Monday 21 December 2015

ಬಸವ ಮತ್ತು ಬ್ರಹ್ಮರಾಕ್ಷಸ

ಉದಯವಾಣಿ, Dec 20, 2015,
ಸಾಪ್ತಾಹಿಕ ಸಂಪದ
ಬಸವ ಮತ್ತು ಬ್ರಹ್ಮರಾಕ್ಷಸ
ಉದಯ ಗಾಂವಕರ
__________________________________________________________

ಚೆಲ್ಲಾಪಿಲ್ಲಿಯಾಗಿ ಬಿದ್ದಿರುವ ದೇವರ ಮೂರ್ತಿಗಳನ್ನು ಕಂಡು "ಅಯ್ಯೋ, ಎಂತ ಮಾಡಿದ್ಯಾ ಬಸ್ವಾ' ಎಂದು ಕೂಗಿಕೊಳ್ಳುತ್ತ ತುಳಸಿಕಟ್ಟೆಯ ಕಡೆ ಓಡೋಡಿ ಬರುತ್ತಿದ್ದ ಮಾದೇವಿ ಗಕ್ಕನೆ ನಿಂತಳು. ಬಸವ ತೆಂಗಿನಕಾಯಿ ಕೊಯ್ಯುವಾಗ ಕೆಳಗೆ ನೋಡುವವನೇಅಲ್ಲ. ಈಗಾಗಲೇ ಕೆಳಗೆ ಹಾಕಿದ ಒಂದು ಹಿಂಡಿಗೆಯೇ ತುಳಸಿಕಟ್ಟೆಯನ್ನೂ ಕಟ್ಟೆಯ ಮೇಲೇ ಜೋಡಿಸಿಟ್ಟ ದೇವರ ಮೂರ್ತಿಗಳನ್ನೂ ಅಂಗಳಪೂರ್ತಿ ಚೆಲ್ಲಾಪಿಲ್ಲಿಯಾಗಿ ಹರಡುವಂತೆ ಮಾಡಿದೆ.
ಇನ್ನೊಂದು ಕಾಯಿಹಿಂಡಿಗೆ ತಲೆಯ ಮೇಲೆಲ್ಲಾದರೂ ಬಿದ್ದರೆ ತನ್ನನ್ನು ಬದುಕಿಸಲು ತುಳಸಿಕಟ್ಟೆಯಲ್ಲಿ ದೇವರೂ ಇಲ್ಲ ವೆಂಬುದು ನೆನಪಾಯಿತು ಮಾದೇವಿಗೆ. ಹಾಗೆ, ಗಕ್ಕನೆ ನಿಂತವಳೆ ತಲೆ ಮೇಲೆತ್ತಿ ನೋಡಿದಳು; ತಾನು ಮಾಡಿರುವ ಅನಾಹುತಗಳ ಬಗ್ಗೆ ಯಾವ ಅಂದಾಜೂ ಇಲ್ಲದೆ ಬಸವ ಮರ ಇಳಿಯುತ್ತಿದ್ದ. ಮುಂಚೆಯೇ ಮಾದೇವಿ ಎಚ್ಚರಿಸಿದ್ದಳು- "ಮರ ಹತ್ತುವ ಮುಂಚೆ ಕಾಲು ತೊಳ್ಕ ಬಸ್ವ... ಹಿಮ್ಮಡಿ ಸರೀ ತೊಳ್ಕ... ಎಲ್ಲಿಗೆಲ್ಲ ಹೋಗಿ ಬಂದಿದ್ಯೋ ದೇವ್ರಿಗೇ ಗೊತ್ತು'. ಬಸವ ಹೆಚ್ಚು ಗಮನ ನೀಡದ್ದರಿಂದ "ಹಿಮ್ಮಡಿಯಲ್ಲಿ ಭೂತ ಪ್ರೇತ ಎಲ್ಲ ಇರ್ತದಂತೆ' ಎಂದು ಸೇರಿಸಿದ್ದಳು. ಮಾದೇವಿಯ ಮಾತನ್ನು ಕಿವಿ ಮೇಲೆ ಹಾಕ್ಕೊಳ್ಳದೆ ಬಸವ ತಳೆಬಳ್ಳಿ ಕಾಲಿಗೆ ಸಿಕ್ಕಿಸಿಕೊಂಡು ಸರಸರ ಮರ ಹತ್ತಿದ್ದ.
ಸುತ್ತಲಿನ ನಾಲ್ಕೈದು ಊರುಗಳಲ್ಲಿ ಕಾಯಿಕೊಯ್ಯುವವನೆಂದರೆ ಬಸವ ಒಬ್ಬನೇ. ಹಾಗಂತ, ಬಸವ ಕಾಯಿ ಕೊಯ್ಯುವ ಎಕ್ಸ್‌ಪರ್ಟ್‌ ಅಂತೇನೂ ಅಲ್ಲ. ಬೆಳೆದ ಕಾಯಿಗಳನ್ನು ಮರದ ಮೇಲೆಯೇ ಬಿಟ್ಟು ಎಳೆಯ ಕಾಯಿಗಳನ್ನು ರಪರಪ ಕೊಯ್ದು ಹಾಕುವುದು, ಕಾಯಿ ಒಣಗಿ ಮನೆಯ ಮೇಲೆ ಬೀಳಬಾರದೆಂಬ ಕಾಳಜಿಯಿಂದ ಮನೆಯ ಹತ್ತಿರದ ಮರ ಹತ್ತಲು ಕರೆದರೆ, ಈತನೇ ಮನೆಯ ಮಾಡಿನ ಮೇಲೆ ಬೀಳಿಸಿ ಹಂಚುಗಳನ್ನು ಒಡೆದುಹಾಕುವುದು ಹೀಗೆ, ಬಸವ ಮರ ಹತ್ತಲು ಬಂದರೆ ಒಂದಲ್ಲ ಒಂದು ಅನಾಹುತ ಇದ್ದದ್ದೇ!
ಸುತ್ತಲಿನ ನಾಲ್ಕೈದು ಊರುಗಳಿಗೆ ಬಸವ ಸಂಪರ್ಕಕೊಂಡಿಯೂ ಆಗಿದ್ದ. ಒಂದು ಮನೆಯ ಸುದ್ದಿಯನ್ನು ಇನ್ನೊಂದು ಮನೆಗೆ ತಲುಪಿಸುವ ಪೂರ್ವದಲ್ಲೇ ಆ ಸುದ್ದಿಗೆ ಸಾಕಷ್ಟು ಉಪ್ಪು$, ಖಾರ, ಮಸಾಲೆಗಳನ್ನು ಸೇರಿಸಿಬಿಡುತ್ತಿದ್ದ. ಕೆಲವು ಸಾರಿ ಶೂನ್ಯದಿಂದಲೂ ಸುದ್ದಿಯನ್ನು ಟಂಕಿಸಿ ಯಾರ್ಯಾರನ್ನೋ ಪೇಚಿಗೆ ಸಿಕ್ಕಿಸಿಬಿಡುತ್ತಿದ್ದ. ಪಕ್ಕದೂರಿನಲ್ಲಿ ಯಾರೋ ಸ್ವಲ್ಪ$ ಕೆಮ್ಮಿದರೆ ಈಚೆ ಊರಿಗೆ ಬಂದು ಅವರಿಗೆ ಡೆಂಗ್ಯೂನೋ, ಟೀಬಿಯೋ ಬಂದಿದೆಯಂತೆ, ಬದುಕುಳಿಯುವುದು ಅನುಮಾನವಂತೆ ಎಂತೆಲ್ಲಾ ಹೇಳಿ ಮನೆಗೆ ಸಂಬಂಧಿಕರು ಜಮಾಯಿಸುವಂತೆ ಮಾಡುತ್ತಿದ್ದ.
ಮೊನ್ನೆ ಮೊನ್ನೆಯಷ್ಟೇ ಕತಗಾಲಿನ ಗ್ರಾಮ ಪಂಚಾಯಿತಿ ಸದಸ್ಯೆ ಪದ್ಮಜಾ ಕಾಲು ಜಾರಿ ಬಾವಿಗೆ ಬಿದ್ದ ಸುದ್ದಿ ಬಸವನ ಬಾಯಿಂದಲೇ ಆಚೀಚೆಯ ಊರುಗಳಿಗೆ ಗೊತ್ತಾದದ್ದು. ಅದು ಕಾಲು ಜಾರಿ ಬಿದ್ದ ಕೇಸ್‌ ಅಲ್ಲವೆಂತಲೂ ಇದರ ಹಿಂದೆ ಪಂಚಾಯಿತಿ ರಾಜಕೀಯ ಇದೆ ಎಂತಲೂ ಮಾರನೆಯ ದಿನ ಹೆಚ್ಚುವರಿ ವಿವರಗಳನ್ನು ಸೇರಿಸಿದ್ದ. ರಾಜಿ ಸೂತ್ರದಂತೆ‌ ಅರ್ಧ ಅವಧಿಯ ನಂತರ ಪದ್ಮಜಾ ಗ್ರಾಮ ಪಂಚಾಯಿತಿಯ ಅಧ್ಯಕ್ಷಳಾಗಬೇಕಿತ್ತೆಂತಲೂ ಇದನ್ನು ತಪ್ಪಿಸಲಿಕ್ಕಾಗಿಯೇ ಬಾವಿಗೆ ಅವರನ್ನು ತಳ್ಳಲಾಯಿತೆಂದೂ ರೋಚಕಕತೆಯನ್ನು ಕಟ್ಟಿ, ಆ ಕತೆಯನ್ನು ತರ್ಕಬದ್ಧ ತುಣುಕುಗಳನ್ನಾಗಿ ಕತ್ತರಿಸಿ ಊರಿನ ಅಲ್ಲಲ್ಲಿ ಚದುರಿಬಿಟ್ಟಿದ್ದ. ಹೀಗೆ ಚದುರಿಬಿಟ್ಟ ತುಣುಕುಗಳೆಲ್ಲ ಸೇರಿ ಇಡಿಯಾದ ಆಘಾತಕಾರಿ ಸುದ್ದಿಯಾಗುವಂತೆ ಮತ್ತು ಆ ಇಡೀ ಸುದ್ದಿ ಯಾವುದೇ ಒಬ್ಬ ವ್ಯಕ್ತಿ ಸೃಷ್ಟಿಸಿದ್ದಲ್ಲವೆಂಬಂತೆ ನಂಬಿಸುವ ಹಾಗೆ ವ್ಯವಸ್ಥಿತವಾಗಿ ಪ್ರಸಾರ ಮಾಡುವ ಅಪ್ರತಿಮ ಪ್ರತಿಭೆ ಬಸವನಲ್ಲಿತ್ತು.
ಬಾವಿಯಲ್ಲಿ ಪದ್ಮಜಾಳ ಚಪ್ಪಲಿಗಳ ಬದಲು ಅವಳ ಗಂಡನ ಚಪ್ಪಲಿಗಳು ಬಿದ್ದಿದ್ದವೆಂತಲೂ, ಪದ್ಮಜಾಳಿಗೆ ಈಜು ಬರುತ್ತಿತ್ತೆಂತಲೂ, ಪದ್ಮಜಾಳ ಮನೆಗೆ ಪಂಚಾಯತಿ ಟ್ಯಾಂಕಿನಿಂದ ದಿನದ ಇಪ್ಪತ್ನಾಲ್ಕು ಗಂಟೆಯೂ ನಲ್ಲಿ ನೀರು ಬರುತ್ತಿದ್ದರಿಂದ ರಾತ್ರಿ ಬಾವಿಗೆ ಹೋಗುವ ಅಗತ್ಯವೇ ಇರಲಿಲ್ಲವೆಂತಲೂ, ಪದ್ಮಜಾ ಬಾವಿಗೆ ಬಿದ್ದು ಸತ್ತಮೇಲೆ ಅವಳ ಮೊಬೈಲ್‌ ಫೋನ್‌ ಕೂಡಾ ಕಾಣೆಯಾಗಿದೆಯೆಂತಲೂ ಎಂತೆಂತದೋ ಸುದ್ದಿಗಳನ್ನು ತನ್ನ ಮಾಯದ ಜೋಳಿಗೆಯಿಂದ ತೆಗೆದು ಗಾಳಿಯಲ್ಲಿ ತೇಲಿಬಿಟ್ಟಿದ್ದ. ಮನಸ್ಸಿಲ್ಲದಿದ್ದರೂ ಪದ್ಮಜಾಳ ಕುಟುಂಬಿಕರು ಪ್ರಕರಣದ ಕುರಿತು ಕುಮಟೆಯ ಪೋಲೀಸ್‌ಠಾಣೆಯಲ್ಲಿ ಪಿರ್ಯಾದು ನೀಡುವಂತೆ ಮಾಡಿದ್ದ.
ಬಸವನ ಸುದ್ದಿ ಇಡಿಯಾಗಿ ಸುಳ್ಳಾಗಿರುವುದಿಲ್ಲ ಎಂಬ ಕಾರಣದಿಂದಲೋ ಕೇಳಲು ರಸವತ್ತಾಗಿರುವುದರಿಂದಲೋ ಅಥವಾ ಅಸಾಮಾನ್ಯವಾದದ್ದು ಘಟಿಸುತ್ತಲೇ ಇರಬೇಕೆಂಬ ಅತೀವ ಆಸೆ ಭೂಲೋಕದ ಎಲ್ಲರಲ್ಲೂ ಅಷ್ಟಿಷ್ಟು ಇರುವುದರಿಂದಲೋ ಬಸವನಿಗೆ ಕೇಳುಗರ ಸಂಖ್ಯೆ ಕಡಿಮೆಯಾಗಿರಲಿಲ್ಲ. ಬಸವನ ಸುದ್ದಿಯ ವಿಶ್ವಾಸಾರ್ಹತೆಯನ್ನು ಇದುವರೆಗೂ ಅವನೆದುರು ಯಾರೂ ಪ್ರಶ್ನಿಸಿರಲಿಲ್ಲ.
ದೆವ್ವ-ಭೂತಗಳ ಕತೆ ಹೇಳುವುದರಲ್ಲೂ ಬಸವ ನಿಸ್ಸೀಮ. ಕೆಲವೊಮ್ಮೆ ಭಯಾನಕವಾಗಿ, ಇನ್ನು ಕೆಲವು ಸಲ ದೆವ್ವ-ಭೂತಗಳನ್ನೆಲ್ಲ ಮಾಮೂಲು ಮನುಷ್ಯರ ಮಟ್ಟಕ್ಕೆ ಇಳಿಸಿ ರಮ್ಯ ಕತೆಗಳನ್ನು ಸೃಷ್ಟಿಸುವಾಗ ಬಸವ ಒಬ್ಬ ಕುಶಲ ಕಲಾಕಾರನಾಗುತ್ತಿದ್ದ. ಯಾಣದ ಹೆಬ್ಟಾರರ ತೋಟಕ್ಕೊಮ್ಮೆ ಕಾಯಿಕೊಯ್ಯಲು ಹೋದಾಗ ತೆಂಗಿನ ಮರದ ಮೇಲೆ ಬ್ರಹ್ಮರಾಕ್ಷಸ ಹೆಣ್ಣು ದೆವ್ವವೊಂದನ್ನು ಕಂಡಿರುವುದಾಗಿ ಬಸವ ಆಗಾಗ ಹೇಳುತ್ತಿದ್ದ.
ಬ್ರಹ್ಮರಾಕ್ಷಸ ದೆವ್ವಗಳು ಎತ್ತರದ ಮರಗಳು, ಕಟ್ಟಡಗಳು, ಗುಡ್ಡಗಳಲ್ಲಿ ಸಂಸಾರ ಹೂಡಿರುತ್ತವೆಂತಲೂ ಯಾಣದ ಎತ್ತರದ ಬಂಡೆಗಳ ಮೇಲೆ ವಾಸಿಸಿದ್ದ ದೆವ್ವಗಳು ಬಂಡೆಯ ಬುಡದಲ್ಲಿ ನಿಯಮಿತವಾಗಿ ಪೂಜೆ-ಪುನಸ್ಕಾರಗಳು ಪ್ರಾರಂಭವಾದ ನಂತರ ದೈವೀಶಕ್ತಿಗೆ ಹೆದರಿ ಅಲ್ಲಿಂದ ಪಲಾಯನ ಮಾಡಿದವೆಂತಲೂ, ಹೀಗೆ ನಿರಾಶ್ರಿತವಾದ ದೆವ್ವಗಳು ಹೆಬ್ಟಾರರ ತೋಟದ ಎತ್ತರದತೆಂಗಿನ ಮರದ ಮೇಲೆ ಬಿಡಾರ ಹೂಡಿವೆಯೆಂತಲೂ ಹೇಳುತ್ತಿದ್ದ. ಹೆಬ್ಟಾರರ ತೋಟದಲ್ಲಿ ಒಮ್ಮೆ ಎತ್ತರದ ತೆಂಗಿನ ಮರವೊಂದನ್ನು ಏರಿದಾಗ ಬ್ರಹ್ಮರಾಕ್ಷಸ ದೆವ್ವವೊಂದನ್ನು ಕಂಡಿರುವುದಾಗಿ ಕಣ್ಣಿಗೆಕಟ್ಟಿದಂತೆ ಬಸವ ಎಷ್ಟು ನಿಪುಣತೆಯಿಂದ ಕತೆ ಹೇಳುತ್ತಿದ್ದನೆಂದರೆ, ತಾನು ದೆವ್ವಗಳಿಗಿಂತಲೂ ಬಲಿಷ್ಠನೆಂಬುದನ್ನು ನಿರೂಪಿಸುವುದರ ಜೊತೆಗೆ ಎದೆಯಲ್ಲಿ ಝಲ್‌ ಎನ್ನಿಸುವ ಭಯವನ್ನು ಹುಟ್ಟಿಸುತ್ತಿದ್ದ.
ಯಾರಾದರೂ ಎತ್ತರದ ತೆಂಗಿನ ಮರ ಹತ್ತಿದ್ದಾಗ ದೆವ್ವಗಳನ್ನು ಕಂಡರೆ ಭಯಗ್ರಸ್ಥರಾಗಿ ಅವಸರದಲ್ಲಿ ಮರ ಇಳಿಯಬಾರದಾಗಿಯೂ ಆ ಮರದ ಬೆಳೆದ ಕಾಯಿಗಳನ್ನಷ್ಟೇ ಕೊಯ್ದರೆ ಯಾವ ತೊಂದರೆಯೂ ಆಗದು ಎಂತಲೂ ಸಲಹೆ ನೀಡುತ್ತಿದ್ದ. ಅಪ್ಪಿತಪ್ಪಿಯೂ ಅರೆಬೆಳೆದ ಕಾಯಿಗಳನ್ನಾಗಲೀ, ಸಿಯಾಳಗಳನ್ನಾಗಲೀ ಕೀಳಬಾರದೆಂತಲೂ ಸಿಯಾಳಗಳೆಂದರೆ ಬ್ರಹ್ಮರಾಕ್ಷಸ ದೆವ್ವಗಳಿಗೆ ಬಹಳ ಪ್ರಿಯವಾಗಿರುವುದರಿಂದ ಅವುಗಳಿಗೆ ಕೈ ಹಾಕಿದರೆ ಮರದಿಂದ ಉರುಳಿ ಜೀವ ಕಳೆದುಕೊಳ್ಳುವುದು ಗ್ಯಾರಂಟಿ ಎಂತಲೂ ಎಚ್ಚರಿಸುತ್ತಿದ್ದ.
ವೃತ್ತಿಯಲ್ಲಿ ತನಗೆ ಪೈಪೋಟಿ ನೀಡಬಲ್ಲ ಇನ್ನೊಬ್ಬ ಹುಟ್ಟಿಕೊಳ್ಳದಂತೆ ನೋಡಿಕೊಳ್ಳುವುದೂ ಅವನ ದೆವ್ವದ ಕತೆಗಳ ಉದ್ದೇಶವಿರಬಹುದೆಂಬ ಅನುಮಾನ ಹುಟ್ಟದಂತೆ ಕತೆಗಳನ್ನು ಹೆಣೆಯುವುದು ಬಸವನಿಗೆ ತೆಂಗಿನ ಮರ ಹತ್ತಿದಷ್ಟೇ ಸಲೀಸು.
"ಎಂಥಾ ಮಾಡೆª ನೋಡು' ಎಂದು ಮಾದೇವಿ ಹೇಳಿದ್ದು ಕೇಳಿ ಬಸವ ಮರ ಇಳಿಯುತ್ತಲೇ ಕೆಳಗೆ ನೋಡಿದ. ದೇವರ ಮೂರ್ತಿಗಳೆಲ್ಲ ಅಂಗಳದಲ್ಲಿ ಅನಾಥವಾಗಿ ಬಿದ್ದಿವೆ. ತುಳಸೀಕಟ್ಟೆ ಮುರಿದು ಗಿಡದ ಸಮೇತ ನೆಲಕ್ಕುರುಳಿದೆ. ಬಸವನ ಎದೆಯಲ್ಲಿ ಧಸಕ್ಕೆಂದ ಹಾಗಾಯಿತು.
ಸರಸರನೆ ಇಳಿದು ದೇವರ ಮೂರ್ತಿಗಳನ್ನೆಲ್ಲ ಒಟ್ಟುಗೂಡಿಸಲು ಹೋದ ಬಸವನನ್ನು ಮಾದೇವಿ ತಡೆದಳು- "ನೀ ಮಾಡಿದ್ದು ಸಾಕು ಮಾರಾಯ... ಒಂದು ಮರ ಹತ್ತಿದ್ಯಲ್ಲ ಮೂವತ್ತು ರೂಪಾಯಿ ತಕ್ಕೊಂಡ ಹೋಗು... ನೀ ಮಾಡª ಕೆಲ್ಸಕ್ಕೆ ಈಗ ಪುರೋಹಿತರ ಕರೆದು ಹೋಮ ಗೀಮ ಹಾಕಿ ಸರಿಮಾಡ್ಕಬೇಕು...'
ಮಾದೇವಿಗೆ ದೇವರಗಿಂತ ಗಂಡನದ್ದೇ ಹೆದರಿಕೆ. ಗಂಡ ಬೇಡ ಅಂದಿದ್ರೂ ಮಕ್ಕಳಾಡುವ ಅಂಗಳಬದಿಯ ಮರ ಎಂದು ಬಸವನಿಗೆ ಕಾಯಿ ಕೊಯ್ಯಲು ಹೇಳಿದ್ದಳು. ಮಾದೇವಿಯ ಗಂಡ ಮಾಬ್ಲಿನೋ ಜುಗ್ಗಾತಿಜುಗ್ಗ. ಮರಕ್ಕೆ ಮೂವತ್ತು ರೂಪಾಯಿಯಂತೆ ದುಡ್ಡು ತೆಗೆದುಕೊಳ್ಳುವ ಬಸವನನ್ನು ಐದೇ ಕಾಯಿಗಳಿರುವ ಒಂದೇ ಹಿಂಡಿಗೆಯನ್ನು ಕೊಯ್ಯಲು ಕರೆಸಿದರೆ ದುಬಾರಿಯಾಗುತ್ತದೆ ಎಂಬ ಕಾರಣದಿಂದಲೇ ಬಸವನಿಗೆ ಬರಹೇಳುವುದು ಬೇಡವೆಂದಿದ್ದ. ಈಗ ಈ ತರಹದ ಅನಾಹುತವಾಗಿರುವುದನ್ನು ಕಂಡು ಕೆಂಡಾಮಂಡಲನಾಗದೆ ಇರುತ್ತಾನೆಯೇ?
____________________________

              
ಪುರೋಹಿತರನ್ನೂ ಹೊನ್ನಪ್ಪ ಗಾವಡಿಯನ್ನೂ ಒಟ್ಟಿಗೆ ಸೇರಿಸಿ ನೆಲಕ್ಕುರುಳಿದ ತುಳಸಿಕಟ್ಟೆಯನ್ನು ಮತ್ತೆ ಮೊದಲಿನಂತೆ ಪ್ರತಿಷ್ಠಾಪಿಸುವುದೆಂದರೆ ಸುಲಭವೇ? ಇವರಿಬ್ಬರನ್ನೂ ಒಟ್ಟಿಗೆ ಸೇರಿಸಿ ಮಾಬ್ಲ ದೊಡ್ಡದೊಂದು ಹೊಣೆಗಾರಿಕೆಯನ್ನು ಹಸ್ತಾಂತರಿಸಿ ನಿರಾಳನಾಗಿದ್ದ. ಅಂತೂ, ಬಸವ ಮಾಡಿದ ಅನಾಹುತಗಳನ್ನೆಲ್ಲ ಸರಿಮಾಡುವ ಕೆಲಸ ಪ್ರಾರಂಭವಾಯಿತು. ಪುರೋಹಿತರು ಬರುತ್ತಲೇ ಸ್ವಲ್ಪವೂ ಸಮಯ ವ್ಯಯ ಮಾಡದೆ ಮಂತ್ರೋಚ್ಚಾರಣೆ ಪ್ರಾರಂಭಿಸಿದ್ದರು. ಚದುರಿಬಿದ್ದಿದ್ದ ಮೂರ್ತಿಗಳನ್ನೆಲ್ಲ ನೀರಿನ ಪಾತ್ರೆಯಲ್ಲಿ ಮುಳುಗಿಸಿಟ್ಟು ಮತ್ತೊಂದಿಷ್ಟು ಮಂತ್ರಗಳನ್ನು ಉದುರಿಸಿದರು. ಈ ಹಿಂದೆ ತುಳಸಿಕಟ್ಟೆಯಲ್ಲಿದ್ದ ದೇವರುಗಳನ್ನೆಲ್ಲ ತಾವೇ ತಂದಿದ್ದ ತಾಮ್ರದ ಬಿಂದಿಗೆಯಲ್ಲಿ ಬಂಧಿಸಿಟ್ಟುರುವುದಾಗಿ ವಿವರಣೆ ನೀಡುತ್ತಾ ಮುರಿದುಬಿದ್ದ ಕಟ್ಟೆಯನ್ನು ಮರುಜೋಡಿಸುವ ಕೆಲಸ ಶುರುಮಾಡಿಕೊಳ್ಳಲು ಹೊನ್ನಪ್ಪ ಗಾವಡಿಗೆ ಅನುವುಮಾಡಿಕೊಟ್ಟರು. ಮುರಿದುಹೋದ ಭಾಗಕ್ಕೆ ಸಿಮೆಂಟು ಮರಳಿನ ಮುಲಾಮು ಸವರಿ ಹೊನ್ನಪ್ಪ ಗಾವಡಿ ಕಟ್ಟೆಯನ್ನು ಮರುಜೋಡಿಸಿದ. ಸುತ್ತೆಲ್ಲ ಚೆಲ್ಲಿದಂತಿದ್ದ ಸಿಮೆಂಟು ಮರಳು ಮತ್ತಿತರ ಸಾಮಗ್ರಿಗಳನ್ನು ತಕ್ಕಮಟ್ಟಿಗೆ ಸ್ವಚ್ಛಗೊಳಿಸಿ ಕಟ್ಟೆಯನ್ನು ಪುನಃ ಪುರೋಹಿತರಿಗೆ ಬಿಟ್ಟುಕೊಟ್ಟ. ಹೊನ್ನಪ್ಪ ಮುಟ್ಟಿದ ಕಟ್ಟೆಯನ್ನು ಮತ್ತೊಂದಿಷ್ಟು ಮಂತ್ರೋಚ್ಚಾರಣೆ, ಉದಕ ಪ್ರೋಕ್ಷಣೆಗಳ ಮೂಲಕ ಶುದ್ಧಗೊಳಿಸಿದ ನಂತರ ಪಾತ್ರೆಯಲ್ಲಿ ಮುಳುಗಿಸಿಟ್ಟ ದೇವರ ಮೂರ್ತಿಗಳನ್ನೆಲ್ಲ ಮತ್ತೆ ಮೊದಲಿನಂತೆ ಜೋಡಿಸಿದರು. ಬಿಂದಿಗೆಯಲ್ಲಿ ಬಂಧಿಸಿಟ್ಟಿರುವ ದೇವರುಗಳನ್ನು ಆ ಮೂರ್ತಿಗಳಿಗೆ ಅವಾಹಿಸುತ್ತಿರುವ ಮಾಹಿತಿಯನ್ನು ಮಾಬ್ಲನಿಗೂ ಮದೇವಿಗೂ ತಿಳಿಸಿ ಮಂತ್ರೋಚ್ಚಾರಣೆಯೊಂದಿಗೆ ಅವಾಹನೆಯ ವಿಧಿ-ವಿಧಾನಗಳನ್ನು ಪೋರೈಸಿದರು. ಆನಂತರ ಪೂಜೆಯನ್ನು ನೆರವೇರಿಸಿದರು.
ವಿಧಿ-ವಿಧಾನಗಳು ಸಾಂಗವಾಗಿ ನೆರೆವೇರಿದ ಸಮಾಧಾನದಲ್ಲಿ ಮಾಬ್ಲ ಪುರೋಹಿತರಿಗೆ ದಕ್ಷಿಣೆ ನೀಡಿ ಸಾಷ್ಟಾಂಗ ನಮಸ್ಕರಿಸಿದ. ಹೊನ್ನಪ್ಪ ಗಾವಡಿಗೆ ಕೂಲಿ ನೀಡಿ ಕಳುಹಿಸಿದ.
ಇಷ್ಟೊತ್ತಿಗೆ ಸಂಜೆ ಆರುವರೆ ಆಯಿತು. ಉಸ್ಸಪ್ಪ ಎಂದು ಮಾಬ್ಲ ಚಿಟ್ಟೆಯ ಮೇಲೆ ಕುಳಿತು ಇಡೀ ದಿನದ ಸಾಧನೆಯನ್ನು ಮತ್ತೊಮ್ಮೆ ಮೆಲಕುಹಾಕಿದ. ಇಂದು ಬರುವೆ ನಾಳೆ ಬರುವೆ ಎನ್ನುತ್ತಾ ಗ್ರಹ ಪ್ರವೇಶದ ಮುಂಚಿನ ದಿನದವರೆಗೂ ಗಿಲಾಯಿ ಕೆಲಸ ಬಾಕಿ ಇಟ್ಟುಕೊಳ್ಳುವ ಹೊನ್ನಪ್ಪ ಗಾವಡಿಯನ್ನೂ ಸೈಕಲ್ಲು ತುಳಿಯುವಾಗಲೂ ಮಂತ್ರಗಳನ್ನು ಮಣಮಣಿಸುತ್ತಾ ತನ್ನ ಪುರುಸೊತ್ತಿಲ್ಲದ ವೇಳಾಪಟ್ಟಿಗೆ ಹೊಂದಿಕೊಳ್ಳಲು ಹರಸಾಹಸ ಪಡುವ ಪುರೋಹಿತರನ್ನೂ ಒಟ್ಟಿಗೆ ಹಿಡಿದು ಭಗ್ನವಾದ ತುಳಸಿಕಟ್ಟೆಯನ್ನು ಇಷ್ಟು ತುರ್ತಾಗಿ ಸರಿಪಡಿಸಿಕೊಂಡದ್ದು ಸಾಮಾನ್ಯ ಸಾಧನೆಯೇ?! ಮಾಬ್ಲನಿಗೆ ಬೇರೆ ದಾರಿಯೂ ಇರಲಿಲ್ಲ ಬಿಡಿ. ಅಂಗಳದಲ್ಲಿ ಮುರಿದಿಬಿದ್ದ ತುಳಸಿಕಟ್ಟೆಯನ್ನಿಟ್ಟುಕೊಂಡು ರಾತ್ರಿ ನಿದ್ರೆ ಮಾಡಲಾದರೂ ಸಾಧ್ಯವಿತ್ತೆ? ಒಡಕಲು ತುಳಸಿಕಟ್ಟೆಯನ್ನು ಕಂಡು ಮಾಬ್ಲ ಎಷ್ಟು ಹೆದರಿದ್ದನೆಂದರೆ, ಆ ಹೆದರಿಕೆಯಲ್ಲಿ ಈ ಎಲ್ಲ ಅನಾಹುತಗಳಿಗೆ ಕಾರಣನಾದ ಬಸವನಿಗಾಗಲಿ ಅವನನ್ನು ಬರಹೇಳಿದ ಮಾದೇವಿಗಾಗಲಿ ಬೈಯ್ಯಲು ನೆನಪಾಗಲೇ ಇಲ್ಲ. ಜುಗ್ಗಾತಿಜುಗ್ಗನಾದರೂ ಖರ್ಚಾಗುವ ದುಡ್ಡಿನ ಚಿಂತೆ ಉಂಟಾಗಲಿಲ್ಲ. ಮನೆಯ ಮುಂದೆ ತುಳಸಿಯೇ ಇಲ್ಲವೆಂದರೆ ಇರುವ ದೆವ್ವಗಳೆಲ್ಲ ಬಂದುಸೇರಿಕೊಳ್ಳಲಿಕ್ಕಿಲ್ಲವೇ?
ತುಳಸಿಕಟ್ಟೆ ಅಂಗಳದಲ್ಲಿ ಮತ್ತೆ ಮೊದಲಿನಂತೆ ವಿರಾಜಮಾನವಾದ ಸಮಾಧಾನದಲ್ಲಿ ಮಾಬ್ಲ ಮತ್ತೆ ಮೊದಲಿನ ಮನುಷ್ಯನಾದ. ಪುರೋಹಿತರಿಗೆ ಕೊಟ್ಟ ದಕ್ಷಿಣೆ, ಹೊನ್ನಪ್ಪ ಗಾವಡಿಗೆ ನೀಡಿದ ಕೂಲಿ ಎಲ್ಲವೂ ಮೈಮೇಲೆ ಎಳೆದುಕೊಂಡ ಖರ್ಚಲ್ಲವಾ ಎಂದು ಯೋಚಿಸಿದ. ಬಸವನ ಮೇಲೆ ವಿಪರೀತ ಸಿಟ್ಟು ಬಂತು. ಫೋನು ತೆಗೆದುಕೊಂಡು ಬಸವನ ನಂಬರು ಒತ್ತಿದ. ಬಸವ ಫೋನು ಎತ್ತುತ್ತಲೆ ಮನಸಾರೆ ಬಯ್ದು ಕಳೆದುಕೊಂಡ ದುಡ್ಡಿನ ಲೆಕ್ಕ ಚುಕ್ತಾ ಮಾಡಿಕೊಳ್ಳಬೇಕೆಂಬ ತವಕ ಫೋನಿನ ರಿಂಗಣಿಸುವಿಕೆಯ ಅವಧಿಯನ್ನು ದೀರ್ಘವಾಗಿಸಿತು. ಬಸವ ಫೋನು ಎತ್ತಲಿಲ್ಲ. ಸಾಮಾನ್ಯವಾಗಿ ಬಸವ ಫೋನು ಎತ್ತದೇ ಇರುವವನಲ್ಲ. ಅವನ ದೇಹದ ಮೇಲೆ ತಳೆಬಳ್ಳಿ, ಮುಂಡಾಸು ಮತ್ತು ಕತ್ತಿ ಸಿಕ್ಕಿಸಿಕೊಳ್ಳುವ ಉಡಿಕೊಕ್ಕೆಗೆ ಎಂತಹ ಸ್ಥಾನವಿತ್ತೋ ಅಷ್ಟೇ ಮಹತ್ವದ ಸ್ಥಾನ ಸೊಂಟದಲ್ಲಿ ಸಿಕ್ಕಿಸಿಕೊಳ್ಳುವ ಸÀಂಚಿಗೆ ಮತ್ತು ಅದರೊಳಗೆ ಅವಿತಿರುವ ಮೊಬೈಲು ಫೋನಿಗೂ ಇತ್ತು. ಮರದ ಮೇಲೆ ಇದ್ದಾಗಲೂ ಆತ ಕರೆಬಂದರೆ ಸಂಚಿಯಲ್ಲಿರುವ ಮೂರು ಬಾರಿ ಮಡಚಿದ ಪ್ಲಾಸ್ಟಿಕ್ಕಿನ ಚೀಲದಿಂದ ಮೊಬೈಲು ತೆಗೆದು ಕರೆಸ್ವೀಕರಿಸುತ್ತಿದ್ದ. ಮಾಬ್ಲ ಮತ್ತೊಮ್ಮೆ ಪ್ರಯತ್ನಿಸಿದ. ಈಗಲೂ ಸ್ವೀಕರಿಸಲಿಲ್ಲ. ಇನ್ನೊಮ್ಮೆ ಪ್ರಯತ್ನಿಸುತ್ತಿದ್ದನೋ ಏನೋ ಅಷ್ಟರಲ್ಲಿ ಮಾದೇವಿ ಗಾಬರಿಯಿಂದ ಧಾವಿಸಿ ಬಂದಿದ್ದರಿಂದ ಫೋನನ್ನು ಮಾದೇವಿಯ ಕೈಗೆ ಕೊಟ್ಟು ಒಳಗಿಡುವಂತೆ ಸನ್ನೆ ಮಾಡಿದ. ಏನನ್ನೋ ಹೇಳಲು ಹೊರಟ ಮಾದೇವಿ ಗಂಡನ ದೂರ್ವಾಸವದನವನ್ನು ಕಂಡು ಸುಮ್ಮನಾದಳು. ಬಸವನಿಗೆ ಬೈಯ್ಯಬೇಕೆಂದುಕೊಂಡ ಎಲ್ಲ ಬಯ್ಗಳನ್ನೂ ಮಾದೇವಿಗೆ ವರ್ಗಾಯಿಸಬೇಕೆಂದುಕೊಂಡ ಮಾಬ್ಲ ಅವಳ ಮುಖದಲ್ಲಿನ ಗಾಬರಿಯನ್ನು ಓದಿ `ಎಂತಾಯ್ತೆ?’ ಅಂದ.
ಅಂಗಳದಲ್ಲಿ ಬಿದ್ದ ಸಿಮೆಂಟು, ಮರಳುಗಳನ್ನು ಗುಡಿಸುತ್ತಿರುವಾಗ ಯಾರೋ ಗುಣಗುಣಿಸುತ್ತಿರುವ ಸದ್ದು ಕೇಳಿಸಿತೆಂದೂ ಹತ್ತಿರದಲ್ಲೆಲ್ಲೂ ಮನೆಯಾಗಲೀ ಜನರಾಗಲೀ ಇಲ್ಲದಿರುವಾಗ ಈ ಸದ್ದು ಎಲ್ಲಿಂದ ಬರುತ್ತಿದೆ ಎಂದು ಗಮನವಿಟ್ಟು ಕೇಳಿದಾಗ ಆ ಸದ್ದು ಮರದ ಮೇಲಿಂದಲೇ ಬರುತ್ತಿರುವಂತೆ ಅನ್ನಿಸಿತೆಂದೂ ಮಾದೇವಿ ಹೇಳಿದಳು. ಮಾಬ್ಲನಿಗೆ ಸಣ್ಣದಾಗಿ ನಡುಕ ಶುರುವಾಯಿತು. ಈಗಲೂ ಸದ್ದು ಬರುತ್ತಿದೆಯೇ ಎಂದು ತಿಳಿಯಲು ಅಂಗಳದಲ್ಲಿ ನಿಂತು ಕಿವಿ ಕೊಟ್ಟ. ಅಂತಹ ಯಾವ ಸದ್ದೂ ಇರಲಿಲ್ಲ. ಬ್ರಹ್ಮರಾಕ್ಷಸ ದೆವ್ವಗಳು ಯಾಣದ ಬ್ರಹದಾಕಾರದ ಬಂಡೆಗಳಿಂದ ಎತ್ತರದ ತೆಂಗಿನ ಮರಗಳಿಗೆ ಬಿಡಾರ ಬದಲಿಸಿವೆ ಎಂದು ಬಸವ ಹೇಳಿದ್ದು ನೆನಪಾಯಿತು. ತುಳಸಿಕಟ್ಟೆ ಒಡೆದು ದೇವರೇ ನಿರಾಶ್ರಿತರಾದ ಪರಿಸ್ಥಿತಿಯ ಲಾಭ ಪಡೆದು ಈ ಬ್ರಹ್ಮ ರಾಕ್ಷಸ ದೆವ್ವಗಳು ನಮ್ಮ ಅಂಗಳದ ತೆಂಗಿನ ಮರಕ್ಕೇ ಒಕ್ಕರಿಸಿಬಿಟ್ಟವೋ ಎಂಬ ಚಿಂತೆ ಹುಟ್ಟಿಕೊಂಡಿತು. ಹಾಗದರೆ, ತುಳಸಿಕಟ್ಟೆಯ ಪುನರಪ್ರತಿಷ್ಠಾಪನೆ ಶಾಸ್ತ್ರೋಕ್ತವಾಗಿ ನಡೆಯಲಿಲ್ಲವೇ? ವಿಧಿ-ವಿಧಾನಗಳಲ್ಲಿ ಏನಾದರೂ ಊನವಾಯಿತೇ? ಮಾಬ್ಲನ ತಲೆಯೆಂಬುದು ಅನುಮಾನಗಳ ಗಿರಣಿಯಂತಾಯ್ತು. ಈ ಬ್ರಹ್ಮರಾಕ್ಷಸ ದೆವ್ವಗಳು ಎಷ್ಟು ಅಪಾಯಕಾರಿಯಾಗಿರುತ್ತವೋ ಅಷ್ಟೇ ಹೆಡ್ಡ ಶಿಖಾಮಣಿಗಳೂ ಆಗಿರುತ್ತವೆ ಎಂದು ಯಾವುದೋ ಕತೆಯಲ್ಲಿ ಕೇಳಿದ ನೆನಪು ಮಾಬ್ಲನಿಗೆ. ತನ್ನನ್ನು ಕೊಲ್ಲಲು ಬಂದ ಬ್ರಹ್ಮರಾಕ್ಷಸ ದೆವ್ವದ ಎದುರು ಕನ್ನಡಿ ತೋರಿಸಿದ ಕ್ಷೌರಿಕ `ನಿನ್ನಂತಹ ನೂರಾರು ಬ್ರಹ್ಮ ರಾಕ್ಷಸರನ್ನು ಹಿಡಿದಿಟ್ಟಿರುವೆ’ ಎಂದು ಹೆದರಿಸಿದ ಕತೆಯದು. ಕ್ಷೌರಿಕನಿಗೆ ಹೆದರಿಕೊಂಡು ಅವನ ಮನೆಕೆಲಸದವನಾದ ಬ್ರಹ್ಮ ರಾಕ್ಷಸನ ಕತೆ ಮಾಬ್ಲನಿಗೆ ಹೇಗೆ ಆ ಗಳಿಗೆಯಲ್ಲಿ ನೆನಪಿಗೆ ಬಂತೋ?
ಮಾದೇವಿ ಭುಜದ ಮೇಲೆ ಕೈ ಇಟ್ಟು ಒತ್ತಿದ್ದರಿಂದ ಮಾಬ್ಲ ಕತೆಯಿಂದ ಹೊರಬಂದು ಎಚ್ಚರಾದ. ಮಾದೇವಿ ತೆಂಗಿನ ಮರದ ಕಡೆ ಬೆರಳು ತೋರಿಸಿದಳು. ಹೌದು, ತೆಂಗಿನ ಮರದಿಂದಲೇ ಸದ್ದು ಬರುತ್ತಿದೆ. ಯಾರೋ ಗುಣಗುಣಿಸುತ್ತಿರುವ ಸದ್ದು ಎಂದು ಸ್ಪಷ್ಟವಾಗಿ ಹೇಳಲಾಗದಿದ್ದರೂ ಇನ್ಯಾವುದೇ ಮೃಗ-ಪಕ್ಷಿಯದಲ್ಲವೆಂದು ಖಚಿತವಾಗಿ ಹೇಳಬಹುದಾಗಿತ್ತು. ದೊಡ್ಡದೊಂದು ಕಂಟಕವು ಎದುರಲ್ಲೇ ಬಂದು ನಿಂತಿರುವಂತೆ ಅನ್ನಿಸಿದರೂ, ಹೆಂಡತಿಯೆದುರು ತನ್ನ ಭಯವನ್ನು ತೋರಿಸಿಕೊಳ್ಳಬಾರದೆಂಬ ಗಂಡುಪ್ರಜ್ಞೆ ಅಷ್ಟೊತ್ತಿಗೆ ಎಚ್ಚರವಾದದುರಿಂದ, ತನ್ನ ಭಯವನ್ನು ತೋರಿಸಿಕೊಳ್ಳದೆ ` ಮೊಬೈಲು ತಾ, ಬಸ್ವನಿಗೊಂದು ಫೋನು ಮಾಡ್ಬೇಕು’ ಎಂದ. ಸ್ವಲ್ಪ ಹೊತ್ತಿನ ಹಿಂದಷ್ಟೇ ಬಸವ ಕರೆಸ್ವೀಕರಿಸದೇ ಇರುವುದು ಮರತೆ ಹೋದಂತಿತ್ತು ಮಾಬ್ಲನಿಗೆ. ಮಾದೇವಿ ಪ್ರಶ್ನಾರ್ಥಕವಾಗಿ ಮುಖ ನೋಡಿದ್ದನ್ನು ಗಮನಿಸಿ `ಬ್ರಹ್ಮ ರಾಕ್ಷಸ ದೆವ್ವಕ್ಕೆ ಪಾಠ ಕಲಿಸಬೇಕೆಂದ್ರೆ ಬರಗದ್ದೆ ಸುಬ್ರಹ್ಮಣ್ಯ ಜೋಯಿಸರೇ ಬೇಕು. ಅವ್ರು ಎಂತೆಂಥ ನಡೆಗಳ್ನೆಲ್ಲ ಮಟ್ಟ ಹಾಕ್ಲಿಲ್ಲ?! ಬಸ್ವಗೆ ಹೇಳಿದ್ರೆ ಬೆಳಗಮುಂಚೆ ಕರ್ಕಾಬರ್ತಾ’
ಮಾದೇವಿಯ ಕೈಯಿಂದ ಫೋನು ಪಡೆÉದುಕೊಂಡು ಬಸವನ ನಂಬರಿಗೆ ಕರೆಮಾಡಿದ. ಅಲ್ಲಿ ರಿಂಗ್ ಆಗುತ್ತಲೇ ಮಾಬ್ಲನ ಭುಜವನ್ನು ಮಾದೇವಿ ಮೆಲ್ಲಗೆ ತಟ್ಟಿ ತೆಂಗಿನ ಮರದಿಂದ ಬರುವ ಸದ್ದಿಗೆ ಕಿವಿಕೊಟ್ಟಳು. ಕಿವಿಯಿಂದ ಮೊಬೈಲ್ ದೂರ ಹಿಡಿದು ಮಾಬ್ಲನೂ ತೆಂಗಿನ ಮರದಿಂದ ಬರುವ ಸದ್ದು ಕೇಳಿಸಿಕೊಂಡ. ಏನೋ ಅನುಮಾನ ಬಂದಂತಾಯ್ತು. ಬಸವನಿಗೆ ಹೋಗುತ್ತಿದ್ದ ಕರೆಯನ್ನು ನಿಲ್ಲಿಸಿದ. ತೆಂಗಿನ ಮರದಿಂದ ಬರುವ ಸದ್ದೂ ನಿಂತಿತು. ಪುನಃ ಬಸವನಿಗೆ ಕರೆಮಾಡಿದ. ಪುನಃ ಗುಣುಗುಣಿಸುವ ಸದ್ದು ಶುರುವಾಯಿತು. ಬೆಟ್ಟದಂತಹ ರಹಸ್ಯವನ್ನು ಬೇಧಿಸಿದ ಗರ್ವದಲ್ಲಿ ಬಸವನಿಗೂ ಅವನನ್ನು ಕಾಯಿಕೊಯ್ಯಲು ಬರಹೇಳಿದ ಮಾದೇವಿಗೂ ವಾಚಾಮಗೋಚರ ಬೈಯ್ಯತೊಡಗಿದ.
ಬ್ರಹ್ಮರಾಕ್ಷಸ ದೆವ್ವವು ಮರದಿಂದಿಳಿದು ಗಂಡನಿಗೇ ತಗುಲಿಕೊಂಡಿತೋ ಎಂಬ ಅನುಮಾನ ಬಂದವಳಂತೆ ಮಾದೇವಿ ಮಾಬ್ಲನನ್ನು ಮಿಕಮಿಕ ನೋಡತೊಡಗಿದಳು.
ಉದಯ ಗಾಂವಕರ

Wednesday 24 June 2015

ಆಟವಾಡುವ ಮನಸ್ಸೇ ಆರೋಗ್ಯವಂತ ಮನಸ್ಸು!






 



* Uday Gaonkar



    ಮಕ್ಕಳಿಗೆ ದೈಹಿಕ ವ್ಯಾಯಾಮ, ಏಕಾಗ್ರತೆ, ಮಾನಸಿಕ ಸ್ಥಿರತೆಯನ್ನು ಒದಗಿಸುವುದಕ್ಕಾಗಿ ಶಾಲೆಗಳಲ್ಲಿ ಯೋಗವನ್ನು ಕಡ್ಡಾಯಗೊಳಿಸಬೇಕೆಂಬ ಒತ್ತಾಯ ಇತ್ತೀಚಿಗೆ ಕೇಳಿಬರುತ್ತಿದೆ. ಆದರೆ, ಯೋಗದ ಎಲ್ಲ ಆರೋಗ್ಯಕರ ಅಂಶಗಳನ್ನೂ ಹೊಂದಿರುವ ಆಟಗಳು ಶಾಲಾಸಮಯದಿಂದ ಹೊರಹೋಗುತ್ತಿವೆÉ. ಆಟವಿಲ್ಲದೆ ಪಾಠವಿಲ್ಲ ಎಂಬಲ್ಲಿಂದ ಆಟದ ಬದಲು ಬರೀ ಪಾಠ ಎಂಬಲ್ಲಿಗೆ ಶಾಲೆಗಳು ಬಂದು ನಿಂತಿವೆ.
   ದೈಹಿಕ ಶಿಕ್ಷಣವು ಪಠ್ಯವಿಷಯವಾಗಿ ಮೌಲ್ಯಮಾಪನಗೊಳ್ಳಲು ಪ್ರಾರಂಭವಾದ ನಂತರ ದೈಹಿಕ ಶಿಕ್ಷಣದ ಅವಧಿಗಳೂ ತರಗತಿಕೋಣೆಗಳ ಒಳಗೇ ನಡೆಯಲು ಪ್ರಾರಂಭವಾಗಿವೆÉ. ಕೆಲವು ಅವಧಿಗಳನ್ನು ಮೈದಾನದ ಚಟುವಟಿಕೆಗಳಿಗಾಗಿ ಮೀಸಲಿಡುತ್ತಿದ್ದಾರಾದರೂ ಅವು ಪಾಠಸೂಚಿಯಲ್ಲಿ ನಮೂದಾದ ನಿರ್ಧಿಷ್ಟ ನಿಯಮಗಳು, ನಿಬಂಧನೆಗಳ ಮೂಲಕ ವಿನ್ಯಾಸಗೊಳಿಸಿದ ಆಟಗಳ ಶಾಸ್ತ್ರೀಯ ತರಬೇತಿಯಲ್ಲಿ ವ್ಯಯವಾಗುತ್ತವೆ. ಮಕ್ಕಳು ಅವರಷ್ಟಕ್ಕೆ ಆಡುವ ಮುಕ್ತ ಆಟಗಳು ಸಂಪೂರ್ಣ ಮರೆಯಾಗಿಬಿಟ್ಟಿವೆ.
 ಮಕ್ಕಳು ಅಥವಾ ಮಕ್ಕಳ ಗುಂಪು ಸ್ವತಂತ್ರವಾಗಿ ಆರಿಸಿಕೊಳ್ಳುವ, ಸ್ವತಃ ಸಂಘಟಿಸುವ ಮತ್ತು ನಿರ್ದಿಷ್ಟ ರೂಪುರೇಷೆಗಳನ್ನು ಹೊಂದಿರದ ಆಟಗಳನ್ನು ಮುಕ್ತ ಆಟಗಳು ಎನ್ನಬಹುದು. ಇವುಗಳಿಗೆ ನಿಯಮ ನಿಬಂಧನೆಗಳು ಇರುವವಾದರೂ ಮಕ್ಕಳೆ ಅವುಗಳನ್ನು ಮುರಿದುಕಟ್ಟುತ್ತಾ, ಮರುಜೋಡಿಸಿಕೊಳ್ಳುತ್ತಾ ಮತ್ತೆ ಮತ್ತೆ ಮರುನಿರೂಪಣೆಗೆ, ವಿಕಸನಕ್ಕೆ, ಸುಧಾರಣೆಗೆ ಒಡ್ಡಿಕೊಳ್ಳುತ್ತಿರುತ್ತಾರೆ. ಆಡುವ ಸಮಯದ ನಡುವೆ ಬರುವ ಒಡನಾಟದ ಎಲ್ಲ ಗಳಿಗೆಗಳೂ ಮುಕ್ತ ಆಟಗಳ ಅವಿಭಾಜ್ಯ ಅಂಗವಾಗಿರುತ್ತವೆ. ವಾಲಿಬಾಲ್, ಬಾಸ್ಕೆÉಟ್ ಬಾಲ್ ನಂತಹ ಆಟಗಳು ತಮ್ಮ ಕಟ್ಟುನಿಟ್ಟಿನ ನಿಯಮ-ನಿಬಂಧನೆಗಳಿಂದಾಗಿ ಪ್ರತ್ಯೇಕ ಸಮಯ ಮತ್ತು ಸ್ಥಳವನ್ನು ಬೇಡಿದರೆ ಮುಕ್ತ ಆಟಗಳನ್ನು ಯಾವುದೇ ತೆರೆದ ಸ್ಥಳ ಮತ್ತು ತೆರೆದ ಸಮಯದಲ್ಲಿ ಆಡಬಹುದಾಗಿದೆ. ಸ್ಥಳ ಅನುಕೂಲವಾಗಿದೆಯೆಂದರೆ ಕಣ್ಣಮುಚ್ಚಾಲೆ, ಇಲ್ಲವೆಂದಾದರೆ ಬಟ್ಟೆಯ ಉಂಡೆಯನ್ನೇ ಚೆಂಡು ಮಾಡಿ ಆಡುವ ಡಬ್ಬಾ ಡುಬ್ಬಿ ಅದೂ ಸಾಧ್ಯವಿಲ್ಲಾಂದರೆ ಮುಟ್ಟಾಟ ಹೀಗೆ ಆ ಗಳಿಗೆಯಲ್ಲೇ ಮುಕ್ತಆಟಗಳು ನಿಯಮಗಳನ್ನು ಸಡಿಲಿಸಿಕೊಳ್ಳಬಲ್ಲವು.  ಕೆಲವೊಮ್ಮೆ, ಕ್ರಿಕೆಟ್ಟಿನಂತಹ ಸ್ಟ್ರಕ್ಚರ್ಡ್ ಆಟಗಳೂ ಮಕ್ಕಳ ಸೃಜನಶೀಲತೆಯಿಂದಾಗಿ ಹೊಸರೂಪು ಪಡೆದುಬಿಡುತ್ತವೆ. ಹೀಗೆ ಆಟಗಳು ಮಕ್ಕಳ ಕೈಯಲ್ಲಿ ಆಟಿಕೆಗಳಾಗುವ ಹೊತ್ತಿನಲ್ಲೇ ಅವರ ವ್ಯಕ್ತಿತ್ವವನ್ನು ರೂಪಿಸುವ ಒಡನಾಟಗಳು ಉಂಟಾಗುತ್ತವೆ. ಜಗಳ, ಸ್ನೇಹ, ದೋಸ್ತಿ ಕಟ್ ಎಲ್ಲದಕ್ಕೂ ಶೈಕ್ಷಣಿಕ ಮತ್ತು ಮನೋವೈಜ್ಞಾನಿಕ ಮಹತ್ವ ಇದ್ದೇ ಇದೆ. ಬದುಕನ್ನು ಎಲ್ಲ ಬದಿಗಳಿಂದ ಶೋಧಿಸುವ ವಿಮರ್ಶಾತ್ಮಕ ಶಿಕ್ಷಣಶಾಸ್ರ್ತ (ಕ್ರಿಟಿಕಲ್ ಪೆಡಗೊಜಿ) ಇಂತಹ ಆಟದ ಸಮಯದಲ್ಲೇ ತನ್ನ ಉತ್ತುಂಗದಲ್ಲಿರುತ್ತದೆ.
  ಮಕ್ಕಳ ದೈಹಿಕ ಕ್ರೀಯಾಶೀಲತೆಯೆಂಬುದು ಅವರು ಎಷ್ಟು ಸಮಯ ಆಟದಲ್ಲಿ ತೊಡಗಿದ್ದಾರೆಂಬುದನ್ನು ನೇರವಾಗಿ ಅವಲಂಬಿಸಿರುತ್ತದೆ. ದೈಹಿಕ ಕ್ರೀಯಾಶೀಲತೆ ಅವರ ಮಾನಸಿಕ ಆರೋಗ್ಯವನ್ನು ಉತ್ತಮಪಡಿಸುತ್ತದೆ. ಆಟದ ಸಮಯವು ಒತ್ತಡದಿಂದ ಪಾರಾಗುವ ಅತ್ಯಂತ ಆರೋಗ್ಯಕರ ಮತ್ತು ಸಂತಸದ ವಿಧಾನ. ಮುಕ್ತ ಆಟಗಳಲ್ಲಿ ಮಕ್ಕಳು ತಮ್ಮದೇ ನಿರ್ಧಾರವನ್ನು ತಳೆಯಲು ಅವಕಾಶಗಳಿರುತ್ತವೆ, ತಮ್ಮದೇ ಹಾದಿ ತುಳಿಯಲು ಮತ್ತು ತಮ್ಮ ಬಗ್ಗೆ ಖುಷಿಪಡಲು ಕಾರಣಗಳಿರುತ್ತವೆ. ಇವೆಲ್ಲವೂ ಮಕ್ಕಳ ಆತ್ಮಗೌರವವನ್ನು ಹೆಚ್ಚಿಸುತ್ತವೆ. ಸಾಧನೆಯ ಹೆಮ್ಮೆಗೆ ಪದೇ ಪದೇ ಪಾತ್ರರಾಗುವುದರಿಂದ ಬಿಕ್ಕಟ್ಟಿನ ನಡುವೆಯೂ ಗೆಲುವನ್ನು ನಿರೀಕ್ಷಿಸುವ ಆಶಾವಾದ ಚಿಗುರೊಡೆಯುತ್ತದೆ. ಆಡದ ಮಕ್ಕಳಷ್ಟು ಬೇಗ ಆಡುವ ಮಕ್ಕಳು ಕೈಚೆಲ್ಲಿ ನಿಲ್ಲಲಾರರು. ಭ್ಲೆಚ್ಫೋರ್ಡ್ ಮತ್ತು ಸಂಗಡಿಗರು ನಡೆಸಿದ ಅಧ್ಯಯನಗಳ(2003) ಪ್ರಕಾರ ಸಾಮಾಜಿಕವಾಗಿ ಹಿಂದುಳಿದ ಮತ್ತು ದೈಹಿಕ ಸವಾಲುಗಳುಳ್ಳ ಮಕ್ಕಳಿಗೆ ಸಮನ್ವಯದ ಶಿಕ್ಷಣವನ್ನು ಎಲ್ಲರೊಡಗೂಡಿ ನೀಡುವಲ್ಲಿ ಶಿಷ್ಟ ಆಟಗಳು ಸೋಲುತ್ತವೆ. ಆದರೆ, ಮುಕ್ತ ಆಟಗಳು ಯಶಸ್ವಿಯಾಗುತ್ತವೆ. ಹದಿನೈದು ನಿಮಿಷಗಳಷ್ಟು ಮುಕ್ತ ಆಟದಲ್ಲಿ ತೊಡಗಿ ತರಗತಿಗೆ ಮರಳಿದ ಮಕ್ಕಳ ತರಗತಿ ವರ್ತನೆಗಳು ಆಟವಾಡದ ಮಕ್ಕಳ ವರ್ತನೆಗಳಿಗಿಂತ ಉತ್ತಮವಾಗಿರುತ್ತದೆ ಎಂದು ಇನ್ನೊಂದು ಅಧ್ಯಯನ ಹೇಳುತ್ತದೆ.
   ಆಟದ ಸಮಯ ಸಂಪೂರ್ಣವಾಗಿ ಮಕ್ಕಳ ಸಮಯ. ಶಿಕ್ಷಕರ ಅಥವಾ ಪಾಲಕರ ಕಣ್ಗಾವಲಿನಲ್ಲಿ ಈ ಸಮಯವು ವಿನಿಯೋಗಿಸಲ್ಪಟ್ಟರೆ ಅದಕ್ಕೆ ಮೌಲ್ಯವಿರುವುದಿಲ್ಲ. ಫಿನ್‍ಲ್ಯಾಂಡ್ ದೇಶದಲ್ಲಿ ಪ್ರತಿ ನಲವತ್ತೈದು ನಿಮಿಷಗಳ ಅವಧಿಯ ನಂತರವೂ ಹದಿನೈದು ನಿಮಿಷಗಳ ಬ್ರೇಕ್ ನೀಡುತ್ತಾರಂತೆ ಮತ್ತು ಆ ಹದಿನೈದು ನಿಮಿಷಗಳನ್ನು ಶಿಕ್ಷಕರು ತಮ್ಮ ಮುಂದಿನ ಪಾಠದ ಸಿದ್ಧತೆಗೋ, ಚಹಾ ಕುಡಿಯಲೋ, ಸ್ನೇಹಿತರೊಂದಿಗೆ ಹರಟೆ ಹೊಡೆಯಲೋ ಉಪಯೋಗಿದರೆ ಆ ಹದಿನೈದು ನಿಮಿಷಗಳನ್ನು ತಾವು ಹೇಗೆ ಉಪಯೋಗಿಸಬೇಕೆಂದು ಸ್ವತಃ ಮಕ್ಕಳೇ ತೀರ್ಮಾನಿಸುತ್ತಾರಂತೆ.ಇಲ್ಲೆಲ್ಲ ಆಲೋಚನೆಗಳು ಅದಲು ಬದಲಾಗುತ್ತವೆ, ಅಭಿಪ್ರಾಯಗಳು, ಭಿನ್ನಾಭಿಪ್ರಾಯಗಳು ವಿಶ್ಲೇಷಣೆಯ ಮೂಸೆಯಲ್ಲಿ ಬೆಂದು ಹೊರಬರುತ್ತವೆ. ಶಾಲೆಯಲ್ಲಿ ಒಡನಾಟದ ಅವಕಾಶಗಳು ಹೆಚ್ಚುವುದರಿಂದ ಸಾಮಾಜಿಕ ಕೌಶಲಗಳ ಬೆಳವಣಿಗೆಗೂ ಅವಕಾಶ ಹೆಚ್ಚುತ್ತದೆ. ಮಕ್ಕಳು ಶಾಂತಿ, ಸಹಬಾಳ್ವೆ ಮತ್ತು ಜವಬ್ಧಾರಿಯಿಂದ ನಡೆದುಕೊಳ್ಳುವಲ್ಲಿ ಈ ಅಂಶಗಳೆಲ್ಲ ಕೆಲಸಮಾಡುತ್ತಿರುತ್ತವೆ.
  ಇತ್ತೀಚೆಗೆ, ಮಕ್ಕಳ ಮನಶಾಃಸ್ರ್ತವನ್ನು ಅರೆದು ಸಂತಸದ ಕಲಿಕೆ, ಸಹಯೋಗದ ಕಲಿಕೆ, ಸ್ವವೇಗದ ಕಲಿಕೆ, ಸ್ವಕಲಿಕೆ ಎಂತೆಲ್ಲ ಸರಳಗೊಳಿಸಿ ಪ್ರತಿಪಾದಿಸಲಾಗುತ್ತಿದೆ. ಕೇವಲ ಆಟಗಳಷ್ಟೇ ಅಲ್ಲ, ಬೇರೆಲ್ಲ ವಿಷಯಗಳೂ ಆಟವಾಗಬೇಕು ಎಂದು ಶಿಕ್ಷಣ ಸಿದ್ಧಾಂತಗಳು ತಿಳಿಸುತ್ತವೆ. ಪುನರಾವರ್ತನೆ, ಅನುಕರಣೆ, ಆಜ್ಞಾಪಾಲನೆಯಿಂದ ಕಲಿಕೆ ಸಂಭವಿಸುವುದೇ ಇಲ್ಲವೆಂದಾಗಲೀ ಅಂತಹ ಶೈಕ್ಷಣಿಕ ಚಟುವಟಿಕೆಗಳಿಂದ ಅನುಕೂಲ ಇಲ್ಲವೆಂದಾಗಲೀ ಹೇಳಲಾಗದು. ಆದರೆ, ಅಂತಹ ಚಟುವಟಿಕೆಗಳು ಸ್ವಪ್ರೇರಣೆ, ಒಡನಾಟ, ಸಂತಸದ ಕಲಿಕೆಯಿಂದೊಡಗೂಡಿದ ಅನುಭವಗಳಿಗೆ ಬದಲಿಯಾಗಲಾರವು. ಜಿಮ್‍ನಲ್ಲಿರುವ ಸೈಕಲ್ಲನ್ನು ತುಳಿದರೂ ವ್ಯಾಯಾಮ ದೊರೆಯುತ್ತದೆ. ಆದರೆ, ತುಳಿಯುವವನ ದೇಹ ಮತ್ತು ಮನಸ್ಸಿನೊಡನೆ ರಸ್ತೆಯಲ್ಲಿ ಓಡುವ ಬೈಸಿಕಲ್ ನಿರಂತರವಾಗಿ ಪ್ರತಿಸ್ಪಂದಿಸುವಂತೆ, ತನ್ನ ಸುತ್ತಲಿನ ನೆಲ, ನೀರು, ಗಾಳಿಯೊಡನೆ ಸಂವಹಿಸಲು ಅವಕಾಶ ನೀಡುವಂತೆ ಮತ್ತು ಸಣ್ಣ ಸಣ್ಣ ಗುರಿಗಳನ್ನು ಮುಂದಿಡುತ್ತಾ ಸಂತಸದ ಅನುಭವವನ್ನು ಒದಗಿಸುವಂತೆ ಜಿಮ್‍ನ ಸೈಕಲ್ ಕೆಲಸಮಾಡಬಲ್ಲುದೇ?
  ಆಟವಾಡುವ ಸಮಯ ಮಕ್ಕಳಿಗೆ ಸಿಗುತ್ತಲೇ ಇಲ್ಲ. ಇಡೀ ಶಾಲಾ ದಿನವೇ ಪೂರ್ವಯೋಜಿತ ನಿರ್ಧಿಷ್ಟ ಆಕೃತಿಯ ಚಟುವಟಿಕೆಗಳಲ್ಲಿ ಕಳೆದುಹೋಗುತ್ತಿದೆ. ಪಠ್ಯಪುಸ್ತಕಗಳು ಮಾಹಿತಿಯ ಭಾರದಿಂದ ಕುಸಿಯುತ್ತಿರುವುದರಿಂದಾಗಿಯೂ ಮಕ್ಕಳು ಆಟದ ಸಮಯವನ್ನು ಕಳೆದುಕೊಂಡಿರಬಹುದು. ಶಿಸ್ತಿನ ಕುರಿತು ಪಾಲಕರು, ಶಿಕ್ಷಕರು ಮತ್ತು ವ್ಯವಸ್ಥೆ ತಳೆದಿರುವ ನಿಲುವುಗಳೂ ಇದಕ್ಕೆ ಕಾರಣವಾಗಿರಬಹುದು. ಮಕ್ಕಳ ರಕ್ಷಣೆ ಮತ್ತು ಆರೋಗ್ಯದ ಕುರಿತು ಇರುವ ಅತಿಕಾಳಜಿಯೂ ಸ್ವಲ್ಪ ಮಟ್ಟಿಗೆ ಆಟದ ಸಮಯ ಕಡಿತವಾಗಲು ತನ್ನ ದೇಣಿಗೆಯನ್ನು ಸಲ್ಲಿಸಿರಬಹುದು. ಆದರೆ, ಹಿಂದೆ ನಾವೆಲ್ಲ ಆಡಿದಷ್ಟು ಆಟವನ್ನು ಈಗಿನ ಮಕ್ಕಳು ಆಡುತ್ತಿಲ್ಲ ಎಂಬುದು ಸ್ಪಷ್ಟ. ಮೈದಾನಗಳೇ ಇರದ ಶಾಲೆಗಳು ಹುಟ್ಟಿಕೊಳ್ಳುತ್ತಿರುವುದೇ ಇದಕ್ಕೆ ಸಾಕ್ಷಿ. ಬೋರ್ಡು ನೋಡುವವರೆಗೂ ಕಟ್ಟಡವೊಂದನ್ನು ಶಾಲೆಯೋ ಆಸ್ಪತ್ರೆಯೋ ಎಂದು ಗುರುತಿಸಲಾಗದಂತಹ ಪರಿಸ್ಥಿತಿ ಎಲ್ಲ ಕಡೆಯೂ ಇದೆ.
    ಉತ್ತಮ ಆರೋಗ್ಯಕ್ಕಾಗಿ ಮತ್ತು ಸ್ವಸ್ಥ ಸಮಾಜಕ್ಕಾಗಿ, ಮೊದಲು ಶಾಲೆಗಳಲ್ಲಿ ಆಟ ಕಡ್ಡಾಯವಾಗಲಿ!

Tuesday 3 March 2015

ನೂರನೆಯ ಸಂಮಾನ













       









 ನೂರನೆಯ ಸಂಮಾನ
  
 ಮೋಟಾರು ಗಾಡಿ ನಿಂತ ಸದ್ದು ಕೇಳಿ ಅನಸೂಯಮ್ಮ ಅಡಿಗೆ ಮನೆಯಿಂದ ಜಗುಲಿಯ ಕಡೆ ಧಾವಿಸಿದರು. ಗಾಡಿ ಇಳಿದು ಬಂದವರು ಐತಾಳರ ಮನೆ ಯಾವುದು ಎಂದು ಬೇರೆ ಯಾರನ್ನಾದರೂ ಕೇಳಿದರೆ ತಮ್ಮ ಮನೆಯನ್ನು ತೋರಿಸದೇ ದೊಡ್ಡ ಐತಾಳರ ಮನೆಯನ್ನು ತೋರಿಸಿಬಿಡಬಹುದೆಂಬ ಆತಂಕ ಅನಸೂಯಮ್ಮನ ಮುಖದ ಮೇಲೆ ಛಾಪುಹೊಡೆದಂತಿತ್ತು. 
    ಅನಸೂಯಮ್ಮನ ಗಂಡ ಹರಿಕೃಷ್ಣ ಐತಾಳರು ಮತ್ತು ಎದುರುಮನೆಯ ದೊಡ್ಡ ಐತಾಳರೂ ಒಂದೇ ಕುಟುಂಬದವರು. ಸದ್ಯ, ದೊಡ್ಡ ಐತಾಳರ ಮಗ ವೆಂಕಟರಮಣ ಐತಾಳರೂ ಹರಿಕೃಷ್ಣ ಐತಾಳರೂ ಮದುವೆ, ಮುಂಜಿ ಮತ್ತಿತರ ಕಾರ್ಯಕ್ರಮಗಳಿಗೆ ಅಡುಗೆ ಮಾಡಿಕೊಡುವ ಸಮಾನ ವೃತ್ತಿಯಲ್ಲಿರುವವರು. ಇಬ್ಬರಿಗೂ ಸಾಕಷ್ಟು ಒಳ್ಳೆಯ ಹೆಸರು ಇರುವುದರಿಂದ ಗ್ರಾಹಕರು ಸಮಾನವಾಗಿ ಹಂಚಿಹೋಗುತ್ತಿದ್ದರು. ಇಬ್ಬರ ಮನೆಗಳೂ ಅಕ್ಕ-ಪಕ್ಕದಲ್ಲೇ ಇರುವುದರಿಂದ ವೆಂಕಟರಮಣ ಐತಾಳರನ್ನು ಹುಡುಕಿಕೊಂಡು ಬಂದವರು ಹರಿಕೃಷ್ಣ ಐತಾಳರ ಮನೆಗೂ, ಹರಿಕೃಷ್ಣ ಐತಾಳರನ್ನು ಹುಡುಕಿಕೊಂಡು ಬಂದವರು ವೆಂಕಟರಮಣ ಐತಾಳರ ಮನೆಗೂ ತಲುಪಿದ ಅನೇಕ ಸಂದರ್ಭಗಳಿದ್ದವು. ಅಡುಗೆಯ ವಿಷಯದಲ್ಲಿ ಇಬ್ಬರೂ ಐತಾಳರಲ್ಲಿ ಅಂತಹ ವ್ಯತ್ಯಾಸ ಇಲ್ಲದ್ದರಿಂದ ಗ್ರಾಹಕರಿಗೆ ಯಾವ ತೊಂದರೆಯೂ ಆಗುತ್ತಿರಲಿಲ್ಲ. ಆದರೆ, ಯಾವಾಗಲಾದರೂ ತಮ್ಮ ಮನೆಗೆ ಬರಬೇಕಾದವರು ದೊಡ್ಡ ಐತಾಳರ ಮನೆಗೆ ಹೋದ ವಿಷಯ ಹೇಗೋ ಅನಸೂಯಮ್ಮಗೆ ಗೊತ್ತಾದಾಗ ಹೊಟ್ಟೆಯಲ್ಲಿ ಹಸಿಮೆಣಸಿನಕಾಯಿಯ ಕಿವುಚಿದಂತಾಗುತಿತ್ತು. ಅನಸೂಯಮ್ಮ ಅಡುಗೆ ಮನೆಯಿಂದ ಧಾವಿಸಿ ಬರಲು ಇನ್ನೂ ಒಂದು ಕಾರಣವಿತ್ತು- ಹರಿಕೃಷ್ಣ ಐತಾಳರು ಶಾಲಾ-ಕಾಲೇಜು, ಸಂಘ ಸಂಸ್ಥೆಗಳು ನಡೆಸುವ ಕಾರ್ಯಕ್ರಮಗಳಿಗೆ ಕಡಿಮೆದರದಲ್ಲಿ, ಕೆಲವೊಮ್ಮೆ ಉಚಿತವಾಗಿ ಅಡುಗೆ ಮಾಡಿ ಕೊಡುತ್ತಿದ್ದುದರಿಂದ ಇತ್ತೀಚೆಗೆ ಅನೇಕರು ಅವರನ್ನು ಕರೆದು ಸನ್ಮಾನಿಸುತ್ತಿದ್ದರು. ಕೆಲವು ಸಲ ಕಾರ್ಯಕ್ರಮಕ್ಕೆ ಅತಿಥಿಯಾಗಿ ಕರೆದು ಸತ್ಕರಿಸುತ್ತಿದ್ದರು. ಹರಿಕೃಷ್ಣ ಐತಾಳರನ್ನು ಈ ಕಾರಣಕ್ಕಾಗಿ ನೋಡಲು ಬಂದವರೆಲ್ಲಾದರೂ ದಾರಿ ತಿಳಿಯದೇ ವೆಂಕಟರಮಣ ಐತಾಳರ ಮನೆಗೆ ಹೋದರೆ ಅವರನ್ನು ದೊಡ್ಡ ಐತಾಳರು ಬೈದು ಕಳುಹಿಸುತ್ತಿದ್ದರು. ಕಡಿಮೆದರದಲ್ಲಿ ಅಡುಗೆಮಾಡಿಕೊಡುತ್ತಾನೆಂದು ಸನ್ಮಾನಿಸುತ್ತಾರೋ ಅಥವಾ ನೀವು ಸನ್ಮಾನಿಸುತ್ತಿರುವುದರಿಂದ ಅವನು ಕಡಿಮೆದರದಲ್ಲಿ ಅಡುಗೆ ಮಾಡಿಕೊಡುತ್ತಾನೋ ಎಂದು ಬಂದವರನ್ನು ಕುಟುಕುತ್ತಿದ್ದರು. ತನ್ನ ಗಂಡನಿಗೆ ಹೆಸರು ಬರುವುದು ಈ ಮುದುಕನಿಗೆ ಇಷ್ಟ ಇಲ್ಲ ಎಂದು ಅನಸೂಯಮ್ಮ ಮನಸ್ಸಲ್ಲೇ ಗೊಣಗಬಹುದಿತ್ತೇ ವಿನಃ ಕುಟುಂಬದ ಹಿರಿಯ ತಲೆಗೆ ಉತ್ತರ ನೀಡುವ ಹಾಗಿರಲಿಲ್ಲ.  
   ಹರಿಕೃಷ್ಣ ಐತಾಳರ ಜೊತೆ ಸನ್ಮಾನ ಸಮಾರಂಭಗಳಿಗೆ ಅನಸೂಯಮ್ಮ ಕೂಡಾ ಹೋಗುತ್ತಿದ್ದರು. ಗಂಡ-ಹೆಂಡತಿಯರಿಬ್ಬರನ್ನೂ ವೇದಿಕೆಗೆ ಕರೆದು ಹಾಕುವ ಹಾರ-ಶಾಲು, ನೀಡುವ ಹೂ-ಹಣ್ಣು, ಸ್ಮರಣಿಕೆಯ ಮೂರ್ತಿಗಳು ಮತ್ತು ತುಂಬಿದ ಸಭೆಯ ಕರತಾಡನ ಅನಸೂಯಮ್ಮಗೆ ಬಹಳ ಖುಷಿಕೊಡುತ್ತಿದ್ದುದರಿಂದ ಮನೆಗೆಲಸಕ್ಕೆ ತೊಂದರೆಯಾದರೂ ಸನ್ಮಾನ ಕಾರ್ಯಕ್ರಮಗಳನ್ನು ತಪ್ಪಿಸಿಕೊಳ್ಳುತ್ತಿರಲಿಲ್ಲ. ಈಗ, ಮೋಟಾರು ಗಾಡಿಯ ಸದ್ದಾದಾಗಲೂ ಸಹ ಅಡುಗೆಗೆ ಹೇಳಲು ಬಂದವರು ಎಂಬುದಕ್ಕಿಂತ ಹೆಚ್ಚಾಗಿ, ಯಾರೋ ಸನ್ಮಾನಕ್ಕೆ ಕರೆಯಲು ಬಂದವರೇ ಇರಬಹುದೆಂದು ಊಹಿಸಿ ಅನಸೂಯಮ್ಮ ಅಡುಗೆ ಮನೆಯಿಂದ ಅಂಗಳದವರೆಗೂ ಬಂದಿದ್ದರು!
    ಹರಿಕೃಷ್ಣ ಐತಾಳರು ಸ್ನಾನಕ್ಕೆಂದು ಬಚ್ಚಲು ಮನೆಗೆ ಈಗಷ್ಟೆ ಹೋಗಿದ್ದರಿಂದ, ಯಾರಾದರೂ ಅವರನ್ನು ಹುಡುಕಿಕೊಂಡು ಬಂದಿದ್ದರೆ ಸ್ವಲ್ಪ ಕಾಯಬೇಕಾಗುತ್ತದೆ ಎಂಬುದನ್ನು ಗ್ರಹಿಸಿ, ಅನಸೂಯಮ್ಮ ಬಂದವರ ಅವಗಾಹನೆಗಾಗಿ ಗಂಡನನ್ನು ಸನ್ಮಾನಿಸುತ್ತಿರುವ ಫೋಟೋ ಇರುವ ನಿನ್ನೆಯ ಪೇಪರನ್ನು ಟಿಪಾಯಿಯ ಮೇಲಿಟ್ಟರು. ಪೇಪರು ಹಾರಿಹೋಗದಂತೆ ಅದರ ಮೇಲೆ ಕಪ್ಪುಲೋಹದ ದೇವರ ಮೂರ್ತಿಯೊಂದನ್ನು ಪ್ರತಿಷ್ಠಾಪಿಸಿದರು. ಶೋಕೇಸು ಪೂರ್ತಿ ತುಂಬಿದ್ದರಿಂದ ಸನ್ಮಾನದ ಸ್ಮರಣಿಕೆಯಾಗಿ ನೀಡಿದ ದೇವಾನುದೇವತೆಗಳ ಮೂರ್ತಿಗಳು ಸೂಕ್ತ ಆವಾಸವಿಲ್ಲದೇ ಅನಾಥವಾಗಿದ್ದವು. ಮರ, ಪ್ಲ್ಲಾಸ್ಟಿಕ್ಕು, ಲೋಹ ಹೀಗೆ ಮೂರ್ತಿಗಳನ್ನು ತಯಾರಿಸಲು ಬಳಸಿದ ಮಾಧ್ಯಮದ ಆಧಾರದಲ್ಲಿ, ಗಾತ್ರದ ಆಧಾರದಲ್ಲಿ, ನೀಡಿದ ಸಂಘ-ಸಂಸ್ಥೆಗಳ ಹಿರಿಮೆಯ ಆಧಾರದಲ್ಲಿ ಆಧ್ಯತೆಯನ್ನು ಪಡೆದುಕೊಂಡು ಮೂರ್ತಿಗಳು ಶೋಕೇಸಿನಲ್ಲಿ ಸ್ಥಾನ ಪಡೆಯುತ್ತಿದ್ದವು. ಹದಿನೈದು ದಿನಕ್ಕೋ ತಿಂಗಳಿಗೋ ಹರಿಕೃಷ್ಣ ಐತಾಳರೇ ಖುದ್ದಾಗಿ ಮೌಲ್ಯಮಾಪನ ನಡೆಸಿ ಶೋಕೇಸಿನಲ್ಲಿರುವ ಕೆಲವು ಮೂರ್ತಿಗಳನ್ನು ಹೊರತೆಗೆಯುವುದು, ಅವುಗಳ ಬದಲಾಗಿ ಹೊರಗಿರುವ ಮೂರ್ತಿಗಳನ್ನು ಶೋಕೇಸಿನಲ್ಲಿ ಹೊಂದಿಸಿಡುವುದು ನಡೆಯುತ್ತಿತ್ತು. ಸನ್ಮಾನದಲ್ಲಿ ಹಾಕಿದ ಹಾರಗಳು, ಕಾರ್ಯಕ್ರಮದಲ್ಲಿ ತೊಡಸಿದ್ದ ಬ್ಯಾಚುಗಳನ್ನು ಕೂಡಾ ಸ್ವತಃ ಐತಾಳರೇ ಜಗುಲಿಯ ಗೋಡೆಗೆ ಅಲ್ಲಲ್ಲಿ ಮೊಳೆಹೊಡೆದು ನೇತು ಹಾಕಿದ್ದರು. ಗಂಧದ ಹಾರಗಳು ಎಂದುಕೊಂಡವೆಲ್ಲ ವಾರದೊಳಗೆ ತಮ್ಮ ಮೇಲೆ ಸಿಂಪಡಿಸಲಾದ ಅತ್ತರಿನ ಘಮವನ್ನು ಕಳೆದುಕೊಂಡು ಕೊಳೆತ ಮರದ ವಾಸನೆ ಬೀರುವುದು, ಹಾರದ ಮೇಲೆ ಜೇಡಗಳು ಬಲೆಮಾಡಿಕೊಂಡು ಸಂಸಾರಹೂಡುವುದು, ಹಾರದ ಮರೆಯಲ್ಲಿ ಹಲ್ಲಿಗಳು ಮೊಟ್ಟೆಗಳನ್ನು ಅಂಟಿಸಿಡುವುದು ಮೊದಮೊದಲೆಲ್ಲ ಅನಸೂಯಮ್ಮಗೆ ಇಷ್ಟವಾಗುತ್ತಿರಲಿಲ್ಲವಾದರೂ, ಹೊಸ ಹೊಸ ಹಾರಗಳು ಬಂದು ಹಳೆಯದರ ಮೇಲೆ ಜಾಗ ಪಡೆದುಕೊಳ್ಳುವಾಗ ಹೆಮ್ಮೆಯ ಭಾವ ಮೂಡಿ ಮತ್ತೆಲ್ಲವೂ ಮರೆಯಾಗಿ ಬಿಡುತಿತ್ತು.  
      ದೊಡ್ಡ ಐತಾಳರು ಅನಸೂಯಮ್ಮನ ಕರೆದು “ಏನೇ ಅನಸೂಯ, ನಿನ್ನ ಗಂಡ ಕೆಲಸ ಬಿಟ್ಕಂಡ್ ಸನ್ಮಾನದ ಹಾರ, ಶಾಲಿನ ಹಿಂದ್ ಬಿದ್ದಿದ್ನಂತಲ್ಲ..ನಿಂಗೂ ಬುದ್ಧಿ ಇಲ್ದಾ... ಶಾಲ್ ಮಾರ್ಮಂಡ್ ಹೊಟ್ಟಿ ತುಂಬ್ಕಳ್ಳುಕಾತ್ತ?” ಅಂದಿದ್ದರು. ಯಾವಾಗಿಲ್ಲದ ಕಾಳಜಿ ಈ ಮುದುಕನಿಗೆ ಈಗ ಯಾಕ ಬಂತೋ  ಎಂದು ಮನಸ್ಸಿನಲ್ಲೇ ಅಂದುಕೊಂಡಿದ್ದರು ಅನಸೂಯಮ್ಮ. ಹೊಟ್ಟೆಕಿಚ್ಚಿಗೆ ಮದ್ದಿಲ್ಲ ಎಂದುಕೊಂಡು ದೊಡ್ಡ ಐತಾಳರು ಹೇಳಿದ್ದನ್ನು ಗಂಡನಿಗೂ ಹೇಳದೇ ಸುಮ್ಮನಿದ್ದರು. ಗಂಡನಿಗೆ ಇತ್ತೀಚೆಗೆ ಮೊದಲಿಗಿಂತ ಹೆಚ್ಚು ಅಡುಗೆಯ ಕರೆಬರುತಿತ್ತು. ಕೆಲಸ ಹೆಚ್ಚಿದ್ದರಿಂದ ಅಡುಗೆಗೆ ಇನ್ನೂ ಇಬ್ಬರು ಅಡುಗೆ ಭಟ್ಟರನ್ನು ಹಾಕಿಕೊಂಡಿದ್ದರು. ಬಹುಷಃ, ಇದನ್ನೆಲ್ಲ ನೋಡಿಯೇ ದೊಡ್ಡ ಐತಾಳರು ಹೊಟ್ಟೆಕಿಚ್ಚು ಪಟ್ಟಿರಬಹುದು ಅಂದುಕೊಂಡರು ಅನಸೂಯಮ್ಮ. ಹಿರಿಯಜೀವ..ಏನು ಹೇಳುವುದು? ಆದರೆ, ಇತ್ತೀಚೆಗೆ ದೊಡ್ಡ ಐತಾಳರು ರಸ್ತೆಯಲ್ಲಿ ಯಾವುದಾದರೂ ಗಾಡಿ ನಿಂತದ್ದು ತಿಳಿದರೆ ಹೊರಬರುತ್ತಿದ್ದರು. ಬಂದವರೊಡನೆ ಮಾತಾಡುತ್ತಿದ್ದರು. ಅವರೊಡನೆ ಏನು ಹೇಳುತ್ತಾರೋ ಎಂದು ತಿಳಿಯಲು ಅನಸೂಯಮ್ಮ ಬಹಳ ಸಲ ಪ್ರಯತ್ನಿಸಿದ್ದಿದೆ. ಆದರೆ, ತೀರಾ ಹತ್ತಿರ ಹೋಗಿ.. ಅಂದರೆ, ರಸ್ತೆಯಂಚಿಗೆ ಹೋಗಿ ಮಾತು ಕೇಳಲು ಸಂಕೋಚಪಟ್ಟು ಅಂಗಳದಿಂದಲೇ ವಾಪಸಾಗುತ್ತಿದ್ದರು. ದೊಡ್ಡ ಐತಾಳರ ಜೊತೆ ಮಾತನಾಡಿದವರಲ್ಲಿ ಯಾರಾದರೂ ಅವರ ಮನೆಗೆ ಹೋದರೆ ಅನಸೂಯಮ್ಮನವರಿಗೆ ಈ ಮುದುಕ ಏನೋ ಕಿತಾಪತಿ ಮಾಡಿದರು ಎಂದು ಅನಿಸುತಿತ್ತು. ಮೋಟಾರು ಗಾಡಿ ನಿಂತ ಸದ್ದಾದಾಗ ಅನಸೂಯಮ್ಮ ಕೀಲಿಕೊಟ್ಟ ಗೊಂಬೆಯಂತೆ ಅಡುಗೆಮನೆಯಿಂದ ಅಂಗಳದವರೆಗೆ ಬಂದುಬಿಟ್ಟರು.
                                      ***
   ಹರಿಕೃಷ್ಣ ಐತಾಳರನ್ನು ಪೇಟೆಯಲ್ಲಿ ಯಾರಾದರೂ ಕಂಡರೆ ಅವರದು ಅಡುಗೆಯ ವೃತ್ತಿ ಎಂದು ಊಹಿಸಲು ಸಾಧ್ಯವೇ ಇಲ್ಲ. ಅವರು ಸದಾ ಧರಿಸುವ ಬಿಳಿಯ ಶರ್ಟಿನ ಮೇಲಾಗಲೀ ಪಂಚೆಯ ಮೇಲಾಗಲೀ ಸಾಂಬಾರಿನ ಚಿಕ್ಕ ಕಲೆಯನ್ನೂ ಕೂಡಾ ಯಾರೂ ಹುಡುಕಲು ಸಾಧ್ಯವಿಲ್ಲ. ಯಾವುದೇ ಕಾರ್ಯಕ್ರಮವಿಲ್ಲವೆಂದಾದರೆ ಸಂಜೆ ಐದೂವರೆಗೆ ಐತಾಳರು ಪೇಟೆಗೆ ಬರುತ್ತಾರೆ. ಸ್ವತಃ ಅಡುಗೆ ಭಟ್ಟರಾದರೂ ಅವರ ಸಂಜೆಯ ಚಹಾ ಸಂಪಿಗೆ ಹೋಟೆಲ್ಲಿನಲ್ಲೇ! ದೊಡ್ಡ ದೊಡ್ಡ ಕುಳಗಳು ಸಂಜೆ ಕುಳಿತು ಮಾತಾಡುವ ಜಾಗ ಅದು. ಅಂತವರ ಭುಜಕ್ಕೆ ಭುಜ ಉಜ್ಜುವ ಅವಕಾಶವಿದೆ ಎಂಬ ಕಾರಣಕ್ಕಾಗಿಯೇ ಹದಿನೆಂಟು ರೂಪಾಯಿಗೆ ಒಂದು ಕಪ್ಪು ಚಹಾ ಮಾರುವ ಸಂಪಿಗೆ ಹೊಟೆಲ್ಲು ಐತಾಳರಿಗೆ ದುಬಾರಿ ಅನ್ನಿಸುತ್ತಿರಲಿಲ್ಲ. ಚಹಾ ಕುಡಿಯುತ್ತಾ ಮಾತಿನ ನಡುವೆ ಅವಕಾಶ ಹುಡುಕಿ ನಿನ್ನೆಯೋ ಮೊನ್ನೆಯೋ ನಡೆದ ಸನ್ಮಾನ ಕಾರ್ಯಕ್ರಮದ ವರ್ಣನೆ ನೀಡುವುದು ಐತಾಳರ ಸದುದ್ಧೇಶ. ಮೊನ್ನೆ ನಡೆದದ್ದು ಇನ್ನೂರನೇ ಸನ್ಮಾನ ಎಂತಲೋ, ಸನ್ಮಾನ ನೆರವೇರಿಸಲು ಆಹ್ವಾನಿತರಾದ ಗಣ್ಯರಿಂದ ಶಾಲು ಹೊದೆಸಿಕೊಳ್ಳುತ್ತಿರುವ ಇಪ್ಪತ್ತನೆಯ ಸಂದರ್ಭ ಅದಾಗಿತ್ತೆಂದೋ ಹೇಳುತ್ತಾ ಪ್ರತಿ ಸನ್ಮಾನಕ್ಕೂ ಅದರದ್ದೇ ಆದ ಮಹತ್ವವನ್ನು ಕರುಣಿಸುವ ಕಲೆಯನ್ನು ಇತ್ತೀಚೆಗೆ ಐತಾಳರು ಕಂಠಗತಮಾಡಿಕೊಂಡಿದ್ದರು. ಅದು ಎಲ್ಲರಿಗೂ ತಿಳಿದು, ಈಗ ಸಂಪಿಗೆ ಹೊಟೆಲ್ಲಿಗೆ ಬರುತ್ತಲೇ ನಿನ್ನೆ ನಡೆದದ್ದು ಎಷ್ಟನೇ ಸನ್ಮಾನ ಎಂದು ಬಾಯಿ ತೆಗೆಯುವ ಮೊದಲೇ ಐತಾಳರನ್ನು ಕೇಳುತ್ತಿದ್ದರು. ಈ ಕುಹಕ ಐತಾಳರಿಗೆ ಗೊತ್ತಾಗುತ್ತಿತ್ತೋ ಇಲ್ಲವೋ ತಿಳಿಯದು; ಆದರೆ, ಗೊತ್ತಾಗದವರಂತೆ ಮುಗ್ಧವಾಗಿ ಪ್ರತಿಕ್ರಿಯಿಸುತ್ತಿದ್ದರು. ನೂರಾ ಹನ್ನೊಂದನೇ ಸನ್ಮಾನದ ಕುರಿತು ಅವರ ಬಾಯಿಂದಲೇ ಕೇಳಿದ ಸ್ನೇಹಿತರು `ಏನು ಐತಾಳರೆ ಇದು? ನಿಮ್ಮ ನೂರನೇ ಸನ್ಮಾನಕ್ಕೆ ನಾವೆಲ್ಲ ಬರಬೇಕೆಂದುಕೊಂಡಿದ್ದೆವು. ನಮ್ಮದೂ ಒಂದು ಹಾರ ಹಾಕಿ ಕೃತಾರ್ಥರಾಗಬೇಕೆಂದುಕೊಂಡಿದ್ದೆವು.. ನೀವು ಹೇಳಲೇ ಇಲ್ಲ.. ಈಗ ನೂರಾ ಹನ್ನೊಂದಾಯ್ತು ಅಂತಿದ್ದೀರಿ’ ಎಂದಿದ್ದಕ್ಕೆ ಐತಾಳರು ಮುಗ್ಧವಾಗಿ ನಗುತ್ತಾ `ಇಲ್ಲಪ್ಪ, ನಿಮಗೆ ಹೇಳದೆ ನೂರನೇ ಸನ್ಮಾನ ಮಾಡಿಸ್ಕೊಳ್ತೇನಾ ನಾನು? ... ನೂರನೇ ಸನ್ಮಾನ ತನ್ನ ತವರೂರಲ್ಲೇ ಆಗಬೇಕೆಂಬುದು ನನ್ನ ಹೆಂಡತಿಯ ಆಸೆ..ಆದ್ರೆ, ಅಲ್ಲಿ ಮುಂದಾಗಿ ಮಾಡುವವರು ಯಾರೂ ಇಲ್ಲ...ಹಾಗಂತ, ಮಾಡ್ತೇವೆ ಮಾಡ್ತೇವೆ ಅಂತ ಆಗಾಗ ಹೇಳುವವರು ಇದ್ದಾರೆ. ಅದ್ಕೆ, ನೂರನೇ ಸನ್ಮಾನ ಬಾಕಿ ಇಟ್ಟುಕೊಂಡಿದ್ದೇನೆ. ನಿಮಗೆ ಖಂಡಿತ ಹೇಳ್ತೇನೆ’ ಅಂದಿದ್ದರು.
  ಐತಾಳರ ಸನ್ಮಾನ ಎಂಬುದು ಕೆಲವು ಸೇವಾ ಸಂಸ್ಥೆಗಳ ಕಾರ್ಯಕ್ರಮದ ಅವಿಭಾಜ್ಯ ಅಂಗವಾಗಿ ಮಾರ್ಪಟ್ಟು ಈಗ ಎರಡು-ಮೂರು ವರ್ಷಗಳು ಕಳೆದುಹೋಗಿವೆ. ಕಾರ್ಯಕ್ರಮದಲ್ಲಿ ಐತಾಳರದೇ ಅಡುಗೆ ಇರುತ್ತದೆ. ಕಾರ್ಯಕ್ರಮ ಮುಗಿದ ಮೇಲೆ ಊಟೋಪಚಾರ ನೀಡಿದ್ದಕ್ಕಾಗಿ ಆಯೋಜಕರು ಎಷ್ಟೇ ಹಣ ನೀಡಿದರೂ, ನೀಡದೇ ಇದ್ದರೂ ಐತಾಳರು ನಿರ್ಧಾಕ್ಷಿಣ್ಯವಾಗಿ ಕೇಳುವ ಹಾಗಿರಲಿಲ್ಲ. ಹೆಗಲ ಮೇಲೆ ಬಿದ್ದ ಶಾಲನ್ನು ಮುಟ್ಟಿನೋಡಿಕೊಳ್ಳುವುದಕ್ಕಿಂತ ಹೆಚ್ಚೇನೂ ಮಾಡುವ ಹಾಗಿರಲಿಲ್ಲ. ಬರಬರುತ್ತಾ, ಐತಾಳರಿಗೆ ಸನ್ಮಾನಗಳು ಹೆಚ್ಚಾಗುತ್ತಾ ಬಂದಂತೆ ಅಡುಗೆ ಕರೆಗಳು ಕೂಡಾ ಹೆಚ್ಚಾಗುತ್ತಾ ಬಂದವು. ವ್ಯವಹಾರ ಜಾಸ್ತಿ ಆದದ್ದರಿಂದ ನಿಭಾಯಿಸಲು ಹೆಚ್ಚಿನ ಕೆಲಸದವರು ಬೇಕಾಯಿತು. ಈ ಸನ್ಮಾನಗಳ ನಡುವೆ ಸ್ವತಃ ಕೆಲಸ ಮಾಡಲು, ವ್ಯವಹಾರ ನೋಡಿಕೊಳ್ಳಲು ಐತಾಳರಿಗೆ ಸಮಯವೂ ಕಡಿಮೆಯಾಯಿತು. ಅಂಗಡಿಯಿಂದ ಸಾಮಾನು ತರುವ ಕೆಲಸವನ್ನು ತಮ್ಮ ನಂಬಿಗೆಯ ಕೆಲಸದವನೊಬ್ಬನಿಗೆ ನೇಮಿಸಿದರು. ಬರಬರುತ್ತಾ ವ್ಯವಹಾರದ ಸೂತ್ರ ಆತನ ಕೈ ಸೇರಿತು. ಜೇನು ಕೊಯ್ದವ ಬೆರಳು ನೆಕ್ಕದೇ ಇರುತ್ತಾನೆಯೇ? ಎಷ್ಟೇ ಹಣ ಬಂದರೂ ಹಳೆಯ ಗುಂಡಿಗಳು ತುಂಬುತ್ತಿರಲಿಲ್ಲ. ಕೆಲಸದವರ ಸಂಬಳ, ಅಂಗಡಿಯವರ ಹಣಗಳನ್ನು ಎಷ್ಟು ದಿನಗಳಂತ ಬಾಕಿ ಇಟ್ಟುಕೊಂಡಿರುವುದು? ಐತಾಳರು ಬ್ಯಾಂಕಿನಲ್ಲಿ ಸಾಲ ತೆಗೆದು ವ್ಯವಹಾರ ಮುಂದುವರಿಸಬೇಕಾದ ಸ್ಥಿತಿ ತಲುಪಿದರು. ಬ್ಯಾಂಕಿನಿಂದ ಸಾಲ ಪಡೆಯಲು ಮನೆ ಇರುವ ಮೂವತ್ತು ಸೆಂಟ್ಸ್ ಜಾಗವನ್ನು ಅಡ ಇಡಬೇಕಾಯಿತು.
  ಇಷ್ಟಾದರೂ. ಸನ್ಮಾನದ ಚಟ ಐತಾಳರನ್ನು ಬಿಡಲಿಲ್ಲ. ಈಗಲೂ ಯಾರಾದರೂ ಸನ್ಮಾನ ಮಾಡುತ್ತೇನೆಂದು ಬಂದರೆ, ಸನ್ಮಾನದ ದಿನ ಯಾವೆಲ್ಲ ಗಣ್ಯರನ್ನು ಕರೆಯಬೇಕೆಂದು ಅವರೇ ಸೂಚಿಸುತ್ತಾರೆ. ಅಭಿನಂದನಾ ಪತ್ರ ಹೇಗಿರಬೇಕು ಮತ್ತು ಯಾವ ಮುದ್ರಣಾಲಯದಲ್ಲಿ ವಿನ್ಯಾಸಗೊಳಿಸಬೇಕು, ಸನ್ಮಾನಕ್ಕಿಂತ ಮುಂಚೆ ಎಲ್ಲೆಲ್ಲಿ ಬ್ಯಾನರುಗಳನ್ನು ನೇತುಹಾಕಬೇಕು ಇತ್ಯಾದಿ ಇತ್ಯಾದಿಗಳನ್ನೆಲ್ಲ ತಾವೇ ತಿಳಿಸುತ್ತಾರೆ. ಆಯೋಜಕರು ಅಷ್ಟು ಆಸಕ್ತಿ ತೋರಿಸದಿದ್ದಲ್ಲಿ ತಾವೇ ಸ್ವತಃ ಆ ಕೆಲಸಗಳನ್ನು ಮಾಡುತ್ತಾರೆ. ಕಳೆದೆರಡು ವರ್ಷಗಳಿಂದಲೂ ಉಪನ್ಯಾಸಕರೊಬ್ಬರು ಐತಾಳರ ಸನ್ಮಾನ ಪತ್ರಗಳನ್ನು ಬರೆದುಕೊಡುತ್ತಾ ಬಂದಿದ್ದಾರೆ. ಆಗಾಗ ಅವರಿಗೆ ಹೋಳಿಗೆ, ಜಿಲೇಬಿ ಪ್ಯಾಕೆಟ್ಟುಗಳನ್ನು ಕೊಟ್ಟು ಐತಾಳರು ಋಣಸಂದಾಯ ಮಾಡುತ್ತಿರುತ್ತಾರೆ. ಇವಕ್ಕೆಲ್ಲ ತಗಲುವ ಖರ್ಚುಗಳು ಮತ್ತು ಓಡಾಟಗಳು ತಮ್ಮ ಜವಾಬ್ಧಾರಿಗೆ ಬಾರದಿರುವುದರಿಂದ ಸಂಘಟಕರೂ ಖುಷಿಯಾಗುತ್ತಾರೆ. ಪತ್ರಿಕಾ ವರದಿಗಾರರಿಗೆ ಅವರೇ ಖುದ್ದು ಫೋನುಮಾಡಿ ತಮ್ಮ ಸನ್ಮಾನ ಕಾರ್ಯಕ್ರಮಕ್ಕೆ ಕರೆಯುತ್ತಾರೆ. ಪತ್ರಿಕಾ ದಿನಾಚರಣೆಯಂದು ಪತ್ರಕರ್ತಸ್ನೇಹಿತರು ನಡೆಸುವ ಅದ್ದೂರಿ ಕಾರ್ಯಕ್ರಮಕ್ಕೆ ಈಗ್ಗೆ ಮೂರುವರ್ಷಗಳಿಂದ ಐತಾಳರೇ ಉಚಿತವಾಗಿ ಊಟ ಉಪಹಾರ ನೀಡುತ್ತಾ ಬಂದಿರುವುದರಿಂದ ಅವರೂ ಐತಾಳರ ಸನ್ಮಾನ ಕಾರ್ಯಕ್ರಮಗಳನ್ನು ತಪ್ಪದೇ ವರದಿಮಾಡುತ್ತಾರೆ. ಐತಾಳರಲ್ಲಿ ಅವರ ಅಷ್ಟೂ ಇನ್ನೂರಾ ಇಪ್ಪತ್ತಾರು ಸನ್ಮಾನಗಳ ಪತ್ರಿಕಾ ವರದಿಗಳ ತುಣುಕಗಳಿವೆ. ಅವುಗಳನ್ನೆಲ್ಲ ಫೈಲಿನಲ್ಲಿ ದಿನಾಂಕವಾರು ಜೋಡಿಸಿಟ್ಟುಕೊಂಡಿದ್ದಾರೆ. ಅದೇ ಫೈಲಿನಲ್ಲಿ ತಮ್ಮ ಪರಿಚಯ ಪತ್ರದ ಅನೇಕ ಪ್ರತಿಗಳನ್ನು ಇಟ್ಟುಕೊಂಡಿದ್ದಾರೆ. ಕಾರ್ಯಕ್ರಮ ನಡೆಸುವವರು ಅವುಗಳನ್ನು ಕೇಳಲಿ ಕೇಳದಿರಲಿ ಐತಾಳರು ಅವರಿಗೊಂದು ಪ್ರತಿ ನೀಡುತ್ತಾರೆ. ಕೆಲವು ಸಂಘಟಕರು ಸರಿಯಾಗಿ ಪೂರ್ವಸಿದ್ಧತೆಮಾಡಿಕೊಳ್ಳದೇ ಕಾರ್ಯಕ್ರಮ ಹಮ್ಮಿಕೊಳ್ಳುವುದರಿಂದ ಹಾರವನ್ನೋ ಶಾಲನ್ನೋ ತರಲು ಮರೆತು ಸನ್ಮಾನದ ಸಂದರ್ಭದಲ್ಲಿ ಪೇಚಾಡುವುದನ್ನು ಐತಾಳರು ಅನೇಕ ಬಾರಿ ಕಂಡಿದ್ದಾರೆ. ಅನುಭವಿಸಿದ್ದಾರೆ ಕೂಡಾ. ಅದಕ್ಕೂ ಪರಿಹಾರ ಕಂಡುಕೊಂಡಿರುವ ಐತಾಳರು ತಮ್ಮ ಬ್ಯಾಗಿನಲ್ಲಿ ಸದಾ ಒಂದು ಗಂಧದ ಹಾರ, ಒಂದು ಶಾಲು ಇಟ್ಟುಕೊಂಡಿರುತ್ತಾರೆ. ಈ ವಿಚಾರ ಎಲ್ಲರಿಗೂ ಗೊತ್ತಾಗಿರುವುದರಿಂದ ಐತಾಳರ ಸನ್ಮಾನ ಇದ್ದರೆ ಈಗೀಗ ಸಂಘಟಕರು ಹಾರ ಮತ್ತು ಶಾಲನ್ನು ಹೊರತುಪಡಿಸಿ ಉಳಿದ ಸಾಮಗ್ರಿಗಳನ್ನು ಮಾತ್ರ ಖರೀದಿಸುತ್ತಾರೆ. ಎರಡು ಕಿಲೋಗ್ರಾಮ್ ಹಣ್ಣು, ಒಂದು ಹರಿವಾಣ ಮತ್ತು ಸ್ಮರಣಿಕೆಯಾಗಿ ಒಂದು ಮೂರ್ತಿ..ಅಬ್ಬಬ್ಬಾ ಎಂದರೆ ಐದುನೂರು ರೂಪಾಯಿಗೆ ಒಂದು ಸನ್ಮಾನ ಮುಗಿದುಬಿಡುತ್ತದೆ. ಆದರೆ, ಪ್ರತಿ ಸನ್ಮಾನದಲ್ಲೂ ಐತಾಳರು ಸಾವಿರಾರು ರೂಪಾಯಿಗಳನ್ನು ಕಳೆದುಕೊಳ್ಳುತ್ತಾರೆ. ಹೀಗೆ ಆದ ನಷ್ಟವನ್ನು ಸನ್ಮಾನ ಮಾಡದ ಗ್ರಾಹಕರಿಗೆ ವರ್ಗಾಯಿಸಲು ಪ್ರಯತ್ನಿಸಿ ಐತಾಳರು ಅಡುಗೆಯ ದರ ಹೆಚ್ಚಳ ಮಾಡಿದ್ದರಿಂದ ಇನ್ನಷ್ಟು ಅನಾಹುತವೇ ಆಗಿದೆ. ಇದರಿಂದ ಸನ್ಮಾನ ಮಾಡುವವರ ಸಂಖ್ಯೆ ಮತ್ತಷ್ಟು ಹೆಚ್ಚಿದೆ. ಪ್ರತಿ ಸನ್ಮಾನವೂ ಐತಾಳರನ್ನು ಸಾಲದ ಶೂಲದಲ್ಲಿ ಇನ್ನಷ್ಟು ಆಳಕ್ಕೆ ತಳ್ಳುತ್ತಲೇ ಇದೆ.
   ಹರಿಕೃಷ್ಣ ಐತಾಳರು ತಮ್ಮ ವ್ಯವಹಾರದಲ್ಲಿ ಸೋಲುತ್ತಿರುವುದು ಮತ್ತು ಅವರಿಗೆ ಸನ್ಮಾನದ ಗೀಳು ವಿಪರೀತವಾಗಿ ಅಂಟಿಕೊಂಡಿರುವುದು ದೊಡ್ಡ ಐತಾಳರಿಗೆ ಈಗ ಖಚಿತವಾಗಿಹೋಗಿತ್ತು. ನೇರವಾಗಿ ಅಲ್ಲದಿದ್ದರೂ, ಹರಿಕೃಷ್ಣ ಐತಾಳರ ಅಡುಗೆಯವರನ್ನು ಆಗಾಗ ಕರೆದು ವ್ಯವಹಾರ ಹೇಗೆ ನಡೆಯುತ್ತಿದೆ ಎಂದು ವಿಚಾರಿಸುತ್ತಿದ್ದರು. ಅನಸೂಯಮ್ಮನವರನ್ನು ಒಂದೆರಡುಬಾರಿ ಕರೆದು ಗಂಡನಿಗೆ ಕೆಲಸದ ಮೇಲೆ ಹೆಚ್ಚಿಗೆ ಗಮನಕೊಡುವಂತೆ ತಿಳಿಸಲು ಸೂಚಿದ್ದರು. ಹೊಟ್ಟೆಕಿಚ್ಚಿನಿಂದಾಗಿಯೇ ಈ ಮುದುಕ ಹೀಗೆ ಹೇಳುವುದು ಎಂದು ಅನಸೂಯಮ್ಮ ತಿಳಿದದ್ದಷ್ಟೇ ಅಲ್ಲ, ಅದನ್ನು ಅವರಿವರ ಹತ್ತಿರ ಹೇಳಿಯೂ ಬಿಟ್ಟಿದ್ದರು. ಸುದ್ದಿ ಹೇಗೋ ವೆಂಕಟರಮಣ ಐತಾಳರಿಗೆ ತಿಳಿದು `ಅವ ಏನಾದರೂ ಮಾಡ್ಕೊಂಡು ಸಾಯಲಿ, ನಿಮಗೆಂತಕೆ  ಅದರ ಉಸಾಬರಿ?’ ಎಂದು ಅಪ್ಪನಿಗೆ ತಿಳಿಹೇಳಿದ್ದರು. 
                                               ***
  `ಹರಿಕೃಷ್ಣ ಐತಾಳರ ಮನೆಯಲ್ಲವ?’ ಎಂದು ಅವರು ಕೇಳಬಹುದಾದ ಪ್ರಶ್ನೆಯನ್ನು ಮೊದಲೇ ಊಹಿಸಿಕೊಂಡದ್ದರಿಂದ, ಕಾರು ಇಳಿದು ಅವರು ಬಾಯಿತೆರೆಯುತ್ತಲೇ `ಹೌದೌದು.. ಇದೇ ಮನೆ’ ಎಂದು ಅನಸೂಯಮ್ಮ ಗೇಟು ತೆರೆದು ಸ್ವಾಗತಿಸಿದರು. ಸೂಟು ಬೂಟು ಧರಿಸಿ ಬಂದ ನಾಲ್ವರಲ್ಲಿ ಒಬ್ಬರು `ಇದ್ದಾರಾ ಐತಾಳರು?’ ಎಂದು ಕೇಳಿದರು. `ಸ್ನಾನಕ್ಕೆ ಹೋಗಿದ್ದಾರೆ, ಈಗ ಬರ್ತಾರೆ, ಕುಳಿತುಕೊಳ್ಳಿ’ ಎಂದು ಹೇಳಿ ಅನಸೂಯಮ್ಮ ಚಹಾ ಮಾಡಲು ಒಳಗೆ ಹೊರಟರು. ಅಡುಗೆ ಮನೆಗೆ ಹೋಗುವ ಮೊದಲು `ನಿಮಗೆ ಚಾ ಆಗ್ಬಹುದಾ ಕಾಫಿ ಮಾಡಲಾ’ ಎಂದು ಕೇಳಬೇಕೆಂದುಕೊಂಡವರು ಹಾಗೆ ಕೇಳದೇ ಒಳನಡೆದರು. ಹಾಗೆ ಕೇಳದಿರಲು ನಿನ್ನೆಯಷ್ಟೇ ಮಾಡಿದ ಕಷಾಯ ಪುಡಿಯ ನೆನಪಾದದ್ದು ಒಂದು ಕಾರಣವಾದರೂ ಅತಿಥಿಗಳಲ್ಲೇ ಆಯ್ಕೆ ಕೇಳಿದರೆ, ಅವರು `ಏನೂ ಮಾಡುವುದು ಬೇಡ’ ಅಂತಲೋ ‘ನಾವು ಈಗಷ್ಟೇ ಕಾಫಿ ಮುಗಿಸಿ ಬಂದಿದ್ದೇವೆ’ ಅಂತಲೋ ಏನಾದರೊಂದು ಹೇಳುವುದು, ಆ ನಂತರ ಒತ್ತಾಯ ಮಾಡುವುದು, ಹೀಗೆ, ಪೂರ್ವನಿರ್ಧಾರಿತವೆಂಬಂತೆ ನಡೆಯುವ ನಾಟಕೀಯ ಸನ್ನಿವೇಶಗಳನ್ನು ತಪ್ಪಿಸುವ ಉದ್ಧೇಶವೂ ಅನಸೂಯಮ್ಮನಿಗಿತ್ತು. 
  ಯಾರ್ಯಾರೋ ತನ್ನ ಗಂಡನಿಗೆ ಸನ್ಮಾನ ಮಾಡುತ್ತಾರೆ. ಆದರೆ, ತನ್ನ ತವರುಮನೆ ಊರಿನವರು ಮಾತ್ರ ನಿರ್ಲಕ್ಷ ಮಾಡುತ್ತಿದ್ದಾರೆ ಅಂತ ಗಂಡನನ್ನು ಸನ್ಮಾನಕ್ಕೆ ಕರೆಯಲು ಯಾರಾದರೂ ಬಂದಾಗ ಅನಸೂಯಮ್ಮಗೆ ಅನಿಸುತ್ತಿರುತ್ತದೆ. ತವರೂರಲ್ಲಿ ಗಂಡ ಹೆಂಡತಿ ಇಬ್ಬರಿಗೂ ಶಾಲು ಹೊದೆಸಿ ಸನ್ಮಾನ ಮಾಡುತ್ತಿರುವುದನ್ನು ಹಗಲುಗನಸು ಕಾಣುತ್ತಾ ಆಗಾಗ ಖುಷಿಪಟ್ಟುಕೊಳ್ಳುತ್ತಾರೆ. ಇದೆಲ್ಲ ಊಹೆ ಎಂದು ಎಚ್ಚರಗೊಳ್ಳುತ್ತಲೇ ಪೆಚ್ಚಾಗುತ್ತಾರೆ. ನೂರನೇ ಸನ್ಮಾನವನ್ನು ತನ್ನ ತವರೂರಲ್ಲೇ ಮಾಡಬೇಕೆಂದು ತಾನು ಪಟ್ಟುಹಿಡಿದ ವಿಚಾರವನ್ನು ಈಚೆಗೆ ತವರಿಗೆ ಹೋದಾಗ ಹೇಳಿದ್ದರೂ ತನ್ನ ಅಣ್ಣನ ಮಕ್ಕಳಾಗಲೀ ಇನ್ಯಾವ ಹಿರಿಯರಾಗಲೀ ಉತ್ಸಾಹ ತೋರಿರಲಿಲ್ಲ. `ಅವರಿಗೆ ಅಷ್ಟೆಲ್ಲ ಕಷ್ಟ ಆಪದಾರೆ, ಖರ್ಚೆಲ್ಲ ನಾನೇ ಕಂಡಕಳ್ತೇನಂದ ಹೇಳ’ ಎಂದು ಐತಾಳರು ಅನಸೂಯಮ್ಮನಲ್ಲಿ ಹೇಳಿದ್ದರು. ಅದನ್ನೂ ಅನಸೂಯಮ್ಮ ಸೂಚ್ಯವಾಗಿ ಮುಟ್ಟಿಸಿದ್ದರು. ಆ ಊರಿನ ಯುವಕ ಸಂಘದ ವಾರ್ಷಿಕೋತ್ಸವದ ಆಮಂತ್ರಣ ಬಂದಾಗ ಐತಾಳರು ಚಂದಾ ಹಣವನ್ನು  ತಕ್ಷಣ ಮನಿಯಾರ್ಡರ್ ಮೂಲಕ ಕಳುಹಿಸಿದ್ದರು. ಊಹೂಂ.. ಐತಾಳರನ್ನು ಸನ್ಮಾನಿಸುವ ಇರಾದೆ ಇರುವ ಯಾವ ಚಿನ್ಹೆಗಳೂ ಕಂಡಿರಲಿಲ್ಲ. ಇದರ ಬದಲು, ಕೆಲವು ಹುಡುಗರು `ಎಂತಕಂದ್ ಅವರಿಗೆ ಸನ್ಮಾನ ಮಾಡೂದ? ಈ ಊರ್ನ ಹೆಣ್ಗಳ ಮದುವೆಯಾದ ಎಷ್ಟಪ ಅಳಿಯಂದಿಕಳಿಲ್ಲ?!’ ಎಂದು ಕೇಳಿದ್ದು ಅನಸೂಯಮ್ಮನ ಕಿವಿಗೂ ಬಿದ್ದು ಗಂಡನ ನೂರನೇ ಸನ್ಮಾನ ತನ್ನ ತವರೂರಲ್ಲೇ ನಡೆಯಬೇಕೆಂಬ ಆಸೆಯನ್ನು ಕೈ ಬಿಟ್ಟಿದ್ದರು. ಆದರೆ, ಖಾಲಿ ಇರುವ ನೂರನೇ ಸನ್ಮಾನದ ಸ್ಥಾನವನ್ನು ಯಾವುದಾದರೂ ಪ್ರತಿಷ್ಠಿತ ಸಂಸ್ಥೆಗಳ ಮೂಲಕ ಸನ್ಮಾನ ಪಡೆಯುವುದರಿಂದಲೇ ತನ್ನ ಗಂಡ ತುಂಬಿಸಿಕೊಳ್ಳಬೇಕೆಂದು ಮನದಲ್ಲೇ ಆಸೆಪಡುತ್ತಿದ್ದರು. ಬಂದವರ ಸೂಟು-ಬೂಟು, ಹಾವಭಾವಗಳನ್ನು ಗಮನಿಸಿ ಯಾವುದೋ ದೊಡ್ಡ ಸಂಸ್ಥೆಯವರೇ ಇರಬೇಕು ಎಂದು ಊಹಿಸಿದರು. ಬೇಗ ಸ್ನಾನ ಮಾಡಲು ಗಂಡನಲ್ಲಿ ಹೇಳುವುದಕ್ಕಾಗಿ ಮತ್ತು ಬಂದವರು ಯಾರೆಂಬುದನ್ನು ಖಚಿತಪಡಿಸಿಕೊಳ್ಳುವುದಕ್ಕಾಗಿ ಅಡುಗೆ ಮನೆಯೊಳಗೆ ಹೋದವರು ಪುನಃ ಹೊರಬಂದು `ಯಾರು ಬಂದಿದ್ದಾರೆಂದು ಅವರಿಗೆ ಹೇಳಲಿ?’ ಎಂದು ಕೇಳಿದರು. `ಬ್ಯಾಂಕಿನವರು ಎಂದು ಹೇಳಿ... ಅವರಿಗೆ ಗೊತ್ತಾಗುತ್ತದೆ’ ಅಂದರು. `ಬ್ಯಾಂಕಿನವರು’ ಎಂಬ ಪದ ಅನಸೂಯಮ್ಮನವರಿಗೆ ಯಾಕೋ ಹಿತವಾಗಿ ಕೇಳಿಸಲಿಲ್ಲ. ಒಲೆ ಹೊತ್ತಿಸುವ ಮೊದಲು ಬಚ್ಚಲು ಮನೆಗೆ ಹೋಗಿ `ಯಾರೋ ಬ್ಯಾಂಕಿನವರ ಬಂದೀರ, ಬೇಗ ಸ್ನಾನ ಮಾಡಿ, ಅಂದರು. `ಯಾರ?’ ಎಂದು ಗಂಡ ಪುನಃ ವಿಚಾರಿಸಿದಾಗ ಅವರ ಧ್ವನಿಯಲ್ಲಿ ಆತಂಕವಿರುವ ಹಾಗೆ ಅನ್ನಿಸಿತು. ತಾನು ಗುರುತಿಸಿರುವುದು ತನಗೇ ಇರುವ ಆತಂಕವನ್ನೋ ಅಥವಾ ಗಂಡನ ಧ್ವನಿಯಲ್ಲಿರುವ ಆತಂಕವನ್ನೋ ಎಂಬ ಗೊಂದಲದ ನಡುವೆ- `ಯಾರೋ ಬ್ಯಾಂಕಿನವರಂಬ್ರ’ ಎಂದಷ್ಟೇ ಹೇಳಿ ಅಡುಗೆ ಮನೆಗೆ ಬಂದರು.
   ಕಷಾಯ ಆಗುವುದರೊಳಗೆ ಗಂಡ ಸ್ನಾನ ಮುಗಿಸಿ ಬರುತ್ತಾರೆಂದುಕೊಂಡಿದ್ದ ಅನಸೂಯಮ್ಮಗೆ ನಿರಾಸೆಯಾಯಿತು. ಟೀಪಾಯಿಯ ಮೇಲಿರುವ ಸ್ಮರಣಿಕೆಯನ್ನು ಪಕ್ಕಕ್ಕೆ ಸರಿಸಿ ಒಂದು ಪ್ಲೇಟಿನಲ್ಲಿ ಚಕ್ಕುಲಿ ಮತ್ತು ಗಂಡನಿಗೂ ಸೇರಿಸಿ ನಾಲ್ಕು ಕಪ್ಪು ಕಷಾಯ ತಂದಿಟ್ಟರು. ಗಂಡ ಇನ್ನೂ ಯಾಕೆ ಸ್ನಾನ ಮುಗಿಸಲಿಲ್ಲವೆಂಬ ಆತಂಕವನ್ನು ತೋರಿಸಿಕೊಳ್ಳದೆ `ಅವರು ಈಗ ಬರ್ತಾರೆ, ನೀವು ತೆಗೆದುಕೊಳ್ಳಿ’ ಎಂದರು. ಪುನಃ ಬಚ್ಚಲುಮನೆಗೆ ಹೋಗಿ ಚಿಲಕದ ಸದ್ದು ಮಾಡಿ ಬಂದರು. ಕಷಾಯ ಖಾಲಿಯಾದರೂ ಗಂಡ ಬಾರದಾದಾಗ ಅನಸೂಯಮ್ಮಗೆ ಅವಮಾನ ಆತಂಕಗಳೆಲ್ಲ ಒಟ್ಟಿಗೆ ಸೇರಿ ಹೇಗೇಗೋ ಆಯಿತು. ಈ ಬಾರಿ ಬಚ್ಚಲು ಮನೆಗೆ ಹೋದವರು ಸ್ವಲ್ಪ ಗಟ್ಟಿಯಾಗೇ ಕರೆದರು. ಮಾರುತ್ತರ ಬರಲಿಲ್ಲ. ಇನ್ನೊಮ್ಮೆ ಕರೆದರು, ಈಗಲೂ ಉತ್ತರವಿಲ್ಲ. ಕದ ಬಡಿದರೂ ಮಾತಿಲ್ಲ. ಅನಸೂಯಮ್ಮಗೆ ಏನೇನೋ ನೆನಪಾಗಿ ಭಯವಾಯಿತು. ಒಂದೇ ಸಮನೆ ಕೂಗಿಕೊಳ್ಳಲು ಪ್ರಾರಂಭಿಸಿದರು.
   ಏನೋ ಅನಾಹುತವಾಗಿದೆ ಎಂಬುದನ್ನು ಗ್ರಹಿಸಿ ಬ್ಯಾಂಕಿನವರು ಬಚ್ಚಲ ಮನೆಯ ಕಡೆ ಬಂದರು. ಅನಸೂಯಮ್ಮನನ್ನು ಸಮಾಧಾನಪಡಿಸುವುದು ಮತ್ತು ಒಳಗಿರುವ ಐತಾಳರನ್ನು ಹೊರತರುವುದು ಇವೆರಡರಲ್ಲಿ ಯಾವುದಕ್ಕೆ ಆಧ್ಯತೆ ದೊರೆಯಬೇಕು ಎಂಬುದನ್ನು ಲೆಕ್ಕಹಾಕುತ್ತಾ ಪ್ರೊಬೆಷನರಿ ಅಧಿಕಾರಿಯೊಬ್ಬರು ತಮ್ಮ ಮ್ಯಾನೇಜಮೆಂಟ್ ತರಬೇತಿಯ ಪಟ್ಟುಗಳನ್ನು ಪಣಕ್ಕಿಡುವ ಹುಮ್ಮಸ್ಸಿನಲ್ಲಿರುವಾಗಲೇ ಹಿರಿಯರೊಬ್ಬರು ಏನೋ ಹೊಳೆದವರಂತೆ, `ಐತಾಳರೆ, ಬರುವ ಗುರುವಾರ ನಮ್ಮ ಬ್ಯಾಂಕಿನ ಸಂಸ್ಥಾಪಕರ ನೂರನೇ ಜನ್ಮದಿನದ ಆಚರಣೆ ಇದೆ. ನೀವು ನಮ್ಮ ನೂರನೇ ಅಕೌಂಟ್ ಹೋಲ್ಡರ್ ಆಗಿರುವುದರಿಂದ ನಿಮಗೆ ಸನ್ಮಾನವಿದೆ. ಕಾಗದ ಕೊಡಲು ಬಂದಿದ್ದೇವೆ’ ಎಂದು ಒಂದೇ ಉಸಿರಿನಲ್ಲಿ ಗಟ್ಟಿಯಾಗಿ ಹೇಳಿದರು. 
   ಕಿರ್ರನೆ ಶಬ್ಧ ಮಾಡುತ್ತಾ ತೆರೆದುಕೊಂಡ ಬಾಗಿಲಿನ ಜೊತೆಗೆ ಹೊರಬಂದ ಹರಿಕೃಷ್ಣ ಐತಾಳರು `ನೀರು ಬಹಳ ಬಿಸಿ ಇತ್ತ್ತು...ತಲೆ ತಿರುಗಿದ  ಹಾಗಾಗಿ ಅಲ್ಲೆ ಕುಳಿತುಬಿಟ್ಟೆ.. ಛೇ!...ನೀವೆಲ್ಲ ಕಾಯುವ ಹಾಗಾಯಿತು’ ಎಂದರು. 
  ಅನಸೂಯಮ್ಮಗೆ ನಿಂತಿರುವ ನೆಲ ನಿಧಾನಕ್ಕೆ ವಾಲುತ್ತಿರುವಂತೆ ಅನ್ನಿಸಿತು. ಗೋಡೆ ಹಿಡಿದುಕೊಂಡು ಅಲ್ಲೇ ಕುಸಿದುಬಿಟ್ಟರು.
______________________________________________________________

ಕತೆ-ನೂರನೆಯ ಸಂಮಾನ





ಯುನಿಕೋಡ್ ಅಕ್ಷರಗಳಲ್ಲಿ ಈ ಕತೆಯನ್ನು ಓದಲು ಈ ಲಿಂಕನ್ನು ಕ್ಲಿಕ್ ಮಾಡಿ
















Sunday 25 January 2015

ತಲೆಯೆತ್ತಿ ನೋಡೋಣ! ತಲೆಯೆತ್ತಿ ನಡೆಯೋಣ!!

    
ಹೊಸದಿಶೆಯತ್ತ ದಾಪುಗಾಲು ಹಾಕುತ್ತಿರುವಾಧುನಿಕ ಜಗತ್ತನ್ನು ಹಿಂದಕ್ಕೆ ತಳ್ಳುವ ಪ್ರಯತ್ನಗಳು ನಿಮ್ಮ ಗಮನಕ್ಕೂ ಬಂದಿವೆ.
 ಅಂದಶೃದ್ಧೆಗಳನ್ನು ವಿರೋಧಿಸುವ ಬದಲು ಪೋಷಿಸುವ ಪ್ರಯತ್ನಗಳಿಗೆ ಧರ್ಮರಕ್ಷಣೆಯ ಮಹತ್ವ ಪ್ರಾಪ್ತವಾಗುತ್ತಿದೆ. ಮೂಢನಂಬಿಕೆಗಳು ಹಿಂದೆ ಇರಲಿಲ್ಲವೆಂಬುದು ನನ್ನ ವಾದವಲ್ಲ. ಆದರೆ, ಸ್ವಾಮಿ ವಿವೇಕಾನಂದರ ಪ್ರಯತ್ನಗಳನ್ನೇ ಉದಾಹರಿಸಿ ಹೇಳುವುದಾದರೆ- ಮೂಢನಂಬಿಕೆಗಳು ಮತ್ತು ಪೊಳ್ಳು ಆಚರಣೆಗಳನ್ನು ಹೋಗಲಾಡಿಸಿ ಧರ್ಮವನ್ನು ಪುನರುಜ್ಜೀವನಗೊಳಿಸಬಹುದೆಂದು ಅವರು ಭಾವಿಸಿದ್ದರು. ಈಗ, ಪರಿಸ್ಥಿತಿ ಹಾಗಿಲ್ಲ. ಜಾತಿ ಪದ್ಧತಿ ಮತ್ತು ಅಸ್ಪøಶ್ಯತೆಯಂತಹ ಸಾಮಾಜಿಕ ಅನಿಷ್ಟಗಳು, ಪುರೋಹಿತಶಾಹಿ, ಸತಿಪದ್ಧತಿ, ಜ್ಯೋತಿಷ್ಯ ಮತ್ತಿತರ ಜೀವ ವಿರೋಧಿ ನಂಬಿಕೆಗಳನ್ನು ಉಳಿಸಿಕೊಂಡು ಹೋಗುವ ಮೂಲಕವೇ ಧರ್ಮವನ್ನು ರಕ್ಷಿಸಬೇಕೆಂಬ ವಾದ ಬಲಯುತವಾಗುತಿದೆ. ಕಂದಾಚಾರಗಳನ್ನು ಬಯಲಿಗೆ ತಂದು ಅವುಗಳ ವಿರುದ್ಧ ಜನಜಾಗೃತಿಯನ್ನು ನೀವು ಮೂಡಿಸುತ್ತೀರಾದರೆ, ನಿಮಗೆ ಧರ್ಮದ್ರೋಹಿಯೆಂಬ ಪಟ್ಟ ದೊರೆಯುತ್ತದೆ. ಆದುದರಿಂದಲೇ, ಪ್ರಗತಿಪರವಾದ ಸಿನೇಮಾವೊಂದನ್ನು ನಿಷೇಧಿಸಬೇಕೆಂಬ ಒತ್ತಾಯ ಕೇಳಿಬಂತು. ಬೆಳಗ್ಗೆದ್ದರೆ, ಬೇರೆ ಬೇರೆ ಧರ್ಮಕ್ಕೆ ಸಂಬಂಧಿಸಿದ ಗುರುಗಳು ಟಿ.ವಿ ಯ ಮೂಲಕ ನಮ್ಮ ಡ್ರಾಯಿಂಗ್ ರೂಮ್ ಪ್ರವೇಶಿಸಿಸಲು ಯಾವ ಅಡತಡೆಯೂ ಇಲ್ಲವಾಯಿತು. ಇತ್ತೀಚೆಗೆ ತನ್ನನ್ನು ತಾನೇ `ವೈಜ್ಞಾನಿಕ ಜ್ಯೋತಿಷಿ’ ಎಂಬ ವಿಲಕ್ಷಣ ಹೆಸರಿನಿಂದ ಕರೆಯಿಸಿಕೊಳ್ಳುವ ಜ್ಯೋತೀಷಿಯೊಬ್ಬ ರೇಪ್ ಭವಿಷ್ಯವನ್ನು ನುಡಿದಿದ್ದ. ಇಂತಹ ರಾಶಿಯವರು ಇಂತಿಂತ ದಿನ ಅತ್ಯಾಚಾರಕ್ಕೊಳಗಾಗುತ್ತರಂದು ಆತ ತಿಳಿಸಿದ್ದ. ಅತ್ಯಾಚಾರವಾಗುವ ಸ್ಥಳ, ಅತ್ಯಾಚಾರ ಮಾಡುವ ವ್ಯಕ್ತಿಯ ಬಗ್ಗೆಯೂ ಸುಳಿವು ನೀಡಿದ್ದ. ಇಂತವರು ಮೈದುನನಿಂದ, ಇವರು ಮನೆಕೆಲಸದವನಿಂದ, ಇನ್ನುಳಿದವರು ಕಛೇರಿಯ ಬಾಸಿನಿಂದ ಹೀಗೆ ಆತನ ಭವಿಷ್ಯ ಮುಂದುವರಿದಿತ್ತು. ಆಶ್ಚರ್ಯವೆಂದರೆ, ವೈಜ್ಞಾನಿಕ ಮನೋಭಾವ, ಮಾನವೀಯತೆ, ಪ್ರಶ್ನಿಸುವ ಮನಬೋಭಾವ ಮತ್ತು ಪ್ರಗತಿಶೀಲತೆಯನ್ನು ಬೆಳೆಸಿಕೊಳ್ಳುವುದು ಭಾರತದ ಸಂವಿಧಾನದ ಪ್ರಕಾರ ಮೂಲಭೂತ ಕರ್ತವ್ಯವಾದರೂ, (45/51 ಮೂಲಭೂತ ಕರ್ತವ್ಯಗಳು, ಭಾರತದ ಸಂವಿಧಾನ)  ಅದೇ ಸಂವಿಧಾನದ ಆಶಯಗಳನ್ನು ಅರಗಿಸಿಕೊಂಡು ಹುಟ್ಟಿದ ಕಾನೂನುಗಳು ಆ ಜ್ಯೋತಿಷಿಯನ್ನು ಶಿಕ್ಷಿಸಲಿಲ್ಲ. 
     ವಿಜ್ಞಾನ, ಹೇಳಿಕೇಳಿ ಪುರಾವೆಗಳನ್ನು ಆಧರಿಸಿ ಉಸಿರಾಡುವ ಯೋಚನಾ ಪದ್ಧತಿ. ಇಲ್ಲಿ ನಂಬಿಕೆಗೆ ಸ್ಥಾನವಿಲ್ಲ.` ನೀನು ನನ್ನ ಮಾತನ್ನೂ ನಂಬದಿರು. ಸ್ವತಃ ಯೋಚಿಸು’ ಎಂದು ನುಡಿದ ಶಾಖ್ಯಮುನಿ ಸಿದ್ಧಾರ್ಥ ಬುದ್ಧನಾದ. `ಧರ್ಮಗ್ರಂಥಗಳಲ್ಲಿ ಉದ್ಧರಿಸಲ್ಪಟ್ಟಿದೆ ಎಂಬ ಕಾರಣಕ್ಕಾಗಿ ನಂಬದಿರು; ಮಹಾತ್ಮರು ಹೇಳಿದ್ದಾರೆಂಬ ಕಾರಣಕ್ಕಾಗಿ ನಂಬದಿರು; ನಂಬಿ ನಂಬಿ ಅಭ್ಯಾಸವಾಗಿದೆ ಎಂಬ ಕಾರಣಕ್ಕಾಗಿ ನಂಬದಿರು, ಸ್ವತಃ ಯೋಚಿಸು’ ಎಂದಿದ್ದ ಬುದ್ಧ. ಗುರುವೇ, ನೀನು ಹೇಳುವ ಮಾತುಗಳು ಧರ್ಮಗ್ರಂಥಗಳಲಿಲ್ಲ ಎಂದು ನುಡಿದ ಶಿಷ್ಯನಿಗೆ ಮಾರುತ್ತರಿಸಿದ ಬುದ್ಧ, ಹಾಗಾದರೆ ಅವುಗಳನ್ನು ಸೇರಿಸು ಅಂದಿದ್ದ. ನೀನು ಹೇಳುವ ಮಾತುಗಳು ಧರ್ಮಗ್ರಂಥಗಳು ಹೇಳಿದ್ದಕ್ಕೆ ವ್ಯತಿರಿಕ್ತವಾಗಿವೆ ಎಂದಿದ್ದಕ್ಕೆ ಬುದ್ದ ಪ್ರತಿಕ್ರಿಯಿಸಿದ್ದು ಹೀಗೆ-`ಹಾಗಾದರೆ, ಧರ್ಮಗ್ರಂಥಗಳಿಗೆ ತಿದ್ದುಪಡಿ ಅಗತ್ಯ’. ಬುದ್ಧನ ದಾರಿ ವಿಜ್ಞಾನದ ದಾರಿಯೂ ಹೌದು.
ಮಂಗಗಳ ಮೇಲೆ ನಡೆಸಿದ ಪ್ರಯೋಗವೊಂದನ್ನು (ಕೃಪೆ-ಸೈನ್ಸ್ ರಿಪೋರ್ಟರ್) ನಿಮ್ಮ ಗಮನಕ್ಕೆ ತರಲು ಪ್ರಯತ್ನಿಸುವೆ-
    ಐದು ಮಂಗಗಳನ್ನು ದೊಡ್ಡ ಪಂಜರದಲ್ಲಿಟ್ಟು ಪಂಜರದ ಮದ್ಯದಲ್ಲಿ ಕಂಬವೊಂದರ ತುದಿಗೆ ಬಾಳೆಹಣ್ಣುಗಳನ್ನು ತೂಗುಹಾಕಲಾಯಿತು. ಯಾವುದೋ ಒಂದು ಮಂಗ ಕಂಬವನ್ನು ಹತ್ತಿ ಬಾಳೆಹಣ್ಣು ಕೀಳಲು ಪ್ರಯತ್ನಿಸಿದ ಕೂಡಲೆ ಉಳಿದ ಮಂಗಗಳ ಮೇಲೆ ಕೊರೆಯುವ ಶೀತನೀರನ್ನು ಸುರಿಯಲಾಯಿತು. ಇದನ್ನು ಅನೇಕ ಬಾರಿ ಪುನರಾವರ್ತಿಸಿದ ಮೇಲೆ ಯಾವುದೇ ಮಂಗ ಬಾಳೆಹಣ್ಣು ಕೀಳಲು ಪ್ರಯತ್ನಸಿದರೆ ಅದರ ಮೇಲೆ ಉಳಿದ ನಾಲ್ಕು ಮಂಗಗಳು ಆಕ್ರಮಣ ಮಾಡುತ್ತಿದ್ದವು. ಈ ಹಂತದಲ್ಲಿ ಪಂಜರದಿಂದ ಒಂದು ಮಂಗವನ್ನು ಬದಲಿಸಲಾಯಿತು. ಹೊಸ ಮಂಗ ಬಾಳೆಹಣ್ಣನ್ನು ಕೀಳಲು ಪ್ರಯತ್ನಸಿದಾಗ ಯಥಾಪ್ರಕಾರ ಉಳಿದ ನಾಲ್ಕು ಮಂಗಗಳು ಆಕ್ರಮಣ ನಡೆಸಿದವು. ಆನಂತರ ಇನ್ನೊಂದು ಮಂಗವನ್ನು ಬದಲಿಸಿ ಮತ್ತೊಂದು ಹೊಸಮಂಗವನ್ನು ಸೇರಿಸಲಾಯಿತು. ಎರಡನೇ ಹೊಸಮಂಗ ಬಾಳೆಹಣ್ಣು ಕೀಳಲು ಪ್ರಯತ್ನಿಸಿದಾಗ ಪುನಃ ನಾಲ್ಕು ಮಂಗಗಳು ಆಕ್ರಮಣ ನಡೆಸಿದವು. ತನ್ನ ಮೇಲೆ ಶೀತನೀರಿನ ಪ್ರಯೋಗವಾಗಿರದಿದ್ದರೂ ಮೊದಲ ಹೊಸಮಂಗ ಕೂಡಾ ಎರಡನೇ ಹೊಸಮಂಗನ ಮೇಲೆ ಆಕ್ರಮಣ ನಡೆಸಿತು. ಹೀಗೆ ಒಂದೊಂದಾಗಿ ಉಳಿದ ಮೂರು ಹಳೆಯ ಮಂಗಗಳನ್ನು ಬದಲಿಸಿ ಶೀತನೀರಿನ ಪ್ರಯೋಗವಾಗದ ಮಂಗಗಳನ್ನು ಸೇರಿಸಲಾಯಿತು. ಆಗಲೂ, ಯಾವುದೇ ಮಂಗ ಬಾಳೆಹಣ್ಣನ್ನು ಕೀಳಲು ಹೋದಾಗ ಉಳಿದ ನಾಲ್ಕು ಮಂಗಗಳು ಕಾರಣವಿಲ್ಲದೆ ಆಕ್ರಮಣ ಮಾಡುತ್ತಿದ್ದವು.
    ಮೂಢನಂಬಿಕೆಗಳನ್ನು ಅನುಸರಿಸುವವರ ಪರಿಸ್ಥಿತಿ ಆ ಮಂಗಗಳಿಗಿಂತ ಬಿನ್ನವಲ್ಲ. ತಾವೇನು ಮಾಡುತ್ತಿದ್ದವೋ ಅದಕ್ಕೆ ಕಾರಣಗಳನ್ನು ಕೇಳಿಕೊಳ್ಳುವ ಗೋಜಿಗೇ ಹೋಗದೆ ಕಾಲವನ್ನು ತಳ್ಳುತ್ತಾ ಹಿಂದಕ್ಕೆ ಹಿಂದಕ್ಕೆ ಚಲಿಸುವ ಜನರ ಕಣ್ತೆರುಸುವುದು ನಮ್ಮ ಕಾಲದ ದೊಡ್ಡ ಸವಾಲು. 
     ಜ್ಯೋತಿಷ್ಯಕ್ಕೆ ಈ ಜಗತ್ತಿನ ಯಾವುದೇ ಪುರಾವೆಗಳು ಲಭ್ಯವಿಲ್ಲ. ಹದಿನೆಂಟು ಮಂದಿ ನೊಬೆಲ್ ಪ್ರಶಸ್ತಿ ವಿಜೇತರೂ ಸೇರಿದಂತೆ 190 ವಿಜ್ಞಾನಿಗಳು ಜ್ಯೋತಿಷ್ಯವನ್ನು ಖಂಡಿಸುವ ಹೇಳಿಕೆಗೆ ಸಹಿಹಾಕಿ ಅದನ್ನು `ಸುಳ್ಳು ವಿಜ್ಞಾನ’ ವಿಭಾಗಕ್ಕೆ ಸೇರಿಸಿದರು. ಅಸಮಾನ್ಯ ಮತ್ತು ಅಲೌಕಿಕ ಸಂಗತಿಗಳ ಕುರಿತು ವೈಕ್ಞಾನಿಕ ಸಂಶೋಧನೆ ನಡೆಸುವ (CSICOP) ಸಂಸ್ಥೆ ಜ್ಯೋತಿಷ್ಯವನ್ನು ಸಮರ್ಥಿಸುವ ಯಾವುದೇ ಪುರಾವೆ ಲಭ್ಯವಿಲ್ಲವೆಂದು ಕಳೆದ ವರ್ಷªಷ್ಟೇ ತಿಳಿಸಿದೆ. ಬರ್ಕಲೇ ಪ್ರಯೋಗಾಲಯದ ವಿಜ್ಞಾನಿ ಶಾನ್ ಕಾರ್ಲಸನ್ 265 ಮಂದಿಯ ಜಾತಕವನ್ನು 26 ಪ್ರಸಿದ್ಧ ಜ್ಯೋತಿಷಿಗಳಿಗೆ ನೀಡಿ ಆ 265 ಮಂದಿಯ ವ್ಯಕ್ತಿ ನಿರ್ಧಷ್ಟ ಗುಣಲಕ್ಷಣಗಳನ್ನು ಪಟ್ಟಿಮಾಡಲು ತಿಳಿಸಿದರು. ದೊರೆತ ಉತ್ತರಗಳಿಂದ ಕೇವಲ ಮೂವತ್ತೈದು ಶೇಕಡಾದಷ್ಟೇ ಅಂದರೆ, ಸಂಭವನೀಯತೆಯ ನಿಯಮದ ಪ್ರಕಾರವಷ್ಟೇ ಒಬ್ಬರಿಗೊಬ್ಬರು ತಾಳೆಯಾಗುತ್ತಿದ್ದರು. ಜಾತಕ, ಹಸ್ತಸಾಮುದ್ರಿಕ, ಸಂಖ್ಯಾಶಾಸ್ರ್ರ ಮತ್ತಿತರ ಪೊಳ್ಳುವಿದ್ಯೆಗಳ ಸಹಾಯದಿಂದ ವ್ಯಕ್ತಿಯ ಗುಣ ಲಕ್ಷಣಗಳನ್ನು ಆ ವ್ಯಕ್ತಿಯ ಎದುರೇ ಹೇಳುವಾಗ ಜ್ಯೋತಿಷಿಗಳು ಮಾರಾಟ ಪ್ರತಿನಿಧಿಗಳು, ಜಾಹಿರಾತುದಾರರು ಅನುಸರಿಸುವ ತಂತ್ರವನ್ನೇ ಅನುಸರಿಸುತ್ತಾರೆ. ಅದೇನೆಂದರೆ, ಹೇಳಬೇಕಾದ ಸಂಗತಿಗಳು ಸತ್ಯವಾಗಿರುವುದಕ್ಕಿಂತ ಕೇಳುವವನಿಗೆ ಇಷ್ಟವಾಗುವಂತಿರಬೇಕು. ``ಅವನಿಗೆ ಸತ್ಯ ಹೇಳಬೇಡ, ಅವನು ಯಾವುದು ಸತ್ಯವಾಗಬೇಕೆಂದು ಬಯಸುತ್ತಾನೋ ಅದನ್ನು ಹೇಳು’ ಇದು ಅವರ ಪ್ರಮುಖ ತಂತ್ರ. ಅಂತಹ ಒಂದು ತಂತ್ರವನ್ನು ಹೈಮನ್ ಉದ್ಧರಿಸುತ್ತಾರೆ-
`` ನಿಮ್ಮ ಕೆಲವು ಆಕಾಂಕ್ಷೆಗಳು ಅವಾಸ್ತವಿಕವಾದವು. ಕೆಲವು ಸಲ ನೀವು, ಎಲ್ಲರೊಡನೆ ಬೆರೆಯುವ, ಬಹರ್ಮುಖಿಗಳಾಗಿದ್ದಂತೆ ತೋರಿದರೂ ಕೆಲವೊಮ್ಮೆ ಅದೇಕೋ ಅಂರ್ಮುಖಿಗಳಾಗುತ್ತೀರಿ. ನಿಮ್ಮನ್ನು ನೀವು ಸಂಪೂರ್ಣವಾಗಿ ಇತರರಿಗೆ ಅರ್ಥವಾಗುವಂತೆ ವ್ಯಕ್ತಪಡಿಸುವುದಿಲ್ಲ. ಸರಿಯಾದ ಪುರಾವೆಗಳಿಲ್ಲದೆ ಇತರರ ಮಾತನ್ನು ನೀವು ಒಪ್ಪುವುದಿಲ್ಲ. ನಿಮ್ಮ ನಿರ್ಧಾರ ಸರಿಯಾಗಿದೆಯೇ ಇಲ್ಲವೇ ಎಂಬ ಬಗ್ಗೆ ನಿಮಗೆ ಅನೇಕ ಸಲ ಅನುಮಾನಗಳು ಉಂಟಾಗುತ್ತವೆ. ನಿಮಗೆ ಕೆಲವು ವೈಯಕ್ತಿಕ ದೌರ್ಬಲ್ಯಗಳಿವೆ, ಅವು ನಿಮಗೆ ಹಾನಿಯುಂಟು ಮಾಡುತ್ತಿವೆ. ನಿಮ್ಮಲ್ಲಿ ವಿಶೇಷ ಸಾಮಥ್ರ್ಯವಿದ್ದು ಆ ಸಾಮರ್ಥ್ಯವನ್ನು ನೀವು ಸರಿಯಾಗಿ ಬಳಸಿಕೊಂಡಿಲ್ಲ....’’
 ಮೇಲಿನ ಮಾತುಗಳು ನಿಮಗೆ ಅನ್ವಯಿಸುತ್ತವೆಯೇ? ಹೆಚ್ಚು-ಕಡಿಮೆ ಎಲ್ಲರೂ ತಮಗೇ ಅನ್ವಯಿಸುತ್ತದೆ ಎಂದು ನಂಬುತ್ತಾರೆ!
    ಇತ್ತೀಚೆಗೆ, 6,475 ರಾಜಕೀಯ ದುರೀಣರ ಜಾತಕವನ್ನು ಪರೀಕ್ಷಿಸಲಾಯಿತು. ಅವರೆಲ್ಲರ ಜಾತಕಗಳೂ ಬೇರೆ ಬೇರೆ ರಾಶಿಗಳಲ್ಲಿ ಸಮಾನವಾಗಿ ಹಂಚಿಹೋಗಿದ್ದವು. ಅವರಲ್ಲಿ ಜ್ಯೋತಿಷ್ಯದ ಪ್ರಕಾರ ನಾಯಕತ್ವದ ಗುಣಗಳಿರಬೇಕಾದ ಜಾತಕದವರೂ ಇದ್ದರು. ಹಾಗೆಯೇ, ನಾಯಕತ್ವ ಗುಣಗಳಿರದಿರುವ ಜಾತಕದವರೂ ಇದ್ದರು. ಜಾನ್ ಕೆನಡಿ ಹತ್ಯೆಯನ್ನು ಮುನ್ಸೂಚಿಸಿ ಪ್ರಸಿದ್ಧರಾದ ಜ್ಯೋತಿಷಿಯೊಬ್ಬರ ಜೀವಿತಕಾಲದ ಪ್ರಮುಖ ಭವಿಷ್ಯ ನುಡಿಗಳನ್ನು ಕಲೆಹಾಕಿದ ಒಬ್ಬ ಅಧ್ಯಯನಕಾರರಿಗೆ ದೊರೆತ ಸಂಗತಿಯೇನೆಂದರೆ, ಆ ಜ್ಯೋತಿಷಿ ನುಡಿದ 82 ಶೇಕಡಾ ಭವಿಷ್ಯಗಳು ಸುಳ್ಳಾಗಿದ್ದವು.
    ಜ್ಷಾನಕ್ಕೂ ನಂಬಿಕೆಗೂ ಇರುವ ವ್ಯತ್ಯಾಸ ಇಷ್ಟೇ- ಜ್ಞಾನ ಪುರಾವೆಯನ್ನು ಬೇಡುತ್ತದೆ. ನಂಬಿಕೆಗೆ ಅದರ ಹಂಗಿಲ್ಲ. ಅಡಮ್ ಬ್ಲಾಂಕನ್‍ಬಿಕರ್ ಎಂಬ ಹೆಸರಾಂತ ವಿಜ್ಞಾನದ ಪ್ರೊಫೆಸರೊಬ್ಬರು `ನಾನು ವಿಜ್ಞಾನವನ್ನು ನಂಬುವುದಿಲ್ಲ..ನನ್ನ ವಿದ್ಯಾರ್ಥಿಗಳೂ ನಂಬಬಾರದು’ ಎಂದಿದ್ದರು. ಇನ್ನೊಬ್ಬರು ವಿಜ್ಞಾನಿ ಡಾ. ಬ್ರಿಯಾನ್ ಪೊಬೆನರ್ ತಾನು ವಿಕಾಸವಾದವನ್ನು ನಂಬುವುದಿಲ್ಲ. ಆದರೆ, ವಿಕಾಸವಾದಕ್ಕೆ ಸಮರ್ಥನೆಯಾಗಿ ನೀಡಿದ ಪುರಾವೆಗಳನ್ನು ಒಪ್ಪುತ್ತೇನೆ ಅಂದಿದ್ದರು. ವೀಕ್ಷಣೆ, ಪ್ರಯೋಗ, ವಿಶ್ಲೇಷಣೆ ಮತ್ತಿತರ ವಿಧಾನಗಳಿಗೆ ದಕ್ಕುವ ವಿಜ್ಞಾನದಲ್ಲಿ ನಂಬಿಕೆಗೆ ಸ್ಥಾನವೇ ಇಲ್ಲ. ಮತ್ತೆ ಮತ್ತೆ ತನ್ನನ್ನು ತಾನೆ ತಪ್ಪೆಂದು ಸಾಧಿಸಿ ಮುಂದೆ ಸಾಗುವ ವಿಜ್ಞಾನದ ಪ್ರತಿ ಹುಟ್ಟಿನಲ್ಲೂ ಸದಾ ಪಿತೃಹತ್ಯೆಯ ದೋಷ. ಆದುದರಿಂದಲೇ, ವಿಜ್ಞಾನ ನಿಂತ ನೀರಲ್ಲ: ಅದಕ್ಕೆ ಬೆಳವಣಿಗೆ ಇದೆ. ಜೀವಂತಿಕೆ ಇದೆ.
    ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಉಡುಪಿ ಜಿಲ್ಲಾ ಘಟಕ ಮತ್ತು ಕುಂದಾಪುರ ಸಮುದಾಯ ಒಟ್ಟಿಗೆ ಸೇರಿ ಜನವರಿ 24ರ ಶನಿವಾರ ಭಂಡಾರ್ಕರ್ಸ್ ಕಾಲೇಜಿನಲ್ಲಿ ಚುಕ್ಕಿ ಚಂದ್ರಮ ಎಂಬ ಕಾರ್ಯಕ್ರಮವನ್ನು ಹಮ್ಮಿಕೊಂಡಿವೆ. ಪ್ರಾತ್ಯಕ್ಷಿಕೆ, ಸಂವಾದ, ಆಕಾಶ ವೀಕ್ಷಣೆಗಳನ್ನೊಳಗೊಂಡ ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ಮಕ್ಕಳು ರಾಹು ಕೇತುಗಳೆಂಬ ಭೌತಿಕ ಕಾಯಗಳೇ ಇಲ್ಲವೆಂಬುದನ್ನು ತಿಳಿದುಕೊಳ್ಳುತ್ತಾರೆ. ರಾಶಿಪುಂಜಗಳು ಉಂಟುಮಾಡುವ ಚಿತ್ರಾಕೃತಿಗಳು ಒಂದೇ ರೀತಿಯಿದ್ದರೂ ಅದರಲ್ಲಿರುವ ನಕ್ಷತ್ರಗಳು ಅಸಾಧ್ಯ ವೇಗದಲ್ಲಿ ದೂರ ಸರಿಯುತ್ತಿವೆ ಎಂಬುದನ್ನೂ ತಿಳಿದುಕೊಳ್ಳುತ್ತಾರೆ. ಬರಿಗಣ್ಣಿಗೆ ಕಾಣುವ ನಕ್ಷತ್ರಗಳಿರುವಂತೆ ಕಾಣದ ನಕ್ಷತ್ರಗಳು ಇವೆಯೆಂಬುದನ್ನೂ, ರಾಶಿಪುಂಜಗಳ ನಕ್ಷತ್ರಗಳು ಒಂದೇ ಗೋಳಕ್ಕೆ ಅಂಟಿಕೊಂಡಂತೆ ಕಾಣುವುದಾದರೂ ಅವುಗಳು ಭೂಮಿಯಿಂದ ಬೇರೆ ಬೇರೆ ದೂರದಲ್ಲಿವೆಯೆಂಬುದನ್ನೂ ತಿಳಿದುಕೊಳ್ಳುತ್ತಾರೆ. ಇಲ್ಲಿ ಯಾವುದೂ ಸ್ಥಿರವಲ್ಲ, ಎಲ್ಲವೂ ಬದಲಾಗುತ್ತಿವೆ ಎಂತಲೂ ಎಲ್ಲ ಉತ್ತರಗಳೂ ತಾತ್ಪೂರ್ತಿಕವಾದುದು ಎಂಬುದೇ ಸತ್ಯ ಎಂತಲೂ ತಿಳಿದುಕೊಳ್ಳುವರು. 

ಮತ್ತು ಈ ತಿಳುವಳಿಕೆಯೇ ಅವರನ್ನು ರಕ್ಷಿಸಬಲ್ಲದು!


Saturday 17 January 2015

ಅಮೋನಿಯಂ ನೈಟ್ರೇಟ್- ಉದಯವಾಣಿ ಲೇಖನ

ಅಮೋನಿಯಂ ನೈಟ್ರೇಟೆಂಬ ರಕ್ತಲೇಪಿತ ರಸಗೊಬ್ಬರದ ಕತೆ


  ಮೊನ್ನೆಯಷ್ಟೇ ಬೆಂಗಳೂರು ಸ್ಪೋಟಕ್ಕೆ ಕಾರಣರಾದ ಭಟ್ಕಳದ ಶಂಕಿತ ಉಗ್ರರನ್ನು ಸೆರೆಹಿಡಿದರು. ಸೆರೆ ಸಿಕ್ಕವರು ಉಗ್ರರೇ ಹೌದು ಎಂಬುದನ್ನು ಖಚಿತಪಡಿಸಿದ್ದು ಅವರ ಮನೆಯಲ್ಲಿ ಸಿಕ್ಕಿದ ಅಮೋನಿಯಂ ನೈಟ್ರೇಟು!
  ಸಾಮಾನ್ಯ ತಾಪದಲ್ಲಿ ಬಿಳಿ ಬಣ್ಣದ ಪುಡಿಹರಳಿನ ರೂಪದಲ್ಲಿರುವ ಈ ರಾಸಾಯನಿಕ ಕೃಷಿಯ ದಿಕ್ಕು-ದೆಶೆಗಳನ್ನು ಬದಲಾಯಿಸಿದ ರಸಗೊಬ್ಬರ. ಸಸ್ಯಗಳ ಬೆಳವಣಿಗೆಗೆ, ಹಣ್ಣು ಬೆಳೆಗಳ ಉತ್ತಮ ಇಳುವರಿಗೆ, ಎಲೆ ತರಕಾರಿಗಳು ಹಸಿ-ಹಸಿ ಸೊಪ್ಪನ್ನು ಹೇರಿಕೊಂಡು ಬೆಳೆಯಲು ನೈಟ್ರೋಜನ್ ಬೇಕು. ವಾತಾವರಣದಲ್ಲಿ ನೈಟ್ರೋಜನ್ ಹೇರಳವಾಗಿದ್ದರೂ ಅವುಗಳನ್ನು ಸಸ್ಯಗಳು ನೇರವಾಗಿ ಪಡೆಯಲಾರವು. ಸಸ್ಯಗಳು ಪೋಷಕಾಂಶಗಳನ್ನು ಪಡೆಯಬೇಕಾದರೆ ಅವು ನೀರಿನಲ್ಲಿ ಕರಗಬೇಕಾಗುತ್ತವೆ. ಅಮ್ಮೋನಿಯಂ ನೈಟ್ರೇಟಿನಲ್ಲೋ ಹತ್ತಿರ ಹತ್ತಿರ ಮೂವತ್ತು ಶೇಕಡಾದಷ್ಟು ನೈಟ್ರೋಜನ್ ಇರುತ್ತದೆ. ಇದು ನೀರಿನಲ್ಲಿ ಕರಗುತ್ತದೆ. ಜೊತೆಗೆ, ಬಹಳ ಅಗ್ಗ ಕೂಡಾ. ಕೇಳಬೇಕೇ? ಈ ರಾಸಾಯನಿಕ ಬಡದೇಶಗಳ ರೈತರ ಡಾರ್ಲಿಂಗ್ ಆಗಿಹೋಯಿತು.
  ಅಮೋನಿಯಂ ನೈಟ್ರೇಟು ರಾಸಾಯನಿಕ ಕ್ರೀಯೆಯಲ್ಲಿ ಪ್ರತಿಕಾರಕಗಳ ಎಲೆಕ್ಡ್ರಾನುಗಳನ್ನು ಕಳೆಯಬಲ್ಲದು -ಇದೊಂದು ಶಕ್ತಿಶಾಲಿಯಾದ ಆಕ್ಸಿಡೀಕರಣದ ದಲ್ಲಾಳಿ. ಹಾಗೆಯೇ, ಸಾವಿನ ದಲ್ಲಾಳಿ ಕೂಡಾ. ಶಾಖಕ್ಕೆ ಸೂಕ್ಷ್ಮವಾಗಿ ಪ್ರತಿಕ್ರಿಯಿಸುವ ಅಮೋನಿಯಂ ನೈಟ್ರೇಟು, ಇಂತಹ ಬಾಹ್ಯಪ್ರೇರಣೆಗೆ ಕೂಡಲೇ ಪ್ರತಿಕ್ರಿಯಿಸುವ ಮೂಲಕ ರಸಗೊಬ್ಬರದಿಂದ  ಸ್ಪೋಟಕ ಸಾಮಗ್ರಿಯಾಗಿ ಬದಲಾಗಬಲ್ಲದು! ಹೀಗಾಗಿ, ಅಮೋನಿಯಂ ನೈಟ್ರೇಟು ಇತ್ತೀಚೆಗೆ ರೈತರಿಗಿಂತ ಉಗ್ರಗಾಮಿಗಳಿಗೇ ಹೆಚ್ಚು ಪ್ರಿಯವಾದ ರಾಸಾಯನಿಕ.
  ಅಮೋನಿಯಂ ನೈಟ್ರೇಟನ್ನು ಟ್ರೈ ನೈಟ್ರೋ ಟೋಲಿನ್ ಎಂಬ ಸ್ಫೋಟಕದೊಂದಿಗೋ ಡಿಸೆಲ್‍ನಂತಹ ಇಂಧನತೈಲದೊಂದಿಗೋ ಬೆರೆಕೆ ಹಾಕಿ ಬಾಂಬು ತಯಾರಿಸುತ್ತಾರೆ. ಈ ಸ್ಫೋಟಕಗಳನ್ನೆಲ್ಲ ಉಗ್ರಗಾಮಿಗಳೇ ಬಳಸುತ್ತಾರೆ ಎಂದುಕೊಳ್ಳಬೇಡಿ. ಬಾಂಬುಗಳು ಮೂಲತಃ ಗಣಿಗಾರಿಕೆಗಾಗಿಯೇ ಕಂಡುಹಿಡಿಯಲ್ಪಟ್ಟ ಸ್ಪೋಟಕ ಕಾಂಬಿನೇಷನ್‍ಗಳು. ಆನಂತರ, ರಕ್ಷಣಾಪಡೆಗಳು ಇವುಗಳನ್ನು ಬಳಸಿಕೊಂಡವು. 1996 ರ ಅಮೇರಿಕಾದ ಒಕ್ಲಾಮಾ ನಗರದ ಸ್ಫೋಟದಿಂದಲೂ ಅಮೋನಿಯಂ ನೈಟ್ರೇಟನ್ನು ಉಗ್ರಗಾಮಿಗಳು ಬಳಸುತ್ತಿದ್ದಾರೆ!  2002 ರ ಬಾಲಿ ನೈಟ್ ಕ್ಲಬ್ ಸ್ಫೋಟ, 2003ರ ಇಸ್ತನಾಬುಲ್ ಸ್ಫೋಟಗಳಲ್ಲಿ ಅಲ್ ಖೈದಾದಂತಹ ಜಾಗತಿಕ ಭೀತಿವಾದಿಗಳು ಅಮೋನಿಯಂ ನೈಟ್ರೇಟನ್ನು ಬಳಸಿದ್ದರು. 2004 ರಲ್ಲಿ ಭಾರತ ಸರಕಾರ ನೈಟ್ರೋ ಗ್ಲಿಸರಿನ್ ಮೂಲದ ಸ್ಫೋಟಕಗಳನ್ನು ನಿಷೇದಿಸಿದ ಮೇಲೆ, ಭಾರತೀಯ ಉಪಖಂಡದಲ್ಲಿ ಕಾರ್ಯನಿರ್ವಹಿಸುತ್ತಿರುವ ಉಗ್ರಗಾಮಿ ಸಂಘಟನೆಗಳು ಅಮೋನಿಯಂ ನೈಟ್ರೇಟನ್ನು ಹೆಚ್ಚೆಚ್ಚು ಬಳಸಲಾರಂಭಿಸಿದವು. ಈ ಮಾತಿಗೆ ಪುರಾವೆಯಾಗಿ ಹೈದರಾಬಾದ್ ಸ್ಫೋಟ, ಚಿನ್ನಸ್ವಾಮಿ ಕ್ರೀಡಾಂಗಣ ಸ್ಫೋಟ, ಪುಣೆಯ ಜರ್ಮನ್ ಬೇಕರಿ ಸ್ಫೋಟ, ದಿಲ್ ಕುಷ್ ನಗರದ ಸ್ಫೋಟ ಹೀಗೆ ಹಲವು ಉದಾಹರಣೆಗಳು ದೊರೆಯುತ್ತವೆ. ಸುಧಾರಿತ ಸ್ಫೋಟಕ ಉಪಕರಣಗಳು(Iಇಆ) ಎಂದು ಕರೆಯಲ್ಪಡುವ ಸ್ಫೋಟಕಗಳಲ್ಲಿ ಮುಖ್ಯ ಕಚ್ಚಾವಸ್ತು ಅಮೋನಿಯಂ ನೈಟ್ರೇಟ್ ಆಗಿರುತ್ತದೆ. ನಟ್ಟು, ಬೋಲ್ಟು, ಬಾಲ್‍ಬಿಯರಿಂಗ್ ಗುಂಡುಗಳÀಂತಹ ದೇಹದ ಮೂಲಕ ತೂರಿಹೋಗಬಹುದಾದ ಘನವಸ್ತುಗಳನ್ನು ಸೇರಿಸಿ ಈ ಬಾಂಬುಗಳು ಪರಿಣಾಮವನ್ನು ಹೆಚ್ಚಿಸಲಾಗುತ್ತದೆ.
  ಸೆಲ್ಯುಲೋಸ್ ನೈಟ್ರೇಟ್ ಮತ್ತು ನೈಟ್ರೋ ಗ್ಲಿಸರಿನ್ ಮೂಲದ ಸ್ಫೋಟಕಗಳ ಬಳಕೆ ಪ್ರಾರಂಭವಾದದ್ದು ಹತ್ತೊಂಬತ್ತನೇ ಶತಮಾನದ ಆರಂಭದಲ್ಲಿ. ಸರ್ ಅಲ್ಪ್ರೆಡ್ ನೊಬೆಲ್‍ರ ತಂದೆ ನಡೆಸುತ್ತಿದ್ದ ಸ್ಫೋಟಕಗಳ ಫ್ಯಾಕ್ಟರಿಯಲ್ಲಿ ಆಕಸ್ಮಿಕವಾಗಿ ಸ್ಫೋಟ ಸಂಭವಿಸಿ ನೊಬೆಲ್‍ರ ಇಬ್ಬರು ತಮ್ಮಂದಿರು ಅಸುನೀಗಿದ್ದರು. ಆನಂತರ, ಅಲ್ಫ್ರೆಡ್ ನೊಬೆಲ್ ನೈಟ್ರೋಗ್ಲಿಸರಿನ್ ಮೂಲದ ಸ್ಫೋಟಕಗಳನ್ನು ನಿಯಂತ್ರಿತ ರೀತಿಯಲ್ಲಿ ಬಳಸಬಹುದಾದ ಡೈನಮೈಟ್ ಎಂಬ ಸಂಯೋಜನೆಯನ್ನು  ತಯಾರಿಸಿದರು. ಡೈನಮೈಟ್ ತಯಾರಾದದ್ದು ಗಾಂಧಿ ಹುಟ್ಟುವುದಕ್ಕಿಂತ ಎರಡು ವರ್ಷ ಮೊದಲು- 1867 ರಲ್ಲಿ. ಆನಂತರ, ಡೈನಮೈಟ್ ತಯಾರಿಸಿದ ಕುಖ್ಯಾತಿಯಿಂದ ತಪ್ಪಿಸಿಕೊಳ್ಳಲೋಸುಗುವೋ ಎಂಬಂತೆ ತನ್ನ ಆಸ್ತಿಯೆಲ್ಲ ನೊಬೆಲ್ ಪ್ರಶಸ್ತಿಗಳನ್ನು ನೀಡಲು ವಿನಿಯೋಗವಾಗಬೇಕೆಂಬ ಇಚ್ಛಾಪತ್ರವನ್ನು ಬರೆದು ಇದೇ ನೊಬೆಲ್ ಮಹಾಶಯ ಅಸುನೀಗಿದ್ದರು.
    ರಕ್ತ ಸಿಕ್ತವಾದ ಆಲೋಚನೆಗಳನ್ನು ಹೊಂದಿರುವವರು ಬಾಯಲ್ಲಿ ಆಲಿವ್ ಟೊಂಗೆಯನ್ನು ಕಚ್ಚಿಕೊಂಡರೇನಂತೆ- ಅವರ ಕಾರ್ಯಗಳಲ್ಲಿ ರಕ್ತದ ಲೇಪನ ಇದ್ದೇ ಇರುತ್ತದೆ. ಅಮೋನಿಯಂ ನೈಟ್ರೇಟು ಮತ್ತಿತರ ರಸಗೊಬ್ಬರಗಳನ್ನು ಹೇಬರ್ ಪ್ರಕ್ರಿಯೆ ಎಂಬ ರಾಸಾಯನಿಕ ಕ್ರಿಯೆಯ ಮೂಲಕ ತಯಾರಿಸಿದ ಸಾಧನೆಗಾಗಿ ವಿಜ್ಞಾನಿ ಫ್ರಿಟ್ಞ್ ಹೇಬರರಿಗೆ 1918 ರಲ್ಲಿ ರಸಾಯನ ಶಾಸ್ತ್ರದ ನೊಬೆಲ್ ಪ್ರಶಸ್ತಿ ದೊರೆಯಿತು. ಇದೇ ಹೇಬರ್ ಮಹಾಶಯನನ್ನು ಮೊದಲ ಮಹಾಯುದ್ಧದ ಕಾಲದಲ್ಲಿ ಜರ್ಮನಿಯ ರಾಸಾಯನಿಕ ಸಮರಪಡೆಯ ಮುಖ್ಯಸ್ಥರನ್ನಾಗಿಯೂ ಮಾಡಲಾಗಿತ್ತು. ಇದೇ ಹೇಬರ್ ಎರಡನೇ ವೈಪ್ರೆಸ್ ಕದನದಲ್ಲಿ ಕ್ಲೋರಿನ್ ಗ್ಯಾಸ್ ದಾಳಿಯನ್ನು ನಿರ್ದೇಶಿಸಿ ಮಿತ್ರಪಡೆಯ ಸಾವಿರಾರು ಯೋಧರ ಸಾವಿಗೆ ಕಾರಣರಾಗಿದ್ದರು. ಅಮೋನಿಯಂ ನೈಟ್ರೇಟೆಂಬ ರಸಗೊಬ್ಬರ ರಕ್ತಲೇಪಿಸಿಕೊಂಡೇ ಹುಟ್ಟಿರುವುದಕ್ಕೆ ಇದಕ್ಕಿಂತ ಬೇರೆ ಪುರಾವೆ ಬೇಕೇ?
 ಸ್ಫೋಟಕಗಳಿಗೆ ಬಹಳ ದೊಡ್ಡ ಇತಿಹಾಸವಿಲ್ಲ. ಬಹುಷಃ, ದೀರ್ಘ ಭವಿಷ್ಯವೂ ಇಲ್ಲ! ಹದಿಮೂರನೇ ಶತಮಾನದ ಹೊತ್ತಿಗೆ ಕೋವಿ ಮದ್ದಲ್ಲದೇ ಬೇರೆ ಸ್ಫೋಟಕಗಳೇ ಗೊತ್ತಿರಲಿಲ್ಲ.  ಸೆಲ್ಯುಲೋಸ್ ನೈಟ್ರೇಟ್ ಮತ್ತು ನೈಟ್ರೋ ಗ್ಲಿಸರಿನ್ ಮೂಲದ ಸ್ಫೋಟಕಗಳ ಬಳಕೆ ಪ್ರಾರಂಭವಾದದ್ದು ಹತ್ತೊಂಬತ್ತನೇ ಶತಮಾನದ ಆರಂಭದಲ್ಲಿ;  ಟಿ.ಎನ್.ಟಿ ರಂಗಪ್ರವೇಶ ಮಾಡಿದ್ದು ಮೊದಲ ವಿಶ್ವಸಮರದ ಸಂದರ್ಭದಲ್ಲಿ. 1991 ರಲ್ಲಿ ರಾಜೀವ ಗಾಂಧಿ ಆರ್. ಡಿ. ಎಕ್ಸ್ ಎಂಬ ಸ್ಫೋಟಕಕ್ಕೆ ಬಲಿಯಾದರು. ಈಗ ಮತ್ತದೇ ರಸಗೊಬ್ಬರ. ಬೆಂಗಳೂರಿನಲ್ಲಿ ಬಾಂಬು ಸ್ಫೋಟಗೊಂಡರೆ ಭಟ್ಕಳದಲ್ಲಿ ಅಮೋನಿಯಂ ನೈಟ್ರೇಟು ದೊರೆಯುತ್ತದೆ.
  ಅಮೋನಿಯಂ ನೈಟ್ರೇಟನ್ನು ರಸಗೊಬ್ಬರವಾಗಿ ಬಳಸುವಾಗಲೂ ಅಪಾಯವಿದ್ದೇ ಇದೆ. ಸಂಗ್ರಹಣೆ ಮತ್ತು ಬಳಕೆಯ ಯಾವ ಹಂತದಲ್ಲಿ ಎಚ್ಚರ ತಪ್ಪಿದರೂ ಅನಾಹುತ ಕಟ್ಟಿಟ್ಟ ಬುತ್ತಿ. ಟೆಕ್ಸಾಸ್ ನಗರದ ರಸಗೊಬ್ಬರ ಕಾರ್ಖಾನೆಯ ದುರಂತವೂ ಸೇರಿದಂತೆ ಎಷ್ಟೋ ಸಾವು-ನೋವುಗಳಿಗೆ ಈ ರಸಗೊಬ್ಬರ ಕಾರಣವಾಗಿದೆ. ರಸಗೊಬ್ಬರಕ್ಕಾಗಿ ಹಾತೊರೆಯುತ್ತಾ ಪೋಲೀಸರ ಗುಂಡು ತಿಂದು ಸತ್ತ ಹಾವೇರಿಯ ರೈತ ನಮ್ಮ ನೆನಪಿಂದ ಇನ್ನೂ ಮರೆಯಾಗಿಲ್ಲ. ಗತಿಸಿದ 2014 ರ ಕಟ್ಟಕಡೆಯ ನೂರೈವತ್ತು ಗಂಟೆಗಳಲ್ಲಿ ವಿದರ್ಭ ಪ್ರಾಂತ್ಯದ 12 ರೈತರು ಆತ್ಮಹತ್ಯೆ ಮಾಡಿಕೊಂಡರು. ಈ ಸಾವಿನಲ್ಲಿ ರಸಗೊಬ್ಬರದ ಅವಶೇಷಗಳು ಇಲ್ಲದೇ ಇಲ್ಲ. ಹಸಿರು ಕ್ರಾಂತಿಯ ನೆವದಲ್ಲಿ, ಹಾಕಿದ ದುಡ್ಡಿಗೆ ಬರುವ ಇಳುವರಿ ಸಾಲುವುದಿಲ್ಲವೆಂಬ ಕೊರಗಲ್ಲಿ ನೆಲಕ್ಕೆ ಸುರಿದ ರಾಸಾಯನಿಕಗಳು ಇಂದು ರೈತನನ್ನೇ ತಿನ್ನುತ್ತಿವೆ. ರಸಗೊಬ್ಬರಕ್ಕೆ ರಕ್ತ ಮೆತ್ತಿಕೊಂಡದಂತೂ ಸತ್ಯ.
  ಅಂದಹಾಗೆ, ಅಮೋನಿಯಂ ನೈಟ್ರೇಟನ್ನು ನೀರಲ್ಲಿ ಹಾಕಿ ಬಿಸಿ ಮಾಡಿದರೆ ಏನು ದೊರೆಯುವುದು ಗೊತ್ತೇ? ನೈಟ್ರಸ್ ಆಕ್ಸೈಡ್-ಅದೇ.. ಲಾಫಿಂಗ್ ಗ್ಯಾಸ್!
_________________________________________________________________________
ಉದಯ ಗಾಂವಕಾರ
9481509699