Thursday 18 August 2022

ಅಮೃತದ ಹೂಜಿಯಲ್ಲಿ‌ ವಿಷ

 



ಅಮೃತ ಉತ್ಸವ ಆಚರಿಸುವಾಗಲೇ ಕುಡಿಯುವ ನೀರಿನ ಮಡಕೆ ಮುಟ್ಟಿದ್ದಕ್ಕಾಗಿ ಶಿಕ್ಷಕನೊಬ್ಬ ಮಗುವನ್ನು ಕೊಂದ ಘಟನೆ ನಡೆದುಹೋಗಿದೆ. ರಾಜಸ್ತಾನದ ಜಲೋರ್‌ ಎಂಬಲ್ಲಿನ ಸರಸ್ವತಿ ವಿದ್ಯಾಮಂದಿರದಲ್ಲಿ ಮೂರನೆಯ ತರಗತಿ ಕಲಿಯುತ್ತಿದ್ದ ಬಾಲಕನನ್ನು ಚೈಲ್‌ ಸಿಂಗ್‌ ಎಂಬ ಹೆಸರಿನ ಮೇಲ್ವರ್ಗದವನು ಎಂದುಕೊಳ್ಳುವ ಶಿಕ್ಷಕನೊಬ್ಬ ಹೊಡೆದು ಕೊಂದಿದ್ದಾನೆ. ಆತನಿಗಾಗಿ ಕುಡಿಯಲು ನೀರು ಸಂಗ್ರಹಿಸಿಟ್ಟಿದ್ದ ಮಡಕೆಯಿಂದ ನೀರು ಕುಡಿದಿದ್ದೇ ಆ ಬಾಲಕ ಮಾಡಿದ ತಪ್ಪು. ಆ ಬಾಲಕ ಇಂದ್ರಕುಮಾರನಿಗೆ ಇದೆಲ್ಲ ಈಗಷ್ಟೇ ಅರಿವಿಗೆ ಬರುತ್ತಿದ್ದ ವಯಸ್ಸು. ಮೇಲು-ಕೀಳುಗಳೆಂಬ ಶ್ರೇಣಿಗಳನ್ನು ಶಾಲೆಯಲ್ಲಿ, ಓಣಿಯಲ್ಲಿ, ಕೇರಿಯಲ್ಲಿ ದಿನವೂ ಇಷ್ಟಿಷ್ಟೇ ಅನುಭವಿಸುತ್ತಾ ಕೊನೆಗೆ ತನ್ನ ಜಾತಿಯ ಬಗ್ಗೆಯೂ, ತನ್ನ ಬಗ್ಗೆಯೂ ಕೀಳರಿಮೆ ಬೆಳಸಿಕೊಂಡು ನಿಧಾನವಾಗಿ ಅಭಿವೃದ್ಧಿಯ ಚಲನ ಮಾರ್ಗದಿಂದ ದೂರ ಸರಿಯುವ ಎಲ್ಲ ಒತ್ತಡಗಳನ್ನು ಆತ ನಿಭಾಯಿಸಬೇಕಿತ್ತು.  ಆದರೆ, ದುಷ್ಟ ಶಿಕ್ಷಕ ಅದಕ್ಕೂ ಆಸ್ಪದ ನೀಡದೆ ಆತನನ್ನು ಬದುಕಿನಿಂದಲೇ ದೂರ ತಳ್ಳಿದ್ದಾನೆ. ಇಂದ್ರಕುಮಾರನ ತಂದೆ ತನ್ನ ದೂರಿನಲ್ಲಿ “ ನನ್ನ ಮಗನಿಗೆ ಅದು ಅವರ ನೀರಿನ ಮಡಕೆ ಎಂದು ಗೊತ್ತಿರಲಿಲ್ಲ” ಎಂದಿದ್ದಾರೆ. ತನ್ನ ಮಗ ಗೊತ್ತಿಲ್ಲದೆ ಮಾಡಿದ “ ತಪ್ಪು” ಎನ್ನುವ ರೀತಿಯಲ್ಲಿ. ಪಾಪ, ಆ ಬಡತಂದೆಗೆ ಇಂತಹ ಸಂದರ್ಭ ಎದುರಾದಾಗಲೂ ತಮ್ಮ ಮೇಲೆ ಶತಮಾನಗಳಿಂದ ಆಗುತ್ತಿದ್ದ ಶೋಷಣೆಯನ್ನು ಗುರುತಿಸಲಾಗದಷ್ಟು ಈ ಸಮಾಜ ಆತನ ಮೆದುಳಿನ ಮೇಲೆ ಬೆರಳಾಡಿಸಿಬಿಟ್ಟಿದೆ.

ದೇಶವನ್ನು ಹಿಂದಕ್ಕೆ ಎಳೆಯುವ ಚೈಲ್‌ ಸಿಂಗನಂತವರು  ದೇಶದ ಎಲ್ಲ ಕಡೆಯೂ ಇದ್ದಾರೆ.   ಅವರ ನೀರಿನ ಮಡಕೆ ಯಾವುದೆಂದು ಗೊತ್ತಾಗುವುದು ಅದನ್ನು ಇತರರು ಮುಟ್ಟಿದಾಗಲೇ! 

.   

ಕೆಲವು ವರ್ಷಗಳ ಹಿಂದೆ ಹಿರಿಯ ಸ್ನೇಹಿತರೊಬ್ಬರು ಗ್ರಹ ಪ್ರವೇಶದ ಆಮಂತ್ರಣ ಕಾಗದ ನೀಡಿದರು. ಮುಂಚೆ ಮೇಷ್ಟ್ರಾದವರು, ನಂತರ ವಿಷಯ ಪರಿವೀಕ್ಷಕರಾಗಿ ನಿವೃತ್ತರಾದವರು. ಪ್ರೀತಿಯಿಂದ ಕರೆದಿದ್ದಾರೆ, ಹೋಗ್ಲೇಬೇಕು ಎಂದುಕೊಂಡೆ. ಆ ನಂತರ ಗೊತ್ತಾಯ್ತು ಅವರು ನಮಗೆಲ್ಲ ಒಂದು ದಿನ ಔತಣವಿಟ್ಟುಕೊಂಡಿದ್ದರು. ಅದರ ಮುನ್ನಾದಿನ ತಮ್ಮ ಜಾತಿಯವರಿಗೆಂದೇ ವಿಶೇಷ ಔತಣ ಇಟ್ಟುಕೊಂಡಿದ್ದರು.  ನಾನವರಲ್ಲಿ ಕೇಳಿದೆ. ಅದಕ್ಕವರು “ ನೀವೂ ಬೇಕು, ಅವರೂ ಬೇಕು. ನಮ್ಮವರು ಕೆಲವರು ನಿಮ್ಮ ಜೊತೆ ಕುಳಿತು ಊಟ ಮಾಡುವುದಿಲ್ಲ.. ಸರಿಯೋ ತಪ್ಪೋ.. ನಂಗೆ ಎಲ್ರೂ ಬರಬೇಕು” ಅಂದರು. ನಾನು ಹೋಗಲಿಲ್ಲ. 

.

ಪಿ.ಯು ಕಾಲೇಜಿನ ಪ್ರಿನ್ಸಿಪಾಲರೊಬ್ಬರು  ತಮ್ಮ ಮನೆಯ ಮೇಲೆ ಇನ್ನೊಂದು ಮಹಡಿ ಕಟ್ಟಿಸಿದಾಗ ಈ ರಗಳೆಯೇ ಬೇಡವೆಂದುಕೊಂಡು ಅದರ ಪ್ರವೇಶೋತ್ಸವಕ್ಕೆ   ತಮ್ಮ ಜಾತಿಯ ಸಹೋದ್ಯೋಗಿಗಳಿಗೆ ಮಾತ್ರ ಆಮಂತ್ರಣ ನೀಡಿದರು. ಮಾರನೆಯ ದಿನ ಉಳಿದವರಿಗೆ ಸಿಹಿತಿನಿಸು ತಂದುಕೊಟ್ಟರು. ಕೆನ್ನೆಯ ಮೇಲೆ ಬಿದ್ದ ಪೆಟ್ಟು ಕೆಲವರಿಗೆ ಮಾತ್ರ ತಿಳಿಯಿತು. ಆ ಕೆಲವರಷ್ಟೇ  ಸಿಹಿ ತಿನಿಸು ತಿನ್ನಲಿಲ್ಲ.

ನಮ್ಮ ಬಿ.ಇ.ಓ ಕಚೇರಿಯಲ್ಲಿ ಕೆಲಸಮಾಡುತ್ತಿದ್ದ ಪ್ರಥಮ ದರ್ಜೆ ಸಹಾಯಕರೊಬ್ಬರ ಮದುವೆಗೆ ಹೋಗಲು ನಿಂತಿದ್ದೆ. ನನ್ನ ಸಹೋದ್ಯೋಗಿಯೊಬ್ಬರು ನನ್ನ ಜೊತೆ ಬರುವೆ ಎಂದರು. ನನ್ನ ವಾಹನದಲ್ಲಿ ಮದುವೆ ಹಾಲಿಗೆ ತಲುಪಿ, ವಧುವರರಿಗೆ ಶುಭಾಶಯ ತಿಳಿಸುವವರೆಗೂ ಅವರು ನನ್ನ ಜೊತೆಯೇ ಇದ್ದರು. ಊಟದ ಹಾಲಿಗೆ ಹೋಗುವಾಗ ಅವರು ಮರೆಯಾದರು. ಆಚೀಚೆ ಹುಡುಕಿದೆ. ಬೇರೆ ಯಾವುದೋ ಸಾಲಿನಲ್ಲಿ ಕುಳಿತರಿರಬಹುದು ಎಂದುಕೊಂಡು ಸುಮ್ಮನಾದೆ. ಕೈ ತೊಳೆದುಕೊಂಡು ಬರಲು ಹೋದಾಗ ಅಲ್ಲೊಂದು ಪ್ರತ್ಯೇಕ ಸಾಲು ಒಳಗಡೆ ಊಟಕ್ಕೆ ಕುಳಿತಿರುವುದ ಕಾಣಿಸಿತು. ನನ್ನ ಸಹೋದ್ಯೋಗಿಯೂ ಅಲ್ಲಿದ್ದರು. ಕೆನ್ನೆಗೆ ಹೊಡೆದ ಹಾಗಾಯಿತು. ಬರುವಾಗ ಒಬ್ಬನೇ ಬಂದುಬಿಟ್ಟೆ.


ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿಯ ಸಿದ್ಧತೆ ನಡೆಯುತಿತ್ತು. ಪರಿಶೀಲನಾ ಸಭೆಯಲ್ಲಿ ಶಾಲೆಯ ಮುಖ್ಯ ಶಿಕ್ಷಕರು ಆತಿಥ್ಯದ ಸಿದ್ಧತೆಯ ಕುರಿತು ಸಭೆಗೆ ಮಾಹಿತಿ ಸಲ್ಲಿಸುತಿದ್ದರು. ಊಟವನ್ನು ಇಂತದ್ದೇ ಜಾತಿಯವರು ಮಾಡುವುದಾಗಿಯೂ ಬಡಿಸಲೂ ಸಹ ಅದೇ ಮೇಲ್ಜಾತಿಯೆನ್ನುವರನ್ನೇ ಗೊತ್ತುಮಾಡಿರುವುದಾಗಿಯೂ ಸಭೆಗೆ ತಿಳಿಸಿದರು. ಭಾಗವಹಿಸಿದವರು ಚಪ್ಪಾಳೆ ತಟ್ಟಿ ಮೆಚ್ಚಿದರು.  ಸಾಮಾನ್ಯವಾಗಿ ಬಡಿಸಲು ಊರಿನ ಕಾರ್ಯಕರ್ತರನ್ನೇ ಬಳಸಿಕೊಳ್ಳುವುದು ವಾಡಿಕೆ. ಈ ಜಾತಿ ತರತಮದ ಮಾತಿನಿಂದ ರೋಸಿಹೋದ ಬಿ.ಇ.ಓ ಎದ್ದುನಿಂತು “ಇದು ಸರ್ಕಾರಿ ಕಾರ್ಯಕ್ರಮ, ನಿಮ್ಮ ಮನೆಯದ್ದಲ್ಲ. ನಿಮ್ಮ ಮನೆಯದ್ದಾದರೂ ನೀವು ಜಾತಿ ತರತಮ ಮಾಡಬಾರದು. ಸರ್ಕಾರಿ ಕಾರ್ಯಕ್ರಮದಲ್ಲಂತೂ ಇಂತಹ ಮಾತನ್ನು ಆಡಲೇಬಾರದು. ಊಟದ ವ್ಯವಸ್ಥೆ ಸರಿಯಾಗಿ ನಡೆಯಬೇಕು. ಶುಚಿ, ರುಚಿಯಾದ ಅಡುಗೆ ಸಿದ್ಧವಾಗಬೇಕು. ಅಷ್ಟೇ ನಮ್ಮ ಆದ್ಯತೆ” ಎಂದರು. ಕೆಲವೇ ದಿನಗಳಲ್ಲಿ ಅವರಿಗೆ  ವರ್ಗವಾಯಿತು.  

.


ಕೆನ್ನೆಯ ಮೇಲೆ ಬೀಳುವ ಪೆಟ್ಟುಗಳನ್ನು ನಿರ್ಲಕ್ಷಿಸುತ್ತಲೇ ಇದ್ದರೆ ಇಂತಹ ಘಟನೆಗಳು ನಡೆಯುತ್ತಲೇ ಇರುತ್ತವೆ. ಅಕ್ಷರ ದಾಸೋಹ ಶುರುವಾದ ಹೊಸತರಲ್ಲಿ ಕೆಳಜಾತಿಯ ಅಡುಗೆಯವರು ಸಿದ್ಧಪಡಿಸಿದ ಆಹಾರವನ್ನು ತಮ್ಮ ಮಕ್ಕಳು ತಿನ್ನುವುದಿಲ್ಲ ಎಂದು ಅನೇಕ ಪಾಲಕರು ಪ್ರತಿಭಟಿಸಿದರು. ಇಂತಹ ಸಂವಿಧಾನ ವಿರೋಧಿ ಮಾತುಗಳನ್ನು ಆಡಲು ಧೈರ್ಯ ಬಂದಿರುವುದು ಎಲ್ಲಿಂದ? ಆ ಜಾತಿ-ಈ ಜಾತಿ ಎನ್ನದೆ ಎಲ್ಲರಲ್ಲೂ ಜಾತಿ ಶ್ರೇಷ್ಠತೆಯ ವ್ಯಸನ ಇರುವುದರಿಂದಲೇ ಇಂತದ್ದೆಲ್ಲ ಮತ್ತೆ ಮತ್ತೆ ಸಂಭವಿಸುತ್ತವೆ. ಅನೇಕ ಶಾಲೆಗಳಲ್ಲಿ  ಕೆಳಜಾತಿ ಅಡುಗೆಯವರ ನೇಮಕದ ವಿವಾದ ನಿಧಾನವಾಗಿ ತಣ್ಣಗಾಗಿರುವುದು ಎಲ್ಲರೂ ಅವರನ್ನು ಒಪ್ಪಿಕೊಂಡಿರುವುದರಿಂದಲ್ಲ. ಹೇಗೋ ಅವರನ್ನು ಮನವೊಲಿಸಿ, ಬೆದರಿಸಿ, ಆಮಿಷ ತೋರಿಸಿ ಅಡುಗೆ ಕೆಲಸದಿಂದ ಅವರಾಗೇ ಹೊರಹೋಗುವಂತೆ ಮಾಡಿರುವುದರಿಂದ. ಮೇಲ್ನೋಟಕ್ಕೆ ಎಲ್ಲ ಚೆಂದವಾಗಿ ಕಾಣಿಸುವ ಸಮಾಜದೊಳಗೆ ಜಾತಿಪ್ರಜ್ಞೆಯ ಒರಲೆ ಮನೆಮಾಡಿಕೊಂಡಿದೆ. ಇತ್ತೀಚೆಗೆ, ಸ್ನೇಹಿತರೊಬ್ಬರು ʼನಾವೆಲ್ಲ ಉದಾರ ಧೋರಣೆಯ ಜನರಂತೆ ಕಾಣುತ್ತೇವೆ. ಹಾಗೆಂದು ಅಂದುಕೊಂಡಿದ್ದೇವೆ ಕೂಡಾ. ಸ್ವಲ್ಪ ಕೆರೆದು ನೋಡಿದರೆ ನಮ್ಮೆಲ್ಲರಲ್ಲೂ ಜಾತಿ ಪ್ರಜ್ಞೆ ಇದೆ. ಅದನ್ನು ನಮ್ಮ ಸಂಸ್ಕೃತಿ, ಪರಂಪರೆ ಎನ್ನುತ್ತಾ ಪೋಷಿಸಿಕೊಂಡು ಬರುತ್ತಿದ್ದೇವೆ. ಇನ್ನೊಂದು ಜೀವದ ಘನತೆಯ ಬದುಕನ್ನು ಅವಮಾನಿಸುವ ಮಟ್ಟಕ್ಕೆ ಈ ಪ್ರಜ್ಞೆ ಬೆಳಯದಂತೆ ನೋಡಿಕೊಳ್ಳಬೇಕಿದೆʼ ಎಂದಿದ್ದರು. 

.

ನೀವು ಉದಾಹರಿಸಿ ಅನೇಕ ಸಂದಭ೯ಗಳು, ಸನ್ನಿವೇಶಗಳು ನೆನಪಾಗುತ್ತಿವೆ. ಜಾತೀಯತೆ, ಮಾನಸಿಕ ಅಸ್ಪ್ರಶ್ಯತೆ  ಕೋಮು ವಿಷ  ಇವೆಲ್ಲ ಹೊಸ ಹೊಸ ವೇಷಗಗಳಲ್ಲಿ ನಮ್ಮಲ್ಲಿ ಸಕ್ರಿಯವಾಗುತ್ತಿದ್ದು ಅವು ನಮ್ಮ "ಪಂಚಪ್ರಾಣಗಳ"ನ್ನು ನಿತ್ಯ ಹೀರುತ್ತ ಪ್ರಗತಿಯ ಚಲನೆಯ ವಿರುದ್ಧ ದಿಕ್ಕಿಗೆ ಎಳೆಯುತ್ಚಲೇ ಇವೆ. 

 ನಿಮ್ಮ ಲೇಖನ ಕಣ್ಣು ತೆರೆಸುವಂತಿದೆ. ಆದರೆ ನಾವು ಕಣ್ಣು ತೆರೆಯಲಾರೆವು;  ಅನ್ನ ನೀರು ಕೊಡಲಾರೆವು,   ಭೇದ, ಪಂಕ್ತಿಭೇದ ಜಾತಿ ಹಿಂಸೆಗಳು ಮುಂದುವರಿಯಲಿವೆ!. 

ಭಾರತ್ ಮಾತಾ ಕೀ ಜೈ!!

  • ಸಂತೋಷ ಕುಮಾರ ಶೆಟ್ಟಿ, ನಿವೃತ್ತ ಮುಖ್ಯ ಶಿಕ್ಷಕರು

ಬಹಳ ವರ್ಷಗಳ ಹಿಂದೆ ಕುಂದಾಪುರದ ಕೊರಗ ಮಕ್ಕಳ ಪೋಷಕರ ಸಭೆ ನಡೆದಿತ್ತು. ಶಿಕ್ಷಣದ ಅವಶ್ಯಕತೆ, ಶುಚಿತ್ವ ಇತ್ಯಾದಿಗಳ ಬಗ್ಗೆ ಅರಿವು ಮೂಡಿಸುವುದು ಆ ಸಭೆಯ ಉದ್ಧೇಶ. ಸಭೆ ನಡೆದಿರುವುದು ಕೊರಗ ಕ್ಷೇಮಾಭಿವೃದ್ಧಿ ಸಮಿತಿ ನಿರ್ವಹಿಸುವ ವಸತಿನಿಲಯದಲ್ಲಿ. ಭಾಗವಹಿಸಿದ ಎಲ್ಲ ಪೋಷಕರಿಗೂ, ಸಂಪನ್ಮೂಲ ವ್ಯಕ್ತಿಗಳಿಗೂ ಅದೇ ವಸತಿ ನಿಲಯದ ಅಡುಗೆಯವರು ಆಹಾರ ಸಿದ್ಧಪಡಿಸಿದ್ದರು. ಬೆಳಿಗ್ಗೆಯಿಂದ ಆದರ್ಶದ ಮಾತಾಡುತ್ತಿದ್ದ ಸಂಪನ್ಮೂಲ ವ್ಯಕ್ತಿಗಳು ಮದ್ಯಾಹ್ನ ಊಟದ ಹೊತ್ತಿಗೆ ಒಬ್ಬೊಬ್ಬರೇ ಮಾಯವಾಗಿಬಿಟ್ಟಿದ್ದರು. ಕೊರಗರ ಕ್ಷೇಮಾಭಿವೃದ್ಧಿಗೆ ದುಡಿಯುತ್ತಿರುವ ಗಣೇಶರು “ ಎಲ್ಲ ಇಷ್ಟೇ, ಹೇಳುವುದು ಪುರಾಣ!” ಎಂದು ಉದ್ಘರಿಸಿದಾಗ ತಲೆತಗ್ಗಿಸಬೇಕಾಯ್ತು. ಹೌದು, ನಾವು ಹೇಳುತ್ತಿರುವುದೆಲ್ಲ ಪುರಾಣ. ವಾಸ್ತವ ಬೇರೆಯೇ ಇದೆ.

.

ಈ ಮಗುವಿನ ಪಾಲಕರು ನಮ್ಮನೆಂದೂ ಕ್ಷಮಿಸಲಾರರು.

No comments: