಿಬಿಂಬಿಸುವುದಿಲ್ಲ, ಅವು ನಮ್ಮ ಶಿಕ್ಷಣ ವ್ಯವಸ್ಥೆಯ ಮೌಲ್ಯಮಾಪನವನ್ನೂ ಮಾಡುತ್ತಿವೆ.
ಸಮಾಜದ ಒಪ್ಪಿತ ಅಭಿಪ್ರಾಯಗಳು ಮತ್ತು ಮೌಲ್ಯಗಳನ್ನು ಪ್ರಶ್ನಿಸುವುದು, ಅವುಗಳ ಇನ್ನೊಂದು ಬದಿಯನ್ನು ಶೋಧಿಸುವುದು ಕಲಿಕೆಯ ಪ್ರಮುಖ ವಿಧಾನವಾಗುವವರೆಗೂ ಪ್ರಜಾಪ್ರಭುತ್ವದ ಮೌಲ್ಯಗಳನ್ನು ವಿದ್ಯಾರ್ಥಿಗಳಲ್ಲಿ ರೂಪಿಸುವುದು ಕಷ್ಟಕರ. ಇದ್ದುದನ್ನು ಇದ್ದಹಾಗೆಯೇ ಒಪ್ಪಿಸುವ ಶಿಕ್ಷಣದಿಂದ ಬದಲಾವಣೆಯನ್ನು ನಿರೀಕ್ಷಿಸಲು ಸಾಧ್ಯವಿಲ್ಲ.
ಸಾಮಾಜಿಕ ಬದಲಾವಣೆಯನ್ನು ತರಲು ಶಿಕ್ಷಣದ ಪಠ್ಯ ಮತ್ತು ವಿಧಾನಗಳನ್ನು ಶೋಷಿತರ ದೃಷ್ಟಿಯಿಂದ ನಿರೂಪಿಸುವುದು ಅತ್ಯಂತ ಅಗತ್ಯ ಎಂದು ಭಾವಿಸಿದ ಫೌಲೋ ಫ್ರಯರಿ, ಶಿಕ್ಷಣದ ತತ್ವಶಾಸ್ತ್ರವನ್ನು ಸಾಮಾಜಿಕ ಚಳವಳಿಯೊಂದಿಗೆ ಬೆಸೆದು ವಿಮರ್ಶೆಯ ಶಿಕ್ಷಣ ಸಿದ್ಧಾಂತವನ್ನು (Critical Pedagogy) ಮಂಡಿಸಿದರು. ಫ್ರಯರಿಯವರ ನಂತರದ ಅನೇಕ ಶಿಕ್ಷಣ ಶಾಸ್ತ್ರಜ್ಞರು ವಿಮರ್ಶಾತ್ಮಕ ಶಿಕ್ಷಣ ಶಾಸ್ತ್ರವನ್ನು ಇನ್ನಷ್ಟು ಸೈದ್ಧಾಂತಿಕ ಸ್ಪಷ್ಟತೆಯೊಂದಿಗೆ ಮರು ನಿರೂಪಿಸಿದರು. 2005ರ ರಾಷ್ಟ್ರೀಯ ಪಠ್ಯಕ್ರಮ ನೆಲೆಗಟ್ಟು ವಿಮರ್ಶಾತ್ಮಕ ಶಿಕ್ಷಣ ಶಾಸ್ತ್ರವನ್ನು ಶಾಲಾ ಶಿಕ್ಷಣದಲ್ಲಿ ಅಳವಡಿಸಲು ಸಲಹೆ ನೀಡಿದೆ.
‘ಒಂದು ತಲೆಮಾರಿನ ಯೋಚನಾ ವಿಧಾನವನ್ನು ಪ್ರಭಾವಿಸಿದ ಎಲ್ಲ ಸಂಗತಿಗಳನ್ನೂ ಅನುಮಾನಿಸುವ ಶಿಕ್ಷಿತ ಅಪನಂಬಿಕೆಯನ್ನು ಪೋಷಿಸುವ ಮೂಲಕವೇ ಸಾಮಾಜಿಕ ಅಸಮಾನತೆಗಳಿಗೆ ಮದ್ದು ಹುಡುಕಲು ಸಾಧ್ಯ’ ಎಂದು ಹೆನ್ರಿ ಗಿರೋಕ್ಸ್ ಅಭಿಪ್ರಾಯಪಡುತ್ತಾರೆ. ಸಾಮಾಜಿಕ ಬದಲಾವಣೆಗೆ ಕಾರಣವಾಗಬೇಕಿದ್ದ ಶಿಕ್ಷಣವು ಇಂದು ಇದ್ದುದನ್ನು ಇದ್ದಂತೆಯೇ ಉಳಿಸಿಕೊಳ್ಳುವ ಸಂಪ್ರದಾಯಶರಣರ ಹುನ್ನಾರಗಳಿಗೆ ಬಲಿಯಾಗುತ್ತಿರುವ ಹಿನ್ನೆಲೆಯಲ್ಲಿ, ಗಿರೋಕ್ಸ್‌ರ ಅಭಿಪ್ರಾಯವನ್ನು ವಿಶ್ಲೇಷಿಸಬೇಕಿದೆ.
ಸಾಮಾಜಿಕ ಸ್ಥಗಿತತೆಗೆ ಶಿಕ್ಷಣವೂ ಕಾರಣವಾಗುತ್ತಿದೆ. ಪ್ರತಿ ಮಗುವೂ ಮನೆಯಿಂದ, ಆಟದ ಮೈದಾನದಿಂದ ಮತ್ತು ತನ್ನ ಪರಿಸರದಿಂದ ಮೈಗೂಡಿಸಿಕೊಂಡು ತಂದ ಅನುಭವಗಳು ಮತ್ತು ಉತ್ತಮ ಉಪಕ್ರಮಗಳನ್ನು ತರಗತಿಯು ಗೌರವದಿಂದ ಕಾಣುವಂತಾಗಬೇಕು. ಬೇರೆ ಯಾರದೋ ಅನುಭವಗಳ ಆಧಾರದ ಮೇಲೆ ಪರಿಹಾರಗಳನ್ನು ಹುಡುಕುವ ಬದಲು ತನ್ನದೇ ಅನುಭವಗಳನ್ನು ನಂಬುವ ಆತ್ಮವಿಶ್ವಾಸವನ್ನು ಆ ಮಗುವಿನಲ್ಲಿ ಬೆಳೆಸಬೇಕು. ಇರುವುದನ್ನು ಹಾಗೆಯೇ ಒಪ್ಪಿಕೊಳ್ಳುವುದನ್ನು ಕಲಿಸುವ ಬದಲು ಭಿನ್ನವಾಗಿ ಯೋಚಿಸುವ, ಪ್ರತಿಕ್ರಿಯಿಸುವ ಶಕ್ತಿಯನ್ನು ಒದಗಿಸಬೇಕು.
ಭಿನ್ನಾಭಿಪ್ರಾಯಗಳನ್ನು ಸಹಿಸುವ, ಸ್ವೀಕರಿಸುವ ಮತ್ತು ತಮಗಿಂತ ಭಿನ್ನವಾದ ಅಭಿಪ್ರಾಯಗಳನ್ನು ಹೊಂದಿರುವವರನ್ನು ಗೌರವದಿಂದ ಕಾಣುವ ವ್ಯಕ್ತಿತ್ವವನ್ನು ರೂಪಿಸಲು ಹೇರಿಕೆಯ ಶಿಕ್ಷಣದಿಂದ ಸಾಧ್ಯವಿಲ್ಲ. ವಿಮರ್ಶಾತ್ಮಕ ಶಿಕ್ಷಣ ಶಾಸ್ತ್ರವನ್ನು ಅರ್ಥ ಮಾಡಿಕೊಳ್ಳಲು ಒಂದು ಉದಾಹರಣೆ ತೆಗೆದುಕೊಳ್ಳೋಣ. ಸೈನ್ಯವನ್ನು ಸೇರಿ ದೇಶಕ್ಕಾಗಿ ದುಡಿಯುವುದನ್ನು ಸಮಾಜ ಅತ್ಯಂತ ಆದರ್ಶದ ವೃತ್ತಿಯನ್ನಾಗಿ ಸ್ವೀಕರಿಸುತ್ತದೆ. ಯುದ್ಧಭೂಮಿಯಲ್ಲಿ ಮಡಿದರೆ ವೀರಸ್ವರ್ಗ ಎಂಬ ನಂಬಿಕೆಯನ್ನು ತಲೆಮಾರಿನಿಂದ ತಲೆಮಾರಿಗೆ ದಾಟಿಸುತ್ತಲೇ ಇದ್ದೇವೆ.
ನಮ್ಮ ಶಿಕ್ಷಣ ವ್ಯವಸ್ಥೆ, ಅಲ್ಲಿನ ಪಠ್ಯಗಳು ಈ ನಂಬಿಕೆಯನ್ನು ದೃಢಗೊಳಿಸುತ್ತವೆ. ದೇಶದ ಒಳಿತಿಗಾಗಿ ಹೀಗೆ ನಂಬಿಸುವುದು ಅಗತ್ಯ ಎಂದು ನಮ್ಮ ಶಿಕ್ಷಣ ವ್ಯವಸ್ಥೆ ಅಭಿಪ್ರಾಯಪಡುತ್ತದೆ. ಸೈನ್ಯ ಸೇರುವುದು ಅತ್ಯುನ್ನತ ನಾಗರಿಕ ಜವಾಬ್ದಾರಿ ಎಂಬ ಮೌಲ್ಯವನ್ನು ನಮ್ಮ ಸಾಂಪ್ರದಾಯಿಕ ಶಿಕ್ಷಣ ಪದ್ಧತಿಯಲ್ಲಿ ಕಲಿಕಾರ್ಥಿಯು ಪ್ರಶ್ನಿಸಲಾರ. ಆದರೆ ವಿಮರ್ಶೆಯ ಶಿಕ್ಷಣದಲ್ಲಿ ಅತ್ಯುಚ್ಚ ಮೌಲ್ಯಗಳೆಂದು ಪರಿಗಣಿತವಾದವೂ ವಿಮರ್ಶೆಗೆ ಒಳಪಡುತ್ತವೆ.
ಒಬ್ಬ ಚಾಲಕ ಅಥವಾ ಪೌರ ಕಾರ್ಮಿಕನ ಕೆಲಸವು ಸೈನಿಕನ ಅಥವಾ ವೈದ್ಯನ ಕೆಲಸಕ್ಕಿಂತ ಹೇಗೆ ಕಡೆಯಾಗುತ್ತದೆ? ಅವರೂ ನಮಗಾಗಿ ಕೆಲಸ ಮಾಡುತ್ತಿಲ್ಲವೇ?  ಗಡಿಗಳ ಒಳಗಿರುವ ಸಹಮಾನವರನ್ನು, ಚರಾಚರ ಜೀವಿಗಳನ್ನು, ನೆಲ-ನುಡಿ-ಸಂಸ್ಕೃತಿಗಳನ್ನು ಪ್ರೀತಿಸುವುದು, ಗೌರವಿಸುವುದು ಮತ್ತು ರಕ್ಷಿಸುವುದು ರಾಷ್ಟ್ರ ಪ್ರೇಮವಲ್ಲವೇ?
ಸೈನ್ಯ ಸೇರುವುದನ್ನು ಪ್ರೋತ್ಸಾಹಿಸುವ ಮೌಲ್ಯಗಳಲ್ಲಿ ಜನಸಾಮಾನ್ಯರ ಹಿತವು ಅಡಗಿದೆಯೇ ಅಥವಾ ಆಳುವವರ ಹಿತ ಕಾಪಾಡುವ ಉದ್ದೇಶವಷ್ಟೆ ಇದೆಯೇ? ಇಂತಹ ಎಷ್ಟೋ ಪ್ರಶ್ನೆಗಳು ವಿಮರ್ಶೆಯ ಕಲಿಕಾರ್ಥಿಗೆ ಬರಲು ಸಾಧ್ಯವಿದೆ. ಅಂತಹ ಪ್ರಶ್ನೆಗಳು ತಂತಾನೇ ಬರಲಾರವು. ಅಂತಹ ಪ್ರಶ್ನೆಗಳು ರೂಪುಗೊಳ್ಳಲು ಪೂರಕವಾದ ಪ್ರಜಾಪ್ರಭುತ್ವದ ತಳಹದಿಯ ಕಲಿಕೆಯ ಪರಿಸರವನ್ನು ಶಿಕ್ಷಕರು ಸೃಷ್ಟಿಸಬೇಕಾಗುತ್ತದೆ. ಕಲಿಕೆಯೆಂದರೆ ಭಾಷಣ, ಬಾಯಿಪಾಠ, ಪುನರಾವರ್ತನೆ ಎಂದು ಭಾವಿಸಿರುವ ಸಮಾಜದಲ್ಲಿ ಇದು ಖಂಡಿತವಾಗಿಯೂ ಸವಾಲು.
ಪ್ರಶ್ನಿಸುವುದರಿಂದ ಸಮಾಜಕ್ಕೆ ಕೆಟ್ಟದಾಗುತ್ತದೆಯೇ? ಖಂಡಿತ ಇಲ್ಲ. ತಮಗೆ ಕೆಟ್ಟದಾಗುವುದನ್ನು ಯಾರೂ ಆಯ್ಕೆ ಮಾಡಿಕೊಳ್ಳಲಾರರು. ಎಲ್ಲವೂ ಪ್ರಶ್ನೆಗಳಿಂದ ಬದಲಾಗಬಲ್ಲವೇ? ಸಾಧ್ಯವಿಲ್ಲ. ಯಾವುದೇ ಸಂಗತಿಯು ಆಳುವ ವರ್ಗದ, ಸಾಮಾಜಿಕವಾಗಿ ಮೇಲಂತಸ್ತಿನಲ್ಲಿರುವವರ ಮತ್ತು ಗಂಡಸಿನ ಪ್ರಾಬಲ್ಯವನ್ನು ರಕ್ಷಿಸುವ ಉದ್ದೇಶವನ್ನು ಹೊಂದಿದ್ದರೆ ಪ್ರಶ್ನೆಗೊಳಗಾಗುತ್ತದೆ. ಏಕೆಂದರೆ, ಪ್ರಶ್ನೆಗಳು ಸಮಾನತೆಯ ಕಡೆ ಮತ್ತು ಬಿಡುಗಡೆಯ ಕಡೆ ಮುಖ ಮಾಡಿರುತ್ತವೆ.
ದಕ್ಷಿಣ ಆಫ್ರಿಕಾದಲ್ಲಿ ರಾಜಕೀಯ ಪ್ರತ್ಯೇಕತೆ ಇದ್ದ ಕಾಲಘಟ್ಟದಲ್ಲಿ ವಿಮರ್ಶೆಯ ಶಿಕ್ಷಣದಲ್ಲಿ ನಂಬಿಕೆಯಿಟ್ಟ ಒಂದು ಗುಂಪಿನ ಶಿಕ್ಷಕರು ಧಾರ್ಮಿಕ, ರಾಜಕೀಯ, ಮಿಲಿಟರಿ ವಿದ್ಯಮಾನಗಳಿಗೆ ಸಂಬಂಧಿಸಿದ ಸಂಗತಿಗಳನ್ನು ಸ್ನೇಹ, ಮಾನವೀಯತೆ, ಪ್ರಜಾಪ್ರಭುತ್ವದ ಮೌಲ್ಯಗಳೊಡನೆ ಮುಖಾಮುಖಿಯಾಗಿಸಿದರು. ಈ ಮೂಲಕ, ಕೇಪ್‌ಟೌನಿನ ಶಾಲೆಗಳು ಮತ್ತು ಜೈಲುಗಳಲ್ಲಿರುವ ಮಕ್ಕಳಲ್ಲಿ ಪ್ರಶ್ನೆಗಳು ಹುಟ್ಟುವಂತಹ ಕಲಿಕೆಯ ವಾತಾವರಣ ಸೃಷ್ಟಿಸಿದರು. ಈ ಪ್ರಯತ್ನಗಳಿಂದಾಗಿಯೇ ಅಲ್ಲಿ ವರ್ಣಭೇದ ನೀತಿಯನ್ನು ವಿರೋಧಿಸುವ ವಿದ್ಯಾರ್ಥಿ ಚಳವಳಿಯೊಂದು ರೂಪುಗೊಳ್ಳಲು ಸಾಧ್ಯವಾಯಿತು.
ತಾನಿರುವ ಸಾಮಾಜಿಕ ಸಂದರ್ಭದೊಡನೆ ತನ್ನ ಖಾಸಗಿ ಸಮಸ್ಯೆಗಳಿಗಿರುವ ಸಂಬಂಧವನ್ನು ಗುರುತಿಸಲು ವಿಮರ್ಶೆಯ ಶಿಕ್ಷಣವು ಸಹಾಯ ಮಾಡುತ್ತದೆ. ಸಾಮಾಜಿಕ ವಿಜ್ಞಾನದ ವಿಷಯದಲ್ಲಷ್ಟೇ ಅಲ್ಲ ಕಲಾ ವಿಷಯಗಳಲ್ಲೂ ಪ್ರಶ್ನೆಗೆ ಸ್ಥಾನವಿದೆ. ವಿಜ್ಞಾನವಂತೂ ಪ್ರಶ್ನೆಗಳಿಂದಲೇ ಬೆಳೆಯುವ ಪ್ರಶ್ನೋಪನಿಷತ್ತು! ಶಿಕ್ಷಣವೆಂದರೆ ಸಿದ್ಧಜ್ಞಾನವನ್ನು ಮೈಗೂಡಿಸಿಕೊಳ್ಳುವುದಲ್ಲ; ನಮ್ಮದೇ ಜ್ಞಾನವನ್ನು ಕಟ್ಟಿಕೊಳ್ಳುವುದು.
ಹೊಸದನ್ನು ಕಲಿಯುವುದು ಎಷ್ಟು ಮುಖ್ಯವೋ ಈಗಾಗಲೇ ಕಲಿತಿರುವುದು ಅಪ್ರಸ್ತುತವೆಂದೆಣಿಸಿದಾಗ ಅದನ್ನು ಬಿಟ್ಟುಕೊಡುವುದು ಕೂಡ ಅಷ್ಟೇ ಮುಖ್ಯ. ಶಿಕ್ಷಣವು ಕಲಿಕೆ, ಮರುಕಲಿಕೆ, ಪ್ರತಿಫಲನ ಮತ್ತು ಮೌಲ್ಯಮಾಪನ ಹಂತಗಳ ಮೂಲಕ ಸಾಗಬೇಕೆಂದರೆ, ಪ್ರಶ್ನಿಸುವ ಸಾಹಸವನ್ನು ನಮ್ಮ ವಿದ್ಯಾರ್ಥಿಗಳು ಮೈಗೂಡಿಸಿಕೊಳ್ಳಬೇಕಾಗುತ್ತದೆ. ಪ್ರಶ್ನಿಸುವ, ಅನುಮಾನಿಸುವ, ಭಿನ್ನ ಯೋಚನೆ ಹೊಂದಿರುವ ವಿದ್ಯಾರ್ಥಿಯನ್ನೇ ಸಕ್ರಿಯ ವಿದ್ಯಾರ್ಥಿ ಎಂದು ವಿಮರ್ಶೆಯ ಶಿಕ್ಷಣ ಶಾಸ್ತ್ರವು ಭಾವಿಸುತ್ತದೆ.
______________________________________________________________________________________________
ಪ್ರಜಾವಾಣಿ ಇ ಪತ್ರಿಕೆಯಲ್ಲಿ ಇದೇ ಲೇಖನವನ್ನು ಓದಲು ಕ್ಲಿಕ್ ಮಾಡಿ


Wednesday, 24 June 2015

ಆಟವಾಡುವ ಮನಸ್ಸೇ ಆರೋಗ್ಯವಂತ ಮನಸ್ಸು!






 



* Uday Gaonkar



    ಮಕ್ಕಳಿಗೆ ದೈಹಿಕ ವ್ಯಾಯಾಮ, ಏಕಾಗ್ರತೆ, ಮಾನಸಿಕ ಸ್ಥಿರತೆಯನ್ನು ಒದಗಿಸುವುದಕ್ಕಾಗಿ ಶಾಲೆಗಳಲ್ಲಿ ಯೋಗವನ್ನು ಕಡ್ಡಾಯಗೊಳಿಸಬೇಕೆಂಬ ಒತ್ತಾಯ ಇತ್ತೀಚಿಗೆ ಕೇಳಿಬರುತ್ತಿದೆ. ಆದರೆ, ಯೋಗದ ಎಲ್ಲ ಆರೋಗ್ಯಕರ ಅಂಶಗಳನ್ನೂ ಹೊಂದಿರುವ ಆಟಗಳು ಶಾಲಾಸಮಯದಿಂದ ಹೊರಹೋಗುತ್ತಿವೆÉ. ಆಟವಿಲ್ಲದೆ ಪಾಠವಿಲ್ಲ ಎಂಬಲ್ಲಿಂದ ಆಟದ ಬದಲು ಬರೀ ಪಾಠ ಎಂಬಲ್ಲಿಗೆ ಶಾಲೆಗಳು ಬಂದು ನಿಂತಿವೆ.
   ದೈಹಿಕ ಶಿಕ್ಷಣವು ಪಠ್ಯವಿಷಯವಾಗಿ ಮೌಲ್ಯಮಾಪನಗೊಳ್ಳಲು ಪ್ರಾರಂಭವಾದ ನಂತರ ದೈಹಿಕ ಶಿಕ್ಷಣದ ಅವಧಿಗಳೂ ತರಗತಿಕೋಣೆಗಳ ಒಳಗೇ ನಡೆಯಲು ಪ್ರಾರಂಭವಾಗಿವೆÉ. ಕೆಲವು ಅವಧಿಗಳನ್ನು ಮೈದಾನದ ಚಟುವಟಿಕೆಗಳಿಗಾಗಿ ಮೀಸಲಿಡುತ್ತಿದ್ದಾರಾದರೂ ಅವು ಪಾಠಸೂಚಿಯಲ್ಲಿ ನಮೂದಾದ ನಿರ್ಧಿಷ್ಟ ನಿಯಮಗಳು, ನಿಬಂಧನೆಗಳ ಮೂಲಕ ವಿನ್ಯಾಸಗೊಳಿಸಿದ ಆಟಗಳ ಶಾಸ್ತ್ರೀಯ ತರಬೇತಿಯಲ್ಲಿ ವ್ಯಯವಾಗುತ್ತವೆ. ಮಕ್ಕಳು ಅವರಷ್ಟಕ್ಕೆ ಆಡುವ ಮುಕ್ತ ಆಟಗಳು ಸಂಪೂರ್ಣ ಮರೆಯಾಗಿಬಿಟ್ಟಿವೆ.
 ಮಕ್ಕಳು ಅಥವಾ ಮಕ್ಕಳ ಗುಂಪು ಸ್ವತಂತ್ರವಾಗಿ ಆರಿಸಿಕೊಳ್ಳುವ, ಸ್ವತಃ ಸಂಘಟಿಸುವ ಮತ್ತು ನಿರ್ದಿಷ್ಟ ರೂಪುರೇಷೆಗಳನ್ನು ಹೊಂದಿರದ ಆಟಗಳನ್ನು ಮುಕ್ತ ಆಟಗಳು ಎನ್ನಬಹುದು. ಇವುಗಳಿಗೆ ನಿಯಮ ನಿಬಂಧನೆಗಳು ಇರುವವಾದರೂ ಮಕ್ಕಳೆ ಅವುಗಳನ್ನು ಮುರಿದುಕಟ್ಟುತ್ತಾ, ಮರುಜೋಡಿಸಿಕೊಳ್ಳುತ್ತಾ ಮತ್ತೆ ಮತ್ತೆ ಮರುನಿರೂಪಣೆಗೆ, ವಿಕಸನಕ್ಕೆ, ಸುಧಾರಣೆಗೆ ಒಡ್ಡಿಕೊಳ್ಳುತ್ತಿರುತ್ತಾರೆ. ಆಡುವ ಸಮಯದ ನಡುವೆ ಬರುವ ಒಡನಾಟದ ಎಲ್ಲ ಗಳಿಗೆಗಳೂ ಮುಕ್ತ ಆಟಗಳ ಅವಿಭಾಜ್ಯ ಅಂಗವಾಗಿರುತ್ತವೆ. ವಾಲಿಬಾಲ್, ಬಾಸ್ಕೆÉಟ್ ಬಾಲ್ ನಂತಹ ಆಟಗಳು ತಮ್ಮ ಕಟ್ಟುನಿಟ್ಟಿನ ನಿಯಮ-ನಿಬಂಧನೆಗಳಿಂದಾಗಿ ಪ್ರತ್ಯೇಕ ಸಮಯ ಮತ್ತು ಸ್ಥಳವನ್ನು ಬೇಡಿದರೆ ಮುಕ್ತ ಆಟಗಳನ್ನು ಯಾವುದೇ ತೆರೆದ ಸ್ಥಳ ಮತ್ತು ತೆರೆದ ಸಮಯದಲ್ಲಿ ಆಡಬಹುದಾಗಿದೆ. ಸ್ಥಳ ಅನುಕೂಲವಾಗಿದೆಯೆಂದರೆ ಕಣ್ಣಮುಚ್ಚಾಲೆ, ಇಲ್ಲವೆಂದಾದರೆ ಬಟ್ಟೆಯ ಉಂಡೆಯನ್ನೇ ಚೆಂಡು ಮಾಡಿ ಆಡುವ ಡಬ್ಬಾ ಡುಬ್ಬಿ ಅದೂ ಸಾಧ್ಯವಿಲ್ಲಾಂದರೆ ಮುಟ್ಟಾಟ ಹೀಗೆ ಆ ಗಳಿಗೆಯಲ್ಲೇ ಮುಕ್ತಆಟಗಳು ನಿಯಮಗಳನ್ನು ಸಡಿಲಿಸಿಕೊಳ್ಳಬಲ್ಲವು.  ಕೆಲವೊಮ್ಮೆ, ಕ್ರಿಕೆಟ್ಟಿನಂತಹ ಸ್ಟ್ರಕ್ಚರ್ಡ್ ಆಟಗಳೂ ಮಕ್ಕಳ ಸೃಜನಶೀಲತೆಯಿಂದಾಗಿ ಹೊಸರೂಪು ಪಡೆದುಬಿಡುತ್ತವೆ. ಹೀಗೆ ಆಟಗಳು ಮಕ್ಕಳ ಕೈಯಲ್ಲಿ ಆಟಿಕೆಗಳಾಗುವ ಹೊತ್ತಿನಲ್ಲೇ ಅವರ ವ್ಯಕ್ತಿತ್ವವನ್ನು ರೂಪಿಸುವ ಒಡನಾಟಗಳು ಉಂಟಾಗುತ್ತವೆ. ಜಗಳ, ಸ್ನೇಹ, ದೋಸ್ತಿ ಕಟ್ ಎಲ್ಲದಕ್ಕೂ ಶೈಕ್ಷಣಿಕ ಮತ್ತು ಮನೋವೈಜ್ಞಾನಿಕ ಮಹತ್ವ ಇದ್ದೇ ಇದೆ. ಬದುಕನ್ನು ಎಲ್ಲ ಬದಿಗಳಿಂದ ಶೋಧಿಸುವ ವಿಮರ್ಶಾತ್ಮಕ ಶಿಕ್ಷಣಶಾಸ್ರ್ತ (ಕ್ರಿಟಿಕಲ್ ಪೆಡಗೊಜಿ) ಇಂತಹ ಆಟದ ಸಮಯದಲ್ಲೇ ತನ್ನ ಉತ್ತುಂಗದಲ್ಲಿರುತ್ತದೆ.
  ಮಕ್ಕಳ ದೈಹಿಕ ಕ್ರೀಯಾಶೀಲತೆಯೆಂಬುದು ಅವರು ಎಷ್ಟು ಸಮಯ ಆಟದಲ್ಲಿ ತೊಡಗಿದ್ದಾರೆಂಬುದನ್ನು ನೇರವಾಗಿ ಅವಲಂಬಿಸಿರುತ್ತದೆ. ದೈಹಿಕ ಕ್ರೀಯಾಶೀಲತೆ ಅವರ ಮಾನಸಿಕ ಆರೋಗ್ಯವನ್ನು ಉತ್ತಮಪಡಿಸುತ್ತದೆ. ಆಟದ ಸಮಯವು ಒತ್ತಡದಿಂದ ಪಾರಾಗುವ ಅತ್ಯಂತ ಆರೋಗ್ಯಕರ ಮತ್ತು ಸಂತಸದ ವಿಧಾನ. ಮುಕ್ತ ಆಟಗಳಲ್ಲಿ ಮಕ್ಕಳು ತಮ್ಮದೇ ನಿರ್ಧಾರವನ್ನು ತಳೆಯಲು ಅವಕಾಶಗಳಿರುತ್ತವೆ, ತಮ್ಮದೇ ಹಾದಿ ತುಳಿಯಲು ಮತ್ತು ತಮ್ಮ ಬಗ್ಗೆ ಖುಷಿಪಡಲು ಕಾರಣಗಳಿರುತ್ತವೆ. ಇವೆಲ್ಲವೂ ಮಕ್ಕಳ ಆತ್ಮಗೌರವವನ್ನು ಹೆಚ್ಚಿಸುತ್ತವೆ. ಸಾಧನೆಯ ಹೆಮ್ಮೆಗೆ ಪದೇ ಪದೇ ಪಾತ್ರರಾಗುವುದರಿಂದ ಬಿಕ್ಕಟ್ಟಿನ ನಡುವೆಯೂ ಗೆಲುವನ್ನು ನಿರೀಕ್ಷಿಸುವ ಆಶಾವಾದ ಚಿಗುರೊಡೆಯುತ್ತದೆ. ಆಡದ ಮಕ್ಕಳಷ್ಟು ಬೇಗ ಆಡುವ ಮಕ್ಕಳು ಕೈಚೆಲ್ಲಿ ನಿಲ್ಲಲಾರರು. ಭ್ಲೆಚ್ಫೋರ್ಡ್ ಮತ್ತು ಸಂಗಡಿಗರು ನಡೆಸಿದ ಅಧ್ಯಯನಗಳ(2003) ಪ್ರಕಾರ ಸಾಮಾಜಿಕವಾಗಿ ಹಿಂದುಳಿದ ಮತ್ತು ದೈಹಿಕ ಸವಾಲುಗಳುಳ್ಳ ಮಕ್ಕಳಿಗೆ ಸಮನ್ವಯದ ಶಿಕ್ಷಣವನ್ನು ಎಲ್ಲರೊಡಗೂಡಿ ನೀಡುವಲ್ಲಿ ಶಿಷ್ಟ ಆಟಗಳು ಸೋಲುತ್ತವೆ. ಆದರೆ, ಮುಕ್ತ ಆಟಗಳು ಯಶಸ್ವಿಯಾಗುತ್ತವೆ. ಹದಿನೈದು ನಿಮಿಷಗಳಷ್ಟು ಮುಕ್ತ ಆಟದಲ್ಲಿ ತೊಡಗಿ ತರಗತಿಗೆ ಮರಳಿದ ಮಕ್ಕಳ ತರಗತಿ ವರ್ತನೆಗಳು ಆಟವಾಡದ ಮಕ್ಕಳ ವರ್ತನೆಗಳಿಗಿಂತ ಉತ್ತಮವಾಗಿರುತ್ತದೆ ಎಂದು ಇನ್ನೊಂದು ಅಧ್ಯಯನ ಹೇಳುತ್ತದೆ.
   ಆಟದ ಸಮಯ ಸಂಪೂರ್ಣವಾಗಿ ಮಕ್ಕಳ ಸಮಯ. ಶಿಕ್ಷಕರ ಅಥವಾ ಪಾಲಕರ ಕಣ್ಗಾವಲಿನಲ್ಲಿ ಈ ಸಮಯವು ವಿನಿಯೋಗಿಸಲ್ಪಟ್ಟರೆ ಅದಕ್ಕೆ ಮೌಲ್ಯವಿರುವುದಿಲ್ಲ. ಫಿನ್‍ಲ್ಯಾಂಡ್ ದೇಶದಲ್ಲಿ ಪ್ರತಿ ನಲವತ್ತೈದು ನಿಮಿಷಗಳ ಅವಧಿಯ ನಂತರವೂ ಹದಿನೈದು ನಿಮಿಷಗಳ ಬ್ರೇಕ್ ನೀಡುತ್ತಾರಂತೆ ಮತ್ತು ಆ ಹದಿನೈದು ನಿಮಿಷಗಳನ್ನು ಶಿಕ್ಷಕರು ತಮ್ಮ ಮುಂದಿನ ಪಾಠದ ಸಿದ್ಧತೆಗೋ, ಚಹಾ ಕುಡಿಯಲೋ, ಸ್ನೇಹಿತರೊಂದಿಗೆ ಹರಟೆ ಹೊಡೆಯಲೋ ಉಪಯೋಗಿದರೆ ಆ ಹದಿನೈದು ನಿಮಿಷಗಳನ್ನು ತಾವು ಹೇಗೆ ಉಪಯೋಗಿಸಬೇಕೆಂದು ಸ್ವತಃ ಮಕ್ಕಳೇ ತೀರ್ಮಾನಿಸುತ್ತಾರಂತೆ.ಇಲ್ಲೆಲ್ಲ ಆಲೋಚನೆಗಳು ಅದಲು ಬದಲಾಗುತ್ತವೆ, ಅಭಿಪ್ರಾಯಗಳು, ಭಿನ್ನಾಭಿಪ್ರಾಯಗಳು ವಿಶ್ಲೇಷಣೆಯ ಮೂಸೆಯಲ್ಲಿ ಬೆಂದು ಹೊರಬರುತ್ತವೆ. ಶಾಲೆಯಲ್ಲಿ ಒಡನಾಟದ ಅವಕಾಶಗಳು ಹೆಚ್ಚುವುದರಿಂದ ಸಾಮಾಜಿಕ ಕೌಶಲಗಳ ಬೆಳವಣಿಗೆಗೂ ಅವಕಾಶ ಹೆಚ್ಚುತ್ತದೆ. ಮಕ್ಕಳು ಶಾಂತಿ, ಸಹಬಾಳ್ವೆ ಮತ್ತು ಜವಬ್ಧಾರಿಯಿಂದ ನಡೆದುಕೊಳ್ಳುವಲ್ಲಿ ಈ ಅಂಶಗಳೆಲ್ಲ ಕೆಲಸಮಾಡುತ್ತಿರುತ್ತವೆ.
  ಇತ್ತೀಚೆಗೆ, ಮಕ್ಕಳ ಮನಶಾಃಸ್ರ್ತವನ್ನು ಅರೆದು ಸಂತಸದ ಕಲಿಕೆ, ಸಹಯೋಗದ ಕಲಿಕೆ, ಸ್ವವೇಗದ ಕಲಿಕೆ, ಸ್ವಕಲಿಕೆ ಎಂತೆಲ್ಲ ಸರಳಗೊಳಿಸಿ ಪ್ರತಿಪಾದಿಸಲಾಗುತ್ತಿದೆ. ಕೇವಲ ಆಟಗಳಷ್ಟೇ ಅಲ್ಲ, ಬೇರೆಲ್ಲ ವಿಷಯಗಳೂ ಆಟವಾಗಬೇಕು ಎಂದು ಶಿಕ್ಷಣ ಸಿದ್ಧಾಂತಗಳು ತಿಳಿಸುತ್ತವೆ. ಪುನರಾವರ್ತನೆ, ಅನುಕರಣೆ, ಆಜ್ಞಾಪಾಲನೆಯಿಂದ ಕಲಿಕೆ ಸಂಭವಿಸುವುದೇ ಇಲ್ಲವೆಂದಾಗಲೀ ಅಂತಹ ಶೈಕ್ಷಣಿಕ ಚಟುವಟಿಕೆಗಳಿಂದ ಅನುಕೂಲ ಇಲ್ಲವೆಂದಾಗಲೀ ಹೇಳಲಾಗದು. ಆದರೆ, ಅಂತಹ ಚಟುವಟಿಕೆಗಳು ಸ್ವಪ್ರೇರಣೆ, ಒಡನಾಟ, ಸಂತಸದ ಕಲಿಕೆಯಿಂದೊಡಗೂಡಿದ ಅನುಭವಗಳಿಗೆ ಬದಲಿಯಾಗಲಾರವು. ಜಿಮ್‍ನಲ್ಲಿರುವ ಸೈಕಲ್ಲನ್ನು ತುಳಿದರೂ ವ್ಯಾಯಾಮ ದೊರೆಯುತ್ತದೆ. ಆದರೆ, ತುಳಿಯುವವನ ದೇಹ ಮತ್ತು ಮನಸ್ಸಿನೊಡನೆ ರಸ್ತೆಯಲ್ಲಿ ಓಡುವ ಬೈಸಿಕಲ್ ನಿರಂತರವಾಗಿ ಪ್ರತಿಸ್ಪಂದಿಸುವಂತೆ, ತನ್ನ ಸುತ್ತಲಿನ ನೆಲ, ನೀರು, ಗಾಳಿಯೊಡನೆ ಸಂವಹಿಸಲು ಅವಕಾಶ ನೀಡುವಂತೆ ಮತ್ತು ಸಣ್ಣ ಸಣ್ಣ ಗುರಿಗಳನ್ನು ಮುಂದಿಡುತ್ತಾ ಸಂತಸದ ಅನುಭವವನ್ನು ಒದಗಿಸುವಂತೆ ಜಿಮ್‍ನ ಸೈಕಲ್ ಕೆಲಸಮಾಡಬಲ್ಲುದೇ?
  ಆಟವಾಡುವ ಸಮಯ ಮಕ್ಕಳಿಗೆ ಸಿಗುತ್ತಲೇ ಇಲ್ಲ. ಇಡೀ ಶಾಲಾ ದಿನವೇ ಪೂರ್ವಯೋಜಿತ ನಿರ್ಧಿಷ್ಟ ಆಕೃತಿಯ ಚಟುವಟಿಕೆಗಳಲ್ಲಿ ಕಳೆದುಹೋಗುತ್ತಿದೆ. ಪಠ್ಯಪುಸ್ತಕಗಳು ಮಾಹಿತಿಯ ಭಾರದಿಂದ ಕುಸಿಯುತ್ತಿರುವುದರಿಂದಾಗಿಯೂ ಮಕ್ಕಳು ಆಟದ ಸಮಯವನ್ನು ಕಳೆದುಕೊಂಡಿರಬಹುದು. ಶಿಸ್ತಿನ ಕುರಿತು ಪಾಲಕರು, ಶಿಕ್ಷಕರು ಮತ್ತು ವ್ಯವಸ್ಥೆ ತಳೆದಿರುವ ನಿಲುವುಗಳೂ ಇದಕ್ಕೆ ಕಾರಣವಾಗಿರಬಹುದು. ಮಕ್ಕಳ ರಕ್ಷಣೆ ಮತ್ತು ಆರೋಗ್ಯದ ಕುರಿತು ಇರುವ ಅತಿಕಾಳಜಿಯೂ ಸ್ವಲ್ಪ ಮಟ್ಟಿಗೆ ಆಟದ ಸಮಯ ಕಡಿತವಾಗಲು ತನ್ನ ದೇಣಿಗೆಯನ್ನು ಸಲ್ಲಿಸಿರಬಹುದು. ಆದರೆ, ಹಿಂದೆ ನಾವೆಲ್ಲ ಆಡಿದಷ್ಟು ಆಟವನ್ನು ಈಗಿನ ಮಕ್ಕಳು ಆಡುತ್ತಿಲ್ಲ ಎಂಬುದು ಸ್ಪಷ್ಟ. ಮೈದಾನಗಳೇ ಇರದ ಶಾಲೆಗಳು ಹುಟ್ಟಿಕೊಳ್ಳುತ್ತಿರುವುದೇ ಇದಕ್ಕೆ ಸಾಕ್ಷಿ. ಬೋರ್ಡು ನೋಡುವವರೆಗೂ ಕಟ್ಟಡವೊಂದನ್ನು ಶಾಲೆಯೋ ಆಸ್ಪತ್ರೆಯೋ ಎಂದು ಗುರುತಿಸಲಾಗದಂತಹ ಪರಿಸ್ಥಿತಿ ಎಲ್ಲ ಕಡೆಯೂ ಇದೆ.
    ಉತ್ತಮ ಆರೋಗ್ಯಕ್ಕಾಗಿ ಮತ್ತು ಸ್ವಸ್ಥ ಸಮಾಜಕ್ಕಾಗಿ, ಮೊದಲು ಶಾಲೆಗಳಲ್ಲಿ ಆಟ ಕಡ್ಡಾಯವಾಗಲಿ!

Sunday, 25 January 2015

ತಲೆಯೆತ್ತಿ ನೋಡೋಣ! ತಲೆಯೆತ್ತಿ ನಡೆಯೋಣ!!

    
ಹೊಸದಿಶೆಯತ್ತ ದಾಪುಗಾಲು ಹಾಕುತ್ತಿರುವಾಧುನಿಕ ಜಗತ್ತನ್ನು ಹಿಂದಕ್ಕೆ ತಳ್ಳುವ ಪ್ರಯತ್ನಗಳು ನಿಮ್ಮ ಗಮನಕ್ಕೂ ಬಂದಿವೆ.
 ಅಂದಶೃದ್ಧೆಗಳನ್ನು ವಿರೋಧಿಸುವ ಬದಲು ಪೋಷಿಸುವ ಪ್ರಯತ್ನಗಳಿಗೆ ಧರ್ಮರಕ್ಷಣೆಯ ಮಹತ್ವ ಪ್ರಾಪ್ತವಾಗುತ್ತಿದೆ. ಮೂಢನಂಬಿಕೆಗಳು ಹಿಂದೆ ಇರಲಿಲ್ಲವೆಂಬುದು ನನ್ನ ವಾದವಲ್ಲ. ಆದರೆ, ಸ್ವಾಮಿ ವಿವೇಕಾನಂದರ ಪ್ರಯತ್ನಗಳನ್ನೇ ಉದಾಹರಿಸಿ ಹೇಳುವುದಾದರೆ- ಮೂಢನಂಬಿಕೆಗಳು ಮತ್ತು ಪೊಳ್ಳು ಆಚರಣೆಗಳನ್ನು ಹೋಗಲಾಡಿಸಿ ಧರ್ಮವನ್ನು ಪುನರುಜ್ಜೀವನಗೊಳಿಸಬಹುದೆಂದು ಅವರು ಭಾವಿಸಿದ್ದರು. ಈಗ, ಪರಿಸ್ಥಿತಿ ಹಾಗಿಲ್ಲ. ಜಾತಿ ಪದ್ಧತಿ ಮತ್ತು ಅಸ್ಪøಶ್ಯತೆಯಂತಹ ಸಾಮಾಜಿಕ ಅನಿಷ್ಟಗಳು, ಪುರೋಹಿತಶಾಹಿ, ಸತಿಪದ್ಧತಿ, ಜ್ಯೋತಿಷ್ಯ ಮತ್ತಿತರ ಜೀವ ವಿರೋಧಿ ನಂಬಿಕೆಗಳನ್ನು ಉಳಿಸಿಕೊಂಡು ಹೋಗುವ ಮೂಲಕವೇ ಧರ್ಮವನ್ನು ರಕ್ಷಿಸಬೇಕೆಂಬ ವಾದ ಬಲಯುತವಾಗುತಿದೆ. ಕಂದಾಚಾರಗಳನ್ನು ಬಯಲಿಗೆ ತಂದು ಅವುಗಳ ವಿರುದ್ಧ ಜನಜಾಗೃತಿಯನ್ನು ನೀವು ಮೂಡಿಸುತ್ತೀರಾದರೆ, ನಿಮಗೆ ಧರ್ಮದ್ರೋಹಿಯೆಂಬ ಪಟ್ಟ ದೊರೆಯುತ್ತದೆ. ಆದುದರಿಂದಲೇ, ಪ್ರಗತಿಪರವಾದ ಸಿನೇಮಾವೊಂದನ್ನು ನಿಷೇಧಿಸಬೇಕೆಂಬ ಒತ್ತಾಯ ಕೇಳಿಬಂತು. ಬೆಳಗ್ಗೆದ್ದರೆ, ಬೇರೆ ಬೇರೆ ಧರ್ಮಕ್ಕೆ ಸಂಬಂಧಿಸಿದ ಗುರುಗಳು ಟಿ.ವಿ ಯ ಮೂಲಕ ನಮ್ಮ ಡ್ರಾಯಿಂಗ್ ರೂಮ್ ಪ್ರವೇಶಿಸಿಸಲು ಯಾವ ಅಡತಡೆಯೂ ಇಲ್ಲವಾಯಿತು. ಇತ್ತೀಚೆಗೆ ತನ್ನನ್ನು ತಾನೇ `ವೈಜ್ಞಾನಿಕ ಜ್ಯೋತಿಷಿ’ ಎಂಬ ವಿಲಕ್ಷಣ ಹೆಸರಿನಿಂದ ಕರೆಯಿಸಿಕೊಳ್ಳುವ ಜ್ಯೋತೀಷಿಯೊಬ್ಬ ರೇಪ್ ಭವಿಷ್ಯವನ್ನು ನುಡಿದಿದ್ದ. ಇಂತಹ ರಾಶಿಯವರು ಇಂತಿಂತ ದಿನ ಅತ್ಯಾಚಾರಕ್ಕೊಳಗಾಗುತ್ತರಂದು ಆತ ತಿಳಿಸಿದ್ದ. ಅತ್ಯಾಚಾರವಾಗುವ ಸ್ಥಳ, ಅತ್ಯಾಚಾರ ಮಾಡುವ ವ್ಯಕ್ತಿಯ ಬಗ್ಗೆಯೂ ಸುಳಿವು ನೀಡಿದ್ದ. ಇಂತವರು ಮೈದುನನಿಂದ, ಇವರು ಮನೆಕೆಲಸದವನಿಂದ, ಇನ್ನುಳಿದವರು ಕಛೇರಿಯ ಬಾಸಿನಿಂದ ಹೀಗೆ ಆತನ ಭವಿಷ್ಯ ಮುಂದುವರಿದಿತ್ತು. ಆಶ್ಚರ್ಯವೆಂದರೆ, ವೈಜ್ಞಾನಿಕ ಮನೋಭಾವ, ಮಾನವೀಯತೆ, ಪ್ರಶ್ನಿಸುವ ಮನಬೋಭಾವ ಮತ್ತು ಪ್ರಗತಿಶೀಲತೆಯನ್ನು ಬೆಳೆಸಿಕೊಳ್ಳುವುದು ಭಾರತದ ಸಂವಿಧಾನದ ಪ್ರಕಾರ ಮೂಲಭೂತ ಕರ್ತವ್ಯವಾದರೂ, (45/51 ಮೂಲಭೂತ ಕರ್ತವ್ಯಗಳು, ಭಾರತದ ಸಂವಿಧಾನ)  ಅದೇ ಸಂವಿಧಾನದ ಆಶಯಗಳನ್ನು ಅರಗಿಸಿಕೊಂಡು ಹುಟ್ಟಿದ ಕಾನೂನುಗಳು ಆ ಜ್ಯೋತಿಷಿಯನ್ನು ಶಿಕ್ಷಿಸಲಿಲ್ಲ. 
     ವಿಜ್ಞಾನ, ಹೇಳಿಕೇಳಿ ಪುರಾವೆಗಳನ್ನು ಆಧರಿಸಿ ಉಸಿರಾಡುವ ಯೋಚನಾ ಪದ್ಧತಿ. ಇಲ್ಲಿ ನಂಬಿಕೆಗೆ ಸ್ಥಾನವಿಲ್ಲ.` ನೀನು ನನ್ನ ಮಾತನ್ನೂ ನಂಬದಿರು. ಸ್ವತಃ ಯೋಚಿಸು’ ಎಂದು ನುಡಿದ ಶಾಖ್ಯಮುನಿ ಸಿದ್ಧಾರ್ಥ ಬುದ್ಧನಾದ. `ಧರ್ಮಗ್ರಂಥಗಳಲ್ಲಿ ಉದ್ಧರಿಸಲ್ಪಟ್ಟಿದೆ ಎಂಬ ಕಾರಣಕ್ಕಾಗಿ ನಂಬದಿರು; ಮಹಾತ್ಮರು ಹೇಳಿದ್ದಾರೆಂಬ ಕಾರಣಕ್ಕಾಗಿ ನಂಬದಿರು; ನಂಬಿ ನಂಬಿ ಅಭ್ಯಾಸವಾಗಿದೆ ಎಂಬ ಕಾರಣಕ್ಕಾಗಿ ನಂಬದಿರು, ಸ್ವತಃ ಯೋಚಿಸು’ ಎಂದಿದ್ದ ಬುದ್ಧ. ಗುರುವೇ, ನೀನು ಹೇಳುವ ಮಾತುಗಳು ಧರ್ಮಗ್ರಂಥಗಳಲಿಲ್ಲ ಎಂದು ನುಡಿದ ಶಿಷ್ಯನಿಗೆ ಮಾರುತ್ತರಿಸಿದ ಬುದ್ಧ, ಹಾಗಾದರೆ ಅವುಗಳನ್ನು ಸೇರಿಸು ಅಂದಿದ್ದ. ನೀನು ಹೇಳುವ ಮಾತುಗಳು ಧರ್ಮಗ್ರಂಥಗಳು ಹೇಳಿದ್ದಕ್ಕೆ ವ್ಯತಿರಿಕ್ತವಾಗಿವೆ ಎಂದಿದ್ದಕ್ಕೆ ಬುದ್ದ ಪ್ರತಿಕ್ರಿಯಿಸಿದ್ದು ಹೀಗೆ-`ಹಾಗಾದರೆ, ಧರ್ಮಗ್ರಂಥಗಳಿಗೆ ತಿದ್ದುಪಡಿ ಅಗತ್ಯ’. ಬುದ್ಧನ ದಾರಿ ವಿಜ್ಞಾನದ ದಾರಿಯೂ ಹೌದು.
ಮಂಗಗಳ ಮೇಲೆ ನಡೆಸಿದ ಪ್ರಯೋಗವೊಂದನ್ನು (ಕೃಪೆ-ಸೈನ್ಸ್ ರಿಪೋರ್ಟರ್) ನಿಮ್ಮ ಗಮನಕ್ಕೆ ತರಲು ಪ್ರಯತ್ನಿಸುವೆ-
    ಐದು ಮಂಗಗಳನ್ನು ದೊಡ್ಡ ಪಂಜರದಲ್ಲಿಟ್ಟು ಪಂಜರದ ಮದ್ಯದಲ್ಲಿ ಕಂಬವೊಂದರ ತುದಿಗೆ ಬಾಳೆಹಣ್ಣುಗಳನ್ನು ತೂಗುಹಾಕಲಾಯಿತು. ಯಾವುದೋ ಒಂದು ಮಂಗ ಕಂಬವನ್ನು ಹತ್ತಿ ಬಾಳೆಹಣ್ಣು ಕೀಳಲು ಪ್ರಯತ್ನಿಸಿದ ಕೂಡಲೆ ಉಳಿದ ಮಂಗಗಳ ಮೇಲೆ ಕೊರೆಯುವ ಶೀತನೀರನ್ನು ಸುರಿಯಲಾಯಿತು. ಇದನ್ನು ಅನೇಕ ಬಾರಿ ಪುನರಾವರ್ತಿಸಿದ ಮೇಲೆ ಯಾವುದೇ ಮಂಗ ಬಾಳೆಹಣ್ಣು ಕೀಳಲು ಪ್ರಯತ್ನಸಿದರೆ ಅದರ ಮೇಲೆ ಉಳಿದ ನಾಲ್ಕು ಮಂಗಗಳು ಆಕ್ರಮಣ ಮಾಡುತ್ತಿದ್ದವು. ಈ ಹಂತದಲ್ಲಿ ಪಂಜರದಿಂದ ಒಂದು ಮಂಗವನ್ನು ಬದಲಿಸಲಾಯಿತು. ಹೊಸ ಮಂಗ ಬಾಳೆಹಣ್ಣನ್ನು ಕೀಳಲು ಪ್ರಯತ್ನಸಿದಾಗ ಯಥಾಪ್ರಕಾರ ಉಳಿದ ನಾಲ್ಕು ಮಂಗಗಳು ಆಕ್ರಮಣ ನಡೆಸಿದವು. ಆನಂತರ ಇನ್ನೊಂದು ಮಂಗವನ್ನು ಬದಲಿಸಿ ಮತ್ತೊಂದು ಹೊಸಮಂಗವನ್ನು ಸೇರಿಸಲಾಯಿತು. ಎರಡನೇ ಹೊಸಮಂಗ ಬಾಳೆಹಣ್ಣು ಕೀಳಲು ಪ್ರಯತ್ನಿಸಿದಾಗ ಪುನಃ ನಾಲ್ಕು ಮಂಗಗಳು ಆಕ್ರಮಣ ನಡೆಸಿದವು. ತನ್ನ ಮೇಲೆ ಶೀತನೀರಿನ ಪ್ರಯೋಗವಾಗಿರದಿದ್ದರೂ ಮೊದಲ ಹೊಸಮಂಗ ಕೂಡಾ ಎರಡನೇ ಹೊಸಮಂಗನ ಮೇಲೆ ಆಕ್ರಮಣ ನಡೆಸಿತು. ಹೀಗೆ ಒಂದೊಂದಾಗಿ ಉಳಿದ ಮೂರು ಹಳೆಯ ಮಂಗಗಳನ್ನು ಬದಲಿಸಿ ಶೀತನೀರಿನ ಪ್ರಯೋಗವಾಗದ ಮಂಗಗಳನ್ನು ಸೇರಿಸಲಾಯಿತು. ಆಗಲೂ, ಯಾವುದೇ ಮಂಗ ಬಾಳೆಹಣ್ಣನ್ನು ಕೀಳಲು ಹೋದಾಗ ಉಳಿದ ನಾಲ್ಕು ಮಂಗಗಳು ಕಾರಣವಿಲ್ಲದೆ ಆಕ್ರಮಣ ಮಾಡುತ್ತಿದ್ದವು.
    ಮೂಢನಂಬಿಕೆಗಳನ್ನು ಅನುಸರಿಸುವವರ ಪರಿಸ್ಥಿತಿ ಆ ಮಂಗಗಳಿಗಿಂತ ಬಿನ್ನವಲ್ಲ. ತಾವೇನು ಮಾಡುತ್ತಿದ್ದವೋ ಅದಕ್ಕೆ ಕಾರಣಗಳನ್ನು ಕೇಳಿಕೊಳ್ಳುವ ಗೋಜಿಗೇ ಹೋಗದೆ ಕಾಲವನ್ನು ತಳ್ಳುತ್ತಾ ಹಿಂದಕ್ಕೆ ಹಿಂದಕ್ಕೆ ಚಲಿಸುವ ಜನರ ಕಣ್ತೆರುಸುವುದು ನಮ್ಮ ಕಾಲದ ದೊಡ್ಡ ಸವಾಲು. 
     ಜ್ಯೋತಿಷ್ಯಕ್ಕೆ ಈ ಜಗತ್ತಿನ ಯಾವುದೇ ಪುರಾವೆಗಳು ಲಭ್ಯವಿಲ್ಲ. ಹದಿನೆಂಟು ಮಂದಿ ನೊಬೆಲ್ ಪ್ರಶಸ್ತಿ ವಿಜೇತರೂ ಸೇರಿದಂತೆ 190 ವಿಜ್ಞಾನಿಗಳು ಜ್ಯೋತಿಷ್ಯವನ್ನು ಖಂಡಿಸುವ ಹೇಳಿಕೆಗೆ ಸಹಿಹಾಕಿ ಅದನ್ನು `ಸುಳ್ಳು ವಿಜ್ಞಾನ’ ವಿಭಾಗಕ್ಕೆ ಸೇರಿಸಿದರು. ಅಸಮಾನ್ಯ ಮತ್ತು ಅಲೌಕಿಕ ಸಂಗತಿಗಳ ಕುರಿತು ವೈಕ್ಞಾನಿಕ ಸಂಶೋಧನೆ ನಡೆಸುವ (CSICOP) ಸಂಸ್ಥೆ ಜ್ಯೋತಿಷ್ಯವನ್ನು ಸಮರ್ಥಿಸುವ ಯಾವುದೇ ಪುರಾವೆ ಲಭ್ಯವಿಲ್ಲವೆಂದು ಕಳೆದ ವರ್ಷªಷ್ಟೇ ತಿಳಿಸಿದೆ. ಬರ್ಕಲೇ ಪ್ರಯೋಗಾಲಯದ ವಿಜ್ಞಾನಿ ಶಾನ್ ಕಾರ್ಲಸನ್ 265 ಮಂದಿಯ ಜಾತಕವನ್ನು 26 ಪ್ರಸಿದ್ಧ ಜ್ಯೋತಿಷಿಗಳಿಗೆ ನೀಡಿ ಆ 265 ಮಂದಿಯ ವ್ಯಕ್ತಿ ನಿರ್ಧಷ್ಟ ಗುಣಲಕ್ಷಣಗಳನ್ನು ಪಟ್ಟಿಮಾಡಲು ತಿಳಿಸಿದರು. ದೊರೆತ ಉತ್ತರಗಳಿಂದ ಕೇವಲ ಮೂವತ್ತೈದು ಶೇಕಡಾದಷ್ಟೇ ಅಂದರೆ, ಸಂಭವನೀಯತೆಯ ನಿಯಮದ ಪ್ರಕಾರವಷ್ಟೇ ಒಬ್ಬರಿಗೊಬ್ಬರು ತಾಳೆಯಾಗುತ್ತಿದ್ದರು. ಜಾತಕ, ಹಸ್ತಸಾಮುದ್ರಿಕ, ಸಂಖ್ಯಾಶಾಸ್ರ್ರ ಮತ್ತಿತರ ಪೊಳ್ಳುವಿದ್ಯೆಗಳ ಸಹಾಯದಿಂದ ವ್ಯಕ್ತಿಯ ಗುಣ ಲಕ್ಷಣಗಳನ್ನು ಆ ವ್ಯಕ್ತಿಯ ಎದುರೇ ಹೇಳುವಾಗ ಜ್ಯೋತಿಷಿಗಳು ಮಾರಾಟ ಪ್ರತಿನಿಧಿಗಳು, ಜಾಹಿರಾತುದಾರರು ಅನುಸರಿಸುವ ತಂತ್ರವನ್ನೇ ಅನುಸರಿಸುತ್ತಾರೆ. ಅದೇನೆಂದರೆ, ಹೇಳಬೇಕಾದ ಸಂಗತಿಗಳು ಸತ್ಯವಾಗಿರುವುದಕ್ಕಿಂತ ಕೇಳುವವನಿಗೆ ಇಷ್ಟವಾಗುವಂತಿರಬೇಕು. ``ಅವನಿಗೆ ಸತ್ಯ ಹೇಳಬೇಡ, ಅವನು ಯಾವುದು ಸತ್ಯವಾಗಬೇಕೆಂದು ಬಯಸುತ್ತಾನೋ ಅದನ್ನು ಹೇಳು’ ಇದು ಅವರ ಪ್ರಮುಖ ತಂತ್ರ. ಅಂತಹ ಒಂದು ತಂತ್ರವನ್ನು ಹೈಮನ್ ಉದ್ಧರಿಸುತ್ತಾರೆ-
`` ನಿಮ್ಮ ಕೆಲವು ಆಕಾಂಕ್ಷೆಗಳು ಅವಾಸ್ತವಿಕವಾದವು. ಕೆಲವು ಸಲ ನೀವು, ಎಲ್ಲರೊಡನೆ ಬೆರೆಯುವ, ಬಹರ್ಮುಖಿಗಳಾಗಿದ್ದಂತೆ ತೋರಿದರೂ ಕೆಲವೊಮ್ಮೆ ಅದೇಕೋ ಅಂರ್ಮುಖಿಗಳಾಗುತ್ತೀರಿ. ನಿಮ್ಮನ್ನು ನೀವು ಸಂಪೂರ್ಣವಾಗಿ ಇತರರಿಗೆ ಅರ್ಥವಾಗುವಂತೆ ವ್ಯಕ್ತಪಡಿಸುವುದಿಲ್ಲ. ಸರಿಯಾದ ಪುರಾವೆಗಳಿಲ್ಲದೆ ಇತರರ ಮಾತನ್ನು ನೀವು ಒಪ್ಪುವುದಿಲ್ಲ. ನಿಮ್ಮ ನಿರ್ಧಾರ ಸರಿಯಾಗಿದೆಯೇ ಇಲ್ಲವೇ ಎಂಬ ಬಗ್ಗೆ ನಿಮಗೆ ಅನೇಕ ಸಲ ಅನುಮಾನಗಳು ಉಂಟಾಗುತ್ತವೆ. ನಿಮಗೆ ಕೆಲವು ವೈಯಕ್ತಿಕ ದೌರ್ಬಲ್ಯಗಳಿವೆ, ಅವು ನಿಮಗೆ ಹಾನಿಯುಂಟು ಮಾಡುತ್ತಿವೆ. ನಿಮ್ಮಲ್ಲಿ ವಿಶೇಷ ಸಾಮಥ್ರ್ಯವಿದ್ದು ಆ ಸಾಮರ್ಥ್ಯವನ್ನು ನೀವು ಸರಿಯಾಗಿ ಬಳಸಿಕೊಂಡಿಲ್ಲ....’’
 ಮೇಲಿನ ಮಾತುಗಳು ನಿಮಗೆ ಅನ್ವಯಿಸುತ್ತವೆಯೇ? ಹೆಚ್ಚು-ಕಡಿಮೆ ಎಲ್ಲರೂ ತಮಗೇ ಅನ್ವಯಿಸುತ್ತದೆ ಎಂದು ನಂಬುತ್ತಾರೆ!
    ಇತ್ತೀಚೆಗೆ, 6,475 ರಾಜಕೀಯ ದುರೀಣರ ಜಾತಕವನ್ನು ಪರೀಕ್ಷಿಸಲಾಯಿತು. ಅವರೆಲ್ಲರ ಜಾತಕಗಳೂ ಬೇರೆ ಬೇರೆ ರಾಶಿಗಳಲ್ಲಿ ಸಮಾನವಾಗಿ ಹಂಚಿಹೋಗಿದ್ದವು. ಅವರಲ್ಲಿ ಜ್ಯೋತಿಷ್ಯದ ಪ್ರಕಾರ ನಾಯಕತ್ವದ ಗುಣಗಳಿರಬೇಕಾದ ಜಾತಕದವರೂ ಇದ್ದರು. ಹಾಗೆಯೇ, ನಾಯಕತ್ವ ಗುಣಗಳಿರದಿರುವ ಜಾತಕದವರೂ ಇದ್ದರು. ಜಾನ್ ಕೆನಡಿ ಹತ್ಯೆಯನ್ನು ಮುನ್ಸೂಚಿಸಿ ಪ್ರಸಿದ್ಧರಾದ ಜ್ಯೋತಿಷಿಯೊಬ್ಬರ ಜೀವಿತಕಾಲದ ಪ್ರಮುಖ ಭವಿಷ್ಯ ನುಡಿಗಳನ್ನು ಕಲೆಹಾಕಿದ ಒಬ್ಬ ಅಧ್ಯಯನಕಾರರಿಗೆ ದೊರೆತ ಸಂಗತಿಯೇನೆಂದರೆ, ಆ ಜ್ಯೋತಿಷಿ ನುಡಿದ 82 ಶೇಕಡಾ ಭವಿಷ್ಯಗಳು ಸುಳ್ಳಾಗಿದ್ದವು.
    ಜ್ಷಾನಕ್ಕೂ ನಂಬಿಕೆಗೂ ಇರುವ ವ್ಯತ್ಯಾಸ ಇಷ್ಟೇ- ಜ್ಞಾನ ಪುರಾವೆಯನ್ನು ಬೇಡುತ್ತದೆ. ನಂಬಿಕೆಗೆ ಅದರ ಹಂಗಿಲ್ಲ. ಅಡಮ್ ಬ್ಲಾಂಕನ್‍ಬಿಕರ್ ಎಂಬ ಹೆಸರಾಂತ ವಿಜ್ಞಾನದ ಪ್ರೊಫೆಸರೊಬ್ಬರು `ನಾನು ವಿಜ್ಞಾನವನ್ನು ನಂಬುವುದಿಲ್ಲ..ನನ್ನ ವಿದ್ಯಾರ್ಥಿಗಳೂ ನಂಬಬಾರದು’ ಎಂದಿದ್ದರು. ಇನ್ನೊಬ್ಬರು ವಿಜ್ಞಾನಿ ಡಾ. ಬ್ರಿಯಾನ್ ಪೊಬೆನರ್ ತಾನು ವಿಕಾಸವಾದವನ್ನು ನಂಬುವುದಿಲ್ಲ. ಆದರೆ, ವಿಕಾಸವಾದಕ್ಕೆ ಸಮರ್ಥನೆಯಾಗಿ ನೀಡಿದ ಪುರಾವೆಗಳನ್ನು ಒಪ್ಪುತ್ತೇನೆ ಅಂದಿದ್ದರು. ವೀಕ್ಷಣೆ, ಪ್ರಯೋಗ, ವಿಶ್ಲೇಷಣೆ ಮತ್ತಿತರ ವಿಧಾನಗಳಿಗೆ ದಕ್ಕುವ ವಿಜ್ಞಾನದಲ್ಲಿ ನಂಬಿಕೆಗೆ ಸ್ಥಾನವೇ ಇಲ್ಲ. ಮತ್ತೆ ಮತ್ತೆ ತನ್ನನ್ನು ತಾನೆ ತಪ್ಪೆಂದು ಸಾಧಿಸಿ ಮುಂದೆ ಸಾಗುವ ವಿಜ್ಞಾನದ ಪ್ರತಿ ಹುಟ್ಟಿನಲ್ಲೂ ಸದಾ ಪಿತೃಹತ್ಯೆಯ ದೋಷ. ಆದುದರಿಂದಲೇ, ವಿಜ್ಞಾನ ನಿಂತ ನೀರಲ್ಲ: ಅದಕ್ಕೆ ಬೆಳವಣಿಗೆ ಇದೆ. ಜೀವಂತಿಕೆ ಇದೆ.
    ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಉಡುಪಿ ಜಿಲ್ಲಾ ಘಟಕ ಮತ್ತು ಕುಂದಾಪುರ ಸಮುದಾಯ ಒಟ್ಟಿಗೆ ಸೇರಿ ಜನವರಿ 24ರ ಶನಿವಾರ ಭಂಡಾರ್ಕರ್ಸ್ ಕಾಲೇಜಿನಲ್ಲಿ ಚುಕ್ಕಿ ಚಂದ್ರಮ ಎಂಬ ಕಾರ್ಯಕ್ರಮವನ್ನು ಹಮ್ಮಿಕೊಂಡಿವೆ. ಪ್ರಾತ್ಯಕ್ಷಿಕೆ, ಸಂವಾದ, ಆಕಾಶ ವೀಕ್ಷಣೆಗಳನ್ನೊಳಗೊಂಡ ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ಮಕ್ಕಳು ರಾಹು ಕೇತುಗಳೆಂಬ ಭೌತಿಕ ಕಾಯಗಳೇ ಇಲ್ಲವೆಂಬುದನ್ನು ತಿಳಿದುಕೊಳ್ಳುತ್ತಾರೆ. ರಾಶಿಪುಂಜಗಳು ಉಂಟುಮಾಡುವ ಚಿತ್ರಾಕೃತಿಗಳು ಒಂದೇ ರೀತಿಯಿದ್ದರೂ ಅದರಲ್ಲಿರುವ ನಕ್ಷತ್ರಗಳು ಅಸಾಧ್ಯ ವೇಗದಲ್ಲಿ ದೂರ ಸರಿಯುತ್ತಿವೆ ಎಂಬುದನ್ನೂ ತಿಳಿದುಕೊಳ್ಳುತ್ತಾರೆ. ಬರಿಗಣ್ಣಿಗೆ ಕಾಣುವ ನಕ್ಷತ್ರಗಳಿರುವಂತೆ ಕಾಣದ ನಕ್ಷತ್ರಗಳು ಇವೆಯೆಂಬುದನ್ನೂ, ರಾಶಿಪುಂಜಗಳ ನಕ್ಷತ್ರಗಳು ಒಂದೇ ಗೋಳಕ್ಕೆ ಅಂಟಿಕೊಂಡಂತೆ ಕಾಣುವುದಾದರೂ ಅವುಗಳು ಭೂಮಿಯಿಂದ ಬೇರೆ ಬೇರೆ ದೂರದಲ್ಲಿವೆಯೆಂಬುದನ್ನೂ ತಿಳಿದುಕೊಳ್ಳುತ್ತಾರೆ. ಇಲ್ಲಿ ಯಾವುದೂ ಸ್ಥಿರವಲ್ಲ, ಎಲ್ಲವೂ ಬದಲಾಗುತ್ತಿವೆ ಎಂತಲೂ ಎಲ್ಲ ಉತ್ತರಗಳೂ ತಾತ್ಪೂರ್ತಿಕವಾದುದು ಎಂಬುದೇ ಸತ್ಯ ಎಂತಲೂ ತಿಳಿದುಕೊಳ್ಳುವರು. 

ಮತ್ತು ಈ ತಿಳುವಳಿಕೆಯೇ ಅವರನ್ನು ರಕ್ಷಿಸಬಲ್ಲದು!


Saturday, 17 January 2015

ಅಮೋನಿಯಂ ನೈಟ್ರೇಟ್- ಉದಯವಾಣಿ ಲೇಖನ

ಅಮೋನಿಯಂ ನೈಟ್ರೇಟೆಂಬ ರಕ್ತಲೇಪಿತ ರಸಗೊಬ್ಬರದ ಕತೆ


  ಮೊನ್ನೆಯಷ್ಟೇ ಬೆಂಗಳೂರು ಸ್ಪೋಟಕ್ಕೆ ಕಾರಣರಾದ ಭಟ್ಕಳದ ಶಂಕಿತ ಉಗ್ರರನ್ನು ಸೆರೆಹಿಡಿದರು. ಸೆರೆ ಸಿಕ್ಕವರು ಉಗ್ರರೇ ಹೌದು ಎಂಬುದನ್ನು ಖಚಿತಪಡಿಸಿದ್ದು ಅವರ ಮನೆಯಲ್ಲಿ ಸಿಕ್ಕಿದ ಅಮೋನಿಯಂ ನೈಟ್ರೇಟು!
  ಸಾಮಾನ್ಯ ತಾಪದಲ್ಲಿ ಬಿಳಿ ಬಣ್ಣದ ಪುಡಿಹರಳಿನ ರೂಪದಲ್ಲಿರುವ ಈ ರಾಸಾಯನಿಕ ಕೃಷಿಯ ದಿಕ್ಕು-ದೆಶೆಗಳನ್ನು ಬದಲಾಯಿಸಿದ ರಸಗೊಬ್ಬರ. ಸಸ್ಯಗಳ ಬೆಳವಣಿಗೆಗೆ, ಹಣ್ಣು ಬೆಳೆಗಳ ಉತ್ತಮ ಇಳುವರಿಗೆ, ಎಲೆ ತರಕಾರಿಗಳು ಹಸಿ-ಹಸಿ ಸೊಪ್ಪನ್ನು ಹೇರಿಕೊಂಡು ಬೆಳೆಯಲು ನೈಟ್ರೋಜನ್ ಬೇಕು. ವಾತಾವರಣದಲ್ಲಿ ನೈಟ್ರೋಜನ್ ಹೇರಳವಾಗಿದ್ದರೂ ಅವುಗಳನ್ನು ಸಸ್ಯಗಳು ನೇರವಾಗಿ ಪಡೆಯಲಾರವು. ಸಸ್ಯಗಳು ಪೋಷಕಾಂಶಗಳನ್ನು ಪಡೆಯಬೇಕಾದರೆ ಅವು ನೀರಿನಲ್ಲಿ ಕರಗಬೇಕಾಗುತ್ತವೆ. ಅಮ್ಮೋನಿಯಂ ನೈಟ್ರೇಟಿನಲ್ಲೋ ಹತ್ತಿರ ಹತ್ತಿರ ಮೂವತ್ತು ಶೇಕಡಾದಷ್ಟು ನೈಟ್ರೋಜನ್ ಇರುತ್ತದೆ. ಇದು ನೀರಿನಲ್ಲಿ ಕರಗುತ್ತದೆ. ಜೊತೆಗೆ, ಬಹಳ ಅಗ್ಗ ಕೂಡಾ. ಕೇಳಬೇಕೇ? ಈ ರಾಸಾಯನಿಕ ಬಡದೇಶಗಳ ರೈತರ ಡಾರ್ಲಿಂಗ್ ಆಗಿಹೋಯಿತು.
  ಅಮೋನಿಯಂ ನೈಟ್ರೇಟು ರಾಸಾಯನಿಕ ಕ್ರೀಯೆಯಲ್ಲಿ ಪ್ರತಿಕಾರಕಗಳ ಎಲೆಕ್ಡ್ರಾನುಗಳನ್ನು ಕಳೆಯಬಲ್ಲದು -ಇದೊಂದು ಶಕ್ತಿಶಾಲಿಯಾದ ಆಕ್ಸಿಡೀಕರಣದ ದಲ್ಲಾಳಿ. ಹಾಗೆಯೇ, ಸಾವಿನ ದಲ್ಲಾಳಿ ಕೂಡಾ. ಶಾಖಕ್ಕೆ ಸೂಕ್ಷ್ಮವಾಗಿ ಪ್ರತಿಕ್ರಿಯಿಸುವ ಅಮೋನಿಯಂ ನೈಟ್ರೇಟು, ಇಂತಹ ಬಾಹ್ಯಪ್ರೇರಣೆಗೆ ಕೂಡಲೇ ಪ್ರತಿಕ್ರಿಯಿಸುವ ಮೂಲಕ ರಸಗೊಬ್ಬರದಿಂದ  ಸ್ಪೋಟಕ ಸಾಮಗ್ರಿಯಾಗಿ ಬದಲಾಗಬಲ್ಲದು! ಹೀಗಾಗಿ, ಅಮೋನಿಯಂ ನೈಟ್ರೇಟು ಇತ್ತೀಚೆಗೆ ರೈತರಿಗಿಂತ ಉಗ್ರಗಾಮಿಗಳಿಗೇ ಹೆಚ್ಚು ಪ್ರಿಯವಾದ ರಾಸಾಯನಿಕ.
  ಅಮೋನಿಯಂ ನೈಟ್ರೇಟನ್ನು ಟ್ರೈ ನೈಟ್ರೋ ಟೋಲಿನ್ ಎಂಬ ಸ್ಫೋಟಕದೊಂದಿಗೋ ಡಿಸೆಲ್‍ನಂತಹ ಇಂಧನತೈಲದೊಂದಿಗೋ ಬೆರೆಕೆ ಹಾಕಿ ಬಾಂಬು ತಯಾರಿಸುತ್ತಾರೆ. ಈ ಸ್ಫೋಟಕಗಳನ್ನೆಲ್ಲ ಉಗ್ರಗಾಮಿಗಳೇ ಬಳಸುತ್ತಾರೆ ಎಂದುಕೊಳ್ಳಬೇಡಿ. ಬಾಂಬುಗಳು ಮೂಲತಃ ಗಣಿಗಾರಿಕೆಗಾಗಿಯೇ ಕಂಡುಹಿಡಿಯಲ್ಪಟ್ಟ ಸ್ಪೋಟಕ ಕಾಂಬಿನೇಷನ್‍ಗಳು. ಆನಂತರ, ರಕ್ಷಣಾಪಡೆಗಳು ಇವುಗಳನ್ನು ಬಳಸಿಕೊಂಡವು. 1996 ರ ಅಮೇರಿಕಾದ ಒಕ್ಲಾಮಾ ನಗರದ ಸ್ಫೋಟದಿಂದಲೂ ಅಮೋನಿಯಂ ನೈಟ್ರೇಟನ್ನು ಉಗ್ರಗಾಮಿಗಳು ಬಳಸುತ್ತಿದ್ದಾರೆ!  2002 ರ ಬಾಲಿ ನೈಟ್ ಕ್ಲಬ್ ಸ್ಫೋಟ, 2003ರ ಇಸ್ತನಾಬುಲ್ ಸ್ಫೋಟಗಳಲ್ಲಿ ಅಲ್ ಖೈದಾದಂತಹ ಜಾಗತಿಕ ಭೀತಿವಾದಿಗಳು ಅಮೋನಿಯಂ ನೈಟ್ರೇಟನ್ನು ಬಳಸಿದ್ದರು. 2004 ರಲ್ಲಿ ಭಾರತ ಸರಕಾರ ನೈಟ್ರೋ ಗ್ಲಿಸರಿನ್ ಮೂಲದ ಸ್ಫೋಟಕಗಳನ್ನು ನಿಷೇದಿಸಿದ ಮೇಲೆ, ಭಾರತೀಯ ಉಪಖಂಡದಲ್ಲಿ ಕಾರ್ಯನಿರ್ವಹಿಸುತ್ತಿರುವ ಉಗ್ರಗಾಮಿ ಸಂಘಟನೆಗಳು ಅಮೋನಿಯಂ ನೈಟ್ರೇಟನ್ನು ಹೆಚ್ಚೆಚ್ಚು ಬಳಸಲಾರಂಭಿಸಿದವು. ಈ ಮಾತಿಗೆ ಪುರಾವೆಯಾಗಿ ಹೈದರಾಬಾದ್ ಸ್ಫೋಟ, ಚಿನ್ನಸ್ವಾಮಿ ಕ್ರೀಡಾಂಗಣ ಸ್ಫೋಟ, ಪುಣೆಯ ಜರ್ಮನ್ ಬೇಕರಿ ಸ್ಫೋಟ, ದಿಲ್ ಕುಷ್ ನಗರದ ಸ್ಫೋಟ ಹೀಗೆ ಹಲವು ಉದಾಹರಣೆಗಳು ದೊರೆಯುತ್ತವೆ. ಸುಧಾರಿತ ಸ್ಫೋಟಕ ಉಪಕರಣಗಳು(Iಇಆ) ಎಂದು ಕರೆಯಲ್ಪಡುವ ಸ್ಫೋಟಕಗಳಲ್ಲಿ ಮುಖ್ಯ ಕಚ್ಚಾವಸ್ತು ಅಮೋನಿಯಂ ನೈಟ್ರೇಟ್ ಆಗಿರುತ್ತದೆ. ನಟ್ಟು, ಬೋಲ್ಟು, ಬಾಲ್‍ಬಿಯರಿಂಗ್ ಗುಂಡುಗಳÀಂತಹ ದೇಹದ ಮೂಲಕ ತೂರಿಹೋಗಬಹುದಾದ ಘನವಸ್ತುಗಳನ್ನು ಸೇರಿಸಿ ಈ ಬಾಂಬುಗಳು ಪರಿಣಾಮವನ್ನು ಹೆಚ್ಚಿಸಲಾಗುತ್ತದೆ.
  ಸೆಲ್ಯುಲೋಸ್ ನೈಟ್ರೇಟ್ ಮತ್ತು ನೈಟ್ರೋ ಗ್ಲಿಸರಿನ್ ಮೂಲದ ಸ್ಫೋಟಕಗಳ ಬಳಕೆ ಪ್ರಾರಂಭವಾದದ್ದು ಹತ್ತೊಂಬತ್ತನೇ ಶತಮಾನದ ಆರಂಭದಲ್ಲಿ. ಸರ್ ಅಲ್ಪ್ರೆಡ್ ನೊಬೆಲ್‍ರ ತಂದೆ ನಡೆಸುತ್ತಿದ್ದ ಸ್ಫೋಟಕಗಳ ಫ್ಯಾಕ್ಟರಿಯಲ್ಲಿ ಆಕಸ್ಮಿಕವಾಗಿ ಸ್ಫೋಟ ಸಂಭವಿಸಿ ನೊಬೆಲ್‍ರ ಇಬ್ಬರು ತಮ್ಮಂದಿರು ಅಸುನೀಗಿದ್ದರು. ಆನಂತರ, ಅಲ್ಫ್ರೆಡ್ ನೊಬೆಲ್ ನೈಟ್ರೋಗ್ಲಿಸರಿನ್ ಮೂಲದ ಸ್ಫೋಟಕಗಳನ್ನು ನಿಯಂತ್ರಿತ ರೀತಿಯಲ್ಲಿ ಬಳಸಬಹುದಾದ ಡೈನಮೈಟ್ ಎಂಬ ಸಂಯೋಜನೆಯನ್ನು  ತಯಾರಿಸಿದರು. ಡೈನಮೈಟ್ ತಯಾರಾದದ್ದು ಗಾಂಧಿ ಹುಟ್ಟುವುದಕ್ಕಿಂತ ಎರಡು ವರ್ಷ ಮೊದಲು- 1867 ರಲ್ಲಿ. ಆನಂತರ, ಡೈನಮೈಟ್ ತಯಾರಿಸಿದ ಕುಖ್ಯಾತಿಯಿಂದ ತಪ್ಪಿಸಿಕೊಳ್ಳಲೋಸುಗುವೋ ಎಂಬಂತೆ ತನ್ನ ಆಸ್ತಿಯೆಲ್ಲ ನೊಬೆಲ್ ಪ್ರಶಸ್ತಿಗಳನ್ನು ನೀಡಲು ವಿನಿಯೋಗವಾಗಬೇಕೆಂಬ ಇಚ್ಛಾಪತ್ರವನ್ನು ಬರೆದು ಇದೇ ನೊಬೆಲ್ ಮಹಾಶಯ ಅಸುನೀಗಿದ್ದರು.
    ರಕ್ತ ಸಿಕ್ತವಾದ ಆಲೋಚನೆಗಳನ್ನು ಹೊಂದಿರುವವರು ಬಾಯಲ್ಲಿ ಆಲಿವ್ ಟೊಂಗೆಯನ್ನು ಕಚ್ಚಿಕೊಂಡರೇನಂತೆ- ಅವರ ಕಾರ್ಯಗಳಲ್ಲಿ ರಕ್ತದ ಲೇಪನ ಇದ್ದೇ ಇರುತ್ತದೆ. ಅಮೋನಿಯಂ ನೈಟ್ರೇಟು ಮತ್ತಿತರ ರಸಗೊಬ್ಬರಗಳನ್ನು ಹೇಬರ್ ಪ್ರಕ್ರಿಯೆ ಎಂಬ ರಾಸಾಯನಿಕ ಕ್ರಿಯೆಯ ಮೂಲಕ ತಯಾರಿಸಿದ ಸಾಧನೆಗಾಗಿ ವಿಜ್ಞಾನಿ ಫ್ರಿಟ್ಞ್ ಹೇಬರರಿಗೆ 1918 ರಲ್ಲಿ ರಸಾಯನ ಶಾಸ್ತ್ರದ ನೊಬೆಲ್ ಪ್ರಶಸ್ತಿ ದೊರೆಯಿತು. ಇದೇ ಹೇಬರ್ ಮಹಾಶಯನನ್ನು ಮೊದಲ ಮಹಾಯುದ್ಧದ ಕಾಲದಲ್ಲಿ ಜರ್ಮನಿಯ ರಾಸಾಯನಿಕ ಸಮರಪಡೆಯ ಮುಖ್ಯಸ್ಥರನ್ನಾಗಿಯೂ ಮಾಡಲಾಗಿತ್ತು. ಇದೇ ಹೇಬರ್ ಎರಡನೇ ವೈಪ್ರೆಸ್ ಕದನದಲ್ಲಿ ಕ್ಲೋರಿನ್ ಗ್ಯಾಸ್ ದಾಳಿಯನ್ನು ನಿರ್ದೇಶಿಸಿ ಮಿತ್ರಪಡೆಯ ಸಾವಿರಾರು ಯೋಧರ ಸಾವಿಗೆ ಕಾರಣರಾಗಿದ್ದರು. ಅಮೋನಿಯಂ ನೈಟ್ರೇಟೆಂಬ ರಸಗೊಬ್ಬರ ರಕ್ತಲೇಪಿಸಿಕೊಂಡೇ ಹುಟ್ಟಿರುವುದಕ್ಕೆ ಇದಕ್ಕಿಂತ ಬೇರೆ ಪುರಾವೆ ಬೇಕೇ?
 ಸ್ಫೋಟಕಗಳಿಗೆ ಬಹಳ ದೊಡ್ಡ ಇತಿಹಾಸವಿಲ್ಲ. ಬಹುಷಃ, ದೀರ್ಘ ಭವಿಷ್ಯವೂ ಇಲ್ಲ! ಹದಿಮೂರನೇ ಶತಮಾನದ ಹೊತ್ತಿಗೆ ಕೋವಿ ಮದ್ದಲ್ಲದೇ ಬೇರೆ ಸ್ಫೋಟಕಗಳೇ ಗೊತ್ತಿರಲಿಲ್ಲ.  ಸೆಲ್ಯುಲೋಸ್ ನೈಟ್ರೇಟ್ ಮತ್ತು ನೈಟ್ರೋ ಗ್ಲಿಸರಿನ್ ಮೂಲದ ಸ್ಫೋಟಕಗಳ ಬಳಕೆ ಪ್ರಾರಂಭವಾದದ್ದು ಹತ್ತೊಂಬತ್ತನೇ ಶತಮಾನದ ಆರಂಭದಲ್ಲಿ;  ಟಿ.ಎನ್.ಟಿ ರಂಗಪ್ರವೇಶ ಮಾಡಿದ್ದು ಮೊದಲ ವಿಶ್ವಸಮರದ ಸಂದರ್ಭದಲ್ಲಿ. 1991 ರಲ್ಲಿ ರಾಜೀವ ಗಾಂಧಿ ಆರ್. ಡಿ. ಎಕ್ಸ್ ಎಂಬ ಸ್ಫೋಟಕಕ್ಕೆ ಬಲಿಯಾದರು. ಈಗ ಮತ್ತದೇ ರಸಗೊಬ್ಬರ. ಬೆಂಗಳೂರಿನಲ್ಲಿ ಬಾಂಬು ಸ್ಫೋಟಗೊಂಡರೆ ಭಟ್ಕಳದಲ್ಲಿ ಅಮೋನಿಯಂ ನೈಟ್ರೇಟು ದೊರೆಯುತ್ತದೆ.
  ಅಮೋನಿಯಂ ನೈಟ್ರೇಟನ್ನು ರಸಗೊಬ್ಬರವಾಗಿ ಬಳಸುವಾಗಲೂ ಅಪಾಯವಿದ್ದೇ ಇದೆ. ಸಂಗ್ರಹಣೆ ಮತ್ತು ಬಳಕೆಯ ಯಾವ ಹಂತದಲ್ಲಿ ಎಚ್ಚರ ತಪ್ಪಿದರೂ ಅನಾಹುತ ಕಟ್ಟಿಟ್ಟ ಬುತ್ತಿ. ಟೆಕ್ಸಾಸ್ ನಗರದ ರಸಗೊಬ್ಬರ ಕಾರ್ಖಾನೆಯ ದುರಂತವೂ ಸೇರಿದಂತೆ ಎಷ್ಟೋ ಸಾವು-ನೋವುಗಳಿಗೆ ಈ ರಸಗೊಬ್ಬರ ಕಾರಣವಾಗಿದೆ. ರಸಗೊಬ್ಬರಕ್ಕಾಗಿ ಹಾತೊರೆಯುತ್ತಾ ಪೋಲೀಸರ ಗುಂಡು ತಿಂದು ಸತ್ತ ಹಾವೇರಿಯ ರೈತ ನಮ್ಮ ನೆನಪಿಂದ ಇನ್ನೂ ಮರೆಯಾಗಿಲ್ಲ. ಗತಿಸಿದ 2014 ರ ಕಟ್ಟಕಡೆಯ ನೂರೈವತ್ತು ಗಂಟೆಗಳಲ್ಲಿ ವಿದರ್ಭ ಪ್ರಾಂತ್ಯದ 12 ರೈತರು ಆತ್ಮಹತ್ಯೆ ಮಾಡಿಕೊಂಡರು. ಈ ಸಾವಿನಲ್ಲಿ ರಸಗೊಬ್ಬರದ ಅವಶೇಷಗಳು ಇಲ್ಲದೇ ಇಲ್ಲ. ಹಸಿರು ಕ್ರಾಂತಿಯ ನೆವದಲ್ಲಿ, ಹಾಕಿದ ದುಡ್ಡಿಗೆ ಬರುವ ಇಳುವರಿ ಸಾಲುವುದಿಲ್ಲವೆಂಬ ಕೊರಗಲ್ಲಿ ನೆಲಕ್ಕೆ ಸುರಿದ ರಾಸಾಯನಿಕಗಳು ಇಂದು ರೈತನನ್ನೇ ತಿನ್ನುತ್ತಿವೆ. ರಸಗೊಬ್ಬರಕ್ಕೆ ರಕ್ತ ಮೆತ್ತಿಕೊಂಡದಂತೂ ಸತ್ಯ.
  ಅಂದಹಾಗೆ, ಅಮೋನಿಯಂ ನೈಟ್ರೇಟನ್ನು ನೀರಲ್ಲಿ ಹಾಕಿ ಬಿಸಿ ಮಾಡಿದರೆ ಏನು ದೊರೆಯುವುದು ಗೊತ್ತೇ? ನೈಟ್ರಸ್ ಆಕ್ಸೈಡ್-ಅದೇ.. ಲಾಫಿಂಗ್ ಗ್ಯಾಸ್!
_________________________________________________________________________
ಉದಯ ಗಾಂವಕಾರ
9481509699

Saturday, 27 December 2014

Monday, 28 July 2014

ಎಸ್. ಎಸ್. ಎಲ್. ಸಿ ಗೆ ನಿರಂತರ ಮತ್ತು ವ್ಯಾಪಕ ಮೌಲ್ಯಮಾಪನ.



   ರಾಜ್ಯ ಪಠ್ಯಕ್ರಮದ ಹತ್ತನೆಯ ತರಗತಿಗೆ ಈ ಶೈಕ್ಷಣಿಕ ವರ್ಷದಿಂದ ಎಸ್.ಎಸ್.ಎಲ್.ಸಿ ಪರೀಕ್ಷೆಗಳಿಗೂ ಸರ್ಕಾರ ಬದಲಾವಣೆ ತಂದಿದೆ. ಬದಲಾದ ಪದ್ಧತಿಯನ್ನು `ನಿರಂತರ ಮತ್ತು ವ್ಯಾಪಕ ಮೌಲ್ಯಮಾಪನ’ ಎಂದು ಕರೆಯಲಾಗಿದೆ.
   ಹೊಸ ಮೌಲ್ಯಮಾಪನ ಪದ್ಧತಿಯು ಕಲಿಕೆಯ ವಿಷಯಗಳನ್ನು ಪಠ್ಯ(scholastic) ಮತ್ತು ಸಹಪಠ್ಯ(Non scholastic) ಎಂಬುದಾಗಿ ವಿಂಗಡಿಸುತ್ತದೆ. ಪಠ್ಯ ವಿಷಯದಲ್ಲಿ  ಆಂತರಿಕ ಮತ್ತು ಬಾಹ್ಯ ಮೌಲ್ಯಮಾಪನ ಇರುತ್ತದೆ. ಬಾಹ್ಯ ಮೌಲ್ಯಮಾಪನಕ್ಕೆ ಶೇಖಡಾ 80 ರಷ್ಟು ಮತ್ತು ಆಂತರಿಕ ಮೌಲ್ಯಮಾಪನಕ್ಕೆ ಶೇಖಡಾ 20 ರಷ್ಟು ಪ್ರಾಧಾನ್ಯತೆ ಇರುತ್ತದೆ. ಪ್ರಥಮ ಭಾಷೆ, ದ್ವಿತೀಯ ಭಾಷೆ, ತೃತಿಯ ಭಾಷೆ, ಗಣಿತ, ಸಾಮಾನ್ಯ ವಿಜ್ಞಾನ ಮತ್ತು ಸಮಾಜ ವಿಜ್ಞಾನ ವಿಷಯಗಳು ಪಠ್ಯ ವಿಷಯಗಳಾಗಿದ್ದು, ಇವುಗಳಿಗೆ ಒಟ್ಟಾಗಿ 500 ಅಂಕಗಳ ಬಾಹ್ಯ ಪರೀಕ್ಷೆಯನ್ನು ಶೈಕ್ಷಣಿಕ ವರ್ಷಾಂತ್ಯದಲ್ಲಿ ನಡೆಸಲಾಗುತ್ತದೆ. ಉತ್ತೀರ್ಣತೆ ಹೊಂದಲು ಪ್ರಥಮ ಭಾಷೆಯ ಗರಿಷ್ಠ 100 ಅಂಕಗಳ ಬಾಹ್ಯ ಪರೀಕ್ಷೆಯಲ್ಲಿ ಕನಿಷ್ಠ 30 ಅಂಕಗಳನ್ನೂ ಉಳಿದ ಪಠ್ಯವಿಷಯಗಳ 80 ಅಂಕಗಳ ಬಾಹ್ಯ ಪರೀಕ್ಷೆಯಲ್ಲಿ ಕನಿಷ್ಠ 24 ಅಂಕಗಳನ್ನೂ ಪಡೆಯಬೇಕಾಗುತ್ತದೆ. ಜೊತೆಗೆ, ಬಾಹ್ಯ ಪರೀಕ್ಷೆಯ ಒಟ್ಟು 500 ಅಂಕಗಳಲ್ಲಿ 175 ಅಂಕಗಳನ್ನು ಪಡೆಯಬೇಕು. ವಿದ್ಯಾರ್ಥಿಯ ಪಠ್ಯ ವಿಷಯಗಳಲ್ಲಿನ ಸಾಧನೆಯನ್ನು ಅಂಕಗಳು, ಶ್ರೇಣಿಗಳಲ್ಲಿ ಗುರುತಿಸುವುದರೊಂದಿಗೆ ಸಂಚಿತ ದರ್ಜಾಂಶ ಸರಾಸರಿಯಲ್ಲೂ ಸೂಚಿಸಲಾಗುವುದು. ಆದರೆ, ಸಹಪಠ್ಯ ವಿಷಯಗಳಾದ ದೈಹಿಕ ಮತ್ತು ಆರೋಗ್ಯ ಶಿಕ್ಷಣ, ಕಾರ್ಯಾನುಭವ, ಮನೋಭಾವನೆ ಮತ್ತು ಮೌಲ್ಯಶಿಕ್ಷಣ, ಕಲಾಶಿಕ್ಷಣಗಳಿಗೆ ಬಾಹ್ಯ ಮೌಲ್ಯಮಾಪನ ಇರುವುದಿಲ್ಲ. ಸಹಪಠ್ಯ ವಿಷಯಗಳಲ್ಲಿನ ವಿದ್ಯಾರ್ಥಿಯ  ಸಾಧನೆಯನ್ನು ಎ, ಬಿ  ಅಥವಾ ಸಿ ಶ್ರೇಣಿಗಳಲ್ಲಿ ಗುರುತಿಸಲಾಗುತ್ತದೆ.

    ಪ್ರತಿ ಪಠ್ಯ ವಿಷಯಕ್ಕೂ 200 ಅಂಕಗಳ ಆಂತರಿಕ ಮೌಲ್ಯಮಾಪನವನ್ನು ನಡೆಸಲಾಗುತ್ತದೆ. ಆಂತರಿಕ ಮೌಲ್ಯಮಾಪನವನ್ನು ನಾಲ್ಕು ರೂಪಣಾತ್ಮಕ ಮೌಲ್ಯಮಾಪನಗಳಾಗಿ ವಿಭಜಿಸಲಾಗಿದ್ದು, ಪ್ರತಿ ರೂಪಣಾತ್ಮಕ ಮೌಲ್ಯಮಾಪನದಲ್ಲಿಯೂ 20 ಅಂಕಗಳ ಒಂದು ಕಿರು ಪರೀಕ್ಷೆ ಮತ್ತು 15 ಅಂಕಗಳ ಎರಡು ಚಟುವಟಿಕೆಗಳನ್ನು ನಡೆಸಲಾಗುತ್ತದೆ. ವಿದ್ಯಾರ್ಥಿಯು ನಿರ್ವಹಿಸಬೇಕಾದ ಚಟುವಟಿಕೆಗಳ ಪಟ್ಟಿಯನ್ನು ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ಒದಗಿಸುತ್ತದೆ. ತಮ್ಮ ವಿದ್ಯಾರ್ಥಿಗಳಿಗೆ ಸೂಕ್ತವಾದ ಚಟುವಟಿಕೆಗಳನ್ನು ಶಿಕ್ಷಕರೆ ಈ ಪಟ್ಟಿಯಿಂದ ಆಯ್ದುಕೊಳ್ಳಬಹುದಾಗಿದೆ. ಹೀಗೆ, ಪ್ರಥಮ ಭಾಷೆಯನ್ನು ಹೊರತು ಪಡಿಸಿ ಪ್ರತಿ ವಿಷಯದ ಅಂತರಿಕ ಮೌಲ್ಯಮಾಪನದಲ್ಲಿ ಗಳಿಸಿದ ಅಂಕಗಳ 1/10 ಭಾಗವನ್ನು(ಗರಿಷ್ಠ 20 ಅಂಕಗಳು) ಮತ್ತು ಪ್ರಥಮ ಭಾಷೆಯಲ್ಲಾದರೆ, ಆಂತರಿಕ ಮೌಲ್ಯಮಾಪನದದಲ್ಲಿ ಗಳಿಸಿದ ಅಂಕಗಳ 1/8 ಭಾಗವನ್ನು (ಗರಿಷ್ಠ 25 ಅಂಕಗಳು) ಬಾಹ್ಯ ಮೌಲ್ಯಮಾಪನದ ಅಂಕಗಳೊಂದಿಗೆ ಸಂಯೋಜಿಸಲಾಗುತ್ತದೆ. ಅರ್ಧವಾರ್ಷಿಕ ಪರೀಕ್ಷೆ ಮತ್ತು ಸಿದ್ಧತಾ ಪರೀಕ್ಷೆಗಳು ಆಂತರಿಕ ಮೌಲ್ಯಮಾಪನದಲ್ಲಿ ಸೇರುವುದಿಲ್ಲ.
   ಖಾಸಗಿ ವಿದ್ಯಾರ್ಥಿಗಳು ಮತ್ತು ವಿಶೇಷ ವಿದ್ಯಾರ್ಥಿಗಳಿಗೆ ಬಾಹ್ಯ ಮೌಲ್ಯಮಾಪನವು ಆರು ಪಠ್ಯವಿಷಯಗಳಿಗೆ ಗರಿಷ್ಠ 625 ಅಂಕಗಳಾಗಿರುತ್ತವೆ. ಬಿ ವಿಭಾಗದ ಸಹಪಠ್ಯ ವಿಷಯಗಳ ಮೌಲ್ಯಮಾಪನ ಇರುವುದಿಲ್ಲ.

ಈ ಪದ್ಧತಿ ಎಷ್ಟು ನಿರಂತರ, ಎಷ್ಟು ಸಮಗ್ರ?

  ಶಿಕ್ಷಕರು ಬಳಸುವ ಮೌಲ್ಯಮಾಪನ ತಂತ್ರಗಳು ಮಗುವಿನ ಬಲ ಮತ್ತು ದೌರ್ಬಲ್ಯಗಳಿಗೆ ಸಂವೇದನಾಶೀಲವಾಗಿರಬೇಕು. ಇದರಿಂದ ಮೌಲ್ಯಮಾಪನವು ಮಾನವೀಯಗೊಳ್ಳಬಲ್ಲದು. ಮೌಲ್ಯಮಾಪನ ವಿಧಾನಗಳು ಸ್ಪಷ್ಟ ಮತ್ತು ವಿಶ್ವಾಸಾರ್ಹ ಹಿಮ್ಮಾಹಿತಿಗಳನ್ನು ವಿದ್ಯಾರ್ಥಿಗಳಿಗೂ, ಶಿಕ್ಷಕರಿಗೂ ಒದಗಿಸುವಂತಿರಬೇಕು.  ಜೊತೆಗೆ, ಮೌಲ್ಯಮಾಪನವನ್ನು ಒಂದು ಅರ್ಥಪೂರ್ಣ ತರಗತಿ ಸಂವಹನವಾಗಿಯೂ ಗ್ರಹಿಸುವ ಅವಶ್ಯಕತೆಯಿದೆ. ಪ್ರತಿ ವಿದ್ಯಾರ್ಥಿಯೂ ಭಿನ್ನ ಸಾಮಾಜಿಕ ಮತ್ತು ಕೌಟುಂಬಿಕ ಹಿನ್ನೆಲೆಯನ್ನು ಹೊಂದಿರುತ್ತದೆ. ವಿದ್ಯಾರ್ಥಿಗೆ ದೊರೆಯುವ ಅನುಭವಗಳು ವಿಭಿನ್ನವಾಗಿರುತ್ತವೆ ಮತ್ತು ಅವುಗಳನ್ನು ಗ್ರಹಿಸುವ ರೀತಿ ಪ್ರತಿ ವಿದ್ಯಾರ್ಥಿಗೂ ವಿಶಿಷ್ಟವಾಗಿರುತ್ತದೆ. ಆದುದರಿಂದಲೇ, ಮೌಲ್ಯಮಾಪನವು ವಿದ್ಯಾರ್ಥಿಯ ಅನನ್ಯತೆಯನ್ನು ಗಣನೆಗೆ ತೆಗೆದುಕೊಳ್ಳುವುದು ಅವಶ್ಯಕ.

    ಪಠ್ಯವಿಷಯವೊಂದರ ಕಲಿಕೆಗೆ ಸಂಬಂಧಿಸಿದ ಸಾಧನೆಗಳನ್ನು  ಮಗುವಿನ ಸಹಜ ವರ್ತನೆಗಳಲ್ಲಿ ವಿವಿಧ ಸಾಧನ ಮತ್ತು ತಂತ್ರಗಳ ಸಹಾಯದಿಂದ ಹುಡುಕುವುದೇ  ರೂಪಣಾತ್ಮಕ ಮೌಲ್ಯಮಾಪನ. ರೂಪಣಾತ್ಮಕ ಮೌಲ್ಯಮಾಪನವು ಕಾರ್ಯರೂಪದಲ್ಲಿ ತೀರಾ ಹೊಸದಾದ ಪರಿಕಲ್ಪನೆ. ಇದಕ್ಕೆ ಅಗತ್ಯವಾದ ಸಾಧನಗಳು, ತಂತ್ರಗಳು ಮತ್ತು ಅಳತೆಗೋಲುಗಳನ್ನು ಪ್ರತಿ ವಿದ್ಯಾರ್ಥಿಯ ವಿಶಿಷ್ಠತೆಗಳನ್ನು ಲಕ್ಷಿಸಿಕೊಂಡೇ ರೂಪಿಸಬೇಕಾಗುತ್ತದೆ. ಭಾಷೆಯ ಸೃಜನಶೀಲ ಬಳಕೆಯನ್ನಾಗಲೀ, ಬದುಕಿನ ನಿರ್ಧಾರ ತೆಗೆದುಕೊಳ್ಳುವಾಗ ವಿಜ್ಞಾನದ ವಿಧಾನಗಳನ್ನು ಅನುಸರಿಸುವುದನ್ನಾಗಲೀ, ಅಭಿವ್ಯಕ್ತಿಯಲ್ಲಿ ಗಣಿತವನ್ನು ಪರಿಣಾಮಕಾರಿಯಾಗು ಬಳಸುವುದನ್ನಾಗಲೀ ಅಳೆಯಬೇಕಾದರೆ ಮೌಲ್ಯಮಾಪನವನ್ನು ತರಗತಿ ಸಂವಹನದ ಭಾಗವಾಗಿ ಗ್ರಹಿಸುತ್ತಾ ಶಿಕ್ಷಕಿಯು ಉದ್ಧೇಶಪೂರ್ವಕ ಸಂದರ್ಭಗಳನ್ನು ಕಲಿಕೆಯ ಪರಿಸರದಲ್ಲೇ ಸೃಷ್ಟಿಸಿಕೊಳ್ಳಬೇಕಾಗುತ್ತದೆ. ಶೈಕ್ಷಣಿಕ ಸಾಧನೆಗಳ ಜೊತೆಗೆ, ಮಗುವಿನ ಸಾಮಾಜಿಕ, ಭಾವನಾತ್ಮಕ, ವೈಜ್ಞಾನಿಕ ಕೌಶಲಗಳು ಮತ್ತು ಮೌಲ್ಯ ರೂಪಣೆ ಹಾಗೂ ಮನೋಧೋರಣೆಗಳಲ್ಲಿರುವ ಧನಾತ್ಮಕ ಅಂಶಗಳನ್ನು ಗುರುತಿಸುವ ಮೂಲಕ ಸಮಗ್ರ ವ್ಯಕ್ತಿತ್ವದ ಮೌಲ್ಯಮಾಪನ ನಡೆಯಬೇಕು. ರೂಪಣಾತ್ಮಕ ಮೌಲ್ಯಮಾಪನವು ಪ್ರತಿಫಲನಾತ್ಮಕ ವಿದ್ಯಾರ್ಥಿಯನ್ನೂ, ಪ್ರತಿಫಲನಾತ್ಮಕ ಶಿಕ್ಷಕರನ್ನೂ ರೂಪಿಸಬಲ್ಲದು. ರೂಪಣಾತ್ಮಕ ಮೌಲ್ಯಮಾಪನವು ಕಲಿಕೆಯ ಅವಕಾಶ ಮತ್ತು ಅಭಿಪ್ರೇರಣೆಯನ್ನು ಒದಗಿಸುತ್ತದೆ.

   ಆದರೆ, ಕಲಿಕೆ ಮತ್ತು ಮೌಲ್ಯಮಾಪನಗಳ ನಡುವಿನ ಅಂತರವನ್ನು ಹೋಗಲಾಡಿಸುವ ಪ್ರಯತ್ನವಾಗಿ ಹಿಂದಿನ ತರಗತಿಗಳಲ್ಲಿ ಜಾರಿಗೆ ತಂದಿರುವ ಸಿ.ಸಿ.ಇ ಗೂ ಮತ್ತು  ಈ ಪದ್ಧತಿಗೂ ಸಾಕಷ್ಟು ತಾತ್ವಿಕ ವ್ಯತ್ಯಾಸಗಳಿವೆ. ಈಗ ಹತ್ತನೇ ತರಗತಿಗೆ ಅಳವಡಿಸಲಾದ ಮೌಲ್ಯಮಾಪನ ಪದ್ಧತಿಯು ವರ್ಷಾಂತ್ಯದಲ್ಲಿ ಬರುವ ಬಾಹ್ಯ ಪರೀಕ್ಷೆಗೇ ಹೆಚ್ಚು ಮಹತ್ವ ನೀಡುತ್ತದೆ. ರೂಪಣಾತ್ಮಕ ಮೌಲ್ಯಮಾಪನ ಇರುವುದಾದರೂ ಅವು ನಿಗಧಿತ ಅಂತರದಲ್ಲಿ ನಡೆಯುವ ಕಿರುಪರೀಕ್ಷೆಗಳು ಮತ್ತು ಶಿಕ್ಷಕರೇ ನಿರ್ಧರಿಸುವ ಚಟುವಟಿಕೆಗಳನ್ನು ಒಳಗೊಂಡಿರುತ್ತವೆ. ಆಂತರಿಕ ಮೌಲ್ಯಮಾಪನದ ಕಿರುಪರೀಕ್ಷೆಗಳು ಸಂಕಲನಾತ್ಮಕ ಸ್ವರೂಪದಲ್ಲಿರುವುದರಿಂದ ಮತ್ತು ಚಟುವಟಿಕೆಗಳು ಮೌಲ್ಯಮಾಪನಕ್ಕಾಗಿಯೇ ಹಮ್ಮಿಕೊಳ್ಳುವುದರಿಂದ ಇವುಗಳು ವಿದ್ಯಾರ್ಥಿಗೂ ಶಿಕ್ಷಕರಿಗೂ ಹಿಮ್ಮಾಹಿತಿಯನ್ನೊದಗಿಸುತ್ತಾ ಕಲಿಕೆಯ ಭಾಗವಾಗಿ `ನಿರಂತರ’ಗೊಳ್ಳುವ ಸಾಧ್ಯತೆ ಕಡಿಮೆ. ಹಿಂದಿನ ತರಗತಿಗಳಲ್ಲಿ ದೈಹಿಕ ಶಿಕ್ಷಣ, ಕಲಾ ಶಿಕ್ಷಣ ಮತ್ತು ಕಾರ್ಯ ಶಿಕ್ಷಣಗಳನ್ನು ಪಠ್ಯವಿಷಯಗಳಾಗಿ ಸ್ವೀಕರಿಸಿ ತರಗತಿ ಪ್ರಕ್ರಿಯೆಗಳಲ್ಲಿ ಅವುಗಳ ಮಹತ್ವವನ್ನು ಹೆಚ್ಚಿಸಲಾಗಿದೆ. ಹತ್ತನೇ ತರಗತಿಯಲ್ಲಿ ಮಾತ್ರ ಅವು ಬಿ-ಭಾಗದಲ್ಲಿ ಮುಂಚಿನಂತೆ ಕಡಿಮೆ ಮಹತ್ವದ ವಿಷಯಗಳಾಗಿ ಮುಂದುವರಿಯುತ್ತವೆ.ಅಂದರೆ, ಈ ಹಿಂದಿನಂತೆ ಪಠ್ಯವಿಷಯದ ಶಿಕ್ಷಕರು ತಮಗೆ ಅವಧಿ ಕಡಿಮೆಯಾದಲ್ಲಿ ದೈಹಿಕ ಶಿಕ್ಷಣದ ಅವಧಿಗಳನ್ನೋ, ಕಲಾಶಿಕ್ಷಣದ ಅವಧಿಗಳನ್ನೋ ತೆಗೆದುಕೊಳ್ಳುವ ಪರಿಪಾಠ ಮುಂದುವರಿಯಲಿದೆ. ಈ ಪದ್ಧತಿಯನ್ನು ನಿರಂತರ ಮತ್ತು ವ್ಯಾಪಕ ಮೌಲ್ಯಮಾಪನ ಎಂದು ಕರೆಯಲಾಗಿದ್ದರೂ, ಅಂತಿಮ ಪರೀಕ್ಷೆಯೇ ಮಗುವನ್ನು ಪಾಸೋ ಫೇಲೋ ಎಂದು ನಿರ್ಧರಿಸುವ ಸಾಂಪ್ರದಾಯಿಕ ಪರೀಕ್ಷಾ ಪದ್ಧತಿಯಿಂದ ಈ ಪದ್ಧತಿ ಭಿನ್ನವಾಗಿ ನಿಲ್ಲುವುದಿಲ್ಲ. ಈ ಮಿತಿಗಳಿಗೆ ಎಸ್. ಎಸ್. ಎಲ್. ಸಿ ಯು ಪಬ್ಲಿಕ್ ಪರೀಕ್ಷೆಯಾಗಿರುವುದೇ ಕಾರಣ ಎಂಬುದನ್ನು ಅರ್ಥಮಾಡಿಕೊಳ್ಳಬಹುದು.
  ಕಲಿಕೆಯ ಉತ್ಪನ್ನದೊಡನೆ ಕಲಿಕೆಯ ಪ್ರಕ್ರಿಯೆಯನ್ನೂ ಮೌಲ್ಯಮಾಪನಕ್ಕೊಳಪಡಿಸುವ ಮೌಲ್ಯಮಾಪನ ಪದ್ಧತಿ ಈಗಿನ ಅಗತ್ಯವಾಗಿದೆ. ವಿದ್ಯಾರ್ಥಿಯ ಶೈಕ್ಷಣಿಕ ಸಾಧನೆಗಳ ಜೊತೆಗೆ ಸಾಮಾಜಿಕ ಕೌಶಲಗಳು, ಜೀವನ ಕೌಶಲಗಳು ಮತ್ತು ವೈಜ್ಞಾನಿಕ ಕೌಶಲಗಳನ್ನೂ ಮೌಲ್ಯಮಾಪನದ ತೆಕ್ಕಗೆ ಸೇರಿಸುವ ಮತ್ತು ಪ್ರತಿ ವಿದ್ಯಾರ್ಥಿಯ ಬಲ-ದೌರ್ಬಲ್ಯಗಳಿಗೆ ಸಂವೇದನಾಶೀಲವಾಗಿರುವ ಮಾನವೀಯ ಮೌಲ್ಯಮಾಪನ ಪದ್ಧತಿಯೊಂದರ ಬೀಜಗಳು ಈಗ ಜಾರಿಗೆ ತಂದಿರುವ ಪದ್ಧತಿಯಲ್ಲೇ ಕಾಣಸಿಗುತ್ತಿರುವುದು ಸಮಾಧಾನದ ಸಂಗತಿ.