Saturday, 29 December 2018

ಬೆರಳುಗಳು

ಟ್ರೋಮಾ, ಎಮೆರ್ಜೆನ್ಸಿ, ಕ್ಯಾಸುವಾಲ್ಟಿ ಎಂದು ಬೇರೆ ಬೇರೆ ಬೋರ್ಡಿನಲ್ಲಿ ನೇತುಬಿದ್ದಿರುವ ಪದಗಳು ಒಂದೇ ಅರ್ಥದವೋ ಅಥವಾ ಅವುಗಳ ನಡುವೆ ಅರ್ಥವ್ಯತ್ಯಾಸಗಳು ಇವೆಯೋ ಎಂಬುದನ್ನು ನಿಘಂಟು ನೋಡಿ ತಿಳಿದುಕೊಳ್ಳಬೇಕು ಎಂದು ಹಿಂದೆ ಎಂದೋ ಇಲ್ಲಿಗೆ ಬಂದಾಗ ಅಂದುಕೊಂಡದ್ದು ಮತ್ತೆ ನೆನಪಾಯಿತು. ಈಗ ಆರು ದಿನಗಳಿಂದ ಇವೇ ಬೋರ್ಡುಗಳನ್ನು ಅವಶ್ಯಕತೆ ಇಲ್ಲದೆಯೂ ಓದಿಕೊಳ್ಳುತ್ತಾ, ಅಮ್ಮ ಇರುವ ಐ.ಸಿ.ಯು ಗೆ ಹೋಗಿಬರುತ್ತಿದ್ದೇನೆ. ಎಚ್ಚರವಿರುತ್ತಿದ್ದರೆ ಐ.ಸಿ.ಯು ಎಂದರೆ ಇದಾ ಎಂದು ಅಮ್ಮ ಉದ್ಘಾರ ತೆಗೆಯುತ್ತಿದ್ದರು. ಇಪ್ಪತ್ತು ವರ್ಷಗಳ ಹಿಂದೆ ಇರಬೇಕು, ಈಗ ಕರಡಿ ನಾಗಪ್ಪ ಎಂದು ಕರೆಯಿಸಿಕೊಳ್ಳುವ ಹಳೆಮನೆ ನಾಗಪ್ಪನ ಮೇಲೆ ಕರಡಿಯೊಂದು ದಾಳಿ ಮಾಡಿದ್ದರಿಂದ ಮೈಯೆಲ್ಲ ಗಾಯಗಳಾಗಿ ರಕ್ತಸ್ರಾವದಿಂದ ಬದುಕು-ಸಾವಿನ ನಡುವೆ ಏಗುತ್ತಿರುವ ಸ್ಥಿತಿಯಲ್ಲೇ ಆತನನ್ನು ಇದೇ ಆಸ್ಪತ್ರೆಗೆ ಸೇರಿಸಲಾಗಿತ್ತು. ವಾರದ ನಂತರ ಊರಿಗೆ ಬಂದವರೊಬ್ಬರು ನಾಗಪ್ಪನನ್ನು ಐ.ಸಿ.ಯು ನಲ್ಲಿಟ್ಟಿದ್ದಾರೆಂದು ಹೇಳಿದ್ದನ್ನು ಅಮ್ಮ ಐಸಿನಲ್ಲಿ ಎಂದು ತಪ್ಪಾಗಿ ಕೇಳಿಸಿಕೊಂಡಿರಬೇಕು- ತಪ್ಪಾಗಿ ಏನು, ನಾವು ಕೇಳಿಸಿಕೊಳ್ಳುವುದು ನಮಗೆ ಅರ್ಥವಾಗುವುದನ್ನು ಮಾತ್ರವೇ ಅಲ್ಲವೆ? ಹೆಣ ಕೊಳೆಯಬಾರದು ಎಂದು ನಾಗಪ್ಪನನ್ನು ಐಸಿನಲ್ಲಿಟ್ಟಿದ್ದಾರೆಂದು ಅಮ್ಮ ನನ್ನಲ್ಲಿ ಹೇಳಿದ್ದಲ್ಲದೆ, ಆತನ ಅಕಾಲ ಸಾವಿನ ಬಗ್ಗೆ ತುಂಬಾ ವ್ಯಥೆ ಪಟ್ಟುಕೊಂಡಿದ್ದಳು. ನಾಗಪ್ಪ ಗುಣಮುಖನಾಗಿ ವಾಪಸು ಬಂದಾಗ ನಾನೂ ಅಮ್ಮನ ಮುಖವನ್ನು ಪ್ರಶ್ನಾರ್ಥಕವಾಗಿ ನೋಡಿದ್ದೆ. ಆನಂತರ ಎಷ್ಟೋ ವರ್ಷಗಳ ಬಳಿಕ ನನಗೆ ಅದು ಐ.ಸಿ.ಯು ಆಗಿತ್ತು ಎಂಬುದು ಗೊತ್ತಾಯಿತು. ಅಮ್ಮಗೆ ಗೊತ್ತಾಗಿತ್ತೋ ಇಲ್ಲವೋ?
  ಈಗ ಅಮ್ಮ ಐ.ಸಿ.ಯುನಲ್ಲೇ ಇದ್ದಾಳೆ. ನಾನು ಹೊರಗಿದ್ದೇನೆ. ಯಾವಾಗಲೂ ಮುಚ್ಚಿಕೊಂಡೇ ಇರುವ ಐ.ಸಿ.ಯು ಬಾಗಿಲುಗಳ ಗಾಜಿನ ಕಿಂಡಿಯಿಂದ ಒಳಗಿರುವ ರೋಗಿಗಳನ್ನು ಅವರ ಸಂಬಂಧಿಗಳು ನೋಡುತ್ತಿರುತ್ತಾರೆ. ನಾನೂ ಆಗಾಗ ಅಮ್ಮನನ್ನು ಅದೇ ಕಿಂಡಿಯಿಂದ ನೋಡಿದ್ದೇನೆ. ಪೈಪುಗಳ ಜಾಲದಲ್ಲಿ ಸಿಕ್ಕಿಕೊಂಡು ಹೊರಬರುವ ವಿಫಲ ಪ್ರಯತ್ನ ಮಾಡಿ ಸುಸ್ತು ಹೊಡೆದು ಈಗಷ್ಟೇ ಮಲಗಿರುವಂತೇ ಅಲ್ಲಿನ ರೋಗಿಗಳು ಕಾಣುತ್ತಾರೆ. ಅಮ್ಮನ ಮೂಗಿಗೆ ಜೋಡಿಸಿದ ವೆಂಟಿಲೇಟರ್ ಕೊಳವೆ, ದೇಹಕ್ಕೆಲ್ಲ ಅಂಟಿಕೊಂಡ ಇ.ಸಿ.ಜಿ ಕೊಳವೆಗಳು, ಮೂತ್ರದ ಪೈಪು, ಆಹಾರಕ್ಕೆ ಪೈಪು, ಕೈಗೆ ಚುಚ್ಚಿಕೊಂಡ ಸಲೈನ್ ನಳಿಕೆ ಮತ್ತಿತರ ನಳಿಕೆಗಳನ್ನು ನೋಡಿ ನಾನು ಆಶ್ಚರ್ಯಪಟ್ಟಿದ್ದಿದೆ. ಅಬ್ಬಾ! ಆರೋಗ್ಯ ಸರಿ ಹೋದರೂ ಈ ನಳಿಕೆಗಳಿಂದ ಬಿಡಿಸಿಕೊಂಡು ಹೊರಬರುವುದು ಕಷ್ಟ ಎಂಬಂತಹ ಚಿತ್ರ. ಒಳಗೆ, ರೋಗಿಗಳದು ಒಂದು ಬಗೆಯ ಯಾತನೆಯಾದರೆ, ಇತ್ತ ವೇಟಿಂಗ್ ರೂಮಿನಲ್ಲಿ ದಿನವಿಡೀ ಒಂದೇ ಚಾನೆಲ್ಲಿನ ಸುದ್ದಿ ಕೇಳಿಸಿಕೊಳ್ಳುತ್ತಾ, ಆಗಾಗ ಬರುವ ಆಕಳಿಕೆಯನ್ನೂ, ಕಿರುನಿದ್ದೆಯನ್ನೂ ಮತ್ತು ಚಟ್ಟಂಬಡೆ ಚಹಾವನ್ನೂ ಸವಿಯುವ ಐ.ಸಿ.ಯು ರೋಗಿಗಳ ಸಂಬಂಧಿಕರದು ಇನ್ನೊಂದು ಬಗೆಯ ಯಾತನೆ. ದುಡ್ಡು ಹೊಂದಿಸಿಕೊಳ್ಳುವ ಸ್ವಂತದ ಸಮಸ್ಯೆಯ ನಡುವೆ ಯಾರೋ ಹೇಳಿಕೊಳ್ಳುವ ಕಷ್ಟಗಳು, ಮಲಗುವ ಸ್ಥಳ, ಬಾಥ್ ರೂಮು ಹೀಗೆ ಎಲ್ಲವನ್ನೂ ಹಂಚಿಕೊಳ್ಳಬೇಕು ಅವರು. ಆಗಾಗ ಯಾವ್ಯಾವುದೋ ಒಪ್ಪಿಗೆ ಪತ್ರಗಳಿಗೆ ಸಹಿ ಹಾಕುಲು ಮತ್ತು ಹೇಳಿದಾಗ ಕೌಂಟರಿಗೆ ಹೋಗಿ ದುಡ್ಡು ತುಂಬುವ ಸಲುವಾಗೇ ಸಂಬಂಧಿಗಳನ್ನು ಐ.ಸಿ.ಯು ನ ಹೊರಗೆ ಕಾಯಲು ಹೇಳುತ್ತಾರಿರಬೇಕು ಎಂದು ಕಾಸರಗೋಡಿನಿಂದ ಬಂದ ರಾಜೇಂದ್ರನ್ ಮೊನ್ನೆ ನನ್ನಲ್ಲಿ ಹೇಳಿದ್ದರು. ರಾಜೇಂದ್ರನ್‍ರ ಮಾತನ್ನು ಪೂರ್ತಿಯಾಗಿ ನಂಬದಿದ್ದರೂ ಹೂಂಗುಟ್ಟಿದ್ದೆ. ಈಗ ಅªರು ಸರಿಯಾಗೇ ಗ್ರಹಿಸಿದ್ದಾರೆ ಅನ್ನಿಸುತ್ತಿದೆ. ಬೆಳಿಗ್ಗೆ ಅರ್ಧ ಗಂಟೆ ಮತ್ತು ಸಂಜೆ ಅರ್ಧಗಂಟೆ ಮಾತ್ರ ರೋಗಿಯ ಭೇಟಿಗೆ ಅವಕಾಶ. ಆ ಅರ್ಧಗಂಟೆಯಲ್ಲಿ ಸಂಬಂಧಿಕರ ಪರವಾಗಿ ಗರಿಷ್ಠ ಇಬ್ಬರು ಒಳಹೋಗಬಹುದು. ಒಳಹೋಗಿ ಮಾಡುವುದೇನಿಲ್ಲ- ಮಿಕಿ ಮಿಕಿ ನೋಡುವ ಕಣ್ಣುಗಳನ್ನೇ ಒಂದಷ್ಟು ಹೊತ್ತು ನೋಡಬಹುದಷ್ಟೇ! ಹೀಗಿದ್ದರೂ, ಹೊರಬಂದ ಮೇಲೆ ಮತ್ತೆ ಗಾಜಿನ ಕಿಂಡಿಯಲ್ಲಿ ರೋಗಿಯ ಸಂಬಂಧಿಗಳು ಇಣುಕುತ್ತಿರುತ್ತಾರೆ. ಕಣ್ಣು ಮಾತ್ರ ಕಾಣ ಸುವಂತೆ ಮಾಸ್ಕ್ ಧರಿಸಿರುವ ನರ್ಸ್‍ಗಳು ಆಗೊಮ್ಮೆ ಈಗೊಮ್ಮೆ ಬಾಗಿಲು ತೆರೆದು ಹೊರಬರುವಾಗ ತಮ್ಮನ್ನು ಕರೆಯುತ್ತಾರೇನೋ ಎಂದು ಎಲ್ಲರೂ ಕುತ್ತಿಗೆ ಚಾಚುತ್ತಾರೆ.
 ಹೀಗೆ, ನಾನೂ ಗಾಜಿನ ಕಿಂಡಿಯಲ್ಲಿ ನೋಡಲು ಹೋದಾಗ ಅಲ್ಲಿದ್ದ ಸೆಕ್ಯುರಿಟಿ ಗಾರ್ಡ್ ಏನೋ ಹೇಳಿದಂತೆ ಕೇಳಿತು. ಆ ಕಡೆ ನೋಡಿದೆ. ನಾನು ಕೇಳಿಸಿಕೊಳ್ಳಲಿಲ್ಲವೆಂದು ಗೊತ್ತಾಗಿ ಆತ ಪುನಃ ಹೇಳಿದ-
`ಸರ್, ಒಳ್ಳೆ ಬೀಗ ಯಾವ್ದು? ....ಯಾವ್ದು ಅಂದ್ರೆ ಯಾವ ಕಂಪನೀದು?’
ಇದೇ ಆಸ್ಪತ್ರೆಯ ಬಾಗಿಲಿಗೆ ಬೀಗ ಜಡಿಯುವ ಜೋಕ್ ಮಾಡುತ್ತಿದ್ದಾನೆ ಅಂದ್ಕೊಂಡೆ. ಆದರೆ, ಆತನ ಮುಖ ನೋಡಿದಾಗ ಹಾಗೆನಿಸಲಿಲ್ಲ. ಆತನ ಮುಖದಲ್ಲಿ ಎಂತದ್ದೋ ಆತಂಕವಿತ್ತು. ಬಹಳ ಗಂಭೀರವಾಗೇ ಕೇಳಿದ ಪ್ರಶ್ನೆ ಅದು. ತೀರಾ ತಲೆಕೆಡಿಸಿಕೊಳ್ಳದೆ-
`ಗೊದ್ರೇಜ್ ಅಲ್ವಾ?’
ಅಂತ ಅವನನ್ನೇ ಕೇಳಿದೆ. ಆತನ ಕಿಸೆಯ ಮೇಲೆ ತೂಗು ಹಾಕಿದ ರಾಬರ್ಟ್ ಸಿಕ್ವೇರಾ ಎಂಬ ಹೆಸರು ಪಟ್ಟಿಯನ್ನು ನಾನು ಓದುತ್ತಿರುವುದನ್ನು ಆತ ಗಮನಿಸಿದನೆಂದು ಕಾಣುತ್ತದೆ. ಆ ಪಟ್ಟಿಯನ್ನು ಮುಟ್ಟಿನೋಡಿಕೊಂಡು ಅದು ಸ್ವಸ್ಥಾನದಲ್ಲಿದೆಯೇ ಎಂದು ಖಾತರಿಪಡಿಸಿಕೊಂಡ.
`ಗೊದ್ರೇಜ್ ಏನು ಸರ್, ಎಲ್ಲಾ ಆಯ್ತು...ಯೇಲೆ, ಅಲ್ಟೀ, ವಿಲ್ಸನ್.. ಯಾವುದೂ ಬಿಡಲಿಲ್ಲ.. ಏನೂ ಪ್ರಯೋಜನ ಆಗಲಿಲ್ಲ. ಅಲ್ಲೆಲ್ಲೋ ಹೊನ್ನಾವರದಲ್ಲಿ ಮಾವಿನಕುರ್ವೆ ಬೀಗ ಸಿಕ್ತದಂತೆ, ಅದೊಂದು ನೋಡಿಲ್ಲ.’
ಆರಂಭದ ಕೆಲ ಪುಟಗಳು ಕಿತ್ತುಹೋಗಿರುವ ಪತ್ತೆದಾರಿ ಕಾದಂಬರಿಯನ್ನು ಓದುತ್ತಿರುವಂತೆ ಅನ್ನಿಸಿತು. ವಿಸ್ಮಯ ಲೋಕದ ಬಾಗಿಲು ಪಕ್ಕನೆ ತೆರೆದು ನನ್ನೆದುರು ಕೌತುಕಗಳ ಮೂಟೆಯೇ ಬಿದ್ದಂತಾಯಿತು. ಮಿಕಿ ಮಿಕಿ ಕಣ್ಣು ಬಿಟ್ಟುಕೊಂಡು ಆ ಸೆಕ್ಯುರಿಟಿ ಗಾರ್ಡಿನತ್ತ ಬಾಯಿ ತೆರೆದು ನಿಂತೆ. ಯಾವ ಬೀಗ ಹಾಕಿದರೂ ತೆರೆವ ಕಳ್ಳರು ಯಾರಿರಬಹುದು? ಇವನ ಮಾತನ್ನು ಕೇಳಿದರೆ ಧನ-ಕನಕ ಮನೆಯಲ್ಲಿ ಕಾಲು ಮುರಿದು ಬಿದ್ದಹಾಗಿತ್ತು.
`ಪೋಲಿಸ್‍ರಿಗೆ ದೂರು ನೀಡಲಿಲ್ವಾ?’ ಎಂದು ಕೇಳಿದೆ.
ಗಾರ್ಡ್ ಇನ್ನಷ್ಟು ಹತ್ತಿರ ಬಂದ. ಅತ್ಯಂತ ಮುಖ್ಯ ಮತ್ತು ಗುಟ್ಟಿನ ಸಂಗತಿಯೊಂದನ್ನು ಹೇಳಲು ಬೇಕಾದ ಎಲ್ಲ ಪೂರ್ವಸಿದ್ಧತೆಗಳನ್ನು ಮಾಡಿಕೊಳ್ಳತೊಡಗಿದ. ಎರಡು ಬಾರಿ ಕೆಮ್ಮಿದ. ಆಚೀಚೆ ನೋಡಿಕೊಂಡ. ಸ್ವಲ್ಪ ಬಾಗಿ ಆರಂಭಿಸಿದ-
`ಕಳ್ಳರಾದ್ರೆ ಪೋಲೀಸರಿಗೆ ದೂರು ಕೊಡಬಹುದಿತ್ತು...ಇದು ಹಾಗಲ್ಲ, ಸ್ವಂತ ತಮ್ಮನ ಹೆಂಡತಿ..’
ಮಾತು ಬಹಳಷ್ಟು ಮುಂದುವರಿಯುವ ಎಲ್ಲ ಸೂಚನೆಗಳೂ ನನಗೆ ಗೋಚರವಾಗತೊಡಗಿದವು. ಈಗಲೇ ತಪ್ಪಿಸಿಕೊಳ್ಳು ತಮ್ಮಾ ಎಂದು ನನ್ನೊಳಗಿಂದಲೇ ದನಿ ಬಂದ ಹಾಗೆನಿಸಿ-
`ಡಾಕ್ಟ್ರು ರೌಂಡ್ಸಿಗೆ ಎಷ್ಟೊತ್ತಿಗೆ ಬರ್ತಾರೆ?’ ಕೊನೇ ಪ್ರಶ್ನೆ ಎಂಬಂತೆ ಕೇಳಿದೆ.
`ಸರ್, ಅವರು ಇಷ್ಟೇ ಸಮಯಕ್ಕೆ ಬರ್ತಾರೆ ಎಂದು ಹೇಳುವುದು ಕಷ್ಟ. ದಿನವೂ ಒಂದೇ ಸಮಯಕ್ಕೆ ರೌಂಡ್ಸ್ ಆರಂಭಿಸುತ್ತಾರೆ. ನಾಲ್ಕು ಐ.ಸಿ.ಯು ಮುಗಿಸಿಕೊಂಡು ಇಲ್ಲಿಗೆ ಬರುವಾಗ ಏರುಪೇರಾಗುತ್ತದೆ.’
ಇಷ್ಟು ಹೇಳಿದವನೇ ಮೆಲ್ಲಗೆ ಮತ್ತೆರಡುಬಾರಿ ಕೆಮ್ಮಿದ. ಮತ್ತೆ ಶುರುಹಚ್ಚಿಕೊಂಡ-
`ಸ್ವಂತ ತಮ್ಮನ ಹೆಂಡತಿ ಸರ್..’
ಹಿಂದಿನ ದಿನದ ಕೊನೆಯ ಭಾಗದಿಂದಲೇ ಮುಂದುವರಿಯುವ ಧಾರಾವಾಹಿಗಳ ಹಾಗೆ, ಸಶೇಷವಾಗಿದ್ದ ತನ್ನ ಕತೆಯನ್ನು ಸ್ವಲ್ಪ ಹಿಂದಿನಿಂದಲೇ ಎತ್ತಿಕೊಂಡ.
`ಎಂತಾ ಬೀಗ ಹಾಕಿದ್ರೂ ತೆಗಿತಾಳೆ. ನಂಬರ್ ಬೀಗ ಹಾಕಿ ನೋಡಿದೆ. ಅದನ್ನೂ ಅವಳು ಪತ್ತೆ ಹಚ್ಚಿಬಿಡ್ತಾಳೆ. ಬೀಗದ ಕಂಪನಿಯವರು ಕೊಡುವ ಮೂರೂ ಬೀಗದ ಕೈಗಳನ್ನೂ ನನ್ನ ಬನಿಯನ್ನು ಕಿಸೆಯಲ್ಲಿಟ್ಟುಕೊಂಡು ಬರುತ್ತೇನೆ.’ ಎಂದು ಹೇಳಿ ತನ್ನ ಶರ್ಟಿನ ಎರಡು ಗುಂಡಿ ಬಿಚ್ಚಿ ಬನಿಯನ್ ಕಿಸೆಯೊಳಗೆ ಕೈತೂರಿಸಿ ಬೀಗದ ಕೈಯನ್ನು ಕಾಣ ಸಿದ. ಸ್ವಚ್ಚ ಯುನಿಫಾರ್ಮಿನ ಒಳಗಿರುವ ಬನಿಯನ್ನು ಹಿಂದೊಮ್ಮೆ ಬಿಳಿ ಬಣ್ಣದಾಗಿತ್ತೆಂದು ಊಹಿಸಬಹುದಿತ್ತು!
`ಆದ್ರೂ ಅವಳು ಡುಪ್ಲಿಕೇಟ್ ಬೀಗ ಮಾಡಿಸ್ಕೋತಾಳೆ..’
ಈತನ ಕತೆ ತೀರ ಅತಿಶಯದ್ದು ಅಂತ ಅನ್ನಿಸಿದ್ರೂ ಕೆಲವು ಮಿಸ್ಸಿಂಗ್ ಲಿಂಕ್‍ಗಳು ನನ್ನ ತಲೆ ಕೊರೆಯಲು ಆರಂಭಿಸಿದ್ದವು. ಕೇಳಿದರೆ ಕತೆ ಮತ್ತಷ್ಟು ಮುಂದುವರಿಯುವ ಭಯ ಇದ್ದುದರಿಂದ ಹೇಗೋ ತಡೆದುಕೊಂಡಿದ್ದೆ.
`ಮೊನ್ನೆ ನೋಡಿ.. ಮೂವತ್ತೆರಡು ತೆಂಗಿನ ಕಾಯಿಗಳನ್ನು ಜಗಲಿ ಮೇಲೆ ಜೋಡಿಸಿದ್ದೆ. ಹೇಗೆ ಜೋಡಿಸಿದ್ದೆ ಅಂದರೆ, ತೆಗೆಯುವುದಾದರೆ ಮೇಲಿನ ಕಾಯಿ ತೆಗೆಯಬೇಕು. ಬೇರೆ ಎಲ್ಲಿಯ ಕಾಯಿ ತೆಗೆದರೂ ಪೂರ್ತಿ ರಾಶಿಯೇ ಉರುಳಬೇಕು..ಹಾಗೆ. ನಿನ್ನೆ ಡ್ಯೂಟಿ ಮುಗಿಸಿ ಮನೆಗೆ ಹೋಗುತ್ತೇನೆ..ಕಾಯಿಗಳೆಲ್ಲ ಜಗುಲಿ ತುಂಬಾ ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ಎಣ ಸಿ ನೋಡಿದೆ, ಇಪ್ಪತೊಂಬತ್ತೇ!... ಏನು ಹೇಳ್ತೀರಿ ಇದಕ್ಕೆ?’
ಇವನ ಕತೆ ಹಾಳಾಗ್ಲಿ. ಎಂಥ ಬೀಗ ಜಡಿದರೂ ತೆಗೆವ ನಟವರಲಾಲನಂತಹ ಇವನ ತಮ್ಮನ ಹೆಂಡತಿ ಬರೇ ಮೂರು ತೆಂಗಿನಕಾಯಿಗಾಗಿ ಮಾಡುವ ಸಾಹಸ ನಂಬುವಂತದ್ದೆ? ಅದಿರಲಿ, ಇವನ ಮನೆ ಸದಾ ಬೀಗಮುದ್ರೆಯಲ್ಲಿ ಇರುವುದಾದರೂ ಯಾವ ಕಾರಣದಿಂದ? ಮನೆಯಲ್ಲಿ ಒಬ್ಬರೇ ಇರುವ ಪರಿಸ್ಥಿತಿ ಯಾಕೆ ಬಂದಿದೆ ಈ ಮನುಷ್ಯನಿಗೆ? ವಯಸ್ಸು ಅರವತ್ತರ ಆಸುಪಾಸಿನಲ್ಲಿದ್ದರೂ ಈತ ಏಕಾಂಗಿಯಾದದ್ದು ಹೇಗೆ? ಹೀಗೆಲ್ಲ ನನ್ನ ತಲೆಯಲ್ಲಿ ಪ್ರಶ್ನೆಗಳು ಬರುವ ಹಾಗೆ ಕತೆ ಹೆಣ ದಿದ್ದಾನೆ ಘಾಟಿ ಮನುಷ್ಯ, ಅವುಗಳಿಗೆ ಉತ್ತರ ಪಡೆಯುವುದು ತೀರಾ ಜರೂರು ಎಂಬಂತಹ ಸಂಕಟದ ಸ್ಥಿತಿ ನಿರ್ಮಿಸಿದ್ದಾನೆ.
`ಮನೆಯಲ್ಲಿ ಇನ್ಯಾರೂ ಇಲ್ಲವಾ?’ ಕೇಳಿದೆ.
`ಅಮ್ಮ ಇದ್ದಾರೆ. ವಯಸ್ಸಾಗಿದೆ. ಕಣ್ಣು ಸರಿ ತೋರುವುದಿಲ್ಲ..ಕಿವಿಯಂತೂ ಕೇಳುವುದೇ ಇಲ್ಲ. ಯಾರಾದ್ರೂ ಬಂದಿದ್ರಾ ಅಂತ ದಿನಾ ಕೇಳ್ತೇನೆ.. ಯಾರೂ ಬರ್ಲಿಲ್ಲ ಎಂದು ಬಾರದೇ ಇದ್ದದ್ದೇ ತಪ್ಪು ಎಂಬ ಹಾಗೆ ಹೇಳ್ತಾರೆ’ ಅಂದ.
`ಅಲ್ಲ... ಯಾರೂ ಬರಬಾರದು ಅಂತಲೇ ನೀವು ಬೀಗ ಹಾಕುವುದಲ್ಲ? ಮತ್ಯಾಕೆ ಬರ್ತಾರೆ?’ ಅಂದೆ. ಆತನ ಇದುವರೆಗಿನ ಕತೆಯನ್ನು ಅಲ್ಲಗಳೆಯುವವನಂತೆ. ನಂತರ, ವಾಸ್ತವವೇ ಕೆಲವೊಮ್ಮೆ ಫ್ಯಾಂಟಸಿಯ ಕತೆಗಳಿಂತ ನಂಬಲಸಾಧ್ಯವಾಗಿರುತ್ತದೆ ಎಂದು ಅನ್ನಿಸಿತು. ನೀವು ಹೇಳುತ್ತಿರುವುದೆಲ್ಲ ಸುಳ್ಳು ಎಂದು ಅವನ ಮುಖದ ಮೇಲೆ ಹೊಡೆದಂತೆ ಹೇಳುವುದು ಸರಿಯಲ್ಲವೆಂದು ಭಾವಿಸಿ, ಎಲ್ಲಾದರೂ ಮಾತು ನಿಲ್ಲಿಸುವ ನಿಲ್ದಾಣದಂತಹ ಜಾಗ ಹುಡುಕುತ್ತಾ ಹೇಳಿದೆ-
`ನಿಮ್ಮ ತಮ್ಮನ ಮೂಲಕವೇ ಆಕೆಗೆ ಬುದ್ಧಿಹೇಳಿಸುವುದು ಬಿಟ್ಟು ಬೇರೇನು ಮಾಡಲು ಸಾಧ್ಯ? ಎಷ್ಟೆಂದರೂ ತಮ್ಮನಲ್ಲವೆ?..ಹೇಳಿ ನೋಡಿ’ ಎಂಬ ಪರಿಹಾರವನ್ನು ನೀಡಿ, ಮಾತುಕತೆ ಮುಗಿದ ಹಾಗೆಯೇ ಅಂದುಕೊಂಡÀು ಡಾಕ್ಟರ್ ಬರುವ ದಾರಿಂiÀiತ್ತ ನೋಡತೊಡಗಿದೆ.
`ತಮ್ಮ ಇದ್ದಿದ್ರೆ ಬೇರೆ ಮಾತು ಸರ್. ಅವನು ಸತ್ತು ಆರು ವರ್ಷಗಳಾದವು. ಅಮ್ಮಗೆ ಆ ಮೊಮ್ಮಕ್ಕಳಂದರೆ ಪ್ರೀತಿ. ಅಮ್ಮಗೆ ಬೇಜಾರಾಗುವುದು ನನಗೂ ಬೇಕಿಲ್ಲ.. ಅದ್ಕೇ ಸಹಿಸಿಕೊಂಡಿದ್ದೇನೆ...’
`ಮತ್ತೆ, ನಿಮ್ಮ ಮಕ್ಕಳು ಎಲ್ಲಿರತಾರೆ?’
`ಅದು ದೊಡ್ಡ ಕತೆ ಸರ್’ ಎಂದು ದೀರ್ಘ ಉಸಿರು ಎಳೆದುಕೊಂಡ. `ನನ್ನ ಹೆಂಡತಿ ನನ್ನ ಜೊತೆ ಇಲ್ಲ.. ತವರು ಮನೆಲಿದ್ದಾಳೆ. ಒಬ್ಬಳೇ ಮಗಳು. ಅವಳೂ ಅಲ್ಲೇ ಇದ್ದಾಳೆ. ನನಗೂ ಅವರಿಗೂ ಸಂಪರ್ಕ ಇಲ್ಲ’
ಮತ್ತೊಮ್ಮೆ ಉಸಿರೆಳೆದುಕೊಂಡು- `ಅವರಿಗೆ ನಾನು ಬೇಕು, ಅಮ್ಮ ಬೇಡ. ನನಗೆ ಅಮ್ಮ ಬೇಕು..ಇನ್ಯಾರೂ ಇಲ್ಲದಿದ್ದರೂ ಅಡ್ಡಿಯಿಲ್ಲ...’ ಎಂದು ಸ್ವಗತವೆಂಬಂತೆ ಹೇಳಿಕೊಂಡ.
ಅಷ್ಟೊತ್ತಿಗೆ ನರ್ಸ್ ಬಾಗಿಲ ಬಳಿ ಬಂದು ನನ್ನಮ್ಮನ ಹೆಸರು ಹೇಳಿ ಕೂಗಿದಳು. ಇದು ಆಸ್ಪತ್ರೆಯ ರೂಢಿ; ರೋಗಿಯ ಸಂಬಂಧಿಕರು ಬೇಕಾದಾಗ ರೋಗಿಯ ಹೆಸರನ್ನೇ ಹೇಳಿ ಕೂಗುತ್ತಾರೆ. ಒಳಗೆ ಹಾಸಿಗೆಯ ಮೇಲೆ ಮಲಗಿರುವ ರೋಗಿಗಳು ತಮ್ಮ ಹೆಸರನ್ನು ಕರೆಯುವಾಗ ಹೇಗೆ ಪ್ರತಿಕ್ರಿಯಿಸುತ್ತಾರೋ ಎಂಬ ಸಣ್ಣ ಆತಂಕ ಹೀಗೆ ಕೂಗುವಾಗೆಲ್ಲ ನನ್ನನ್ನು ಕಾಡುತ್ತದೆ. ಅಮ್ಮನ ಹೆಸರಿಗೆ ನಾನು ಓಗೊಟ್ಟೆ-  `ಇಲ್ಲಿದ್ದೇನೆÀÉ’ ಎಂದೆ. ಯಾವುದೋ ಪರೀಕ್ಷೆಯ ಮೊದಲು ಒಪ್ಪಿಗೆ ಪತ್ರ ತುಂಬಿಸಬೇಕಿತ್ತು.
_______________________

ಸಿಕ್ವೇರಾ ಎಂಬ ಸೆಕ್ಯುರಿಟಿ ಗಾರ್ಡ್ ರಾತ್ರಿಯವರೆಗೂ ಯಾಕೆ ಕಾಡಿದ ಎಂಬುದು ನನಗೂ ಗೊತ್ತಾಗಲಿಲ್ಲ. ನಿದ್ದೆ ಎಲ್ಲವನ್ನೂ ತೊಳೆದು ಹೊಸ ಬೆಳಗನ್ನು ನೀಡಿತು. ಎದ್ದವನೇ ಐ.ಸಿ.ಯುನ ಬಾಗಿಲವರೆಗೆ ಹೋಗಿ ಬಂದೆ. ಏಳು ಗಂಟೆಗೆ ಒಳಹೋಗಲು ಬಿಡುತ್ತಾರೆ. ಅರ್ಧ ಗಂಟೆಯ ಅವಧಿಯಲ್ಲಿ ಗರಿಷ್ಟ ಇಬ್ಬರು ಬಂಧುಗಳು ನೋಡಿ ಬರಬಹುದು. ನಾನೊಬ್ಬನೇ ಇರುವುದರಿಂದ ಪೂರ್ತಿ ಅರ್ಧಗಂಟೆ ನನಗೊಬ್ಬನಿಗೇ! ಆದರೆ, ಒಳಹೋಗಿ ಮಾಡುವುದೇನಿದೆ? ಅಮ್ಮ ಮಾತನಾಡುವುದಿಲ್ಲವಲ್ಲ?!   
ಅಮ್ಮ ಕೊನೆಯ ಬಾರಿ ಪದಗಳನ್ನು ಉಚ್ಚರಿಸಿದ್ದು ಮನೆಯಲ್ಲೇ! ಅಂಬುಲೆನ್ಸ್ ಏರುವ ಸ್ವಲ್ಪ ಮೊದಲು. ಬಾಲು ಎಂದು ಕ್ಷೀಣ ಧ್ವನಿಯಲ್ಲಿ ಅಣ್ಣನನ್ನು ಕರೆದದ್ದು ನನಗೆ ಕೇಳಿಸಿತ್ತ್ತು. ಅಮ್ಮ ಏನಂತಿದ್ದಾಳೆ ಎಂದು ಪ್ರಶ್ನಿಸುವವಳಂತೆ ಮಂದಾಕಿನಿ ನನ್ನ ಮುಖ ನೋಡಿದ್ದಳು. ನನಗೇನೂ ಅರ್ಥವಾಗಿಲ್ಲ ಎಂಬಂತೆ ಭುಜ ಎತ್ತರಿಸಿ ಸನ್ನೆಮಾಡಿದ್ದೆ. ಮಂದಾಕಿನಿಗೆ ನಿಜಕ್ಕೂ ಕೇಳಿಸಲಿಲ್ಲವೋ ಅಥವಾ ಆಕೆ ಕೇಳಿಸದ ಹಾಗೆ ಮಾಡಿದಳೋ?! ಎರಡುವರ್ಷಗಳ ಹಿಂದೆ ಗಣೇಶನಹಬ್ಬಕ್ಕೆ ಅಣ್ಣ ಊರಿಗೆ ಬಂದಾಗ ಮಂದಾಕಿನಿಯ ಬಗ್ಗೆ ಅಮ್ಮ ಏನೋ ದೂರಿದ್ದಳಿರಬೇಕು, ಬೆಂಗಳೂರಿಗೆ ಹೊರಟು ನಿಂತಾಗ ಅಣ್ಣ ಹೇಳಿದ್ದ `ಒಬ್ಬಳು ಕೆಲಸದವಳನ್ನು ಹುಡುಕು, ನಾನೇ ಅವಳ ಸಂಬಳ ಕೊಡುವೆ.. ಮಂದಾಕಿನಿಗೂ ಕಷ್ಟ.. ಆಯಾಸ ಆದಾಗ ಸಿಟ್ಟು ಬರುವುದು ಸಹಜ.. ವಯಸ್ಸಾದವರಿಗೆ ತಾವು ಹೊರೆಯಾಗಿದ್ದೇವೆ ಅಂತನ್ನಿಸಬಾರದು ಅಲ್ವಾ?’ ಎಂದಿದ್ದ. ಅದಕ್ಕೆ ಮಂದಾಕಿನಿ `ಎರಡು ದಿನ ನೋಡಿದರೆ ಏನೂ ಗೊತ್ತಾಗುವುದಿಲ್ಲ ಭಾವಾ.. ಒಂದು ತಿಂಗಳು ಅತ್ತೆಯನ್ನು ನಿಮ್ಮ ಮನೆಯಲ್ಲಿ ಇಟ್ಟುಕೊಳ್ಳಿ... ನಿಮಗೇ ತಿಳಿಯುತ್ತದೆ’ ಎಂದಿದ್ದಳು. ಹೋಗುವ ಕ್ಷಣದಲ್ಲಿ ಅಣ್ಣಗೆ ಈ ರೀತಿ ಮಂದಾಕಿನಿ ಉತ್ತರ ಕೊಟ್ಟದ್ದು ನನಗೆ ಹಿಡಿಸಿರಲಿಲ್ಲ. ಎರಡು ದಿನ ನಮ್ಮಿಬ್ಬರ ನಡುವೆ ಮಾತುಕತೆ ನಡೆದಿರಲಿಲ್ಲ.
  ಆ ನಂತರ ನಾನೂ ಅಣ್ಣನೊಡನೆ ಅನೇಕ ಬಾರಿ ಫೋನು ಮಾಡಿ ಮಾತಾಡಿದ್ದಿದೆ. ಮಂದಾಕಿನಿಯೂ ಅತ್ತಿಗೆಯೊಡನೆ ಗಂಟೆಗಟ್ಟಲೆ ಹರಟಿದ್ದೂ ಇದೆ. ಅತ್ತಿಗೆ ಹೇಳಿಕೊಟ್ಟ ಯಾವ್ಯಾವುದೋ ಅಡಿಗೆಯನ್ನು ನನ್ನ ಮೇಲೆ ಪ್ರಯೋಗಿಸಿ ದೊರೆತ ಅಪ್ರಾಮಾಣ ಕ ಅಭಿಪ್ರಾಯವನ್ನು ನಿಜದ ಫಲಿತಾಂಶ ಎಂದು ತಿಳಿದು, ಅದನ್ನು ಅತ್ತಿಗೆಗೆ ಫೋನು ಮಾಡಿ ಮಂದಾಕಿನಿ `ಸೂಪರ್ ಇದೆ ‘ ಅಂದಿದ್ದೂ ಇದೆ. ಆದರೂ, ಮಂದಾಕಿನಿಯ ಎದೆಯ ಗಾಯ ಆರಲಿಲ್ಲ ಎಂಬುದು ಆಗಾಗ ಅನುಭವಕ್ಕೆ ಬರುತ್ತಿತ್ತು.  ಸೆಲ್ಫಿ ವಿಥ್ ಅಮ್ಮಾ ಎಂಬ ಶೀರ್ಷಿಕೆಯೊಂದಿಗೆ ಅಮ್ಮನೊಂದಿಗಿನ ತನ್ನ ಚಿತ್ರವನ್ನು ಅಣ್ಣ ತನ್ನ ಫೇಸ್‍ಬುಕ್ ಗೋಡೆಗೆ ನೇತುಹಾಕಿದ್ದನ್ನು ಮಂದಾಕಿನಿ ಕಾಣ ಸಿದ್ದಳು. ಅವಳ ಮುಖದಲ್ಲಿ ಎದ್ದು ತೋರುತ್ತಿದ್ದ ವ್ಯಂಗ್ಯವನ್ನು ಅರ್ಥಮಾಡಿಕೊಳ್ಳಲಾರದಷ್ಟು ಪೆದ್ದನಂತೆ ನಟಿಸುವುದು ನನಗೆ ಅಭ್ಯಾಸವಾಗಿತ್ತು. ಮೂರು ತಿಂಗಳ ಹಿಂದಷ್ಟೇ ಅಮ್ಮ ಮೊಮ್ಮಕ್ಕಳನ್ನು ನೋಡಬೇಕೆನಿಸಿದೆ ಎಂದು ಹಟಮಾಡಿದ್ದರಿಂದ ಅವಳನ್ನು ಬೆಂಗಳೂರಿನ ಅಣ್ಣನ ಮನೆಗೆ ಬಿಟ್ಟುಬಂದಿದ್ದೆ. ನಾಲ್ಕೇ ದಿನಗಳÀಲ್ಲಿ ಅಮ್ಮನ ವಾಪಸು ಕರೆದುಕೊಂಡು ಅಣ್ಣ ಊರಿಗೆ ಬಂದಿದ್ದ. `ಎಷ್ಟು ಹೇಳಿದ್ರೂ ಅಮ್ಮ ಉಳಿಯಲು ಒಪ್ಪುತ್ತಿಲ್ಲ. ಅಲ್ಲಿನ ಹವೆಯೇ ಒಗ್ಗುತ್ತಿಲ’್ಲ ಅಂತಿದ್ದಾಳೆ ಎನ್ನುವಾಗ ಅಲ್ಲೇ ಇದ್ದ ಅಮ್ಮ ಏನೂ ಮಾತಾಡಿರಲಿಲ್ಲ. ಒಳಗೆ ಚಹಾ ಮಾಡುತ್ತಿದ್ದ ಮಂದಾಕಿನಿ `ಅದೆಂತಾ ಹವೆಯಪ್ಪಾ ನಿಮ್ಮ ಬೆಂಗಳೂರಿನದು’ ಎಂದು ಹೇಳಿದ್ದರಲ್ಲಿ ಇಣಕುತ್ತಿದ್ದ ವ್ಯಂಗ್ಯ ಅಣ್ಣನಿಗೆ ಗೊತ್ತಾಗಿಬಿಡಬಹುದೋ ಎಂದು ನಾನು ಚಡಪಡಿಸುತ್ತಿರುವಾಗ ಮಂದಾಕಿನಿಗೆ ತನ್ನ ಮಾತಿನ ವ್ಯಂಗ್ಯ ಅಣ್ಣನನ್ನು ತಲುಪಿಲ್ಲವೇನೋ ಎನಿಸಿರಬೇಕು-ಅಡುಗೆಮನೆಯಲ್ಲಿ ಲೋಟವೊಂದು ಉರುಳಿ ಟಣ್ ಟಣ್ ಎಂದು ರಿಂಗಣ ಸುತ್ತಾ ನಿಧಾನವಾಗಿ ಮನೆಯ ತುಂಬಾ ಮೌನವನ್ನು ಹರಡಿತ್ತು.
 ಸ್ನಾನ ಮುಗಿಸಿ, ಆಸ್ಪತ್ರೆಯ ಕ್ಯಾಂಟೀನಿನಲ್ಲಿ ಇಡ್ಲಿ ತಿಂದು ಬರುವಷ್ಟರಲ್ಲಿ ಆರೂ ಮುಕ್ಕಾಲಾಯಿತು. ಅಷ್ಟರಲ್ಲೇ ಸಿಕ್ವೇರಾ ತನ್ನ ಹಗಲು ಡ್ಯೂಟಿಗೆ ಆಗಮಿಸಿದ್ದ. ಮುಂಜಾನೆ ಆರು ಗಂಟೆಯಿಂದ ಮದ್ಯಾಹ್ನದ ಎರಡು ಗಂಟೆಯವರೆಗೆ ಸಿಕ್ವೇರಾನ ಹಗಲು ಡ್ಯೂಟಿ. ಎಷ್ಟೋ ವರ್ಷಗಳ ಪರಿಚಯದ ಹಾಗೆ ಎದುರು ಸಿಕ್ಕಿದ್ದಕ್ಕೆ ಒಂದು ನಗು ಬೀರಿದ ಸಿಕ್ವೇರಾ. `ಎಷ್ಟು ದೂರವಾಗುತ್ತದೆ ಇಲ್ಲಿಂದ ನಿಮ್ಮನೆ?’ ಎಂದು ಕೇಳಿದೆ; ಆತನ ಮುಗಳ್ನಗುವಿನ ಸಾಲ ತೀರಿಸುವವನಂತೆ. `ಹತ್ತಿರ ಸಾರ್, ಸರಳೇಬೆಟ್ಟು ಅಂತ, ಇಲ್ಲೇ ಚರ್ಚಿನ ಹತ್ತಿರ... ನಮ್ಮಪ್ಪ ಬಹಳ ಫೇಮಸ್ ಆಗಿದ್ರು.. ಸಿಕ್ವೇರಾ ನಾಯ್ಕರ ಮನೆ ಎಂದ್ರೆ ಅಲ್ಲಿ ಎಲ್ಲರಿಗೂ ಗೊತ್ತು’ ಅಂದ. `ಏನ್ ಮಾಡೋದು ನಮ್ ಕತೆ ಹೀಗೆ.. ಕಾಯೋದು... ಒಳಗಿರೋ ಪೇಷಂಟ್‍ಗಳು ಓಡಿ ಹೋಗ್ತಾರಾ?’ ಎಂದು ನನ್ನನ್ನೇ ಪ್ರಶ್ನಿಸಿ ವಿಷಾದದ ನಗು ಬೀರಿದ.
  ಅಟೆಂಡೆಂಟ್ಸ್ ಪಾಸನ್ನು ಸಿಕ್ವೇರಾನ ಕೈಯಲ್ಲಿ ಕೊಟ್ಟು ಒಳಹೋದೆ. ಪಕ್ಕದ ಬೆಡ್ಡಿನಲ್ಲೂ ಕಳೆದ ಮೂರು ದಿನಗಳಿಂದ ಅದೇ ಪೇಷಂಟ್ ಇದ್ದರು. ಇನ್ನುಳಿದ ಬೆಡ್‍ಗಳಲ್ಲಿ ರೋಗಿಗಳು ಬದಲಾಗಿರುವರು ಎಂಬುದು ಅಲ್ಲಿರುವ ಅವರ ಸಂಬಂಧಿಕರನ್ನು ನೋಡಿದಾಗ ತಿಳಿಯಿತು. ಐ.ಸಿ.ಯು ಬೆಡ್ಡಿನಲ್ಲಿರುವ ರೋಗಿಗಳು ಬದಲಾಗುವುದೆಂದರೆ ಅವರು ಹುಷಾರಾದರು ಅಂತಲ್ಲ. ನಿನ್ನೆ ಒಬ್ಬ ರೋಗಿ ತನ್ನ ಸಂಬಂಧಿಕರಲ್ಲಿ ಇಲ್ಲಿನ ನರ್ಸುಗಳ ಬಗ್ಗೆ ದೂರು ಹೇಳುತ್ತಿದ್ದ. ಇಲ್ಲಿ ಮತ್ತೂ ಕೆಲವು ದಿನ ಇಟ್ಟರೆ ತನ್ನನ್ನು ಕೊಂದೇ ಬಿಡುವರೆಂದು ಹೇಳುತ್ತಿದ್ದ. ಹಿರಿಯ ನರ್ಸೊಬ್ಬಳು ಆ ರೋಗಿಯ ಸಂಬಂಧಿಯನ್ನು ಹತ್ತಿರ ಕರೆದು ಐ.ಸಿ.ಯುನಲ್ಲಿ ಪ್ರಜ್ಞೆಯಲ್ಲಿರುವ ರೋಗಿಗಳಲ್ಲಿ ಈ ರೀತಿಯ ವರ್ತನೆ ಸಾಮಾನ್ಯ. ಇದು ಆಲ್ಟರ್ಡ್ ವರ್ತನೆ, ನಿಜವಾದದ್ದಲ್ಲ ಎಂದಿದ್ದರು. ಐ.ಸಿ.ಯುನಲ್ಲಿರುವವರಿಗೆ ಪ್ರಜ್ಞೆ ಇರುವುದೇ ತಪ್ಪು ಎಂಬಂತಿತ್ತು ಅವರ ಮಾತಿನ ದಾಟಿ. ಅಮ್ಮನ ಪಕ್ಕದ ಬೆಢ್ಡಿನಲ್ಲಿರುವ ವೃದ್ಧೆಯನ್ನು ನೋಡಲು ಎಂದಿನಂತೆ ಅವರ ಮಗಳು ಬಂದಿದ್ದರು. ಅವರ ಹೆಸರು ಸರೋಜಾ. ಕೊಂಕಣ  ಮಾತನಾಡುವವರು. ದಿನವೂ ಏಳುಗಂಟೆಗೆ ಒಳಬಂದು ಅಮ್ಮಾ ಅಮ್ಮಾ ಎಂದು ಕರೆಯುತ್ತಾರೆ. `ಅಮ್ಮಾ.. ಅಮ್ಮಾ..ಹಾಂವು..ಸರೋಜಾ..’ ಎನ್ನುತ್ತಾ ಅಲ್ಲಿ ಅವರು ಇರುವ ಆ ಅರ್ಧಗಂಟೆಯೂ ಕರೆಯುತ್ತಿರುತ್ತಾರೆ. ಈವತ್ತೂ ಹಾಗೆಯೇ ಕರೆಯುತ್ತಾ ಚಲನೆಯೇ ಇಲ್ಲದ ತನ್ನಮ್ಮನನ್ನು ಎಬ್ಬಿಸಲು ಪ್ರಯತ್ನಿಸುತ್ತಿದ್ದ ಸರೋಜಾ ಏನೋ ಪವಾಡವೇ ನಡೆದಷ್ಟು ಆಶ್ಚರ್ಯ ಖುಷಿಯನ್ನೆಲ್ಲ ಒಟ್ಟೊಟ್ಟಿಗೆ ಸೇರಿಸಿ ` ಅಣ್ಣಾ.. ಇಲ್ನೋಡಿ’ ಎಂದರು. ನಾನು ತಿರುಗಿದೆ. `ಇಲ್ನೋಡಿ.. ನಾನು ಅಮ್ಮಾ ಎಂದಾಗ ಅಮ್ಮ ಹೇಗೆ ಬೆರಳು ಅಲ್ಲಾಡಿಸಿದರು.. ನೋಡಿ ಅಣ್ಣಾ’ ಎಂದರು. ಬೆರಳುಗಳ ಚಲನೆಯೂ ಒಮ್ಮೊಮ್ಮೆ ಭಾಷೆಯಷ್ಟೇ ಸಶಕ್ತ ಸಂವಹನವಾಗಬಹುದಲ್ಲ ಎಂದು ಅಂದುಕೊಳ್ಳುತ್ತಾ ಆಕೆ ತೋರಿಸಿದ ಬೆರಳುಗಳನ್ನು ನೋಡಿದೆ. ಅವು ಮಾಮೂಲಿನಂತೆ ನಿಶ್ಚಲವಾಗಿದ್ದವು. `ಈಗಷ್ಟೇ ಬೆರಳುಗಳನ್ನು ಅಲ್ಲಾಡಿಸಿದ್ದರು..’ ಎಂದು ನನಗೆ ತೋರಿಸಲಾರದ್ದಕ್ಕೆ ವ್ಯಥೆÉಪಡುತ್ತಾ ಮತ್ತೆ `ಅಮ್ಮಾ ಅಮ್ಮಾ .. ಎಂದು ಕರೆಯಲು ಆರಂಭಿಸಿದರು. ಬೆರಳುಗಳು ನಿಶ್ಚಲವಾಗೇ ಇದ್ದವು. ನನ್ನ ಅನುಕಂಪದ ಕಣ್ಣುಗಳು ಸರೊಜಾರಿಗೆ ಕಾಣದ ಹಾಗೆ ಮುಖ ತಿರುಗಿಸಿ ನನ್ನಮ್ಮನ ಕಡೆ ತಿರುಗಿದೆ. ನನಗೂ ತಿಳಿಯದಂತೆ ನನ್ನ ಕಣ್ಣುಗಳು ಅಮ್ಮನ ಕೈಬೆರಳುಗಳ ಕಡೆ ಚಲಿಸಿದವು.
_________________________________
ಅರ್ಧ ಗಂಟೆಯ ಸಂದರ್ಶನದ ಅವಧಿ ಮುಗಿಸಿ ಹೊರಬಂದು ಸಿಕ್ವೇರಾನಲ್ಲಿ ಕಾರ್ಡು ಪಡೆದುಕೊಂಡೆ.
`ಈವತ್ತು ಡಾಕ್ಟರುಗಳಿಗೆ ರಜೆ ಸರ್, ಸ್ಕ್ಯಾನಿಂಗು, ರಕ್ತ, ಮಲ-ಮೂತ್ರ ಪರೀಕ್ಷೆಗಳೂ ಇರೋದಿಲ್ಲ... ನೀವು ಎಲ್ಲಿಗಾದರೂ ಹೋಗುವುದಿದ್ರೆ ಹೋಗಿ ಬರಬಹುದು’ ಎಂದ.
ಎಲ್ಲಿಗೆ ಹೋಗಬೇಕೆಂಬುದು ಗೊತ್ತಿರದಿದ್ದರೂ `ಹೌದಲ್ಲ’ ಎಂದೆ.
`ಒಂದು ವೇಳೆ ಯಾವುದೋ ಕಾರಣಕ್ಕೆ ಒಳಗಿಂದ ಕರೆ ಬಂದರೆ ಏನು ಮಾಡುವುದು ಸಿಕ್ವೇರಾರವರೆ?’
`ದೂರ ಹೋಗೋದಿಲ್ವಲ್ಲ.. ನಿಮ್ಮ ನಂಬರ್ ಕೊಡಿ, ನಾನು ಫೋನು ಮಾಡುವೆ.. ಅರ್ಧಗಂಟೆಯೊಳಗೆ ವಾಪಸು ಬರುವಷ್ಟೇ ದೂರ ಹೋಗಿ’
ನಂಬರು ಕೊಟ್ಟೆ. ಸರಿಯಾಗಿದೆಯೇ ಎಂದು ಪರೀಕ್ಷಿಸುವ ಸಲುವಾಗಿ ಕರೆ ಮಾಡಲು ತಿಳಿಸಿದೆ. ಸಿಕ್ವೇರಾನ ನಂಬರÀನ್ನು ನನ್ನ ಮೊಬೈಲಲ್ಲಿ ಸೇವ್ ಮಡಿಕೊಂಡು ಅಸ್ಪತ್ರೆಯಿಂದ ಹೊರ ನಡೆದೆ. ಆಸ್ಪÀತ್ರೆಯಿಂದ ಹೊರಹೋಗಬೇಕೆಂಬುದೇ ಸದ್ಯದ ಗುರಿಯಾಗಿತ್ತೇ ಹೊರತು ಎಲ್ಲಿಗೆ ಹೋಗುವುದೆಂಬುದು ನಿಗಧಿಯಾಗಿರಲಿಲ್ಲ. ರಿಕ್ಷಾದವನನ್ನು ಕರೆದೆ. ಸರಳೇಬೆಟ್ಟು ಚರ್ಚಿನ ಹತ್ತಿರ ಸಿಕ್ವೇರಾ ನಾಯ್ಕರ ಮನೆ ಅಂದೆ. `ಚರ್ಚಿನ ಹತ್ತಿರ ಬಿಡತ್ತೇನೆ.. ಮತ್ತೆ ನಾಯ್ಕರ ಮನೆಗೆ ಕೇಳಿಕೊಂಡು ಹೋಗಿ..’ ಎಂದ ರಿಕ್ಷಾದವ-ತುಳು ಭಾಷಿಕರ ರಾಗದ ಕನ್ನಡದಲ್ಲಿ.
ಚರ್ಚಿನ ಹತ್ತಿರ ಇಳಿದು ಸಿಕ್ವೇರಾ ನಾಯ್ಕರ ಮನೆ ಎಲ್ಲಿಯೆಂದು ವಿಚಾರಿಸಿದೆ. ` ಅಲ್ಲಿ ಕಾಣೊದೇ ನಾಯ್ಕರ ಮನೆ’ ಎಂದು ದಾರಿಹೋಕನೊಬ್ಬ ಹೇಳಿದಾಗ ಖುಷಿಯಾಯಿತು. ಹಾಗೆ ಹೇಳಿದವನೇ, `ಇದ್ದಾರೆ ಅನ್ನಲಿಕ್ಕೆ ಅಲ್ಲಿ ಅಮ್ಮ ಇದ್ದಾರೆ..’ ಎಂದ.
ರಾಬರ್ಟ್ ಸಿಕ್ವೇರಾ ಹೇಳಿದ ಹಾಗೆಯೇ ಮನೆಯ ಮುಂಬಾಗಿಲಿಗೆ ದೊಡ್ಡದೊಂದು ಬೀಗ ನೇತು ಬಿದ್ದಿತ್ತು. ಹತ್ತಿರದಲ್ಲೆಲ್ಲೂ ಮನುಷ್ಯರ ಸುಳಿವೇ ಇರಲಿಲ್ಲ. ಮನೆ ಹಳೆಯದಾದರೂ ಸಿಕ್ವೇರಾ ನಾಯ್ಕರು ಈ ಊರಿನ ದೊಡ್ಡ ಜನವೇ ಆಗಿದ್ದರು ಎಂಬುದರ ಕುರುಹಾಗಿ ದೊಡ್ಡ ಅಂಗಳ, ವಿಶಾಲ ಜಗುಲಿ, ಹೊರಗಡೆ ಕುಳಿತುಕೊಳ್ಳಲು ಕಟ್ಟೆ ಕಂಡವು. ಮನೆಗೆ ತಾಗಿಕೊಂಡೇ ಇದ್ದ ಬಾವಿಯನ್ನು ಬಳಸಿಕೊಂಡು ಹಾಗೇ ಮನೆಯ ಹಿಂಬದಿಗೆ ಬಂದೆ. ಮನುಷ್ಯರ ಓಡಾಟದ ಸದ್ದು ಕೇಳಿಸಿತು. ಅಲ್ಲೇ ನಿಂತೆ. ಹಿಂಬಾಗಿಲು ತೆರೆಯಿತು. ಹುಡುಗನೊಬ್ಬ ಎರಡು ತೆಂಗಿನಕಾಯಿಗಳನ್ನು ಎದೆಗೆ ಅವುಚಿಕೊಂಡು ಮನೆಯಿಂದ ಹೊರಬರುತ್ತಿದ್ದ. ಅವನ ಹಿಂದೆಯೇ ಅಜ್ಜಿ ಬಾಗಿಲವರೆಗೂ ಬಂದು ಏನನ್ನೋ ಹೇಳಿ ಬೀಳ್ಕೊಟ್ಟರು. ಆಕೆಯ ನಡಿಗೆಯನ್ನು ಗಮನಿಸಿದೆ- ನಡಿಗೆಯಲ್ಲೂ ಅವರ ವಯಸ್ಸು ಕಾಣುತಿತ್ತು. ಕಣ್ಣೇ ಕಾಣದವರ ನಡಿಗೆಯ ಹಾಗಿರಲಿಲ್ಲ ಎಂದು ಮರುಗಳಿಗೆಯಲ್ಲೇ ಅನ್ನಿಸಿತು. ಕೊಂಕಣ  ಭಾಷೆಯಲ್ಲಿ ಅವರಾಡಿದ ಮಾತು ಅರ್ಥವಾಗಲಿಲ್ಲ. ಆ ಹುಡುಗ ಭಗ್ನಾವಸ್ಥೆಯಲ್ಲಿರುವ ಕಂಪೌಂಡು ಗೋಡೆಯನ್ನು ಹತ್ತಿಳಿದು ಹಿತ್ತಿಲಲ್ಲಿ ಮರೆಯಾದ.
ಅಷ್ಟರಲ್ಲೇ ಫೋನ್ ರಿಂಗಾಯಿತು. ನರ್ಸ್ ಕರೆದಿರಬಹುದು, ಯಾವುದೋ ಫಾರ್ಮಿಗೆ ಸಹಿ ಬೇಕೇನೋ ಎಂದುಕೊಂಡು ಫೋನ್ ತೆಗೆದೆ. ಆದರದು ಸಿಕ್ವೇರಾನ ಕರೆಯಾಗಿರಲಿಲ್ಲ-ಬಾಲುಅಣ್ಣನ ಫೋನು. ಆಸ್ಪತ್ರೆಗೆ ಬಂದ ಮೇಲೆ ಒಮ್ಮೆಯೂ ಫೋನ್ ಮಾಡಿ ಅಮ್ಮನ ಬಗ್ಗೆ ವಿಚಾರಿಸದಿದ್ದ ಬಾಲುಅಣ್ಣನಿಗೆ ಈಗ ಪುರುಸೊತ್ತಾಗಿರಬೇಕು ಎಂದು ಒಳಗೇ ಕೋಪಿಸಿಕೊಂಡು ಅನೈಚ್ಛಿಕವಾಗಿ ತಲೆಕೊಡವಿದೆ. ಅಣ್ಣ ನೇರ ಆಸ್ಪತ್ರೆಗೇ ಬಂದಿರಬಹುದೇ ಎಂಬ ಅನುಮಾನ ಬಂತು. ಅಮ್ಮನ ಬಿಟ್ಟು ಬೇರೆ ಎಲ್ಲಿಗೋ ಹೋಗಿರುವೆನೆಂದರೆ ಏನೆಂದುಕೊಂಡಾನು? ಕರೆ ಸ್ವೀಕರಿಸಲಿಲ್ಲ. ಇಲ್ಲೇ ಎಲ್ಲೋ ಕ್ಯಾಂಟೀನಿಗೆ ಹೋಗಿದ್ದೆ ಎಂದು ಹೇಳಿದರಾಯಿತು ಎಂಬ ಲೆಕ್ಕಾಚಾರದಲ್ಲಿ ಮೊಬೈಲ್ ಫೋನನ್ನು ಕಿಸೆಗೆ ತುರುಕಿದೆ.
ಅಷ್ಟರಲ್ಲಿ ಏನೋ ಯೋಚನೆ ಬಂತು; ಅಣ್ಣ ಆಸ್ಪತ್ರೆಗೆ ಬಂದಿದ್ದೇ ಆದರೆ, ಈಗಾಗಲೇ ನರ್ಸ್ ಬಳಿ ವಿನಂತಿಸಿಕೊಂಡು ಐ.ಸಿ.ಯು ಒಳಗೆ ಹೋಗಿರುತ್ತಾನೆ. ಒಳಗೆ ಹೋದ ಅಣ್ಣ ಮಂಚದ ಬಳಿ ನಿಂತು ಹಣೆಯನ್ನು ನೇವರಿಸುತ್ತಾ `ಅಮ್ಮಾ’ ಎಂದು ಕರೆದಿರುತ್ತಾನೆ. ಇದುವರೆಗೂ ನಿಶ್ಚಲವಾಗಿದ್ದ ಅಮ್ಮ ತನ್ನ ಕೈಬೆರಳುಗಳನ್ನು ಮೆಲ್ಲನೆ ಆಡಿಸುತ್ತಾಳೆ..
ಮತ್ತೊಮ್ಮೆ ಫೋನ್ ರಿಂಗಣ ಸಿದ್ದರಿಂದ ಯೋಚನೆಗಳ ಸರಣ  ತುಂಡಾಯಿತು. ಅಣ್ಣನೇ ಮತ್ತೊಮ್ಮೆ ಮಾಡಿರಬಹುದೆಂದು ಫೋನ್ ತೆಗೆದೆ. ಈ ಬಾರಿಯೂ ನನ್ನ ಎಣ ಕೆ ತಪ್ಪಾಗಿತ್ತು. ಅದು ಅಣ್ಣನ ಫೋನ್ ಆಗಿರಲಿಲ್ಲ. ಸಿಕ್ವೇರಾ ಕರೆ ಮಾಡಿದ್ದ. ಯಾಕೆ ಮಾಡಿರಬಹುದು? ಫಾರ್ಮಿಗೆ ಸಹಿಮಾಡಲಿಕ್ಕೋ ಅಥವಾ ಬೇರೆ ಕಾರಣವಿರಬಹುದೋ? ಯಾಕೋ ಹೊಟ್ಟೆಯೊಳಗಿಂದ ಚಳಿ ಬಂದಂತೆನಿತು. ಎಲ್ಲ ಧೈರ್ಯವನ್ನು ಒಟ್ಟುಗೂಡಿಸಿ ಫೋನ್ ಎತ್ತಿ `ಹಲೋ’ ಎಂದೆ.
`ಅಲ್ಲೆಲ್ಲಾದರೂ ಒಳ್ಳೆಯ ಬೀಗ ಸಿಕ್ಕಿದರೆ ತನ್ನಿ ಸರ್’ ಎಂದ.
*********************************
ಉದಯ ಗಾಂವಕಾರ

Wednesday, 4 April 2018

ಅವರು ಕ್ರಿಕೆಟ್ ಬಾಲನ್ನೇಕೆ ಹಾಗೆ ಉಜ್ಜುತ್ತಾರೆ?


ಕ್ರಿಕೆಟ್ ಆಟಗಾರರು ಏಕೆ ಬಾಲಿನ ರೂಪಗೆಡಿಸುತ್ತಾರೆ? ವೇಗದ ಬೌಲರುಗಳು ಏಕೆ ಬಾಲನ್ನು ತಮ್ಮ ಟ್ರೌಸರಿಗೆ ಉಜ್ಜಿಕೊಳ್ಳುತ್ತಾರೆ? ಇಂತಹ ಪ್ರಶ್ನೆಗಳು ಕ್ರಿಕೆಟ್ ಅಭಿಮಾನಿಗಳ ತಲೆಯನ್ನೂ ಕೊರೆಯುತ್ತವೆ. ಮೊನ್ನೆ, ಆಸ್ಟ್ರೇಲಿಯಾದ ಕ್ರಿಕೆಟಿಗ ಕ್ಯಾಮರೂನ್ ಬ್ಯಾಂಕ್ರಾಪ್ಟ್ ಕಿಸೆಯಲ್ಲಿ ಗುಟ್ಟಾಗಿ ಅಡಗಿಸಿಟ್ಟ ಹಳದಿ ಬಣ್ಣದ ಪಟ್ಟಿಯಿಂದ ಬಾಲನ್ನು ಉಜ್ಜುತ್ತಿದ್ದ ದೃಶ್ಯವನ್ನು ಕ್ಯಾಮರಾ ಸೆರೆ ಹಿಡಿಯಿತು. ನಂತರದ ಸಂಗತಿ ನಿಮಗೆ ಗೊತ್ತೇ ಇದೆ- ನಾಯಕ ಸ್ಮಿಥ್, ಉಪನಾಯಕ ವಾರ್ನರ್, ಕೋಚ್ ಲೆಹಮನ್ ತಮ್ಮ ಸ್ಥಾನ ತೊರೆಯಬೇಕಾಯಿತು. ಅವರು ಮಾಡಿದ ಒಳ್ಳೆಯ ಕೆಲಸ ಅಂದರೆ, ತಮ್ಮ ತಪ್ಪನ್ನು ಒಪ್ಪಿಕೊಂಡದ್ದು; ಮಾಡಿದ ತಪ್ಪಿಗೆ ಸಾರ್ವಜನಿಕವಾಗಿ ಪಶ್ಚಾತ್ತಾಪ ಪಟ್ಟಿದ್ದು. ಹಿಂದೆಲ್ಲ ಇದೇ ತಪ್ಪು ಮಾಡಿ, ಮುನ್ನೂರಕ್ಕೂ ಹೆಚ್ಚು ಟೆಸ್ಟ್ ವಿಕೆಟ್ಟುಗಳನ್ನು ಪಡೆದು ಕ್ರಿಕೆಟ್ ಲೋಕದ ದಂತಕತೆಯಾದವರಿದ್ದಾರೆ. ಆಗ, ಹೀಗೆ ಮೈದಾನದ ಸುತ್ತ ಮತ್ತು ಮೈದಾನದ ಮೇಲೆ ಒಟ್ಟೂ ಮೂವತ್ತು ಹದ್ದಿನ ಕಣ್ಣಿನ ಕ್ಯಾಮರಾಗಳು ಆಟಗಾರರ ಪ್ರತಿ ಚಲನೆಯನ್ನೂ ಸೆರೆ ಹಿಡಿಯಲು ಕಾದು ಕುಳಿತಿರುತ್ತಿರಲಿಲ್ಲ.

      ವೇಗದ ಬೌಲರುಗಳು ಕ್ರಿಕೆಟ್ ಲೋಕದ ವಿಲಕ್ಷಣ ಪ್ರಬೇಧದಂತೆ ಭಾಸವಾದರೆ ಅದರಲ್ಲಿ ಆಶ್ಚರ್ಯಪಡುವಂತಹದ್ದೇನಿಲ್ಲ. ಡೆನಿಸ್ ಲಿಲ್ಲಿ, ಜೆಫ್ ಥಾಮ್ಸನ್, ರಾಬಟ್ರ್ಸ್, ಮಾಲ್ಕಂ ಮಾರ್ಷಲ್, ರಿಚರ್ಡ್ ಹ್ಯಾಡ್ಲೀ, ಇಮ್ರಾನ್ ಖಾನ್, ಡೋನಾಲ್ಡರಿಂದ ಹಿಡಿದು ವಾಸಿಮ್ ಅಕ್ರಮ್, ಅಂಬ್ರೋಸ್, ವಕಾರ್ ಯೂನಿಸ್, ಬ್ರೆಟ್ಲೀ, ಮೆಕ್‍ಗ್ರಾಥ್, ಡೇಲ್ ಸ್ಟೇಯ್ನ್, ಜಹೀರ್ ಖಾನ್, ಶೋಯಬ್ ಅಕ್ತರ್, ಉಮೇಶ್ ಯಾದವ್‍ವರೆಗೆ ಯಾವುದೇ ಪಕ್ಕಾ ವೇಗದ ಬೌಲರನ್ನು ಗಮನಿಸಿದರೆ ಮೇಲಿನ ಮಾತಿಗೆ ಮತ್ತೆ ಸಮರ್ಥನೆ ಬೇಕಿಲ್ಲ. ಒಮ್ಮೆ ಆಸ್ಟ್ರೇಲಿಯಾದ ಥಾಮ್ಸನ್ ಭಾರತದ ಸುನಿಲ್ ಗಾವಸ್ಕರರವರಿಗೆ ಬೌಲಿಂಗ್ ಮಾಡುತ್ತಿದ್ದರು. ಥಾಮ್ಸನ್ ಓಡಿಬರಲು ಆರಂಭಿಸುತ್ತಿದ್ದಂತೆಯೇ ಗಾವಸ್ಕರ್ ಕ್ರೀಸ್‍ನಿಂದ ಹೊರ ಹೋಗುತ್ತಿದ್ದರು. ಎರಡು ಮೂರು ಬಾರಿ ಗಾವಸ್ಕರ್ ಹೀಗೆಯೇ ಮಾಡಿದಾಗ ಸೈಟ್ ಸ್ಕ್ರೀನಿನದೇ ಸಮಸ್ಯೆ ಇರಬಹುದು ಎಂದು ಭಾವಿಸಿದ ಅಂಪೈರ್, ಸೈಟ್ ಸ್ಕ್ರೀನಿನ ಸ್ಥಾನವನ್ನು ಬದಲಿಸಬೇಕೇ ಎಂದು ಕೇಳಿದರು. ಅದಕ್ಕೆ ಗಾವಸ್ಕರ್- ``ಹೌದು, ನನ್ನ ಮತ್ತು ಥಾಮ್ಸನ್ನರ ನಡುವೆ ಸೈಟ್ ಸ್ಕ್ರೀನ್ ಹಾಕಿಬಿಡಿ’’ ಎಂದಿದ್ದರು.
    ಅಷ್ಟೊಂದು ದೂರದಿಂದ ಓಡಿಬರುವ ರೀತಿಯಾಗಲಿ, ಬ್ಯಾಟ್ಸ್‍ಮನ್‍ಗಳ ಕಡೆ ಆಗಾಗ ಕೆಂಗಣ್ಣು ಬಿಡುವುದಾಗಲಿ ಎಲ್ಲವೂ ವಿಲಕ್ಷಣ. ವೇಗದ ಬೌಲರುಗಳ ಇನ್ನೊಂದು `ವಿಚಿತ್ರ' ಸ್ವಭಾವ ಏನೆಂದರೆ, ಕೈಗೆ ಕ್ರಿಕೆಟ್ ಚೆಂಡು ಸಿಕ್ಕಿತೆಂದರೆ ತಮ್ಮ ಪ್ಯಾಂಟಿಗೆ ಗಸಗಸ ಎಂದು ತಿಕ್ಕಿಕೊಳ್ಳುವುದು. ಉಜ್ಜುತ್ತಾ, ಉಜ್ಜತ್ತಾ ಮತ್ತು ಆಗಾಗ ಅದನ್ನು ನೋಡಿಕೊಳ್ಳುತ್ತಾ, ಎಂಜಲನ್ನು ಚೆಂಡಿಗೆ ಸವರುತ್ತಾ ತಮ್ಮ `ರನ್‍ಅಪ್'ನ ಆರಂಭದ ಕಡೆ ನಡೆಯುವ ದೃಶ್ಯ ಸಾಮಾನ್ಯ. ಎಷ್ಟು ಸಾಮಾನ್ಯವೆಂದರೆ ಇದನ್ನು ಟಿ.ವಿಯಲ್ಲಿ ನೋಡಿದ ಚಿಣ್ಣರು ತಮ್ಮ ಬೀದಿ ಕ್ರಿಕೆಟ್ಟಿನಲ್ಲಿ ಟೆನಿಸ್ ಬಾಲಿನಲ್ಲಿ ಬೌಲಿಂಗ್ ಮಾಡುವಾಗ ಕೂಡಾ ಒಂದು ಅವಶ್ಯಕ ವಿಧಿಯಂತೆ ಈ ಕ್ರಿಯೆಯನ್ನು ಅನುಕರಿಸುತ್ತಾರೆ. ಕಾಲೇಜು ಹಂತದಲ್ಲಿ ಕ್ರಿಕೆಟ್ ಆಡುವವರು ತಮ್ಮ ಬಿಳಿ ಪ್ಯಾಂಟಿನ ಮೇಲೆ ಚೆಂಡಿನ ಕೆಂಪು ಮಚ್ಚೆಗಳು ಮೂಡಿದೆಯೆಂದರೆ ತಾನೊಬ್ಬ ಮಹಾನ್ ವೇಗದ ಬೌಲರ್ ಎಂದು ಹೆಮ್ಮೆ ಪಟ್ಟುಕೊಳ್ಳುತ್ತಾರೆ!
ಬೌಲರನ ಕೈಯಿಂದ ಹೊರಟ ಚೆಂಡು ಬ್ಯಾಟ್ಸ್‍ಮನ್‍ನ ಕಡೆ ಗಾಳಿಯಲ್ಲಿ ಕ್ರಮಿಸುತ್ತಿರುವಾಗಲೇ ಅದಕ್ಕೊಂದು ವಕ್ರ ಪಥ ಪ್ರಾಪ್ತಿಯಾದರೆ ಅದನ್ನು ಸ್ವಿಂಗ್ ಎನ್ನುತ್ತಾರೆ. ಇದು ಕುಶಲ ವೇಗದ ಬೌಲರುಗಳಿಗೆ ಸಿದ್ಧಿಸಿರುವ ಕಲೆ. ಈ ಕಲೆಗಾರಿಕೆಯ ಹಿಂದೆ ವಿಜ್ಞಾನವಿದೆ. ಗಾಳಿಯಲ್ಲಿ ವಸ್ತುಗಳ ಚಲನೆಯು ಅನೇಕ ಅಂಶಗಳನ್ನು ಅವಲಂಭಿಸಿದೆ. ಭೂಮಿಯ ಗುರುತ್ವ, ವಸ್ತುವಿಗೆ ನೀಡಿದ ಪ್ರಾರಂಭಿಕ ವೇಗ, ವಾತಾವರಣದಲ್ಲಿನ ಆರ್ದೃತೆ ಇತ್ಯಾದಿ ಇತ್ಯಾದಿ. ವಸ್ತುವಿನ ಆಕಾರ ಮತ್ತು ಅದನ್ನು ಎಸೆದ ಕ್ರಮವೂ ಆ ವಸ್ತುವಿನ ಗತಿಯನ್ನು ನಿರ್ಧರಿಸುತ್ತದೆ. ಐದೂವರೆ ಔನ್ಸ್ ತೂಕದ ಕ್ರಿಕೆಟ್ ಬಾಲಿನ ಒಳಗೆ ಗಟ್ಟಿಯಾದ ಕಾರ್ಕ್ ಇರುತ್ತದೆ. ಅದರ ಸುತ್ತಲೂ ಚರ್ಮದ ಹೊದಿಕೆ. ಚರ್ಮದ ಹೊದಿಕೆಯ ಎರಡು ಅರ್ಧಗೋಳಗಳನ್ನು ಈ ಕಾರ್ಕಿನ ಮೇಲೆ ಜೋಡಿಸಿ ಹೊಲಿದ ರೇಖೆಯನ್ನು ಸೀಮ್ ಎನ್ನುತ್ತಾರೆ. ಪ್ರತಿ ಅರ್ಧಗೋಳವೂ ಎರಡು ಕಾಲು ಭಾಗಗಳ ಜೋಡಣೆಯಾಗಿದೆ. ಈ ಎರಡು ಕಾಲುಭಾಗಗಳನ್ನು ಒಳಗಡೆಯಿಂದ ಹೊಲಿದಿರುತ್ತಾರೆ. ಈ ಜೋಡಣೆ ಹೊರಗಿಂದ ಎದ್ದುಕಾಣುವುದಿಲ್ಲ. ಮುಖ್ಯ ಸೀಮ್‍ಗೆ ಲಂಭವಾಗಿರುವ ಈ ಗೆರೆಗೆ ಕ್ವಾರ್ಟರ್‍ಸೀಮ್ ಎನ್ನುತ್ತಾರೆ. ವೇಗದ ಬೌಲರುಗಳು ಮುಖ್ಯಸೀಮ್ ಗೆರೆಯಗುಂಟ ಬೆರಳುಗಳನ್ನು ಹಿಡಿದು ಚೆಂಡನ್ನು ಎಸೆಯುತ್ತಾರೆ. ಬೌಲರನ ಕೈಯಿಂದ ಹೊರಟ ಚೆಂಡನ್ನು ಗುರುತಿಸಿದ ಬ್ಯಾಟ್ಸ್‍ಮನ್ ಚೆಂಡು ಸರಳರೇಖೆಯಲ್ಲಿ ಚಲಿಸುವುದೆಂದು ನಿರೀಕ್ಷಿಸಿ ಬ್ಯಾಟ್ ಬೀಸಿದರೆ ಅದು ಬ್ಯಾಟನ್ನು ತಪ್ಪಿಸಿಕೊಂಡು ವಿಕೆಟ್ಟಿಗೆ ತಗಲುತ್ತದೆ ಅಥವಾ ಬ್ಯಾಟಿನ ಅಂಚನ್ನು ಸ್ಪರ್ಶಿಸಿ ಸ್ಲಿಪ್‍ನಲ್ಲಿರುವ ಫೀಲ್ಡರ್ ಕೈಸೇರುತ್ತದೆ. ವೇಗದ ಬೌಲಿಂಗನಲ್ಲಿ ಚೆಂಡಿಗೆ ಪ್ರಾಪ್ತವಾಗುವ ಈ ವಕ್ರಪಥವೇ ಸ್ವಿಂಗ್. ಸಾಂಪ್ರದಾಯಿಕ ಸ್ವಿಂಗ್ ಬೌಲರ್ ಚೆಂಡನ್ನು ಯಾವ ಕಡೆ ಸ್ವಿಂಗ್ ಮಾಡಬಹುದೆಂದು ಊಹಿಸಲು ಬ್ಯಾಟ್ಸಮನ್ ಗಳು ಬೌಲರ್‍ ಚೆಂಡಿನ ಹಿಡಿತ, ಎಸೆಯುವ ಭಂಗಿ, ಮಣಿಕಟ್ಟಿನ ಚಲನೆಗಳನ್ನು ಸೂಕ್ಷ್ಮವಾಗಿ ಅವಲೋಕಿಸುತ್ತಾರೆ. ಸಾಧ್ಯವಾದರೆ, ಚೆಂಡಿನ ನುಣುಪು ಭಾಗ ಯಾವ ಕಡೆ ಇದೆ, ಸೀಮ್ ಯಾವ ಕಡೆ ನಿರ್ದೇಶಿತವಾಗಿದೆ ಎನ್ನುವುದನ್ನೂ ನೋಡುತ್ತಾರೆ. ಇವೆಲ್ಲದರ ಆಧಾರದ ಮೇಲೆ ತನ್ನತ್ತ ಬರುತ್ತಿರುವ ಚೆಂಡು ಔಟ್ ಸ್ವಿಂಗ್ ಆಗಬಹುದೋ ಇನ್‍ಸ್ವಿಂಗ್ ಆಗಬಹುದೋ ಎಂದು ಅಂದಾಜಿಸುತ್ತಾರೆ ಮತ್ತು ತಕ್ಕಂತೆ ಬ್ಯಾಟ್ ಬೀಸುತ್ತಾರೆ. ಚೆಂಡಿನ ಸೀಮ್ ಎತ್ತ ಕಡೆ ಬೊಟ್ಟುಮಾಡಿರುತ್ತದೋ ಅದೇ ಕಡೆ ಬಾಲ್ ಸ್ವಿಂಗ್ ಆಗುತ್ತದೆ. ಸ್ವಿಂಗ್ ಮಾಡುವ ಕಲೆಯ ಹಿಂದೆ ಹೇಗೆ ವಿಜ್ಞಾನ ಅಡಗಿದೆಯೋ ಹಾಗೆ ಸ್ವಿಂಗ್‍ನ್ನು ಅಂದಾಜಿಸುವುದೂ ವಿಜ್ಞಾನವೇ! ರಾಕೆಟ್ ಸೈನ್ಸ್ ಕೆಲವರಿಗಾದರೂ ಅರ್ಥವಾಗಿದೆ, ಕ್ರಿಕೆಟ್ ಸೈನ್ಸ್ ಅರ್ಥಮಾಡಿಕೊಳ್ಳುವುದು ಕಷ್ಟ.
   ಗಾಳಿಯನ್ನು ಸೀಳಿಕೊಂಡು ಕ್ರಮಿಸುವ ಚೆಂಡಿನ ಮೇಲ್ಮೈಗುಂಟ ತೆಳುವಾದ ಗಾಳಿಯ ಪೊರೆಯೂ ವಿರುದ್ಧ ದಿಕ್ಕಿನಲ್ಲಿ ಚಲಿಸುತ್ತದೆ. ಈ ಪೊರೆ ಯಾವ ಬಿಂದುವಿನಲ್ಲಿ ಚೆಂಡನಿಂದ ಬೇರೆಯಾಗುತ್ತದೆ ಎಂಬುದು ಬಹಳ ಮುಖ್ಯ. ಇದು ಚೆಂಡಿನ ಸ್ವಿಂಗನ್ನು ನಿರ್ಧರಿಸುತ್ತದೆ. ಚೆಂಡಿನ ಎಡ ಮತ್ತು ಬಲ ಬದಿಗಳಲ್ಲಿ ಯಾವ ಬದಿಯಲ್ಲಿ ಕಡಿಮೆ ಒತ್ತಡ ಉಂಟಾಗುವುದೋ ಆ ಬದಿಗೆ ಚೆಂಡು ಸ್ವಿಂಗ್ ಆಗುತ್ತದೆ. ಹೊಸ ಚೆಂಡಿನ ಸೀಮ್ ಗೆರೆಯನ್ನು ಸ್ಲಿಪ್ ದಿಕ್ಕಿನತ್ತ ಬೊಟ್ಟುಮಾಡಿ ಎಸೆದರೆ ಆ ಬದಿಯ ಚೆಂಡಿನ ಒರಟು ಮೇಲ್ಮೈಗುಂಟ ಹೆಚ್ಚು ಸಮಯ ಗಾಳಿಯ ಚಲಿಸುವ ಪೊರೆ ಅಂಟಿಕೊಂಡಿರುತ್ತದೆ. ಇನ್ನೊಂದು ಬದಿಯ ನಯವಾದ ಮೇಲ್ಮೈ ಗಾಳಿಯನ್ನು ಹೊರತಳ್ಳುತ್ತದೆ. ಔಟ್ ಸ್ವಿಂಗ್ ಉಂಟಾಗುತ್ತದೆ. ಸೀಮ್‍ನ ಸರಿಯಾದ ಬಳಕೆಯಿಂದಾಗಿ ಎರಡೂ ಬದಿ ಒಂದೇ ಪ್ರಮಾಣದ ನುಣುಪು ಮೇಲ್ಮೈ ಹೊಂದಿದ್ದ ಮೊದಲ ಎಸೆತದಲ್ಲೂ ಚೆಂಡು ಸ್ವಿಂಗ್ ಮಾಡಬಹುದು. ಹೀಗೆ ಸ್ವಿಂಗ್ ಆಗುವ ಸಾಧ್ಯತೆ ಮತ್ತು ಪ್ರಮಾಣವನ್ನು ಹೆಚ್ಚಿಸಲಿಕ್ಕಾಗಿ ಚೆಂಡಿನ ಒಂದು ಬದಿಯನ್ನು ಹೆಚ್ಚು ನುಣುಪಾಗಿಡುವ ಪ್ರಯತ್ನವನ್ನು ಬೌಲರುಗಳು ಮಾಡುತ್ತಿರುತ್ತಾರೆ. ಮೈಬೆವರು, ಎಂಜಲನ್ನು ಸವರುತ್ತಾರೆ. ಟ್ರೌಸರಿಗೆ ಗಸಗಸ ಉಜ್ಜುತ್ತಾರೆ. ಇದರಲ್ಲಿ ತಪ್ಪಿಲ್ಲ. ಆದರೆ, ಕೆಲವು ಆಟಗಾರರು ಕ್ರಿಕೆಟ್ ನಿಯಮಗಳ ಸರಹದ್ದನ್ನು ಮೀರಿ ವ್ಯಾಸಲಿನ್‍ನಂತಹ ಬಾಹ್ಯ ವಸ್ತುಗಳನ್ನು ಚೆಂಡಿಗೆ ಸವರುವುದಿದೆ. ಹೀಗೆ ಮಾಡಿ ಸಿಕ್ಕಿ ಬಿದ್ದಿದ್ದೂ ಇದೆ. ಮ್ಯಾಚ್ ಗೆದ್ದಿದ್ದೂ ಇದೆ. ಸಾಂಪ್ರದಾಯಿಕ ಸ್ವಿಂಗ್ ಬೌಲಿಂಗಿಗೆ ಹೊಸ ಚೆಂಡೇ ಇರಬೇಕು, ಎಸೆತದ ವೇಗವೂ ಸಾಕಷ್ಟು ಹೆಚ್ಚಿರಬೇಕು. ಜೊತೆಗೆ, ಚೆಂಡಿನ ಹಿಡಿತ, ಸೀಮ್ ಬಳಕೆ, ಮುಂಗೈನ ಚಲನೆಗೆ ಸಂಬಂಧಿಸಿದಂತೆ ಸೂಕ್ತ ತಾಂತ್ರಿಕತೆ ತಿಳಿದಿರಬೇಕು. ಚೆಂಡು ಹಳೆತಾದರೆ ಏನು ಮಾಡುವುದು? ಇದ್ದಾರಲ್ಲ ಬಿಷನ್ ಬೇಡಿ, ಎರ್ರಂಪಳ್ಳಿ ಪ್ರಸನ್ನ, ಚಂದ್ರಶೇಖರ್, ಅನಿಲ್ ಕುಂಬ್ಳೆ, ಶೇನ್ ವಾರ್ನ್, ಅಬ್ದುಲ್ ಖಾದಿರ್, ಮಣಿಂದರ್ ಸಿಂಗ್, ರವಿಚಂದ್ರನ್ ಅಶ್ವಿನ್ ಒಬ್ಬರೇ ಇಬ್ಬರೇ?
  ಆದರೆ, ಈಗ ಹಾಗಿಲ್ಲ. ವೇಗದ ಬೌಲರುಗಳು ಹಳೆಯ ಬಾಲನ್ನೂ ಸ್ವಿಂಗ್ ಮಾಡುತ್ತಾರೆ. ಇದನ್ನು ರಿವರ್ಸ್ ಸ್ವಿಂಗ್ ಎನ್ನುತ್ತಾರೆ. ಪಾಕಿಸ್ತಾನದ ಕ್ಲಬ್ ಆಟಗಾರ ಸಲಿಮ್ ಮಿರ್ ಈ ಕಲೆಯನ್ನು ತನ್ನ ಸಹ ಆಟಗಾರ ಸರಫ್ರಾಜ್ ನವಾಜ್‍ರವರಿಗೆ ಕಲಿಸಿದರೆಂದೂ, ಅವರು ನಂತರ ಇಮ್ರಾನ್‍ಖಾನ್‍ರಿಗೆ ವರ್ಗಾಯಿಸಿದರೆಂದೂ ಹೇಳಲಾಗುತ್ತದೆ. ವಾಸಿಮ್ ಅಕ್ರಮ್, ವಕಾರ್ ಯೂನಿಸ್‍ರಷ್ಟೇ ಅಲ್ಲ ಭಾರತದ ಬೌಲರುಗಳೂ ಇಮ್ರಾನ್ ಖಾನ್ ರಿಂದಲೇ ಈ ವಿದ್ಯೆಯನ್ನು ಕಲಿತರೆಂದೂ ನಂತರ ಎಲ್ಲ ದೇಶಗಳ ವೇಗದ ಬೌಲರುಗಳಿಗೂ ಇದು ತಿಳಿಯಿತೆಂದೂ ಹೇಳುತ್ತಾರೆ. ಮೊನ್ನೆ ಆಸ್ಟ್ರೇಲಿಯನ್ನರು ಈ ವಿದ್ಯೆಯನ್ನು ಜಗಜ್ಜಾಹೀರು ಮಾಡಿಬಿಟ್ಟರು!
   ಹಳೆಯ ಚೆಂಡಿನಲ್ಲಿ ನುಣುಪು ಹೊಳೆಯುವ ಮೇಲ್ಮೈ ಇಲ್ಲದಿರುವುದರಿಂದ ಸಾಂಪ್ರದಾಯಿಕ ಸ್ವಿಂಗ್ ಬೌಲಿಂಗ್ ಸಾಧ್ಯವಿಲ್ಲ. ಒರಟಾಗಿರುವ ಬದಿಗಳಲ್ಲೇ ಒಂದು ಬದಿಯನ್ನು ಇನ್ನಷ್ಟು ಒರಟು ಮಾಡಿದರೆ ಅದು ಸಾಂಪ್ರದಾಯಿಕ ಸ್ವಿಂಗ್ ಬೌಲಿಂಗ್‍ನಲ್ಲಿ ನುಣುಪು ಬದಿ ವಹಿಸುವ ಪಾತ್ರವನ್ನೇ ವಹಿಸುತ್ತದೆ. ಅದೇ ವೇಗ, ಅದೇ ಶೈಲಿ, ಅದೇ ಬಗೆಯ ಸೀಮ್ ಹಿಡಿತ, ಅದೇ ಮಣಿಕಟ್ಟು ಚಲನೆಯೊಂದಿಗೆ ಬ್ಯಾಟ್ಸಮನ್‍ನಿಂದ ಹೊರಹೋಗುವ ಔಟ್ ಸ್ವಿಂಗ್ ಪ್ರಯತ್ನಿಸಿದರೆ ಇಲ್ಲಿ ಒಳಬರುವ ಇನ್ ಸ್ವಿಂಗ್ ಆಗುತ್ತದೆ. ಅದೇ ಕಾರಣಕ್ಕೆ ಇದು ರಿವರ್ಸ್ ಸ್ವಿಂಗ್. ಪ್ರಶ್ನೆ ಇರುವುದು ಇಲ್ಲೇ! ರಿವರ್ಸ್ ಸ್ವಿಂಗನ್ನು ಸಾಧಿಸಲು ಚೆಂಡಿನ ಒಂದು ಬದಿಯನ್ನು ಕುಳಿಗಳಿರುವ ಒರಟು ಮೇಲ್ಮೈಯನ್ನಾಗಿಸುವುದು ಹೇಗೆ? ಇದರಲ್ಲಿ ಪಾಕಿಸ್ತಾನದ ಬೌಲರುಗಳು ಚಾಂಪಿಯನ್ನರು. ಕೋಕೋಕೋಲಾ ಬಾಟಲಿಯ ಮುಚ್ಚಳ, ಗಮ್ ಟೇಪಿಗೆ ಮೆತ್ತಿದ ಸಕ್ಕರೆ, ಮರಳು ಅಥವಾ ಮಾರುಕಟ್ಟೆಯಲ್ಲಿ ದೊರೆಯುವ ಪಾಲಿಶ್ ಪೇಪರ್, ಮನೆಯಲ್ಲೇ ತಯಾರಿಸಿದ ಸಕ್ಕರೆ ಕ್ಯಾಂಡಿ ಹೀಗೆ ಯಾವುದೇ ಒರಟು ಮತ್ತು ಅಡಗಿಸಿಟ್ಟುಕೊಳ್ಳಬಹುದಾದ ವಸ್ತುವಿನಿಂದ ಚೆಂಡಿನ ರೂಪಗೆಡಿಸಬಹುದು.
  ಗಾಲ್ಫ್ ಚೆಂಡಿಗೆ ದೀಪಿಕಾ ಪಡುಕೋಣೆಯ ಕೆನ್ನೆಯ ಮೇಲಿರುವಂತಹ ಅನೇಕ ಡಿಂಪಲ್‍ಗಳಿರುವುದು ನಿಮಗೆ ಗೊತ್ತಿರಬಹುದು. ಗಾಲ್ಫ್ ಚೆಂಡು ನುಣುಪಾಗಿದ್ದರೆ ಗಾಳಿಯನ್ನು ಸೀಳಿಕೊಂಡು ಮುಂದೆ ಕ್ರಮಿಸುವಾಗ ವಿರುದ್ಧ ದಿಕ್ಕಿನಲ್ಲಿ ಚೆಂಡಿನ ಮೈಗುಂಟಾ ಚಲಿಸುವ ಗಾಳಿ ಬೇಗನೆ ಚೆಂಡಿನಿಂದ ಬೇರ್ಪಟ್ಟು ಹಿಂದೊಂದು ನಿರ್ವಾತದ ಪ್ರದೇಶವನ್ನುಂಟು ಮಾಡುತ್ತದೆ. ಈ ನಿರ್ವಾತವು ಚೆಂಡನ್ನು ಹಿಂದಕ್ಕೆಳೆಯುವುದರಿಂದ ದೂರ ಕ್ರಮಿಸಲಾರದು. ಕುಳಿಗಳಿರುವ ಚೆಂಡು ಅಷ್ಟೇ ಶಕ್ತಿಯಲ್ಲಿ ನುಣುಪು ಚೆಂಡಿನ ಎರಡು ಪಟ್ಟು ದೂರ ಚಲಿಸುತ್ತದೆ.
ಪ್ರಾಚೀನ ಜನರಿಗೂ ಏರೋಡೈನಾಮಿಕ್ಸ್ ಕುರಿತು ಸಾಕಷ್ಟು ತಿಳುವಳಿಕೆಯಿತ್ತು. ಸುಮಾರು 20,000 ವರ್ಷಗಳ ಹಿಂದೆಯೇ ಬೂಮರಾಂಗ್ ಎಂಬ ಸಾಧನವನ್ನು ಜನಬಳಸುತ್ತಿದ್ದರು. ಇದರ ಹುಟ್ಟು ಪೆÇೀಲೆಂಡ್‍ನಲ್ಲಾಗಿತ್ತು ಎನ್ನುತ್ತಾರೆ. ಶ್ರೀಮಂತ ರಾಜಕಾರಣಿಗಳು ಚಪ್ಪಲಿ, ಸೀರೆ, ಒಡವೆ, ಹಣವನ್ನು ಸಂಗ್ರಹಿಸಿಡುವ ಹಾಗೆ ಈಜಿಪ್ಟಿನ ರಾಜ ತುತಂಕಾಮನ್ ಸಾವಿರಾರು ಬೂಮರಾಂಗುಗಳನ್ನು ಸಂಗ್ರಹಿಸಿಟ್ಟಿದ್ದನಂತೆ!
ಆಸ್ಟ್ರೇಲಿಯನ್ನರು ವಾಪಸು ಬರುವ ಬೂಮರಾಂಗ್‍ಗಳನ್ನು ವಿನ್ಯಾಸಗೊಳಿಸಿದ ಕೀರ್ತಿಗೆ ಪಾತ್ರರಾಗಿದ್ದಾರೆ. ಎರಡು ರೆಕ್ಕೆಗಳು 80 ರಿಂದ 120 ಕೋನದಲ್ಲಿ ಜೋಡಿಸಿಕೊಂಡಂತೆ ಇರುವ ಈ ಸರಳ ಸಾಧನಗಳು ಮಾನವನ ಅದ್ಭುತ ಸೃಷ್ಟಿಗಳಲ್ಲೊಂದು. ಹ್ಯಾಲಿಕಾಪ್ಟರಿನ ಬ್ಲೇಡಿನಂತೆ ಚಲಿಸುತ್ತಾ ಸಾಗುವ ಭೂಮರಾಂಗುಗಳು ವೃತ್ತೀಯಪಥದಲ್ಲಿ ಸಾಗುತ್ತಾ ಪುನಃ ಪ್ರಾರಂಭಿಕ ಸ್ಥಳಕ್ಕೆ ಆಗಮಿಸುವುದು ಅದ್ಭುತವಲ್ಲದೇ ಮತ್ತೇನು? `ನನ್ನ ಬೂಮರಾಂಗ್ ವಾಪಾಸು ಬರುವುದಿಲ್ಲ' ಎಂಬುದು ಬಹಳ ಗರ್ವದಿಂದ ಆಡುವ ಮಾತು; ಖಂಡಿತ ಗುರಿ ತಲುಪುತ್ತದೆ ಎಂಬ ಆತ್ಮವಿಶ್ವಾಸದ ಮಾತು.
  ಆದರೆ, ಈ ಬಾರಿ ಆಸ್ಟ್ರೇಲಿಯನ್ನರ ಬೂಮರಾಂಗು ವಾಪಸ್ ಬಂದಿದೆ!

Monday, 19 March 2018

ದಿನೇಶ್ ಕಾರ್ತಿಕ್ ಕುಸಿದು ಬಿದ್ದಾಗ...........


   ಇದು ಕೆಲವು ವರ್ಷಗಳ ಹಿಂದಿನ ಘಟನೆ. ಬಾಂಗ್ಲಾದ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಭಾರತದ ಮೊದಲ ನಾಲ್ಕು ಬ್ಯಾಟ್ಸ್‍ಮನ್‍ಗಳೂ ಸೆಂಚುರಿಯನ್ನು ಸಿಡಿಸಿ ತಮಗಿಲ್ಲದ ಮೀಸೆಯ ಮೇಲೆ ಬೆರಳಾಡಿಸಿದ್ದರು. ಆದರೆ ಆ ಶತಕಗಳು ಅಷ್ಟು ಸುಲಭದ್ದಾಗಿರಲಿಲ್ಲ. ಏಕೆಂದರೆ ಅವರು ಹೋರಾಡುತ್ತಿದ್ದುದು ಬಾಂಗ್ಲಾದ ವಿರುದ್ಧವಾಗಿರಲಿಲ್ಲ, ಬಿರು ಬಿಸಿಲ ಬೇಗೆಯ ಎದುರಾಗಿತ್ತು.ಆರಂಭಿಕರಿಬ್ಬರನ್ನೂ ಆಟದ ನಡುವೆಯೇ ಮೈದಾನದಿಂದ ಹೊತ್ತುಕೊಂಡು ಬರಬೇಕಾಯಿತು. ವಾಸಿಮ್ ಜಾಫರ್ ಮುಂಬೈನವರು ನೋಡಿ, ಶತಕ ಬಾರಿಸಿದ ನಂತರವೇ ಕುಸಿದುಬಿದ್ದರು. ದಕ್ಷಿಣ ಭಾರತದ ಕಾರ್ತಿಕ್ ಶತಕದ ಮೊದಲೇ ಕುಸಿದರು.ದಿನೇಶ್ ಕಾರ್ತಿಕ್ ಸ್ನಾಯು ಸೆಳೆತದಿಂದ ಕುಸಿದು ಬೀಳುವ ಮೊದಲು ಅವರ ದೇಹ ಬೇಸಿಗೆಯ ಸೆಕೆಯಿಂದ ಪಾರಾಗಲೂ ಬಹಳಷ್ಟು ಶ್ರಮಿಸಿದ್ದಂತೂ ನಿಜ. ದಿನೇಶ್ ಕಾರ್ತಿಕ್ ಕೂಡ ಎಲ್ಲ ಉಷ್ಣರಕ್ತದ ಪ್ರಾಣಿಗಳಂತೆ ಸ್ಥಿರ ದೇಹತಾಪವನ್ನು ಹೊಂದಿರುವವರು. ಹೊರಗಡೆಯ ತಾಪದಲ್ಲಿ ಎಷ್ಟೇ ಹೆಚ್ಚಳವಾಗಲಿ ಅಥವಾ ಇಳಿಕೆಯಾಗಲಿ ಅವರ ದೇಹದ ತಾಪವು ಅದರಿಂದ ವ್ಯತ್ಯಯಗೊಳ್ಳದು. ಸ್ಥಿರ ತಾಪವನ್ನು ಕಾದುಕೊಳ್ಳಲು ಅವಶ್ಯಕವಾದ ತಾಪಸ್ಥಾಪಿ ತಂತ್ರವನ್ನು ಅವರ ದೇಹವೇ ಅನಸರಿಸುತ್ತದೆ.ಎಲ್ಲ ಮನುಷ್ಯರಂತೆ ದಿನೇಶ್ ಕಾರ್ತಿಕ್‍ರ ದೇಹದಲ್ಲಿ ಅದರಲ್ಲೂ ಮುಖ್ಯವಾಗಿ ಸ್ನಾಯುಗಳು ಮತ್ತು ಪಿತ್ತಕೋಶದಲ್ಲಿ ನಡೆಯುವ ಚಯಪಚಯ ಕ್ರಿಯೆಗಳಿಂದ ಉಷ್ಣವು ಉತ್ಪಾದನೆಗೊಳ್ಳುತ್ತದೆ. ಕಾರ್ತಿಕರ ದೇಹದ ತಾಪಕ್ಕಿಂತ ಢಾಕಾದ ಚಿತ್ತಗಾಂವ ಕ್ರೀಡಾಂಗಣದಲ್ಲಿನ ತಾಪ ಹೆಚ್ಚಿದ್ದುದರಿಂದ ಅವರಿಗೆ ಸೆಕೆಯ ಅನುಭವ ಉಂಟಾಯಿತು. ಅವರ ಮೆದುಳಿನ ಕೆಳಭಾಗದಲ್ಲಿರುವ ಹೈಪೋಥಲಾಮಸ್ ಎಂಬ ಭಾಗಕ್ಕೆ ಇದು ಮೊದಲು ಗೊತ್ತಾಯಿತು. ಈ ಹೈಪೋಥಲಾಮಸ್ ಎಂದರೆ ಪ್ರಿಜ್ಜು, ಏ.ಸಿ, ಇಸ್ತ್ರಿ ಪೆಟ್ಟಿಗೆಗಳಲ್ಲಿರುವ ಸ್ಥಿರತಾಪವನ್ನು ಕಾದುಕೊಳ್ಳಲು ಬಳಸುವ ತಾಪಸ್ಥಾಪಿ ಸ್ವಿಚ್ಚುಗಳಂತೆ ಕೆಲಸ ಮಾಡುವ ಭಾಗ. ಕೂಡಲೇ ಹೃದಯ ಪಂಪು ಮಾಡುವ ರಕ್ತದ ಶೇಕಡಾ ಮೂವತ್ತಕ್ಕಿಂತ ಹೆಚ್ಚಿನ ಪ್ರಮಾಣದ ರಕ್ತವನ್ನು ಚರ್ಮಕ್ಕೆ ಕಳುಹಿಸುವ ಏರ್ಪಾಟು ನಡೆಯಿತು. ಕಾರಿನ ಬಿಸಿ ಏಂಜಿನ್‍ನ  ಶಾಖವನ್ನು ರೇಡಿಯೇಟರ್‍ನಲ್ಲಿ ಹರಿಯುವ ದ್ರವ ಕೂಲಂಟ್ ಹೀರಿಕೊಂಡು ಅನಂತರ ವಾತಾವರಣಕ್ಕೆ ಹೊರ ಹಾಕುತ್ತದ್ದಲ್ಲ ಹಾಗೆ, ನಮ್ಮ ರಕ್ತವು ಚರ್ಮದ ರಕ್ತನಾಳಗಳ ಮೂಲಕ ಹರಿಯುವುದರಿಂದ ದೇಹ ತಣ್ಣಗಾಗುತ್ತದೆ. ನಮ್ಮ ಚರ್ಮವು ದೇಹವನ್ನು ತಣ್ಣಗಿರಿಸಲು ಬೆವರುವಿಕೆ ತಂತ್ರವನ್ನು ಅನುಸರಿಸುತ್ತದೆ.ದಿನೇಶ್ ಕಾರ್ತಿಕ್‍ರ ಚರ್ಮದ ಮೇಲೆ ಸುಮಾರು 2,500,00 ಸ್ವೇದ ಗ್ರಂಥಿಗಳಿವೆ. ಈ ಗ್ರಂಥಿಗಳೊಡನೆ ರಕ್ತದ ಲೋಮನಾಳಗಳ ಒಡನಾಟವಿದೆ. ಅಲ್ಲದೇ ದೇಹದ ತಾಪ ಮತ್ತು ಬಾಹ್ಯ ತಾಪಗಳ ಮಾಹಿತಿಗಳನ್ನು ಮೆದುಳಿಗೆ ತಿಳಿಸಬಲ್ಲ ಜ್ಞಾನವಾಗಿ ನರಗಳಿವೆ. ತಾಪಕ್ಕೆ ತಕ್ಕಂತೆ ಉದ್ಧೀಪನಗಳನ್ನುಂಟು ಮಾಡುವ ಎಸಿಟೈಲ್‍ಚೋಲಿನ್ ಎಂಬ ರಾಸಾಯನಿಕದ ನೆರವಿನಿಂದ ನರವ್ಯವಸ್ಥೆಯು ರಕ್ತದ ಸಾಗಾಣಿಕೆ, ಬೆವರುವಿಕೆಯ ಪ್ರಮಾಣ ಮತ್ತಿತರ ಕ್ರಿಯೆಗಳ ನಡುವೆ ಹೊಂದಾಣಿಕೆಯನ್ನೇರ್ಪಡಿಸುತ್ತದೆ.ಢಾಕಾದ ಸೆಕೆ ಮತ್ತು ಒಣ ವಾತಾವರಣ ದಿನೇಶ್ ಕಾರ್ತಿಕ್‍ರನ್ನು ಬಹಳಷ್ಟು ಬೆವರು ಸುರಿಸುವಂತೆ ಮಾಡಿದವು. ಮಣ್ಣಿನ ಮಡಕೆಯ ಮೇಲಿರುವ ಸಣ್ಣ ಸಣ್ಣ ರಂದ್ರಗಳ ಮೂಲ ‘ಬೆವರುವಿಕೆ’ ಉಂಟಾಗುವುದರಿಂದ ಹೇಗೆ ಒಳಗಡೆಯ ನೀರು ತಣ್ಣಗಾಗಿರುವುದೋ ಹಾಗೆ ಕಾರ್ತಿಕರ ದೇಹ ಕೂಡಾ ತಣ್ಣಗಾಗಲು ಬೆವರುವುದು ಅನಿವಾರ್ಯವಾಗಿತ್ತು. ಬೇಸಿಗೆಯಲ್ಲಿ ಬೆವರುವಿಕೆಯಿಂದ ಗಂಟೆಗೆ ಒಂದೂವರೆ ಲೀಟರ್‍ನಿಂದ ನಾಲ್ಕು ಲೀಟರ್‍ವರೆಗೆ ನೀರು ವಾತಾವರಣ ಸೇರಬಹುದು. ದಿನೇಶ್ ಕಾರ್ತಿಕ್ ಆ ದಿನ ಸಾಕಷ್ಟು ಅಧಿಕ ಪ್ರಮಾಣದ ನೀರನ್ನು ಬೆವರುವಿಕೆಯಿಂದ ಕಳೆದುಕೊಂಡರು. ಇದರಿಂದ ಅವರ ದೇಹ ನಿರ್ಜಲೀಕರಣದ ಸ್ಥಿತಿಯನ್ನು ತಲುಪಿತು. ಜೊತೆಗೆ, ಈ ಬೆವರುವಿಕೆ ಎಂಬುದು ಬರೇ ನೀರನ್ನು ಕಳೆದುಕೊಳ್ಳುವ ಕ್ರಿಯೆ ಮಾತ್ರವಲ್ಲ, ಇದರಲ್ಲಿ ಸೋಡಿಯಂ ಕ್ಲೋರೈಡ್, ಪೊಟಾಸಿಯಂ, ಲ್ಯಾಕ್ಟಿಕ್ ಆಮ್ಲ, ಯೂರಿಕ್ ಆಮ್ಲಗಳೆಲ್ಲವೂ ಇರುತ್ತವೆ. ಸೋಡಿಯಂ ಮತ್ತು ಪೊಟಾಸಿಯಂ ಲವಣಗಳನ್ನು ಕಳೆದುಕೊಂಡದ್ದರಿಂದ ಕಾರ್ತಿಕರ ದೇಹದಲ್ಲಿ ಇಲೆಕ್ಟ್ರೋಲೈಟ್ ಅಸಂತುಲನೆ ಉಂಟಾಯಿತು. ಇದೇ ಅವರನ್ನು ಸ್ನಾಯು ಸೆಳೆತಕ್ಕೆ ಗುರಿಯಾಗಿಸಿತು.ನೀರೇ ದೊರೆಯದ ಮರುಭೂಮಿಯಲ್ಲಿ ಬೆವರುವುದು ಬಹಳ ದುಬಾರಿ ವ್ಯವಹಾರ. ಆದುದರಿಂದ ಅಲ್ಲಿನ ಜೀವಿಗಳು ಬಹಳ ಅಧಿಕ ತಾಪದಲ್ಲಷ್ಟೇ ಬೆವರುತ್ತವೆ. ಆನೆಗಳದು ಇನ್ನೂ ಭಿನ್ನತಂತ್ರ. ಅವುಗಳು ಎಂದೂ ಬೆವರುವುದೇ ಇಲ್ಲ. ಸುಮಾರು ನಾಲ್ಕೈದು ಚದರ ಮೀಟರ್ ಮೇಲ್ಮೈ ವಿಸ್ತೀರ್ಣವನ್ನು ಹೊಂದಿರುವ ಅವುಗಳ ಕಿವಿಗಳಲ್ಲಿ ಭಾರಿ ಪ್ರಮಾಣದ ಲೋಮನಾಳ ಜಾಲವಿದೆ. ದೇಹದ ಉಷ್ಣತೆಯನ್ನೆಲ್ಲ ಹೀರಿಕೊಂಡು ಬೆಚ್ಚಗಾದ ರಕ್ತ ಈ ಲೋಮನಾಳಗಳಲ್ಲಿ ಹರಿಯುತ್ತದೆ. ಆಗ ಆನೆಗಳ ನೆರಳಿದ್ದಲ್ಲಿ ವಿಶ್ರಾಂತಿ ತೆಗೆದುಕೊಳ್ಳುತ್ತಾ ತಮ್ಮ ಕಿವಿಗಳನ್ನು ಆಚೀಚೆ ಆಡಿಸುತ್ತವೆ. ದಿನೇಶ್ ಕಾರ್ತಿಕ್ ಆನೆಯೂ ಅಲ್ಲ, ಒಂಟೆಯೂ ಅಲ್ಲ. ಅವರೊಬ್ಬ ಮನುಷ್ಯ. ಆದುದರಿಂದಲೇ ಢಾಕಾದ ಬಿರು ಬಿಸಿಲಿಗೆ ಕುಸಿದು ಬಿದ್ದರು. ಆದರೂ, ಈಗಾಗಲೇ ಕುಸಿದು ಬಿದ್ದಿದ್ದ ಭಾರತ ತಂಡವನ್ನು ಸಾಕಷ್ಟು ಮೇಲಕ್ಕೆತ್ತಿದ್ದರು! 


Tuesday, 13 March 2018

ಆಕಾಶದ ಬೆರಗು ಮತ್ತು ಜನ್ಮಕುಂಡಲಿ

ಈ ವಿಶ್ವಕ್ಕೆ ಅಂಚುಗಳಿಲ್ಲ; ಮನುಷ್ಯ ಪ್ರಯತ್ನದ ಸಾಧ್ಯತೆಗಳಿಗೆ ಸೀಮೆಯೆಂಬುದು ಇಲ್ಲವೇ ಇಲ್ಲ.

-ಸ್ಟೀಫನ್ ಹಾಕಿಂಗ್
 
  ನಮ್ಮೂರ ಅಂಚಿಗಿರುವ ಆಚೆಮರುಕಲ ಗುಡ್ಡದ ಮೇಲೆ ನಿಂತು ಜೈ ಚಾಚಿದರೆ  ಆಕಾಶವನ್ನೇ ಮುಟ್ಟಬಹುದಲ್ಲ ಎಂದು ಚಿಕ್ಕವನಿರುವಾಗ ಚಕಿತನಾಗುತಿದ್ದೆ. ಇದು ನನ್ನೊಬ್ಬನ ಬೆರಗಲ್ಲ; ಎಲ್ಲರ ಬಾಲ್ಯದ ಬೆರಗು.
    ಇಂತಹ ಬೆರಗು, ಕುತೂಹಲಗಳು ಇಲ್ಲದೇ ಹೋಗಿದ್ದರೆ ಅದು ಬಾಲ್ಯವಾಗಿರುತಿತ್ತೇ?
   ಹೌದು, ಆಕಾಶವು ದಿಗಂತವನ್ನು ಸ್ಪರ್ಶಿಸಿದಂತೆ ಕಾಣುತ್ತದೆ. ದೊಡ್ಡ ಕೊಡೆಯನ್ನು ಭೂಮಿಯ ಮೇಲೆ ಬೋರಲು ಹಾಕಿದಂತೆ. ರಾತ್ರಿಯಲ್ಲಾದರೆ, ಆ ಅರ್ಧಗೋಳಕ್ಕೆ ಬೇರೆ ಬೇರೆ ಪ್ರಕಾಶದ ನಕ್ಷತ್ರಗಳನ್ನು ಅಂಟಿಸಿಟ್ಟ ಹಾಗೆ ಕಾಣುತ್ತದೆ. ನಮಗೆ ರಾತ್ರಿಯಿರುವಾಗ ಭೂಮಿಯ ಇನ್ನೊಂದು ಬದಿಯಲ್ಲಿರುವವರಿಗೆ ಹಗಲಾಗಿರುತ್ತದಲ್ಲ? ಅಲ್ಲಿಯೂ ಅಂತದ್ದೇ ಅರ್ಧಗೋಳ ಇರುತ್ತದೆ ಎಂಬುದನ್ನು ಕಲ್ಪಿಸಿಕೊಳ್ಲುವುದು ಕಷ್ಟವಲ್ಲ. ಇಲ್ಲಿಗೆ, ಒಂದು ಪೂರ್ತಿಗೋಳ ಉಂಟಾಗುತ್ತದೆ. ಇದೇ ಖಗೋಳ! ನಾವು ಕಾಣುವ ಖಗೋಳ ನಮ್ಮ ಇಂದ್ರೀಯಗಳ ಮಿತಿಗಳನ್ನು ಬಹುಪಾಲು ಆಧರಿಸಿದೆ. ನಾವಿರುವ ಭೂಮಿಯು ಸೌರವ್ಯೂಹದ ಸದಸ್ಯ. ತನ್ನ ಅಕ್ಷದ ಸುತ್ತ ಸುತ್ತುತ್ತಲೇ ಸೂರ್ಯನ ಸುತ್ತ ಪರಿಭ್ರಮಿಸುತ್ತಿದೆ. ಭೂಮಿಯನ್ನು ಆವರಿಸಿರುವ ವಾಯುಮಂಡಲ ನಮ್ಮ ದೃಷ್ಟಿಗೆ ಪರದೆಯನ್ನು ಹಾಕಿದೆ. ನಮ್ಮ ಯೋಚನೆಗಳ ಮಿತಿಯನ್ನಂತೂ ನಾವು ದಾಟಲಾರೆವು. ಇದೆಲ್ಲದರ ಪರಿಣಾಮವಾಗಿ, ನಮಗೆ ಕಾಣುವ ನೋಟ ಸಾಕಷ್ಟು ವಿರೂಪಗೊಂಡಿದೆ. ರಾತ್ರಿಯಾಕಾಶದಲ್ಲಿ ಕಾಣುವ ನಕ್ಷತ್ರಗಳೆಲ್ಲ ಪೂರ್ವದಿಂದ ಪಶ್ಚಿಮಕ್ಕೆ ಚಲಿಸುತ್ತಿರುವಂತೆ ಕಾಣುತ್ತವೆ; ಬಸ್ಸು ವೇಗವಾಗಿ ಮುಂದಕ್ಕೆ ಚಲಿಸುವಾಗ ರಸ್ತೆಯ ಇಕ್ಕೆಲಗಳಲ್ಲಿರುವ ಮರ-ಗಿಡಗಳು, ಕಟ್ಟಡಗಳು ಅದೇ ವೇಗದಲ್ಲಿ ಹಿಂದಕ್ಕೆ ಚಲಿಸದ ಹಾಗೆ ಕಾಣಿಸುತ್ತದಲ್ಲ, ಹಾಗೆ! ಅಲ್ಲಿರುವ ನಕ್ಷತ್ರಗಳೆಲ್ಲ ನಮ್ಮಿಂದ ಒಂದೇ ದೂರದಲ್ಲಿರುವ ಹಾಗೆ ಕಾಣುವುದೂ ದೃಷ್ಟಿ ಭ್ರಮೆಯೇ! ರಾತ್ರಿಯಾಕಾಶದಲ್ಲಿ ಕಾಣುವ ನಕ್ಷತ್ರಗಳ ಗೋಚರ ಪ್ರಕಾಶಗಳ ವ್ಯತ್ಯಾಸವೂ ಸಹ ಅವುಗಳ ವಾಸ್ತವ ಪ್ರಕಾಶದ ವ್ಯತ್ಯಾಸಗಳನ್ನು ಪ್ರತಿನಿಧಿಸುವುದಿಲ್ಲ. ಹತ್ತಿರದ ಮೊಂಬತ್ತಿಯ ಜ್ವಾಲೆ ದೂರದ ಬೀದಿದೀಪಕ್ಕಿಂತ ಹೆಚ್ಚು ಪ್ರಕಾಶಮಾನವಾಗಿ ಕಾಣುತ್ತದಲ್ಲ? ಹಾಗಂತ, ಪ್ರಕಾಶಮಾನವಾಗಿರುವವೆಲ್ಲ ಹತ್ತಿರದಲ್ಲಿವೆಯೆಂದೂ ಮಂದ ಬೆಳಕಿನ ನಕ್ಷತ್ರಗಳೆಲ್ಲವೂ ದೂರದಲ್ಲಿವೆಯೆಂದೂ ಸಾರಾಸಗಟು ಹೇಳಲಾಗದು.
ನಮಗೆ ಕಾಣುವುದಂತೂ ಹೀಗೆಯೇ! ನಮ್ಮ ನಡುನೆತ್ತಿಯ ಮೇಲೆ ಭೂಮಿಗೆ ಲಂಭವಾಗಿ ಗೆರೆ ಎಳೆದರೆ ಆ ಗೆರೆಯು ನಾವು ಕಾಣುವ ಅರ್ಧ ಖಗೋಳದ ಖಮಧ್ಯವನ್ನು ಹಾದುಹೋಗುತ್ತದೆ. ಈ ಇಡೀ ಗೋಳವು ಅಂಟಿಕೊಂಡಿರುವ ನಕ್ಷತ್ರಗಳ ಸಮೇತವಾಗಿ ಪೂರ್ವದಿಂದ ಪಶ್ಚಿಮಕ್ಕೆ ಚಲಿಸುತ್ತಿದೆ. ಹೀಗೆ ಪರಿಭ್ರಮಿಸುತ್ತಿರುವ ಗೋಳದ ಅಕ್ಷವು ಉತ್ತರದಿಂದ ದಕ್ಷಿಣಕ್ಕೆ ಹಾದುಹೋಗುತ್ತದೆ. ರಾತ್ರಿಯಾಕಾಶದಲ್ಲಿ ಕಾಣುವ ನಕ್ಷತ್ರಗಳ ಸಂಖ್ಯೆ ಎಷ್ಟು ದೊಡ್ಡದೆಂದರೆ ಖಗೋಳವನ್ನು ಆವರಿಸಿರುವ ಈ ಎಲ್ಲ ನಕ್ಷತ್ರಗಳನ್ನು ಬಿಡಿ ಬಿಡಿಯಾಗಿ ಗುರುತಿಸುವುದು ಸಾಮಾನ್ಯ ಕಣ್ಣುಗಳಿಗೆ ಅಸಾಧ್ಯ. ಭೂಮಿಯ ಭ್ರಮಣೆಯಿಂದಾಗಿ ನಕ್ಷತ್ರಗಳು ಪೂರ್ವದಿಂದ ಪಶ್ಚಿಮಕ್ಕೆ ಚಲಿಸಿದಂತೆ ಕಂಡರೂ ಅವುಗಳÀ ಪರಸ್ಪರ ಸಾಪೇಕ್ಷ ಸ್ಥಾನ`ಮಾನ’ ಬದಲಾಗದು. ಇದರಿಂದಾಗಿ, ಆಕಾಶದಲ್ಲಿ ಈ ಚುಕ್ಕಿಗಳನ್ನೆಲ್ಲ ಸೇರಿಸಿ ಖಾಯಂ ರಂಗೋಲಿಗಳನ್ನು ಕಲ್ಪಿಸಿಕೊಳ್ಳಬಹುದು. ನಕ್ಷತ್ರ ಸಮೂಹವನ್ನು ಚಿತ್ರಾಕೃತಿಯಾಗಿ ಗುರುತಿಸಿದರೆ ಅದನ್ನು ನಕ್ಷತ್ರ ಪುಂಜಗಳೆನ್ನುತ್ತೇವೆ. ಹನ್ನೆರಡು ಮನುಷ್ಯಾಕೃತಿಗಳು, ಒಂಬತ್ತು ಹಕ್ಕಿಗಳು, ಹತ್ತೊಂಬತ್ತು ಭೂಮಿಯ ಮೇಲೆ ವಾಸಿಸುವ ವಿವಿಧ ಪ್ರಾಣಿಗಳು, ಎರಡು ಕೀಟಗಳು, ಹತ್ತು ಜಲಚರಗಳು, ಕಾಲ್ಪನಿಕ ಜೀವಿಗಳು, ವಸ್ತುಗಳು ಹೀಗೆ ಎಂಬತ್ತೆಂಟು ನಕ್ಷತ್ರ ಪುಂಜಗಳಾಗಿ ಖಗೋಳವನ್ನು ವಿಭಜಿಸಲಾಗಿದೆ. ಜಗತ್ತಿನ ಬೇರೆ ಬೇರೆ ಭಾಗಗಳಲ್ಲಿ ಈ ಗುರುತಿಸುವಿಕೆ ಸ್ವಲ್ಪ ಭಿನ್ನವಾಗಿದೆ. ಏಳು ನಕ್ಷತ್ರಗಳ ಗುಂಪಾಗಿರುವ ಸಪ್ತರ್ಷಿ ಮಂಡಳವನ್ನು ಬಿಗ್ ಡಿಪ್ಪರ್ ಎಂತಲೂ ಗ್ರೇಟ್ ಬೇರ್ ಎಂತಲೂ ಬೇರೆ ಬೇರೆ ಹೆಸರುಗಳಲ್ಲಿ ಬೇರೆ ಬೇರೆ ಕಡೆಯಲ್ಲಿ ಗುರುತಿಸುತ್ತಾರೆ.
  ಕ್ರಿಸ್ತಪೂರ್ವ 270 ರಲ್ಲಿ ಗ್ರೀಕ್ ಕವಿ ಅರಾಟಸ್ ರಚಿಸಿದ ಫಿನೋಮಿನಾ ಎಂಬ ಕಾವ್ಯದಲ್ಲಿ ಈಗ ಗುರುತಿಸಲಾಗುವ ನಕ್ಷತ್ರಪುಂಜಗಳ ಮೊದಲ ಉಲ್ಲೇಖಗಳು ದೊರೆಯುತ್ತವೆ. ಆದುದರಿಂದ, ಆ ಕಾಲಕ್ಕಿಂತಲೂ ಹಿಂದಿನಿಂದಲೇ ಜನರು ನಕ್ಷತ್ರಪುಂಜಗಳನ್ನು ಗುರುತಿಸಲು ಆರಂಭಿಸಿರಬಹುದೆಂದು ಅಂದಾಜಿಸಬಹುದು. ಖಗೋಲದ ದಕ್ಷಿಣ ತುದಿಯಲ್ಲಿನ ಪುಂಜಗಳನ್ನು ಅವರು ಉಲ್ಲೇಖಿಸದೇ ಇರುವುದರ ಆಧಾರದ ಮೇಲೆ ಸ್ವಲ್ಪ ಪತ್ತೆದಾರಿ ಮಾಡಿ ಹೀಗೆ ಗುರುತಿಸಿದವರು ಭೂಮಿಯ ಉತ್ತರಕ್ಕೆ 30 ಡಿಗ್ರಿ ಅಕ್ಷಾಂಶದ ಆಚೆ ಇರುವ ಸುಮೇರಿಯನ್ನರೋ ಬ್ಯಾಬಿಲೋನಿಯನ್ನರೋ ಅಗಿರಬಹುದು ಎಂದೂ ಊಹಿಸಬಹುದು.
  ಸೂರ್ಯನು ಪೂರ್ವದಲ್ಲಿ ಉದಯಿಸಿ ಪಶ್ಚಿಮದಲ್ಲಿ ಅಸ್ತಂಗತನಾಗುವುದು ದಿನಾ ಇದ್ದದ್ದೇ. ಈ ವಿದ್ಯಮಾನವೂ ನಮ್ಮ ಇಂದ್ರಿಯಗಳ ಮಿತಿಯಿಂದಲೇ ಉಂಟಾಗಿರುವುದು ಎಂಬುದು ನಮಗೆ ಗೊತ್ತೇ ಇದೆ. ಸೂರ್ಯನು ಪೂರ್ವದಲ್ಲಿ ಉದಯಿಸಿ ಪಶ್ಚಿಮದಲ್ಲಿ ಮುಳುಗಿ ಮತ್ತೆ ಮಾರನೆಯ ದಿನ ಪೂರ್ವದಲ್ಲೇ ಉದಯಿಸುವಾಗ ಭೂಮಿಯನ್ನು ಒಂದು ಸುತ್ತುಹಾಕಿಂದಂತೆ ಕಾಣುತ್ತದೆ. ಸೂರ್ಯನ ಈ ದೃಗ್ಗೋಚರ ಪಥವನ್ನು ಕ್ರಾಂತಿವೃತ್ತ ಎನ್ನುತ್ತಾರೆ. ಸೂರ್ಯನು ಕ್ರಾಂತಿ ವೃತ್ತದುದ್ದಕ್ಕೂ ಹೀಗೆ ಹಾದು ಹೋಗುವಾಗ ಹಿನ್ನೆಲೆಯಲ್ಲಿ ಕೆಲವು ನಕ್ಷತ್ರ ಪುಂಜಗಳಿರುತ್ತವೆ. ಕ್ರಾಂತಿವೃತ್ತದುದ್ದಕ್ಕೂ ಹರಡಿರುವ ಹನ್ನೆರಡು ನಕ್ಷತ್ರಪುಂಜಗಳನ್ನು ರಾಶಿಪುಂಜಗಳೆನ್ನುವರು. ಸೂರ್ಯಾಸ್ತದ ಸಮಯದಲ್ಲಿ ಪಶ್ಚಿಮದ ದಿಗಂತದಲ್ಲಿ ಮೀನ ರಾಶಿಯಿದೆಯೆಂದರೆ ಸೂರ್ಯನು ಮೀನರಾಶಿಯಲ್ಲಿರುವನು ಎಂದರ್ಥ. ಆಗ, ಪೂರ್ವದಲ್ಲಿ ಕನ್ಯಾ ರಾಶಿಯು ಮೂಡುತ್ತಿರುತ್ತದೆ. ಮೇಷದಿಂದ ಆರಂಭಿಸಿ ಪಶ್ಚಿಮದಿಂದ ಪೂರ್ವಕ್ಕೆ ಬಂದರೆ  ಕನ್ಯಾರಾಶಿಯು ಆರನೆಯದು. ಕುಂಡಲಿಯಲ್ಲಿ ಸೂರ್ಯನ ಆರನೇ ಮನೆ. ಚಾಂದ್ರ ಕಕ್ಷೆಯೂ ರಾಶಿ ಚಕ್ರಕ್ಕೆ ಸೀಮಿತವಾಗಿದೆ. ಸೂರ್ಯನು ಪ್ರತಿ ತಿಂಗಳೂ ತನ್ನ ಮನೆ ಬದಲಿಸುತ್ತಿದ್ದರೆ ಚಂದ್ರನು ಪ್ರತಿ ಎರಡೂಕಾಲು ದಿನಗಳಿಗೇ ಮನೆ ಬದಲಿಸುತ್ತಾನೆ. ಆದುದರಿಂದ, ಚಂದ್ರನ ಪ್ರತಿದಿನದ ಸ್ಥಾನವನ್ನು ಗುರುತಿಸಲು ಇಪ್ಪತ್ತೇಳು ನಕ್ಷತ್ರಗಳ ಸಹಾಯ ಪಡೆಯಲಾಗಿದೆ. ಪ್ರತಿ ನಕ್ಷತ್ರಕ್ಕೂ ನಾಲ್ಕು ಪಾದಗಳು. ಅಮವಾಸ್ಯೆಗೂ ಹುಣ್ಣಿಮೆಗೂ ಇರುವ ಅಂತರವನ್ನು ಅನುಕೂಲಕ್ಕಾಗಿ ಎರಡು ವಾರಗಳಾಗಿ ವಿಂಗಡಿಸಲಾಗಿದೆ. ವಾರದ ಪ್ರತಿ ದಿನವನ್ನೂ ಚರಕಾಯಗಳ ಹೆಸರಿನಿಂದ ಗುರುತಿಸಲಾಗಿದೆ. ಎಲ್ಲವೂ ನಮ್ಮ ಅನುಕೂಲಕ್ಕಾಗಿ. ಅಶ್ವಿನಿಯಿಂದ ರೇವತಿವರೆಗಿನ ಇಪ್ಪತ್ತೇಳು ನಕ್ಷತ್ರಗಳನ್ನು ಹನ್ನೆರಡು ರಾಶಿಗಳಿಗೆ ಹಂಚಿದರೆ ನಕ್ಷತ್ರ-ರಾಶಿ ಸಂಬಂಧ ಅರ್ಥವಾಗುತ್ತದೆ.  ಗಡಿಯಾರ, ಕ್ಯಾಲೆಂಡರು ಯಾವುದೂ ಇಲ್ಲದೆ ಆಕಾಶದಲ್ಲಿ ಕಾಣುವ ಈ ದೃಶ್ಯಗಳಿಂದಲೇ ಮಗು ಹುಟ್ಟಿದ್ದು ಯಾವ ಸಮಯದಲ್ಲಿ ಎಂದು ಹೇಳಬಹುದು. ಜನ್ಮ ಕುಂಡಲಿಯೆಂಬುದು ಒಂದು ವೈಜ್ಞಾನಿಕ ದಾಖಲೆ. ಯಾವುದೇ ಘಟನೆಯ ಸಮಯವನ್ನು ಗುರುತಿಸಲು ಇದರಿಂದ ಸಾಧ್ಯ. ಒಂದು ಉದಾಹರಣೆ ಹೇಳಬೇಕೆಂದರೆ, ನಮ್ಮ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ವೃಶ್ಚಿಕ ರಾಶಿ, ಅನುರಾಧಾ ನಕ್ಷತ್ರದಲ್ಲಿ ಹುಟ್ಟಿದರು. ಅದು ಕ್ಯಾಲೆಂಡಿರಿನ ಸೆಪ್ಟಂಬರ್ ತಿಂಗಳ ಹದಿನೇಳನೇ ತಾರೀಕು.
  ಹೀಗೆ, ಆಕಾಶಕಾಯಗಳ ದೃಗ್ಗೋಚರ ಚಲನೆಗಳನ್ನು ನಮ್ಮ ಇಂದ್ರಿಯಾನುಭವದ ಮಿತಿಯಲ್ಲಿಯೇ ಗ್ರಹಿಸಿ ನಿರಂತರ ವೀಕ್ಷಣೆಯ ಮೂಲಕ ಈ ಚಲನೆಯಲ್ಲಿ ಕಂಡುಬರುವ ನಿಯಮಿತ ಅಂಶಗಳನ್ನು ಗುರುತಿಸಿದ ನಮ್ಮ ಪೂರ್ವಜರು ಖಂಡಿತವಾಗಿಯೂ ನಿಶಿತ ಮತಿಗಳು. ಆದರೆ, ನಾವು ಕಾಣುವುದೇ ವಾಸ್ತವವಲ್ಲ. ರಾಶಿ ಪುಂಜಗಳು ನಮ್ಮನ್ನು ಸುತ್ತುತ್ತಲೂ ಇಲ್ಲ, ಅವುಗಳೆಲ್ಲವೂ ಒಂದೇ ದೂರದಲ್ಲೂ ಇಲ್ಲ. ಕೆಲವು ನಕ್ಷತ್ರಗಳ ಬೆಳಕು ಭೂಮಿಯನ್ನು ತಲುಪಲು ನೂರಾರು ಜ್ಯೋತಿವರ್ಷಗಳು ಬೇಕಾಗುತ್ತವೆ. ಆಧ್ರ್ರಾ ನಕ್ಷತ್ರದಿಂದ ಹೊರಟ ಬೆಳಕು ಭೂಮಿಯನ್ನು ತಲುಪಲು ಆರುನೂರಾ ನಲವತ್ತೆರಡು ವರ್ಷಗಳು ಬೇಕು. ರೋಹಿಣಿ ನಕ್ಷತ್ರದಿಂದಾದರೆ ಅರವತ್ತೈದು ವರ್ಷಗಳು ಬೇಕು. ಅವುಗಳ ಪ್ರಭಾವ ಆಯ್ದ ಮನುಷ್ಯರ ಮೇಲಾಗುತ್ತದೆ ಎಂಬುದು ಅತಾರ್ಕಿಕ. ಪ್ರತಿ ಸೆಕೆಂಡಿಗೆ ನಾಲ್ಕು ಮಕ್ಕಳು ಹುಟ್ಟುತ್ತಾರೆ. ಈ ಹುಟ್ಟುವ ಪ್ರಕ್ರೀಯೆಯೇ ಬಹಳ ದೀರ್ಘವಾದದು. ಅದು ಎಲ್ಲಿಂದ ಆರಂಭವಾಗಿ ಎಲ್ಲಿಗೆ ಮುಗಿಯುತ್ತದೆ ಎಂದು ಹೇಳುವುದೇ ಕಷ್ಟ.  ಸಿಸೇರಿಯನ್ ಹೆರಿಗೆ ಮಾಡಿಸುವ ಕೆಲವು ವೈದ್ಯರು ಮಹೂರ್ತ ನೋಡಿಯೇ ಹೆರಿಗೆ ಮಾಡಿಸುವುದಿದೆ. ಪ್ರಕೃತಿ ವಿಕೋಪಗಳಾದಾಗ, ಪ್ಲೇಗಿನಂತಹ ಮಾರಿ ಬಡಿದಾಗ, ರೈಲು ಅಪಘಾತಗಳು ಸಂಭವಿಸುವಾಗ ಬೇರೆ ಬೇರೆ ಜನ್ಮ ಕುಂಡಲಿಯವರು ಒಟ್ಟಿಗೆ ಸಾಯುತ್ತಾರೆ. ಒಂದೇ ಜನ್ಮಕುಂಡಲಿಯವರು ಬೇರೆ ಬೇರೆ ಬದುಕಿನ ಹಾದಿಯಲ್ಲಿ ಸಾಗುತ್ತಾರೆ. ಅನುಮಾನ, ದತ್ತಾಂಶ ಸಂಗ್ರಹ, ಪರೀಕ್ಷೆ, ಪ್ರಶ್ನೆ, ವಿಶ್ಲೇಷಣೆ, ನಿಖರ ಊಹೆ, ಮರು ಪರೀಕ್ಷೆ, ಅನ್ವಯ ಇವೆಲ್ಲ ವಿಜ್ಞಾನದ ನಿಜಮಾರ್ಗದ ನಿಲ್ದಾಣಗಳು.
ಜನ್ಮ ಕುಂಡಲಿಯ ಸಹಾಯದಿಂದ ಮನುಷ್ಯ ಯಾವ ಉದ್ಯೋಗ ಹಿಡಿಯುತ್ತಾನೆ, ಯಾವಾಗ ಮದುವೆ ಆಗುತ್ತಾನೆ, ಯಾವಾಗ ಸಾಯುತ್ತಾನೆ ಎಂದು ಲೆಕ್ಕ ಹಾಕುವುದು ಒಂದು ಉದ್ಯೋಗವೇ ಆಗಿಬಿಟ್ಟಿದೆ. ಈ ಕೌಶಲದಿಂದ ಹೊಟ್ಟೆ ತುಂಬಿಸಿಕೊಳ್ಳುವ ಮಂದಿ ತಮ್ಮ ಸುತ್ತ ಮೌಢ್ಯವು ಆವರಿಸಿಕೊಂಡಿರಬೇಕು ಎಂದು ಬಯಸುತ್ತಾರೆ. ಭಯಗೊಳಿಸಿ ನಿಯಂತ್ರಣದಲ್ಲಿಟ್ಟುಕೊಳ್ಳುವುದು ಹೊಸ ವರಸೆಯೇನೂ ಅಲ್ಲ. ಇದು ಹಳೆಯ ಚಾಳಿ.

Monday, 13 February 2017

ಕನ್ನಡದ ಕಾವ್ಯ ಪರಂಪರಯನ್ನು ಕಾಲೇಜ ವಿಧ್ಯಾರ್ಥಿಗಳ ಮುಂದೆ ಬಿಚ್ಚಿಡುವ ಪ್ರಯತ್ನವೇ ಸಮುದಾಯದ ಕಾವ್ಯ ರಂಗ ತಿರುಗಾಟ





 ಯುವಕರದನಿ ಇಂದು ಕರ್ಕಶವಾಗುತ್ತಿರುವ ಹೊತ್ತಿನಲ್ಲಿ ಅವರ ದೇಹಕ್ಕೆ ಕಾವ್ಯದ ಸಾಹಚರ್ಯ ಒದಗಿಸುವ ಸಾಮಾಜಿಕ ಉದ್ದೇಶದಿಂದ ಶಾಸನ ಪದ್ಯಗಳಿಂದ ಹಿಡಿದು ಇದುವರೆಗಿನ ಕಾವ್ಯ ಕಥನಗಳ ಆಯ್ದ ಬರಹಗಳ ತುಣುಕನ್ನು ಸಂಬಂಧಗಳ ಪರಿಕಲ್ಪನೆಯಾಧಾರದಲ್ಲಿ ಹೆಣೆದು ಕಾವ್ಯರಂಗ ರೂಪಕವಾಗಿಸಲಾಗಿದೆ. ಕನ್ನಡದ ಲೋಕಗೃಹಿಕೆ, ಕನ್ನಡದ ವಿವೇಕ ಇವನ್ನು ಇಂದಿನ ಯುವಕರಿಗಾಗಿ ಮರುನಿರೂಪಿಸುವ ಒಂದು ಪ್ರಯತ್ನ ಭಾಗವಾಗಿ ಸಮುದಾಯದ ನಟ ನಟಿಯರು ಈ ಕಾವ್ಯಗಳನ್ನು ಆಡುತ್ತಾರೆ, ಹಾಡುತ್ತಾರೆ,ಕೆಲವನ್ನು ಅಭಿನುಸುತ್ತಾರೆ.  ಒಂದೂವರೆಗಂಟೆ ಕಾಲ ಸುಮಾರು 31 ಸಾಹಿತ್ಯಿಕ ಬರಹವನ್ನು ಇಲ್ಲಿ ರಂಗಕ್ಕೆತರಲಾಗಿದೆ. ಸಾಹಿತ್ಯ ಕಥನಗಳ ರಂಗ ಓದು ಇದು. ವಿದ್ಯಾರ್ಥಿಗಳಿಗೂ, ಅಧ್ಯಾಪಕರಿಗೂ ಅನುಕೂಲವಾಗುವುದೆಂಬ ಶೈಕ್ಷಣಿಕ ಉದ್ದೇಶವಿದೆ.
     ಹಣತೆ ಹಚ್ಚುತ್ತೆವೆ ನಾವು ಕತ್ತಲನ್ನು ಗೆಲ್ಲುತ್ತೆನೆಂಬ ಜಿದ್ದಿನಿಂದಲ್ಲ ಇರುವಷ್ಟು ಹೊತ್ತು ನಿಮ್ಮ ಮುಖ ನಾವು ನನ್ನ ಮುಖ ನೀವು ನೋಡಬಹುದೆಂಬ ಆಶೆಯಿಂದ ಎಂಬ ಜಿಎಸ್‍ಎಸ್ ರ ಪದ್ಯದಿಂದ ಆರಂಬವಾಗುವ ಈ ಕಾವ್ಯರಂಗ ಕನ್ನಡ ನಾಡು ರೂಪಿಸಿಕೊಂಡ ಬಂದ ಸಂಬಂದಗಳ ಜಾಲವನ್ನು ಹೆಣೆಯುವ ಕೆಲವು ನುಡಿಗಳನ್ನು ಕವಿರಾಜ ಮಾರ್ಗದಿಂದ ಮತ್ತು ದೂರದ ಬನವಾಸಿ ಕುರಿತು ಪಂಪನು ಹೇಳುವ ಚಾಗದ ಭೋಗದ ಸಾಲುಗಳನ್ನು ಒಳಗೊಂಡು  ಮನುಷ್ಯರಲ್ಲಿರುವ ಜಾತಿಸೂತಕ, ಕರ್ಮಸೂತಕವನ್ನು ಕಿತ್ತಿ ಅವರೆಲ್ಲರನ್ನು ಒಂದುಮಾಡಲು ಹೋರಟ ಶರಣ ಪರಂಪರೆಯನ್ನು ನೆನೆಯುತ್ತಾ  ಕುವೆಂಪುರವರ ರಾಮಾಯಣ ದರ್ಶನಂ ಹಾಗೂ ಶಿವರಾಮ ಕಾರಂತರ ಚೋಮ ಹಾಗೂ ಪ್ರಕೃತಿ ಸಂಬಂದಗಳ ಕಲ್ಪನಾ ಸ್ವರೂಪ ಸಾರವು ಬೇಂದ್ರೆಯವರ ಬೃಂಗದ ಬೆನ್ನೇರಿ ಬಂತು ಹಾಗೂ ವರ್ಗಅಸಮಾನತೆ, ಧರ್ಮದ ಹೆಸರಿನಲ್ಲಿ ನಡೆಯುವ ಡೊಂಗಿತನ ಸಾರುವ  ಜಾನಪದ ಹಾಗೂ ತತ್ವಪದದ ಕೇಲವು ಸಾಲುಗಳನ್ನು ಧ್ವನಿಪೂರ್ವಕವಾಗಿ ಇಲ್ಲಿ ನಿರೂಪಿಸಲಾಗಿದೆ. ಸ್ತ್ರೀ ಸಂಬಂದಗಳ ಕುರಿತು ಹೇಳುವ ಪ್ರತಿಭಾ ನಂದಕುಮಾರ ಹಾಗೂ ವೈದೇಹಿಯವರ ಕವನದ ಸಾಲುಗಳು ಇಲ್ಲಿ ಹೆಣ್ಣಿಣ ಶೋಷಣೆಯ ಮುಖಗಳನ್ನು ಅನಾವರಣ ಮಾಡಿದೆ. ದೇವನೂರರ ಒಡಲಾಳ ಸಿದ್ದಲಿಂಗಯ್ಯನವರ ನೆನ್ನೆ ದಿನ ನನ್ನ ಜನ  ಕವನಗಳು ಇವತ್ತೀನ ಶೋಷಣೆಯನ್ನು ಸಾರುತ್ತವೆ. ಕೊನೇಗೆ ಸು,ರಂ ಎಕ್ಕುಂಡಿಯವರ ಮೂಡಲ ದೀಪದೋಂದಿಗೆ ಕಾವ್ಯರಂಗ ಮುಕ್ತಾಯವಾಗುತ್ತದೆ. ಒಟ್ಟಾರೆಯಾಗಿ ಕಾವ್ಯರಂಗ ಕಾಲೇಜಿನ ವಿದ್ಯಾರ್ಥಿಗಳಿಗೆ ಹಾಗು ಉಪನ್ನಾಸಕರಿಗೆ ಮೆಚ್ಚಿಗೆಯಾಗುವ ರೀತಿಯಲ್ಲಿ ನಮ್ಮ ಕಾಲಾವಿದರಾದ ರಂಜಿತಾ ಜಾಧವ.ರೇಶ್ಮಾ ತಿಪಟೂರ. ಧೀರಜ್, ಯಲ್ಲಪ್ಪ ಗಾಣಗೇರ, ಚಿದಂಬರ ಕುಲಕರ್ಣಿ, ಮಹಾಂತೇಶ ದೊಡ್ಡಮನಿ, ಪ್ರಶಾಂತ, ವಿನಾಯಕ ಈಳಗೇರ , ಬಸವರಾಜ ಕಮ್ಮಾರ, ಕುಮಾರ ಬದಾಮಿ, ಚಂದ್ರು ಕಿಲ್ಲೇದಾರ, ಪ್ರಶಾಂತ ಒಳಗೊಂಡ 13 ಜನರ ಕಲಾತಂಡ ಎಲ್ಲರನ್ನು ಮಂತ್ರಮುಗ್ದರನ್ನಾಗಿಸುವ ಹಾಗೆ ಅಭಿನಯಿಸಿದರು. ಈ ಕಾವ್ಯ ರಂಗ ಯಶಸ್ವಿ ಹಿಂದೆ ನಿರ್ದೇಕರಾದ ಡಾ.ಶ್ರೀಪಾಧ ಬಟ್ ಹಾಗೂ ರಂಗಪಠ್ಯ ಸಿದ್ದಪಡಿಸಿದ ಡಾ.ಎಂ.ಜಿ ಹೆಗಡೆ ಯವರ ಶ್ರಮವಿದೆ. ಇವರೆಲ್ಲರ ಶ್ರಮ ಸಾರ್ಥಕಗೊಂಡದ್ದು ಈ ಸಮುದಾಯದ ಕಾವ್ಯರಂಗ ತಿರುಗಾಟದಿಂದ.
  ಈ ಕಾವ್ಯರಂಗ ಹಾವೇರಿ ಜಿಲ್ಲೆಯ ಶೇಷಗಿರಿಯಲ್ಲಿ 21-01-2017 ರಿಂದ 15 ದಿನಗಳ ಕಾಲ ಡಾ.ಶ್ರೀಪಾದ ಭಟ್ ರವರ ನಿರ್ದೇಶನದಲ್ಲಿ ತರಬೇತಿ ಹೊಂದಿ, ದಿನಾಂಕ; 03-02-2017 ರಂದು ಧಾರವಾಡದ ಕನ್ನಡ ಸಾಹಿತ್ಯಭವನದಲ್ಲಿ ಚಿದಂಬರರಾವ ಜಂಭೆಯವರಿಂದ ಯದ್ಘಾಟನೆಗೊಂಡು ಧಾರವಾಡ,ಬೆಳಗಾಂ,ಗದಗ ಜಿಲ್ಲೆಗಳ ಕಾಲೇಜುಗಳಲ್ಲಿ ಪ್ರದರ್ಶನ ನೀಡಿತ್ತಿದೆ.
ರಂಗ ಪಠ್ಯ: ಡಾ.ಎಂ.ಜಿ.ಹೆಗಡೆ; ವಿನ್ಯಾಸ: ದಾಮೋದರ ನಾಯ್ಕ, ಹೊನ್ನಾವರ; ನಿರ್ದೇಶನ: ಡಾ.ಶ್ರೀಪಾದ ಭಟ್ ಸಹ ನಿರ್ದೇಶನ;




   

Saturday, 4 February 2017

ನಾರಾಯಣ ಗಾಂವಕಾರರಿಗೆ ದಿ. ದುರ್ಗಾದಾಸ ಗಂಗೊಳ್ಳಿ ಪ್ರಶಸ್ತಿ

ಕುಮಟಾದ ಕಲಾ ಗಂಗೋತ್ರಿ ಸಂಸ್ಥೆಯು ಯಕ್ಷಗಾನ ಕಲಾವಿದರಾದ ನಾರಾಯಣ ಗಾಂವಕಾರ ಇವರಿಗೆ ದಿ. ದುರ್ಗಾದಾಸ ಗಂಗೊಳ್ಳಿ ಪ್ರಶಸ್ತಿ ನೀಡಿ ಗೌರವಿಸಿತು. ಇದೇ ಸಂದರ್ಭದಲ್ಲಿ ಜಾನಪದ ಹಾಡುಗಾರ್ತಿ ಪದ್ಮಶ್ರಿ ಸುಕ್ರಿ ಗೌಡ, ಶ್ರೀ ಮುರೂರು ವಿಷ್ಣು ಭಟ್, ಡಾ ಎಂ ಆರ್ ನಾಯಕರನ್ನು ಇದೇ ವೇದಿಕೆಯಲ್ಲಿ ಸಮ್ಮಾನಿಸಲಾಯಿತು.


ಬಡಾಬಡಗಿನ ಯಕ್ಷಗಾನ ಪರಂಪರೆಯಲ್ಲಿ ಡೇರೆಮೇಳಗಳ ಕಲಾವಿದರಷ್ಟೇ ಜನಪ್ರಿಯರಾದ ಅನೇಕ ಹವ್ಯಾಸಿ ಮತ್ತು ಬಯಲಾಟದ ಕಲಾವಿದರಿದ್ದಾರೆ. ಪಡುವಣಿಯ ನಾರಾಯಣ ಗಾಂವಕಾರರು ಅಂತಹ ಕಲಾವಿದರಲ್ಲೊಬ್ಬರು. ಅನಾರೋಗ್ಯದ ಕಾರಣದಿಂದಾಗಿ ತಮ್ಮ ಹವ್ಯಾಸವನ್ನು ಐವತ್ತೈದರ ಹರೆಯದಲ್ಲೇ ನಿಲ್ಲಿಸಿದರೂ ಅವರ ಎರಡು ದಶಕಗಳ ಕಾಲದ ಯಕ್ಷಗಾನದ ಸೇವೆ ಅನುಪಮವಾದದ್ದು. ತಮ್ಮ ಕಾಲದಲ್ಲಿ ಉತ್ತರ ಕನ್ನಡದ ಉದ್ದಗಲಗಳಲ್ಲಿ ವಿಶಿಷ್ಟ ಪಾತ್ರಾಭಿನಯ ಮತ್ತು ಅರ್ಥಗಾರಿಕೆಗಾಗಿ ಹೆಸರಾಗಿದ್ದ ನಾರಾಯಣ ಗಾಂವಕಾರರು ಮಾರುತಿ ಪ್ರತಾಪ ಪ್ರಸಂಗದ ಹನುಮಂತ, ಕಚದೇವಯಾನಿ ಪ್ರಸಂಗದ ಶುಕ್ರಾಚಾರ್ಯ ಪಾತ್ರಗಳ ಮಟ್ಟಿಗಂತೂ `ಇವರೇ ಸೈ’ ಎಂಬಷ್ಟು ಜನಪ್ರಿಯರು.

ಉತ್ತರ ಕನ್ನಡದ ಕುಮಟಾ ತಾಲೂಕಿನ ಪಡುವಣಿ ಇವರ ಹುಟ್ಟೂರು. ಅನಂತ ಗಾಂವಕಾರ
ಮತ್ತು ಸಣ್ಣಮ್ಮ ಗಾಂವಕಾರರ ಮಗನಾಗಿ 1940 ರ ಮೇ 10 ನೇ ತಾರೀಕಿನಂದು ಜನಸಿದ ಗಾಂವಕಾರರು ಮೆಟ್ರಿಕ್ ವರೆಗಿನ ಶಿಕ್ಷಣವನ್ನು ಹೆಗೆಡೆಯಲ್ಲಿ ಪಡೆದವರು. ಯಕ್ಷಗಾನದ ಹುಚ್ಚು ಓದನ್ನು ಮುಂದುವರಿಸಲು ಅವಕಾಶವನ್ನೇ ನೀಡದಾಗ ತನ್ನ ಹದಿನಾಲ್ಕನೇ ವಯಸ್ಸಿನಲ್ಲಿಯೇ ಗೆಜ್ಜೆ ಕಟ್ಟಿ ಅಭಿಮನ್ಯುವಿನ ಪಾತ್ರದ ಮೂಲಕ ರಂಗದ ಮೇಲೆ ಹೆಜ್ಜೆ ಹಾಕಿದರು. ಆಗಿನ ಹೆಸರಾಂತ ಭಾಗವತರಾದ ಬಾಡದ ಶಿವರಾಮ ಹೆಗಡೆಯವರು ಮತ್ತು ಪಡುವಣಿ ಪರಮಯ್ಯ ಪಟಗಾರರರನ್ನು ಇವರು ತನ್ನ ಯಕ್ಷಗುರುಗಳೆಂದು ನೆನಪುಮಾಡಿಕೊಳ್ಳುತ್ತಾರೆ. ಚಿಕ್ಕ ಪ್ರಾಯದಲ್ಲೇ ಯಕ್ಷಗಾನಕ್ಕೆ ಮನಸೋತು, ಎಲ್ಲ ಬಗೆಯ ಪಾತ್ರಗಳನ್ನು ಮಾಡುತ್ತಾ ಹಂತ-ಹಂತವಾಗಿ ಮೇಲೇರಿ, ಎರಡನೇ ವೇಷದಾರಿಯಾಗಿ ರಸಿಕರ ಮನದಲ್ಲಿ ಅಚ್ಚಳಿಯದೆ ಉಳಿದವರು. ರಂಗದಿಂದ ನಿವೃತ್ತಿ ಪಡೆದು ಎರಡುದಶಕಗಳೇ ಕಳೆದರೂ ಊರೂರುಗಳಲ್ಲಿ ಇವರ ಪಾತ್ರವನ್ನು ಕಣ್ಣೆದರು ತಂದುಕೊಂಡು ಪರವಶರಾಗುವ ಅಭಿಮಾನಿಗಳಿದ್ದಾರೆ. ತನ್ನ ಪಾತ್ರವನ್ನು ರೂಪಿಸುತ್ತಾ ಒಂದು ಸಂಘಟಿತ ಆಖ್ಯಾನದ ಪ್ರದರ್ಶನಕ್ಕೆ ಪೋಷಣೆ ನೀಡುವುದು ಯಕ್ಷಗಾನಕ್ಕೇ ವಿಶಿಷ್ಟವಾದ ಪರಂಪರೆ. ನಾರಾಯಣ ಗಾಂವಕಾರರು ಈ ಅಲಿಖಿತ ನಿಯಮವನ್ನು ಮೀರಿದವರಲ್ಲ. ಹವ್ಯಾಸಿ ಮೇಳಗಳಲ್ಲಿಯೇ ತಮ್ಮ ಸೇವೆಯನ್ನು ಪೂರ್ಣಗೊಳಿದವರಾಗಿದ್ದರೂ ಪ್ರೇಕ್ಷಕ ವರ್ಗ ಯಾವುದೇ ಆಗಿದ್ದರೂ ಪ್ರಾಮಾಣಿಕ ಪ್ರದರ್ಶನ ನೀಡುವ ಶೃದ್ಧೆ ಮತ್ತು ಬದ್ಧತೆಯಲ್ಲಿ ಇವರದು ಪಕ್ಕಾ ವೃತ್ತಿಪರ ನಿಲುವು. ಚಿಕ್ಕ ಹಳ್ಳಿಗಳಲ್ಲಿಯೇ ಇರಲಿ ನಗರದ ದೊಡ್ಡ ಸಭಾಂಗಣಗಳವೇ ಆಗಿರಲಿ ನೂರಕ್ಕ ನೂರಷ್ಟು ತಮ್ಮ ಸಾಮರ್ಥ್ಯಕ್ಕೆ ತಕ್ಕಂತಹ ಪ್ರದರ್ಶನವನ್ನು ನೀಡುವುದಕ್ಕೆ ನಾರಾಯಣ ಗಾಂವಕಾರರು ಸದಾ ಬದ್ಧರಾಗಿದ್ದರು. ಪಾತ್ರ ಬೀಳಾಗದಂತೆ ಸದಾ ಎಚ್ಚರದಲ್ಲಿರುವವರು. ಇವರ ಪಾತ್ರಗಳಲ್ಲೇ `ಹನುಮಂತ’ ನ ಪಾತ್ರ ಅನನ್ಯವಾದದ್ದು. ತನ್ನ ಯಕ್ಷಸೇವೆಯ ಆರಂಭದ ದಿನಗಳಲ್ಲೇ ಇಂದ್ರಜೀತು ಕಾಳಗದಲ್ಲಿ ಮೂರೂರು ದೇವರು ಹೆಗಡೆಯವರ ಇಂದ್ರಜಿತುವಿನ ಎದುರು ಹನುಮಂತನಾಗಿ ಹತ್ತಾರು ಕಡೆ ಪಾತ್ರವಹಿಸಿ ಹನುಮಂತನ ಪಾತ್ರಕ್ಕೆ ಅನನ್ಯವಾದ ಆಯಾಮವನ್ನು ಒದಗಿಸಿದವರು. ಆನಂತರ, ಇವರು ನೂರಾರು ರಂಗಸ್ಥಳಗಳ ಮೇಲೆ ಹನುಮಂತನಾಗಿ ಮೆರೆದವರು. ವಾಚಿಕ, ಆಹಾರ್ಯ, ಆಂಗಿಕ ಹಾಗೂ ಸಾತ್ವಿಕ ಅಭಿನಯಗಳಲ್ಲಿ ಇವರು ಸಮಾನ ಸಿದ್ಧಿಯನ್ನು ಸಾಧಿಸಿದವರು. ಇವರ ಅಭಿನಯ ನಿಜವಾದ ರಸೋಲ್ಲಾಸವೇ ಆಗಿರುತಿತ್ತು. ಉತ್ತಮ ನಾಯ್ಕರ ಮೇಳವೆಂದೇ ಪ್ರಸಿದ್ಧವಾಗಿದ್ದ ಕುಮಟಾದ ಶಾಂತಿಕಾ ಪರಮೇಶ್ವರಿ ಯಕ್ಷಗಾನ ಮಂಡಳಿ ಇಬ್ಬರು ಶ್ರೇಷ್ಠ ಹನುಮಂತನ ಪಾತ್ರದಾರಿಗಳನ್ನು ಒಂದೇ ಕಾಲಗಟ್ಟದಲ್ಲಿ ನೀಡಿದೆ. ಒಬ್ಬರು ಕುಮಟಾ ಗೋವಿಂದ ನಾಯ್ಕರಾದರೆ ಇನ್ನೊಬ್ಬರು ಪಡುವಣಿ ನಾರಾಯಣ ಗಾಂವಕಾರರು. ವೇಷಕಟ್ಟಿಕೊಳ್ಳುವಲ್ಲಿ ತೋರುವ ಶ್ರದ್ಧೆ, ಮುಖವರ್ಣಿಕೆಯಲ್ಲಿನ ಅಚ್ಚುಕಟ್ಟುತನ ಮತ್ತು ಕಲಾತ್ಮಕತೆ ಮತ್ತು ಹನುಮಂತನ ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡುವ ಕಾರಣಕ್ಕಾಗಿ ನಾರಾಯಣ ಗಾಂವಕಾರರು ಬಡಗುತಿಟ್ಟು ಯಕ್ಷಗಾನ ಪ್ರಪಂಚದ ಸಾರ್ವಕಾಲಿಕ ಶ್ರೇಷ್ಟ ಹನುಮಂತನ ಪಾತ್ರದಾರಿಗಳ ಸಾಲಿನಲ್ಲಿ ನಿಲ್ಲುವವರು. ಯಕ್ಷರಂಗದ ದಂತಕತೆ ಎಕ್ಟರ್ ಜೋಷಿಯವರ ಭೂಕೈಲಾಸದಲ್ಲಿ ರಾವಣನ ಪಾತ್ರ ಮಾಡುತ್ತಿದ್ದರೆ ನಾರಾಯಣ ಗಾಂವಕಾರರದು ಈಶ್ವರನ ಪಾತ್ರ. ಈ ಜೋಡಿಯ ಜನಪ್ರೀಯತೆ ಅವರನ್ನು ಗೋವಾ ಮತ್ತು ಮುಂಬೈಗಳಲ್ಲಿಯೂ ಪ್ರದರ್ಶನ ನೀಡುವ ಅವಕಾಶವನ್ನು ನೀಡಿತು. ಕೆರೆಮನೆ ಮಹಾಬಲ ಹೆಗೆಡೆಯವರ ಸುದನ್ವ ಪಾತ್ರಕ್ಕೆ ಎದುರಾಗಿ ಅರ್ಜುನನಾಗಿ, ಚಿಟ್ಟಾಣಿ ರಾಮಚಂದ್ರ ಹೆಗಡೆಯವರ ಭಸ್ಮಾಸುರನ ಪಾತ್ರಕ್ಕೆ ಎದುರಾಗಿ ರಾವಣನಾಗಿ ಹೀಗೆ ಆಗಿನ ಪ್ರಸಿದ್ಧ ಕಲಾವಿದರೊಂದಿಗೆ ಪಾತ್ರ ಮಾಡಿ ಮೆಚ್ಚುಗೆ ಗಳಿಸಿದವರು.
ಕಚ-ದೇವಯಾನಿ ಪ್ರಸಂಗದಲ್ಲಿ ನಾರಾಯಣ ಗಾಂವಕಾರರು ಶುಕ್ರಾಚಾರ್ಯನಾಗಿ ಕಚನಾಗಿ ಧಾರೇಶ್ವರ ಮಾಸ್ತರರು ಮತ್ತು ದೇವಯಾನಿಯಾಗಿ ಪಾಲನಕರ ಮಾಸ್ತರರು ಇರಲೇಬೇಕೆಂಬ ಸಹೃದಯರ ಒತ್ತಾಯ ಆ ಕಾಲದ ಅಲಿಖಿತ ನಿಯಮವಾಗಿ ಚಾಲ್ತಿಯಲ್ಲಿದ್ದುದು ಅವರ ಜನಪ್ರಿಯತೆಗೆ ಸಾಕ್ಷಿ. ಅನಾರೋಗ್ಯದಿಂದಾಗಿ ತಮ್ಮ ಐವತ್ತರ ಹರೆಯದಲ್ಲೇ ವೇಷ ಹಚ್ಚುವುದನ್ನು ನಿಲ್ಲಿಸಿ ತಾಳಮದ್ದಳೆಯಲ್ಲಿ ತಮ್ಮ ವ್ಯವಸಾಯವನ್ನು ಮುಂದುವರಿಸಿದರು. ಅರ್ಥಗಾರಿಕೆಯಲ್ಲೂ ಇವರು ತಮ್ಮ ಛಾಪನ್ನು ಮೂಡಿಸಿದರು. ಕರ್ಕಿಯ ಹಾಸ್ಯಗಾರ ಮೇಳ, ಹಳದೀಪುರದ ಜೋಗನಕಟ್ಟೆ ಮೇಳ, ಕುಮಟಾದ ಶ್ರೀ ರಾಮನಾಥ ಯಕ್ಷಗಾನ ಮಂಡಳಿ, ಹೆಗಡೆಯ ಶ್ರೀ ಶಾಂತಿಕಾ ಪರಮೇಶ್ವರಿ ಯಕ್ಷಗಾನ ಮಂಡಳಿ ಮುಂತಾದ ಬಯಲಾಟದ ಮೇಳಗಳಲ್ಲಿ ಪಾತ್ರವಹಿಸಿ ಜಿಲ್ಲೆಯ ಹಿರಿ-ಕಿರಿಯ ಯಕ್ಷಗಾನ ಕಲಾವಿದರೊಂದಿಗೆ ಒಡನಾಟಹೊಂದಿದವರು. ಮೂರೂರು ದೇವರ ಹೆಗಡೆ, ಎಕ್ಟರ್ ಜೋಷಿ ಮತ್ತು ವೀರಭದ್ರನಾಯ್ಕರ ಪಾತ್ರಗಳಿಂದ ಪ್ರಭಾವಿತರಾಗಿದ್ದ ನಾರಾಯಣ ಗಾಂವಕಾರರು ಕಡತೋಕ ಮಂಜು ಭಾಗವತರು, ಕೊಪ್ಪಲಮಕ್ಕಿ ಭಾಗವತರು, ಬಾಡದ ಶಿವರಾಮ ಹೆಗಡೆಯವರಂತಹ ಶ್ರೇಷ್ಟರ ತಾಳಕ್ಕೆ ಹೆಜ್ಜೆಹಾಕಿದವರು. ದೇವರು ಹೆಗಡೆಯವರು, ಕೊಂಡದಕುಳಿ ರಾಮ ಹೆಗಡೆ (ಸೀನಿಯರ್) ಅಗ್ರಗೋಣ ಎಂ. ಎಂ ನಾಯಕ, ಹಿರೇಗುತ್ತಿ ವೆಂಕಟ್ರಮಣ ನಾಯಕರಂತಹ ಮೇರುಕಲಾವಿದರ ಮಾರ್ಗದರ್ಶನ ಪಡೆದು ತನ್ನದೇ ದಾರಿಯನ್ನು ಗುರುತಿಸಿಕೊಂಡವರು. ಕುಮಟಾ ಉತ್ತಮ ನಾಯ್ಕ್, ಕುಮಟಾ ಗೋವಿಂದ ನಾಯ್ಕ್ , ಗೋಕರ್ಣ ಹೊನ್ನಪ್ಪ ಗುನಗಾ , ಶಿವಾನಂದ ಭಂಡಾರಿ, ಅನಂತ ಹೆಗಡೆ ಹಾವಗೋಡಿ ಮುಂತಾದವರ ಜೊತೆಯಲ್ಲಿಯೇ ಹವ್ಯಾಸಿ ಮೇಳವಾಗಿ ಯಕ್ಷಗಾನವನ್ನು ಹಳ್ಳಿಗಳಲ್ಲಿ ಜೀವಂತವಾಗಿರಿಸಿದವರು. ನಾರಾಯಣ ಗಾಂವಕಾರರು ಯಾರನ್ನೂ ಅನುಸರಿಸಿದವರಲ್ಲ; ಅನುಕರಿಸಿದವರಲ್ಲ.
ಯಕ್ಷಗಾನದ ನೈಜ ಪ್ರದರ್ಶನ ನೀಡಿದವರಲ್ಲಿ ಇವರೊಬ್ಬರು. ತಮ್ಮ ಪಾತ್ರಗಳ ಮೂಲಕ ಪ್ರೇಕ್ಷಕರಲ್ಲಿ ನಾರಾಯಣ ಗಾಂವಕಾರರು ಹೊಮ್ಮಿಸಿದ ರಸಾನುಭವ ಅನಿರ್ವಚನೀಯ.