Saturday 27 December 2014

Sunday 14 December 2014

ರೈಲಿನಲ್ಲಿ ಸಿಕ್ಕವರು
















`ರಾಯರು ಸಮಾ ತಕ್ಕೊಂಡಿರ್ಬೇಕು!’
ಪಕ್ಕದ ಸೀಟಿನಲ್ಲಿ ನಿದ್ದೆಹೊಡೆಯುತ್ತಿರುವ ಆಸಾಮಿಯತ್ತ ನೋಡುತ್ತಾ ಉದ್ಘರಿಸಿದ ಸಹಪ್ರಯಾಣಿಕ ಮನಮೋಹನನ ಗಮನ ಸೆಳೆಯಲು ಯತ್ನಿಸಿದ. ಮಾತಿಗೊಂದು ಪ್ರಾರಂಭವನ್ನು  ಒದಗಿಸಲಿಕ್ಕಾಗಿ ಹೀಗೆ ಗಮನಾರ್ಹ ಸಂಗತಿಗಳನ್ನು ಹೆಕ್ಕಿ ಶುರುಹಚ್ಚಿಕೊಳ್ಳುವುದು ಹಲವರ ರೂಢಿ. ಹೀಗೆ ಶುರುವಾದ ಮಾತು ಮುಂದುವರಿದು ಪ್ರಯಾಣದ ಬೇಸರವನ್ನು ಕಡಿಮೆಮಾಡಬಹುದು, ಕೆಲವೊಮ್ಮೆ ಪ್ರಯಾಣವನ್ನು ನಿಸ್ಸಾರಗೊಳಿಸಲೂಬಹುದು ಎಂಬುದು ಮನಮೋಹನನ ಅನುಭವ. ಮಾತು ಶುರುಹಚ್ಚಿಕೊಳ್ಳಲು ಯತ್ನಿಸುತ್ತಿರುವ ಸಹಪ್ರಯಾಣಿಕನಿಗೆ ಯಾವ ಮಟ್ಟದ ಮರುಸ್ಪಂದನೆ ನೀಡುವುದು ಸೂಕ್ತ ಎಂಬ ಲೆಕ್ಕಾಚಾರ ಹಾಕುತ್ತಾ ಮನಮೋಹನ ನಿದ್ದೆಹೊಡೆಯುತ್ತಿದ್ದ ವ್ಯಕ್ತಿಯತ್ತ ನೋಡಿದ. ಕೂದಲು ಕೆದರಿದೆ, ಹಾಕಿಕೊಂಡಿರುವ ಬಟ್ಟೆ ಕೊಳೆಯಾಗಿದೆ, ಬಾಯಲ್ಲಿ ಎಂಜಲು ಇಳಿಯುತ್ತಿದೆ; ವಯಸ್ಸು ನಲವತ್ತೋ ನಲವತ್ತೈದೋ ಇರಬಹುದು..ಕುಡಿದಿರುವುದೂ ಹೌದು.
    ನಿದ್ದೆ ಮಾಡುತ್ತಿದ್ದ ವ್ಯಕ್ತಿಯತ್ತ ಮನಮೋಹನ ನೋಡಿದ್ದರಿಂದ ಉತ್ತೇಜನಗೊಂಡ ಸಹಪ್ರಯಾಣಿಕ ಮಾತು ಮುಂದುವರಿಸಿದ-
`ಗೋವಾದಲ್ಲಿ ಡಿಸೆಲ್ ಪೆಟ್ರೋಲಿನಂತೆ ಫೆನ್ನಿ ಕೂಡಾ ಬಹಳ ಅಗ್ಗ..ಗೋವಾದಿಂದ ಬರುವ ಗಾಡಿಗಳೆಲ್ಲ ಟ್ಯಾಂಕ್ ತುಂಬಿಸಿಕೊಂಡೇ ಬರುವುದು..’ಎಂದು ತನ್ನ ದ್ವಂದ್ವಾರ್ಥದ ಮಾತಿಗೆ ತಾನೇ ಹೆಮ್ಮೆಪಟ್ಟುಕೊಂಡು ಮನಮೋಹನನ ಮುಖ ನೋಡಿದ. ಅಪರೂಪಕ್ಕೊಮ್ಮೆ ಗುಂಡು ಹಾಕುವ ಅಭ್ಯಾಸವಿರುವ ಮನಮೋಹನನಿಗೆ ನಗಲು ಕಷ್ಟವಾಯಿತು, ನಗದಿರಲೂ ಕಷ್ಟವಾಯಿತು. ಅಷ್ಟರಲ್ಲಿ ಹಾರವಾಡ ಸ್ಟೇಷನ್ನು ಬಂದಿದ್ದರಿಂದ ನಿಧಾನವಾಗಿ ಸ್ಪೀಡು ಕಡಿಮೆಮಾಡಿಕೊಂಡು ಟ್ರೇನು ನಿಂತಾಗ ಕುಡಿದು ಮಲಗಿದ ಆ ಮನುಷ್ಯನ ರಿಧಮ್ಮಿಗೆ ಎಂತಹ ಧಕ್ಕೆಯಾಯಿತೋ ಆತ ನಿಧಾನಕ್ಕೆ ವಾಲಿ ಮುಂದಿನ ಸೀಟಿಗೆ ಮುಗ್ಗರಿಸಿದ. ಸಾವರಿಸಿಕೊಂಡು ಏಳುವ ಕುರುಹುಗಳು ಆತನಲ್ಲಿ ಕಾಣಿಸದೇ ಕೆಲವು ಗಳಿಗೆಗಳು ಕಳೆದ ಮೇಲೆ ಮನಮೋಹನನೊಡನೆ ಮಾತು ಶುರುಹಚ್ಚಿಕೊಂಡ ಸಹಪ್ರಯಾಣಿಕ  ಆತನ ಬೆನ್ನ ಮೇಲೆ ಮೆಲ್ಲಗೆ ತಟ್ಟಿದ, ಇನ್ನೊಮ್ಮೆ ತಟ್ಟಿದ- ಎಚ್ಚರವಾಗಲಿಲ್ಲ. ಈಗ ಸ್ವಲ್ಪ ಬಿರುಸಾಗಿಯೇ ತಟ್ಟಿದ; ಈಗಲೂ ಎಚ್ಚರವಾಗಲಿಲ್ಲ. ಅಷ್ಟರಲ್ಲಿ ಎದುರಿನ ಸೀಟಿನಲ್ಲಿ ಕುಳಿತಿದ್ದ ಎಂಟೋ ಒಂಬತ್ತೋ ವರ್ಷದ ಬಾಲಕನೊಬ್ಬ ಕುಡಿದು ಒರಗಿದ ಆ ವ್ಯಕ್ತಿಯ ತಲೆಯನ್ನು ಮೆಲ್ಲನೆ ಅಲ್ಲಾಡಿಸುತ್ತಾ ಎಚ್ಚರಿಸಲು ಪ್ರಯತ್ನಿಸಿದ. ಇಡೀ ದೇಶದ ಅಡ್ಡಸೀಳಿಕೆಯೊಂದನ್ನು ತಂದು ಕುಳ್ಳರಿಸಿದಂತೆ ಇರುವ ಪ್ಯಾಸೆಂಜರ್ ರೈಲಿನ  ಜನರಲ್ ಭೋಗಿಯಲ್ಲಿ ನಡೆಯುತ್ತಿದ್ದ ಈ ಘಟನಾವಳಿಗಳೆಲ್ಲವೂ ಇಷ್ಟೊತ್ತಿನವರೆಗೂ ಕ್ಷುಲ್ಲಕವೆನಿಸಿ ಆಚೀಚೆಯ ಪ್ರಯಾಣಿಕರ ಗಮನವನ್ನು ಸೆಳೆಯಲು ಸೋತಿದ್ದವು. ಆದರೆ, ಬಾಲಕನ ಎಂಟ್ರಿಯಿಂದಾಗಿ ಘಟನೆಗಳಿಗೆ ತಿರುವು ದೊರೆಯುವ ಸೂಚನೆ ದೊರೆಯಿತು. ಈ ಬಾಲಕ ಕುಡಿದು ಮಲಗಿದಾತನ ಮಗನೇ ಆಗಿರಬಹುದೆಂದು ಮನಮೋಹನ ಊಹಿಸಿ, ಸಹಪ್ರಯಾಣಿಕ  ಆ ಬಾಲಕನೆದುರೇ ಇನ್ನೆಂಥದೋ ದ್ವಂದ್ವಾರ್ಥದ ಮಾತನ್ನಾಡಬಹುದೆಂಬ ಭಯದಿಂದ ತಾನೇ ಮಾತನಾಡಿಸಿದ.
`ಇವರು ನಿನಗೇನಾಗಬೇಕು?’
`ಅಪ್ಪ’
ನೀನೂ ಅಪ್ಪ ಅಲ್ದೇ ಇನ್ನು ಯಾರೆಲ್ಲ ಬಂದಿದ್ದೀರಿ ಟ್ರೇನಿನಲ್ಲಿ?’
`ನಾವಿಬ್ರೇ’
ಇಬ್ಬರೇ ಇರುವುದು ಖಾತ್ರಿಯಾದ ಮೇಲೆ ಇನ್ನಷ್ಟು ಧೈರ್ಯಮಾಡಿ ಮಾತು ಮುಂದುವರಿಸಿದ-
`ಶಾಲೆಗೆ ಹೋಗ್ತೀಯಾ?’
`ಹೌದು’
`ಎಷ್ಟನೇ ಕ್ಲಾಸು?’
`ಮೂರು’
`ಯಾವ ಶಾಲೆ?’
`ವೆಂಕಟ್ರಮಣ ಶಾಲೆ.’
`ಎಲ್ಲಿದೆ ಅದು?’
`ಮಂಗಳೂರಲ್ಲಿ’
ಯಾವುದೋ ಮುಖ್ಯ ಪ್ರಶ್ನೆ ನೆನಪಾದವನಂತೆ ಕೇಳಿದ-
`ನಿನ್ನ ಹೆಸರೇ ಹೇಳಿಲ್ಲವಲ್ಲ?’
ಹೇಳಲು ನೀವು ಕೇಳೇ ಇಲ್ಲವಲ್ಲ ಅಂತ ಆ ಬಾಲಕನಿಗೆ ಅನ್ನಿಸಿತೋ ಇಲ್ಲವೋ
`ಗೋಪಾಲರಾಜು’ ಎಂದ.
ತುಳು ಭಾಷಿಕರು ಮಾತನಾಡುವ ವಿಶಿಷ್ಟ ಕನ್ನಡದಲ್ಲಿ ಆ ಬಾಲಕ ಪ್ರಶ್ನೆ ಎಸೆಯುವಷ್ಟರಲ್ಲಿ ಉತ್ತರಿಸುತ್ತಿದ್ದ. ಮಾತು ಮುಂದೆಲ್ಲಿಗೂ ಹೋಗುತ್ತಿಲ್ಲ ಎನಿಸಿ, ರಿಪೀಟಾದರೂ ಅಡ್ಡಿಯಿಲ್ಲ ಎಂದುಕೊಂಡು ಮನಮೋಹನ ಕೇಳಿದ-
`ಹಾಗಾದ್ರೆÉ್ರ, ಮಂಗಳೂರಲ್ಲಿ ನೀವಿಬ್ರೂ ಇಳೀತೀರಲ್ಲ?’
`ಇಲ್ಲ, ಸುರತ್ಕಲ್ಲಿನಲ್ಲಿ’
`ಯಾಕೆ?’
`ಅಲ್ಲಿಂದ ಕುಲಾಯಿಗೆ ಹೋಗಬೇಕು, ಬಸ್ಸಿನಲ್ಲಿ’
`ಅಪ್ಪ ಏನು ಕೆಲಸ ಮಾಡ್ತಾರೆ?’
`ಕೂಲಿ ಕೆಲಸ’
`ಅಮ್ಮ?’
`ಅಮ್ಮ ಇಲ್ಲ’
ಮನಮೋಹನನಿಗೆ ಅನುಮಾನವಾಯ್ತು. ಸರಿಯಾಗಿ ಕೇಳಿಸಿಕೊಳ್ಳಲಿಲ್ಲವೇನೋ ಎಂದುಕೊಂಡು, ಹುಡುಗನ ಕಡೆ ಬಾಗಿ ಪುನಃ ಕೇಳಿದ
`ಅಮ್ಮ?’
`ಅಮ್ಮ ಸತ್ತು ಹೋಗಿದ್ದಾರೆ’
ಯಾವ ಗೊಂದಲಕ್ಕೂ ಆಸ್ಪದವಿಲ್ಲದಂತೆ ಭಾಷೆಯನ್ನು ನಯ-ನಾಜೂಕಿನಿಂದ ಹೊರತಂದು ಆ ಹುಡುಗ ಸ್ಪಷ್ಟವಾಗಿ ಉತ್ತರಿಸಿದ ರೀತಿ ಮನಮೋಹನಿಗೆ ಆಶ್ಚರ್ಯವುಂಟುಮಾಡಿತು. ಆ ಹುಡುಗನ ಕಣ್ಣುಗಳಲ್ಲಿ ನೀರು ತುಂಬಿಕೊಂಡಂತೆ ಕಂಡಿದ್ದರಿಂದ ಮನಮೋಹನ ಪಕ್ಕದ ಸಹಪ್ರಯಾಣಿಕರತ್ತ ನೋಡಿದ. ಅವರೆಲ್ಲರ ಮುಖದಲ್ಲಿ ಪಡಿಮೂಡಿದ ಪ್ರಶ್ನಾರ್ಥಕ ಚಿನ್ಹೆಯನ್ನು ಓದಿದವನÀಂತೆ ಮೆಲ್ಲನೇ ಅಂದ-
`ಅಮ್ಮ ತೀರಿಕೊಂಡಿದ್ದಾರಂತೆ!’
ಮಾಮೂಲಿ ಕುಡಿತದ ಕೇಸು ಎಂದು ಈ ಪ್ರಹಸನದಿಂದ ಆಸಕ್ತಿ ಕಳೆದುಕೊಂಡು ತಮ್ಮ ಕುಟುಂಬದ ಸುರಕ್ಷೆಯಲ್ಲಿ ಸಿಕ್ಕಿಕೊಂಡಿದ್ದ ಹೊನ್ನಾವರದ ದಂಪತಿಗಳು, ಗೆಣಸಿನ ಚಿಪ್ಸ ತಿನ್ನುತ್ತಾ ಮಲೆಯಾಳಿ ಪೇಪರ್ ಓದುತ್ತಿದ್ದ ಮಹಾನುಭಾವ, ನಿದ್ದೆಯಲ್ಲಿದ್ದಂತೆ ಇದ್ದರೂ ಎಚ್ಚರದಲ್ಲಿದ್ದ ಟೊಪ್ಪಿಯ ಮನುಷ್ಯ, ಅಷ್ಟೇಕೆ, ಅಂಚೆಕಾರ್ಡಿನಗಲದ ಮೊಬೈಲು ಫೋನು ಹಿಡಿದು, ಅದರಿಂದ ಹೊರಟ ವೈರುಗಳಲ್ಲಿ ಬಂದಿಯಾದವನಂತೆ ಮತ್ತು ಆ ವೈರುಗಳಲ್ಲದೇ ಬಾಹ್ಯ ಜಗತ್ತಿನೊಡನೆ ಸಂಪರ್ಕಸಾಧಿಸುವ ಬೇರೆ ಸಾಧ್ಯತೆಗಳೇ ಇಲ್ಲ ಎಂಬಂತಿದ್ದ ಯುವಕನೂ ಸೇರಿ ಅಲ್ಲಿದ್ದ ಎಲ್ಲರೂ ಈಗ ಮುಖ್ಯ ಕಥಾನಕದ ಭಾಗವಾದರು. ಸತ್ತಿರುವ ಅಮ್ಮನ ಕುರಿತು ಇವರೆಲ್ಲ ಪ್ರಶ್ನೆ ಕೇಳಿ ಮಗುವಿಗೆ ಎಂತಹ ನೋವನ್ನುಂಟುಮಾಡುತ್ತಾರೋ ಎಂದು ಹೆದರಿದ ಮನಮೋಹನ ಅವರುಗಳ ಆಲೋಚನೆಗಳನ್ನು ಕತ್ತರಿಸುವ ಹಾಗೆ,
`ಈ ಮಹಾಶಯ ಸುರತ್ಕಲ್ಲಿನಲ್ಲಾದ್ರೂ ಎಚ್ಚರವಾಗ್ತಾನೋ? ಎಂದ. ಹಾಗೆ ಹೇಳುತ್ತಲೇ ಅಪ್ಪನ ಕುರಿತು ಹಗುರವಾಗಿ ಮಾತನಾಡಿದ್ರಿಂದ ಮಗನಿಗೆ ಬೇಸರಾವಾಯ್ತೇನೋ ಎಂದು ನೊಂದುಕೊಂಡ. ಅಷ್ಟಿಷ್ಟು ಅನುಕೂಲವಿರುವ ಮಧ್ಯಮ ವರ್ಗದ ವಿದ್ಯಾವಂತ ತಂದೆ-ತಾಯಿಯರು ಮತ್ತು ಅವರ ಮಕ್ಕಳು ಆಲೋಚಿಸುವ ರೀತಿಗೂ ಕೊಳಗೇರಿಗಳ ಮಕ್ಕಳು, ಕೂಲಿಯವರ ಮಕ್ಕಳು ಆಲೋಚಿಸುವ ರೀತಿಗೂ ವ್ಯತ್ಯಾಸ ಇರಬಹುದೇ ಎಂಬ ಅನುಮಾನ ಉಂಟಾಗಿದ್ದರಿಂದ ಮನಮೋಹನನಿಗೆ ತನ್ನ ಬಾಲ್ಯದ ನೆನಪಾಯಿತೋ ಅಥವಾ ಬಾಲ್ಯದ ನೆನಪಾದ್ದರಿಂದ ಹಾಗೆ ಅನ್ನಿಸಿತೋ?  ಅಂತೂ ಮನಮೋಹನ ಬಾಲ್ಯಕ್ಕೆ ಮರಳಿದ. ಮಕ್ಕಳ ಜಗಳದಲ್ಲಿ ಅಪ್ಪ- ಅಮ್ಮರ ವಿಷಯವೆಲ್ಲ ಪ್ರಸ್ತಾಪವಾಗುತಿತ್ತು. ನಿನ್ನಪ್ಪ ಹೀಗೆ, ನಿನ್ನಮ್ಮ ಹಾಗೆ ಇತ್ಯಾದಿ ಇತ್ಯಾದಿ. ಊರಿನ ಅಡ್ಡ ಸಂಬಂಧಗಳೆಲ್ಲ ಮಕ್ಕಳ ಜಗಳಗಳಲ್ಲಿ ಮಧ್ಯಪ್ರವೇಶಿಸಿಬಿಡುತ್ತಿದ್ದವು. ದೊಡ್ಡವರ ಜಗಳಗಳಲ್ಲೂ ಮಕ್ಕಳಿಗೆ ತಮ್ಮ ತಂದೆ ತಾಯಿಯರ ಕುರಿತು ಹೊಸ ಸಂಗತಿಗಳು ತಿಳಿಯುತ್ತಿದ್ದವು. ಆಚೆ ಮನೆಯ ಹೆಂಗಸಿಗೂ ಅಪ್ಪನಿಗೂ ಇರುವ ಸಂಬಂಧ ಒಳ್ಳೆಯದಲ್ಲ ಎಂತಲೋ, ಅಮ್ಮಂಗೂ ಅಪ್ಪಂಗೂ ನಡುವೆ ಇನ್ಯಾವನೋ ಇದ್ದಾನೆಂದೋ ಮಕ್ಕಳು ಅರಿತುಕೊಳ್ಳುವುದಲ್ಲದೇ ವಾಸ್ತವವನ್ನು ಒಪ್ಪಿಕೊಂಡೂ ಬಿಡುತ್ತಿದ್ದರು. ಮಕ್ಕಳ ಜಗಳಗಳು ಶಾಲಾ ಮೇಷ್ಟ್ರ ಬಳಿ ಹೋದಾಗ ಹೆಚ್ಚಾಗಿ ಕೇಳಿಬರುತ್ತಿದ್ದ ದೂರೆಂದರೆ, ಅವನು ನನ್ನಪ್ಪನ ಸುದ್ದಿ ಮಾತಾಡಿದ ಅಥವಾ ನನ್ನಮ್ಮನ ಬಗ್ಗೆ ಮಾತಾಡಿದ ಎಂಬುದಾಗಿರುತಿತ್ತು. ಬರಬರುತ್ತಾ, ಮಕ್ಕಳಿಗೆ ತನ್ನ ಅಪ್ಪ, ಅಮ್ಮ, ಮಾವ ಅಣ್ಣ ಇತ್ಯಾದಿಗಳೆಲ್ಲ ಬಹುದೊಡ್ಡ ಆದರ್ಶಗಳಲ್ಲ ಎಂಬುದು ಅರ್ಥವಾಗಿರುತಿತ್ತು. ಅಪ್ಪ ಅಮ್ಮರ ಬಗ್ಗೆ ಯಾರಾದರೂ ಲಘುವಾಗಿ ಮಾತನಾಡಿದರೆ ಅತಿಯಾಗಿ ನೊಂದುಕೊಳ್ಳದಷ್ಟು ಅಥವಾ ಅಂತಹ ಮಾತುಗಳನ್ನು ಉಪೇಕ್ಷೆಮಾಡುವಷ್ಟು  ದೃಢತೆ ತಂತಾನೆ ಬರುತಿತ್ತು. ಆದರೆ, ನಮ್ಮ ಮಕ್ಕಳು? ಸುಸಂಸ್ಕøತರೆನಿಸಲು ಅಪ್ರಾಮಾಣಿಕ ಪೊರೆಗಳನ್ನು ಹೊದ್ದು ಮಲಗಿರುವ ತಂದೆ-ತಾಯಿಯರ ಕುರಿತು ನಮ್ಮ ಮಕ್ಕಳಿಗೆ ಇರುವುದು ಬರೀ ಸುಳ್ಳು ಚಿತ್ರಣ!
   ಹೀಗೆ ಯೋಚಿಸುತ್ತಿರುವಾಗಲೇ  ಗೋಕರ್ಣ ಸ್ಟೇಷನ್ನು ಬಂದಿದ್ದರಿಂದ ಟ್ರೇನು ನಿಧಾನವಾಯ್ತು. ಇಷ್ಟೊತ್ತಿನವರೆಗೂ ಜೊತೆಯಲ್ಲಿದ್ದ ಪ್ರಯಾಣಿಕರೊಬ್ಬರು ಇಳಿಯಲು ತಯಾರಾದರು. ಹಿಂದಿನ ಸ್ಟೇಷನ್ನಿನಲ್ಲಿ ಅವರು ಗೋಪಾಲರಾಜುವಿಗೆ ಕೊಟ್ಟಿದ್ದ ಮೈಸೂರುಪಾಕಿನ ತುಂಡು ಅವನ ಕೈಯಲ್ಲಿ ಹಾಗೇ ಇರುವುದನ್ನು ಗಮನಿಸುತ್ತಾ ಬಾಗಿಲ ಬಳಿ ನಡೆದರು. ಅವರು ಇಳಿಯುತ್ತಲೇ ಗೋಪಾಲರಾಜು ತನ್ನ ಕೈಯಲ್ಲಿದ್ದ ಮೈಸೂರುಪಾಕನ್ನು ಕಿಟಕಿಯಿಂದ ಹೊರಗೆ ಬಿಸಾಡಿದ. ಗೋಪಾಲರಾಜುವನ್ನು ಗಮನಿಸುತ್ತಿದ್ದ ಮನಮೋಹನ ಮತ್ತೆ ಮಾತನಾಡಿಸಿದ-
ನಿನ್ನಪ್ಪನ ಫೋನ್ ನಂಬರ್ ಗೊತ್ತಾ?’
`ಗೊತ್ತುಂಟು’
ಗೋಪಾಲರಾಜು ಹೇಳಿದ ಫೋನ್‍ನಂಬರನ್ನು ದಾಖಲಿಸಿಕೊಂಡು ಮನಮೋಹನ ಆ ನಂಬರಿಗೆ ಕರೆಮಾಡಿದ. ಸ್ವಲ್ಪ ಸಮಯದ ಹಿಂದಷ್ಟೇ ಸೀಟಿನ ಕೆಳಗೆ ಬಿದ್ದಿದ್ದ ಆ ಕುಡುಕನನ್ನು ಮತ್ತೆ ಸೀಟಿನ ಮೇಲೆ ಪ್ರಯಾಣಿಕರೊಬ್ಬರು ಕುಳ್ಳರಿಸಿದ್ದರು. ಮನಮೋಹನನ ಫೋನ್ ಕರೆಗೆ ಅಂಗಿಯ ಕಿಸೆಯಲ್ಲಿದ್ದ ಫೋನ್ ಬೆಳಕಿನೊಂದಿಗೆ ರಿಂಗಣಿಸಿದಾಗ ಆತನ ಕಣ್ಣುಗಳು ತೆರೆಯುವ ಪ್ರಯತ್ನ ನಡೆಸಿದಂತೆ ಕಂಡವು. ಗೋಪಾಲರಾಜು ಕುತೂಹಲ, ಖುಷಿಯಿಂದ ಅಪ್ಪನ ಕಿಸೆಯನ್ನೇ ನೋಡುತ್ತಿದ್ದ.
`ನೀವಿಬ್ರೂ ಎಲ್ಲಿಗೆ ಹೋಗಿದ್ರಿ?’
`ಕಾರವಾರಕ್ಕೆ’
`ಏಕೆ?’
ಗೋಪಾಲರಾಜು ಮುಖವನ್ನು ಹತ್ತಿರ ತಂದು ಮೆಲ್ಲಗೆ ಹೇಳಿದ-
`ಅಕ್ಕ ಮನೆಬಿಟ್ಟು ಹೋಗಿದ್ದಳು-ಅವಳು ಕಾರವಾರದಲ್ಲಿದ್ದಾಳೆಂದು ಗೊತ್ತಾಯ್ತು..ಅಲ್ಲಿಗೆ ಹೋಗಿದ್ದೆವು’
`ಅಕ್ಕ ಸಿಕ್ಕಳಾ?’
`ಇಲ್ಲ,್ಲ’
`ನಿಮ್ಮಕ್ಕಂದು ಎಷ್ಟು ವಯಸ್ಸು?
`ಹದಿನೇಳು ವರ್ಷ’
ಅಕ್ಕ ಮನೆಬಿಟ್ಟು ಹೋದದ್ದು ಯಾವಾಗ?’
`ಒಂದು ತಿಂಗಳಾಯ್ತು’
ಹೆಂಡತಿಯನ್ನು ಕಳೆದುಕೊಂಡ ಮನುಷ್ಯ ಮಗಳನ್ನು ಕಳೆದುಕೊಂಡರೆ ಕುಡಿಯದೇ ಇರುತ್ತಾನೆಯೇ ಎನಿಸಿತು ಮನಮೋಹನಿಗೆ. ಇವನ ಅಕ್ಕ ಎಲ್ಲಿ ಹೋಗಿರಬಹುದು? ಅಮ್ಮ ಇಲ್ಲದ ಹುಡುಗಿ ಪಾಪ, ಯಾರೋ ಪುಸಲಾಯಿಸಿ ಕರೆದುಕೊಂಡು ಹೋಗಿರಬಹುದು. ಹದಿನೇಳು ವರ್ಷದ ಹುಡುಗಿ ಎಂದಮೇಲೆ ನೂರಾರು ಕಣ್ಣುಗಳು ಇದ್ದೇ ಇರುತ್ತವೆ. ಆತಂಕವಾಯಿತು ಮನಮೋಹನನಿಗೆ. ಈ ಚಿಕ್ಕ ಮಗುವಿನಲ್ಲಿ ಇನ್ನೇನು ಕೇಳುವುದೂ ಉಚಿತವಲ್ಲವೆಂದು ಸುಮ್ಮನಾದ. ಕಿಸೆಯಿಂದ ಒಂದುನೂರು ರೂಪಾಯಿ ತೆಗೆದು ಗೋಪಾಲರಾಜುವಿನ ಕೈಯಲ್ಲಿಟ್ಟು,
`ಮುಂದಿನ ಸ್ಟೇಷನ್ನಿನಲ್ಲಿ ಇಳಿಯುತ್ತೇನೆ, ನೀನು ಸುರತ್ಕಲ್ಲು ಬರುವ ಮುಂಚೆಯೇ ಅಪ್ಪನನ್ನು ಎಬ್ಬಿಸು’ ಎಂದ. ದುಡ್ಡುಕೊಟ್ಟಿದ್ದನ್ನು ಇತರ ಪ್ರಯಾಣಿಕರು ನೋಡಿರಬಹುದೆಂದು ಊಹಿಸಿ ಖುಷಿಪಡಿತ್ತಾ ಬಾಗಿಲ ಬಳಿಬಂದು ಉದ್ದನೆಯ ಟ್ರೇನಿನ ಬಾಲದವರೆಗೂ ಕಣ್ಣುಹಾಯಿಸಿದ. ದಿನವೂ ಈ ಟ್ರೇನು ಎಷ್ಟು ಜನರನ್ನು ಹೊತ್ತೊಯ್ಯುತ್ತಿರಬಹುದು? ಈ ಟ್ರೇನಿನೊಳಗೆ ಗೋಪಾಲರಾಜುವಿನಂತಹ ಎಷ್ಟು ಕತೆಗಳಿರಬಹುದು? ಟ್ರೇನು ಕುಮಟಾದಲ್ಲಿ ನಿಂತಿತು. ಮನಮೋಹನ ಇಳಿದು ಗೋಪಾಲರಾಜುವಿನತ್ತ ಕೈ ಬೀಸಿದ. ಗೋಪಾಲರಾಜು ಏನೂ ನಡೆದೇ ಇಲ್ಲವೆಂಬಂತಹ ಮುಖಮುದ್ರೆಯಲ್ಲಿದ್ದ. ಬೇರೆ ಬೇರೆ ಬಾಗಿಲುಗಳಿಂದ ಫ್ಲ್ಲಾಟ್‍ಫಾರ್ಮಿಗಿಳಿದ ಜನ ಮತ್ತು ಅವೇ ಬಾಗಿಲುಗಳಿಂದ ಹತ್ತಿದ ಅಷ್ಟೇ ಜನ ಮನಮೋಹನನಿಗೆ ನರಮನುಷ್ಯರಂತೆ ಕಾಣುವ ಬದಲು ಕತೆಗಳಂತೆ ಭಾಸವಾದರು. ಅಬ್ಬಾ ಟ್ರೇನಿನಲ್ಲಿ ಎಷ್ಟು ಕತೆಗಳು ತೂರಿಕೊಂಡವು? ಎಷ್ಟು ಕಳಚಿಕೊಂಡವು ಎಂದು ಯೋಚಿಸುತ್ತಾ ರಿಕ್ಷಾ ಸ್ಟ್ಯಾಂಡಿನತ್ತ ಹೆಜ್ಜೆ ಹಾಕಿದ.
                                     ******

`ನಾನು ಸರ್, ಗೋಪಾಲರಾಜು.. ನಿನ್ನೆ ಟ್ರೇನಿನಲ್ಲಿ ಸಿಕ್ಕಿದ್ನಲ್ಲ..’
ಈ ಕರೆಯನ್ನು ನಿರೀಕ್ಷಿಸಿರಲಿಲ್ಲ ಮನಮೋಹನ.
ಸರ್, ನನ್ನಪ್ಪನ ಮೊಬೈಲ್‍ನಲ್ಲಿ ನಿಮ್ಮ ಮಿಸ್ಡ್ ಕಾಲಿತ್ತು..ನಿನ್ನೆ ನೀವು ಮಾಡಿದ್ದಿರಲ್ಲ?!’
`ಓಹೋ ಗೊತ್ತಾಯ್ತು, ಗೋಪಾಲರಾಜು.. ನಿನ್ನೆ ಸುರತ್ಕಲ್ಲಿನಲ್ಲಿ ಇಳಿದ್ರಿ ಅಲ್ವಾ?’ ಎಂದ.
ಗೋಪಾಲರಾಜು ಮುದ್ದಾಗಿ ಮಾತನಾಡುತ್ತಿದ್ದ. ಇಂದು ತನ್ನ ಹುಟ್ಟುಹಬ್ಬ ಎಂದು ಹೇಳಿಕೊಂಡ. `ಹ್ಯಾಪಿ ಬರ್ತಡೇ ಗೋಪಾಲರಾಜು’ ಎಂದಿದ್ದಕ್ಕೆ `ಹ್ಯಾಪಿ ಬರ್ತ ಡೇ’ ಎಂದು ಮುಗ್ಧವಾಗಿ ಮಾರುತ್ತರಿಸಿದ. ಏನೋ ನೆನಪಾದವನಂತೆ `ಈಗಲ್ಲ ನನ್ನ ಹ್ಯಾಪಿ ಬರ್ತಡೇ..ಸಂಜೆ’ ಎಂದ. ಇಷ್ಟು ಖುಷಿಯಲ್ಲಿ ಮಾತಾಡುತ್ತಿದ್ದ ಗೋಪಾಲರಾಜು ಒಮ್ಮೇಲೆ ಏನೋ ನೇನಪಾದವನಂತೆ `ಹ್ಯಾಪಿ ಬರ್ತಡೇಗೆ ನನ್ನ ಅಕ್ಕ ಬೇಕು ಸರ್’ ಅಂದ. ಅಪ್ಪನಿಗೆ ಫೋನು ಕೊಡುವಂತೆ ಮನಮೋಹನ ಕೇಳಿದ. ನಿನ್ನೆಯ ಟ್ರೇನಿನ ಘಟನೆಯ ಕುರಿತು ಆತ ಕ್ಷಮೆ ಕೇಳಿದ.
`ಇನ್ನು ಹಾಗೆ ಮಾಡುವುದಿಲ್ಲ. ಕುಡುಕನಲ್ಲ ಸರ್ ನಾನು...ನಿನ್ನೆ ಬೇಜಾರಾಗಿತ್ತು’ ಅಂದ. ಆತನ ಮಗಳು ಮನೆಬಿಟ್ಟು ಹೋದ ಕುರಿತು ಕೆದಕಿ ಕೇಳಬಾರದು, ಅವನೇ ಹೇಳಲಿ ಎಂದುಕೊಂಡು ಮನಮೋಹನ ಬೇರೇನೋ ಮಾತನಾಡತೊಡಗಿದ. ವಿಷಯ ಬಾರದ್ದರಿಂದ ಕೊನೆಗೇ ಮನಮೋಹನನೇ ` ಹುಟ್ಟು ಹಬ್ಬಕ್ಕೆ ಗೋಪಾಲರಾಜು ಅಕ್ಕ ಬೇಕು ಅಂತಿದ್ದಾನಲ್ಲ?’ ಅಂದ. ಅಷ್ಟು ಕೇಳಿದ್ದೇ ಕತೆ ಪ್ರಾರಂಭವಾಯ್ತು. ಮನೆ ಬಿಟ್ಟು ಹೋಗಿರುವ ಹುಡುಗಿ ತನ್ನ ಸ್ವಂತ ಮಗಳಾಗಿರದೇ ಮಲಮಗಳು ಎಂಬುದಾಗಿಯೂ, ತಿಂಗಳ ಹಿಂದೆ ಸತ್ತುಹೋಗಿರುವ ಈತನ ಹೆಂಡತಿಗೆ ಈ ಮೊದಲೇ ಮದುವೆಯಾಗಿ ಒಬ್ಬಳು ಮಗಳಿದ್ದಳೆಂದೂ ತಿಳಿಸಿದ. ಒಂದು ವರ್ಷದ ಹಿಂದೆ, ಹೆಂಡತಿ ಬದುಕಿರುವಾಗಲೇ ಒಮ್ಮೆ ಮಲಮಗಳು ಮನೆಬಿಟ್ಟುಹೋಗಿ ಎರಡು ಮೂರು ತಿಂಗಳ ಹುಡುಕಾಟದ ನಂತರ ಮತ್ತೆ ಮನೆ ತಲುಪಿದ್ದಳಂತೆ. ಈ ಬಾರಿ ಮನೆ ಬಿಟ್ಟುಹೋದವಳು ಹಿಂದಿನಬಾರಿ ಉಳಿದುಕೊಂಡಲ್ಲಿಯೇ ಇರುವುದು ಗೊತ್ತಾಗಿ ಕಾರವಾರಕ್ಕೆ ಹೋಗಿದ್ದನ್ನು ತಿಳಿಸದ. ಆಕೆ ವಾಪಸು ಬರಲು ನಿರಾಕರಿಸಿದ್ದರಿಂದ ಅವಳ ಮೂಖ ನೋಡಲೂ ಆಗದೇ ಅಪ್ಪ-ಮಗ ವಾಪಸಾಗಿದ್ದರು.
ಮನಮೋಹನ ಕುತೂಹಲಕ್ಕಾಗಿ ಕೇಳಿದ-
`ಆಕೆ ಅಲ್ಲಿ ಯಾರ ಮನೆಯಲ್ಲಿರುತ್ತಾಳೆ?’
`ಸರ್, ಅದು ಮನೆಯಲ್ಲ ಆಶ್ರಮ..ಆ ಆಶ್ರಮವನ್ನು ನಡೆಸುತ್ತಿರುವವರು ಮೂಲತಃ ಗೋಕರ್ಣದವರು, ನೂರುಲ್ಲಾ ಅಂತ.
ಮನಮೋಹನನಿಗೆ ನೂರುಲ್ಲಾನ ಪರಿಚಯವಿತ್ತು. ಅದೇ ವಿಶ್ವಾಸದಲ್ಲಿ ಹೇಳಿಯೇಬಿಟ್ಟ-
`ನೀವೇನೂ ಚಿಂತಿಸಬೇಡಿ. ನಿಮ್ಮ ಮಗಳನ್ನು ನಾನು ಕರೆದುಕೊಂಡು ಬರುತ್ತೇನೆ. ನೀವು ನನ್ನೊಡನೆ ಬರಬೇಕಷ್ಟೇ!’’ ಎಂದ
`ಆಯ್ತು ಸರ್, ಅವಳು ಅಲ್ಲಿ ಸುಖವಾಗಿದ್ದಾಳೆ ಎಂದು ತಿಳಿದು ವಾಪಸು ಬಂದಿದ್ದೆ. ಆದ್ರೆ, ನನ್ನ ಮಗ ಅವಳನ್ನು ಬಹಳ ನೆನಪುಮಾಡಿಕೊಳ್ಳುತ್ತಿದ್ದಾನೆ’ ಎಂದ.
`ಯಾವುದಕ್ಕೂ ನೂರುಲ್ಲಾನಿಗೆ ಫೋನ್ ಮಾಡಿ ತಿಳಿದುಕೊಳ್ಳುವೆ- ಆತ ಬಹಳ ಒಳ್ಳೆಯ ಮನುಷ್ಯ.. ಮತ್ತೆ ಮಾತಾಡುವೆ’ ಎನ್ನುತ್ತಾ ಫೋನ್ ಸಂಪರ್ಕ ಕಡಿತಗೊಳಿಸಿದ.    
                                  *******
ನೂರುಲ್ಲಾನೂ ಮನಮೋಹನನೂ ಕುಮಟಾದ ಬಾಳಿಗಾ ಕಾಲೇಜಿನಲ್ಲಿ ಒಟ್ಟಿಗೆ ಓದಿದವರಾದ್ದರಿಂದ ಮತ್ತು ಆ ಕಾಲದÀ ಕಾಲೇಜು ಕ್ರಿಕೆಟ್ ತಂಡದ ಸದಸ್ಯರೂ ಆಗಿದ್ದರಿಂದ ಪರಸ್ಪರ ಏಕವಚನದಲ್ಲಿ ಮಾತನಾಡಿಸುವಷ್ಟು ಸಲಿಗೆ ಇತ್ತು. ಎಷ್ಟೋ ವರ್ಷಗಳಿಂದ ಭೇಟಿಯಾಗಿರಲಿಲ್ಲ, ಫೋನಿನಲ್ಲೂ ಮಾತನಾಡಿರಲಿಲ್ಲ. ಯಾರಿಂದಲೋ ನೂರುಲ್ಲಾನ ನಂಬರು ಪಡೆದು ಫೋನ್ ಮಾಡಿದ; ಟ್ರೇನಿನ ಕತೆ ಹೇಳಿದ..ಆ ಹುಡುಗಿ ನೀನು ನಡೆಸುವ ಆಶ್ರಮದಲ್ಲೇ ಇರುವುದು ಗೊತ್ತಾಗಿ ಫೋನು ಮಾಡಿದೆ ಅಂದ. `ಹೌದು ಇಲ್ಲೇ ಇದ್ದಾಳೆ..ಆ ಮನುಷ್ಯನೊಡನೆ ಹೋಗಲು ಒಪ್ಪಲಿಲ್ಲ..ನಮ್ಮ ಮನೇಲಿ ಚಿಕ್ಕ ಪುಟ್ಟ ಕೆಲಸಮಾಡಿಕೊಂಡು ಮದ್ಯಾಹ್ನದ ಮೇಲೆ ಆಶ್ರಮದಲ್ಲಿ ಹೊಲಿಗೆ ಕಲಿಯುತ್ತಿದ್ದಾಳೆ’ ಎಂದು ನೂರುಲ್ಲಾ ಎಂದಾಗ ಕತೆ ಸುಳ್ಳಲ್ಲವಲ್ಲ ಎಂದು ಖುಷಿಯಾಯ್ತು ಮನಮೋಹನಿಗೆ.
`ನಿನಗೇಕೆ ರಗಳೆ..ಅವರು ಕರೆದುಕೊಂಡು ಹೋಗಲಿ. ಇವೆಲ್ಲ ಮತ್ತೆಲ್ಲಿಗೋ ತಲುಪಿಬಿಟ್ಟರೆ ಅಪಾಯ..ಸುಮ್ಮನೆ ಉಪಕಾರ ಮಾಡಲು ಹೋಗಿ ಕಿರಿಕಿರಿ ಅನುಭವಿಸಬೇಕಾಗುತ್ತದೆ’ ಸಲಹೆಯನ್ನೂ ಎಚ್ಚರಿಕೆಯನ್ನೂ ಬಹಳ ಜಾಣ್ಮೆಯಿಂದ ಬೆರೆಸಿ ಮಾತನಾಡಿದ್ದು ನೂರುಲ್ಲಾನಿಗೆ  ಗೊತ್ತಾಯಿತು ಅಂತ ಕಾಣುತ್ತದೆ-
`ಓಹೋ ಕರೆದುಕೊಂಡು ಹೋಗಲಿ. ಬಿಟ್ಟಿ ಕೆಲಸದವಳು ಸಿಕ್ಕಿದಳು ಅಂತ ಇಟ್ಟುಕೊಂಡದ್ದಲ್ಲ’ ಎಂದ.
ಪುಕ್ಕಟೆಯಾಗಿ ಸಿಕ್ಕಿದ ಕೆಲಸದವಳನ್ನು ಕಳೆದುಕೊಳ್ಳುವ ನೋವು ನೂರುಲ್ಲಾನ ಮಾತಿನಲ್ಲಿ ಅವಿತಿದೆಯೋ ಎಂದು ಮನಮೋಹನ ಹುಡುಕಿದ. ಅನುಮಾನ ಪಟ್ಟಂತೆಲ್ಲ ಅದು ದೃಢವಾಗುತ್ತಾ ಹೋಗುವುದು ಅನುಮಾನಿಸುವವನ ಮನಸ್ಥಿತಿಯಲ್ಲಿರುವ ದೋಷವೇ ಆಗಿರುತ್ತದೆಂದು ಯಾರೋ ಹೇಳಿದ್ದು ನೆನಪಾಗಿ ಆಲೋಚನೆಗಳನ್ನು ಬೇರೆಡೆ ತಿರುಗಿಸಲು ಯತ್ನಿಸಿದ, ಆ ಯತ್ನದಲ್ಲಿ ಸೋತ.
`ಸರಿ, ಆ ಮನುಷ್ಯ ನಾಳೆ ಬರುತ್ತಾನೆ. ಸಾಧ್ಯವಾದರೆ ನಾನೂ ಬರುವೆ...ಹುಡುಗೀನ್ನ ಕಳುಹಿಸಿಕೊಡು. ಅವರು ಏನಾದರೂ ಮಾಡಿಕೊಳ್ಳಲಿ’ ಎಂದಾಗ ನೂರುಲ್ಲಾ ಮರುಮಾತನಾಡಲಿಲ್ಲ. ಮಾತನಾಡದಿರುವಾಗ ನೂರುಲ್ಲಾ ಏನು ಯೋಚಿಸುತ್ತಿರಬಹುದು? ನನ್ನ  ಕಾಳಜಿಯನ್ನು ಅನುಮಾನಿಸುತ್ತಿರಬಹುದೇ? ಮಾತುಕತೆ ಮುಗಿದರೂ ಪ್ರವಾಹದಂತೆ ನುಗ್ಗಿ ಬರುವ ಯೋಚನೆಗಳು ನಿಲ್ಲಲಿಲ್ಲ. ಯಾರದೋ ಮಗಳನ್ನು ಹುಡುಕಲು ನಾನೇಕೆ ಇಷ್ಟು ಕಾಳಜಿವಹಿಸುತ್ತಿದ್ದೇನೆ? ಆ ಹುಡುಗಿಯನ್ನು ನೂರುಲ್ಲಾ ಮನೆಯಲ್ಲಿಟ್ಟುಕೊಂಡದ್ದು ಕರುಣೆಯಿಂದಲೋ ಮನೆಗೆಲಸಕ್ಕೆ ನೆರವಾಗಲಿ ಎಂದೋ? ಆಕೆಗೆ ಹದಿನೇಳು ವರ್ಷವಾಗಿರುವುದಕ್ಕೂ ಮನೆಬಿಟ್ಟು ಹೋಗಿರುವುಕ್ಕೂ ಸಂಬಂಧವಿದೆಯೇ? ಮಲತಂದೆಗೂ ಮಲಮಗಳಿಗೂ ಎಂತಹ ಸಂಬಂಧವಿರಬಹುದು? ಈ ಹುಡುಗಿಯ ಕತೆಹೇಳಿ ಆಕೆಯನ್ನು ಕರೆತರಲು ಹೋಗುವುದಾಗಿ ಹೇಳಿದಾಗ ಹೆಂಡತಿ ಎಂದಿಲ್ಲದ ಖುಷಿಯಲ್ಲಿ ಒಪ್ಪಿ ಪ್ರೋತ್ಸಾಹ ನೀಡಿದ್ದೇಕೆ? ಆಕೆಗೂ ಮನೆಗೆಲಸಕ್ಕೆ ಬಿಟ್ಟಿಯಾಗೊಬ್ಬಳು ಸಿಗಬಹುದೆಂಬ ನಿರೀಕ್ಷೆಯಿದೆÀಯೇ?
ಟ್ರೇನಿನಂತೆ ನುಗ್ಗಿ ಬರುತ್ತಿದ್ದ ಅನುಮಾನಗಳಿಗೆ ಬ್ರೇಕು ಇರಲಿಲ್ಲ.
                                 ***********
   ಆ ಹುಡುಗಿ ಟ್ರೇನಿನಲ್ಲಿ ಕುಳಿತುಕೊಳ್ಳುವಾಗಲೂ ಮನಮೋಹನ ಆಕೆಯನ್ನು ಗಮನಿಸುತ್ತಿದ್ದ. ತಮ್ಮನ ಪಕ್ಕದಲ್ಲಿ ಕುಳಿತುಕೊಳ್ಳುತ್ತಾಳೋ ಅಥವಾ ಮಲತಂದೆಯೊಂದಿಗೋ? ಮನಮೋಹನನ ಊಹೆಗೆ ವ್ಯತಿರಿಕ್ತವಾಗಿ ಆಕೆ ತಮ್ಮನೊಂದಿಗೆ ಕುಳಿತುಕೊಂಡಳು. ತಮ್ಮನಿಗೋ ವಿಪರೀತ ಖುಷಿ. ತನ್ನ ಹುಟ್ಟುಹಬ್ಬಕ್ಕೆ ಬಾರದಿರುವುದಕ್ಕೆ ಆಕ್ಷೇಪಿಸಿ ಅಕ್ಕನೊಡನೆ ಸಿಟ್ಟುಮಾಡಿಕೊಂಡಂತೆ ತೋರಿದರೂ ಆಕೆಯ ಕೈ ಬಿಟ್ಟಿರಲಿಲ್ಲ ಗೋಪಾಲರಾಜು. ಮನಮೋಹನ ಯಥಾಪ್ರಕಾರ ಎಲ್ಲವನ್ನೂ ಅನುಮಾನದಿಂದ ಅಗೆದು ಬಗೆದು ನೋಡುತ್ತಿದ್ದ. `ಈ ಹುಡುಗಿಗೂ ಅವಳ ಮಲತಂದೆಗೂ ಸಂಬಂಧವಿದೆಯಂತೆ’ ಎಂದು ಕಾರವಾರ ರೈಲು ನಿಲ್ದಾಣದಲ್ಲಿ ನೂರುಲ್ಲಾ ಹೇಳಿದಮೇಲಂತೂ ಮನಮೋಹನನ ಅನುಮಾನ ವಿಪರೀತವಾಗಿತ್ತು. `ಈ ಹುಡುಗಿಯ ತಾಯಿ ವಿಷಯ ಗೊತ್ತಾಗಿ ಮಗಳನ್ನೇ ಹೊರಹಾಕಿದ್ದಳಂತೆ..ಅವಳಾಗೇ ಮನೆಬಿಟ್ಟು ಬಂದದ್ದಲ್ವಂತೆ. ಈ ಬಾರಿ ಮಾತ್ರ..ತಾಯಿ ಸತ್ತ ಮೇಲೆ ಅವಳಾಗೇ ಮನೆಬಿಟ್ಟು ಬಂದದ್ದಂತೆ’ ಎಂದ ನೂರುಲ್ಲಾನ ಮಾತುಗಳು ಮನಮೋಹನಿಂದ ಪರೀಕ್ಷೆಗೊಳಗಾಗುತ್ತಿದ್ದವು. ಮಲತಂದೆಯೊಂದಿಗೆ ಆಕೆ ಮಾತನಾಡುತ್ತಿದ್ದ ರೀತಿ, ಕುಳಿತ ಭಂಗಿ ಎಲ್ಲವನ್ನೂ ಪರೀಕ್ಷಿಸಿ ನೂರುಲ್ಲಾನ ಮಾತು ಸುಳ್ಳಾಗಿರಬಹುದು ಎಂದುಕೊಂಡ. ಸಂಬಂಧ ಇದ್ದಿದ್ದರೆ ಏಕೆ ಮನೆಬಿಟ್ಟುಹೋಗುತ್ತಿದ್ದಳು? ಇಷ್ಟು ಸರಳ ತರ್ಕ ನೂರುಲ್ಲಾನ ತಲೆಗೆ ಯಾಕೆ ಹೊಳೆಯುವುದಿಲ್ಲ ಎಂಬ ಯೋಚನೆ ಬರುವಾಗಲೇ ಇಂತಹ ವಿಷಯದಲ್ಲಿ ತರ್ಕ ಕೈಕೊಡುವುದೇ ಹೆಚ್ಚು ಎಂದೂ ಅನ್ನಿಸತೊಡಗಿತು. ಈ ಹುಡುಗಿ ನೂರುಲ್ಲಾನ ಮನೆಯಲ್ಲಿದ್ದರೆ ಕ್ಷೇಮವಿತ್ತೋ ಗೋಪಾಲರಾಜುವಿನ ಅಕ್ಕನಾಗಿರುವುದೇ ಕ್ಷೇಮವೋ ಎಂಬುದು ಮನಮೋಹನಿಗೆ ಜಿಜ್ಞಾಸೆಯಾಗಿ ಕಾಡುತ್ತಿರುವಾಗಲೇ ಕುಮಟಾ ಸ್ಟೇಷನ್ನು ಬಂದು, ಕನಿಷ್ಠ ಈ ಸಮಸ್ಯೆಯಿಂದ ಭೌತಿಕವಾದರೂ ಬೇರ್ಪಡಬಹುದಲ್ಲ ಎಂದು ಖುಷಿಯಾಯ್ತು. ಟ್ರೇನಿನಲ್ಲಿ ಸಿಕ್ಕಿಕೊಂಡ ಸಮಸ್ಯೆಗೆ ಟ್ರೇನಿನಲ್ಲೇ ಪರಿಹಾರವೂ ಸಿಕ್ಕಿತೆಂದುಕೊಂಡು ಮನಮೋಹನ ಇಳಿಯಲಣಿಯಾದ. ಗೋಪಾಲರಾಜುವಿಗೂ, ಅವನಪ್ಪನಿಗೂ ಮತ್ತು ಆ ಹುಡುಗಿಗೂ ವಿಧಾಯಹೇಳಿ ಟ್ರೇನಿಳಿದು ಬೈಕ್ ಸ್ಟಾಂಡಿನತ್ತ ನಡೆದ. ಸೆಲ್ಪ್ ಸ್ಟಾರ್ಟಾಗುವ ಬೈಕುಗಳು ಬಂದಮೇಲೆ ಚಪ್ಪಲಿಗಳ ಆಯುಷ್ಯ ಹೆಚ್ಚಿದೆಯೆಂದು ಅಂದುಕೊಳ್ಳುತ್ತಾ ಕಿಸೆಯಿಂದ ಕೀಲಿಕೈಯನ್ನು ತೆಗೆಯುತ್ತಿರುವಾಗ ಯಾರೋ ಹಿಂಬಾಲಿಸಿ ಬಂದಂತೆ ಅನ್ನಿಸಿ ತಿರುಗಿದ. ಆ ಹುಡುಗಿ ಎದುಸಿರು ಬಿಡುತ್ತಾ ನಿಂತಿದ್ದಳು.
`ಅವನು ಸರಿ ಇಲ್ಲ. ನಾನು ಅವನೊಡನೆ ಹೋಗುವುದಿಲ್ಲ’ ಎಂದಳು.
    ಮನಮೋಹನ ಟ್ರೇನಿನ ಕಡೆ ನೋಡಿದ, ಟ್ರೇನು ನಿಧಾನವಾಗಿ ವೇಗ ಹೆಚ್ಚಿಸಿಕೊಳ್ಳುತ್ತಾ ಹೊರಟಾಗಿತ್ತು. ಏನೋ ಹೊಳೆದಂತಾಗಿ ಹೆಂಡತಿಗೆ ಫೋನ್ ಮಾಡಿ ವಿಷಯ ತಿಳಿಸಿದ- ಆಕೆಯನ್ನು ಕರೆತಂದರೆ ತಾನು ಮನೆಬಿಟ್ಟುಹೋಗುವುದಾಗಿ ಹೆಂಡತಿ ಹೇಳಿದ್ದು ಕೇಳಿ ಮತ್ತಷ್ಟು ಗಾಬರಿಗೊಂಡ. ಏನೂ ತೋಚದೇ ದೂರದಲ್ಲಿ ಸಾಗುತ್ತಿದ್ದ ಟ್ರೇನನ್ನು ಮತ್ತೆ ನೋಡತೊಡಗಿದÀ. ಬಿಲದೊಳಗೆ ಇಲಿ ಸೇರುವಂತೆ ಟ್ರೇನು ದೂರದ ಗುಡ್ಡದಲ್ಲಿ ನುಸುಳಿ ಮರೆಯಾಯಿತು. ಕಂಬದ ಕೆಂಪು, ಹಸಿರು ದೀಪಗಳು, ರೇಲ್ವೆ ಸಿಬ್ಬಂದಿ ತೋರುವ ನಿಶಾನೆಯ ಬಾವುಟಗಳು ಈ ಬ್ರಹತ್ ಟ್ರೇನನ್ನು ನಿಜವಾಗಿಯೂ ನಿಯಂತ್ರಿಸುತ್ತವೋ ಅಥವಾ ಇವೆಲ್ಲ ಎಷ್ಟೋ ವರ್ಷಗಳಿಂದ ನಡೆದುಕೊಂಡು ಬಂದ ಅರ್ಥವಿಲ್ಲದ ಆಚರಣೆಗಳೋ ಎಂಬ ಅನುಮಾನ ಈ ಸಮಯದಲ್ಲಿ ಬಂದದ್ದಕ್ಕೆ ಮನಮೋಹನ ಸಂಕೋಚಪಡುತ್ತಿರುವಾಗಲೇ ಆ ಹುಡುಗಿ ಯಾವುದೋ ನಿರ್ಧಾರಕ್ಕೆ ಬಂದವಳಂತೆ-
`ಕಾರವಾರದ ಕಡೆ ಟ್ರೇನು ಎಷ್ಟೊತ್ತಿಗೆ’ ಎಂದು ಕೇಳಿದಳು.
                                          ***************