Monday 11 February 2013

ಕನ್ನಡಕ್ಕೆ ಮೊದಲು ಬಂದ ಸಾಯಿನಾಥ್ ಕೃತಿಗೆ ಮುಖಪುಟ ರಚಿಸಿದ ಹೆಮ್ಮೆಯಿಂದ...

ಕನ್ನಡಕ್ಕೆ ಮೊದಲು ಬಂದ ಸಾಯಿನಾಥ್ ಕೃತಿ 

ಪಿ ಸಾಯಿನಾಥ್ ಮೊದಲ ಬಾರಿ ಕನ್ನಡಕ್ಕೆ ಬಂದಿದ್ದಾರೆ. ಅವರು ರೈತರ ಕುರಿತು ‘ದಿ ಹಿಂದೂ’ ಪತ್ರಿಕೆಗೆ ಬರೆದ ಸರಣಿ ಲೇಖನಗಳಲ್ಲಿ ಕೆಲವನ್ನು ಅನುವಾದ ಮಾಡಿ ಪ್ರಕಟಿಸಲಾಗಿದೆ. ಟಿ ಎಲ್ ಕೃಷ್ಣೇಗೌಡ ಕರ್ನಾಟಕ ಪ್ರಾಂತ ರೈತ ಸಂಘದ ಮುಖಂಡರು. ಅವರು ಲೇಖನಗಳನ್ನು ಅನುವಾದಿಸಿದ್ದಾರೆ. ‘ಚಿಂತನ ಪ್ರಕಾಶನ’ ಈ ಕೃತಿಯನ್ನು ಪ್ರಕಟಿಸಿದೆ. ಪುಸ್ತಕಕ್ಕೆ ಕೃಷ್ಣೇಗೌಡ ಅವರು ಬರೆದ ಮಾತುಗಳನ್ನು ಇಲ್ಲಿ ಪ್ರಕಟಿಸುತ್ತಿದ್ದೇವೆ.

-ಟಿ ಎಲ್ ಕೃಷ್ಣೇಗೌಡ
ಪಿ. ಸಾಯಿನಾಥ್ ಅವರು ಭಾರತೀಯ ಮಾದ್ಯಮಲೋಕದ ಮಿಂಚು. ಆ ಮಿಂಚು ಉಳ್ಳವರ ಸಿರಿವಂತಿಕೆಯನ್ನು ವಿಜೃಂಭಿಸುವ ಅಲಂಕಾರ ದೀಪವಲ್ಲ. ದುಡಿದು-ದಣಿದ ಕೋಟ್ಯಾಂತರ ಮಂದಿಯ ಸಂಕಟವನ್ನು ನೋಡಿದ,ನೋಡುತ್ತಿರುವ ಕಂದೀಲು. ಗ್ಲಾಮರ್ ಜಗತ್ತಿನ ಪ್ರಖರ ಬೆಳಕಿಗೆ ಕಣ್ಣು ಕುಕ್ಕದವರ ಕಣ್ತೆರೆವ ದಾರಿ ತೋರುವ ಹಣತೆ.ಮಾದ್ಯಮರಂಗ ಕಂಪನೀಕರಣಗೊಂಡು ಎಲ್ಲವೂ ಲಾಭಕ್ಕಾಗಿಯೇ ಎನ್ನುವಂತಾಗಿರುವ ಈ ಸಂದರ್ಭದಲ್ಲಿ, ಅಂತಹ ತಾಳಕ್ಕೆ ಹೆಜ್ಜೆ ಇಡುತ್ತಿರುವ ಅಸಂಖ್ಯ ಪತ್ರಕರ್ತರ ನಡುವೆ ಪಿ. ಸಾಯಿನಾಥ್ ಭಿನ್ನ. ಅವರ ಬರಹಗಳು ದಿನಪತ್ರಿಕೆಗಳಲ್ಲಿ ಇಂದಿನ ವಿದ್ಯಮಾನಗಳಿಗೆ ಸ್ಪಂದಿಸುತ್ತಾ, ಇತರ ಅಂದಿನ ತಾಜಾ ಸುದ್ದಿಗಳ ಜತೆ ಸ್ಥಾನ ಗಳಿಸಲು ಪೈಪೋಟಿಯಲ್ಲಿ ಗೆಲ್ಲುತ್ತವೆ. ಆದರೆ ಅವು ಹಲವು ವರ್ಷಗಳ ನಂತರವೂ ಪ್ರಸ್ತುತವಾಗಿದ್ದು ಓದುಗರು ಅವನ್ನು ಹುಡುಕಿಕೊಂಡು ಹೋಗುವಂತೆ ಇರುತ್ತವೆ ಅವರ ಬರಹಗಳು. ಹಾಗಂತ ಅವರ ಬರಹದ ವಸ್ತುಗಳಲ್ಲಿ ವೈವಿಧ್ಯತೆಗೆ ಕಡಿಮೆ ಇಲ್ಲ. ರೈತರ ಬವಣೆಗಳು, ಕೃಷಿ ಬಿಕ್ಕಟ್ಟಿನ ಹಲವು ಆಯಾಮಗಳು, ಸಕರ್ಾರದ ನೀತಿಗಳು, ಬಜೆಟ್, ಚುನಾವಣಾ ವಿಶ್ಲೇಷಣೆ, ಅಮೆರಿಕದ ರಾಜಕೀಯ ಬದಲಾವಣೆ – ಎಲ್ಲಾ ಅವರ ಬರಹಗಳ ವಸ್ತು.
ನಾವು ಈ ಪುಸ್ತಕಕ್ಕೆ ಆರಿಸಿಕೊಂಡಿರುವ ಲೇಖನ-ವರದಿಗಳೂ ಮುಖ್ಯವಾಗಿ ಕೃಷಿ ಬಿಕ್ಕಟ್ಟು ಮತ್ತು ರೈತರ ಬವಣೆಗಳ ಸುತ್ತ ಇರುವವು. ನಮ್ಮ ನಾಡಿನ ಬಹು ಸಂಖ್ಯಾತ ಕೂಲಿಕಾರರ, ರೈತರ, ಕುಶಲಕಮರ್ಿಗಳ ದಾರುಣ ಬದುಕನ್ನು ಕಟ್ಟಿಕೊಟ್ಟಿರುವಂತಹವೇ. ದೇಶದ ಮೂಲೆ-ಮೂಲೆಗಳಲ್ಲಿ ಸಾವಿರಾರು ಮೈಲಿ ತಿರುಗಿ ಜನರ ಸಂಕಷ್ಟಗಳನ್ನು ನೋಡಿ, ಅವರ ಕಣ್ಣೀರು, ನಿಟ್ಟುಸಿರು, ಹತಾಶೆಗಳಿಗೆ ಅಕ್ಷರ ರೂಪ ಕೊಟ್ಟಂತಹವು. ನೀರಿನ ಖಾಸಗೀಕರಣದ ನಂತರ ಒರಿಸ್ಸಾ ರೈತರ ಪಾಡು, ವ್ಯಾಪಾರಿಗಳು- ಸಕರ್ಾರದ ಕಪಿಮುಷ್ಠಿಯಲ್ಲಿ ಹರಿದ ಛತ್ರಿಯಂತಾದ ವಿದರ್ಭದ ಹತ್ತಿಬೆಳೆಗಾರರು, ಬೊಗಸೆ ನೀರಿಗಾಗಿ ಭೂಮಿಯನ್ನೆಲ್ಲಾ ತೂತು ಮಾಡಿ ಹತಾಶರಾದ ಆಂದ್ರದ ರೈತರು, ದೇವಸ್ಥಾನಗಳ ಕಾಣಿಕೆ ಸಲ್ಲಿಸಲೂ ಶಕ್ತರಲ್ಲದ ವಯನಾಡಿನ ಮೆಣಸು-ಬೆಳೆಗಾರರು… ಹೀಗೆ ಸಾಯಿನಾಥ್ ಅವರು ಸಮಸ್ಯೆಗಳನ್ನು ಗಾಜಿನ ಮನೆಯಿಂದ ನೋಡದೆ ಅಲ್ಲಿಗೇ ಹೋದರು, ಅನುಭವಿಸಿದರು, ಬರೆದರು. ಈ ಲೇಖನಗಳು ಬೇರೆ-ಬೇರೆ ಸಂದರ್ಭದಲ್ಲಿ, ಕೆಲವು ಬಹಳ ಹಿಂದೆ ಪ್ರಕಟವಾದದ್ದಾದರೂ ಅವುಗಳನ್ನು ಅನುವಾದಿಸಲು ಆರಿಸಿಕೊಂಡ ಕಾರಣ ಅವುಗಳಿಗಿರುವ ಪ್ರಸ್ತುತತೆ.
ಪಿ. ಸಾಯಿನಾಥ್ರವರ ಇಂಗ್ಲೀಷ್ ಬರಹಗಳನ್ನು ಓದುವಾಗ ಎಷ್ಟೊಂದು ಸರಳವಾಗಿದೆ ಅನಿಸುತ್ತದೆ. ಆದರೆ ಹರಿತವಾದ, ನಿಖರವಾದ ಮಂಡಣೆ, ಮೊನಚಾದ ವ್ಯಂಗ್ಯ, ಶಬ್ದಗಳ ಕಸರತ್ತಿನಲ್ಲಿ ಹೊಸ ಅರ್ಥ ಹೊರಡಿಸುವ ಅವರ ಶೈಲಿ ಸಂಕೀರ್ಣ. ಅವರ ಲೇಖನವನ್ನು ಯಥಾವತ್ತಾಗಿ ಕನ್ನಡಕ್ಕೆ ಭಾಷಾಂತರಿಸುವುದು ಕಷ್ಟ. ಹೆಚ್ಚು ಕಡಿಮೆ ಅಸಾಧ್ಯ ಎನ್ನಬಹುದು. ಆದ್ದರಿಂದ ಅವರ ಬರಹಗಳನ್ನು ಕನ್ನಡಕ್ಕೆ ತರುವಾಗ ಭಾವಾನುವಾದದ ಮಾರ್ಗ ಹಿಡಿದಿದ್ದೇನೆ. ವಾಕ್ಯವಾರಾಗಿ ಅನುವಾದಕ್ಕೆ ನಿಲ್ಲದೆ ಅವರ ಹೇಳಿಕೆಯ ತಿರುಳನ್ನು ಕನ್ನಡದಲ್ಲಿ ಅದರ ಮೂಲ ಭಾವಕ್ಕೆ ಚ್ಯುತಿ ಬರದಂತೆ ಸೆರೆ ಹಿಡಿಯಲು ಪ್ರಯತ್ನಿಸಿದ್ದೇನೆ. ಕೆಲವು ದಿನಗಳಲ್ಲಿ ಮಾಡಿ ಮುಗಿಸಿ ಬಿಡುತ್ತೇನೆ ಎಂದು ಕೊಂಡದ್ದು ತಿಂಗಳುಗಳು ತೆಗೆದುಕೊಂಡಿತು.
ಹಲವು ಬಾರಿ ಬರೆದ್ದನ್ನು ತಿದ್ದಬೇಕಾಯಿತು. ಇವೆಲ್ಲದರ ನಂತರ ಪಿ. ಸಾಯಿನಾಥ್ರವರ ಭಾವವನ್ನು ಕನ್ನಡದಲ್ಲಿ ತರಲು ಎಷ್ಟರ ಮಟ್ಟಿಗೆ ಸಫಲನಾಗಿದ್ದೇನೆ ಎಂದು ಓದುಗರು ಹೇಳಬೇಕು.
ಕೊನೆಯದಾಗಿ, 1998ನೇ ಇಸವಿ, ಮಂಡ್ಯದಲ್ಲಿ ವಿಶ್ವೇಶ್ವರಯ್ಯನವರ ಕುರಿತು ವಿಚಾರ ಸಂಕಿರಣವೊಂದನ್ನು ಸಂಘಟಿಸಲಾಗಿತ್ತು. ಅದರ ಸ್ಮರಣ-ಸಂಚಿಕೆಗೆ ಹಲವು ದಿಗ್ಗಜರು ಇಂಗ್ಲೀಷ್ ಭಾಷೆಯಲ್ಲಿ ಲೇಖನಗಳನ್ನು ಕಳುಹಿಸಿದ್ದರು. ಸ್ಮರಣ ಸಂಚಿಕೆಯನ್ನು ಮುದ್ರಿಸುವ ಜವಾಬ್ದಾರಿ ನನ್ನದೇ ಆಗಿದ್ದರಿಂದ ಲೇಖನಗಳ ಅನುವಾದಕ್ಕೆ ಎಷ್ಟು ಪಾಡು ಪಟ್ಟರೂ ಯಾರೂ ಸಿಗಲಿಲ್ಲ. ಈ ವಿಷಯವನ್ನು `ಪ್ರೀತಿಯ ಮಾಸ್ಟ್ರು’ ದಿವಂಗತ ಸಂಗಾತಿ ಪಿ. ರಾಮಚಂದ್ರರಾಯರಿಗೆ ತಿಳಿಸಿ ಸಹಾಯ ಕೇಳಿದಾಗ `ನೀನೇ ಮಾಡು ನೋಡುವ’ ಎಂದು ಹೇಳಿ ಅನುವಾದದ ನೇಗಿಲು ಕಟ್ಟಿಸಿದರು. ಅನುವಾದ ಮಾಡಬಲ್ಲೆ. ಕನ್ನಡದಲ್ಲಿ ಬರೆಯಬಲ್ಲೆ ಎಂಬ ಆತ್ಮವಿಶ್ವಾಸ ತುಂಬಿದ ಪಿ.ರಾಮಚಂದ್ರರಾಯರಿಗೆ ನನ್ನ ಅನಂತ ಧನ್ಯವಾದಗಳು. ಅದರ ನಂತರ ಹಲವು ಲೇಖನ ವರದಿಗಳನ್ನು ಬರೆಯುತ್ತಾ ಬಂದಿದ್ದೇನೆ. ಚಿಂತನ ಪುಸ್ತಕ ರೈತರ ಬವಣೆ ಮತ್ತು ಕೃಷಿ ಬಿಕ್ಕಟ್ಟಿನ ಬಗೆಗಿನ ಪಿ.ಸಾಯಿನಾಥರ ಲೇಖನಗಳನ್ನು ಆಯ್ಕೆ ಮಾಡಿ ಕನ್ನಡಕ್ಕೆ ತರಲು ಕೇಳಿಕೊಂಡಾಗ ಭಯ, ಸಂಭ್ರಮ ಎರಡೂ ಆಯ್ತು. ಒಂದು ಸವಾಲನ್ನಾಗಿ ಸ್ವೀಕರಿಸಿ ಅದರಲ್ಲಿ ತೊಡಗಿಸಿಕೊಂಡೆ. ರೈತ ಚಳುವಳಿಯಲ್ಲಿ ತೊಡಗಿಸಿ ಕೊಂಡಿರುವ ನನಗೆ ಇದು ನನ್ನ ಕರ್ತವ್ಯ ಸಹ ಎನ್ನಿಸಿತು. ಕೃಷಿ ಬಿಕ್ಕಟ್ಟಿನ ಹಲವು ಆಯಾಮಗಳ ಬಗ್ಗೆ, ರೈತರ ಬವಣೆಗಳ ಬಗ್ಗೆ, ಅದರ ಹಿಂದಿರುವ ತಪ್ಪು ಕೃಷಿ ನೀತಿಗಳ ಬಗ್ಗೆ ಕನ್ನಡದಲ್ಲಿ ಪುಸ್ತಕಗಳ ತೀವ್ರ ಕೊರತೆಯನ್ನು ಸ್ವಲ್ಪ ಮಟ್ಟಿಗಾದರೂ ಈ ಪುಸ್ತಕ ತುಂಬಿದೆ. ಆ ನಿಟ್ಟಿನಲ್ಲಿ ನನ್ನ ಕಿರುಕಾಣಿಕೆ ಬಗ್ಗೆ ನನಗೆ ಹೆಮ್ಮೆ ಎನ್ನಿಸುತ್ತಿದೆ.
ಇದನ್ನು ಪುಸ್ತಕವಾಗಿ ಹೊರ ತರುತ್ತಿರುವ ಚಿಂತನ ಪುಸ್ತಕ ಬಳಗದವರಿಗೆ; ಉತ್ತಮ ಮುನ್ನುಡಿ ಬರೆದು ಕೊಟ್ಟ ಖ್ಯಾತ ಲೇಖಕ ನಾಗೇಶ ಹೆಗಡೆಯವರಿಗೆ: ಸುಂದರ ಮುಖಪುಟ ಮತ್ತು ಪುಸ್ತಕ ವಿನ್ಯಾಸ ಮಾಡಿದ ಉದಯ ಗಾಂವಕಾರ ಅವರಿಗೆ; ಸುಂದರವಾಗಿ ಮುದ್ರಣ ಮಾಡಿದ ಚಂದ್ರು ಮತ್ತು ಕ್ರಿಯಾ ಮುದ್ರಣದ ಗೆಳೆಯರಿಗೆ – ನನ್ನ ಕೃತಜ್ಞತೆಗಳು.

Monday 4 February 2013

ಶಾಲೆಗಳಲ್ಲಿ ಪರಿಸರ ಮಿತ್ರ-ಉದಯ ಗಾಂವಕಾರ*ಪ್ರಜಾವಾಣಿ

   ವಾಯುಗುಣ ಬದಲಾವಣೆಗಳಿಗೆ ಮನುಷ್ಯ ಚಟುವಟಿಕೆಗಳೇ ಕಾರಣ ಎಂಬ ಐ.ಪಿ.ಸಿ.ಸಿ. (ವಾಯುಗುಣ ಬದಲಾವಣೆ ಕುರಿತ ಅಂತರ್ ಸರಕಾರಿ ನಿಯೋಗ) ವರದಿಯು ಪರಿಸರ ಪ್ರಜ್ಞೆಯನ್ನು ಮಾನವರಲ್ಲಿರಬೇಕಾದ ಮಹೋನ್ನತ ಜೀವನ ಮೌಲ್ಯವಾಗಿ ಸ್ವೀಕರಿಸುವಂತೆ ಮಾಡಿದೆ.ಈ ಭೂಮಿಯನ್ನು ಮುಂಬರುವ ಅಪಾಯಗಳಿಂದ ಪಾರು ಮಾಡಲು ಸರ್ಕಾರಗಳ ಮಟ್ಟದಲ್ಲಿ ನಡೆಯುವ ನೀತಿ ನಿಯಮಗಳಿಂದಷ್ಟೇ ಸಾಧ್ಯವಿಲ್ಲ. ವ್ಯಕ್ತಿಗಳ ಮಟ್ಟದಲ್ಲಿಯೂ ಪರಿಸರಬದ್ಧತೆ ಉಂಟಾಗುವುದು ಅಗತ್ಯ. ಮನುಷ್ಯರ ನಡೆ-ನುಡಿ- ಆಲೋಚನೆಗಳಲ್ಲಿ ಹಸಿರು ಮನೋಭಾವದ ಪ್ರಭಾವಗಳನ್ನು ಕಾಣುವಂತಾಗಬೇಕು.

ಎಳವೆಯಲ್ಲಿಯೇ ಹಸಿರು ಮೌಲ್ಯಗಳ ಪ್ರಜ್ಞೆ ಉಂಟಾದಲ್ಲಿ  ಮುಂಬರುವ ತಲೆಮಾರು ಈ ಭೂಮಿಗೆ ಅಷ್ಟು ಕಂಟಕಪ್ರಾಯವಾಗಲಾರದು. ಈ ನಿಟ್ಟಿನಲ್ಲಿ  ಭಾರತ ಸರ್ಕಾರದ ಪರಿಸರ ಮತ್ತು ಅರಣ್ಯ ಸಚಿವಾಲಯದಿಂದ ಸ್ಥಾಪಿಸಲ್ಪಟ್ಟ ಪರಿಸರ ಶಿಕ್ಷಣ ಕೇಂದ್ರವು ಆರ್ಸೆಲಾರ್ ಮಿತ್ತಲ್ ಸಂಸ್ಥೆಯ ನೆರವಿನೊಂದಿಗೆ ಶಾಲಾ ಮಕ್ಕಳಲ್ಲಿ ಪರಿಸರ  ಕಾಳಜಿಯನ್ನುಂಟು ಮಾಡಿ ಸುಸ್ಥಿರ ಅಭಿವೃದ್ಧಿಯತ್ತ ಅವರನ್ನು ಕೊಂಡೊಯ್ಯುವ ಉದ್ದೇಶದಿಂದ `ಪರಿಸರ ಮಿತ್ರ~ ಎಂಬ ಕಾರ್ಯಕ್ರಮವನ್ನು  ಹಮ್ಮಿಕೊಂಡಿದೆ.
ಯುನೆಸ್ಕೋ, ಯು.ಎನ್.ಇ.ಪಿ. ಮತ್ತು ಅರ್ಥ್ ಚಾರ್ಟರ್‌ಗಳ ಸಹಯೋಗವೂ ಈ ಕಾರ್ಯಕ್ರಮಕ್ಕಿದೆ. ಸಾರ್ವಜನಿಕ ಶಿಕ್ಷಣ ಇಲಾಖೆಯ ಸರ್ವಶಿಕ್ಷಣ ಅಭಿಯಾನದ ಮೂಲಕ ಈ ಕಾರ್ಯಕ್ರಮ ಶಾಲೆಗಳಲ್ಲಿ ಅನುಷ್ಠಾನಗೊಳ್ಳಲಿದೆ.
ಏನಿದು  ಪರಿಸರ ಮಿತ್ರ ?
ವಾತಾವರಣದಲ್ಲಿ ಹೆಚ್ಚುತ್ತಿರುವ ಇಂಗಾಲದ ಡೈಆಕ್ಸೈಡ್ ಮತ್ತಿತರ ಹಸಿರು ಮನೆ ಅನಿಲಗಳು ವಾಯುಗುಣ ಬದಲಾವಣೆಗೆ ಕಾರಣವಾಗಿವೆ. ಇದರ ಪರಿಣಾಮವಾಗಿ ಜಾಗತಿಕ ತಾಪ ಏರಿಕೆ ಉಂಟಾಗಿದೆ. ಮನುಷ್ಯರ ಬದಲಾದ ಜೀವನ ಶೈಲಿ ಹಾಗೂ ಹೆಚ್ಚುತ್ತಿರುವ ಜನಸಂಖ್ಯೆಯ ಬೇಡಿಕೆಗಳಿಗನುಗುಣವಾಗಿ ಕಾರ್ಖಾನೆಗಳ ಸಂಖ್ಯೆ ಹೆಚ್ಚುತ್ತಿದೆ.

ವಿದ್ಯುತ್ ಬಳಕೆ, ಆಹಾರದ ಬಳಕೆ  ಏರುಮುಖವಾಗಿದೆ. ಮನುಷ್ಯ ನಡೆದಲ್ಲೆಲ್ಲ ಕಾರ್ಬನ್ ಹೆಜ್ಜೆ ಗುರುತುಗಳು ಮೂಡುತ್ತಿವೆ.  `ಪರಿಸರ ಮಿತ್ರ~  ಕಾರ್ಯಕ್ರಮವು ಕಾರ್ಬನ್ ಡೈಆಕ್ಸೈಡ್ ಹೊರಸೂಸುವಿಕೆಯನ್ನು ಕನಿಷ್ಠಗೊಳಿಸುವಂತಹ ಸಕಾರಾತ್ಮಕ ಹಸಿರು ಕಾಯಕಗಳನ್ನು `ಅಂಗೈ ಮುದ್ರೆ~  (hand print) ಎಂದು ಕರೆಯುತ್ತದೆ.

ಶಾಲಾ ವಿದ್ಯಾರ್ಥಿಗಳು ತಮ್ಮ  `ಅಂಗೈ ಮುದ್ರೆ~ಗಳ ಮೂಲಕ ವಾಯುಗುಣ ಬದಲಾವಣೆಯ ಸವಾಲುಗಳನ್ನು ಎದುರಿಸಲು ಬೇಕಾದ ಜ್ಞಾನ, ಜಾಗೃತಿ ಮತ್ತು ಬದ್ಧತೆಯನ್ನು ಪ್ರದರ್ಶಿಸುವಂತೆ ಮಾಡುವುದು ಈ ಕಾರ್ಯಕ್ರಮದ ಉದ್ದೇಶ.
ಭಾರತದ ಎರಡು ಲಕ್ಷ ಶಾಲೆಗಳಲ್ಲಿರುವ ಐದರಿಂದ ಒಂಬತ್ತನೇ ತರಗತಿಯವರೆಗಿನ ಎರಡು ಕೋಟಿ ವಿದ್ಯಾರ್ಥಿಗಳನ್ನು ನಿಜ ಅರ್ಥದಲ್ಲಿ ಪರಿಸರ ಮಿತ್ರರನ್ನಾಗಿಸಸುವ ಈ ಮಹತ್ವಾಕಾಂಕ್ಷಿ ಯೋಜನೆಯ ಮೊದಲ ಹಂತ  ಈಗಾಗಲೇ ಪ್ರಾರಂಭಗೊಂಡಿದೆ.
ಪರಿಸರ ಕಾರ್ಯಕ್ರಮವೆಂದರೆ ಭಾಷಣ, ಜಾಥಾ, ಭಿತ್ತಿಚಿತ್ರ ಪ್ರದರ್ಶನ ಮತ್ತಿತರ ಜಾಗೃತಿ ಅಭಿಯಾನಗಳು ಮಾತ್ರ  ಎಂಬ ಗ್ರಹಿಕೆಯನ್ನು ಮೀರಲು  `ಪರಿಸರ ಮಿತ್ರ~  ನೆರವಾಗುತ್ತದೆ. ಸಕಾರಾತ್ಮಕ ಹಸಿರು ಕಾಯಕಗಳ `ಅಂಗೈಮುದ್ರೆ~ಗಳ ಮೂಲಕ ವಿದ್ಯಾರ್ಥಿಗಳನ್ನು ಜಾಗತಿಕ ನಾಗರಿಕರನ್ನಾಗಿಸಲು ಈ ಯೋಜನೆ ಉದ್ದೇಶಿಸಿದೆ.
ಸರ್ವಶಿಕ್ಷಣ ಅಭಿಯಾನದ ಮೂಲಕ ನಡೆಯುತ್ತಿರುವ ಅನೇಕ ಕಾರ್ಯಕ್ರಮಗಳ ನಡುವೆ ಶಾಲಾ ಮಕ್ಕಳನ್ನು ಸುಸ್ಥಿರ ಭವಿಷ್ಯದತ್ತ ಕೊಂಡೊಯ್ಯುವ ಪರಿಸರ ಮಿತ್ರದ ಕ್ರಿಯಾ ಯೋಜನೆಗಳು ಕಳೆದು ಹೋಗದ ಹಾಗೆ ನಮ್ಮ ಅಧಿಕಾರಿಗಳು, ಶಿಕ್ಷಕರು ನೋಡಿಕೊಳ್ಳಬೇಕಿದೆ.
ಪರಿಸರ ಶಿಕ್ಷಣವನ್ನು ಪಠ್ಯಕ್ರಮಕ್ಕೆ ಹೊರತಾದ ಪ್ರತ್ಯೇಕ ಕಾರ್ಯಕ್ರಮ ಎಂಬ  ಸಾಮಾನ್ಯ ಗ್ರಹಿಕೆಯನ್ನು ಶಿಕ್ಷಕರಿಂದ ಹೊರಹಾಕಿದರೆ ಈ ಕಾರ್ಯಕ್ರಮಕ್ಕೆ ಒಂದು ಉತ್ತಮ ಪ್ರಾರಂಭ ದೊರೆಯಿತೆಂದೇ ಅರ್ಥ.
2005ರ ಪಠ್ಯಕ್ರಮ ನೆಲೆಗಟ್ಟು ಮತ್ತು  ಪರಿಸರ ಮಿತ್ರ: ಜ್ಞಾನವನ್ನು ಭಾಷೆ, ಗಣಿತ, ವಿಜ್ಞಾನ  ಮತ್ತಿತ್ಯಾದಿ ಪಠ್ಯವಿಷಯಗಳ ರೂಪದಲ್ಲಿ ವ್ಯವಸ್ಥೆಗೊಳಿಸಲಾಗಿರುತ್ತದೆ. ಸಾಮಾನ್ಯವಾಗಿ ಶಾಲೆಗಳಲ್ಲಿ ಬೋಧನೆ ಮತ್ತು ಕಲಿಕೆಯ ಪ್ರಕ್ರಿಯೆಯು ವಿದ್ಯಾರ್ಥಿಗಳು ಜ್ಞಾನವನ್ನು ಹೀಗೆ ಬಿಡಿ ಬಿಡಿಯಾಗಿಯೇ ಗ್ರಹಿಸುವಂತೆ ಮಾಡುತ್ತದೆ.ಇದರಿಂದಾಗಿ ಪ್ರತ್ಯೇಕ ತರಗತಿಗಳಲ್ಲಿ ಕಲಿತ ನಿರ್ದಿಷ್ಟ ವಿಷಯಗಳನ್ನು ಪರಸ್ಪರ ಜೋಡಿಸಿ ನೋಡಲು ವಿದ್ಯಾರ್ಥಿಗಳಿಗೆ ಅವಕಾಶವಿರುವುದಿಲ್ಲ. ಜ್ಞಾನವನ್ನು ಸಮಗ್ರವಾಗಿ ಗ್ರಹಿಸಲು ಸಾಧ್ಯವಾಗದಿರುವುದರಿಂದ ತರಗತಿಯಲ್ಲಿ ಪಡೆದ ಶಿಕ್ಷಣವು ದೈನಂದಿನ ಬದುಕಿನೊಂದಿಗೆ ಜೋಡಿಸಿಕೊಳ್ಳುವುದಿಲ್ಲ.
ಏಕೆಂದರೆ, ನೈಜ ಜೀವನವು ಈ ರೀತಿ ವಿಭಾಗಗಳಲ್ಲಿ ವ್ಯವಸ್ಥಿತಗೊಂಡಿರುವುದಿಲ್ಲ. ವಿದ್ಯಾರ್ಥಿಗಳು ತಾವು ತರಗತಿಯಲ್ಲಿ  ಪಡೆದ ಜ್ಞಾನವನ್ನು ನೈಜ ಬದುಕಿನಲ್ಲಿ  ಒರೆಹಚ್ಚಲು ಬೇಕಾದ ಪರಿಸರವನ್ನು `ಪರಿಸರ ಮಿತ್ರ~ ಕಾರ್ಯಕ್ರಮವು ನಿರ್ಮಿಸುತ್ತದೆ.
ಶಾಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲ ವಿಷಯಗಳ ಅಧ್ಯಾಪಕರೂ ನೀರು, ಕಸ ನಿರ್ವಹಣೆ, ಇಂಧನ, ಜೀವ ವೈವಿಧ್ಯ ಹಾಗೂ ಸಂಸ್ಕೃತಿ ಮತ್ತು ಪರಂಪರೆ ಎಂಬ ಐದು ಕ್ರಿಯಾವಿಷಯಗಳ ಮೂಲಕ ವಿದ್ಯಾರ್ಥಿಗಳೊಂದಿಗೆ ಕೆಲಸ ಮಾಡಲು ಅವಕಾಶ ಕಲ್ಪಿಸುತ್ತದೆ.
      ಭಾಷಾ ಶಿಕ್ಷಕರು ತಮ್ಮ ನಗರದ ಕಸ ನಿರ್ವಹಣೆಯ ಅವ್ಯವಸ್ಥೆಯ ಕುರಿತು ನಗರಸಭೆಯ ಅಧಿಕಾರಿಗಳಿಗೆ ಪತ್ರ ಬರೆಯಲು ವಿದ್ಯಾರ್ಥಿಗಳಿಗೆ ಪ್ರೇರಣೆ ಮತ್ತು ಜ್ಞಾನವನ್ನು ಒದಗಿಸಬಲ್ಲರು. ಗಣಿತ ಶಿಕ್ಷಕರು ಸೋರುವ ನಲ್ಲಿಯಿಂದ  ದಿನವೊಂದಕ್ಕೆ ಸಂಗ್ರಹವಾಗುವ ನೀರಿನ ಪ್ರಮಾಣವನ್ನು ಲೆಕ್ಕ ಹಾಕಲು ತಿಳಿಸಬಹುದು.
ವಿಜ್ಞಾನ ಶಿಕ್ಷಕರು ಶಾಲೆಯ ಸುತ್ತಲಿರುವ ಮರಗಿಡಗಳಿಗೆ ವೈಜ್ಞಾನಿಕ  ಹೆಸರುಗಳ ಪಟ್ಟಿ ಅಂಟಿಸುವಂತೆಯೋ ಅಥವಾ ಶಾಲೆಯ ನೀರಿನ ಟ್ಯಾಂಕನ್ನು ತುಂಬಿಸಲು ಬಳಕೆಯಾಗುವ ವಿದ್ಯುತ್ ಶಕ್ತಿಯ ಪ್ರಮಾಣವನ್ನು ಅಳೆಯುವಂತೆಯೂ ವಿದ್ಯಾರ್ಥಿಗಳಿಗೆ ಪ್ರೇರೇಪಣೆ ನೀಡಬಹುದು.
      ಪಠ್ಯ ವಿಷಯಗಳನ್ನು ಮಗುವಿನ ದೈನಂದಿನ ಬದುಕಿನೊಂದಿಗೆ ಬೆಸೆಯುವಂತಹ ಅನೇಕ ಚಟುವಟಿಕೆಗಳ ಮೂಲಕ ಗಳಿಸಿದ ಹಸಿರು ಜ್ಞಾನವು ವಿದ್ಯಾರ್ಥಿಗಳಿಗೆ ಸುಸ್ಥಿರ ಅಭಿವೃದ್ಧಿಗಾಗಿ ಎಲ್ಲಿ ಕ್ರಮ ಕೈಗೊಳ್ಳಬೇಕೋ ಅಂತಹ ನಿರ್ದಿಷ್ಟ ಸನ್ನಿವೇಶಗಳು ಮತ್ತು ಸ್ಥಳಗಳನ್ನು ಗುರುತಿಸಲು ನೆರವಾಗುತ್ತದೆ. ಪರಿಸರದಲ್ಲೊಂದು ಬದಲಾವಣೆಯನ್ನು ತರಬಲ್ಲೆನೆಂಬ ಆತ್ಮವಿಶ್ವಾಸವು ಅವರ ಜವಾಬ್ದಾರಿಯನ್ನು ಹೆಚ್ಚಿಸುತ್ತದೆ.
ವಿದ್ಯಾರ್ಥಿಗಳು ಇಕೋ ಕ್ಲಬ್‌ನಂತಹ ಗುಂಪಿನೊಂದಿಗೆ ಕಾರ್ಯನಿರ್ವಹಿಸುವಾಗ ಪಡೆಯುವ ಸಾಮಾಜಿಕ ಕೌಶಲಗಳು ಅವರ ಬದುಕಿಗೆ ಬಹಳ ಮುಖ್ಯ. ಹೊಸ ತಲೆಮಾರು ಇಂತಹ ಸಾಮಾಜಿಕ ಬುದ್ಧಿವಂತಿಕೆಯನ್ನು ಗಳಿಸಿಕೊಂಡಲ್ಲಿ ಮುಂಬರುವ ದಿನಗಳು ಹಿಂಸೆಯಿಂದ, ದ್ವೇಷದಿಂದ ಮುಕ್ತವಾಗಬಹುದು.
       ಪರಿಸರ ಮಿತ್ರ ಕಾರ್ಯಕ್ರಮದ ಐದು ಕ್ರಿಯಾ ವಿಷಯಗಳಲ್ಲಿ ವಿದ್ಯಾರ್ಥಿಗಳು ಚಟುವಟಟಿಕೆಗಳನ್ನು ನಡೆಸುವಂತೆ ಪ್ರೇರೇಪಿಸುವ ಕಾರ್ಯವು 2005 ರ ಪಠ್ಯಕ್ರಮ ನೆಲೆಗಟ್ಟು ಸೂಚಿಸುವ ಮಾರ್ಗದರ್ಶಿ ತತ್ವಗಳಿಗೆ ಪೂರಕವಾಗಿದೆ ಕೂಡಾ.
 ಪಠ್ಯಕ್ರಮ ನೆಲೆಗಟ್ಟು ಜ್ಞಾನವನ್ನು ಶಾಲೆಯ ಹೊರ ಪರಿಸರದೊಂದಿಗೆ ಜೋಡಿಸಲು ಮತ್ತು ಪಠ್ಯಕ್ರಮವನ್ನು ಪಠ್ಯಪುಸ್ತಕಗಳನ್ನು ಮೀರಿ ಸವೃದ್ಧಗೊಳಿಸಲು ಉತ್ತೇಜಿಸುತ್ತದೆ.ವಿಚಾರಣೆ, ಅನ್ವೇಷಣೆ, ಪ್ರಶ್ನಿಸುವುದು, ಚರ್ಚೆ, ಅನ್ವಯ, ಆತ್ಮವಿಮರ್ಶೆ ಮುಂತಾದ ಕ್ರಿಯೆಗಳಿಂದ ಪರಿಕಲ್ಪನೆಗಳನ್ನು ಮೂಡಿಸಲು ಶಾಲೆಗಳು ಅವಕಾಶವಿತ್ತಲ್ಲಿ ಜ್ಞಾನಸೃಷ್ಟಿಯ ಕ್ರಿಯೆ ತೊಡಕಿಲ್ಲದೇ ಸಾಗಬಹುದು.
        ಪರಿಸರ ಮಿತ್ರ  ಕಾರ್ಯಕ್ರಮದ ಮೂಲಕ ವಿದ್ಯಾರ್ಥಿಗಳು  ತರಗತಿ ಕೋಣೆಯಲ್ಲಿ  ಪಡೆದ ಮಾಹಿತಿಗಳನ್ನಾಧರಿಸಿ ನಿತ್ಯ ಬದುಕಿನ ಸಂದರ್ಭದಲ್ಲಿ ನಡೆಸುವ ಚಟುವಟಿಕೆಗಳು (ಪ್ರಾಜೆಕ್ಟ್ಸ್) ಅವರ ಪರಿಸರ ಬದ್ಧತೆಯನ್ನು ಹೆಚ್ಚಿಸಿ  ನಡೆದಲ್ಲೆಲ್ಲಾ ಅಂಗೈ ಮುದ್ರೆಗಳು ಉಂಟಾದರೆ ಈ ಭೂಮಿ ಮುಂದಿನ ತಲೆಮಾರಿಗಾಗಿ ಉಳಿಯಬಹುದು. ಜ್ಞಾನ ಸೃಷ್ಟಿಯ ಸಾಹಸ ಬೇಗನೆ ಶುರುವಾಗಲಿ!