Monday 21 January 2013

Sunday 20 January 2013

ಖಾಸಗಿ ಚಿತ್ರಗಳು..

ನನ್ನ ಮಗಳು ಪ್ರಾರ್ಥನಾ,ಪತ್ನಿ ಸಂಧ್ಯಾ----->
























ಲಾಲ್ ಬಾಗಿನಲ್ಲಿ..

ಕೃಷಿ ದರ್ಶನ


ಕೃಷಿ ದರ್ಶನಕ್ಕೆ ಮುನ್ನ......



  ಭಾರತವು ಕೃಷಿ ಆಧಾರಿತ ಸಂಸ್ಕøತಿಯನ್ನು ಮೈಗೂಡಿಸಿಕೊಂಡಿದೆ.ನಮ್ಮ ಮಕ್ಕಳು ಈ ಸಂಸ್ಕøತಿಯ ಭಾಗವೇ ಆಗಿದ್ದರೂ ಜಾಗತೀಕರಣ ಮತ್ತು ಪಶ್ಚಿಮದ ದೇಶಗಳ ಸಂಸ್ಕøತಿಯ ಪ್ರಭಾವದಿಂದಾಗಿ ನಮ್ಮ ಕೃಷಿಸಂಸ್ಕøತಿಯಿಂದ ಅವರು ವಿಮುಖರಾಗುತ್ತಿರುವುದು ಇತ್ತೀಚಿನ ವರ್ಷಗಳಲ್ಲಿ ಹೆಚ್ಚೆಚ್ಚು ಸ್ಪಷ್ಟವಾಗತೊಡಗಿದೆ.ಶ್ರಮ ಸಂಸ್ಕøತಿಯ ಮಹತ್ವ ಇತ್ತೀಚೆಗೆ ಕಡಿಮೆಯಾಗುತ್ತಾ, ಕೃಷಿಗೂ ಆಧುನಿಕ ವಿದ್ಯಾಭ್ಯಾಸಕ್ಕೂ ಅಂತರ ಹೆಚ್ಚುತ್ತಿದೆ.ಇಂತಹ ಕಾಲಗಟ್ಟದಲ್ಲಿ ಮಕ್ಕಳಿಗಾಗಿ `ಚಿಣ್ಣರ ಕೃಷಿ ದರ್ಶನ’ ಎಂಬ ಕಾರ್ಯಕ್ರಮವನ್ನು 
                                                    ಹಮ್ಮಿಕೊಂಡಿರುವುದು  ಮಕ್ಕಳ ಬದುಕನ್ನು ಪೃಕೃತಿಯ ಹತ್ತಿರಕ್ಕೆ ತರುವಲ್ಲಿ ಪೂರಕವಾದ ಹೆಜ್ಜೆ.
  ಮಕ್ಕಳಿಗೆ ಕೃಷಿ ಚಟುವಟಿಕೆಗಳು,ಕೃಷಿಕರ ಬದುಕು ಮತ್ತು ಕೃಷಿಯಾಧಾರಿತ ಹಾಗೂ ಕೃಷಿಗೆ ಸಂಬಂಧಿಸಿದ ಉಪಕಸುಬುಗಳ ಕುರಿತು ಹತ್ತಿರದ ನೋಟವನ್ನು ನೀಡುವುದು ಈ ಕಾರ್ಯಕ್ರಮದ ಉದ್ದೇಶ.ಗಾಂಧಿ ತತ್ವಗಳನ್ನು ಕೃಷಿಯ ಮೂಲಕ ಸಾಧಿಸಿದ,ಕರ್ನಾಟಕದ ಪುಕವೋಕಾ ಎಂದೇ ಗುರುತಿಸಲ್ಪಟ್ಟ ರಾಮಚಂದ್ರರಾಯರ ಚೇರ್ಕಾಡಿಯ ತೋಟವನ್ನು ಎಷ್ಟು ಮಕ್ಕಳು ನೋಡಿದ್ದಾರೆ?ಬ್ರಹ್ಮಾವರದ ಕೃಷಿಕೇಂದ್ರದ ಕುರಿತು ಎಷ್ಟು ಮಕ್ಕಳಿಗೆ ಮಾಹಿತಿ ಇದೆ? ಮಗುವು ಜ್ಞಾನದ ಪುನಃರಚನೆಯಲ್ಲಿ ತೊಡಗಲು ಇಂತಹ ಭೇಟಿಗಳು ಅವಶ್ಯಕ ಎಂಬುದು 2005 ರ ರಾಷ್ಟ್ರೀಯ ಪಠ್ಯಕ್ರಮ ನೆಲೆಗಟ್ಟಿನ ಆಶಯ.

   ಜೊತೆಗೆ, ಕೃಷಿಯ ಯಾಂತ್ರೀಕರಣ,ಸಾವಯವ ವಿಧಾನದ ಕೃಷಿ ಚಟುವಟಿಗಳು ಮುಂತಾದ `ಪ್ರಗತಿಪರ’ ಮತ್ತು `ಪ್ರಕೃತಿಪರ’ ಕೃಷಿ ಚಳುವಳಿಗಳ ಕುರಿತು ವಿದ್ಯಾರ್ಥಿಗಳಲ್ಲಿ ಸ್ಪಷ್ಟ ಪರಿಕಲ್ಪನೆಗಳು ಉಂಟಾಗಲು ಮತ್ತು ಅವರು ಆ ಕುರಿತು ತಮ್ಮದೇ ನಿಲುವುಗಳನ್ನು ತಳೆಯಲು ಈ ಕಾರ್ಯಕ್ರಮ ಸಹಾಯಕವಾಗಬಹುದು.
*ಉದಯ ಗಾಂವಕಾರ


ಪ್ರಜಾವಾಣಿ ಲೇಖನ-ಪರೀಕ್ಷೆಗಳನ್ನು ಪಳಗಿಸೋಣ!


ಪರೀಕ್ಷೆಗಳನ್ನು ಪಳಗಿಸೋಣ!
   ಏಳನೆ ತರಗತಿಯಲ್ಲಿ ಓದುತ್ತಿರುವ ಮೃಣಾಲಿನಿಗೆ ಕನ್ನಡ ಭಾಷೆಯ ವ್ಯಾಕರಣ ಭಾಗ ಕಷ್ಟವಾಗುತ್ತದೆ. ಪರೀಕ್ಷೆಗಳಲ್ಲಿ ಸಂಧಿಗಳನ್ನು ಗುರುತಿಸುವುದು, ಸಮಾಸಗಳನ್ನು ಹೆಸರಿಸುವುದು ಬಂದಾಗ ಅಂಕಗಳು ಕೈ ತಪ್ಪಿಹೋಗುತ್ತವೆ.ಆದರೂ,ಆಕೆ ಕನ್ನಡದಲ್ಲಿ ಎ ಗ್ರೇಡನ್ನು ಪಡೆಯುತ್ತಾಳೆ. ಏಕೆಂದರೆ,ಆಕೆ ಕನ್ನಡದಲ್ಲಿ ಚೆನ್ನಾಗಿ ಮಾತನಾಡುತ್ತಾಳೆ.ಶಾಲೆಯಲ್ಲಿ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯುವಾಗ ಮೃಣಾಲಿನಿಯೇ ನಿರೂಪಕಿ.ಆಕೆ ಕವಯತ್ರಿ ಕೂಡಾ.ಶಾಲೆಯ ಗೋಡೆ ಪತ್ರಿಕೆಯಲ್ಲಿ ಪ್ರತಿ ತಿಂಗಳೂ ಆಕೆಯ ಕವನಗಳು ಪ್ರಕಟವಾಗುತ್ತವೆ.ಜೊತೆಗೆ,ಆಕೆಯ ಅಕ್ಷರಗಳು ಮುದ್ದಾಗಿವೆ!
   *******
   ಮೋಹನ ಎಂಟನೆಯ ತರಗತಿಯ ವಿದ್ಯಾರ್ಥಿ.ತನ್ನ ಶಾಲೆಯ ವಿದ್ಯಾರ್ಥಿ ಸರಕಾರದಲ್ಲಿ ಪರಿಸರ ಮತ್ತು ಸ್ವಚ್ಛತೆಯ ಮಂತ್ರಿ.ವಿಜ್ಞಾನ ಸಂಘದ ಸದಸ್ಯ ಕೂಡಾ.ಶಾಲೆಯ ಕೈತೋಟ ನಿರ್ವಹಣೆ ಮತ್ತು ಸ್ವಚ್ಛತೆ ಕಾಪಾಡುಲು ಮೋಹನನಿಗೆ ಯಾರೂ ಹೇಳಬೇಕಾಗಿಲ್ಲ.ಸ್ವತಃ ಪ್ರೇರಣೆಗೊಂಡು ಆತ ಈ ಕೆಲಸವನ್ನು ಮಾಡುತ್ತಾನೆ. ತನ್ನ ಗೆಳೆಯರನ್ನು ಒಂದುಗೂಡಿಸಿ ಶಾಲಾ ಉದ್ಯಾನವನದ ನಿರ್ವಹಣೆಯಲ್ಲಿ ತೊಡುಗುತ್ತಾನೆ.ಕಳೆ ಕೀಳುವುದು,ಗಿಡಗಳಿಗೆ ನೀರುಣಿಸುವುದು ಮುಂತಾದ ಕೆಲಸಗಳನ್ನು ಮಾಡಿದ ನಂತರವೇ ಆತ ಶಾಲೆಯಿಂದ ಮನೆಗೆ ತೆರಳುತ್ತಾನೆ.ಆತನಿಗೆ ಸ್ಥಳೀಯ ಹಕ್ಕಿಗಳು ಮತ್ತು ಗಿಡಗಳ ಕುರಿತು ಸಾಕಷ್ಟು ಜ್ಞಾನವಿದೆ.ಈ ಕಾರಣದಿಂದಾಗಿಯೇ ಮೋಹನ ವಿಜ್ಞಾನ ಮತ್ತು ಕಾರ್ಯಶಿಕ್ಷಣ ವಿಷಯಗಳಲ್ಲಿ ಉತ್ತಮ ಗ್ರೇಡ್‍ಗಳನ್ನು ಪಡೆಯುತ್ತಾನೆ.
   *******
  ಶಾಲೆಯ ಅಥ್ಲೆಟಿಕ್ ಚಾಂಪಿಯನ್ ಮೇಘನಾ ಏಳನೇ ತರಗತಿಯ ವಿದ್ಯಾರ್ಥಿನಿ. ಓಟ ಮತ್ತು ಜಿಗಿತದ ವಿವಿಧ ಸ್ಪರ್ಧೆಗಳಲ್ಲಿ ತನ್ನ ವಲಯ ಮತ್ತು ಜಿಲ್ಲೆಯ ತಂಡಗಳನ್ನು ಆಕೆ ಪ್ರತಿನಿಧಿಸಿದ್ದಾಳೆ.ಶಾಲೆಯ ಕಿರಿಯರಿಗೆ ಆಕೆ ತರಬೇತುದಾರಳು ಕೂಡಾ!ಆದುದರಿಂದ ತನ್ನ ರಿಪೋರ್ಟ್ ಕಾರ್ಡಿನಲ್ಲಿ ದೈಹಿಕ ಶಿಕ್ಷಣ ವಿಷಯಕ್ಕೆ ಉತ್ತಮ ಗ್ರೇಡ್‍ಗಳನ್ನು ಪಡೆಯುತ್ತಾಳೆ.ಆಕೆ ಉತ್ತಮ ಮಿಮಿಕ್ರಿ ಮತ್ತು ರಂಗೋಲಿ ಕಲಾವಿದೆಯೂ ಆಗಿರುವುದರಿಂದ ಕಲಾ ಶಿಕ್ಷಣದಲ್ಲೂ ಒಳ್ಳೆಯ ಗ್ರೇಡ್‍ಗಳು ದೊರೆಯುತ್ತವೆ.ಗಣಿತ ಮತ್ತು ಸಮಾಜ ವಿಜ್ಞಾನ ವಿಷಯಗಳಲ್ಲಿ ಆಕೆ ಹಿಂದಿರುವಳಾದರೂ ಒಟ್ಟಾರೆ ಗ್ರೇಡ್ ತೃಪ್ತಿಕರವೇ ಆಗಿರುವುದರಿಂದ ಆಕೆಯ ಪೋಷಕರು ಖುಷಿಯಾಗಿದ್ದಾರೆ.ಆಕೆಯ ಕ್ರೀಡಾ ಸಾಧನೆಗಳಿಗೆ ಬೆಂಬಲವಾಗಿ ನಿಂತಿದ್ದಾರೆ.
  *******
   ಮೌಲ್ಯಮಾಪನವು ಹೀಗಿದ್ದರೆ ಎಷ್ಟು ಚೆನ್ನಾಗಿತ್ತು ಎಂದು ಅನಿಸುವುದಿಲ್ಲವೇ?
  2005ರ ರಾಷ್ಟ್ರೀಯ ಪಠ್ಯಕ್ರಮ ನೆಲೆಗಟ್ಟು ಮತ್ತು 2009ರ ಮಕ್ಕಳ ಶಿಕ್ಷಣದ ಹಕ್ಕು ಕಾಯಿದೆ  ಇವೆರಡೂ ಮೌಲ್ಯಮಾಪನವು ಹೀಗೆಯೇ ಇರಬೇಕೆಂದು ಸೂಚಿಸುತ್ತವೆ!ಪರೀಕ್ಷೆ ಮತ್ತು ಮೌಲ್ಯಮಾಪನ ಇವೆರಡೂ ಒಂದೇ ಎಂಬ ಜನಪ್ರಿಯ ಗ್ರಹಿಕೆಯನ್ನು ಬೇಧಿಸದೇ ಇದ್ದಲ್ಲಿ ಎಲ್ಲ ಶೈಕ್ಷಣಿಕ ಸುಧಾರಣೆಗಳೂ ನಿಷ್ಫಲವಾಗಬಹುದು ಎಂದು 2005ರ ರಾಷ್ಟ್ರೀಯ ಪಠ್ಯಕ್ರಮ ನೆಲೆಗಟ್ಟು ಅಭಿಪ್ರಾಯ ಪಡುತ್ತದೆ.ಲಿಖಿತ ಪರೀಕ್ಷೆಗಳನ್ನೇ ಕೇಂದ್ರವಾಗಿರಿಸಿಕೊಂಡು ನಡೆಯುವ ಕಲಿಕೆ-ಬೋಧನೆ ಪ್ರಕ್ರಿಯೆಗಳು ನಡೆಯುವುದನ್ನು ಗಮನದಲ್ಲಿರಿಸಿಕೊಂಡೇ ಈ ಮಾತನ್ನು ಉಲ್ಲೇಖಿಸಲಾಗಿದೆ ಎಂಬುದರಲ್ಲಿ ಎರಡು ಮಾತಿಲ್ಲ.ಕಲಿಕೆಯೆಂಬುದನ್ನು ಕಂಠಪಾಠ ಎಂದೇ ತಿಳಿದುಕೊಂಡಿರುವುದಕ್ಕೂ ಮತ್ತು ಕಲಿಕೆಯು ಸಂಪೂರ್ಣವಾಗಿ ಪಠ್ಯಪುಸ್ತಕ ಕೇಂದ್ರಿತವಾಗಿರುವುದಕ್ಕೂ ಮೌಲ್ಯಮಾಪನ ಪ್ರಕ್ರಿಯೆಯನ್ನು ತಪ್ಪಾಗಿ ಗ್ರಹಿಸಿರುವುದೇ ಕಾರಣ.
  ಮೌಲ್ಯಮಾಪನವು ಶಿಕ್ಷಣದ ಅವಿಭಾಜ್ಯ ಅಂಗ.ಭಯದ ವಾತಾವರಣವನ್ನು ಸೃಷ್ಟಿಸಿ ಮಗುವನ್ನು ಕಲಿಯುವಂತೆ ಮಾಡುವುದು ಮೌಲ್ಯಮಾಪನದ ಉದ್ದೇಶವಲ್ಲ.ಮಕ್ಕಳಿಗೆ `ನಿಧಾನ ಕಲಿಯುವವರು’ `ಪ್ರತಿಭಾವಂತರು’ `ಸಮಸ್ಯಾತ್ಮಕ ಮಕ್ಕಳು’ ಮುಂತಾದ ಹಣೆಪಟ್ಟಿ ಕಟ್ಟುವುದೂ ಮೌಲ್ಯಮಾಪನದ ಕೆಲಸವಲ್ಲ.ಹೀಗೆ ಮಾಡುವುದರಿಂದ ಕಲಿಕೆಯ ಸಂಪೂರ್ಣ ಜವಾಬ್ಧಾರಿಯನ್ನು ಮಕ್ಕಳ ಮೇಲೆ ಹೊರಿಸಿದಂತಾಗುತ್ತದೆ ಮಾತ್ರವಲ್ಲ,ಈ ಕೆಲಸವನ್ನು ತಪ್ಪು ಫಲಿತಾಂಶದ ಆಧಾರದ ಮೇಲೆ ಮಾಡಿದಂತಾಗುತ್ತದೆ.ಶಿಕ್ಷಣವು ಮಗುವಿಗೆ ಬದುಕಲು ಕಲಿಸಬೇಕು.ನಾಗರಿಕ ಜವಾಬ್ಧಾರಿಗಳನ್ನು ಅರ್ಥಪೂರ್ಣವಾಗಿ ನಿಭಾಯಿಸುವ ಮತ್ತು ವ್ಯಕ್ತಿಯ ಉತ್ಪಾದನಾ ಸಾಮಥ್ರ್ಯವನ್ನು ಹೆಚ್ಚಿಸುವ ಶಿಕ್ಷಣ ಇಂದಿನ ಅವಶ್ಯಕತೆ.ನಮ್ಮ ರಾಷ್ಟ್ರೀಯ ಗುರಿಗಳ ಈಡೇರಿಕೆಗೆ ಶಿಕ್ಷಣವೇ ಸಾಧನ.ಇಂತಹ ಶಿಕ್ಷಣವನ್ನು ನೀಡುವಲ್ಲಿ ನಾವೆಷ್ಟು ಸಫಲರಾಗಿದ್ದೇವೆ ಎಂಬ ಕುರಿತು ವಿಶ್ವಾಸಾರ್ಹ ಹಿಮ್ಮಾಹಿತಿಯನ್ನು ನೀಡುವಲ್ಲಿ ಮೌಲ್ಯಮಾಪನವು ನೆರವಾಗುತ್ತದೆ.ಮಗುವಿಗೂ ಸಹ ತನ್ನ ಗುರಿ-ಸಾಧನೆಗಳನ್ನು ಮತ್ತು ತನ್ನ ಮಿತಿಗಳನ್ನು ಗುರುತಿಸಲು,ಮುಂದಿನ ಕಲಿಕೆಯನ್ನು ಯೋಜಿಸಲು ಸಹಕರಿಸುತ್ತದೆ.ಲಿಖಿತ ಉತ್ತರಗಳನ್ನು ಬಯಸುವ ಪರೀಕ್ಷೆಯು ಮೌಲ್ಯಮಾಪನದ ಒಂದು ತಂತ್ರವಷ್ಟೇ!.ಮಗುವಿನ ಉರುಹೊಡೆಯುವ ಸಾಮಥ್ರ್ಯವನ್ನು ಅಳೆಯುವ,ಸ್ಮರಣ ಶಕ್ತಿಯನ್ನು ಮೌಲ್ಯಾಂಕನಗೊಳಿಸುವ ಆದರೆ, ಮಗುವಿನ ಸೃಜನಶೀಲತೆ,ವಿಶ್ಲೇಷಣಾ ಮನೋಭಾವ,ಹೊಸಸಂದರ್ಭಕ್ಕೆ ಪ್ರತಿಕ್ರಿಯಿಸುವ ರೀತಿಯನ್ನು ಅಳೆಯುವಲ್ಲಿ ಅಸಡ್ಡೆ ತೋರುವ ಪರೀಕ್ಷೆಗಳಿಗಾಗಿ ನಮ್ಮ ಮಕ್ಕಳು ಸಿದ್ಧಗೊಳ್ಳುತ್ತಾ ಬಾಲ್ಯದ ಧಾರಾಳ ಸಂತಸ ಮತ್ತು ರಚನಾತ್ಮಕ ಚೈತನ್ಯವನ್ನು ಕಳೆದುಕೊಳ್ಳುತ್ತಿದ್ದಾರೆಂಬ ಆತಂಕ ಎದುರಾಗಿದೆ.
ಮೌಲ್ಯಮಾಪನ ಕ್ರಿಯೆಯಲ್ಲಿ ಲಿಖಿತ ಪರೀಕ್ಷೆಗಳು ಮಹತ್ವದ ಪಾತ್ರವನ್ನೇ ವಹಿಸುತ್ತವೆ.ಆದರೆ,ಅವುಗಳನ್ನು ಹೇಗೆ ವಿನ್ಯಾಸಗೊಳಿಸಲಾಗಿದೆ, ಶೈಕ್ಷಣಿಕ ಉದ್ಧೇಶಗಳನ್ನು ಅಳೆಯುವಲ್ಲ್ಲಿ ಮತ್ತು ಈಡೇರಿಸುವಲ್ಲಿ ಅವು ಸಕ್ಷಮವಾಗಿವೆಯೇ ಎಂಬ ಪ್ರಶ್ನೆಗಳು ಬಹು ಮುಖ್ಯ.ಪರೀಕ್ಷೆ ಎಷ್ಟು ಉತ್ತಮವಾಗಿದೆ ಎಂಬುದನ್ನು ಮಕ್ಕಳ ಉತ್ತರಗಳಲ್ಲಿ ಹುಡುಕುವ ಬದಲು ವಿದ್ಯಾರ್ಥಿಗಳು ಎದುರಿಸಿದ ಪ್ರಶ್ನೆಗಳ ಮೂಲಕವೇ ತೀರ್ಮಾನಿಸಬಹುದು!ವಿದ್ಯಾರ್ಥಿಗಳು ತಮಗೆ ತಾವೇ ಎಷ್ಟು ಪ್ರಶ್ನೆಗಳನ್ನು ಹಾಕಿಕೊಳ್ಳುವಂತೆ ಪರೀಕ್ಷೆಗಾಗಿ ಸಿದ್ಧಪಡಿಸಿದ ಪ್ರಶ್ನೆ ಪತ್ರಿಕೆಯು ಪ್ರೇರೇಪಿಸಿದೆ ಎಂಬುದು ಪರೀಕ್ಷೆಯ ಯಶಸ್ಸನ್ನು ನಿರ್ಧರಿಸುತ್ತದೆ.ಇಷ್ಟಾಗಿಯೂ,ಲಿಖಿತ ಉತ್ತರಗಳನ್ನು ಬಯಸುವ ಪರೀಕ್ಷೆಯೇ ಮೌಲ್ಯಮಾಪನದ ಏಕಮೇವ ತಂತ್ರವಲ್ಲ.ಲಿಖಿತ ಪರೀಕ್ಷೆಗಳ ಮೂಲಕವೇ ಮಗುವಿನ ಸರ್ವಾಂಗೀಣ ಬೆಳವಣಿಗೆಯನ್ನು ಅಳತೆಮಾಡಲು ಸಾಧ್ಯವಿಲ್ಲ.ಈ ಕಾರಣಕ್ಕಾಗಿ ಮೌಲ್ಯಮಾಪನ ಪ್ರಕ್ರಿಯೆಯಲ್ಲಿ ಹತ್ತಾರು ವಿಧದ ತಂತ್ರಗಳು ಮತ್ತು ಸಾಧನಗಳನ್ನು ಬಳಸಬೇಕಾಗಿದೆ.
ನಿರಂತರ ಮತ್ತು ವ್ಯಾಪಕ ಮೌಲ್ಯಮಾಪನ
   ಮಗುವಿನ ಕಲಿಕೆಯ ಕುರಿತಾದ ಸ್ಪಷ್ಟ ಚಿತ್ರಣವನ್ನು ಪಡೆಯಲು ಶಿಕ್ಷಕರು ನೀಡುವ `ತೀರ್ಪು’ಗಳೇ ಅಂತಿಮವಲ್ಲ.ಆದರೆ,ಶಿಕ್ಷಕರ ತೀರ್ಪುಗಳು ಬಹಳ ಮುಖ್ಯವಾಗಿರುವುದು ಸುಳ್ಳಲ್ಲ. ಇಂತಹ ತೀರ್ಪುಗಳು ಹೆಚ್ಚು ಸ್ಷಷ್ಟವೂ,ವಿಶ್ವಾಸಾರ್ಹವೂ ಮತ್ತು ಮಗುವಿನ ಸರ್ವಾಂಗೀಣ ಬೆಳವಣಿಗೆಯನ್ನು ಆಧರಿಸಿಯೂ ಇರಬೇಕಾದದ್ದು ಅವಶ್ಯಕ.ಶಿಕ್ಷಕರು ಬಳಸುವ ಮೌಲ್ಯಮಾಪನ ತಂತ್ರಗಳು ಮಗುವಿನ ಬಲ ಮತ್ತು ದೌರ್ಬಲ್ಯಗಳಿಗೆ ಸಂವೇದನಾ ಶೀಲವಾಗಿರಬೇಕು.ಈ ಮೂಲಕ ಮೌಲ್ಯಮಾಪನವು ಮಾನವೀಯಗೊಳ್ಳಬೇಕಾಗಿದೆ. ಜೊತೆಗೆ,ಮೌಲ್ಯಮಾಪನವನ್ನು ಒಂದು ಅರ್ಥಪೂರ್ಣ ತರಗತಿ ಸಂವಹನವಾಗಿಯೂ ಗ್ರಹಿಸುವ ಅವಶ್ಯಕತೆಯಿದೆ. 
  ಪಾತ್ರೆಯಲ್ಲಿನ ಒಂದು ಅಗಳು ಬೆಂದಿದೆಯೆಂದರೆ ಇಡೀ ಪಾತ್ರೆಯ ಅನ್ನ ಬೆಂದಿದೆಯೆಂಬ ತೀರ್ಮಾನಕ್ಕೆ ಬರುವುದು ಮಕ್ಕಳ ಕಲಿಕೆಯ ಮೌಲ್ಯಮಾಪನಕ್ಕೆ ಸಂಬಂಧಿಸಿದಂತೆ ತೀರಾ ತಪ್ಪಾದ ಮಾರ್ಗ.ಪ್ರತಿ ಮಗುವೂ ಭಿನ್ನ ಸಾಮಾಜಿಕ ಮತ್ತು ಕೌಟುಂಬಿಕ ಹಿನ್ನೆಲೆಯನ್ನು ಹೊಂದಿರುತ್ತದೆ.  ಮಗುವಿಗೆ ದೊರೆಯುವ ಅನುಭವಗಳು ವಿಭಿನ್ನವಾಗಿರುತ್ತವೆ ಮತ್ತು ಅವುಗಳನ್ನು ಗ್ರಹಿಸುವ ರೀತಿ ಪ್ರತಿ ಮಗುವಿಗೂ ವಿಶಿಷ್ಟವಾಗಿರುತ್ತದೆ. ಆದುದರಿಂದಲೇ, ಮೌಲ್ಯಮಾಪನವು ಮಗುವಿನ ಅನನ್ಯತೆಯನ್ನು ಗಣನೆಗೆ ತೆಗೆದುಕೊಳ್ಳುವುದು ಅವಶ್ಯಕ. ಈ ಎಲ್ಲ ಕಾರಣಗಳಿಂದಾಗಿ,ನಿರಂತರ ಮತ್ತು ವ್ಯಾಪಕ ಮೌಲ್ಯಮಾಪನ ವಿಧಾನಗಳನ್ನು ಅಳವಡಿಸಲು ಶಿಕ್ಷಣ ಇಲಾಖೆ ಮುಂದಾಗಿದೆ.  
    ಭಾಷೆ,ಗಣಿತ,ವಿಜ್ಞಾನ,ಸಮಾಜ ವಿಜ್ಞಾನಗಳ ಜೊತೆಗೆ ದೈಹಿಕ ಶಿಕ್ಷಣ,ಕಲಾಶಿಕ್ಷಣ,ಕಾರ್ಯಶಿಕ್ಷಣ,ಮಾಹಿತಿ ಮತ್ತು ಸಂವಹನ ತಂತ್ರಜ್ಞಾನಗಳನ್ನು ಪಠ್ಯ ವಿಷಯಗಳನ್ನಾಗಿ ಸೇರಿಸಲಾಗಿದೆ.ಈ ಎಲ್ಲ ಪಠ್ಯ ವಿಷಯಗಳನ್ನೊಳಗೊಂಡೇ ಮಗುವಿನ ಶೈಕ್ಷಣಿಕ ಸಾಧನೆಗಳನ್ನು ಅಳೆಯುವ ಪದ್ಧತಿ ಈ ವರ್ಷದಿಂದ ಪ್ರಾರಂಭವಾಗಿದೆ.ಪ್ರತಿಯೊಂದು ಪಠ್ಯ ವಿಷಯದ ಸಾಧನೆಯನ್ನೂಸಂಕಲನಾತ್ಮಕ ಮತ್ತು ರೂಪಣಾತ್ಮಕ ಮೌಲ್ಯಮಾಪನಗಳ ಮೂಲಕ ಅಳೆಯಲಾಗುತ್ತದೆ. ಸೆಮಿಸ್ಟರ್‍ನ ಅಂತ್ಯದಲ್ಲಿ ನಡೆಯುವ ಲಿಖಿತ ಪರೀಕ್ಷೆಗಳೇ ಸಂಕಲನಾತ್ಮಕ ಮೌಲ್ಯಮಾಪನದ ಪ್ರಮುಖ ಸಾಧನ. ಪಠ್ಯವಿಷಯವೊಂದರ ಕಲಿಕೆಗೆ ಸಂಬಂಧಿಸಿದ ಸಾಧನೆಗಳನ್ನು  ಮಗುವಿನ ಸಹಜ ವರ್ತನೆಗಳಲ್ಲಿ ವಿವಿಧ ಸಾಧನ ಮತ್ತು ತಂತ್ರಗಳ ಸಹಾಯದಿಂದ ಹುಡುಕುವುದೇ  ರೂಪಣಾತ್ಮಕ ಮೌಲ್ಯಮಾಪನ.ರೂಪಣಾತ್ಮಕ ಮೌಲ್ಯಮಾಪನವು ಕಾರ್ಯರೂಪದಲ್ಲಿ ತೀರಾ ಹೊಸದಾದ ಪರಿಕಲ್ಪನೆ.ಇದಕ್ಕೆ ಅಗತ್ಯವಾದ ಸಾಧನಗಳು,ತಂತ್ರಗಳು ಮತ್ತು ಅಳತೆಗೋಲುಗಳನ್ನು ಪ್ರತಿ ಮಗುವಿನ ವಿಶಿಷ್ಠತೆಗಳನ್ನು ಲಕ್ಷಿಸಿಕೊಂಡೇ ರೂಪಿಸಬೇಕಾದ ಅನಿವಾರ್ಯತೆ ಇರುವುದರಿಂದ ಶಿಕ್ಷಕಿಯರಿಗೆ ಹೆಚ್ಚಿನ ವೃತ್ತಿಪರ ಬೆಂಬಲ ಅಗತ್ಯವಾಗಿದೆ. ಭಾಷೆಯ ಸೃಜನಶೀಲ ಬಳಕೆಯನ್ನಾಗಲೀ, ಬದುಕಿನ ನಿರ್ಧಾರ ತೆಗೆದುಕೊಳ್ಳುವಾಗ ವಿಜ್ಞಾನದ ವಿಧಾನಗಳನ್ನು ಅನುಸರಿಸುವುದನ್ನಾಗಲೀ, ಅಭಿವ್ಯಕ್ತಿಯಲ್ಲಿ ಗಣಿತವನ್ನು ಪರಿಣಾಮಕಾರಿಯಾಗು ಬಳಸುವುದನ್ನಾಗಲೀ ಅಳೆಯಬೇಕಾದರೆ ಮೌಲ್ಯಮಾಪನವನ್ನು ತರಗತಿ ಸಂವಹನದ ಭಾಗವಾಗಿ ಗ್ರಹಿಸುತ್ತಾ ಶಿಕ್ಷಕಿಯು ಉದ್ಧೇಶಪೂರ್ವಕ ಸಂದರ್ಭಗಳನ್ನು ಕಲಿಕೆಯ ಪರಿಸರದÀಲ್ಲೇ ಸೃಷ್ಟಿಸಿಕೊಳ್ಳಬೇಕಾಗುತ್ತದೆ.ಶೈಕ್ಷಣಿಕ ಸಾಧನೆಗಳ ಜೊತೆಗೆ,ಮಗುವಿನ ಸಾಮಾಜಿಕ,ಭಾವನಾತ್ಮಕ,ವೈಜ್ಞಾನಿಕ ಕೌಶಲಗಳು ಮತ್ತು ಮೌಲ್ಯ ರೂಪಣೆ ಹಾಗೂ ಮನೋಧೋರಣೆಗಳಲ್ಲಿರುವ ಧನಾತ್ಮಕ ಅಂಶಗಳನ್ನು ಗುರುತಿಸುವ ಮೂಲಕ ಸಮಗ್ರ ವ್ಯಕ್ತಿತ್ವದ ಮೌಲ್ಯಮಾಪನ ನಡೆಯಬೇಕು.
   ನಿರಂತರ ಮತ್ತು ವ್ಯಾಪಕ ಮೌಲ್ಯಮಾಪನವು ಹತ್ತಾರು ಶೈಕ್ಷಣಿಕ ಸುಧಾರಣೆಗಳ ಜೊತೆಗೆ ಹನ್ನೊಂದಾಗದೇ ಹೊಸದೊಂದು ಮನೋಧರ್ಮವನ್ನು ಶಿಕ್ಷಣಕ್ಷೇತ್ರದಲ್ಲಿ ಕೆಲಸಮಾಡುವವರಿಗೆ ಉಂಟುಮಾಡಲೆಂಬುದು ಎಲ್ಲರ ಆಶಯ.ಕಲಿಕೆಯೆಂಬುದು ಮಾಹಿತಿಗಳ ಹೊರೆ ಹೊರುವ ಕೆಲಸ ಎಂಬಂತಾಗದೆ ಜ್ಞಾನದ ರಚನೆಯ ಅರ್ಥಪೂರ್ಣ ಅವಕಾಶವಾಗಲು ಇದು ಅನಿವಾರ್ಯ ಕೂಡಾ.ನಮ್ಮ ಪ್ರಜಾಪ್ರಭುತ್ವದ ಗುರಿ-ಉದ್ಧೇಶಗಳನ್ನು ಈಡೇರಿಸಲು ಲಾಯಕ್ಕಾದ ಉತ್ಪನ್ನದಾಯಕ ಮಾನವ ಸಂಪನ್ಮೂಲದ ಸೃಷ್ಟಿಗೆ ಶಿಕ್ಷಣವಲ್ಲದೆ ಬೇರೆ ಯಾವ ಸಾಧನವಿದೆ?

Saturday 19 January 2013

ದೇವರ ಫೋಟೋ ಮತ್ತು ನಿಂಬೆಹಣ್ಣು *ಉದಯ ಗಾಂವಕಾರ

Udayavani | Dec 30, 2012

    ದೇವರ ಫೋಟೋ ಮತ್ತು ನಿಂಬೆಹಣ್ಣು   
                                                                                                                                    
    ಅಣ್ಣಪ್ಪ ಮಾಸ್ತರರಿಗೆ ಅಂತಹ¨ಅಂತಹದ್ದುದೊಂದು ದುರಭ್ಯಾಸವಿದೆಯೆಂದರೆ ನಂಬುವುದೇ ಕಷ್ಟ. ಬೀಡಿ ಸೇದಿದವರಲ್ಲ, ಹೆಂಡ ಕುಡಿದವರಲ್ಲ. ಅಷ್ಟೇಕೆ, ಅವರ ವಯಸ್ಸಿನ ಹೆಚ್ಚಿನವರಿಗೆ ಇರುವ ಕವಳದ ಚಟವೂ ಅಣ್ಣಪ್ಪ ಮಾಸ್ತರರಿಗೆ ಇರಲಿಲ್ಲ. ಒಂದು ದಿನವೂ ಶಾಲೆಗೆ ತಡವಾಗಿ ಬಂದವರಲ್ಲ. ಬಿಳಿ ಜುಬ್ಬ, ಪೈಜಾಮಿನ ಅಣ್ಣಪ್ಪ ಮಾಸ್ತರರು ತಮ್ಮ ಹರ್ಕ್ಯುಲಸ್‌ ಸೈಕಲ್ಲನ್ನೇರಿ ಶಾಲೆಗೆ ಬಂದರೆಂದರೆ ಸಮಯ ಎಂಟೂವರೆಯಾಯಿತೆಂದೇ ಅರ್ಥ. ಊರಿನ ಜನ ಗಡಿಯಾರಗಳ ವಿಶ್ವಾಸಾರ್ಹತೆಯ ಕುರಿತು ಸ್ವಲ್ಪವಾದರೂ ಸಂಶಯವನ್ನಿಟ್ಟು ಕೊಂಡಿರಬಹುದು. ಆದರೆ, ಊರಿನ ಮಸೀದಿಯಲ್ಲಿ ನಮಾಜು ಮಾಡುವಾಗ ಧ್ವನಿವರ್ಧಕದಲ್ಲಿ 'ಅಲ್ಲಾ..'ಎಂಬ ಪ್ರಾರ್ಥನೆ ಕೇಳಿಸುವ ಸಮಯ ಮತ್ತು ಅಣ್ಣಪ್ಪ ಮಾಸ್ತರರು ಶಾಲೆಗೆ ಬರುವ ಸಮಯಗಳ ನಿಖರತೆಯ ಕುರಿತು ಯಾರಿಗೂ ಅನುಮಾನಗಳಿರಲಿಲ್ಲ. ವಯಸ್ಸು ಐವತ್ತಾರಾದರೂ ಅಣ್ಣಪ್ಪ ಮಾಸ್ತರರ ತಲೆ ತುಂಬ ಕೂದಲು. ಆ ಕೂದಲುಗಳಲ್ಲಿ ವಯಸ್ಸಿಗನುಗುಣವಾಗಿ ಕೆಲವಾದರೂ ಬಿಳಿಯಾಗಬೇಕಿತ್ತಲ್ಲ ಎಂದು ಯಾರಿಗಾದರೂ ಅನಿಸಿದರೆ ಅದು ಅಣ್ಣಪ್ಪ ಮಾಸ್ತರರ ತಪ್ಪಲ್ಲ. ಬೇರೆಯವರ ತಲೆಯಾಗಿದ್ದರೆ ಇದೆಲ್ಲ ಗೋದ್ರೆಜ್‌ ಹೇರ್‌ ಡೈನ ಮಹಿಮೆ ಎಂದು ಊರಿನ ಹರೆಯದ ಹುಡುಗರಾದರೂ ಅಂದುಕೊಳ್ಳುತ್ತಿದ್ದರು.ಆ ಊರಿನಲ್ಲಿ ಹುಟ್ಟಿ ಬೆಳೆದು ದೊಡ್ಡವರಾದವರ ಮಟ್ಟಿಗೆ ಎಂದೆಂದೂ ಬದಲಾಗದ ಕೆಲವು ಸಂಗತಿಗಳಲ್ಲಿ ಅಣ್ಣಪ್ಪ ಮಾಸ್ತರರೂ ಒಬ್ಬರು. ಎಣ್ಣೆ ಹಾಕಿ ಬಾಚಿದ ಅವರ ಕೂದಲುಗಳ ಮೇಲೆ ಹಾದು ಹೋಗುವ ಬಾಚಣಿಗೆಯ ಹಲ್ಲುಗಳು ಉಂಟುಮಾಡುವ‌ ಸಮನಾಂತರ ಗೆರೆಗಳ ವಿನ್ಯಾಸ ಕೂಡಾ ಕಳೆದ ಎಷ್ಟೋ ವರ್ಷಗಳಿಂದ ಬದಲಾಗದೆ ಸ್ಥಿರವಾಗಿರುವ ಇನಸ್ಟಾಲೇಷನ್‌ ಕಲೆಯ ಹಾಗೆ ಅವರಿಗೆ ಕಾಣಿಸುತ್ತಿತ್ತು.
ಒಂದೇ ಮಾತಿನಲ್ಲಿ ಹೇಳಬೇಕೆಂದರೆ, ಕಾಲದ ಪರೀಕ್ಷೆಗಳನ್ನು ಸಂಭಾಳಿಸಿ ಕೊಂಡು ಬಂದ ಅವರ ರೂಪದಲ್ಲಿ ಆಗುವ ಸೂಕ್ಷ್ಮ ಬದಲಾವಣೆಗಳನ್ನು ಗುರುತಿಸಲು ಆ ಊರಿನ ಜನ ಅಶಕ್ತರಾಗಿದ್ದರು. ಇದಕ್ಕೆ ಕಳೆದ ಮೂವತ್ತೆ„ದು ವರ್ಷಗಳಿಂದ ಅಣ್ಣಪ್ಪ ಮಾಸ್ತರು ರೂಢಿಸಿಕೊಂಡು ಬಂದ ಶಿಸ್ತೇ ಕಾರಣ. ಈ ಬಗೆಯ ಗುರುಪರಂಪರೆಗೆ ಸೇರಿದ ಅಣ್ಣಪ್ಪ ಮಾಸ್ತರರಿಗೆ ಇದ್ದ ದುರಭ್ಯಾಸವಾದರೂ ಯಾವುದು?ಇದನ್ನು ತಿಳಿಸುವ ಮೊದಲು ಅವರ ಚಿಕ್ಕ ಪರಿಚಯವನ್ನು ನಿಮಗೆ ನೀಡುವುದು ಅವಶ್ಯಕ.
ಅಣ್ಣಪ್ಪ ಮಾಸ್ತರರಿಗೆ ಎಂಟನೇ ತರಗತಿಯಲ್ಲಿರುವಾಗಲೇ ಶಿಕ್ಷಕ ನೌಕರಿ ದೊರಕಿತಂತೆ. ಆನಂತರ ಮೆಟ್ರಿಕ್‌ ಪರೀಕ್ಷೆ ಪಾಸುಮಾಡಿಕೊಂಡರೂ ಶಿಕ್ಷಕ ವೃತ್ತಿಗೆ ಅವಶ್ಯಕವಾದ ಟಿ. ಸಿ. ಎಚ್‌ ಕೋರ್ಸನ್ನು ಮಾಡಿಕೊಳ್ಳಲು ಅವರಿಗೆ ಸಾಧ್ಯವಾಗಲಿಲ್ಲ. ಇದರಿಂದಾಗಿ ಅವರು ಅನ್‌ಟ್ರೇನ್‌ಡ್‌ ಶಿಕ್ಷಕ ಎಂಬ ಹಣೆಪಟ್ಟಿಯೊಂದಿಗೆ ಕಳೆದ ಮೂವತ್ತೆ„ದು ವರ್ಷಗಳಿಂದಲೂ ಯಾವುದೇ ಭಡ್ತಿಯಿಲ್ಲದೆ ಒಂದೇ ಶಾಲೆಯಲ್ಲಿ¨ªಾರೆ. ಅಣ್ಣಪ್ಪ ಮಾಸ್ತರರ ವಿದ್ಯಾರ್ಥಿಗಳಲ್ಲಿ ಎಷ್ಟೋ ಮಂದಿ ಬೇರೆ ಬೇರೆ ಊರುಗಳಲ್ಲಿ ಒಳ್ಳೆಯ ಉದ್ಯೋಗದಲ್ಲಿದ್ದಾರೆ. ಇನ್ನು ಕೆಲವರು ಊರಲ್ಲೇ ಉಳಿದು ಮನೆತನದ ವೃತ್ತಿಯನ್ನು ಮುಂದುವರಿಸಿದ್ದಾರೆ. ಅಂಥವರ ಮಕ್ಕಳು,ಮೊಮ್ಮಕ್ಕಳು ಕೂಡಾ ಅಣ್ಣಪ್ಪ ಮಾಸ್ತರರ ವಿದ್ಯಾರ್ಥಿಗಳಾದದ್ದು ಇದೆ.ಅಣ್ಣಪ್ಪ ಮಾಸ್ತರರಿಗೆ ಎಲ್ಲ ಮಕ್ಕಳೂ ಒಂದೇ-ಮಕ್ಕಳೆಂದರೆ ಮಕ್ಕಳು ಮಾತ್ರ. ಅವರಿಗೆ ದೊಡ್ಡವರ ಮನೆಯ ಮಕ್ಕಳು, ಬಡವರ ಮಕ್ಕಳು, ಮೇಲ್ಜಾತಿಯ, ಕೆಳಜಾತಿಯ ಮಕ್ಕಳು ಎಂಬ ಭೇದವಿಲ್ಲ. ಅಣ್ಣಪ್ಪ ಮಾಸ್ತರರು ಎಂದರೆ ಒಂದು ಕಾಲದ ಶಿಸ್ತಿನ ಶಿಕ್ಷಕರ ಜೀವಂತ ಪಳೆಯುಳಿಕೆ. ಇಂತಿರ್ಪ ಅವರು ದುರಭ್ಯಾಸವೊಂದನ್ನು ಪೋಷಿಸಿಕೊಂಡು ಬರುತ್ತಿದ್ದಾರೆಂದರೆ ನಂಬುವುದೇ ಕಷ್ಟ.
ಮಾಸ್ತರರು ತಮ್ಮ ದುರಭ್ಯಾಸಕ್ಕೆ ಸಿಲುಕಿಕೊಂಡದ್ದೂ ಒಂದು ಕತೆಯೇ ! ಐದಾರು ವರ್ಷಗಳ ಹಿಂದೆ ಅವರೊಮ್ಮೆ ತರಕಾರಿ ತರಲು ಅಂಗಡಿಗೆ ಹೋಗಿದ್ದರು. ಬರುವ ಸಂಬಳದಲ್ಲಿ ಬಹಳ ನಾಜೂಕಿನಿಂದ ಬದುಕು ಸಾಗಿಸಬೇಕು. ನಿತ್ಯದ ಬದುಕಿನಲ್ಲಿ ಕೊರತೆ ಕಾಣದ ಹಾಗೆ, ಕಿಸೆಗೂ ಹೊರೆಯಾಗದ ಹಾಗೆ ಸಾಮಗ್ರಿಗಳನ್ನು ಅಂಗಡಿಯಿಂದ ಆಯ್ದುಕೊಳ್ಳುವುದೂ ಒಂದು ಕಲೆ. ಕಾಲು ಕಿ. ಗ್ರಾಂ. ಈರುಳ್ಳಿ , ಐವತ್ತು ಗ್ರಾಂ. ಹಸಿಮೆಣಸು,ಅರ್ಧ ಕಿ. ಗ್ರಾಂ. ಬಟಾಟೆ ಕೊಂಡುಕೊಂಡರು.ಟೊಮ್ಯಾಟೋ ಬದಲು ಹುಣಿಸೇಹಣ್ಣು ಬಳಸುವುದೇ ಒಳ್ಳೆಯದು ಎಂದುಕೊಂಡರು. ಶನಿವಾರದ ಸಸ್ಯಾಹಾರದ ವೃತವಿಲ್ಲದೇ ಹೋಗಿದ್ದರೆ ಮೀನುಪಳದಿಯೇ ಒಳ್ಳೆಯದಾಗುತಿತ್ತು ಎಂದೆನಿಸಿತವರಿಗೆ-ಖರ್ಚೂ ಕಡಿಮೆ, ರುಚಿಯೂ ಜಾಸ್ತಿ. ವೃತದ ಅಡುಗೆಗೆ ತರಕಾರಿ ಕೊಳ್ಳುವಾಗ
ಮೀನಿನ ನೆನಪಾದುದಕ್ಕೆ ಒಮ್ಮೆ ಕಸಿವಿಸಿಯಾದರೂ ಆನಂತರ, ನಮ್ಮ ನಮ್ಮ ಆಹಾರದ ಪದ್ಧತಿಗಳು ನಮ್ಮ ದೇವರಿಗೂ ಸಹ್ಯವಾಗಬೇಕು ಎಂಬ ಅಭಿಪ್ರಾಯಕ್ಕೆ ಬಂದು ಸಮಾಧಾನ ಪಟ್ಟುಕೊಂಡರು. ತರಕಾರಿಗಳನ್ನು ಚೀಲಕ್ಕೆ ತುಂಬಿಕೊಳ್ಳುವಾಗ ಕೆಲವು ಈರುಳ್ಳಿಗಳು ಉರುಳಿ ಬಿದ್ದವು. ಅವುಗಳನ್ನು ಆರಿಸಿಕೊಂಡು, ಅಂಗಡಿಯಾತನಿಗೆ ಹಣ ನೀಡಿ ಬಂದರು. ಮನೆಗೆ ಬಂದು ಚೀಲ ತೆರೆದಾಗ ಅಣ್ಣಪ್ಪ ಮಾಸ್ತರರು ಕೊಂಡ ತರಕಾರಿಗಳ ಜೊತೆ ಎರಡು ನಿಂಬೆಹಣ್ಣುಗಳೂ ಇದ್ದವು. ನಿಂಬೆ ಹಣ್ಣುಗಳನ್ನು ಅಂಗಡಿಯಾತನಿಗೆ ವಾಪಸು ಕೊಡುವುದೇ ಸರಿ ಎಂದು ಭಾವಿಸಿ ವಾಪಸು ಅಂಗಡಿಗೆ ಹೋಗಲೆದ್ದರು. ಅಷ್ಟರಲ್ಲಿ, ಎರಡು ನಿಂಬೆಹಣ್ಣುಗಳನ್ನು ಹಿಡಿದುಕೊಂಡು ವಾಪಸು ಹೋಗುವುದಕ್ಕಿಂತ ಅವುಗಳ ಹಣ ಎಷ್ಟೆಂದು ಕೊಟ್ಟುಬಿಡುವುದೇ ಒಳ್ಳೆಯದು ಎಂಬ ಆಲೋಚನೆ ಅವರ ಮನಸ್ಸಿನಲ್ಲಿ ಹಾದುಹೋದದ್ದರಿಂದ ಉಂಟಾದ ಗೊಂದಲ ಅವರನ್ನು ನಿಷ್ಕ್ರಿàಯಗೊಳಿಸಿತು. ಸ್ವಲ್ಪ ಸುಸ್ತಾದದ್ದೂ ಕಾರಣವಾಗಿರಬಹುದು; ಅಣ್ಣಪ್ಪ ಮಾಸ್ತರರು ಸಮಸ್ಯೆಯನ್ನು ನಾಳೆಯವರೆಗೆ ಮುಂದೂಡಿದರು. ಕಾಲ ನಮ್ಮ ತೀರ್ಮಾನಗಳ ಮೇಲೆ ಎಷ್ಟೊಂದು ಪ್ರಭಾವ ಬೀರುತ್ತದೆ ನೋಡಿ, ಮಾರನೆ ದಿನ ಅಣ್ಣಪ್ಪ ಮಾಸ್ತರರಿಗೆ ಎರಡು ನಿಂಬೆಹಣ್ಣುಗಳನ್ನು ವಾಪಸು ನೀಡಿ ಅಥವಾ ಅವುಗಳ ಬೆಲೆಯನ್ನು ತೆತ್ತು ಪ್ರದರ್ಶನದ ಪ್ರಾಮಾಣಿಕತೆ ಮೆರೆಯುವುದು ಅಷ್ಟು ಸರಿಕಾಣಲಿಲ್ಲ. ಆ ಅಂಗಡಿಯಲ್ಲಿ ಎಷ್ಟೋ ವ್ಯವಹಾರ ಮಾಡಿರುವಾಗ ಎರಡು ನಿಂಬೆಹಣ್ಣುಗಳು ದೊಡ್ಡವೇನಲ್ಲ; ಇದನ್ನು ಇಲ್ಲಿಯೇ ಮರೆತುಬಿಡುವುದು ಒಳ್ಳೆಯದು ಅಂದುಕೊಂಡರು.
ಆದರೆ, ಅಣ್ಣಪ್ಪ ಮಾಸ್ತರರು ಅದನ್ನು ಮರೆಯಲಿಲ್ಲ. ವಾರದ ನಂತರ ಮತ್ತದೇ ಅಂಗಡಿಗೆ ಹೋದಾಗ ನಿಂಬೆಹಣ್ಣಿನ ಪ್ರಸಂಗ ನೆನಪಾಯಿತವರಿಗೆ. ಅದೆಂತಹ ಭೂತ ಅಣ್ಣಪ್ಪ ಮಾಸ್ತರರ ಜೀವದಲ್ಲಿ ಸೇರಿಕೊಂಡಿತೋ, ಈ ಬಾರಿಯೂ ತರಕಾರಿಗಳು ಉರುಳಿಬಿದ್ದವು.ಅವುಗಳನ್ನು ಆರಿಸಿ ಚೀಲಕ್ಕೆ ತುಂಬಿಕೊಳ್ಳುವ ಸಂದರ್ಭದಲ್ಲಿ ಪುನಃ ಎರಡು ನಿಂಬೆಹಣ್ಣುಗಳು ಚೀಲ ಸೇರಿದವು. ಈ ಬಾರಿಯೂ ತರಕಾರಿಗಳ ಜೊತೆ ನಿಂಬೆಹಣ್ಣುಗಳನ್ನು ತಂದಿರುವುದು ಅವರ ಹೆಂಡತಿಗೆ ಆಶ್ಚರ್ಯವನ್ನುಂಟುಮಾಡಿರಬೇಕು.
'ಈ ಮಳೆಗಾಲದಲ್ಲಿ ನಿಂಬೆ ಹಣ್ಣು ಯಾಕೆ ತಂದ್ರಿ?'ಎಂದು ಕೇಳಿದರು.
'ಶೀತ-ಕೆಮ್ಮು ಬರುವುದೆಲ್ಲ ಮಳೆಗಾಲದಲ್ಲೇ'ಎಂಬ ತತ್‌ಕ್ಷಣದ ಬುದ್ಧಿವಂತ ಉತ್ತರ ಹೊಳೆದರೂ ಅಣ್ಣಪ್ಪ ಮಾಸ್ತರರು ಏನೂ ಹೇಳದೆ ಸುಮ್ಮನುಳಿದರು.ಆ ಮಳೆಗಾಲದಲ್ಲಿ ಅಣ್ಣಪ್ಪ ಮಾಸ್ತರರಿಗೆ ಶೀತ-ಕೆಮ್ಮು ಬಾಧಿಸಿತೋ ಇಲ್ಲವೋ ಅದರೆ, ಆಗಾಗ ತರಕಾರಿ ಅಂಗಡಿಯಿಂದ ಒಂದೆರಡು ನಿಂಬೆಹಣ್ಣು, ಈರುಳ್ಳಿ, ಹಸಿಮೆಣಸು, ಬಟಾಟೆ ಮತ್ತಿತ್ಯಾದಿ ಚಿಕ್ಕಪುಟ್ಟ ವಸ್ತುಗಳನ್ನು ಗುಟ್ಟಾಗಿ ಎತ್ತಿಕೊಳ್ಳುವ ಗೀಳಂತೂ ಅಂಟಿಕೊಂಡಿತು.
ಈ ದುರಭ್ಯಾಸದಿಂದ ತಪ್ಪಿಸಿಕೊಳ್ಳಲು ಅಣ್ಣಪ್ಪ ಮಾಸ್ತರರು ಮಾಡಿದ ಪ್ರಯತ್ನಗಳೆಲ್ಲ ವಿಫ‌ಲವಾದವು.ಕೊನೆಯ ಕ್ಷಣದಲ್ಲಿ ಮನಸ್ಸನ್ನು ಹತೋಟಿ ಯಲ್ಲಿಟ್ಟುಕೊಳ್ಳಲು ಸಾಧ್ಯವಾಗದೆ ಪ್ರತಿಬಾರಿ ಸೋಲುತ್ತಿದ್ದರು. ತಮ್ಮನ್ನು ತಾವೇ ವಿಫ‌ಲಗೊಳಿಸುವ ಇಂತಹ ಪ್ರಸಂಗಗಳು ಸ್ವತಃ ಅಣ್ಣಪ್ಪ ಮಾಸ್ತರರಿಗೂ ವಿಚಿತ್ರವಾಗಿ ತೋರುತಿದ್ದವು. ಪ್ರತಿಸಾರಿ ಯಾವುದೋ ಪುಡಿಗಾಸಿನ ವಸ್ತುವೊಂದನ್ನು ಎಗರಿಸಿಕೊಂಡು ಬಂದಾಗಲೂ ವಿಶ್ವ ವನ್ನೇ ಗೆದ್ದ ಸಂತೋಷ.
ಮರುಕ್ಷಣವೇ ತನ್ನ ಕೊಳಕು ಬುದ್ಧಿಯ ಬಗ್ಗೆ ಅಸಹ್ಯ.ಇನ್ನು ಮುಂದೆ ಇಂತಹ ನೀಚ ಕೆಲಸವನ್ನು ಮಾಡಲೇಬಾರದು ಎಂದು ಎಷ್ಟು ಬಾರಿ ಪಣತೊಟ್ಟಿದ್ದರೋ ಅಷ್ಟೇ ಬಾರಿ ಆ ಪಣವನ್ನು ಮುರಿದು ತನ್ನ ಗೀಳಿಗೆ ಮತ್ತೆ ತಲೆಬಾಗಿದ್ದರು. ಅದೇ ತರಕಾರಿ ಅಂಗಡಿಯ ಅಣ್ಣಪ್ಪ ಮಾಸ್ತರರ ಗೀಳು ಮುಂದುವರಿದಿದ್ದರೆ ಅಂತಹ ಅಪಾಯವಾಗುತ್ತಿರಲಿಲ್ಲ. ತರಕಾರಿ ಅಂಗಡಿಯಲ್ಲಿ ಹುಟ್ಟಿಕೊಂಡ ದುರಭ್ಯಾಸ ಈಗ ದಿನಸಿ ಅಂಗಡಿಯವರೆಗೂ ಬಂದಿತ್ತು. ಗಜಾನನನ ದಿನಸಿ ಅಂಗಡಿಯ ಕ್ಯಾಶ್‌ ಕೌಂಟರಿನ ಮೇಲೆ ಜೋಡಿಸಿಟ್ಟ ಸಣ್ಣ ಪುಟ್ಟ ವಸ್ತು¤ಗಳನ್ನು ಹುಷಾರಾಗಿ ಎಗರಿಸಿಕೊಳ್ಳುವುದನ್ನು ಅಣ್ಣಪ್ಪ ಮಾಸ್ತರರು ಶುರುಮಾಡಿಕೊಂಡರು. ಇದರಿಂದಾಗಿ, ಮನೆಯಲ್ಲಿ ಆವಶ್ಯಕತೆಗಿಂತ ಹೆಚ್ಚು ಪೆನ್ನು, ಬೆಂಕಿಪೊಟ್ಟಣಗಳು, ಅಮೃತಾಂಜನ್‌ ಡಬ್ಬಗಳು ಸಂಗ್ರಹವಾಗತೊಡಗಿದವು. ಮಾಸ್ತರರ ಹೆಂಡತಿಗೆ ಇದೆಲ್ಲ ವಿಚಿತ್ರವಾಗಿ ಕಾಣಿಸತೊಡಗಿತು. ಮೊದಮೊದಲು ತನ್ನ ಗಂಡನಿಗೆ ಮರೆವು ಪ್ರಾರಂಭವಾಗಿದೆ ಎಂದೇ ಅಂದುಕೊಂಡಿದ್ದರು. ಬೇರೆಲ್ಲ ವಿಷಯಗಳಲ್ಲಿ ಗಂಡನ ಸ್ಮರಣಶಕ್ತಿ ಚೆನ್ನಾಗಿಯೇ ಇರುವುದು ಆಕೆಯ ಗಮನಕ್ಕೆ ಬಂದ ಮೇಲೆ ತನ್ನ ಗಂಡನದು ಮರೆವಿನ ಸಮಸ್ಯೆ ಅಲ್ಲ ಎಂಬುದು ತಿಳಿದುಹೋಯಿತು. ಪ್ರತಿಬಾರಿ ಅಂಗಡಿಗೆ ಮಾಸ್ತರರು ಹೋಗುವಾಗಲೂ ಅವರು ತರಬೇಕಾದ ಸಾಮಗ್ರಿಗಳನ್ನು ಹೇಳುವುದರ ಜೊತೆಗೆ ಬೆಂಕಿಪೊಟ್ಟಣ ತರಬೇಡಿ, ನಿಂಬೆಹಣ್ಣು ತರಬೇಡಿ ಮುಂತಾಗಿ ಎಚ್ಚರಿಸಿ ಕಳುಸುತ್ತಿದ್ದರು. ಆದರೂ ಮತ್ತೆ ಮತ್ತೆ ಅವೇ ವಸ್ತುಗಳು ಮನೆಯನ್ನು ಸೇರುತ್ತಲೇ ಇದ್ದವು. ಮಾಸ್ತರರ ಹೆಂಡತಿ ಈ ಸಮಸ್ಯೆಗೊಂದು ಪರಿಹಾರವನ್ನು ಹುಡುಕಲೇಬೇಕೆಂದುಕೊಂಡರು. .ಈ ಬಾರಿ ಅಣ್ಣಪ್ಪ ಮಾಸ್ತರರು ಗಜಾನನನ ಅಂಗಡಿಗೆ ಹೋದಾಗ ಅವರಿಗೊಂದು ಆಘಾತ ಕಾದಿತ್ತು.'ಸಾಮಾನಿನ ಚೀಟಿ ಕೊಡಿ ಸಾರ್‌'ಎಂದು ಗಜಾನನ ಅಂದಾಗಲೇ ಮಾಸ್ತರರಿಗೆ ಏನೋ ಬದಲಾಗಿರುವ ಹಾಗೆ ಅನ್ನಿಸಿತ್ತು. ಮಾಸ್ತರರು ಹಿಂದೆ ಎಂದೂ ಸಾಮಾನುಗಳ ಪಟ್ಟಿ ತಂದವರಲ್ಲ. ಗಜಾನನನೂ, 'ಚೀಟಿ ಕೊಡಿ ಸರ್‌' ಎಂದು ಹಿಂದೆ ಯಾವತ್ತೂ ಕೇಳಿದ್ದಿರಲಿಲ್ಲ. ಈ ದಿನ ಬರುವಾಗ ಹೆಂಡತಿ ಚೀಟಿ ಬರೆದುಕೊಂಡು ಹೋಗಿ ಎಂದು ತುಂಬಾ ಒತ್ತಾಯಿಸಿದ್ದರಿಂದ ಅವರು ಸಾಮಾನುಗಳ ಪಟ್ಟಿ ಮಾಡಿಕೊಂಡು ಬಂದಿದ್ದರು.ಅದಕ್ಕೆ ಸರಿಯಾಗಿ ಗಜಾನನ ಚೀಟಿ ಕೇಳುವುದೆಂದರೆ?
ಗಜಾನನನ ಮುಖ ನೋಡುತ್ತಾ ಸಾವಕಾಶವಾಗಿ ಮಾಸ್ತರರು ಕಿಸೆಯಿಂದ ಚೀಟಿ ತೆ‌ಗೆದುಕೊಟ್ಟರು. 'ಚೀಟಿಯಲ್ಲಿ ಬರೆದಿರುವುದನ್ನು ಬಿಟ್ಟು ಬೇರೆ ಏನನ್ನೂ ಕೊಡಬೇಡ ಎಂದು ಅಮ್ಮ ಹೇಳಿ ಹೋಗಿದ್ದಾರೆ.' ಎಂದ ಗಜಾನನ. ಬೆಂಕಿಪೊಟ್ಟಣ, ಅಮೃತಾಂಜನ್‌ ಡಬ್ಬಗಳನ್ನು ಮತ್ತೆ ಮತ್ತೆ ಮನೆಗೆ ತರುವ ವಿಚಾರವನ್ನು ಹೆಂಡತಿ ಹೇಳಿರಬಹುದೆ? ಈಗಾಗಲೆ ಕೌಂಟರಿನ ಮೇಲಿಟ್ಟಿರುವ ವಸ್ತುಗಳು ಮಾಯವಾಗುತ್ತಿರುವುದು ಗಜಾನನನ ಅರಿವಿಗೆ ಬಂದಿದ್ದರೆ ಹೆಂಡತಿಯ ಮಾತು ಅವನಿಗೆ ಸುಳಿವ ಒದಗಿಸಿದ ಹಾಗಾಗಿರಬಹುದಲ್ಲ? -ಮಾಸ್ತರರು ಚಿಂತಿತರಾದರು. ಕೂಡಲೇ ಧೈರ್ಯ ತಂದುಕೊಂಡು, ಹಾಗೇನೂ ಆಗಿರಲಾರದು ಎಂಬ ಸಮಾಧಾನದಿಂದ 'ಯಾಕಂತೆ?' ಎಂದರು. 'ಅಮ್ಮ ಹೇಳದ ಸಾಮಾನುಗಳನ್ನೂ ನೀವು ಕೊಂಡು ಹೋಗುತ್ತೀರಂತೆ!' ಎಂದ. ನಿರಾಳದ ಉಸಿರುಬಿಟ್ಟು 'ಓ ಹಾಗಾ?'ಎಂದರು.
ಅಂಗಡಿಯಿಂದ ಮನೆಗೆ ಮರುಳುವಾಗ ಅಣ್ಣಪ್ಪ ಮಾಸ್ತರರ ತಲೆಯಲ್ಲಿ ಮೋಟಾರು ಓಡಾಡಿದ ಹಾಗಾಗುತಿತ್ತು. ಈ ಗೀಳು ಇನ್ನೂ ಮುಂದುವರಿದರೆ ಮಾನ ಕಳೆದುಕೊಳ್ಳುವುದು ಗ್ಯಾರಂಟಿ ಎಂದು ಅನ್ನಿಸಿಬಿಟ್ಟಿತ್ತು. ಆಲೋಚಿಸಿದರು.. ಆಲೋಚಿಸಿದರು..ಆಲೋಚಿಸುತ್ತ ಹೋದರು. ಹಿಂದೆ ಎಷ್ಟೋ ಬಾರಿ ಇಂದು ಕದಿಯಲೇಬಾರದು ಎಂದು ದೃಢನಿರ್ಧಾರ ತೆಗೆದುಕೊಂಡು ಅಂಗಡಿಗೆ ಹೋದಾಗಲೂ ಸೋತುಹೋಗಿದ್ದರು. ಈ ದರಿದ್ರ ಚಟದಿಂದ ತಪ್ಪಿಸಿಕೊಳ್ಳುವುದು ಸುಲಭವಲ್ಲ ಎಂಬುದು ಅನೇಕ ಬಾರಿ ಸಾಬೀತಾಗಿತ್ತು.ಕದಿಯುವುದು ಮಾನಸಿಕ ಕಾಯಿಲೆಯಾಗಿ ಬದಲಾಗಿಬಿಟ್ಟಿರಬಹುದೆಂಬ ಬಲವಾದ ಅನುಮಾನ ಅಣ್ಣಪ್ಪ ಮಾಸ್ತರರ ತಲೆಯೊಳಗೆ ಸೇರಿಕೊಂಡು ಅವರನ್ನು ಕಾಲಿನಿಂದ ತಲೆಯವರೆಗೆ ಅಡಿಸಲು ಶುರುಮಾಡಿತು. ಯಾರೊಡನಾದರೂ ಹೇಳಿಕೊಂಡರೆ ಪರಿಹಾರ ದೊರೆಯಬಹುದೆಂದು ಅನ್ನಿಸುವಾಗಲೇ ಹೇಗೆ ಹೇಳಿಕೊಳ್ಳುವುದು ಎಂಬ ಪ್ರಶ್ನೆಯೂ ಸೇರಿಕೊಳ್ಳುತಿತ್ತು. ಬಹಳ ಆಲೋಚನೆ ಮಾಡಿ ಕೊನೆಗೂ ಮಾಸ್ತರರು ಒಂದು ನಿರ್ಧಾರಕ್ಕೆ ಬಂದರು. ಒಬ್ಬ ಸೂಕ್ತ ವ್ಯಕ್ತಿಯಲ್ಲಿ ಇದನ್ನೆಲ್ಲ ಹೇಳಿಕೊಂಡು,ಪರಿಹಾರಕ್ಕಾಗಿ ಕೈಯೊಡ್ಡುವುದೇ ಈ ಕೊಳಚೆಯನ್ನು ಕಿತ್ತೂಸೆಯಲು ಇರುವ ಏಕೈಕ ದಾರಿ ಎಂಬ ದೃಢ ನಿರ್ಧಾರದೊಂದಿಗೆ ಮನೆಯನ್ನು ತಲುಪಿದರು.

ತನ್ನ ಸಮಸ್ಯೆಯನ್ನು ಹೇಳಿಕೊಳ್ಳಲು ಸೂಕ್ತ ವ್ಯಕ್ತಿಯನ್ನು ಆಯುವುದರ ಮಾಸ್ತರರು ಆ ರಾತ್ರಿಯನ್ನು ವ್ಯಯಿಸಿದರು.ಕೊನೆಗೂ,ತಮ್ಮ ಹೆಡ್‌ ಮಾಸ್ತರರೇ ಅತ್ಯಂತ ಸೂಕ್ತ ವ್ಯಕ್ತಿ ಎಂದು ನಿರ್ಧರಿಸಿ, ಬೆಳಿಗ್ಗೆಯೇ ಸೈಕಲ್ಲು ಏರಿ ಹೊರಟರು. ರವಿವಾರವಾದುದರಿಂದ ಇಬ್ಬರೂ ಸಮಯದ ಒತ್ತಡವಿಲ್ಲದೇ ಮಾತನಾಡಬಹುದು ಎಂದು ಎಣಿಸುತ್ತ ಹೆಡ್‌ಮಾಸ್ತರರ ಮನೆಯ ಬಾಗಿಲು ಬಡಿದಾಗ ಅವರ ಹೆಂಡತಿ ಹೊರಬಂದರು. ಹೆಡ್‌ ಮಾಸ್ತರರು ಶಾಲೆಗೆ ಹೋಗಿದ್ದಾರೆಂದು ಅವರ ಹೆಂಡತಿ ತಿಳಿಸಿದಾಗ ಅಣ್ಣಪ್ಪ ಮಾಸ್ತರರಿಗೆ ಮೊದಲು ಆಶ್ಚರ್ಯವೇ ಆಯಿತು.ಆನಂತರ, ಅಧಿಕಾರಿಗಳು ಯಾವುದೋ ಅಂಕಿಸಂಖ್ಯೆಯನ್ನು ತುರ್ತಾಗಿ ಕಳುಹಿಸಿ ಎಂದು ದೂರವಾಣಿಯಲ್ಲಿ ಆದೇಶ ನೀಡುವುದು ಇತ್ತೀಚೆಗೆ ಹೆಚ್ಚಾಗಿದೆ ಎಂದು ಆಗಾಗ ಹೆಡ್‌ ಮಾಸ್ತರರು ಹೇಳುವುದು ನೆನಪಿಗೆ ಬಂತು.ಬಹುಶಃ ಹೆಡ್‌ ಮಾಸ್ತರರು ಯಾವುದೋ ಫೈಲಿನಲ್ಲಿ ಈಗ ಹುದುಗಿಹೋಗಿರಬಹುದೆಂದು ಊಹಿಸುತ್ತಾ ಶಾಲೆಯ ಕಡೆ ಸೈಕಲ್‌ ತುಳಿದರು. ಬರೇ ಹತ್ತು ನಿಮಿಷದ ಹಾದಿ. ಶಾಲೆಯ ಗೇಟಿನ ಸದ್ದು ಕೇಳಿ ಹೆಡ್‌ ಮಾಸ್ತರರು ಹೊರಗೆ ಬಂದರು. ರಜೆಯ ದಿನವೂ ಕೆಲಸ ಮಾಡುವ ಹೆಡ್‌ ಮಾಸ್ತರರ ವೃತ್ತಿಪರತೆಯ ಕುರಿತು ಅಣ್ಣಪ್ಪ ಮಾಸ್ತರರ ಹೊಗಳಿಕೆಯ
ಮಾತುಗಳನ್ನು ನಡುವೆಯೇ ತುಂಡರಿಸುತ್ತ ಹೆಡ್‌ ಮಾಸ್ತರರೇ ಮೆಲುಧ್ವನಿಯಲ್ಲಿ ತುಂಬ ನಯದಿಂದ ಕೇಳಿದರು- 'ಏನು ಬಂದದ್ದು?'
ಹೆಡ್‌ ಮಾಸ್ತರರ ಪ್ರಶ್ನೆಯನ್ನು ಹಿಂಬಾಲಿಸಿದ ನಾಟಕೀಯ ಮೌನವನ್ನು ಅಣ್ಣಪ್ಪ ಮಾಸ್ತರರೇ ದೀರ್ಘ‌ ಉಸಿರು ಬಿಡುವ ಮೂಲಕ ಭೇದಿಸಿ, ತಲೆ ಅಲ್ಲಾಡಿಸುತ್ತ 'ಹೇಳ್ತೇನೆ ಸರ್‌' ಎಂದರು. ನಿಧಾನವಾಗಿ ಹೆಡ್‌ ಮಾಸ್ತರರ ಕೋಣೆಯ ಕಡೆ ನಡೆದು ಕುರ್ಚಿಯೊಂದರ ಮೇಲೆ ಕುಳಿತುಕೊಂಡರು.ಅವರನ್ನು ಹಿಂಬಾಲಿಸಿ ಬಂದ ಹೆಡ್‌ ಮಾಸ್ತರರೂ ತಮ್ಮ ಕುರ್ಚಿಯ ಮೇಲೆ ಕುಳಿತು ಅಣ್ಣಪ್ಪ ಮಾಸ್ತರರ ಕತೆ ಕೇಳಲು ಸಿದ್ಧರಾದರು.
ಕತೆಯನ್ನು ಪೂರ್ತಿಯಾಗಿ ಆಲಿಸಿದ ಮೇಲೆ ಪುನಃ ಆವರಿಸಿದ ಮೌನವನ್ನು ಹೆಡ್‌ ಮಾಸ್ತರರೇ ಮುರಿದು, 'ಇನ್ಮುಂದೆ ಒಂದ್ಕೆಲಸ ಮಾಡಿ,ಅಂಗಡಿಗೆ ಹೋಗುವಾಗ ಚೀಲದೊಳಗೆ ನಿಮ್ಮ ಇಷ್ಟದೇವರ ಚಿಕ್ಕ ಫೋಟೋ ಇಟ್ಟುಕೊಂಡು ಹೋಗಿ. ಏನಾಗ್ತದೋ ನೋಡೋಣ.'ಎಂದರು. ಅದ್ಭುತ ಐಡಿಯಾ ಇದು ಎನಿಸಿತು ಮಾಸ್ತರರಿಗೆ. 'ದೇವರೇ ಅಪ್ಪಣೆ ಕೊಡಿಸಿದ ಹಾಗಿದೆ ನಿಮ್ಮ ಮಾತು ಸರ್‌' ಮಾಸ್ತರರು ಹೊರಡಲೆದ್ದರು-ಹೊಸ ಐಡಿಯಾವನ್ನು ಕಾರ್ಯರೂಪಕ್ಕಿಳಿಸುವ ಉತ್ಸಾಹದಲ್ಲಿ.ಅರ್ಧ ದಾರಿಯನ್ನೂ ಕ್ರಮಿಸಿರಲಿಲ್ಲ. ಹೆಡ್‌ ಮಾಸ್ತರರು ಈ ವಿಷಯ ವನ್ನು ಇನ್ಯಾರಿಗಾದರೂ ಹೇಳಿಬಿಡಬಹುದೋ ಎಂಬ ಅನುಮಾನ ಮಾಸ್ತರ ರನ್ನು ಕಾಡಲು ಪ್ರಾರಂಭಿಸಿತು. ಹೆಡ್‌ ಮಾಸ್ತ‌ರರು ಅಂಥವರಲ್ಲ. ಆದರೆ, ಇಂತಹ ಆಸಕ್ತಿದಾಯಕ ವಿಚಾರವನ್ನು ತಮ್ಮ ಹೆಂಡತಿಗೂ ಹೇಳಲಾರರು ಎಂದು ನಂಬುವುದು ಹೇಗೆ? ಅವರ ಹೆಂಡತಿ ಪಕ್ಕದ ಮನೆಯ ಸಾವಿತ್ರಮ್ಮ ನಿಗೋ ಅಥವಾ ಎದುರು ಮನೆಯ ನಿರ್ಮಲಾಳಿಗೋ ಹೇಳಿದರೆಂದರೆ, ಸುದ್ದಿ ಪೇಪರಿನಲ್ಲಿ ಬಂದ ಹಾಗೆಯೇ! ನಾನು ಈ ದುರಭ್ಯಾಸದಿಂದ ತಪ್ಪಿಸಿ ಕೊಂಡರೂ ಮರ್ಯಾದೆ ಹೋಗುವುದು ಗ್ಯಾರಂಟಿ! 'ಇದು ನಿಮ್ಮಲ್ಲಿಯೇ ಇರಲಿ' ಎಂದು ಒಂದು ಮಾತು ಹೆಡ್‌ ಮಾಸ್ತರರಿಗೆ ಹೇಳಿ ಬರುವುದೇ ಸರಿ ಎಂಬ ತೀರ್ಮಾನಕ್ಕೆ ಬಂದು ಅಣ್ಣಪ್ಪ ಮಾಸ್ತರರು ಸೈಕಲ್ಲನ್ನು ತಿರುಗಿಸಿದರು.
ಅಣ್ಣಪ್ಪ ಮಾಸ್ತರರು ಶಾಲೆಯ ಗೇಟಿನ ಒಳಹೋಗುವುದಕ್ಕೂ ಹೆಡ್‌ ಮಾಸ್ತರರು ಹೊರಬರುವುದಕ್ಕೂ ಸರಿಹೋಯಿತು. ಎದುರಿಗೆ ಅಣ್ಣಪ್ಪ ಮಾಸ್ತರರನ್ನು ಕಂಡು ಹೆಡ್‌ ಮಾಸ್ತರರು ಗಾಬರಿಗೊಂಡರು. ಅಣ್ಣಪ್ಪಮಾಸ್ತರರಿಗೆ ಆಶ್ಚರ್ಯಹುಟ್ಟಿಸುವಂತೆ ಹೆಡ್‌ ಮಾಸ್ತರರು ತಮ್ಮ ಎರಡೂ ಕೈಗಳಲ್ಲಿ ಹಿಡಿದುಕೊಂಡಿದ್ದ ಎರಡು ಭಾರವಾದ ಕೈಚೀಲಗಳನ್ನು ಬಹಳ ಗಡಿಬಿಡಿಯಲ್ಲಿ ತಮ್ಮ ಸ್ಕೂಟರಿಗೆ ಸಿಕ್ಕಿಸಲು ಪ್ರಯತ್ನಿಸಿದರು. ಈ ಪ್ರಯತ್ನದಲ್ಲಿ ಎಡವಿಬಿಟ್ಟರು. ಕೈಚೀಲಗಳು ನೆಲಕ್ಕುರುಳಿದವು. ಅದರಲ್ಲಿದ್ದ ಶಾಲಾಮಕ್ಕಳ ಬಿಸಿಯೂಟದ ಬೇಳೆ, ಎಣ್ಣೆಯ ಪ್ಯಾಕೆಟ್ಟುಗಳು ಚೀಲದ ಹೊರಗೆ ಚೆಲ್ಲಿಹೋದವು. ಅಣ್ಣಪ್ಪ ಮಾಸ್ತರರಿಗೆ ಮತ್ತಷ್ಟು ಆಶ್ಚರ್ಯ ಹುಟ್ಟಿಸುವಂತೆ ಬೇಗನೆ ಸಾವರಿಸಿಕೊಂಡ ಹೆಡ್‌ ಮಾಸ್ತರರು, 'ನೀವು ಹೇಳಿದ್ದನ್ನು ಯಾರಿಗೂ ಹೇಳುವುದಿಲ್ಲ' ಎಂದರು. ಆ ಮಾತಿನಲ್ಲಿ, ಇಲ್ಲಿ ನೋಡಿದ್ದನ್ನು ಯಾರಿಗೂ ಹೇಳದಿರುವುದು ಕ್ಷೇಮ ಎಂಬ ಭಾವವಿತ್ತು. ಅವರ ಭಂಡತನ ಅಣ್ಣಪ್ಪ ಮಾಸ್ತರರಿಗೆ ಇನ್ನಷ್ಟು ಅಸಹ್ಯ ಹುಟ್ಟಿಸಿತು. ಒಂದೇ ಒಂದು ಮಾತನ್ನೂ ಆಡದೇ
ಅಲ್ಲಿಂದ ಹೊರಟುಬಿಟ್ಟರು. .ಅಣ್ಣಪ್ಪಮಾಸ್ತರರಿಗೆ ಈಗ ಕದಿಯುವ ಗೀಳಿಲ್ಲ.ಅಂಗಡಿಗೆ ಪ್ರತಿ ಬಾರಿ ಹೋಗುವಾಗಲೂ ಕೈಚೀಲದಲ್ಲಿ ದೇವರ ಫೋಟೋ ಕೊಂಡೊಯ್ಯುವುದನ್ನು ಮಾಸ್ತರರು ಮರೆಯುವುದಿಲ್ಲ. ಚೀಲದೊಳಗಿನ ಫೊಟೋದ ಆಯತಾಕಾರದ ಅಸ್ತಿತ್ವವು ಮಾಸ್ತರರಿಗೆ ಎಂತಹ ಭಯವನ್ನು ಉಂಟುಮಾಡಿದೆಯೋ ದೇವರಿಗೇ ಗೊತ್ತು! ಈಗವರು ಅಂಗಡಿಯ ವಸ್ತುಗಳನ್ನು ಕದಿಯುವುದಿಲ್ಲ.
ನಿಂಬೆಹಣ್ಣು, ಅಮೃತಾಂಜನ್‌ ಡಬ್ಬ ಮುಂತಾದ ವಸ್ತುಗಳು ಅನಗತ್ಯವಾಗಿ ಮನೆಸೇರುವುದು ನಿಂತಿರುವುದು ಮಾಸ್ತರರ ಹೆಂಡತಿಗೆ ‌ಮಾಧಾನ ತಂದಿದೆ. ಗಂಡ ಪ್ರತಿ ಬಾರಿ ಅಂಗಡಿಗೆ ಹೋಗುವಾಗಲೂ ದೇವರ ಫೋಟೋ ಕೊಂಡೊಯ್ಯುವುದೇಕೆ ಎಂಬುದು ಆಕೆಗೆ ಸಮಸ್ಯೆಯಾಗಿ ಕಾಡುವುದಿಲ್ಲ. ಆದರೆ,ಮಾಸ್ತರಿಗೇ ಇದು ಸಮಸ್ಯೆಯಾಗಿ ಕಾಡುತ್ತಿದೆ-ಚೀಲದಲ್ಲಿ ದೇವರ ಫೋಟೋ ಇಟ್ಟುಕೊಳ್ಳುವುದಕ್ಕೂ ನಾನು ಕದಿಯುವುದನ್ನು ನಿಲ್ಲಿಸಿರುವುದಕ್ಕೂ ಸ‌ಂಬಂಧವಿದೆಯೇ? 

ನೀಲಿ ಶಾಯಿಯ ಕಲೆ *ಉದಯ ಗಾಂವಕಾರ


ನೀಲಿ ಶಾಯಿಯ ಕಲೆ




           










             ಶೆರೊನ್ ಹೊಟೆಲಿನ ಎರಡನೇ ಮಹಡಿಯಲ್ಲಿರುವ ರೂಮ್ ನಂಬರ್ 217 ರ ಒಳಗಿಂದ ಕೇಳಿಬರುತ್ತಿರುವ ಅಳುವಿನ ಸದ್ದು ಗಂಡಸಿನದೇ ಎಂದು ತೀರ್ಮಾನಿಸಲು ರೂಮ್ ಬಾಯ್ ರಾಬರ್ಟ್ ಮೆಂಡೋನ್ಸಾನಿಗೆ ಕಷ್ಟವಾಗಲಿಲ್ಲ. ಮಟ-ಮಟ ಮದ್ಯಾನ್ಹವಾದ್ದರಿಂದ ರಸ್ತೆಯಲ್ಲಿ ಹೆಚ್ಚು ಜನಸಂಚಾರವೂ ಇರಲಿಲ್ಲ. ಪಕ್ಕದ ಬಂಟರ ಯಾನೆ ನಾಡವರ ಸಂಕೀರ್ಣದಲ್ಲೂ ಮದುವೆಯ ಗೌಜು ಗದ್ದಲವಿರಲಿಲ್ಲ. ಈ ಎಲ್ಲ ಕಾರಣಗಳೊಂದಿಗೆ 217 ನೇ ನಂಬರಿನ ಕೋಣೆ ತೆರೆದೇ ಇರುವ ಕಾರಣವೂ ಸೇರಿಕೊಂಡದ್ದರಿಂದ ಮಧ್ಯಾನ್ಹದ ಸಣ್ಣ ತೂಕಡಿಕೆಯನ್ನು ಸುಖಿಸುತ್ತಿದ್ದ ರಾಬರ್ಟ್ ಮೆಂಡೊನ್ಸಾನನ್ನು ಅಳುವಿನ ಸದ್ದು ಎಚ್ಚರಿಸಿತು.ಕೆಲ ಸೆಕೆಂಡುಗಳವರೆಗೂ ಅಳುವಿನ ಸದ್ದು ತನ್ನ ತೂಕಡಿಕೆಯನ್ನು ಸಮೃದ್ಧಗೊಳಿಸುತ್ತಿರುವ ಕಿರುಗನಸಿನ ಭಾಗವೆಂದೇ ಮೆಂಡೋನ್ಸಾ ಭಾವಿಸಿದ್ದ.ಆದರೆ,ಸದ್ದು ಇನ್ನಷ್ಟು ಗಟ್ಟಿಯಾಗಿ ಕನಸಿನ ಮೇರೆಗಳನ್ನು ಕತ್ತರಿಸಿ ಅವನ ಮೂಗು ಹಿಡಿದು ಎಚ್ಚರಿಸಿತು.
      ಗಂಡಸರು ಬೇರೆಯವರನ್ನು ಅಳುಸುವುದಷ್ಟೇ ಅಲ್ಲ,ಸ್ವತಃ ಅಳಬಲ್ಲರು ಎಂಬುದು ಮೇಂಡೋನ್ಸಾನಿಗೂ ಗೊತ್ತು.ಹೊಟೇಲು ರೂಮಿಗೆ ಇಸ್ಪೀಟು ಆಡಲೆಂದು ಬರುವ ಕೆಲ ಗಂಡಸರು ಸಾರಾಯಿಯ ನಶೆಯಲ್ಲಿ ತಮ್ಮ ಭಗ್ನ ಪ್ರೇಮವನ್ನೋ, ಹೆಂಡತಿಯ ಹಠಮಾರಿತನವನ್ನೋ ಸ್ನೇಹಿತರೊಡನೆ ಹೇಳಿಕೊಳ್ಳುತ್ತಾ ಅಳುವುದನ್ನು ಆತ ಕೇಳಿದ್ದ. ಆದರೆ,ಇದೆಲ್ಲ ಇಸ್ಪೀಟಿನಲ್ಲಿ ದುಡ್ಡು ಕಳೆದುಕೊಂಡ ದುಃಖವನ್ನು ವ್ಯಕ್ತಪಡಿಸುವ ಪಾನಮತ್ತ ರೂಪವೆಂಬುದು ಅವನಿಗೆ ಗೊತ್ತಿತ್ತು. ಹಾಗೆ ಕೇಳಿಬರುವ ಅಳುವಿನ ಜೊತೆ ಅಮಲಿನ ಮಾತುಗಳು,ತೊದಲಿಕೆಗಳು ಸಮ್ಮಿಶ್ರಣಗೊಂಡು ಗದ್ದಲವುಂಟಾಗುವುದು ಮಾಮೂಲು. ಆದರೆ,ಈ ಬಾರಿ ರೂಮಿನಿಂದ ಕೇಳಿಬರುತ್ತಿರುವ ಅಳು ಹಾಗಲ್ಲ:ಈ ಅಳು ಕುಡಿತದ ಉಪಉತ್ಪನ್ನದಂತೆ ಕೇಳಿಬರುತ್ತಿಲ್ಲ.ಅಳು ಸ್ಪಷ್ಟವಾಗಿತ್ತು.ಭಾಷೆಯ ಅತ್ಯಂತ ಶಕ್ತ ಬಳಕೆ ಅಳುವೇ ಇರಬೇಕು ಎಂದು ರಾಬರ್ಟ್ ಮೆಂಡೋನ್ಸಾ ಮನಸ್ಸಿನಲ್ಲೆ ಅಂದುಕೊಳ್ಳುವಷ್ಟು ಸುಸ್ಪಷ್ಟವಾಗಿತ್ತು. ನಗುವಿನಂತೆ ಅಳು ಕೂಡಾ ಅನೇಕ ಬಾರಿ ನಮ್ಮ ಮಾತಿನ ಹಾಗೆ ಅಪ್ರಾಮಾಣಿಕವೂ ಅಸ್ಪಷ್ಟವೂ ಆಗಿರಲೂ ಸಾಧ್ಯ.ಈಗ ಕೇಳಿಬರುತ್ತಿರುವ ಅಳು ನಾಟಕದ್ದಲ್ಲ ಅಂತ ರಾಬರ್ಟ್ ಮೆಂಡೋನ್ಸಾನಿಗೆ ಅನ್ನಿಸಿರಬೇಕು. ಆತ ರೂಮ್ ನಂಬರ್ 217ರ ದಿಕ್ಕು ಹಿಡಿದು ಹೊರಟ.
====
     ಮೆಂಡೋನ್ಸಾ ಊಹಿಸಿದಂತೆ,ರೂಮ್ ನಂಬರ್ 217 ತೆರೆದೇ ಇತ್ತು.ಒಳಗೆ ಇಬ್ಬರು ವ್ಯಕ್ತಿಗಳಿದ್ದರು.ಒಬ್ಬರನ್ನೊಬ್ಬರು ಅಪ್ಪಿಕೊಂಡು ಅಳುತ್ತಿದ್ದರು.ಅವರಲ್ಲಿ ಒಬ್ಬ ವ್ಯಕ್ತಿ ಎರಡು ದಿನಗಳಿಂದ ಆ ಹೊಟೆಲಿನ ಅತಿಥಿಯಾಗಿರುವ ಸುಬ್ಬು ಕಾಂಚನ.ಮುಂಬೈನಲ್ಲಿ ಒಂದು ಜ್ಯೂಸ್ ಅಂಗಡಿ ಇಟ್ಟುಕೊಂಡು ಸಧ್ಯಕ್ಕೆ ಅ ಬೆರಗಿನ ನಗರದ ಖಾಯಂ ವಾಸಿಯಾಗಿರುವಾತ.ಇನ್ನೊಬ್ಬ ರವಿಶಂಕರ-ಸುಬ್ಬು ಕಾಂಚನನ ಬಾಲ್ಯದ ಗೆಳೆಯ. ಈಗ ಜಿಲ್ಲಾ ಪಂಚಾಯಿತಿಯ ಅಕೌಂಟ್ಸ್ ವಿಭಾಗದಲ್ಲಿ ಅಧಿಕಾರಿಯಾಗಿದ್ದಾನೆ. ಉಡುಪಿಯ ಅಲೆವೂರಿನಲ್ಲಿ ಸ್ವಂತದ ಮನೆ ಇದೆ. ಹೆಂಡತಿ ಎಲ್.ಐ.ಸಿ ಯಲ್ಲಿ ಉದ್ಯೋಗಿ.ಇಬ್ಬರು ಮಕ್ಕಳು ಇಂದ್ರಾಳಿಯ ಇಂಗ್ಲೀಷ್ ಮಾಧ್ಯಮದ ಶಾಲೆಯಲ್ಲಿ ಓದುತ್ತಿದ್ದಾರೆ.
   ಎಂಟನೆ ತರಗತಿಯಲ್ಲಿರುವಾಗ ಭಕ್ತ ಮಾರ್ಕಂಡೇಯ ಸಿನೇಮಾ ನೋಡುತ್ತಾ ರವಿಶಂಕರ ಅತ್ತ್ತಿದ್ದನ್ನು ಕಂಡು ಮನೆಯವರೆಲ್ಲ ನಕ್ಕಿದ್ದರು.ಆ ನಂತರ ರವಿಶಂಕರ ಅತ್ತದ್ದು ಯಾವಾಗ ಎಂದು ಯೋಚಿಸಿದರೆ ನೆನಪಿಸಿಕೊಳ್ಳುವುದು ಕಷ್ಟ. ಸುಬ್ಬು ಕಾಂಚನನಿಗೋ ಅಳುವುದಿದ್ದರೆ ಬೇಕಾದಷ್ಟು ಕಾರಣಗಳಿದ್ದವು.ತಂದೆ ಸತ್ತದ್ದು ಸುಬ್ಬುಕಾಂಚನನಿಗೆ ಯಾವಾಗೆಂಬುದೇ ನೆನಪಿಲ್ಲ.ಅಮ್ಮ ಅದ್ಯ್ಹಾಗೆ ಸಾಕಿದಳು ಎಂಬುದೂ ಸರಿಯಾಗಿ ನೆನಪಿಲ್ಲ.ಬೆಳಿಗ್ಗೆ ಕೆಲಸಕ್ಕೆ ಹೋಗುವ ಅಮ್ಮ ಇಳಿಹೊತ್ತಿನಲ್ಲಿ ಮನೆಗೆ ಬರುವುದು,ಮನೆಗೆ ಬಂದ ಮೇಲೆ ದಡ-ಬಡ ಎಂದು ಮನೆ ಕೆಲಸಗಳನ್ನೆಲ್ಲ ಮುಗಿಸುವುದು,ತಿನಿಸಿಗೆಂದು ಹಠಮಾಡಿದರೆ ಬೆನ್ನಿನ ಮೇಲೆ ಬಡಿಯುವುದು,ಆ ನಂತರ ಮುದ್ದು ಮಾಡಿ ಅಂಗಡಿಗೆ ಸಾಮಾನು ತರಲು ಕಳುಹಿಸಿ ರಾತ್ರಿಯ ಅಡುಗೆಗೆ ಸಿದ್ಧಗೊಳ್ಳುವುದು- ಎಲ್ಲ ಸ್ವಾಭಾವಿಕವೆಂಬಂತೆ ಆಗ ಸುಬ್ಬು ಕಾಂಚನನಿಗೆ ಕಾಣಿಸುತ್ತಿತ್ತು. ಬದುಕು ಕಷ್ಟದ್ದೆಂದು ಅನ್ನಿಸಿರಲೇ ಇಲ್ಲ. ಅಮ್ಮ ಕೊಡುವ ಪೆಟ್ಟಿಗೆ,ಬೇಡಿಕೆ ಈಡೇರಿಕೆಗಾಗಿ ಮಾಡುವ ಹಠಕ್ಕೆ ಕಾಂಚನ ಆಗಾಗ ಅಳುತ್ತಿದ್ದದ್ದು ಬಿಟ್ಟರೆ, ಹತ್ತನೇ ತರಗತಿಗೆ ಬರುವವರೆಗೆ ಸುಬ್ಬುವಿಗೂ ಅಳಲು ಬೇರೆ ಕಾರಣಗಳು ಇರಲಿಲ್ಲ. ಹತ್ತನೇ ತರಗತಿಯಲ್ಲಿರುವಾಗ ಒಂದು ದಿನ ಹೆಡ್ ಮಾಸ್ತರರು ತರಗತಿಗೆ ಬಂದು ನಿನ್ನಮ್ಮಗೆ ಹುಷಾರಿಲ್ಲ,ಮನೆಗೆ ಹೋಗು ಎಂದರು. ಕಾಂಚನ ಮನೆಗೆ ಬಂದಾಗ ಅಮ್ಮ ಜಗುಲಿಯ ಮೇಲೆ ಮಲಗಿದಂತಿದ್ದಳು. ಸುತ್ತಲೂ ಜನ ಸೇರಿದ್ದರು. ಅಮ್ಮ ಸತ್ತಿದ್ದಾಳೆ ಎಂಬುದು ಸುಬ್ಬುವಿಗೆ ತಿಳಿದೇ ಹೋಯ್ತು. ಆಗ ಎದೆ ಖಾಲಿಯಾಗುವಷ್ಟು  ಅತ್ತಿದ್ದ. ಆ ನಂತರವೂ ಅಮ್ಮನ ನೆನಪಾದಾಗ ಸುಬ್ಬು ಅಳುತ್ತಿದ್ದ. ಟಿ.ಬಿ ಖಾಯಿಲೆಯ ಅಮ್ಮ ತನ್ನನ್ನು ಬೆಳೆಸಲು,ಓದಿಸಲು ಪಟ್ಟ ಕಷ್ಟಗಳೆಲ್ಲ ಅರ್ಥವಾದದ್ದು ಅಮ್ಮ ಸತ್ತ ಮೇಲೆಯೇ!. ಹೊಟ್ಟೆ ಪಾಡನ್ನು ಹುಡುಕುತ್ತಾ ಹುಬ್ಬಳ್ಳಿ,ಬೆಳಗಾವಿ,ಪೂಣಾ ಅನಂತರ ಮುಂಬೈಗೆ ತೆರಳಿದ ಸುಬ್ಬು ಕಾಂಚನನಿಗೆ ದಿನವೂ ಅಮ್ಮ ಒಂದಿಲ್ಲೊಂದು ಕಾರಣಕ್ಕಾಗಿ ನೆನಪಾಗುತ್ತಿದ್ದಳು. 
    ಸುಬ್ಬು ಈಗ ಜ್ಯೂಸ್ ಅಂಗಡಿಯ ಮಾಲಿಕ.ಹೆಂಡತಿ,ಇಬ್ಬರು ಮಕ್ಕಳೊಂದಿಗೆ ಸುಖ ಸಂಸಾರ.
                                           ===
 ರವಿಶಂಕರನೆಂಬ ಬ್ರಾಹ್ಮರ ಹುಡುಗ ಸುಬ್ಬುಕಾಂಚನನ ಗೆಳಯನಾದದ್ದು ಕುಂದಾಪುರದ ಬೋರ್ಡ್ ಹೈಸ್ಕೂಲಿನಲ್ಲಿ. ಇಬ್ಬರೂ ಎಂಟನೇ ತರಗತಿಯುಲ್ಲಿ ಜೊತೆ ಸೇರಿದ್ದರು. ಇಬ್ಬರದೂ ಎತ್ತರ ಸುಮಾರಾಗಿ ಒಂದೇ ಇದ್ದುದರಿಂದ ಒಂದೇ ಬೆಂಚಿನಲ್ಲಿ ಸ್ಥಾನ ಪಡೆದಿದ್ದರು. ಕಲಿಯುವುದರಲ್ಲಿ ಸುಬ್ಬು ಕಾಂಚನ ರವಿಶಂಕರನಿಗಿಂತ ಹಿಂದಿರಲಿಲ್ಲ.ಗಣಿತದಲ್ಲಂತೂ ಸುಬ್ಬುವೇ ಯಾವಾಗಲೂ ರವಿಶಂಕರನಿಗಿಂತ ಹೆಚ್ಚು ಅಂಕ ಪಡೆಯುತ್ತಿದ್ದ. ಆಟದಲ್ಲಿಯೂ ಆತನೇ ಮುಂದೆ.ಹೈ ಜಂಪ್ ಮತ್ತು ರನ್ನಿಂಗ್‍ನಲ್ಲಿ ಸುಬ್ಬು ಶಾಲೆಯ ಚಾಂಪಿಯನ್ ಆಗಿದ್ದ.ಸದಾ ಸಿಡುಕುವ ಪಿ.ಟಿ ಮಾಷ್ಟ್ರರಾದ ಗಂಗಯ್ಯ ಗಾಣಿಗರ ಮೆಚ್ಚಿನ ಶಿಷ್ಯನಾಗಿದ್ದ. ರವಿಶಂಕರನ ಅಮ್ಮ ಸುಬ್ಬು ಕಾಂಚನನ ಹೆಸರನ್ನು ತೆಗೆದುಕೊಳ್ಳದೇ ``ಬ್ರಾಹ್ಮಣರ ಮಕ್ಕಳೂ ಇತರೇ ಮಕ್ಕಳೂ ಒಂದೇ ಅಲ್ಲ. ನೀ ಜಾಸ್ತಿ ಮಾಕ್ರ್ಸ್ ತಗೊಂಡೇ ಮುಂದೆ ಬರ್ಬೇಕು’’ ಎಂದು ಯಾವಾಗಲೂ ರವಿಶಂಕರನನ್ನು ಎಚ್ಚರಿಸುತ್ತಿದ್ದರು.
     ಇವೆಲ್ಲದರ ಪರಿಣಾಮವೋ ಎಂಬಂತೆ,ಒಳಗೊಳಗೆ ಸಣ್ಣದೊಂದು ಅಸೂಯೆಯನ್ನು ಪೋಷಿಸಿಕೊಂಡೇ ರವಿಶಂಕರ ಸುಬ್ಬುಕಾಂಚನನ್ನು ಇಷ್ಟಪಡುತ್ತಿದ್ದ. ಆದರೆ,ಹತ್ತನೇ ತರಗತಿಯಲ್ಲಿರುವಾಗ ಸುಬ್ಬು ಕಾಂಚನನ ಅಮ್ಮ ತೀರಿಕೊಂಡಿದ್ದರಿಂದಾಗಿ ಆತ ಶಾಲೆ ಬಿಡಬೇಕಾಗಿ ಬಂತು. ಇದು ಸುಬ್ಬುವಿಗಿಂತ ರವಿಶಂಕರನಿಗೇ ಹೆಚ್ಚು ದುಃಖ ತರಿಸಿತ್ತು. ಆ ನಂತರ ಅವರಿಬ್ಬರ ದಾರಿಗಳೂ ಬೇರೆ ಬೇರೆ ಆಗಿಬಿಟ್ಟವು. ರವಿಶಂಕರ ಡಿಗ್ರಿ ಮುಗಿಸಿ ಆಡಳಿತ ಸೇವೆಯ ಪರೀಕ್ಷೆ ಬರೆದು ಅಧಿಕಾರಿಯಾಗುವ ಸಮಯದಲ್ಲಿ ಕಾಂಚನ ಮುಂಬೈನಲ್ಲಿ ಹೊಟೆಲ್ ಮಾಣಿಯಾಗಿದ್ದ. ವರ್ಷಕ್ಕೊಮ್ಮೆ ಊರಿಗೆ ಬಂದಾಗ ರವಿಶಂಕರನನ್ನು ಭೇಟಿಯಾಗುತ್ತಿದ್ದ. ಕೆಲ ವರ್ಷಗಳ ಹಿಂದೆ ಜ್ಯೂಸ್ ಅಂಗಡಿ ಮಾಡಲು ಹಣದ ಅಗತ್ಯ ಬಂದಾಗ ಕಾಂಚನ ಊರಿನ ಜಾಗ ಮಾರಬೇಕಾಯಿತು.ಆ ನಂತರ ಸುಬ್ಬು ಕಾಂಚನ ಊರಿಗೆ ಬರುವುದು ಕಡಿಮೆಯಾಯಿತು.
  ಈ ಬಾರಿ ಸುಬ್ಬು ಕಾಂಚನ ಊರ ದೇವಸ್ಥಾನದ ಜೀರ್ಣೊದ್ಧಾರ ಮತ್ತು ಪುನರ್ ಪ್ರತಿಷ್ಠೆ ಕಾರ್ಯಕ್ರಮಕ್ಕಾಗಿ ಬಂದವ ಶೆರೋನ್ ಹೊಟೆಲಿನಲ್ಲಿಯೇ ಉಳಿದುಕೊಂಡಿದ್ದ. ಗಡಿಬಿಡಿ ಕೆಲಸಗಳ ನಡುವೆ ಇರುವ ನಾಲ್ಕು ದಿನಗಳಲ್ಲೇ ಒಂದು ದಿನ ಬಿಡುವು ಮಾಡಿಕೊಂಡು ರವಿಶಂಕರನಿಗೆ,` ಮಾತಾಡುವುದಿದೆ ಮಾರಾಯ, ಶೆರೋನ್ ಹೊಟೇಲಿಗೆ ಬಾ’ ಎಂದು ಫೋನ್ ಮಾಡಿದ್ದ. ರವಿಶಂಕರನೂ ಅಷ್ಟೇ,ಜೀವದ ಗೆಳಯನ ಜೊತೆ ಕಾಲಕಳೆಯುವುದಕ್ಕಿಂತ ಮಿಗಿಲಾದ ಯಾವ ಕೆಲಸವೂ ಇಲ್ಲವೆಂಬಂತೆ ಶೆರೋನ್ ಹೊಟೇಲಿಗೆ ಬೆಳಿಗ್ಗೆಯೇ ಬಂದಿದ್ದ. ಎಷ್ಟು ಮತಾಡಿದರೂ ಮುಗಿಯದೆಂಬಂತೆ ಮತ್ತೆ-ಮತ್ತೆ ಒತ್ತರಿಸಿ ಬರುತ್ತಿದ್ದ ನೆನಪುಗಳನ್ನುಇಬ್ಬರೂ ತಡೆಯಲೇ ಇಲ್ಲ. ಮೊಬೈಲ್ ಫೋನನ್ನು ಸ್ವಿಚ್ ಆಫ್ ಮಾಡಿಕೊಂಡು ಜೀವಮಾನದ ಸುಖಗಳೆಲ್ಲವೂ ತಮ್ಮ ಬಾಲ್ಯದ ನೆನಪುಗಳನ್ನು ಕೆದುಕುವುದರಲ್ಲಿಯೇ ಅಡಕವಾಗಿವೆ ಎಂಬಂತೆ ಸ್ನೆಹಿತರಿಬ್ಬರೂ ಮಾತಾಡಕೊಳ್ಳತೊಡಗಿದರು.
   ``ನೆಂಪಿತ್ತ ನಿಂಗೆ,ಒಂಬತ್ತರಲ್ಲಿಪ್ಪಾಗ ಎಂಥದೋ ಸಿಟ್ ಮಾಡ್ಕಂಡ್ ಪೆನ್ ಶಾಯಿನೆಲ್ಲ ನೀ ನನ್ನಂಗಿ ಮೇಲ್ ಚೆಲ್ಲಿದ್ದ. ಎಂಥ ಪೇಚಾಟ ಆಯ್ತ್ ಗೊತ್ತ ನಿಂಗೆ?’’ ಸುಬ್ಬು ಕಾಂಚನ ನೆನಪಿಸಿದ ಈ ಘಟನೆಯನ್ನು ರವಿಶಂಕರ ಮರತೇ ಬಿಟ್ಟಿದ್ದ. ಬಹುಶಃ ಆತನಿಗೆ ಇದು ನೆನೆಪಿಟ್ಟುಕೊಳ್ಳುವಷ್ಟು ಮುಖ್ಯ ಘಟನೆ ಅಗಿರಲಿಲ್ಲ. ``ಹುಡುಗಾಟದಲ್ಲಿ ಅದೆಲ್ಲ ಇರೊದೆ ಅಲ್ಲ ಮಾರಾಯ’’ಎಂದು ರವಿಶಂಕರ ಪ್ರತಿಕ್ರಿಯಿಸಿದಾಗ ಸುಬ್ಬು ಕಾಂಚನ ಆ ದಿನದ ಕತೆ ಹೇಳಬೇಕಾಯಿತು.
  ತನ್ನ ಹೊಸ ಡ್ರಾಯಿಂಗ್ ಪುಸ್ತಕದ ಮೇಲೆ ಶಾಯಿ ಚೆಲ್ಲಿದ್ದಾನೆ ಎಂಬ ಸಿಟ್ಟಿನ ಮೇಲೆ ರವಿಶಂಕರ ಆ ದಿನ ಕಾಂಚನನೊಡನೆ ಜಗಳ ಪ್ರಾರಂಭಿಸಿದ್ದ. ಮಾತಿಗೆ ಮಾತು ಬೆಳೆದು ಎಲ್ಲಿಯವರೆಗೆ ತಲುಪಿತ್ತೆಂದರೆ,ಒಂದು ಹಂತದಲ್ಲಿ ರವಿಶಂಕರ ತನ್ನ ಫೌಂಟೇನ್ ಪೆನ್ನನ್ನು ತೆರೆದು ಅದರಲ್ಲಿದ್ದ ಶಾಯಿಯನ್ನು ಕಾಂಚನನ ಅಂಗಿಯ ಮೇಲೆ ಸುರುವಿಬಿಟ್ಟ. ಕಾಂಚನನ ಹತ್ತಿರ ಇರುವುದು ಒಂದೇ ಜೊತೆ ಸಮವಸ್ತ್ರ. ಅದನ್ನು ಬುಧವಾರ ಬಿಟ್ಟು ಬೇರೆಲ್ಲ ಶಾಲಾದಿನಗಳಲ್ಲೂ ಧರಿಸಬೇಕಾಗಿತ್ತು. ಆದುದರಿಂದ ವಾರಕ್ಕೆ ಎರಡು ಬಾರಿ ಮಾತ್ರ ಒಗೆಯಲು ಸಮಯ ಸಿಗುತ್ತಿತ್ತು. ರವಿಶಂಕರನ ಸಿಟ್ಟಿನಿಂದಾಗಿ ಸೋಮವಾರ ದಿನವೇ ಸಮವಸ್ತ್ರಕ್ಕೆ  ಶಾಯಿ ತಗುಲಿದರೆ ಹೇಗಾಗಬೇಡ? ಸಮವಸ್ತ್ರ ಧರಿಸದೇ ಮಾರನೆಯ ದಿನ ಶಾಲೆಗೆ ಹೋಗುವಂತಿಲ್ಲ;ಹೋದರೆ, ಗಂಗಯ್ಯ ಗಾಣಿಗರು ಕೆಂಡಾಮಂಡಲರಾಗುತ್ತಾರೆ. ಮನೆಗೆ ಹೋದಮೇಲೆ ಬಟ್ಟೆ ಒಗೆದರೆ ಮಾರನೆಯ ದಿನದವರೆಗೆ ಒಣಗುವ ಸಾಧ್ಯತೆ ಇರಲಿಲ್ಲ-ಕಾಂಚನನಿಗೆ ನಿಜಕ್ಕೂ ಪೇಚಾಟವಾಯಿತು.
    ಅಂಗಿಯ ಮೇಲಿನ ಕಲೆಯನ್ನು ಕಂಡರೆ ಅಮ್ಮ ಬಯ್ಯಬಹುದೆಂಬ ಭಯವನ್ನಿಟ್ಟುಕೊಂಡೇ ಕಾಂಚನ ಮನೆಗೆ ಬಂದ.ಅಮ್ಮ ಬರುವ ಮುಂಚೆಯೇ ಅಂಗಿಯನ್ನು ಒಗೆದು ಒಣಗಿಸಲು ಬಿಟ್ಟರೆ ನಾಳೆ ಅರೆ-ಬರೆ ಒಣಗಿರುವ ಅಂಗಿಯನ್ನಾದರೂ ಧರಿಸಬಹುದು ಎಂದುಕೊಂಡು ಒಗೆಯುವ ಕಲ್ಲಿನ ಮೇಲೆ ಅಂಗಿಯನ್ನಿಟ್ಟು ಒಗೆಯುತ್ತಿರುವಾಗಲೇ ಅಮ್ಮ ಬಂದಳು.ಸತ್ಯ ಹೇಳದೇ ಕಾಂಚನನಿಗೆ ಬೇರೆ ದಾರಿಯಿರಲಿಲ್ಲ.ಅಮ್ಮ ಏನೂ ಮಾತಾಡಲಿಲ್ಲ.ಅಮ್ಮ ಬಯ್ಯದೇ ಇದ್ದುದೇ ಸುಬ್ಬುವಿಗೆ ಭಯ ಹುಟ್ಟಿಸಿತು.ಕಲೆಯಿದ್ದ ಜಾಗವನ್ನು ಅವಳೇ ಉಜ್ಜಿ ಉಜ್ಜಿ ತೊಳೆದು ನೀರನ್ನು ಹಿಂಡಿದಳು.ರಾತ್ರಿ ಊಟವಾದ ಮೇಲೆ ಒಣಗಲು ಹಾಕಿದ್ದ ಅಂಗಿಯನ್ನು ಪಕ್ಕದ ಮನೆಯ ಭತ್ತ ಬೇಯಿಸುವ ಒಲೆಯ ಹತ್ತಿರ ಕೊಂಡೊಯ್ದು ಎಷ್ಟೋ ಹೊತ್ತಿನವರೆಗೆ ಒಲೆಯ ಶಾಖದ ಎದುರು ಅಂಗಿಯನ್ನು ಬಿಡಿಸಿ ಹಿಡಿದುಕೊಂಡಿದ್ದಳು.ಸುಬ್ಬು ಮಲಗುವವರೆಗೂ ಅಮ್ಮ ಒಲೆಯ ಮುಂದೆ ಅಂಗಿ ಒಣಗಿಸುತ್ತಲೇ ಇದ್ದಳು.
                             ===
   ಕಾಂಚನ ಹೇಳಿದ ಕತೆ ಕೇಳಿ ರವಿಶಂಕರನಿಗೆ ಅಳು ಬಂತು.ಮಗುವಿನಂತೆ ಅಳಲು ಪ್ರಾರಂಭಿಸಿದ.ರವಿಶಂಕರ ಅತ್ತಿದ್ದರಿಂದಲೋ ತನ್ನ ಪರಿಸ್ಥಿತಿಯನ್ನು ನೆನೆದೋ  ಅಥವಾ ಸತ್ತುಹೋದ ಅಮ್ಮನ ನೆನಪಾಗಿಯೋ ಗೊತ್ತಿಲ್ಲ,ಸುಬ್ಬು ಕಾಂಚನನೂ ರವಿಶಂಕರನೊಡನೆ ಅಳಲು ಶುರು ಮಾಡಿದ.ಈ ಲೋಕದ ಪರಿವೆಯೇ ಇಲ್ಲವೆಂಬಂತೆ ಅಳುತ್ತಿದ್ದ ಇಬ್ಬರನ್ನು ಈ ಲೋಕಕ್ಕೆ ಎಳೆದು ತಂದಾತ ರೂಮ್ ಬಾಯ್ ಮೆಂಡೋನ್ಸಾ. ತೆರೆದೇ ಇದ್ದ ಬಾಗಿಲನ್ನು ಸೌಜನ್ಯಕ್ಕಾಗಿ ಬಡಿದು ತನ್ನ ಬರುವಿಕೆಯನ್ನು ಅವರಿಬ್ಬರಿಗೂ ಮನದಟ್ಟುಮಾಡಲು ಮೆಂಡೋನ್ಸಾ ಮಾಡಿದ ಪ್ರಯತ್ನ ಫಲ ನೀಡಲಿಲ್ಲ. ಅವರಬ್ಬರೂ ಅಳುವುದನ್ನು ನಿಲ್ಲಿಸಲಿಲ್ಲ. ಎಷ್ಟೋ ಹೊತ್ತಿನ ನಂತರ ಅವರಿಬ್ಬರೂ ಸಮಾಧಾನಗೊಂಡಾಗ ಮೆಂಡೋನ್ಸಾ ಅಲ್ಲಿಯೇ ಇದ್ದ. ``ಏನಾದರೂ ತರಬೇಕೇ ಸರ್,..ಟೀ..ಕಾಫಿ..?’’ ಮೆಂಡೋನ್ಸಾನ ಪ್ರಶ್ನೆಗೆ ಇಬ್ಬರೂ ಉತ್ತರಿಸಲಿಲ್ಲ. ಅತಿಥಿಗಳ ವೈಯಕ್ತಿಕ ಬದುಕಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ಕೇಳುವುದು ತನ್ನ ಕೆಲಸದ ಸರಹದ್ದದನ್ನು ದಾಟುತ್ತದೆ ಎಂಬ ಎಚ್ಚರವನ್ನು ಮೀರಿ ಮೆಂಡೋನ್ಸಾ ಕೇಳಿದ ``ಇಷ್ಟು ಹೊತ್ತು ಅಳುತ್ತಿದ್ದೀರಲ್ಲ..ಯಾಕೆ?’’
   ಸುಬ್ಬು ಕಾಂಚನ ನಗತೊಡಗಿದ.ಜೊತೆಗೆ,ರವಿಶಂಕರ ಕೂಡಾ.     
ನೀಲಿ ಶಾಯಿಯ ಕಲೆ *ಕತೆ-ಉದಯ ಗಾಂವಕಾರ

Friday 11 January 2013

ನನ್ನ ಶಾಲೆ



ಯಡಾಡಿಮತ್ಯಾಡಿ: ನನ್ನಶಾಲೆಶಾಲಾಮಾಸಿಕ ಹಸ್ತಪತ್ರಿಕೆಯದ್ವಿತೀಯವಾರ್ಷಿಕ ಸಂಭ್ರಮಹಾಗೂಮಕ್ಕಳ ಸಾಹಿತ್ಯಜಾತ್ರೆ
ಕುಂದಾಪುರವಲಯದಯಡಾಡಿಮತ್ಯಾಡಿಸರಕಾರಿಹಿರಿಯಪ್ರಾಥಮಿಕಶಾಲೆಯಲ್ಲಿಶ್ರೀಪ್ರದೀಪ್ಚಂದ್ರಶೆಟ್ಟಿಸದಸ್ಯರುತಾಲೂಕುಪಂಚಾಯತ್ಕುಂದಾಪುರಇವರುಪ್ರಾಯೋಜಿಸಿದನನ್ನಶಾಲೆ,ದ್ವಿತೀಯವಾರ್ಷಿಕಹಸ್ತಪತ್ರಿಕೆಯ25ನೇ ಸಂಚಿಕೆ ಹಾಗೂ ತರಗತಿವಾರು ಮಾಸಿಕಹಸ್ತಪತ್ರಿಕೆಗಳಾದ ನಿಸರ್ಗ,ನಿಯಮ,ನಿರೀಕ್ಷೆ,ನಮ್ಮಆಸೆ,ಇತಿಹಾಸ, ಮಾರ್ಗದರ್ಶಿ, ಸಹಪಾಠಿಪತ್ರಿಕೆಗಳನ್ನು ಕುಂದಾಪುರದಸಾಹಿತಿಗಳುಮತ್ತುವಕೀಲರಾದಶ್ರೀ .ಎ.ಎಸ್.ಎನ್. ಹೆಬ್ಬಾರ್ ಇತ್ತೀಚೆಗೆ ಅನಾವರಣಗೊಳಿಸಿದರು.
ನಂತರಮಾತನಾಡಿದ ಅವರು“ಕುಂದಗನ್ನಡದಲ್ಲಿ” ಬರೆಯುವಂತೆ ವಿದ್ಯಾರ್ಥಿಗಳಿಗೆ ಸಲಹೆನೀಡಿದರು ಮತ್ತುಅವರುಕೂಡಕುಂದಗನ್ನಡದಲ್ಲಿಯೇಮಾತನಾಡಿಕುಂದಗನ್ನಡದಶ್ರೇಷ್ಠತೆಯನ್ನುಎತ್ತಿಹಿಡಿದರು.ಶಾಲಾಮಟ್ಟದಲ್ಲಿಸಾಹಿತ್ಯಾತ್ಮಕಒಲವುಬೆಳೆಸುವುದಕ್ಕೆಪುಸ್ತಕಬರೆಯುವಕೌಶಲರೂಢಿಸುವುದಕ್ಕೆಇಂತಹಪತ್ರಿಕೆಗಳುಸಹಕಾರಿಯಾಗಿದ್ದು ಇದನ್ನುಜವಾಬ್ದಾರಿಯುತವಾಗಿಹೊರತರಲುಕಾರಣವಾಗಿರುವಎಲ್ಲಾಅಧ್ಯಾಪಕರು ,ವಿದ್ಯಾರ್ಥಿಗಳು ಅಭಿನಂದನಾರ್ಹರುಎಂದರು.
ವಿದ್ಯಾರ್ಥಿಗಳಿಂದಸಾಂಸ್ಕ್ರತಿಕ ಕಾರ್ಯಕ್ರಮಜರುಗಿತು.ನಂತರಕ್ಲಸ್ಟರ್ ಮಟ್ಟದ,ವಲಯಮಟ್ಟಮತ್ತು ಜಿಲ್ಲಾಮಟ್ಟದಪ್ರತಿಭಾಕಾರಂಜಿವಿಜೇತರಿಗೆ ಮತ್ತುನನ್ನಶಾಲಾಹಸ್ತಪತ್ರಿಕೆಯ ಬರಹದಲ್ಲಿ ವಿಜೇತರಾದಮಕ್ಕಳಿಗೆ ಬಹುಮಾನನೀಡಲಾಯಿತು.
ವಾರ್ಷಿಕೋತ್ಸವದಸಮಯದಲ್ಲಿಮಕ್ಕಳಿಗೆನಾಟಕಮತ್ತುನೃತ್ಯತರಬೇತಿಯನ್ನುನೀಡಿದಹರ್ಷಮತ್ತುರಚನಾಮತ್ತುಕಲ್ಪನಾ,ಚೇತನಾಹಾಗೂಸುಮಿತ್ರರವರಿಗೆವಾರ್ಷಿಕೋತ್ಷವದಸ್ಮರಣಿಕೆಯನ್ನುನೀಡಿಗೌರವಿಸಿದರು.
ಸಮಾರಂಭದಅಧ್ಯಕ್ಷತೆಯನ್ನುಶ್ರೀಸುಬ್ಬಣ್ಣಶೆಟ್ಟಿನಿವೃತ್ತಮುಖ್ಯಶಿಕ್ಷಕರುವಹಿಸಿದರುಮತ್ತುಪತ್ರಿಕೆಯಪ್ರಾಯೋಜಕತ್ವವನ್ನುಶ್ರೀ.ಪ್ರದೀಪ್ಚಂದ್ರಶೆಟ್ಟಿಸದಸ್ಯರುತಾಲೂಕುಪಂಚಾಯತ್ಕುಂದಾಪುರ, ಕುಂದಾಪುರದಕ್ಷೇತ್ರಸಂಪನ್ಮೂಲವ್ಯಕ್ತಿ ಸತೀಶ್ಶೆಟ್ಟಿಗಾರ್,  ಮುಖ್ಯೋಪಾಧ್ಯಾರಾದಶ್ರೀಮತಿಇಂದಿರಾ, ಆರೋಗ್ಯಇಲಾಖಾಧಿಕಾರಿಚಂದ್ರಶೇಖರ್ಶೆಟ್ಟಿ, ನಿವೃತ್ತಮುಖ್ಯೋಪಾಧ್ಯಾರಾದಶ್ರೀಕೆ.ಮೋಹನ್ಶೆಟ್ಟಿ,ಎಸ್.ಡಿ.ಎಂ.ಸಿಉಪಾಧ್ಯಕ್ಷೆಸುಜಾತಶೆಟ್ಟಿ, ಉಸ್ಮಾನ್ಸಾಹೇಬ್, ಶಿಕ್ಷಕರಾದಎಚ್. ದಿನಕರಶೆಟ್ಟಿ, ಶ್ರೀಮತಿಸುಕನ್ಯಾ ,ಆಶಾ ,ಗಂಗಮ್ಮಎಸ್.ಶೆಟ್ಟಿ, ಗೌರವಶಿಕ್ಷಕಿಯರಾದಚೇತನಾ ,ಕಲ್ಪನಾ,ಸುಮಿತ್ರಮೊದಲಾದವರುಉಪಸ್ಥಿತರಿದ್ದರು.