Tuesday 21 June 2022

ಜೀವಪ್ರೀತಿಯ ಕೊಡೆಯೊಂದು ಸದಾ ನೆರಳಾಗಲಿ!

 ಮೂರು ವರ್ಷಗಳ ಹಿಂದೆ ಶಿಕ್ಷಣ ಇಲಾಖೆಯು ಭಾರತ  ಜ್ಞಾನ ವಿಜ್ಞಾನ ಸಮಿತಿಯ ಜೊತೆಗೂಡಿ ನಡೆಸಿದ ರಾಜ್ಯ ಮಟ್ಟದ ಮಕ್ಕಳ ವಿಜ್ಞಾನ ಹಬ್ಬಕ್ಕಾಗಿ  ಶ್ರೀರಂಗಪಟ್ಟಣಕ್ಕೆ ಹೋದಾಗ ಸಯಿದಾ ನಕ್ರಾ ಎಂಬ ಹುಡುಗಿಯನ್ನು ಭೇಟಿಯಾಗಿದ್ದೆ. ಆಗ ಆಕೆ ಇನ್ನೂ ಪಿ.ಯು.ಸಿ ಓದುತ್ತಿದ್ದರು. ಹಿಂದಿನ ವರ್ಷ ಆಕೆ ಹತ್ತನೇ ತರಗತಿಯಲ್ಲಿರುವಾಗ ವಿನ್ಯಾಸಗೊಳಿಸಿದ ಆಲ್‌ ಇನ್‌ ಒನ್‌ ಕೊಡೆಗೆ ಇನಸ್ಪೈರ್‌ ರಾಷ್ಟ್ರೀಯ ಪ್ರಶಸ್ತಿ ಬಂದಿತ್ತು. ರಾಷ್ಟ್ರಪತಿಗಳ ವಿಶೇಷ ಪ್ರಶಸ್ತಿಯೂ ಆಕೆಗೆ ಒಲಿದಿತ್ತು. ಆಕೆಯ ಸಂಶೋಧನೆಯು ಮಿದುಳಿನಿಂದ ಕಾರ್ಯಗತವಾದದ್ದಕ್ಕಿಂತ ಹೆಚ್ಚಾಗಿ ಹೃದಯದಿಂದ ಪರಿಕಲ್ಪಿತವಾಗಿತ್ತು.

ತರಕಾರಿ ಕೊಳ್ಳಲು ಮಾರುಕಟ್ಟೆಗೆ ಹೋದಾಗ ರಸ್ತೆಯ ಎರಡೂ ಬದಿಯಲ್ಲಿ ವ್ಯಾಪಾರಕ್ಕೆ ಕುಳಿತಿದ್ದ ಮಹಿಳೆಯರನ್ನು ಕಂಡು ಸಯೀದಾ ದುಃಖಿತರಾಗುತ್ತಿದ್ದರು. ಬಿಸಿಲು, ಮಳೆಯೆನ್ನದೆ ಹೊಟ್ಟೆಪಾಡಿಗಾಗಿ ರಸ್ತೆಯ ಬದಿಯಲ್ಲಿ ಹಾಗೆ ಕುಳಿತುಕೊಳ್ಳಬೇಕಾದದ್ದು ಬೀದಿ ವ್ಯಾಪಾರಿಗಳಿಗೆ ಅನಿವಾರ್ಯ. ಈ ಮಹಿಳೆಯರಿಗೆ ತಾನು ಹೇಗೆ ಸಹಾಯಮಾಡಬಹುದು ಎಂದು ಸಯೀದಾ ಸದಾ ಯೋಚಿಸತೊಡಗಿದರು. ಈ ಯೋಚನೆಯಿಂದಲೇ ಆಕೆಯ ಬಹುಪಯೋಗಿ ಕೊಡೆ ರೂಪುಗೊಂಡಿತು.

ಎಲ್ಲರೂ ಮಳೆ, ಬಿಸಿಲಿಗೆ ಬಳಸುವ ಕೊಡೆಯನ್ನೇ ಸಯೀದಾ ಆಧುನಿಕ ತಂತ್ರಜ್ಞಾನ ಬಳಸಿ ನವೀಕರಿಸಿದರು. ಸೋಲಾರ್‌ ಪ್ಯಾನೆಲ್‌ ಸಿಕ್ಕಿಸಿ ಅದೇ ಶಕ್ತಿಯಿಂದ ಕೊಡೆಗೆ ಒಳಗೊಂದು ಫ್ಯಾನ್‌ ತಿರುಗುವಂತೆ ಮಾಡಿದರು. ಸಂಜೆಯಾಗುತ್ತಲೆ ಎಲ್‌.ಇ.ಡಿ ದೀಪ ಉರಿಯಿವಂತೆ ಸಜ್ಜುಗೊಳಿಸಿದರು. ಮೊಬೈಲ್‌ ಚಾರ್ಜರ್‌ ಜೋಡಿಸಿದರು. ವ್ಯಾಪಾರ ಮಾಡುತ್ತಿರುವವರಿಗೆ ಪದೇ ಪದೇ ಮೊಬೈಲ್‌ ಫೋನನ್ನು ಕೈಯಲ್ಲಿ ಹಿಡಿಯುವುದು ಕಷ್ಟ. ಅದಕ್ಕಾಗಿ ಸಯಿದಾ ಬ್ಲೂ ಟೂತ್‌ ತಂತ್ರಜ್ಞಾನ ಬಳಸಿ ಕೈಗಳಲ್ಲಿ ಮೊಬೈಲ್‌ ಎತ್ತಿಕೊಳ್ಳದೆ ಕರೆಗಳನ್ನು ಸ್ವೀಕರಿಸಲು ಸಾಧ್ಯವಾಗುವಂತೆ ಕೊಡೆಯನ್ನು ಬಳಕೆದಾರ ಸ್ನೇಹಿಯಾಗಿಸಿದರು. ಈಗ ಮಾಮೂಲು ಕೊಡೆಯು ಅತ್ಯಾಧುನಿಕ ಅಂಗಡಿಯಾಗಿ ರೂಪುಗೊಂಡಿತು.

ಈ ಕೊಡೆಯನ್ನು ಯಾವುದಾದರೂ ನವೋದ್ಯಮಿಗಳು ತಯಾರಿಸಲಿ ಮತ್ತು ಸರ್ಕಾರಗಳು, ಸಂಘ ಸಂಸ್ಥೆಗಳು ಖರೀದಿಸಿ ರಸ್ತೆ ಬದಿಯ ವ್ಯಾಪಾರಿಗಳಿಗೆ ಒದಗಿಸುವಂತಾಗಲಿ ಎಂಬ ಆಶಯ ಸಯಿದಾರವರದಾಗಿತ್ತು. ಆ ಆಶಯಕ್ಕಾಗಿಯೇ ಆಕೆಗೆ ಇನಸ್ಪೈರ್‌ ಪ್ರಶಸ್ತಿ ಬಂದಿತು. ಈ ಮೂರು ವರ್ಷಗಳಲ್ಲಿ ಸಯಿದಾರ ಆಶಯ ಕೈಗೂಡಲಿಲ್ಲ ಎನ್ನುವುದು ಬೇರೆ ವಿಷಯ. ಆದರೆ, ಹೃದಯದಿಂದ ಯೋಚಿಸಿದ ಸಯಿದಾ ವಿಜ್ಞಾನವನ್ನು ಮಾನವೀಯಗೊಳಿಸಿದರು.

ಶರಧಿ ಎಂಬ ಕುಂದಾಪುರದ ಹುಡುಗಿ ಕೂಡಾ ಸಯಿದಾರಂತೆ ಇನಸ್ಪೈರ್‌ ರಾಷ್ಟ್ರೀಯ ಪ್ರಶಸ್ತಿ ಪಡೆದವರು. ಹಾಸ್ಟೆಲ್‌ ವಿದ್ಯಾರ್ಥಿಗಳು ಮಳೆಗಾಲದಲ್ಲಿ ಬಟ್ಟೆ ಒಣಗಿಸಲು ಪಡುತ್ತಿದ್ದ ಪಾಡು ಶರಧಿಯ ಸಂಶೋಧನೆಗೆ ಪ್ರೇರಣೆಯಾಯಿತು. ಬಟ್ಟೆಯನ್ನು ಹಾಸ್ಟೆಲಿನಲ್ಲಿ ಒಣಗಿಸಲು ಬಿಟ್ಟು ಶಾಲೆಗೆ ಹೋದರೆ ಹಿಂತಿರುಗಿ ಬಂದಾಗ ಮಳೆಯಲ್ಲಿ ತೊಯ್ದಿರುತಿತ್ತು. ಬಿಸಿಲು ಬಂದಾಗ ಬಟ್ಟೆ ಹೊರಬರುವ ಮತ್ತು ಮಳೆಯ ಸೂಚನೆ ಬರುತ್ತಲೇ ಮಾಡಿನಡಿ ಸೇರಿಕೊಳ್ಳುವಂತಹ ವ್ಯವಸ್ಥೆ ಇದ್ದರೆ ಎಷ್ಟು ಚೆನ್ನಾಗಿತ್ತು ಎಂದೆನಿಸಿತು ಶರಧಿಗೆ. ವಿಜ್ಞಾನ ಶಿಕ್ಷಕರ ಸಹಾಯ ಪಡೆದು ಅಂತದ್ದೊಂದು ಸೌಕರ್ಯವನ್ನು ಆಕೆ ತಯಾರಿಸಿದರು. ಬೆಳಕಿನ ತೀವ್ರತೆಗೆ ಸೂಕ್ಷ್ಮಗ್ರಾಹಿಯಾದ ಮೋಟಾರ್ ಜೋಡಿಸಿದ ಬಟ್ಟೆ ಒಣಗಿಸುವ ತಂತಿಯು ಬಿಸಿಲು ಬಂದಾಗ ಬಟ್ಟೆಯನ್ನು ಹೊರಗೊಯ್ದರೆ ಮೋಡ ಕವಿದಾಗ ಒಳಸೇರಿಸುತಿತ್ತು. ಈ ಉಪಕರಣ ಬಳಕೆಗೆ ದೊರೆಯದೇ ಹೋದರೂ ಇಂತಹ ಐಡಿಯಾ ಶರದಿಗೆ ಬಂದಿರುವುದಕ್ಕಾಗೇ ಆಕೆಯ ಹೊಸ್ಟೆಲ್ ಗೆಳತಿಯರ ಕಣ್ಣಾಲಿ ತುಂಬಿಕೊಂಡಿತ್ತು.

ಎಳವೆಯಲ್ಲೇ ಒದಗಿಬಂದ ಈ ಅಂತಃಕರಣವನ್ನು ದೊಡ್ಡವರಾಗುವವರೆಗೂ ಕಾಪಿಟ್ಟುಕೊಂಡರೆ ಜಗತ್ತು ಇನ್ನಷ್ಟು ಸುಂದರವಾಗಬಲ್ಲದು ಎಂಬುದಕ್ಕೆ ಶರದ್‌ ಆಸಾನಿ ಎಂಬ ಎಲೆಕ್ಟ್ರಿಕಲ್‌ ಎಂಜಿನಿಯರ್ ಉದಾಹರಣೆ. ಶರದರಿಗೆ ಕೂಡಾ ಜಗತ್ತಿನ ನೋವು, ಸಂಕಟ, ಹಸಿವುಗಳು ಸಯಿದಾ ಅಥವಾ ಶರಧಿಯಂತೆ ತೀವ್ರವಾಗಿ ಕಾಡುತಿದ್ದವು. 2004 ರಲ್ಲಿ ಮುಂಬೈನ ರೂಪದರ್ಶಿ ನಫೀಸಾ ಜೊಸೆಫ್‌ ನೇಣುಹಾಕಿಕೊಂಡು ಆತ್ಮಹತ್ಯೆಮಾಡಿಕೊಂಡ ಸುದ್ದಿಯನ್ನು ನ್ಯೂಸ್‌ ಚಾನೆಲ್‌ ಒಂದರಲ್ಲಿ  ನೋಡಿದ ಶರದ್‌ ಆಶಾನಿ ದುಃಖದಲ್ಲಿ ತಲೆ ಎತ್ತಿ ಫ್ಯಾನಿನ ಕಡೆಯೇ ನೋಡಿದರು. ಆಕೆ ನೇಣಿಗೆ ಕೊರಳೊಡ್ಡಿ ತನ್ನ ಭಾರವನ್ನು ಫ್ಯಾನಿಗೆ ವರ್ಗಾಯಿಸಿದಾಗ ಸೀಲಿಂಗಿಗೆ ಜೋಡಿಸಿದ ಫ್ಯಾನ್‌ ರಾಡ್‌ ತುಂಡಾಗಬಾರದಿತ್ತೇ ಎನಿಸಿತು ಅವರಿಗೆ. ಹೀಗೆ ಅನಿಸಿದ್ದೇ ತಡ, ಆತ್ಮಹತ್ಯೆಯನ್ನು ತಪ್ಪಿಸಬಹುದಾದಂತಹ ಫ್ಯಾನ್‌ ರಾಡನ್ನು ಏಕೆ ತಯಾರಿಸಬಾರದು ಎಂದು ಕಾರ್ಯಪ್ರವೃತ್ತರಾದರು. ನ್ಯಾಷನಲ್‌ ಕ್ರೈಮ್ ರೆಕಾರ್ಡ್ಸ್‌ ಬ್ಯೂರೋ ವರದಿಯ ಪ್ರಕಾರ  ಆ ಹಿಂದಿನ ವರ್ಷ ಒಂದು ಲಕ್ಷದ ಹದಿಮೂರು ಸಾವಿರ ಆತ್ಮಹತ್ಯೆಗಳು ವರದಿಯಾಗಿದ್ದವು. ಅವುಗಳಲ್ಲಿ ಮೂವತ್ತು ಸಾವಿರಕ್ಕೂ ಹೆಚ್ಚು ಆತ್ಮಹತ್ಯೆಗಳು ನೇಣು ಹಾಕಿಕೊಂಡು ನಡೆದಿರುವುದಾಗಿತ್ತು. ಈ ಸಂಖ್ಯೆ ಮತ್ತು ಪ್ರಮಾಣ  ಪ್ರತಿ ವರ್ಷವೂ ಹೆಚ್ಚುತ್ತಲೇ ಇದೆ. ಈಗೆರಡು ವರ್ಷಗಳಿಂದ ಅರ್ಧಕ್ಕಿಂತ ಹೆಚ್ಚು ಆತ್ಮಹತ್ಯೆ ಪ್ರಕರಣಗಳು ನೇಣಿಗೆ ಸಂಬಂಧಿಸಿದವು. ಹಾಸ್ಟೆಲ್ಲುಗಳಲ್ಲಿ ವಿದ್ಯಾರ್ಥಿಗಳ ಆತ್ಮಹತ್ಯೆ ಹೆಚ್ಚುತ್ತಿದೆ. ಕೋವಿಡ್‌ ಪೂರ್ವದ ಐದು ವರ್ಷಗಳಲ್ಲಿ ಐವತ್ತು ಸಾವಿರ ವಿದ್ಯಾರ್ಥಿಗಳು ಆತ್ಮಹತ್ಯೆಗೆ ಶರಣಾಗಿದ್ದಾರೆ.

 ಈ ಲೇಖನ ಓದಿದ್ದೀರಾ? 

  ಕಲಿಯುವುದೆಂದರೆ ಪ್ರಶ್ನೆಗಳ ಬೆನ್ನ ಮೇಲೆ ಸವಾರಿ

ಶರದ್‌ ಈ ಆತ್ಮಹತ್ಯೆಗಳನ್ನು ತಡೆಯಲು ಮುಂದಾದರು. ಸಾಮಾನ್ಯವಾಗಿ ಫ್ಯಾನು ನೆಲದಿಂದ ಎಂಟು ಅಡಿ ಎತ್ತರದಲ್ಲಿರುತ್ತದೆ. ಹತ್ತು ಅಡಿಯ ಮೇಲ್ಚಾವಣಿಗೆ ರಾಡ್‌ ಮೂಲಕ ಜೋಡಿಸಿಕೊಂಡಿರುತ್ತದೆ. ಒಂದು ನಿರ್ಧಾರಿತ ತೂಕಕ್ಕಿಂತ ಹೆಚ್ಚಿನ ಭಾರವನ್ನು ಅನುಭವಿಸಿದಾಗ ವಿಸ್ತರಿಸಿಕೊಂಡು ಉದ್ದವಾಗುವ ಫ್ಯಾನ್‌ ರಾಡನ್ನು ಶರದ್‌ ರೂಪಿಸುವ ಮೊದಲು ಸಾಕಷ್ಟು ಅಧ್ಯಯನಗಳನ್ನು ನಡೆಸಿದ್ದರು. ಈಗ ಶರದ್ ವಿನ್ಯಾಸಗೊಳಿಸಿದ ಫ್ಯಾನ್‌ ರಾಡ್‌ ಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ. ಅವರೀಗ ಜೀವ ಉಳಿಸಬಲ್ಲ ವಸ್ತುಗಳನ್ನು ತಯಾರಿಸುವ ಗೋಲ್ಡ್‌ ಲೈಫ್‌ ಎಂಬ ಉದ್ಯಮವನ್ನೇ ಆರಂಭಿಸಿದ್ದಾರೆ.

ಹಿಡಿ ಪ್ರೀತಿಯಿದ್ದರೆ ಇಡಿಯ ಭೂಮಿಯನ್ನೇ ಬೆಳದಿಂಗಳಾಗಿಸಬಹುದು!



No comments: