Monday 19 March 2018

ದಿನೇಶ್ ಕಾರ್ತಿಕ್ ಕುಸಿದು ಬಿದ್ದಾಗ...........


   ಇದು ಕೆಲವು ವರ್ಷಗಳ ಹಿಂದಿನ ಘಟನೆ. ಬಾಂಗ್ಲಾದ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಭಾರತದ ಮೊದಲ ನಾಲ್ಕು ಬ್ಯಾಟ್ಸ್‍ಮನ್‍ಗಳೂ ಸೆಂಚುರಿಯನ್ನು ಸಿಡಿಸಿ ತಮಗಿಲ್ಲದ ಮೀಸೆಯ ಮೇಲೆ ಬೆರಳಾಡಿಸಿದ್ದರು. ಆದರೆ ಆ ಶತಕಗಳು ಅಷ್ಟು ಸುಲಭದ್ದಾಗಿರಲಿಲ್ಲ. ಏಕೆಂದರೆ ಅವರು ಹೋರಾಡುತ್ತಿದ್ದುದು ಬಾಂಗ್ಲಾದ ವಿರುದ್ಧವಾಗಿರಲಿಲ್ಲ, ಬಿರು ಬಿಸಿಲ ಬೇಗೆಯ ಎದುರಾಗಿತ್ತು.ಆರಂಭಿಕರಿಬ್ಬರನ್ನೂ ಆಟದ ನಡುವೆಯೇ ಮೈದಾನದಿಂದ ಹೊತ್ತುಕೊಂಡು ಬರಬೇಕಾಯಿತು. ವಾಸಿಮ್ ಜಾಫರ್ ಮುಂಬೈನವರು ನೋಡಿ, ಶತಕ ಬಾರಿಸಿದ ನಂತರವೇ ಕುಸಿದುಬಿದ್ದರು. ದಕ್ಷಿಣ ಭಾರತದ ಕಾರ್ತಿಕ್ ಶತಕದ ಮೊದಲೇ ಕುಸಿದರು.ದಿನೇಶ್ ಕಾರ್ತಿಕ್ ಸ್ನಾಯು ಸೆಳೆತದಿಂದ ಕುಸಿದು ಬೀಳುವ ಮೊದಲು ಅವರ ದೇಹ ಬೇಸಿಗೆಯ ಸೆಕೆಯಿಂದ ಪಾರಾಗಲೂ ಬಹಳಷ್ಟು ಶ್ರಮಿಸಿದ್ದಂತೂ ನಿಜ. ದಿನೇಶ್ ಕಾರ್ತಿಕ್ ಕೂಡ ಎಲ್ಲ ಉಷ್ಣರಕ್ತದ ಪ್ರಾಣಿಗಳಂತೆ ಸ್ಥಿರ ದೇಹತಾಪವನ್ನು ಹೊಂದಿರುವವರು. ಹೊರಗಡೆಯ ತಾಪದಲ್ಲಿ ಎಷ್ಟೇ ಹೆಚ್ಚಳವಾಗಲಿ ಅಥವಾ ಇಳಿಕೆಯಾಗಲಿ ಅವರ ದೇಹದ ತಾಪವು ಅದರಿಂದ ವ್ಯತ್ಯಯಗೊಳ್ಳದು. ಸ್ಥಿರ ತಾಪವನ್ನು ಕಾದುಕೊಳ್ಳಲು ಅವಶ್ಯಕವಾದ ತಾಪಸ್ಥಾಪಿ ತಂತ್ರವನ್ನು ಅವರ ದೇಹವೇ ಅನಸರಿಸುತ್ತದೆ.ಎಲ್ಲ ಮನುಷ್ಯರಂತೆ ದಿನೇಶ್ ಕಾರ್ತಿಕ್‍ರ ದೇಹದಲ್ಲಿ ಅದರಲ್ಲೂ ಮುಖ್ಯವಾಗಿ ಸ್ನಾಯುಗಳು ಮತ್ತು ಪಿತ್ತಕೋಶದಲ್ಲಿ ನಡೆಯುವ ಚಯಪಚಯ ಕ್ರಿಯೆಗಳಿಂದ ಉಷ್ಣವು ಉತ್ಪಾದನೆಗೊಳ್ಳುತ್ತದೆ. ಕಾರ್ತಿಕರ ದೇಹದ ತಾಪಕ್ಕಿಂತ ಢಾಕಾದ ಚಿತ್ತಗಾಂವ ಕ್ರೀಡಾಂಗಣದಲ್ಲಿನ ತಾಪ ಹೆಚ್ಚಿದ್ದುದರಿಂದ ಅವರಿಗೆ ಸೆಕೆಯ ಅನುಭವ ಉಂಟಾಯಿತು. ಅವರ ಮೆದುಳಿನ ಕೆಳಭಾಗದಲ್ಲಿರುವ ಹೈಪೋಥಲಾಮಸ್ ಎಂಬ ಭಾಗಕ್ಕೆ ಇದು ಮೊದಲು ಗೊತ್ತಾಯಿತು. ಈ ಹೈಪೋಥಲಾಮಸ್ ಎಂದರೆ ಪ್ರಿಜ್ಜು, ಏ.ಸಿ, ಇಸ್ತ್ರಿ ಪೆಟ್ಟಿಗೆಗಳಲ್ಲಿರುವ ಸ್ಥಿರತಾಪವನ್ನು ಕಾದುಕೊಳ್ಳಲು ಬಳಸುವ ತಾಪಸ್ಥಾಪಿ ಸ್ವಿಚ್ಚುಗಳಂತೆ ಕೆಲಸ ಮಾಡುವ ಭಾಗ. ಕೂಡಲೇ ಹೃದಯ ಪಂಪು ಮಾಡುವ ರಕ್ತದ ಶೇಕಡಾ ಮೂವತ್ತಕ್ಕಿಂತ ಹೆಚ್ಚಿನ ಪ್ರಮಾಣದ ರಕ್ತವನ್ನು ಚರ್ಮಕ್ಕೆ ಕಳುಹಿಸುವ ಏರ್ಪಾಟು ನಡೆಯಿತು. ಕಾರಿನ ಬಿಸಿ ಏಂಜಿನ್‍ನ  ಶಾಖವನ್ನು ರೇಡಿಯೇಟರ್‍ನಲ್ಲಿ ಹರಿಯುವ ದ್ರವ ಕೂಲಂಟ್ ಹೀರಿಕೊಂಡು ಅನಂತರ ವಾತಾವರಣಕ್ಕೆ ಹೊರ ಹಾಕುತ್ತದ್ದಲ್ಲ ಹಾಗೆ, ನಮ್ಮ ರಕ್ತವು ಚರ್ಮದ ರಕ್ತನಾಳಗಳ ಮೂಲಕ ಹರಿಯುವುದರಿಂದ ದೇಹ ತಣ್ಣಗಾಗುತ್ತದೆ. ನಮ್ಮ ಚರ್ಮವು ದೇಹವನ್ನು ತಣ್ಣಗಿರಿಸಲು ಬೆವರುವಿಕೆ ತಂತ್ರವನ್ನು ಅನುಸರಿಸುತ್ತದೆ.ದಿನೇಶ್ ಕಾರ್ತಿಕ್‍ರ ಚರ್ಮದ ಮೇಲೆ ಸುಮಾರು 2,500,00 ಸ್ವೇದ ಗ್ರಂಥಿಗಳಿವೆ. ಈ ಗ್ರಂಥಿಗಳೊಡನೆ ರಕ್ತದ ಲೋಮನಾಳಗಳ ಒಡನಾಟವಿದೆ. ಅಲ್ಲದೇ ದೇಹದ ತಾಪ ಮತ್ತು ಬಾಹ್ಯ ತಾಪಗಳ ಮಾಹಿತಿಗಳನ್ನು ಮೆದುಳಿಗೆ ತಿಳಿಸಬಲ್ಲ ಜ್ಞಾನವಾಗಿ ನರಗಳಿವೆ. ತಾಪಕ್ಕೆ ತಕ್ಕಂತೆ ಉದ್ಧೀಪನಗಳನ್ನುಂಟು ಮಾಡುವ ಎಸಿಟೈಲ್‍ಚೋಲಿನ್ ಎಂಬ ರಾಸಾಯನಿಕದ ನೆರವಿನಿಂದ ನರವ್ಯವಸ್ಥೆಯು ರಕ್ತದ ಸಾಗಾಣಿಕೆ, ಬೆವರುವಿಕೆಯ ಪ್ರಮಾಣ ಮತ್ತಿತರ ಕ್ರಿಯೆಗಳ ನಡುವೆ ಹೊಂದಾಣಿಕೆಯನ್ನೇರ್ಪಡಿಸುತ್ತದೆ.ಢಾಕಾದ ಸೆಕೆ ಮತ್ತು ಒಣ ವಾತಾವರಣ ದಿನೇಶ್ ಕಾರ್ತಿಕ್‍ರನ್ನು ಬಹಳಷ್ಟು ಬೆವರು ಸುರಿಸುವಂತೆ ಮಾಡಿದವು. ಮಣ್ಣಿನ ಮಡಕೆಯ ಮೇಲಿರುವ ಸಣ್ಣ ಸಣ್ಣ ರಂದ್ರಗಳ ಮೂಲ ‘ಬೆವರುವಿಕೆ’ ಉಂಟಾಗುವುದರಿಂದ ಹೇಗೆ ಒಳಗಡೆಯ ನೀರು ತಣ್ಣಗಾಗಿರುವುದೋ ಹಾಗೆ ಕಾರ್ತಿಕರ ದೇಹ ಕೂಡಾ ತಣ್ಣಗಾಗಲು ಬೆವರುವುದು ಅನಿವಾರ್ಯವಾಗಿತ್ತು. ಬೇಸಿಗೆಯಲ್ಲಿ ಬೆವರುವಿಕೆಯಿಂದ ಗಂಟೆಗೆ ಒಂದೂವರೆ ಲೀಟರ್‍ನಿಂದ ನಾಲ್ಕು ಲೀಟರ್‍ವರೆಗೆ ನೀರು ವಾತಾವರಣ ಸೇರಬಹುದು. ದಿನೇಶ್ ಕಾರ್ತಿಕ್ ಆ ದಿನ ಸಾಕಷ್ಟು ಅಧಿಕ ಪ್ರಮಾಣದ ನೀರನ್ನು ಬೆವರುವಿಕೆಯಿಂದ ಕಳೆದುಕೊಂಡರು. ಇದರಿಂದ ಅವರ ದೇಹ ನಿರ್ಜಲೀಕರಣದ ಸ್ಥಿತಿಯನ್ನು ತಲುಪಿತು. ಜೊತೆಗೆ, ಈ ಬೆವರುವಿಕೆ ಎಂಬುದು ಬರೇ ನೀರನ್ನು ಕಳೆದುಕೊಳ್ಳುವ ಕ್ರಿಯೆ ಮಾತ್ರವಲ್ಲ, ಇದರಲ್ಲಿ ಸೋಡಿಯಂ ಕ್ಲೋರೈಡ್, ಪೊಟಾಸಿಯಂ, ಲ್ಯಾಕ್ಟಿಕ್ ಆಮ್ಲ, ಯೂರಿಕ್ ಆಮ್ಲಗಳೆಲ್ಲವೂ ಇರುತ್ತವೆ. ಸೋಡಿಯಂ ಮತ್ತು ಪೊಟಾಸಿಯಂ ಲವಣಗಳನ್ನು ಕಳೆದುಕೊಂಡದ್ದರಿಂದ ಕಾರ್ತಿಕರ ದೇಹದಲ್ಲಿ ಇಲೆಕ್ಟ್ರೋಲೈಟ್ ಅಸಂತುಲನೆ ಉಂಟಾಯಿತು. ಇದೇ ಅವರನ್ನು ಸ್ನಾಯು ಸೆಳೆತಕ್ಕೆ ಗುರಿಯಾಗಿಸಿತು.ನೀರೇ ದೊರೆಯದ ಮರುಭೂಮಿಯಲ್ಲಿ ಬೆವರುವುದು ಬಹಳ ದುಬಾರಿ ವ್ಯವಹಾರ. ಆದುದರಿಂದ ಅಲ್ಲಿನ ಜೀವಿಗಳು ಬಹಳ ಅಧಿಕ ತಾಪದಲ್ಲಷ್ಟೇ ಬೆವರುತ್ತವೆ. ಆನೆಗಳದು ಇನ್ನೂ ಭಿನ್ನತಂತ್ರ. ಅವುಗಳು ಎಂದೂ ಬೆವರುವುದೇ ಇಲ್ಲ. ಸುಮಾರು ನಾಲ್ಕೈದು ಚದರ ಮೀಟರ್ ಮೇಲ್ಮೈ ವಿಸ್ತೀರ್ಣವನ್ನು ಹೊಂದಿರುವ ಅವುಗಳ ಕಿವಿಗಳಲ್ಲಿ ಭಾರಿ ಪ್ರಮಾಣದ ಲೋಮನಾಳ ಜಾಲವಿದೆ. ದೇಹದ ಉಷ್ಣತೆಯನ್ನೆಲ್ಲ ಹೀರಿಕೊಂಡು ಬೆಚ್ಚಗಾದ ರಕ್ತ ಈ ಲೋಮನಾಳಗಳಲ್ಲಿ ಹರಿಯುತ್ತದೆ. ಆಗ ಆನೆಗಳ ನೆರಳಿದ್ದಲ್ಲಿ ವಿಶ್ರಾಂತಿ ತೆಗೆದುಕೊಳ್ಳುತ್ತಾ ತಮ್ಮ ಕಿವಿಗಳನ್ನು ಆಚೀಚೆ ಆಡಿಸುತ್ತವೆ. ದಿನೇಶ್ ಕಾರ್ತಿಕ್ ಆನೆಯೂ ಅಲ್ಲ, ಒಂಟೆಯೂ ಅಲ್ಲ. ಅವರೊಬ್ಬ ಮನುಷ್ಯ. ಆದುದರಿಂದಲೇ ಢಾಕಾದ ಬಿರು ಬಿಸಿಲಿಗೆ ಕುಸಿದು ಬಿದ್ದರು. ಆದರೂ, ಈಗಾಗಲೇ ಕುಸಿದು ಬಿದ್ದಿದ್ದ ಭಾರತ ತಂಡವನ್ನು ಸಾಕಷ್ಟು ಮೇಲಕ್ಕೆತ್ತಿದ್ದರು! 


Tuesday 13 March 2018

ಆಕಾಶದ ಬೆರಗು ಮತ್ತು ಜನ್ಮಕುಂಡಲಿ

ಈ ವಿಶ್ವಕ್ಕೆ ಅಂಚುಗಳಿಲ್ಲ; ಮನುಷ್ಯ ಪ್ರಯತ್ನದ ಸಾಧ್ಯತೆಗಳಿಗೆ ಸೀಮೆಯೆಂಬುದು ಇಲ್ಲವೇ ಇಲ್ಲ.

-ಸ್ಟೀಫನ್ ಹಾಕಿಂಗ್
 
  ನಮ್ಮೂರ ಅಂಚಿಗಿರುವ ಆಚೆಮರುಕಲ ಗುಡ್ಡದ ಮೇಲೆ ನಿಂತು ಜೈ ಚಾಚಿದರೆ  ಆಕಾಶವನ್ನೇ ಮುಟ್ಟಬಹುದಲ್ಲ ಎಂದು ಚಿಕ್ಕವನಿರುವಾಗ ಚಕಿತನಾಗುತಿದ್ದೆ. ಇದು ನನ್ನೊಬ್ಬನ ಬೆರಗಲ್ಲ; ಎಲ್ಲರ ಬಾಲ್ಯದ ಬೆರಗು.
    ಇಂತಹ ಬೆರಗು, ಕುತೂಹಲಗಳು ಇಲ್ಲದೇ ಹೋಗಿದ್ದರೆ ಅದು ಬಾಲ್ಯವಾಗಿರುತಿತ್ತೇ?
   ಹೌದು, ಆಕಾಶವು ದಿಗಂತವನ್ನು ಸ್ಪರ್ಶಿಸಿದಂತೆ ಕಾಣುತ್ತದೆ. ದೊಡ್ಡ ಕೊಡೆಯನ್ನು ಭೂಮಿಯ ಮೇಲೆ ಬೋರಲು ಹಾಕಿದಂತೆ. ರಾತ್ರಿಯಲ್ಲಾದರೆ, ಆ ಅರ್ಧಗೋಳಕ್ಕೆ ಬೇರೆ ಬೇರೆ ಪ್ರಕಾಶದ ನಕ್ಷತ್ರಗಳನ್ನು ಅಂಟಿಸಿಟ್ಟ ಹಾಗೆ ಕಾಣುತ್ತದೆ. ನಮಗೆ ರಾತ್ರಿಯಿರುವಾಗ ಭೂಮಿಯ ಇನ್ನೊಂದು ಬದಿಯಲ್ಲಿರುವವರಿಗೆ ಹಗಲಾಗಿರುತ್ತದಲ್ಲ? ಅಲ್ಲಿಯೂ ಅಂತದ್ದೇ ಅರ್ಧಗೋಳ ಇರುತ್ತದೆ ಎಂಬುದನ್ನು ಕಲ್ಪಿಸಿಕೊಳ್ಲುವುದು ಕಷ್ಟವಲ್ಲ. ಇಲ್ಲಿಗೆ, ಒಂದು ಪೂರ್ತಿಗೋಳ ಉಂಟಾಗುತ್ತದೆ. ಇದೇ ಖಗೋಳ! ನಾವು ಕಾಣುವ ಖಗೋಳ ನಮ್ಮ ಇಂದ್ರೀಯಗಳ ಮಿತಿಗಳನ್ನು ಬಹುಪಾಲು ಆಧರಿಸಿದೆ. ನಾವಿರುವ ಭೂಮಿಯು ಸೌರವ್ಯೂಹದ ಸದಸ್ಯ. ತನ್ನ ಅಕ್ಷದ ಸುತ್ತ ಸುತ್ತುತ್ತಲೇ ಸೂರ್ಯನ ಸುತ್ತ ಪರಿಭ್ರಮಿಸುತ್ತಿದೆ. ಭೂಮಿಯನ್ನು ಆವರಿಸಿರುವ ವಾಯುಮಂಡಲ ನಮ್ಮ ದೃಷ್ಟಿಗೆ ಪರದೆಯನ್ನು ಹಾಕಿದೆ. ನಮ್ಮ ಯೋಚನೆಗಳ ಮಿತಿಯನ್ನಂತೂ ನಾವು ದಾಟಲಾರೆವು. ಇದೆಲ್ಲದರ ಪರಿಣಾಮವಾಗಿ, ನಮಗೆ ಕಾಣುವ ನೋಟ ಸಾಕಷ್ಟು ವಿರೂಪಗೊಂಡಿದೆ. ರಾತ್ರಿಯಾಕಾಶದಲ್ಲಿ ಕಾಣುವ ನಕ್ಷತ್ರಗಳೆಲ್ಲ ಪೂರ್ವದಿಂದ ಪಶ್ಚಿಮಕ್ಕೆ ಚಲಿಸುತ್ತಿರುವಂತೆ ಕಾಣುತ್ತವೆ; ಬಸ್ಸು ವೇಗವಾಗಿ ಮುಂದಕ್ಕೆ ಚಲಿಸುವಾಗ ರಸ್ತೆಯ ಇಕ್ಕೆಲಗಳಲ್ಲಿರುವ ಮರ-ಗಿಡಗಳು, ಕಟ್ಟಡಗಳು ಅದೇ ವೇಗದಲ್ಲಿ ಹಿಂದಕ್ಕೆ ಚಲಿಸದ ಹಾಗೆ ಕಾಣಿಸುತ್ತದಲ್ಲ, ಹಾಗೆ! ಅಲ್ಲಿರುವ ನಕ್ಷತ್ರಗಳೆಲ್ಲ ನಮ್ಮಿಂದ ಒಂದೇ ದೂರದಲ್ಲಿರುವ ಹಾಗೆ ಕಾಣುವುದೂ ದೃಷ್ಟಿ ಭ್ರಮೆಯೇ! ರಾತ್ರಿಯಾಕಾಶದಲ್ಲಿ ಕಾಣುವ ನಕ್ಷತ್ರಗಳ ಗೋಚರ ಪ್ರಕಾಶಗಳ ವ್ಯತ್ಯಾಸವೂ ಸಹ ಅವುಗಳ ವಾಸ್ತವ ಪ್ರಕಾಶದ ವ್ಯತ್ಯಾಸಗಳನ್ನು ಪ್ರತಿನಿಧಿಸುವುದಿಲ್ಲ. ಹತ್ತಿರದ ಮೊಂಬತ್ತಿಯ ಜ್ವಾಲೆ ದೂರದ ಬೀದಿದೀಪಕ್ಕಿಂತ ಹೆಚ್ಚು ಪ್ರಕಾಶಮಾನವಾಗಿ ಕಾಣುತ್ತದಲ್ಲ? ಹಾಗಂತ, ಪ್ರಕಾಶಮಾನವಾಗಿರುವವೆಲ್ಲ ಹತ್ತಿರದಲ್ಲಿವೆಯೆಂದೂ ಮಂದ ಬೆಳಕಿನ ನಕ್ಷತ್ರಗಳೆಲ್ಲವೂ ದೂರದಲ್ಲಿವೆಯೆಂದೂ ಸಾರಾಸಗಟು ಹೇಳಲಾಗದು.
ನಮಗೆ ಕಾಣುವುದಂತೂ ಹೀಗೆಯೇ! ನಮ್ಮ ನಡುನೆತ್ತಿಯ ಮೇಲೆ ಭೂಮಿಗೆ ಲಂಭವಾಗಿ ಗೆರೆ ಎಳೆದರೆ ಆ ಗೆರೆಯು ನಾವು ಕಾಣುವ ಅರ್ಧ ಖಗೋಳದ ಖಮಧ್ಯವನ್ನು ಹಾದುಹೋಗುತ್ತದೆ. ಈ ಇಡೀ ಗೋಳವು ಅಂಟಿಕೊಂಡಿರುವ ನಕ್ಷತ್ರಗಳ ಸಮೇತವಾಗಿ ಪೂರ್ವದಿಂದ ಪಶ್ಚಿಮಕ್ಕೆ ಚಲಿಸುತ್ತಿದೆ. ಹೀಗೆ ಪರಿಭ್ರಮಿಸುತ್ತಿರುವ ಗೋಳದ ಅಕ್ಷವು ಉತ್ತರದಿಂದ ದಕ್ಷಿಣಕ್ಕೆ ಹಾದುಹೋಗುತ್ತದೆ. ರಾತ್ರಿಯಾಕಾಶದಲ್ಲಿ ಕಾಣುವ ನಕ್ಷತ್ರಗಳ ಸಂಖ್ಯೆ ಎಷ್ಟು ದೊಡ್ಡದೆಂದರೆ ಖಗೋಳವನ್ನು ಆವರಿಸಿರುವ ಈ ಎಲ್ಲ ನಕ್ಷತ್ರಗಳನ್ನು ಬಿಡಿ ಬಿಡಿಯಾಗಿ ಗುರುತಿಸುವುದು ಸಾಮಾನ್ಯ ಕಣ್ಣುಗಳಿಗೆ ಅಸಾಧ್ಯ. ಭೂಮಿಯ ಭ್ರಮಣೆಯಿಂದಾಗಿ ನಕ್ಷತ್ರಗಳು ಪೂರ್ವದಿಂದ ಪಶ್ಚಿಮಕ್ಕೆ ಚಲಿಸಿದಂತೆ ಕಂಡರೂ ಅವುಗಳÀ ಪರಸ್ಪರ ಸಾಪೇಕ್ಷ ಸ್ಥಾನ`ಮಾನ’ ಬದಲಾಗದು. ಇದರಿಂದಾಗಿ, ಆಕಾಶದಲ್ಲಿ ಈ ಚುಕ್ಕಿಗಳನ್ನೆಲ್ಲ ಸೇರಿಸಿ ಖಾಯಂ ರಂಗೋಲಿಗಳನ್ನು ಕಲ್ಪಿಸಿಕೊಳ್ಳಬಹುದು. ನಕ್ಷತ್ರ ಸಮೂಹವನ್ನು ಚಿತ್ರಾಕೃತಿಯಾಗಿ ಗುರುತಿಸಿದರೆ ಅದನ್ನು ನಕ್ಷತ್ರ ಪುಂಜಗಳೆನ್ನುತ್ತೇವೆ. ಹನ್ನೆರಡು ಮನುಷ್ಯಾಕೃತಿಗಳು, ಒಂಬತ್ತು ಹಕ್ಕಿಗಳು, ಹತ್ತೊಂಬತ್ತು ಭೂಮಿಯ ಮೇಲೆ ವಾಸಿಸುವ ವಿವಿಧ ಪ್ರಾಣಿಗಳು, ಎರಡು ಕೀಟಗಳು, ಹತ್ತು ಜಲಚರಗಳು, ಕಾಲ್ಪನಿಕ ಜೀವಿಗಳು, ವಸ್ತುಗಳು ಹೀಗೆ ಎಂಬತ್ತೆಂಟು ನಕ್ಷತ್ರ ಪುಂಜಗಳಾಗಿ ಖಗೋಳವನ್ನು ವಿಭಜಿಸಲಾಗಿದೆ. ಜಗತ್ತಿನ ಬೇರೆ ಬೇರೆ ಭಾಗಗಳಲ್ಲಿ ಈ ಗುರುತಿಸುವಿಕೆ ಸ್ವಲ್ಪ ಭಿನ್ನವಾಗಿದೆ. ಏಳು ನಕ್ಷತ್ರಗಳ ಗುಂಪಾಗಿರುವ ಸಪ್ತರ್ಷಿ ಮಂಡಳವನ್ನು ಬಿಗ್ ಡಿಪ್ಪರ್ ಎಂತಲೂ ಗ್ರೇಟ್ ಬೇರ್ ಎಂತಲೂ ಬೇರೆ ಬೇರೆ ಹೆಸರುಗಳಲ್ಲಿ ಬೇರೆ ಬೇರೆ ಕಡೆಯಲ್ಲಿ ಗುರುತಿಸುತ್ತಾರೆ.
  ಕ್ರಿಸ್ತಪೂರ್ವ 270 ರಲ್ಲಿ ಗ್ರೀಕ್ ಕವಿ ಅರಾಟಸ್ ರಚಿಸಿದ ಫಿನೋಮಿನಾ ಎಂಬ ಕಾವ್ಯದಲ್ಲಿ ಈಗ ಗುರುತಿಸಲಾಗುವ ನಕ್ಷತ್ರಪುಂಜಗಳ ಮೊದಲ ಉಲ್ಲೇಖಗಳು ದೊರೆಯುತ್ತವೆ. ಆದುದರಿಂದ, ಆ ಕಾಲಕ್ಕಿಂತಲೂ ಹಿಂದಿನಿಂದಲೇ ಜನರು ನಕ್ಷತ್ರಪುಂಜಗಳನ್ನು ಗುರುತಿಸಲು ಆರಂಭಿಸಿರಬಹುದೆಂದು ಅಂದಾಜಿಸಬಹುದು. ಖಗೋಲದ ದಕ್ಷಿಣ ತುದಿಯಲ್ಲಿನ ಪುಂಜಗಳನ್ನು ಅವರು ಉಲ್ಲೇಖಿಸದೇ ಇರುವುದರ ಆಧಾರದ ಮೇಲೆ ಸ್ವಲ್ಪ ಪತ್ತೆದಾರಿ ಮಾಡಿ ಹೀಗೆ ಗುರುತಿಸಿದವರು ಭೂಮಿಯ ಉತ್ತರಕ್ಕೆ 30 ಡಿಗ್ರಿ ಅಕ್ಷಾಂಶದ ಆಚೆ ಇರುವ ಸುಮೇರಿಯನ್ನರೋ ಬ್ಯಾಬಿಲೋನಿಯನ್ನರೋ ಅಗಿರಬಹುದು ಎಂದೂ ಊಹಿಸಬಹುದು.
  ಸೂರ್ಯನು ಪೂರ್ವದಲ್ಲಿ ಉದಯಿಸಿ ಪಶ್ಚಿಮದಲ್ಲಿ ಅಸ್ತಂಗತನಾಗುವುದು ದಿನಾ ಇದ್ದದ್ದೇ. ಈ ವಿದ್ಯಮಾನವೂ ನಮ್ಮ ಇಂದ್ರಿಯಗಳ ಮಿತಿಯಿಂದಲೇ ಉಂಟಾಗಿರುವುದು ಎಂಬುದು ನಮಗೆ ಗೊತ್ತೇ ಇದೆ. ಸೂರ್ಯನು ಪೂರ್ವದಲ್ಲಿ ಉದಯಿಸಿ ಪಶ್ಚಿಮದಲ್ಲಿ ಮುಳುಗಿ ಮತ್ತೆ ಮಾರನೆಯ ದಿನ ಪೂರ್ವದಲ್ಲೇ ಉದಯಿಸುವಾಗ ಭೂಮಿಯನ್ನು ಒಂದು ಸುತ್ತುಹಾಕಿಂದಂತೆ ಕಾಣುತ್ತದೆ. ಸೂರ್ಯನ ಈ ದೃಗ್ಗೋಚರ ಪಥವನ್ನು ಕ್ರಾಂತಿವೃತ್ತ ಎನ್ನುತ್ತಾರೆ. ಸೂರ್ಯನು ಕ್ರಾಂತಿ ವೃತ್ತದುದ್ದಕ್ಕೂ ಹೀಗೆ ಹಾದು ಹೋಗುವಾಗ ಹಿನ್ನೆಲೆಯಲ್ಲಿ ಕೆಲವು ನಕ್ಷತ್ರ ಪುಂಜಗಳಿರುತ್ತವೆ. ಕ್ರಾಂತಿವೃತ್ತದುದ್ದಕ್ಕೂ ಹರಡಿರುವ ಹನ್ನೆರಡು ನಕ್ಷತ್ರಪುಂಜಗಳನ್ನು ರಾಶಿಪುಂಜಗಳೆನ್ನುವರು. ಸೂರ್ಯಾಸ್ತದ ಸಮಯದಲ್ಲಿ ಪಶ್ಚಿಮದ ದಿಗಂತದಲ್ಲಿ ಮೀನ ರಾಶಿಯಿದೆಯೆಂದರೆ ಸೂರ್ಯನು ಮೀನರಾಶಿಯಲ್ಲಿರುವನು ಎಂದರ್ಥ. ಆಗ, ಪೂರ್ವದಲ್ಲಿ ಕನ್ಯಾ ರಾಶಿಯು ಮೂಡುತ್ತಿರುತ್ತದೆ. ಮೇಷದಿಂದ ಆರಂಭಿಸಿ ಪಶ್ಚಿಮದಿಂದ ಪೂರ್ವಕ್ಕೆ ಬಂದರೆ  ಕನ್ಯಾರಾಶಿಯು ಆರನೆಯದು. ಕುಂಡಲಿಯಲ್ಲಿ ಸೂರ್ಯನ ಆರನೇ ಮನೆ. ಚಾಂದ್ರ ಕಕ್ಷೆಯೂ ರಾಶಿ ಚಕ್ರಕ್ಕೆ ಸೀಮಿತವಾಗಿದೆ. ಸೂರ್ಯನು ಪ್ರತಿ ತಿಂಗಳೂ ತನ್ನ ಮನೆ ಬದಲಿಸುತ್ತಿದ್ದರೆ ಚಂದ್ರನು ಪ್ರತಿ ಎರಡೂಕಾಲು ದಿನಗಳಿಗೇ ಮನೆ ಬದಲಿಸುತ್ತಾನೆ. ಆದುದರಿಂದ, ಚಂದ್ರನ ಪ್ರತಿದಿನದ ಸ್ಥಾನವನ್ನು ಗುರುತಿಸಲು ಇಪ್ಪತ್ತೇಳು ನಕ್ಷತ್ರಗಳ ಸಹಾಯ ಪಡೆಯಲಾಗಿದೆ. ಪ್ರತಿ ನಕ್ಷತ್ರಕ್ಕೂ ನಾಲ್ಕು ಪಾದಗಳು. ಅಮವಾಸ್ಯೆಗೂ ಹುಣ್ಣಿಮೆಗೂ ಇರುವ ಅಂತರವನ್ನು ಅನುಕೂಲಕ್ಕಾಗಿ ಎರಡು ವಾರಗಳಾಗಿ ವಿಂಗಡಿಸಲಾಗಿದೆ. ವಾರದ ಪ್ರತಿ ದಿನವನ್ನೂ ಚರಕಾಯಗಳ ಹೆಸರಿನಿಂದ ಗುರುತಿಸಲಾಗಿದೆ. ಎಲ್ಲವೂ ನಮ್ಮ ಅನುಕೂಲಕ್ಕಾಗಿ. ಅಶ್ವಿನಿಯಿಂದ ರೇವತಿವರೆಗಿನ ಇಪ್ಪತ್ತೇಳು ನಕ್ಷತ್ರಗಳನ್ನು ಹನ್ನೆರಡು ರಾಶಿಗಳಿಗೆ ಹಂಚಿದರೆ ನಕ್ಷತ್ರ-ರಾಶಿ ಸಂಬಂಧ ಅರ್ಥವಾಗುತ್ತದೆ.  ಗಡಿಯಾರ, ಕ್ಯಾಲೆಂಡರು ಯಾವುದೂ ಇಲ್ಲದೆ ಆಕಾಶದಲ್ಲಿ ಕಾಣುವ ಈ ದೃಶ್ಯಗಳಿಂದಲೇ ಮಗು ಹುಟ್ಟಿದ್ದು ಯಾವ ಸಮಯದಲ್ಲಿ ಎಂದು ಹೇಳಬಹುದು. ಜನ್ಮ ಕುಂಡಲಿಯೆಂಬುದು ಒಂದು ವೈಜ್ಞಾನಿಕ ದಾಖಲೆ. ಯಾವುದೇ ಘಟನೆಯ ಸಮಯವನ್ನು ಗುರುತಿಸಲು ಇದರಿಂದ ಸಾಧ್ಯ. ಒಂದು ಉದಾಹರಣೆ ಹೇಳಬೇಕೆಂದರೆ, ನಮ್ಮ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ವೃಶ್ಚಿಕ ರಾಶಿ, ಅನುರಾಧಾ ನಕ್ಷತ್ರದಲ್ಲಿ ಹುಟ್ಟಿದರು. ಅದು ಕ್ಯಾಲೆಂಡಿರಿನ ಸೆಪ್ಟಂಬರ್ ತಿಂಗಳ ಹದಿನೇಳನೇ ತಾರೀಕು.
  ಹೀಗೆ, ಆಕಾಶಕಾಯಗಳ ದೃಗ್ಗೋಚರ ಚಲನೆಗಳನ್ನು ನಮ್ಮ ಇಂದ್ರಿಯಾನುಭವದ ಮಿತಿಯಲ್ಲಿಯೇ ಗ್ರಹಿಸಿ ನಿರಂತರ ವೀಕ್ಷಣೆಯ ಮೂಲಕ ಈ ಚಲನೆಯಲ್ಲಿ ಕಂಡುಬರುವ ನಿಯಮಿತ ಅಂಶಗಳನ್ನು ಗುರುತಿಸಿದ ನಮ್ಮ ಪೂರ್ವಜರು ಖಂಡಿತವಾಗಿಯೂ ನಿಶಿತ ಮತಿಗಳು. ಆದರೆ, ನಾವು ಕಾಣುವುದೇ ವಾಸ್ತವವಲ್ಲ. ರಾಶಿ ಪುಂಜಗಳು ನಮ್ಮನ್ನು ಸುತ್ತುತ್ತಲೂ ಇಲ್ಲ, ಅವುಗಳೆಲ್ಲವೂ ಒಂದೇ ದೂರದಲ್ಲೂ ಇಲ್ಲ. ಕೆಲವು ನಕ್ಷತ್ರಗಳ ಬೆಳಕು ಭೂಮಿಯನ್ನು ತಲುಪಲು ನೂರಾರು ಜ್ಯೋತಿವರ್ಷಗಳು ಬೇಕಾಗುತ್ತವೆ. ಆಧ್ರ್ರಾ ನಕ್ಷತ್ರದಿಂದ ಹೊರಟ ಬೆಳಕು ಭೂಮಿಯನ್ನು ತಲುಪಲು ಆರುನೂರಾ ನಲವತ್ತೆರಡು ವರ್ಷಗಳು ಬೇಕು. ರೋಹಿಣಿ ನಕ್ಷತ್ರದಿಂದಾದರೆ ಅರವತ್ತೈದು ವರ್ಷಗಳು ಬೇಕು. ಅವುಗಳ ಪ್ರಭಾವ ಆಯ್ದ ಮನುಷ್ಯರ ಮೇಲಾಗುತ್ತದೆ ಎಂಬುದು ಅತಾರ್ಕಿಕ. ಪ್ರತಿ ಸೆಕೆಂಡಿಗೆ ನಾಲ್ಕು ಮಕ್ಕಳು ಹುಟ್ಟುತ್ತಾರೆ. ಈ ಹುಟ್ಟುವ ಪ್ರಕ್ರೀಯೆಯೇ ಬಹಳ ದೀರ್ಘವಾದದು. ಅದು ಎಲ್ಲಿಂದ ಆರಂಭವಾಗಿ ಎಲ್ಲಿಗೆ ಮುಗಿಯುತ್ತದೆ ಎಂದು ಹೇಳುವುದೇ ಕಷ್ಟ.  ಸಿಸೇರಿಯನ್ ಹೆರಿಗೆ ಮಾಡಿಸುವ ಕೆಲವು ವೈದ್ಯರು ಮಹೂರ್ತ ನೋಡಿಯೇ ಹೆರಿಗೆ ಮಾಡಿಸುವುದಿದೆ. ಪ್ರಕೃತಿ ವಿಕೋಪಗಳಾದಾಗ, ಪ್ಲೇಗಿನಂತಹ ಮಾರಿ ಬಡಿದಾಗ, ರೈಲು ಅಪಘಾತಗಳು ಸಂಭವಿಸುವಾಗ ಬೇರೆ ಬೇರೆ ಜನ್ಮ ಕುಂಡಲಿಯವರು ಒಟ್ಟಿಗೆ ಸಾಯುತ್ತಾರೆ. ಒಂದೇ ಜನ್ಮಕುಂಡಲಿಯವರು ಬೇರೆ ಬೇರೆ ಬದುಕಿನ ಹಾದಿಯಲ್ಲಿ ಸಾಗುತ್ತಾರೆ. ಅನುಮಾನ, ದತ್ತಾಂಶ ಸಂಗ್ರಹ, ಪರೀಕ್ಷೆ, ಪ್ರಶ್ನೆ, ವಿಶ್ಲೇಷಣೆ, ನಿಖರ ಊಹೆ, ಮರು ಪರೀಕ್ಷೆ, ಅನ್ವಯ ಇವೆಲ್ಲ ವಿಜ್ಞಾನದ ನಿಜಮಾರ್ಗದ ನಿಲ್ದಾಣಗಳು.
ಜನ್ಮ ಕುಂಡಲಿಯ ಸಹಾಯದಿಂದ ಮನುಷ್ಯ ಯಾವ ಉದ್ಯೋಗ ಹಿಡಿಯುತ್ತಾನೆ, ಯಾವಾಗ ಮದುವೆ ಆಗುತ್ತಾನೆ, ಯಾವಾಗ ಸಾಯುತ್ತಾನೆ ಎಂದು ಲೆಕ್ಕ ಹಾಕುವುದು ಒಂದು ಉದ್ಯೋಗವೇ ಆಗಿಬಿಟ್ಟಿದೆ. ಈ ಕೌಶಲದಿಂದ ಹೊಟ್ಟೆ ತುಂಬಿಸಿಕೊಳ್ಳುವ ಮಂದಿ ತಮ್ಮ ಸುತ್ತ ಮೌಢ್ಯವು ಆವರಿಸಿಕೊಂಡಿರಬೇಕು ಎಂದು ಬಯಸುತ್ತಾರೆ. ಭಯಗೊಳಿಸಿ ನಿಯಂತ್ರಣದಲ್ಲಿಟ್ಟುಕೊಳ್ಳುವುದು ಹೊಸ ವರಸೆಯೇನೂ ಅಲ್ಲ. ಇದು ಹಳೆಯ ಚಾಳಿ.